22 ಮೇ 2021

ಬಹುಗುಣ .ಹನಿಗವನ


 ಬಹುಗುಣ


ಸಿಗುತ್ತಿಲ್ಲ ಇಂದು ನಮಗೆ

ಆಮ್ಲಜನಕ ಎಷ್ಟು

ಕೊಟ್ಟರೂ ಹಣ|

ಏಕೆಂದರೆ ಮರಗಳ

ಉಳಿಸಲಿಲ್ಲ ಹೇಳಿದಂತೆ

ಸುಂದರ ಲಾಲ್ ಬಹುಗುಣ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಕಾಯಕ ? ಕಿರುಗಥೆ


 


*ಇರುವುದೆಲ್ಲವ ಬಿಟ್ಟು* ಕಿರು ಕಥೆ


ಸುರೇಶ ಟೀ ಕಪ್ ಹಿಡಿದು ಪಡಸಾಲೆಯಲ್ಲಿ ಕುಳಿತಿದ್ದ,

ಅವನ ಅಮ್ಮ "ಏನೋ ಹುಡ್ಗ ನೀನು,  ಇಪ್ಪತ್  ವರ್ಸದಾಗೆ ಇಪ್ಪತ್ ಕೆಲ್ಸ ಬಿಟ್ ಬಿಟ್ಯಲ್ಲೋ , ನನ್ಗೂ ವಯಸ್ಸಾತು, ದುಡಿಯಾಕ್ ಹೋಗ್ಲಿಲ್ಲ ಅಂದರೆ ಯಂಗಪ್ಪ ಜೀವ್ನ ಮಾಡಾದು" 


"ನಾನೇನ್ ಮಾಡಾನವ್ವ ,ಎಲ್ಲಿಗೆ ಕೆಲ್ಸಕ್ಕೆ ಹೋದ್ರು ಏನಾದ್ರು ಸಮಸ್ಯೆ ನನ್ ತಪ್ ಇಲ್ದಿದ್ರೂ ಕೆಲ್ಸ ತೆಗಿತಾರೆ, ಮೊನ್ನೆ ಕೆಲ್ಸ ಬಿಟ್ಟ ಡಾಕ್ಟ್ರು ಕ್ಲಿನಿಕ್ ನಾಗೆ ,ಆ ಡಾಕ್ಟ್ರು ನರ್ಸ್ ತಬ್ಬಿಕೆಂಡು ಕುಂತ್ಗಂಡಿದ್ದ, ನಾನು ಎಲ್ಲಾರ್ನ ಕರ್ದು ತೋರಿಸ್ದೆ ,ಆಯಪ್ಪ ಸಿಟ್ ಬಂದು ಕೆಲ್ಸದಿಂದ ತೆಗೆದ, ಇದು ನನ್ ತಪ್ ಏನವ್ವ" ಮುಗ್ದವಾಗಿ ಕೇಳಿದ ಸುರೇಶ


"ಅದ್ಸರಿ ಆ ಪೆಟ್ರೋಲ್ ಬಂಕ್ ,ಕೆಲ್ಸ ಯಾಕ್ ಬಿಟ್ಟೆ"


"ಮೊದಲು ನನಗೆ ಗೊತ್ತಿರಲಿಲ್ಲ ಒಂದು ಲೀಟರ್ ಪೆಟ್ರೋಲ್ ಅಂತ ಹಾಕಿದ್ರೆ ಬರೀ ಮುಕ್ಕಾಲು ಮಾತ್ರ ಬರುತ್ತೆ ಅಂತ ರಮೇಶ ಒಂದಿನ ನನ್ ಕಿವಿಯಾಗೆ ಹೇಳಿದ್ದ, ನಾನು ಪೆಟ್ರೋಲ್ ಹಾಕಿಸಿಕೊಳ್ಳಾಕೆ ಬರೋರ ಕಿವಿಯಾಗ್ ಹೇಳ್ದೆ, ಜನ ಒಟ್ಟಾಗಿ ಬಂದು ನಮ್ಮ ಸಾವ್ಕಾರ್ ಮೇಲೆ ಗಲಾಟೆ ಮಾಡಿದ್ರು, ಇದಕ್ಕೆ ಕಾರಣ ನಾನಾ? ಇದು ನನ್ ತಪ್ಪಾ? ನೀನೇ ಹೇಳವ್ವ.ಕೇಳಿದ ಮಗ


ಹೀಗೆ ಇಪ್ಪತ್ತು ಕೆಲಸ ಬಿಟ್ಟಿದ್ದಕ್ಕೂ ಸುರೇಶನ ಬಳಿ ಸಮರ್ಥನೆ ಇತ್ತು ,ಅಮ್ಮನಿಗೂ ಇವನು ಸರಿ ಎಂದು ತಿಳಿದಿದ್ದರೂ, ಹೊಟ್ಟೆ ಪಾಡು ಕೇಳದೇ ಮಗನ ವಿರುದ್ಧ ಸಿಟ್ಟಿನಿಂದ ಮತ್ತೊಂದು ಕೆಲಸ ಹುಡುಕಲು ಹೇಳಿದರು.


ಅದೇ ಸಮಯಕ್ಕೆ ಇವರ ಮನೆಗೆ ಬಂದ ಮರಿಸಿದ್ದಪ್ಪ " ಏ.. ಸುರೇಶ ಗೊರಕೇದೇಪುರದಲ್ಲಿ ದೇವರ ಗುಡಿನಾಗೆ ಕೆಲ್ಸ ಮಾಡಾಕೆ ಯಾರೋ ಬೇಕು ಅಂದಿದ್ರು, ಹೋಗ್ತಿಯಾ? ಕೇಳಿದರು .

ಇರುವುದೆಲ್ಲವ ಬಿಟ್ಟ ಸುರೇಶ, ದೇವಾಲಯದ ಕೆಲಸ ಬಿಡುತ್ತಾನೆಯೇ?


ಇವತ್ತಿಂದಲೇ ಕೆಲಸಕ್ಕೆ ಹೋಗುವೆ ಅಣ್ಣ ಎಂದು ಸಿದ್ದನಾದ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

21 ಮೇ 2021

ನಾನು ಮತ್ತು ಟೀ


 *ನಾನು ಮತ್ತು ಟೀ*


ಟೀ ಮತ್ತು ನನಗೆ 

ಬಹಳ ಸಾಮ್ಯತೆ ಇದೆ 

ಹೊರಗಿಂದ ನೋಡಿದಾಗ

ಹೊಗೆ ಮತ್ತು ಬಿಸಿ|

ಒಳಗಡೆ ಉತ್ತಮ ಸ್ವಾದ

ಒಮ್ಮೆ ಕುಡಿಯಲು

ಶುರು ಮಾಡಿದರೆ 

ನಿಲ್ಲಿಸುವುದಿಲ್ಲ

ಬರುವವರೆಗೂ ಗಸಿ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ಲಕ್ಷ್ಮಿ ಪೋಟೊ. ಲೇಖನ


 


*ಲಕ್ಷ್ಮೀ ಪೋಟೋ*

ನಾನು ಗೌರಿಬಿದನೂರಿನ ಎಸ್ .ಎಸ್ ಇ. ಎ . ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ,ಒಬ್ಬ ಪೋಷಕರು ಸ್ಟಾಪ್ ರೂಮ್ ಹತ್ತಿರ ಬಂದು ಸಂಕೋಚದಿಂದ  ಹೊರಗೇ ನಿಂತಿದ್ದರು, ನಾನು ಒಳಗಡೆ ಬನ್ನಿ ,ಎಂದೆ ಮಾಸಲು ಅಂಗಿ ಅಲ್ಲಲ್ಲಿ ತೂತು ಬಿದ್ದ ಪ್ಯಾಂಟ್ ಧರಿಸಿದ್ದರು ,ತಲೆಗೂದಲು ನೋಡಿದರೆ ಎಣ್ಣೆ ಕಂಡು ಬಹು ದಿನಗಳಾಗಿರಬಹುದು ಎಂದು ಅರ್ಥವಾಗುತ್ತಿತ್ತು, ಎರಡೂ  ಕೈಗಳನ್ನು ಎದೆಯಭಾಗಕ್ಕೆ ಗಟ್ಟಿಯಾಗಿ ತಬ್ಬಿ ಹಿಡಿದುಕೊಂಡಿದ್ದರು, ನಾನು ಕರೆದದ್ದಕ್ಕೆ ಅಲ್ಲಲ್ಲಿ ಕಿತ್ತು ಹೋಗಿ ಒಂದೆರಡು ಬಾರಿ ಹೊಲಿಗೆ ಹಾಕಿದ್ದ ಹವಾಯ್ ಚಪ್ಪಲಿಗಳನ್ನು ಹೊರಗೆ ಬಿಟ್ಟು ಕೊಠಡಿ ಒಳಗೆ ಬರಲು ಸಿದ್ದರಾದರು,
" ಚಪ್ಪಲಿ ಹಾಕಿಕೊಂಡು ಬನ್ನಿ ಪರವಾಗಿಲ್ಲ " ಎಂದೆ ‌
ಬ್ಯಾಡ ಸಾ, ಅಲ್ಲೇ ಇರಲಿ ಎಂದು ಒಳಗೆ ಬಂದು ಮತ್ತೆ ವಿಧೇಯ ವಿದ್ಯಾರ್ಥಿಯಂತೆ ನಿಂತರು,
"ನಾನೇ ಮತ್ತೆ ಕೇಳಿದೆ ಯಾರು ಬೇಕು ? ಏನಾಗಬೇಕಿತ್ತು ? "
"ಅದೇ ಸಾ, ನಮ್ ಅತಾವುಲ್ಲ ಅವನ ಬಗ್ಗೆ ಕೇಳ್ ಬೇಕಿತ್ತು, " ಎಂದರು
" ಯಾವ್ ಅತಾವುಲ್ಲ, ಯಾವ ಸೆಕ್ಷನ್ ಯಾವ ಮೀಡಿಯಂ? ಮತ್ತೆ ಪ್ರಶ್ನೆ ಹಾಕಿದೆ.

" ಒಂಭತ್ತನೆಯ ಕ್ಲಾಸು ಸಾ, " ಅಂದರು
ಆಗ ನನಗೆ ಅರ್ಥವಾಯಿತು ನಿಧಾನ ಕಲಿಕೆಯ ಅತಾವುಲ್ಲ ನಿಗೆ ಕಳೆದ ದಿನ ಅವರ ತಂದೆ ಕರೆದುಕೊಂಡು ಬರಲು ಹೇಳಿದ್ದು ,
" ಏನ್ ಸಾಹೇಬ್ರೇ ನಿಮ್ ಹುಡುಗ,ಅಷ್ಟು ಚೆನ್ನಾಗಿ ಓದ್ತಾ ಇಲ್ಲ ಮನೇನಲ್ಲಿ ಸ್ವಲ್ಪ ಗಮನ ಕೊಡಿ " ಎಂದೆ
" ನಮಿಗೆ ಓದು ಬರಲ್ಲ ಸಾ, ನಾನು ನಮ್ ಮನೆಯವರು ಕೂಲಿ ಮಾಡಾಕೆ ಹೋಗ್ತೀವಿ , ನೀವೇ ಏನಾನಾ ಮಾಡಿ ಸಾ, ಇವನ್ ಒಬ್ನೇ ಮಗ ಚೆಂದಾಕೆ ಓದ್ಲಿ ಅಂತ ನನ್ ಆಸೆ ಸಾ," ಮುಗ್ದತೆಯಿಂದ ಕೈಜೋಡಿಸಿ ಹೇಳಿದರು.
ಮುಂದೆ ನನಗೆ ಏನು ಹೇಳಬೇಕು ಎಂದು ತೋಚದೇ ಒಂದು ಸಹಿ ಮಾಡಿಸಿಕೊಂಡು ಸರಿ ಹೋಗಿ ಬನ್ನಿ ಎಂದೆ ,ಕೊಠಡಿಯ ಹೊರಗೆ ಹೋಗಿ ಚಪ್ಪಲಿ ಹಾಕಿಕೊಂಡು ಮತ್ತೊಮ್ಮೆ ಎರಡೂ ಕೈ ಎತ್ತಿ ಮುಗಿದು ಹೊರಟರು.

ಆ ತರಗತಿಯ ಇತರ ಮಕ್ಕಳಿಗೆ ಹೋಲಿಸಿದರೆ ಅತಾವುಲ್ಲ ಅಂತಹ ತರಲೇ ವಿದ್ಯಾರ್ಥಿ ಆಗಿರಲಿಲ್ಲ, ಆದರೆ ಓದುವುದು ಬರೆಯುವುದರಲ್ಲಿ ಹಿಂದು, ಇದೇ ಕಾರಣದಿಂದಾಗಿ
ಒಂದೆರಡು ಬಾರಿ ಏಟು ಕೊಟ್ಟದ್ದೂ ಇದೆ
ಪಾಪ ಅವನಿಗೆ ವಿದ್ಯೆ ತಲೆಗೆ ಹತ್ತಲೇ ಇಲ್ಲ  ಅವನ ಕಲಿಕೆ ಸುಧಾರಿಸಲು ನಾನೂ  ವಿವಿಧ ತಂತ್ರಗಳನ್ನು ಬಳಸಿದರೂ ಪ್ರಯೋಜನ ಆಗಲಿಲ್ಲ,

ಈ ಮಧ್ಯೆ ರಸ್ತೆಯಲ್ಲಿ, ಬಸ್ಟ್ಯಾಂಡ್ ನಲ್ಲಿ ಎಲ್ಲಿ ಸಿಕ್ಕರೂ ಅತಾವುಲ್ಲ ನ ತಂದೆ ಎಷ್ಟೇ ಜನರಿದ್ದರೂ ಚಪ್ಪಲಿ ಬಿಟ್ಟು ಕೈಮುಗಿದು" "ಈಗ ಎಂಗೆ ಓದ್ತಾನೆ ಸಾಮಿ ನನ್ ಮಗ" ಎಂದು ಧೈನ್ಯತೆಯಿಂದ ಕೇಳುತ್ತಿದ್ದರು.

ವಾರ್ಷಿಕ ಪರೀಕ್ಷೆ ಮುಗಿದು ಮೂರು ದಿನ ವಾಗಿತ್ತು  , ಬೆಳಿಗ್ಗೆ ಒಂಭತ್ತು ಗಂಟೆಯ ಸಮಯ ಯಾರೋ ಮನೆಯ ಬಾಗಿಲು ಬಡಿದ ಸದ್ದಾಯಿತು,ಬಾಗಿಲು ತೆರೆದು ನೋಡಿದರೆ ಅದೇ ವಿಧೇಯತೆಯಿಂದ ನಿಂತಿದ್ದರು ಸಾಹೇಬರು, ಕೈಯಲ್ಲಿ ಏನೋ ಹಿಡಿದಿದ್ದರು,
" ಏನ್ ಸಾಹೆಬ್ರೆ ,ಯಾಕೆ ಬಂದಿದ್ದು "ಎಂದೆ
" ಏನೂ ಅಂದ್ಕಾ ಬ್ಯಾಡಿ ಸಾ, ಇದನ್ ತಕಳಿ, " ಮೆಲು ದನಿಯಲ್ಲಿ ಹೇಳಿದರು
" ಏನು ಇದು, ಇದೆಲ್ಲಾ ‌ಬೇಡ,ಮನೆಗೆ ಹೋಗಿ " ಎನ್ನುತ್ತಿರುವಾಗಲೇ ಬಲವಂತವಾಗಿ ಅದನ್ನು ನನ್ನ ಕೈಯಲ್ಲಿ ಇಟ್ಟರು , ನನ್ನ ಕೈಗೆ ಬಂದಾಗ ಅದು ಏನೆಂದು ಸ್ಪಷ್ಟವಾಗಿತ್ತು ಇಂದೂವರೆ ಬೈ ಎರಡು ಅಡಿಯ ಲಕ್ಷ್ಮಿ ಪೋಟೋ!
ಆಗ ನನಗೆ ಧರ್ಮ ಸಂಕಟ ಶುರುವಾಯಿತು, ಈ ಪೋಟೋ ಪಡೆಯಲೇ ಅಥವಾ ಹಿಂದಕ್ಕೆ ಕೊಡಲೆ , ನಮ್ಮ ಸಂಭಾಷಣೆ ಕೇಳಿದ ನಮ್ಮ ಮನೆಯವರು ಹೊರಬಂದು
"ಶುಕ್ರವಾರ ಅಣ್ಣ ಮನೆಗೆ ಪೋಟೋ ತಂದ್ ಕೊಟ್ಟಿದ್ದಾರೆ ಇಸ್ಕೊಳ್ಲಿ" ಎಂದು ನನ್ನ   ಕೈಯಿಂದ ಪೋಟೋ ತೆಗೆದುಕೊಂಡು ಒಳಗೆ ಹೋಗೇ ಬಿಟ್ಟರು.
ಮತ್ತೊಮ್ಮೆ ನನಗೆ ಕೈಮುಗಿದು ಬತ್ತಿನಿ ಸಾ, ನಮ್ ಹುಡ್ಗನ್ನ ನೋಡಿಕೊಳ್ಳಿ ಅಂದರು.

ಆಗ ನನಗೆ ಅರ್ಥವಾಯಿತು ಮಕ್ಕಳ ಆ ವರ್ಷದ ರಿಸಲ್ಟ್ ಮುಂದಿನ ಸೋಮವಾರ ಪ್ರಕಟಮಾಡಬೇಕೆಂಬುದು!

ಸರ್ಕಾರದ ಶಿಕ್ಷಣ ನೀತಿಯ ಪ್ರಕಾರ ಒಂದರಿಂದ   ಒಂಬತ್ತನೆಯ ತರಗತಿಯ ಮಕ್ಕಳನ್ನು ಫೇಲ್ ಮಾಡುವಂತಿರಲಿಲ್ಲ ಹಾಗಾಗಿ ಅತಾವುಲ್ಲ ಸಹ ಪಾಸಾಗಿದ್ದ,
ಅವರ ತಂದೆ ನಾನೇ ಪಾಸು ಮಾಡಿಸಿದೆ ಎಂದುಕೊಂಡರು.

ಹತ್ತನೇ ತರಗತಿಯಲ್ಲಿ ಅವನ ಕಲಿಕೆ ಅದೇ ರೀತಿಯಲ್ಲಿ ಮಂದಗತಿಯಲ್ಲಿ ಸಾಗಿತ್ತು ,ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಅವರ ತಂದೆ ಕೈಮುಗಿದು ಅದೇ ಮಾತು
"ನನ್ ಮಗನ್ನ ನೋಡ್ಕಳಿ ಸಾ"
"ಈ ವರ್ಷ ನಾವೇನೂ ಮಾಡಾಕಾಗಲ್ಲ ಸಾಹೇಬ್ರೆ ಪಬ್ಲಿಕ್ ಪರೀಕ್ಷೆ "ಎಂದೆ
ಅದರೂ ನಾನೇ ಅವರ ಮಗನನ್ನು ಪಾಸು ಮಾಡಿಸುವೆ ಎಂಬ ಅದಮ್ಯ ವಿಶ್ವಾಸ ಅವರಿಗೆ .
ಹತ್ತನೇ ತರಗತಿಯ ಫಲಿತಾಂಶದ ದಿನ ಶಾಲೆಯ ಹತ್ತಿರ ತಂದೆ ಮಗ ಇಬ್ಬರೂ ಬಂದರು ಮಗ  ಎಲ್ಲಾ ವಿಷಯಗಳಲ್ಲಿ ಪೇಲ್ ಆಗಿರುವುದನ್ನು ತಿಳಿದು ತಂದೆ   ಅಲ್ಲೇ ಗಳಗಳನೆ ಅತ್ತು ಬಿಟ್ಟರು,ಅವರ ಮಗ ನಿರ್ಭಾಹುಕನಾಗಿ ನಿಂತಿದ್ದನು.
ಇಂದು ಬೆಳಿಗ್ಗೆ ದೇವರ ಕೋಣೆಯಲ್ಲಿ ಪೂಜೆ ಮಾಡುವಾಗ ಅವರು ಕೊಟ್ಟ ಲಕ್ಷ್ಮಿ ಪೋಟೋ ನೋಡಿ ಯಾಕೋ ಮತ್ತೊಮ್ಮೆ ಅತಾವುಲ್ಲ ಮತ್ತು ಅವರ ತಂದೆ ನೆನಪಾದರು.....

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು

20 ಮೇ 2021

ಟೈಟ್ ಲಾಕ್ಡೌನ್ .ಹನಿಗವನ


 


*ಟೈಟ್ ಲಾಕ್ಡೌನ್*


ಹೌದು ನಿಜ 

ರಾಜ್ಯದಲ್ಲಿ ಬಹಳ 

ಕಟ್ಟು ನಿಟ್ಟಾಗಿ

ಪಾಲನೆಯಾಗುತ್ತಿದೆ

ಲಾಕ್ ಡೌನ್ |

ನಾವು ಕಟ್ಟಿದಂತೆ ಲುಂಗಿ

ಮೇಲೆ ಮಾತ್ರ ಟೈಟ್

ಕೆಳಗೆ ಓಪನ್||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು