27 ಸೆಪ್ಟೆಂಬರ್ 2019

ಚಾಲಕ (ಭಾವಗೀತೆ)

*ಚಾಲಕ*

ಕತ್ತಲ ಕೂಪದಿಂದ
ನಿನಗೆ ಬಿಡುಗಡೆ ಎಂದು?
ಬೆಳಕಿನೆಡೆ ಸಾಗಲು
ನೀನು ಅಡಿಇಡು ಇಂದು.

ನಿನ್ನಾತ್ಮ ದರ್ಶನಕೆ
ಪರರ ನೆರವೇಕೆ?
ನೆರಳಂತೆ ಕಾಯುವುದು
ಸತ್ಕಾರ್ಯ ಚಿಂತೆಯೇಕೆ?

ಜಗದ ಮೂಲೆಗಳಿಂದ
ಪಡೆ ನೀನು ಜ್ಞಾನ
ಜನ ಮೆಚ್ಚಿ ಹೊಗಳುವರು
ನೀನೆ ಮಹಾಜಾಣ.

ಭಕ್ತಿಯಲಿ ಭಜಿಸಿದರೆ
ಕಾಣುವುದು ಸ್ವರ್ಗ
ಮುಕ್ತಿಯ ಮೂಲ
ಅದುವೆ ಭಕ್ತಿಮಾರ್ಗ.

ಮೇಲು ಕೀಳೆನೆದೆ
ಮಾಡು ನಿನ್ನ ಕಾಯಕ
ನಿನ್ನ ಮೋಕ್ಷದ ಯಾತ್ರಗೆ
ನೀನಾಗುವೆ ಚಾಲಕ.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


25 ಸೆಪ್ಟೆಂಬರ್ 2019

ಭವಿಷ್ಯದ ಆಹಾರ ಭದ್ರತೆ (ಲೇಖನ)

    ಲೇಖನ

ಭವಿಷ್ಯದ ಅಹಾರ ಭದ್ರತೆ

ಭಾರತ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ದ್ವಿದಳ ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿರುವುದನ್ನು ಗುರ್ತಿಸಿ ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿ ಪತ್ರ ದ ಜೊತೆಗೆ ಒಂದು ಕೋಟಿ ನಗದು ಬಹುಮಾನವನ್ನು ನೀಡಿ ಗೌರವಿಸಿದೆ.ಇದು ಕರ್ನಾಟಕದ ಪ್ರಜೆಗಳಾದ ನಾವು ಹೆಮ್ಮೆ ಪಡಬೇಕಾದ ಸಂಗತಿ .ಜೊತೆಯಲ್ಲಿ ಮುಂದಿನ ದಿನಗಳಲ್ಲಿ ವಿವಿದ ಕಾರಣದಿಂದ ಆಹಾರದ ಕೊರತೆಯನ್ನು ನೀಗಿಸಲು ,ಸುಸ್ಥಿರ ಅಹಾರ ಉತ್ಪಾದನೆ ಹೆಚ್ಚು ಒತ್ತು ನೀಡ ಬೇಕಾಗಿದೆ. ಈಗಾಗಲೇ ಮುಂದಿನ ದಿನಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವದ ಪ್ರಮುಖವಾದ ರಾಷ್ಟ್ರಗಳು ಬೇರೆ ದೇಶಗಳ ದೊಡ್ಡ ಅಹಾರ ಕಂಪನಿಗಳನ್ನು ದುಬಾರಿ ಹಣ ತೆತ್ತು ಖರೀದಿಸಿ ಭವಿಷ್ಯದ ಆಹಾರ ಭದ್ರತೆ ಮತ್ತು ಆಹಾರ ಕೊರತೆ ನೀಗಿಸಲು ಸನ್ನದ್ದವಾಗುತ್ತಿವೆ ಈ ವಿಚಾರದಲ್ಲಿ ಚೀನಾ ದೇಶವು ದುಬಾರಿಯಾದರೂ ಇತರೆ ದೇಶಗಳ ದೊಡ್ಡ ಕಂಪನಿಗಳನ್ನು ಲಕ್ಷಾಂತರ ಕೋಟಿ ನೀಡಿ ಖರೀದಿಸಿ ಆಹಾರದಲ್ಲಿ ವಿಶ್ವ ಮಟ್ಟದಲ್ಲಿ ಪಾರಮ್ಯ ಮೆರೆಯಲು ಸಜ್ಜಾಗುತ್ತಿದೆ. ಭಾರತ ಸರ್ಕಾರವು ಈ ನಿಟ್ಟಿನಲ್ಲಿ  ಯೋಚಿಸಿ,ಯೋಜಿಸಲು ಇದು ಸಕಾಲ .ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಆಹಾರ ಉತ್ಪಾದನೆ. ಸಂಶೋದನೆಗಳ ಮಾಡಿ ಆಹಾರವನ್ನು ಉತ್ಪಾದಿಸಲು ವಿಪುಲವಾದ ಅವಕಾಶಗಳನ್ನು ಹೊಂದಿದೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿದ್ದರೂ ಅತೀವೃಷ್ಟಿ ಅನವೃಷ್ಟಿ ಯಂತಹ ನೈಸರ್ಗಿಕ ವಿಕೋಪಗಳ ಸಂಧರ್ಭದಲ್ಲಿ ಮತ್ತು ಜಾಗತಿಕ ಅನಿಶ್ಚಿತತೆಗಳ ಎದುರಿಸಲು ಇತರೆ ದೇಶಗಳಂತೆ ನಾವೂ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ಮುಂದಿನ ಸವಾಲುಗಳಿಗೆ ಈಗಲೇ ಸಿದ್ದರಾಗುವುದು ಜಾಣ ನಡೆಯಲ್ಲವೆ ?


*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

*ಬಂಗಾರ (ಹನಿ)

*ಬಂಗಾರ*

ದೀರ್ಘ ಕಾಲ
ಮೌನವಾಗಿರುವ
ಹೆಂಡತಿಯ ಕಂಡು
ಕೌತುಕದಿಂದ
ಅವನು ಯಾಕೆ
ಮೌನ ?ಅಂದ.
ಮಾತು ಬೆಳ್ಳಿ
ಮೌನ ಬಂಗಾರವಂತೆ
ಅದರ ಬೆಲೆ
ಇಳಿದಿದೆಯಂತೆ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

24 ಸೆಪ್ಟೆಂಬರ್ 2019

ಸಂತಸದಿಂದಿರು (ಕವನ)

*ಸಂತಸದಿಂದಿರು*

ಆಸೆಗಳ ಕೂಪದಲಿ ಬಿದ್ದು
ವಿಲವಿಲನೆ ಒದ್ದಾಡದಿರು
ಅವನ ಭಜಿಸಿ ಸಂತಸದಿಂದಿರು.

ಹೆಂಡತಿ, ಮಕ್ಕಳು , ಬಂಧುಗಳೆಂಬ
ಅತಿಯಾದ ಮೋಹ ಬೇಡ
ದೇವನೊಲವ ಸವಿ ಮೂಢ.

ಜನನ ಮರಣ, ರೋಗಗಳ
ನೆನೆಯುತ  ಚಿಂತಿಸುವುದ ಬಿಡು
ಭಗವಂತನಲಿ ಮನಸಿಡು.

ಹೆಣ್ಣು ಹೊನ್ನು ಮಣ್ಣಿನಲಿ
ಮಾತ್ರ ಸಂತಸವಿಲ್ಲ
ಒಳಗಣ್ಣ ತೆರೆದರೆ ಸವಿಬೆಲ್ಲ

*ಸಿ ಜಿ‌ ವೆಂಕಟೇಶ್ವರ*

22 ಸೆಪ್ಟೆಂಬರ್ 2019

ತಂಗಾಳಿ (ಬಹುಮಾನ ಪಡೆದ ಹನಿ)

*ತಂಗಾಳಿ*

ಸಕಲ ವಿಷಯಗಳಲಿ
ಪಥ್ಯವಿದ್ಧರೆ ದಾಂಪತ್ಯದಲಿ
ಬೀಸುವುದು ತಂಗಾಳಿ
ಇಲ್ಲದಿದ್ದರೆ ಖಂಡಿತ
ತಪ್ಪದು ಬಿರುಗಾಳಿ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*