30 ಅಕ್ಟೋಬರ್ 2018

ಉಳಿತಾಯ ದಿನ(ಹನಿಗವನ)

           

*ಉಳಿತಾಯ ದಿನ*ಹನಿಗವನ

ಮದುವೆಯಾದ ಹೊಸತರಲ್ಲಿ
ಅನುರಾಗ ಅರಳಿ
ಪ್ರೀತಿಯ ಜೇನಿನಲಿ ತೇಲಿಸುತ್ತಿದ್ದಿರಿ
ಈಗ ಅನುರಾಗವಿಲ್ಲ
ಮುತ್ತಿನ ಮಾತಿಲ್ಲ
ಮುತ್ತಂತೂ ಇಲ್ಲವೇ ಇಲ್ಲ
ಈಗೇಕೆ ಕಂಜ್ಯೂಸುತನ
ನಿನಗೆ ಗೊತ್ತಿಲ್ಲವೆ ಪ್ರಿಯೆ ?
ಇಂದು ವಿಶ್ವ ಉಳಿತಾಯ ದಿನ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಪುಸ್ತಕ ವಿಮರ್ಶೆ (ಕಾಲಚಕ್ರ ಕಥಾ ಸಂಕಲನ)

             *ನಾ ಓದಿದ ಪುಸ್ತಕ*

*ಕಾಲಚಕ್ರ*

ಕಥಾ ಸಂಕಲನ
ಲೇಖಕರು : ನಾಗರಾಜ್ ಜಿ‌ ನಾಗಸಂದ್ರ
ಪ್ರಕಾಶನ : ವರ್ಷಾ ಪ್ರಕಾಶನ

ಹನ್ನೆರಡು ವಿಭಿನ್ನವಾದ ಕಥಾವಸ್ತುವನ್ನು ಒಳಗೊಂಡಿರುವ ಈ ಪುಸ್ತಕದಲ್ಲಿ ಒಂದಕ್ಕೊಂದು ಉತ್ತಮ ಕಥೆಗಳು ಇವೆ .ಒಂದೇ ಸಿಟ್ಟಿಂಗ್ನಲ್ಲಿ‌ ಓದಿ ಮುಗಿಸಿದ ಈ ಪುಸ್ತಕ ನನ್ನ ಬಹುವಾಗಿ ಕಾಡಿತು .

ಮಹಿಳೆಯರು ಉನ್ನತ ಹುದ್ದೆಯನ್ನು ಅಲಂಕರಿಸಿದರೂ ಅವರ ಶೋಷಣೆಯು ನಿಂತಿಲ್ಲ ಎಂದು ಮೊದಲ ಕಥೆಯಾದ
*ಪರಿವರ್ತನೆ* ಯಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ ತಹಶಿಲ್ದಾರರಂತಹ ಉನ್ನತ ಹುದ್ದೆಯಲ್ಲಿದ್ದರೂ ಮನೆಯಲ್ಲಿ ಗಂಡನ‌ ಕಿರುಕುಳಕ್ಕೆ ಬೇಸತ್ತು ಅಡ್ಡದಾರಿ ಹಿಡಿದು ಪುನಃ ಪರಿವರ್ತನೆ ಹೊಂದುವ ರೀತಿಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

ನನಗೆ ವೈಯಕ್ತಿಕವಾಗಿ ಬಹಳ ಇಷ್ಟವಾದ ಕಥೆ *ಮಾರುತ* ಇದರಲ್ಲಿ ರೈತನ ಹಾಡು ಪಾಡುಗಳನ್ನು ವಿವರವಾಗಿ ಬಿಡಿಸಿಹೇಳಿದ್ದಾರೆ
ಈ ಕಥೆಯಲ್ಲಿ ಸುಭೀಕ್ಷವಾಗಿರುವ ರೈತನ ಚಿತ್ರಣದ ಜೊತೆಗೆ ಪ್ರಸ್ತುತ ಇರುವ ಅಂತರ್ಜಲ ಕುಸಿತ ರೈತರಸಾಲ ,ರೈತರ ಆತ್ಮಹತ್ಯೆ ಬಗ್ಗೆ ಬೆಳಕು ಚೆಲ್ಲಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

*ಕಾಲಚಕ್ರ* ಕಥೆಯಲ್ಲಿ ಹಣದ ಹಿಂದೆ ಬಿದ್ದು ದುಡ್ಡೇ ಸರ್ವಸ್ವ ಎಂದು ಜೀವನವನ್ನೇ ಹಾಳುಮಾಡಿಕೊಳ್ಳುವ ಯುವಕನ ಕಥೆ ಮೂಲಕ ಯುವ ಜನಾಂಗವನ್ನು ಕವಿ ಎಚ್ಚರಿಸಿದ್ದಾರೆ.

ಸಾಹಿತಿಯಾದವನು ತಾಳ್ಮೆಯಿಂದ ಇರಬೇಕು ಕೇವಲ ಹಾರ ತುರಾಯಿ ಪ್ರಶಸ್ತಿಯ ಹಿಂದೆ ಓಡಬಾರದು ಅವು ನಮ್ಮನ್ನು ಹುಡುಕಿಕೊಂಡ ಬರುವವುಎಂದು *ಗುರಿಮುಟ್ಟದ ಹಾದಿ*ಯಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಸಮಾಜವಾದಿ ತತ್ವ ರೂಢಿಸಿಕೊಂಡು ಬದಲಾವಣೆಗಳನ್ನು ತರಲು ಹೋಗಿ ತನ್ನ ಕುಟುಂಬವನ್ನೇ ತೊಂದರೆಗೆ ಒಡ್ಡುವ *ಗಾಳಿ ಗೋಪುರ*ಕಥಾ  ಚಿತ್ರಣ ಓದುಗರ ಕಣ್ಣಲ್ಲಿ ನೀರು ತರಿಸುತ್ತದೆ .
ಈಗೆ ಎಲ್ಲಾ ಕಥೆಗಳು ವಿಭಿನ್ನವಾದ ನಿರೂಪಣೆ ಮತ್ತು ಕಥಾವಸ್ತುವಿನಿಂದ ನಮ್ಮ ಮನ ಸೆಳೆಯುತ್ತವೆ.
ಈ ಕಥಾ ಸಂಕಲನ ಓದಿ ಮುಗಿಸಿದಾಗ ಒಂದು ಒಳ್ಳೆಯ ಪುಸ್ತಕ ಓದಿದ ಅನುಭವ ನಿಮಗಾಗುವುದು ಗ್ಯಾರಂಟಿ .

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 ಅಕ್ಟೋಬರ್ 2018

*ನ್ಯಾನೋ ಕಥೆ* *ಚಳಿಯಲ್ಲೂ ಬೆವರು*

             
*ನ್ಯಾನೋ ಕಥೆ*
*ಚಳಿಯಲ್ಲೂ ಬೆವರು*
"ಈ ಸರ್ಕಾರದವರು ಇಪ್ಪತ್ನಾಲ್ಕು ಗಂಟೆ ಕರೆಂಟ್ ಕೊಡ್ತೀವಿ ಅಂತಾರೆ ಹಗಲೊತ್ತು ಸಿಂಗಲ್ ಫೇಸ್ ಕೊಟ್ಟು ರಾತ್ರಿ ತ್ರೀಪೇಸ್ ಕೊಡ್ತಾರೆ ಈ ಚಳೀಲಿ ನಾನು ತೋಟಕ್ಕೆ ನೀರು ಕಟ್ಟಬೇಕು ಎಲ್ಲಾ ನನ್ನ ಕರ್ಮ" ಎಂದು ಗೊಣಗುತ್ತ ರಾಮಪ್ಪ ನೀರು ಕಟ್ಟುವಾಗ " ಹೌದು ಕಣಪ್ಪ ನಾನು ಈಗ ನನ್ನ ತೋಟದ ಮೋಟರ್ ಸ್ಟಾರ್ಟ್ ಮಾಡಿ ಬಂದೆ ನಮ್ಮ ಸರ್ಕಾರದಾಗೆ ಇಂಗ್ ಇರ್ಲಿಲ್ಲ ಬಿಡು" ಎಂದು ಬೀಮಪ್ಪ  ಹೇಳಿದಾಗ ನಿಮ್ಮದ್ಯಾವ ಸರ್ಕಾರ?  ಓ  ನಿಮ್ಮ ಪಾರ್ಟಿ ಬೇರೆ ಎಂದು ರಾಮಪ್ಪ ಮಾತು ಮುಂದುವರೆಸುತ್ತಾ ನೀರು ಕಟ್ಟುವ ಕಾರ್ಯ ಮುಂದುವರೆಸಿದ ಮತ್ತೆ ೧೨ .೩೦ ಕ್ಕೆ  ಕರೆಂಟ್ ಹೋಯ್ತು ಸರಿ ನಾನು ಇಲ್ಲೆ ಮಲಗಿ ಬೆಳಗ್ಗೆ ಊರಿಗೆ ಹೋಗುವೆ ಎಂದು ರಾಮಪ್ಪ ಮಲಗಲು ಅಣಿಯಾದ ಭೀಮಪ್ಪ ನನಗೆ
ಹೊಲದಲ್ಲಿ ಮಲಗಲು ತುಂಬಾ ಇಷ್ಟ ಎಂದು ಅಲ್ಲೇ ಮಲಗಿದ.
ರಾಮಪ್ಪ ತೋಟದಿಂದ  ಮುಂಜಾನೆ ಬೇಗ ಎದ್ದು ಊರಿನ ಸಮೀಪ ನಡೆದುಬರುತ್ತಿರುವಾಗ ಭೀಮಪ್ಪ ಕುರಿಮರಿಯೊಂದಿಗೆ ಎದುರಾದಾಗ "ಏನು ಇಷ್ಟು ಬೇಗ ತೋಟದಿಂದ ಬಂದು ಮತ್ತೆ ತೋಟಕ್ಕೆ ಹಿಂತಿರುಗುತ್ತಿರುವೆಯಾ?! ಎಂದಾಗ "ರಾತ್ತಿ ನನಗೆ ತಲೆನೋವಿದ್ದದ್ದರಿಂದ ತೋಟಕ್ಕೆ ಬಂದಿರಲಿಲ್ಲ" ಎಂದಾಗ ರಾಮಪ್ಪ ಬೆಳಗಿನ ಚಳಿ ಯಲ್ಲೂ ಬೆವರಲಾರಂಬಿಸಿದನು .!
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

27 ಅಕ್ಟೋಬರ್ 2018

ಬೆಳಕಿನೆಡೆಗೆ ಸಾಗೋಣ (ಕವನ)

                       ಬೆಳಕಿನೆಡೆಗೆ ಸಾಗೋಣ

ಬುದ್ದ ಬಸವಾದಿ ಮಹಾಪುರಷರು
ಕಾಲ ಕಾಲಕ್ಕೆ ಪಂಜನಿಡಿದು
ಬೆಳಕ ನೀಡಲು ಧರೆಯಲಿ
ಅವತರಿಸುತ್ತಲೇ ಇದ್ದಾರೆ
ಆದರೂ ಕತ್ತಲಲಿರುವವರು
ಹೆಚ್ಚಾಗುತ್ತಲೇ ಇದ್ದಾರೆ .

ಕಾರಣ ಹುಡಕಹೊರಟರೆ
ಅವರಿಡಿದಿರುವ ಪಂಜುಗಳಿಂದ
ನಾವು  ಬೆಳಗಿಸಿಕೊಳ್ಳದಿರುವುದು
ನಮ್ಮ ಅಲ್ಪ ಬೆಳಕಿನ ಪಂಜಿಗೆ
ಉತ್ತಮ ತೈಲ‌ಹಾಕದಿರುವುದು
ಅಲ್ಪ ಸ್ವಲ್ಪ ಉರಿವ ಪಂಜುಗಳ
ಆರಿಸಲು ಯತ್ನಮಾಡುತಿರುವುದು
ಇನ್ನೆಲ್ಲಿಯ ಬೆಳಕು ಬರೀ‌ಕೊಳಕು

ಕತ್ತಲಲಿದ್ದುದು ಸಾಕು ಬನ್ನಿ
ಬರಲಿರುವ ಬುದ್ದ ಬಸವರ
ಕಾಯುವುದು ಬೇಡ
ಪಂಜಿನಿಂದ ಪಂಜುಗಳ
ಪ್ರಜ್ವಲಿಸೋಣ ಜಗವನೆಲ್ಲ
ಜಗಮಗಿಸೋಣ
ತಮವ ಹೊಡೆದೋಡಿಸೋಣ
ಎಲ್ಲರೂ ಬುದ್ದ ಬಸವರಾಗೋಣ
ಕತ್ತಲಿನಿಂದ ಬೆಳಕಿನೆಡೆಗೆ  ಸಾಗೋಣ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

26 ಅಕ್ಟೋಬರ್ 2018

ಗಜ಼ಲ್ 50(ಅಮ್ಮನ ಅಳಲು) ಈ ಗಜ಼ಲ್ ನನ್ನ ಅಮ್ಮನಿಗೆ ಮತ್ತು ನನ್ನ ಗಜ಼ಲ್ ಗುರುಗಳಾದ ಡಾ. ಗೋವಿಂದ ಹೆಗಡೆ ರವರಿಗೆ ಸಮರ್ಪಣೆ ಮಾಡುವೆ .ಮತ್ತೊಂದು ಸಂತಸದ ಸುದ್ದಿ ನನ್ನ ಬ್ಲಾಗ್ ಒದುಗರ ಸಂಖ್ಯೆ 27000 ದಾಟಿದೆ ನನ್ನ ಎಲ್ಲಾ ಬ್ಲಾಗ್ ಓದುಗರಿಗೆ ಅನಂತ ಧನ್ಯವಾದಗಳು🙏🙏


                    *ಗಜ಼ಲ್50*

ಮುತ್ತು  ಕೊಟ್ಟವಳು ಬಂದಾಗ ತುತ್ತುಕೊಟ್ಟವಳ ಮರೆಯುತಿಹರು
ದುಷ್ಟ ಬುದ್ದಿಯಿಂದ   ಬಟ್ಟೆಗಳನ್ನು ಹಾಕಿಯೂ  ಬೆತ್ತಲಾಗಿಹರು

ಹೊಟ್ಟೆ ಬಟ್ಟೆ ಕಟ್ಟಿ ತುತ್ತು ತುತ್ತಿಗೂ ತತ್ವಾರದಿ ಅನ್ನ ನೀಡಿದೆ
ರೆಕ್ಕೆ ಬಲಿತ ಮೇಲೆ ಹಾರಿ ನನ್ನ ಹೊರ ತಳ್ಳಲು ಸಿದ್ದರಾಗಿಹರು

ಮಕ್ಕಳಿಗೆ ದುಡಿಯಲು ಗಾಣದೆತ್ತಾದೆ ರಕ್ಷಿಸಲು ಕರಡಿಯಾದೆ
ನಾನು ವಯಸ್ಸಾದ  ಮೃಗವೆಂದು ತಿಳಿದು ನನ್ನ  ಮಾರಾಟ ಮಾಡುತಿಹರು

ಮಾತೃದೇವೋಭವ, ಮೊದಲ ಶಿಕ್ಷಕಿ, ಕ್ಷಮಯಾಧರಿತ್ರಿ ಎಂದರು
ಪೀಡೆ ,ಕಾಲಕಸ ,ದಂಡ ಗುಣವಿಶೇಷಣಗಳ ನೀಡುತಿಹರು

ಯಯಾತಿಗಳು ಯಾರೂ ಇಲ್ಲ ಕೋಲಿಡಿಯುವುದು ತಪ್ಪಲ್ಲ
ದೋಸೆ ತಿರುವಿ ಹಾಕಲು ಹೆಚ್ಚು ಕಾಲ ಬೇಕೆಂದು ತಿಳಿದಿಹರು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*