14 ಅಕ್ಟೋಬರ್ 2018

*ಕಾರಂತಜ್ಜ*(ಕವನ)

              *ಕಾರಂತಜ್ಜ*

*ಡಾ* ರ್ವಿನ್ ಸಿದ್ದಾಂತವ ನಂಬಿ
ಕ್ರಮೇಣ ಓದಿ ಬರೆದು
ವೈಜ್ಞಾನಿಕ ಚಿಂತನೆಯ ರೂಪಿಸಿದ
ಸಂತನೇ ಕಾರಂತಜ್ಜ

*ಶಿ* ಲೆಯೊಂದು ಯಾವ ಆಕಾರ
ಬೇಕಾದರೂ ಪಡೆಯಬಹುದೆಂದು
ತೋರಿದ ,ಹುಚ್ಚುಮನಸಿನ ಹತ್ತು
ಮುಖ ತೋರಿದ ಕವಿ ನಟ ಚಿಂತಕ ದಾರ್ಶನಿಕ
ನಿರ್ದೇಶಕ .ಯಕ್ಷಗಾನ ತಜ್ಞರೇ ಕಾರಂತಜ್ಜ

*ವ* ನ ಸಿರಿಯೊಂದಿಗೆ ಬಾಲರ
ಬೆಳವಣಿಗೆಗೆ ಬಾಲವನ
ಸ್ಥಾಪನೆ ಮಾಡಿದ ಎಲ್ಲವಬಲ್ಲ
ನಡೆದಾಡುವ ವಿಶ್ವ ಕೋಶವೆ ಕಾರಂತಜ್ಜ

*ರಾ* ಜಕೀಯದಲ್ಲಿ ಒಂದು ಕೈ ನೋಡಿ
ಚುನಾವಣೆ ಸೋತರೂ ಜನರ
ಮನಗೆದ್ದ ಸಾರಸ್ವತ ಲೋಕದ ನಕ್ಷತ್ರ
ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರೇ ಕಾರಂತಜ್ಜ

*ಮ* ರಳಿ ಮಣ್ಣಿಗೆ ಮೂಕಜ್ಜಿಯ ಕನಸುಗಳು
ಚೋಮನದುಡಿಯ ಕತೃ
ನಾನೂರಕ್ಕಿಂತ ಹೆಚ್ಚು ಕೃತಿಗಳ
ರಚಿಸಿ ತನ್ನ ಕೋಟಾವನ್ನೂ ಮೀರಿ
ಕನ್ನಡ ಪುಸ್ತಕ ಬರೆದ ಕೋಟಾದ
ಹೆಮ್ಮೆಯ ಪುತ್ರರೆ  ಕಾರಂತಜ್ಜ

*ಕಾ* ಡಿನ ರಕ್ಷಣೆ ಮಹತ್ವ ಸಾರಿದ
ನಾಡಿನ ಸಂಸ್ಕೃತಿಗೆ ದಾರಿ ತೋರಿದ
ನಟನೆ ನಿರ್ದೇಶನ ನಿರ್ಮಾಣ ದ
ಅನುಭವ ತೋರಿದ
ಸಕಲಕಲಾವಲ್ಲಭರೇ ಕಾರಂತಜ್ಜ

*ರಂ* ಜಿಸುತ ಜನರನು
ಚಿತ್ರ ನಾಟಕ ಯಕ್ಷಗಾನ ದಿ
ಭಂಜಿಸುತ  ಮೂಢನಂಬಿಕೆಗಳ
ಅಂಜದೆ ಮುನ್ನೆಡೆದವರೆ ಕಾರಂತಜ್ಜ

*ತ* ಮವ ಹೊಡೆದೋಡಿಸಲು
ಶಿಕ್ಷಣದ ಮಹತ್ವ ಸಾರಿದ
ವಿಜ್ಞಾನ ಮತ್ತು ಮಾನವೀಯತೆಗೆ
ಸಮಾನ ಒತ್ತು ನೀಡಿದವರೆ ಕಾರಂತಜ್ಜ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ಅಕ್ಟೋಬರ್ 2018

*ಸದ್ಗುಣಗಳ ನೀಡು*(ಕವನ)

            *ಸದ್ಗುಣಗಳ ನೀಡು*

ದಿಗಿಲಾಗುತ್ತಿದೆ ನನಗೆ
ಹಗೆಯ ಜನರ ನೋಡಿ
ದಿಗಿಲಾಗುತ್ತಿದೆ ಮತ್ಸರದ
ಜನರ ತಾತ್ಸಾರ ನೋಡಿ

ದಿಗಿಲಾಗುತ್ತಿದೆ  ನನಗೆ
ತಿಳಿದು‌ ತಪ್ಪೆಸಗುವರ ನೋಡಿ
ದಿಗಿಲಾಗುವುದು ದುಷ್ಟರ
ಅಟ್ಟಹಾಸದ ನಗು ನೋಡಿ

ದಿಗಿಲಾಗುತ್ತಿದೆ ನನಗೆ
ಪರಿಸರ ಕೆಡಿಸುವರ ನೋಡಿ
ದಿಗಿಲಾಗುವುದು ದುರಹಂಕಾರಿಗಳು
ಮೆರೆಯುವ ಪರಿ ನೋಡಿ

ದಿಗಿಲಾಗುತ್ತಿದೆ ನನಗೆ
ಸಹನೆಯಿಲ್ಲದೆ ಎಗರಾಡುವರ ನೋಡಿ
ದಿಗಿಲಾಗುವುದು ಭವ ಬಂಧನದಿ
ಸಿಲುಕಿ ತೊಳಲಾಡುವರ ನೋಡಿ

ಸರ್ವಶಕ್ತ ಚಾಮುಂಡೇಶ್ವರಿ ತಾಯಿ
ನನ್ನ ಮನದ ದಿಗಿಲ ಓಡಿಸು
ಸರ್ವರ ಏಳಿಗೆ ಮಾಡು
ಸಕಲರಲಿ ಸದ್ಗುಣಗಳ ನೀಡು

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

07 ಅಕ್ಟೋಬರ್ 2018

*ಅಂಬಿ ನಿಂಗೆ ವಯಸ್ಸಾಯ್ತೋ* ಚಿತ್ರ ವಿಮರ್ಶೆ

                   
*ಅಂಬಿ ನಿಂಗೆ ವಯಸ್ಸಾಯ್ತೋ*

ಚಿತ್ರ ವಿಮರ್ಶೆ

ಈ ವಾರ ನಾನು ನೋಡಿದ ಕನ್ನಡ ಚಲನಚಿತ್ರ *ಅಂಬಿ ನಿಂಗ್ ವಯಸ್ಸಯ್ತೋ* ಬಹಳ ದಿನಗಳ ನಂತರ ಕುಟುಂಬ ಸಮೇತ ಕುಳಿತುಕೊಂಡು ನೋಡಬಹುದಾದ ಚಿತ್ರ ಬಂದಿದೆ ಅದಕ್ಕೆ ನಿರ್ದೇಶಕರಾದ ಗುರುದತ್ ಗಾಣಿಗ ಅವರಿಗೊಂದು ನಮನ ಸಲ್ಲಿಸಲೇ ಬೇಕು .
ನಟಿಸುವುದರ ಜೊತೆಗೆ ಚಿತ್ರಕಥೆ ಬರೆದಿರುವ ಕಿಚ್ಚಸುದೀಪ್ ರವರ ಚಿತ್ರಕಥೆಯಲ್ಲಿ ಚಿತ್ರ ಚಕಚಕನೆ ಸಾಗುವುದು .
ಚಿತ್ರದ ಆರಂಭದಿಂದಲೂ ಭಾವನಾತ್ಮಕ ಅಂಶಗಳು ನಮ್ಮನ್ನು ಹಿಡಿದಿಡುವ ತಾಕತ್ ಇದೆ
ಪೈಟ್ ಮಾಸ್ಟರ್ ಆಗಿ  ಸೇವೆ ಸಲ್ಲಿಸಿದ ಅಂಬಿ ತನ್ನ ಇಳಿವಯಸ್ಸಿನಲ್ಲಿ ತನ್ನ ಮಗ ಸೊಸೆ ಮೊಮ್ಮಕ್ಕಳಜೊತೆ ಸುಖವಾಗಿರಲು ಹಾತೊರೆವ ಜೀವ ಆದರೆ ಮಗ ಸೊಸೆಯ ಅನಾದರ ಈ ಮದ್ಯ ಅಂಬಿ ಸಮಾಜ ಸೇವೆಯಿಂದ ಮಗ ಪೋಲೀಸ್ ಠಾಣೆ ಮೆಟ್ಟಿಲೇರಿ ಮಾತಿನ ಚಕಮಕಿಯಾಗಿ ಅಂಬಿ ಮನೆ ಬಿಟ್ಟು ಹೋಗುತ್ತಾರೆ .ಮುಂದೇನಾಗುವುದು ಎಂದು ಚಿತ್ರಮಂದಿರದಲ್ಲೇ ನೋಡಬೇಕು.
ಸಾಮಾನ್ಯವಾಗಿ ಇಳಿವಯಸ್ಸಿನಲ್ಲಿ ಮನೆಯವರ ಅನಾದರ ,ಅಲಕ್ಷ್ಯ,ಮುಂತಾದವುಗಳನ್ನು ಕಂಡು ಕುಗ್ಗಿ ಹೋಗುವ ಹಿರಿಯರ ಮದ್ಯ ಅಂಬಿ ನಮಗರ ವಿಶಿಷ್ಠವಾಗಿ ಕಾಣುತ್ತಾರೆ, ಆ ವಯಸ್ಸಿನಲ್ಲಿ ನಮ್ಮ ಹವ್ಯಾಸ ಕಳೆದುಕೊಂಡ ದನ್ನು ಹುಡುಕುವ ಇರದುದರ ಬಗ್ಗೆ ಚಿಂತಿಸದೇ ಬದುಕುವ ಪರಿಯನ್ನು ನಮ್ಮೆಲ್ಲ ಹಿರಿ ಜೀವಗಳು ಮೈಗೂಡಿಸಿಕೊಳ್ಳಬೇಕಿದೆ .ಜೊತೆಗೆ ತಮ್ಮ ವಯಸ್ಸಾದ ತಂದೆ ತಾಯಿ ಗಳನ್ನು ಕಳೆದುಕೊಂಡ ನಂತರ ಪರಿತಪಿಸುವ ಗುಣಗಳನ್ನು ಎಲ್ಲರೂ ಪಾಲಿಸಿದರೆ ಜಗತ್ತು ಸುಂದರವಾಗುವುದು
ರಾಕ್ ಲೈನ್ ವೆಂಕಟೇಶ್ ಪೋಲಿಸ್ ಅಧಿಕಾರಿಯಾಗಿ ,ದಿಲೀಪ್ ಮಗನಾಗಿ, ನಿಹಾಲ್ ಮೊಮ್ಮಗನಾಗಿ ಸುದೀಪ್ ಜ್ಯೂನಿಯರ್ ಅಂಬಿಯಾಗಿ,ಶೃತಿ ಹರಿಹರನ್ ಜ್ಯೂನಿಯರ್ ಅಂಬಿ ಜೋಡಿಯಾಗಿ ಸುಹಾಸಿನಿ ಸೀನಿಯರ್ ಅಂಬಿ ಜೋಡಿಯಾಗಿ ಎಲ್ಲರೂ ಪೈಪೋಟಿ ಗೆ ಬಿದ್ದವರಂತೆ ನಟಿಸಿದ್ದಾರೆ.
ಅರ್ಜನ್ ಜನ್ಯ ಸಂಗೀತ ಸೂಪರ್
ಡಾ.ನಾಗೇಂದ್ರ ಪ್ರಸಾದ್ ರವರ ರಚನೆ ಯ "ಮಾತಾಡೋ ತಾರೆಯ ಕಂಡ ಹಾಗೆ ಬೆಳದಿಂಗಳು ಕೈಗೆ ಸಿಕ್ಕ ಹಾಗೆ" ಸುಮದುರ ಹಾಡು ಜಸ್ಟಿನ್ ರೂಬೆನ್
ಕ್ಯಾಮರಾ ಕೈಚಳಕ ನೋಡಿಯೇ ಸವಿಯಬೇಕು .
ದೀಪು ಎಸ್ ಕುಮಾರ್ ಸಂಕಲನ ಸೂಪರ್‌ ರವಿವರ್ಮ ಮತ್ತು ಥ್ರಿಲ್ಲರ್ ಮಂಜು ಸಾಹಸ ರೆಬಲ್ ಸ್ಟಾರ್ ಗೆ ಹೇಳಿಮಾಡಿಸಿದಂತಿದೆ 
ತಮಿಳಿನ ಪವರ್ ಪಾಂಡಿ ರೀಮೇಕ್ ಆದರೂ ಕನ್ನಡದ ಚಿತ್ರದಂತೆ ಕಟ್ಟಿಕೊಟ್ಟ ನಿರ್ದೇಶಕರಿಗೊಂದು ನಮನ .
ಈ ಚಿತ್ರ ನೀವು ನೀಡದಿದ್ದರೆ ಖಂಡಿತ ನಿಮಗೆ ಲಾಸ್
ನಮಸ್ಕಾರ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಅಕ್ಟೋಬರ್ 2018

ಗಜ಼ಲ್48(ಯೌವನ)

                      *ಗಜ಼ಲ್48*

ಕೆಲವರಿಗೆ  ದೇಶವೇ ಕಾಣದು ಬರಲು  ಈ ಯೌವನ
ಹಲವರಿಗೆ ನೆಲವೇ ಕಾಣದು ಬಲಿಯಲು ಈ ಯೌವನ

ಮೈಯೆಲ್ಲಾ ಕಣ್ಣಾಗಿ ತನ್ಮಯವಾಗಿರಬೇಕು  ಕಾರ್ಯದಿ
ಅಡ್ಡದಾರಿ ಹಿಡಿಸುವುದು ಮೈಮರೆಯಲು  ಈ ಯೌವನ

ಚಿತ್ತ ಚಾಂಚಲ್ಯ ಮೊಂಡು ಭಂಡ ವಿತಂಡವಾದ
ಬಾಳೆಲ್ಲ ಗೋಳು ಅಮಲೇರಿರಲು   ಈ ಯೌವನ

ಸುಕರ್ಮ ಸುವಾರ್ತೆಗಳೆಡೆಗೆ ಸಾಗದು ಮನ
ಮೂಗಿನ ನೇರಕ್ಕಿರುವುದು ಚಿಂತನೆ ಜೊತೆಗಿರಲು ಈ ಯೌವನ

ನೆನೆದುದ ಸಾಧಿಸುವ ಅಗಣಿತ ಶಕ್ತಿಯ ಆಗರ
ಭುವಿಯೇ ಸ್ವರ್ಗ ಸದುಪಯೋಗವಾಗಲು   ಈ ಯೌವನ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಕೇಳಿಲ್ಲ (ಹನಿಗವನ)

          *ಕೇಳಿಲ್ಲ*

ನನಗೆ ಬುದ್ದಿ ಬಂದಾಗಿನಿಂದ
ಗಮನಿಸುತ್ತಲೇ ಇರುವೆ
ಮಾಮ ಪ್ರತಿದಿನ ಅಮ್ಮನ
ನೋಡಲು ರಾತ್ರಿಯೇ ಬರುವನು
ಅದು ಅಪ್ಪನಿಲ್ಲದಾಗ ಬರುವನು
ಯಾಕೆ ಹೀಗೆಂದು ಮೂವರನು
ಕೇಳಬೇಕಿನಿಸಿದರೂ ಕೇಳಿಲ್ಲ
ಏಕೆಂದರೆ ಚಂದಮಾಮನೆಂದರೆ
ನನಗೆ ಅಚ್ಚು ಮೆಚ್ಚು
ಸೂರ್ಯಪ್ಪ ಎಂದರೆ ಎಲ್ಲಿಲ್ಲದ ಗೌರವ
ಭೂತಾಯಿಯೆಂದರೆ ನನ್ನ ಜೀವ

 *ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*