06 ಸೆಪ್ಟೆಂಬರ್ 2018

ನಾವು ಮಂಗಗಳು (ಕವನ)



            *ನಾವು ಮಂಗಗಳು*

ಮಹಿಳೆಯರ  ಗೌರವಿಸಬೇಕು
ಇಳೆಯ ಜೀವಿಗಳ ಕಾಪಾಡಬೇಕು
ಮಂಗನಂತೆ ಆಡಬಾರದು ಎಂದು
ಗೊತ್ತಿದ್ದರೂ ರಾಕ್ಷಸರಂತೆ ಅಡುವ ನಾವು
ಮಂಗಗಳು ಸಾರ್ ನಾವು ಮಂಗಗಳು

ಸನ್ಮಾರ್ಗದಿ ನಡೆಯಬೇಕು
ಅಡ್ಡದಾರಿ ಹಿಡಿಯಬಾರದು
ಎಂದು ತಿಳಿದಿದ್ದರೂ ವಾಮ ಮಾರ್ಗದಿ
ಅನ್ಯಾಯ ಅಕ್ರಮದಿ ನಿರತರಾಗಿರುವೆವು
ಮಂಗಗಳು ಸಾರ್ ನಾವು ಮಂಗಗಳು

ಪರಿಸರವಿರುವುದು ನಮಗಾಗಿ
ಸಂಪನ್ಮೂಲಗಳನ್ನು ಮಿತವಾಗಿ
ಬಳಸಬೇಕೆಂದು ತಿಳಿದಿದ್ದರೂ
ಪರಿಸರ ಮಾಲಿನ್ಯ ಮಾಡಿ
ಕುಣಿದಾಡುತಿರುವ ನಾವು
ಮಂಗಗಳು ಸಾರ್ ನಾವು ಮಂಗಗಳು

ನಾನು ನನ್ನಿಂದ ಎಂದವರು
ನಾಮಾವಶೇಷವಾದರೂ
ನಾನೆಂಬ ಅಹಂ ಅಳಿಯಲಿಲ್ಲ
ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ
ಎಂಬುದು ಅರ್ಥವಾಗಲಿಲ್ಲ
ಮಂಗಗಳು ಸಾರ್ ನಾವು ಮಂಗಗಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಸೆಪ್ಟೆಂಬರ್ 2018

ಅಂದು‌..ಇಂದು..ಮುಂದೆ (ಕವನ ಶಿಕ್ಷಕರ ದಿನಾಚರಣೆಯ ಶುಭಾಶಯಗಳು)



             *ಅಂದು‌ ಇಂದು‌ ಮುಂದೆ*

*ಅಂದು*

ಗುರು ಬ್ರಹ್ಹ ವಿಷ್ಣು ಮಹೇಶ್ವರ
ಗುರುಕುಲದಿ ಕಲಿಸುವ ದೈವಾಂಶ ಸಂಭೂತ
ಬರೀ ಕಲಿಕೆಯೊಂದನ್ನು ಮಾಡಲು
ಪಣತೊಟ್ಟ ಗುರುವರ್ಯ
ನೈತಿಕ, ಮೌಲಿಕ ಜೀವನ ಮಾನವೀಯತೆಯ ವಿಕಸನಕ್ಕೆ ಶಿಕ್ಷಣ
ಗುರು ಕೇಂದ್ರಿತ ಗುರಿಇದ್ದ ಶಿಕ್ಷಣ
ಮೌಲ್ಯ ಯುತ ಗುರು, ಕಲಿಕಾರ್ಥಿಗಳು
ಸಮಾಜ ಸದೃಢ


*ಇಂದು*

ಗುರುವೇನ್ ಮಹಾ ಎಂಬ
ಕಲಿಕಾರ್ಥಿಗಳು
ಊಟಬಡಿಸುವ ಕಾಯಕದಿಂದಿಡಿದು
ಜನ ದನ ಎಣಿಸುವ ಸಕಲ ಕಾರ್ಯ
ಮಾಡಿ ಸಮಯವಿದ್ದರೆ ಕಲಿಸಿ
ನಲಿಸುವ ಟೀಚರ್
ಅಂಕಗಳ ಹಿಂದೆ ಬಿದ್ದು‌ ಅಂಕೆ
ತಪ್ಪಿದ ಮೌಲ್ಯಗಳು
ತಪ್ಪಿದರೆ ತಿದ್ದಲು ಶಿಕ್ಷೆ ಕೊಡಲು
ಕಾನೂನು ಹೇಳುತಿದೆ ಶಿಕ್ಷಕರು ದುರುಗುಟ್ಡಿ‌
ನೋಡಿದರೂ ತಪ್ಪು
ತಿದ್ದುವರಾರು ದಾರಿ ತಪ್ಪಿದ
ಭಾವಿ ಭಾರತದ ಪ್ರಜೆಗಳ


*ಮುಂದೆ*

ಗುರುವೇನ್ ಬ್ರಹ್ಮ ಅಲ್ಲ
ನೆಟ್ ಗೂಗಲ್, ಯೂಟ್ಯೂಬ್
ಆರ್ಟಿಪಿಷಿಯಲ್  ಇಂಟಲಿಜೆನ್ಸ್ ಇದೆಯಲ್ಲ
ಯಂತ್ರಗಳಿಂದ ಕಲಿತು
ಯಾಂತ್ರಿಕ ಜೀವನ ನಡೆಸಿ
ಯಂತ್ರಗಳ ಗುಲಾಮರಾಗಿ
ನಾವು ಸುಸಂಸ್ಕೃತ, ಆಧುನಿಕ ಅಭಿವೃದ್ಧಿ ಹೊಂದಿದ ದೇಶದ ಸತ್ ಪ್ರಜೆಗಳೆಂದು
ಕೊಚ್ಚಿಕೊಳ್ಳುವೆವು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

04 ಸೆಪ್ಟೆಂಬರ್ 2018

ಗಜ಼ಲ್44(ಮರೆಯಲಿ ಹೇಗೆ)


              *ಗಜ಼ಲ್*

ದಿಕ್ಕುಗಳನ್ನೇ ಅಂಬರ ಮಾಡಿಕೊಂಡ ದಿಟ್ಟ ಮುನಿಯ  ಹೇಗೆ ಮರೆಯಲಿ
ಮುನಿಯದೇ ಮಾದರಿಯಾದ ಯತಿವರ್ಯರ ವಾಗ್ಜರಿಯ  ಹೇಗೆ ಮರೆಯಲಿ

ಕಹಿ ಗುಳಿಗೆಯಲಿ ಸಿಹಿಯಾದ ಲೋಕ ಜ್ಞಾನ ಬೋಧನೆ
ಸಾವಿಗಂಜುವ ಜನರ ನಡುವೆ ಸಾವ ಸ್ವೀಕರಿಸಿದ ಸಲ್ಲೇಖನ ವ್ರತಧಾರಿಯ ಹೇಗೆ ಮರೆಯಲಿ

ಬಟ್ಟೆಗಳನ್ನು ಹಾಕಿಕೊಂಡು ಬೆತ್ತಲಾದವರು ನಾವುಗಳು
ಬಟ್ಟೆಯ ಧರಿಸದೇ ನಮಗೆಲ್ಲ ಬಟ್ಟೆಯ ತೋರಿದ ಬೆಳಕ ಕಿಡಿಯ  ಹೇಗೆ ಮರೆಯಲಿ

ದೇಹಕ್ಕೆ ವಯಸ್ಸುಗುವುದು ಸಹಜ‌ ಮನಸ್ಸು ಆತ್ಮಕ್ಕಲ್ಲ
ತರುಣರಾಗೇ ಮರಣವನು‌ ಮೆಟ್ಟಿದ  ಮುನಿಯ  ಹೇಗೆ ಮರೆಯಲಿ

ಸಾಗರದಷ್ಟು ಆಸೆ ಆಕಾಂಕ್ಷೆಗಳ ಭಾರಕೆ ಹಗುರಾಗುತ್ತಿಲ್ಲ ಮನ
ಸೀಜೀವಿಯಂತವರ ಮೇಲೆ ಪ್ರಭಾವ ಬೀರಿದ ಯತಿಯ  ಹೇಗೆ ಮರೆಯಲಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

31 ಆಗಸ್ಟ್ 2018

ಗಣಪತಿಗೆ ತುಳಸಿ ಅರ್ಪಣೆ ನಿಷಿದ್ಧ ಏಕೆ?*(ಸಂಗ್ರಹ ಲೇಖನ)



          *ಗಣಪತಿಗೆ ತುಳಸಿ ಅರ್ಪಣೆ ನಿಷಿದ್ಧ ಏಕೆ?*

ಬ್ರಹ್ಮ ವೈವರ್ತ ಪುರಾಣದಲ್ಲಿ ಹೀಗೊಂದು ಕಥೆಯಿದೆ. ತುಳಸಿಯು ಗಣಪತಿಯನ್ನು ನೋಡಿ ಬಹಳ ಮೋಹಿತಳಾಗುತ್ತಾಳೆ. ಆದರೆ ಗಣಪತಿಯು ಪರಮ ವೈರಾಗ್ಯ ಮೂರ್ತಿಯಾಗಿ ತಪಸ್ಸನ್ನು ಆಚರಿಸುತ್ತಿರುತ್ತಾನೆ. ಆಗ ತುಳಸಿಯು ಅವನನ್ನು ಒಲಿಸಿಕೊಳ್ಳಲು ಬಹಳ ಪ್ರಯತ್ನವನ್ನು ಪಡುತ್ತಾಳೆ. ಆದರೆ ಗಣಪತಿಯು ಇವಳ ಯಾವ ಚೇಷ್ಟೆಗೂ ಬಗ್ಗದೆ ಇದ್ದಾಗ ತುಳಸಿಯು ಕಾಮನ ಸಹಾಯವನ್ನು ಕೇಳುತ್ತಾಳೆ. ಆಗ ಕಾಮನೂ ಗಣಪತಿಯ ವೈರಾಗ್ಯವನ್ನು ಹಾಳು ಮಾಡಲು ಪರಿಪರಿಯಾಗಿ ಪ್ರಯತ್ನಿಸುತ್ತಾನೆ. ಆದರೆ ಗಣಪತಿಯು ಕಾಮನ ಯಾವುದೇ ಬಾಣಗಳಿಗೆ ಸೋಲುವುದಿಲ್ಲ. ಆಗ ಸೋತ ಕಾಮನು ತುಳಸಿಯಲ್ಲಿ ತನ್ನಿಂದ ಇನ್ನು ಸಾಧ್ಯವಿಲ್ಲ ಎಂದು ಹೇಳಿ ಹೋಗುತ್ತಾನೆ. ಹೀಗೆ ಗಣಪತಿಯು ಇಕ್ಷುಚಾಪನಾದ ಕಾಮನನ್ನು ಗೆಲಿದವನು. ಮುಂದೆ ಸಿಟ್ಟಾದ ತುಳಸಿ ಗಣಪತಿಗೆ ನೀನು ನಿನ್ನ ಸುಂದರ ರೂಪದಿಂದ ಅಹಂಕಾರ ಪಡುತ್ತಿದ್ದೀ. ಆದ್ದರಿಂದ ನಿನ್ನ ಸೌಂದರ್ಯಕ್ಕೆ ಕಾರಣವಾದ ಈ ದಂತಗಳಲ್ಲಿ ಒಂದು ದಂತವು ಮುಂದೆ ನಡೆಯುವ ಯುದ್ಧದಲ್ಲಿ ನಾಶವಾಗಲಿ ಎಂದು ಶಾಪವನ್ನು ಕೊಡುತ್ತಾಳೆ. ಆಗ ಸಿಟ್ಟಾದ ಗಣಪತಿಯು ನೀನು ವೃಕ್ಷವಾಗಿ ಹುಟ್ಟು ಎಂದು ಪ್ರತಿ ಶಾಪವನ್ನು ಕೊಡುತ್ತಾನೆ. ಆಗ ತುಳಸಿಯು ದುಃಖದಿಂದ ಗಣಪತಿಯನ್ನು ಕ್ಷಮೆ ಕೇಳಿ ನನಗೆ ಅನುಗ್ರಹ ಮಾಡಬೇಕು ಎಂದು ಪ್ರಾರ್ಥಿಸುತ್ತಾಳೆ. ಆಗ ಗಣಪತಿಯು ನೀನು ವೃಕ್ಷವಾಗಿ ಹುಟ್ಟಿದರೂ ವಿಷ್ಣುವಿಗೆ ಅತ್ಯಂತ ಪ್ರಿಯಳಾಗುತ್ತೀ. ಆದರೆ ನಾನು ಮಾತ್ರ ಎಂದೆಂದಿಗೂ ನಿನ್ನನ್ನು ಸ್ವೀಕರಿಸುವುದಿಲ್ಲ ಎಂದು ಹೇಳುತ್ತಾನೆ. ಆದ್ದರಿಂದ ಗಣಪತಿಗೆ ತುಳಸಿ ಹಾಕಬಾರದು ಎಂದು ಸಂಪ್ರದಾಯ ಬಂದಿದೆ. ವಾದಿರಾಜರೂ ತಮ್ಮ ಲಕ್ಷ್ಮೀಶೋಭಾನೆಯಲ್ಲಿ ಲಕ್ಷ್ಮಿಯು ಹಿಡಿದ ಹಾರದಲ್ಲಿ ತುಳಸಿಯು ಇರುವುದರಿಂದ ಇದು ಗಣಪತಿಗೆ ಯೋಗ್ಯವಲ್ಲ ಎಂದು ಯೋಚಿಸುತ್ತಾಳೆ ಎಂದು ಹೇಳಿದ್ದಾರೆ. (ಬಹಳ ಹಿಂದೆ ಇಲ್ಲಿ ಗಣಪತಿಗೆ ತುಳಸಿ ಯಾಕೆ ಹಾಕಬಾರದು ಎಂದು ಯಾರೋ ಒಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ಸೇರಿ ಈ ಲೇಖನ) ಅನೇಕ ಹಿರಿಯ ವಿದ್ವಾಂಸರ ಪ್ರಕಾರ ವಿಷ್ಣುವಿಗೆ ಅರ್ಪಿತವಾದ ಹರಿನಿರ್ಮಾಲ್ಯ ರೂಪವಾದ ತುಳಸಿಯನ್ನು ಗಣಪತಿಗೆ ಅರ್ಪಿಸಬಹುದು. ಆದರೆ ನೇರವಾಗಿ ಅರ್ಪಿಸಬಾರದು.

ಸಂಗ್ರಹ ಲೇಖನ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 ಆಗಸ್ಟ್ 2018

ಕರುಣಾಮೂರ್ತಿ (ಸುಧಾ ಮೂರ್ತಿ ರವರು ದಸರಾ ಉದ್ಘಾಟನೆ ಆಹ್ವಾನ ನೀಡಿದಾಗ ಬರೆದ ಕವನ)

           *ಕರುಣಾಮೂರ್ತಿ*

ಸರಳತೆಯ ವಿಳಾಸವೇ ಇವರು
ವಿರಳಾತಿವಿರಳ ಇಂತಹವರು
ಸದಾ ಹಸನ್ಮುಖಿ ತಾಯಿ
ಹೊಗಳೋಣ ಇವರ ಬಾಯಿತುಂಬ‌

ಕೋಟ್ಯಾಧಿಪ ನಾರಾಯಣ ಸ್ಬಾಮಿಯ ಮಡದಿ
ಧನಮದದಿಂದ ದೂರವುಳಿದ ನಾರಿ
ಬಾಹ್ಯ ಶ್ರೀಮಂತಿಕೆಗಿಂತ  ಆಂತರಿಕ ಶ್ರೀಮಂತ ಮಾತೆ
ಸಾಲದು ಕೊಂಡಾಡಿದರೆ ಎಷ್ಟು ಸಾರಿ

ದಾನ ಧರ್ಮದಲಿ ಎತ್ತಿದ ಕೈ
ಕಷ್ಟದಲಿರುವರ ಕಂಡರೆ
ಸಂಕಟ ಪಡುವರು ಸಂಗಡ ಇರುವರು
ಸಾಹಿತ್ಯ ಸೇವೆ ಮಾಡುತಿಹರು

ಕಷ್ಟದಲ್ಲಿರುವವರ ಕಂಡು ಮರುಗಿ
ಪ್ರೀತಿಯ ಸುಧೆ ಸುರಿಸುವವರು
ನೊಂದವರ ಪಾಲಿನ ಕರುಣಾಮೂರ್ತಿ
ಸರಳ ದಸರೆ ಉದ್ಘಾಟಿಸುವರು
ಇವರೇ ನಮ್ಮ ಸುಧಾ ಮೂರ್ತಿರವರು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*