06 ಮಾರ್ಚ್ 2018

ಕನಸು (ಹನಿಗವನ) ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಹನಿ


ಹನಿಗವನ
*ಕನಸು*
ಕಂಡೆನು ಕನಸೊಂದನು
ಪಡೆಯಲು ಬೆಳಕನು
ಈಗ ಎಲ್ಲಡೆ  ಬೆಳಕಿಲ್ಲ
ಕತ್ತಲೆಯು ಎಲ್ಲೆಲ್ಲೂ
ಪಾಲಿಸಿದೆ ಅಹಿಂಸೆ ಸತ್ಯ
ಇಂದು ಹಿಂಸೆ,ಸುಳ್ಳು ನಿತ್ಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಮಾರ್ಚ್ 2018

ಗಜ಼ಲ್ ೨೮(ಬಂದೆಯಾ ) ಕನ್ನಡ ಕಾವ್ಯಲೋಕ ವಾಟ್ಸಪ್ ತಂಡದ ಸ್ಪರ್ಧೆ ಯಲ್ಲಿ ಉತ್ತಮ ಎಂದು ಪುರಸ್ಕಾರ ಪಡೆದ ಗಜ಼ಲ್

ಗಜ಼ಲ್ ೨೮

ಎಲ್ಲಾ ಮುಗಿದು ಹೋದ ಮೇಲೆ ನೆನಪು ಮಾಡಲು ಬಂದೆಯಾ
ಸೊಲ್ಲಡಗಿದ ನನ್ನ ಹೃದಯವ ಮಾತನಾಡಿಸಲು ಬಂದೆಯಾ

ನಿನ್ನ ಸಂಗದ  ನೆನಪುಗಳ ಪ್ರವಾಹಕ್ಕೆ ಕಟ್ಟೆ ಕಟ್ಟಿ ನಿಲ್ಲಿಸಿದ್ದೇನೆ
ನೀನಿಲ್ಲದೇ ನನಗೆ  ಬಾಳು ಸಾದ್ಯವೇ ಎಂದು ಪ್ರಶ್ನಿಸಲು ಬಂದೆಯಾ

ಒಂದೊಮ್ಮೆ ನೀನಿಲ್ಲದ ನನ್ನ ಬಾಳು ನಶ್ವರ ಈ ಜಗ ಶೂನ್ಯ
ಈಶ್ವರನ ದಯೆಯಿಂದ ನೆಮ್ಮದಿ ಪಡೆದ ಆತ್ಮ ನೋಡಲು ಬಂದೆಯಾ

ನನ್ನ ಛಲ ಉತ್ತಮ ಸಂಸ್ಕಾರವುಳ್ಳ  ಮಾನವನಾಗುವದು
ನಿನ್ನ ಮರೆತು ನಾನೇಗೆ ಬದುಕಿರುವೆನೆಂದು ಪರೀಕ್ಷಿಸಲು‌ ಬಂದೆಯಾ

ಇಂದ್ರಿಯಾಸಕ್ತಿಗಳ ದಾಸನಾಗಿ ನಿನ್ನ ನೆನಪಲಿ ಹುಚ್ಚನಾಗಿದ್ದೆ
ಇಂದ್ರನಿಗಿಂತ ಆತ್ಮಾನಂದ ಸುಖ ಪಡೆವ ಸೀಜೀವಿಯ ವೀಕ್ಷಿಸಲು ಬಂದೆಯಾ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*





04 ಮಾರ್ಚ್ 2018

ಹರಿ ಓಂ ಸ್ವಸ್ತಿ (ಹನಿಗವನ)



*ಹರಿ ಓಂ ಸ್ವಸ್ತಿ*

ಶುಭ ಕಾರ್ಯದ ರಂಗೋಲಿ
ಆಗಿದೆ ಬಣ್ಣಗಳ ಹೋಲಿ
ಜೋಡಿಸಿದೆ ಫಲ ತಾಂಬೂಲ
ನೀಡಲಿದೆಮಗೆ   ಶುಭ ಫಲ
ಅಲಂಕಾರ ಆಗಿಲ್ಲ ಜಾಸ್ತಿ
ಹೇಳೋಣ ಹರಿ ಓಂ  ಸ್ವಸ್ತಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಮೂತಿ (ಹನಿಗವನ)


ಹನಿಗವನ

*ಮೂತಿ*

ವರ್ಷಗಳಿಂದ ಅವಳ ಹಿಂದೆ
ಅಲೆದಾಡಿ ಪ್ರೀತಿಯ ನಾಟಕವಾಡಿ
ಮದುವೆಯಾಗು ಎಂದು ಅವಳೆಂದಾಗ
ಅವನು ಉತ್ತರಿಸಿದ ನಮ್ಮದು
ಬೇರೆ ಜಾತಿ
ಸಿಟ್ಟಿಗೆದ್ದ ಅವಳು ಜಾಡಿಸಿದಳು
ಊದಿಕೊಂಡಿದೆ
ಈಗ ಮೂತಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೨೭ (ತೆರೆದಿರಲಿ ಬಾಗಿಲು) ಕನ್ನಡ ಕಾವ್ಯ ಲೋಕ ವಾಟ್ಸಪ್ ಗುಂಪಿನ ಸ್ಪರ್ಧೆ ಯಲ್ಲಿ ಉತ್ತಮ ಗಜ಼ಲ್ ಎಂದು ‌ಪುರಸ್ಕೃತ ಗಜ಼ಲ್



*ಗಜ಼ಲ್ ೨೭*
ಅಜ್ಞಾನದಿಂದ ಸುಜ್ಞಾನ ಪಡೆಯಲು ತೆರೆದಿರಲಿ ಬಾಗಿಲು
ಅಂಧಕಾರವನಳಿಸಿ ಬೆಳಕು ಪಸರಿಸಲು ತೆರೆದಿರಲಿ ಬಾಗಿಲು 

ಅಸೂಯೆ ದ್ವೇಷ ಸ್ವಜನ ಪಕ್ಷಪಾತ ಕಲುಷಿತ ಮನಗಳು
ಸರ್ವರ ಬೆಳೆಸಲು  ಪ್ರೀತಿಸಲು ತೆರೆದಿರಲಿ ಬಾಗಿಲು

ಕರಕಲು ಕೊಳೆತ ಕಲುಷಿತ ಕರ್ಮಟ ವಾಸನೆ ಎಲ್ಲೆಡೆ
ಸುಗಂಧ ಹೃದಯವ ಹೊಂದಲು ತೆರೆದಿರಲಿ ಬಾಗಿಲು

ದೇಶ ಭಾಷೆ ಬಣ್ಣ  ಜಾತಿ ಮತಗಳ ಹೆಸರಲಿ ಕಿತ್ತಾಟ
ಸಹಮತ ಸಮನ್ವಯ ಸಹಬಾಳ್ವೆ ನಡೆಸಲು ತೆರೆದಿರಲಿ ಬಾಗಿಲು

ನಾನು ನನ್ನದೆಂಬ ಸ್ವಾರ್ಥತೆ ತೊರೆಯಲು ಸೀಜೀವಿಯ ಆಶಯ
ಸಂಕುಚಿತತೆ ತೊರೆದು ವೈಶಾಲ್ಯತೆ  ಬೆಳೆಸಲು ತೆರೆದಿರಲಿ ಬಾಗಿಲು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*