15 ನವೆಂಬರ್ 2017

ಗಜ಼ಲ್ ೮(ಅರಿಯದಾದೆ)

*ಗಜಲ್೮*

ಒಲವ ಗೆಳತಿಯ ನಿಜ ಒಲವನು ಅರಿಯದಾದೆ |
ಚೆಲುವ ಪ್ರೇಯಸಿಯ ಮನವನು ಅರಿಯದಾದೆ |

ಸಹಾಯ ಬೇಡುವ ನೆಪದಿ ಬಂದು ಸಹವಾಸ ಬಯಸಿ|
ಸಹಚರ್ಯ ಬೇಡಿದ ನಿನ್ನ ಒಲುಮೆಯನು  ಅರಿಯದಾದೆ |


ನನ್ನ ಬಾಳ ಹಸನಾಗಿಸಲು ಬರುವನೆಂದು ಹೇಳಿದ|
ನಿನ್ನ ಕಣ್ಣುಗಳ ಪ್ರೀತಿಯ ಭಾಷೆಯನು ಅರಿಯದಾದೆ |

ಹಸನ್ಮುಖ ತೋರಿ ಆಂತರ್ಯ ತೋರ್ಪಡಿಸುವ|
ಮುಖಾರವಿಂದದ ಉತ್ಕಟ ಬಯಕೆಯನು ಅರಿಯದಾದೆ|

ಆಂಗಿಕ ಭಾಷೆಯ ಮೂಲಕ ಸೀಜೀವಿಯೊಂದಿಗೆ ಸಂಗಮವಾಗಲು|
ಬಯಸಿದ ನಿನ್ನ ಅಂತರಾತ್ಮವನು ಅರಿಯದಾದೆ |

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ಅಲೆಮಾರಿ) ಬಹುಮಾನ ಪಡೆದ ಹನಿಗವನಗಳು

*೧*

*ಚಿನ್ನ*

ನನ್ನ" ಚಿನ್ನ' ಸಿಗುವ ಮುನ್ನ ನಾನು
ಅಲೆಮಾರಿ
ಅವಳು ಸಿಕ್ಕ ಮೇಲೆ ಕೊಡಿಸಲೇಬೇಕು
ಚಿನ್ನ ಮನೆ ಮಠ ಮಾರಿ

*೨*
*ನಿರಂತರ*

ಉದರ ನಿಮಿತ್ತ ಬಹುಕೃತ ವೇಷ 
ಎದುರಿಸಬೇಕು ಹಲ ಸನ್ನಿವೇಶ
ಮುಖದ ಮೇಲೆ ಬಣ್ಣಗಳ ಚಿತ್ತಾರ
ಪ್ರತಿದಿನ ಈ ಬದುಕು ನಿರಂತರ
ಚಾಚಿಹೆನು ನಾಲಿಗೆಯ ಉದ್ದ
ನಾಳೆ ಮತ್ತೊಂದು ವೇಷಕೆ ಸಿದ್ದ



*೩*

*ಮುತ್ತು*

ಅಲೆಮಾರಿಗಳ ಜೀವನವೇ ಉತ್ತಮ
ಇಂದು ಈ ಊರು ನಾಳೆ ಮತ್ತೊಂದು
ನನ್ನದು ಅದೇ ಮನೆ ಅದೇ ಮುತ್ತು
ನನ್ನವಳು ಒಪ್ಪುವುದಿಲ್ಲ ಬೇರೆ
ಊರಗೆಳತಿಯ  ಮುತ್ತೊಂದು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

14 ನವೆಂಬರ್ 2017

ಪ್ರೇಮ ತೋರಣ (ಚಿತ್ರ ಕವನ)



*ಪ್ರೇಮ ತೋರಣ*

ಕುಣಿಯುತ  ನಲಿಯುವ ಬಾರೆ
 ನನ್ನೊಲವಿನ  ಸುಂದರ ನೀರೆ
ಜಗದ ಗೊಡವೆ ಮರೆಯೋಣ
ಇಬ್ಬರೂ ಒಂದಾಗಿ ನಲಿಯೋಣ/

ಮುಂದೆ ಬರದೀ ಶುಭ  ಘಳಿಗೆ
ಮಧುವ  ಸವಿಯೋಣ ಮೆಲ್ಲಗೆ
ಕತ್ತಲಾಗಲಿ ಬೇಗ ಎನ್ನೊಣ
ಬೆಳಕಾಗದಿರಲಿ ಕೆಡಿಸಲು ಮಿಲನ/

ರತಿ ಮನ್ಮಥರಾಗಿ ಸುಖಿಸೋಣ
ಸರಸದಿ ಶೃಂಗಾರ ರಸ ಸುರಿಸೋಣ
ಇಂದೇ ಕೊನೆಯಂತೆ ಬಾಳೋಣ
ಮೈಮನದ ಹಬ್ಬ ಮಾಡೋಣ/

ಮನದಣಿಯೆ ಕಣಿದು ನಲಿಯೋಣ
ಅನ್ಯೋನ್ಯತೆ ಪಾಠವ  ಸಾರೋಣ
ಪ್ರೇಮಿಗಳಿಗೆ ಮಾರ್ಗ ತೋರೋಣ
ಕಟ್ಟೋಣ ನಾವು ಪ್ರೇಮತೋರಣ/

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ನವೆಂಬರ್ 2017

ನಾನೇಕೆ ಬರೆಯುತ್ತೇನೆ?(ಲೇಖನ)

ನಾನೇಕೆ ಬರೆಯುತ್ತೇನೆ

ಬರವಣಿಗೆಯು ಮಾನವನ ಅಭಿವ್ಯಕ್ತಿಯ ಮಾಧ್ಯಮ ಆಗಿರುವುದರಿಂದ ಹಲವರು ಈ ಮಾಧ್ಯಮದ ಮೂಲಕ ತಮ್ಮ ಅಭಿಪ್ರಾಯಗಳನ್ನು, ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬರವಣಿಗೆ ಸಹಕಾರಿ
ನಾನು ಬರವಣಿಗೆ ಆರಂಭಿಸಲು ಪರೋಕ್ಷವಾಗಿ ನನ್ನ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀಯುತ ಟಿ.ಎನ್ ತಿಪ್ಪೇಸ್ವಾಮಿ ರವರು ಕಾರಣ ನಾನು ನಾಲ್ಕನೇ ತರಗತಿ ಓದುತ್ತಿದ್ದಾಗಲೇ ನನಗೆ ದಿನಕ್ಕೊಂದು ಒಳ್ಳೆಯ ಕೆಲಸ ಮಾಡಿ ಅದನ್ನು ಪ್ರತ್ಯೇಕವಾದ ಪುಸ್ತಕ ಇಟ್ಟು ಬರೆಯಲು ಹೇಳಿದ್ದರು. ಆರಂಭದಲ್ಲಿ ಅವರನ್ನು ಬೈಯ್ದುಕೊಂಡು ಬರೆಯಲು ಆರಂಭ ಮಾಡಿದ ಆ ಕೆಲಸ ಕ್ರಮೇಣ ಇಚ್ಚೆ ಪಟ್ಟು ಒಳ್ಳೆಯ ಕಾರ್ಯ ಮಾಡುವ ಜೊತೆ ದಿನಚರಿಯ ಬರೆಯುವ ಅಭ್ಯಾಸ ಆಯಿತು.
ಮುಂದೆ ನಮ್ಮ ಗುರುಗಳು ನನಗೆ ಪತ್ರ ಬರೆಯಲು ಅವರ ಹಣದಲ್ಲಿ ಪೋಸ್ಟ್ ಕಾರ್ಡ್ ತಂದು ನಮ್ಮ ಸಂಬಂಧಿಗಳಿಗೆ ವಾರಕ್ಕೋಂದಾದರೂ ಪತ್ರ ಬರೆಸುತ್ತಿದ್ದರು ಈಗೆ ನನ್ನ ಮೊದಲ ಬರಹಗಳು ಆರಂಭವಾದರೆ
ಹೈಸ್ಕೂಲ್ ‌ಮತ್ತು ಪಿ.ಯು.ನಲ್ಲಿ ನನ್ನ ಬರಹ ಕಡಿಮೆಯಾಗಿ ಕೇವಲ ಪರೀಕ್ಷೆಗೆ ಸೀಮಿತವಾಗಿತ್ತು. ಪದವಿಯಲ್ಲಿ ವಿವಿಧ ಸಂಸ್ಥೆಯ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ನಂತರ ನನ್ನ ಬರವಣಿಗೆ ಪಯಣ ಮುಂದುವರೆಯಿತು .ಅಂದಿನ ಪ್ರಧಾನ ಮಂತ್ರಿಯಾದ ಮಾನ್ಯ ವಾಜಪೇಯಿ ಸರ್ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವಾಚಕರ ವಾಣಿಯ ಲ್ಲಿ ಮೊದಲಿಗೆ ನಾನು ಬರೆದ ಬರಹ ಪ್ರಕಟವಾದಾಗ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿ  ಬರೆಯಲು ಮುಂದುವರೆಸಿದೆ ಅದುಇಂದಿಗೂ ನಾಡಿನ ಬಹುತೇಕ ಪತ್ರಿಕೆಯಲ್ಲಿ ಮತ್ತು ನಿಯತಕಾಲಿಕಗಳಲ್ಲಿ  ನನ್ನ ಬರಹಗಳು ಪ್ರಕಟವಾಗುವ ಮೂಲಕ ಮುಂದುವರೆದಿದೆ

*ಅಷ್ಟಕ್ಕೂ ನಾನು ಏಕೆ ಬರೆಯುವೆ*
ನಾನು ಸಮಾಜದಲ್ಲಿ ಕಾಣುವ ಒಳ್ಳೆಯ ಮತ್ತು ಕೆಟ್ಟ ಅಂಶಗಳ ಆಧಾರದ ಮೇಲೆ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಬರವಣಿಗೆಯನ್ನು ಆರಂಬಿಸಿದೆ ಸರ್ಕಾರಿ ನೌಕರಿ ಸಿಗುವ ಮೊದಲು ಸರ್ಕಾರದ ತಪ್ಪು ನಿರ್ಧಾರಗಳನ್ನು ಮತ್ತು ರಾಜಕಾರಣಿಗಳ ಗುಣಾವಗುಣಗಳ ಬಗ್ಗೆ ಬರೆದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾದವು.
ಈಗ ನನ್ನ ಆತ್ಮ ಸಂತೋಷಕ್ಕಾಗಿ ಮತ್ತು ಸಹೃದಯರ ಓದಿಗಾಗಿ ಕವನ,ಹನಿಗವನ,ನ್ಯಾನೋ ಕಥೆ, ಗಜಲ್, ಮುಂತಾದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಬಿಡುವಿದ್ದಾಗ ನನ್ನ ಬರವಣಿಗೆಯನ್ನು ನಿಮ್ಮಂತಹ ಸಹೃದಯರೊಂದಿಗೆ ಹಂಚಿಕೊಂಡು ಸಲಹೆ ವಿಮರ್ಶೆ ಸ್ವೀಕರಿಸಿ ಬರವಣಿಗೆಯನ್ನು ಮುಂದುವರೆಸಿರುವೆನು.
ಒಟ್ಟಿನಲ್ಲಿ ಬರವಣಿಗೆ ನನಗೆ ಒಂದು ಆತ್ಮತೃಪ್ತಿ.ಆನಂದ ನೆಮ್ಮದಿ ನೀಡಿದೆ ಜೊತೆಗೆ ಓದುಗ ಮಿತ್ರರು ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿ ದಾಗ ಆಗುವ ಆನಂದ ವರ್ಣಿಸಲಸದಳ.
ಒಟ್ಟಿನಲ್ಲಿ ಬರವಣಿಗೆ ಈಗ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ ನನ್ನ ನೋಡಿ ನನ್ನ ಮಕ್ಕಳು ಬರೆಯಲು ಆರಂಬಿಸಿರಿವುದು ಮತ್ತೊಂದು ಸಂತೋಷ.
ವಂದನೆಗಳೊಂದಿಗೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 ನವೆಂಬರ್ 2017

ಗಜಲ್ ೭(ಹೇಗೆ ಮರೆಯಲಿ)

*ಗಜ಼ಲ್*

ಬಾಲ್ಯದ  ಲೀಲೆಗಳ ನೆನಪ ಹೇಗೆ ಮರೆಯಲಿ
ಆ ಬಂಗಾರದ ದಿನಗಳ ನೆನಪ  ಹೇಗೆ ಮರೆಯಲಿ

ಲಂಟಾನದ ಗಿಡದ ಅಂಟು ಜೇನ ಕೀಳಲು ಹೋಗಿ
ಎಂಟು ಕಡೆ ಕಚ್ಚಿಸಿಕೊಂಡರೂ ಸವಿಜೇನು ಸವಿದ ನೆನಪ ಹೇಗೆ ಮರೆಯಲಿ

ಸಲಿಲದಲಿ  ಗೆಳಯರೊಡನೆ ಈಜಾಡಿ
ಕದ್ದು  ಮಾವು ತಿಂದಾಗ ಸಿಟ್ಟಾದ  ಗೌಡರ ಪ್ರತಾಪ ಹೇಗೆ ಮರೆಯಲಿ

ಓತಿಕ್ಯಾತ ಹೊಡೆದು ಬಾಯಲಿ ಕಾಸಿಟ್ಟು
ಕಾಸು ಸಿಗುವುದೆಂದು ಹುಡುಕಿಹೊರಟ ಸವಿ ನೆನಪ ಹೇಗ ಮರೆಯಲಿ

ಬಣ್ಣದಲಿ ಕಪ್ಪಿದ್ದರೂ ಕಣ್ಣುಗಳಲೇ ಆಕರ್ಷಿಸಿದ
ಸುಲೋಚನೆಯ ಜೊತೆಯ ಸಲ್ಲಾಪ ಹೇಗೆ ಮರೆಯಲಿ

ಕೆರೆಯಮಣ್ಣಿನಿಂದ ಗಣಪನ ಮಾಡಿ ಪೂಜಿಸಿ
ಸೀಜೀವಿ ಜೊತೆ ಮೆರವಣಿಗೆ ಮಾಡಿದ ಭಕ್ತಿ  ನೆನಪ ಹೇಗೆ ಮರೆಯಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*