11 ನವೆಂಬರ್ 2017

ಮಾದರಿ(ನ್ಯಾನೋ ಕಥೆ) ಕಿರು ಚಿತ್ರ ಆಗಲಿರುವ ಕಥೆ

*ನ್ಯಾನೋ ಕಥೆ*

ಸ್ವಚ್ಚಭಾರತ್ ಪ್ರಶಸ್ತಿ ಪುರಸ್ಕೃತ ಗ್ರಾಮ ಪಂಚಾಯತ್ ಅಧ್ಯಕ್ಷರು ,ಕಾರಿನಿಂದಿಳಿದು ಗುಟ್ಕಾ ಜಗಿದು ಪಂಚಾಯಿತಿ ಕಛೇರಿ ಕಾಂಪೌಂಡ್ ಗೋಡೆಗೆ ಉಗಿದು ಮುಂದೆ ಸಾಗಿ ,ಅಂದು ಸ್ವಚ್ಛತೆ ಬಗ್ಗೆ ವಿಶೇಷ ಉಪನ್ಯಾಸ ನೀಡಲು ಬಂದ ಸಂಪತ್ ಕುಮಾರ್ ಕೈ ಕುಲುಕಿದರು. ಸಂಪತ್ ಕುಮಾರ್ ರವರು ತಮ್ಮ ಬ್ಯಾಗ್ ನಲ್ಲಿನ ನೀರಿನ ಬಾಟಲ್ ತೆಗೆದು ಕುಡಿದು ಖಾಲಿ ಬಾಟಲ್ ನ್ನು ಅಲ್ಲೇ ಎಸೆದು ,ಉಪನ್ಯಾಸ ಮಾಡಲು ಹೊರಟರು. ಇದನ್ನು ಗಮನಿಸಿದ ಸುನೀತಾ ಎಂಬ ಆರನೇ ತರಗತಿ ವಿದ್ಯಾರ್ಥಿನಿ ,ಅಲ್ಲಿ ಬಿಸಾಡಿದ್ದ ಖಾಲಿ ಬಾಟಲ್ ತೆಗೆದುಕೊಂಡು. ಅದರಲ್ಲಿ ನೀರು ತಂದು ಅದ್ಯಕ್ಷರು ಉಗುಳಿದ್ದ ಗುಟ್ಕಾ ಕೊಳೆ ತೊಳೆದು ಖಾಲಿ ಬಾಟಲ್ ನ್ನು ಡಸ್ಟ್ ಬಿನ್ ಗೆ ಎಸೆದು ಶಾಲೆಯ ಕಡೆ ಹೆಜ್ಜೆ ಹಾಕಿದಳು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 ನವೆಂಬರ್ 2017

ಕಿರು ಕಥೆ ಜೀವನ ನಾವಂದುಕೊಂಡಂತಲ್ಲ

*ನ್ಯಾನೋ ಕಥೆ*
*ಜೀವನ ನಾವಂದುಕೊಂಡಂತಲ್ಲ*

ಪಟ್ಟಣದ ಜಂಜಡದ ಜೀವನಕ್ಕೆ ಒಗ್ಗಿ ಹೋಗಿದ್ದ ಸುರೇಶ ಹೊತ್ತು ಹೊತ್ತಿಗೆ ತುತ್ತಿನ ಚೀಲ ತುಂಬಿಸಲು ಆಟೋ ಓಡಿಸಿಕೊಂಡು ತನ್ನ ತಂದೆ ತಾಯಿಗಳ ಜೊತೆಗೆ ಜೀವನ ಸಾಗಿಸುತ್ತಿದ್ದನು.ನೀನು ಒಂದು ಮದುವೆ ಮಾಡಿಕೋ ನಮಗೂ ವಯಸ್ಸಾಯಿತು ಮೊಮ್ಮಕ್ಕಳ ನೋಡುವ ಸಆಸೆ ಎಂದು ಅವನ ಅಮ್ಮನ ಬೇಡಿಕೆಗೆ ನಗುತ್ತಲೇ ಕಾಲ ತಳ್ಳುತ್ತಿದ್ದ ಸುರೇಶನಿಗೆ ಒಳಗೊಳಗೇ ತನ್ನ ಅಕ್ಕನ ಮಗಳಾದ ದೀಪಾಳನ್ನು ಮದುವೆಯಾಗಲು ಆಸೆ ಪಟ್ಟಿದ್ದ ಆದರೆ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.
ತನ್ನ ಅಕ್ಕ ಶಾರದಮ್ಮನನ್ನು ಮೈಸೂರಿನ ಒಂಟಿಕೊಪ್ಪಲ್ ನ  ರವಿಗೆ ಕೊಟ್ಟು ಮದವೆ ಮಾಡಿದ್ದರು ಚೆನ್ನಾಗಿ ದುಡಿಯುತ್ತಿದ್ದ ಭಾವ ದೀಪ ಒಂಬತ್ತನೇ ತರಗತಿಯಲ್ಲಿ ಓದುವಾಗ ಖಾಯಿಲೆಯಿಂದ ಮರಣಹೊಂದಿದರು. ಆ ಸಮಯದಲ್ಲಿ ಗಂಡನಮನೆಯ ಕಿರುಕುಳದಿಂದ ತಾಯಿಯ ಊರಿಗೆ ಬಂದರೂ ಸ್ವಾಭಿಮಾನಿ ಶಾರದಮ್ಮ ಟೈಲರಿಂಗ್ ಮಾಡಿ ಮಗಳನ್ನು ಬೆಂಗಳೂರಿನಲ್ಲಿ ಪದವಿ ಓದಿಸುತ್ತಿದ್ದಾಳೆ.
ಸುರೇಶ್ ನ ಪೋನ್ ರಿಂಗಾದಾಗ ಸುರೇಶ್ ಆಟೋ ರಸ್ತೆ ಬದಿಗೆ ನಿಲ್ಕಿಸಿದ ' ಸುರೇಶ ದೀಪಾ ಬೆಂಗಳೂರಿನಿಂದ ಬರ್ತಾ ಇದಾಳಂತೆ ಬಸ್ಟಾಂಡ್ಗೆ ಹೋಗಿ ಕರ್ಕೊಂಡು ಬಾರೋ' ಎಂದದ್ದೇ ತಡ ಆಯಿತು ಅಕ್ಕ ಎಂದು ಅತಿ ವೇಗವಾಗಿ ಆಟೋ ಬಸ್ಟಾಂಡ್ ಕಡೆಗೆ ಓಡಿಸಿದ .ಇವನಿಗಾಗಿಯೇ ಕಾಯುತ್ತಿದ್ದ ದೀಪಾ ಮುಗುಳ್ನಕ್ಕು ಆಟೋ ಏರಿ ಮನೆ ಸೇರಿದಳು .ಸುರೇಶ ಅಕ್ಕಾ ನಾನು ಬರುತ್ತೇನೆ ಎಂದು ಗೊರಡಲನುವಾದ ಆದರೆ ಶಾರದಮ್ಮ ಅವನನ್ನು ತಡೆದು 'ಟೀ ಕುಡಿದು ಹೋಗು "ಎಂದಳು .ಟೀ ಕುಡಿಯುತ್ತಾ ಮಗಳ ಮದುವೆಯ ಪ್ರಸ್ತಾಪವನ್ನು ಮಾಡಿ ತಮ್ಮನ ಮದುವೆಯಾಗಲು ಹೇಳಿದಾಗ ದೀಪ ಕಡ್ಡಿ ಮುರಿದಂತೆ ನಾನು ಆಟೋ ಒಡಿಸುವವನ ಮದುವೆಯಾಗಲ್ಲ ಎಂದಳು .ಸುರೇಶನ ಆಶಾಸೌಧ ಕುಸಿಯಿತು, ಶಾರದಮ್ಮನ ಕನಸು ಭಗ್ನವಾಯಿತು .
ಎಂಟು ವರ್ಷಗಳ ನಂತರ ಇಬ್ಬರು ದಂಪತಿಗಳು ಇದ್ದ ಕೆಲಸ ಕಳೆದುಕೊಂಡು ಬೆಂಗಳೂರಿನಲ್ಲಿ ಕೆಲಸ ಹುಡುಕಲು ಹೊರಟರೆ ಎಲ್ಲಾ ಕಡೆ ಕೆಲಸ ಖಾಲಿ ಇಲ್ಲ ಎಂಬ ಬೋರ್ಡ್ ನೋಡಿ ಬೇಸತ್ತರು ಕೊನೆಗೆ   ಟ್ರಾನ್ಸ್ ಪೋರ್ಟ್ ಕಂಪನಿಯಲ್ಲಿ ಕೆಲಸ ಕೇಳಿಕೊಂಡು ಬಂದರು ಅವರಿಗೆ ಕೆಲಸ ಖಚಿತವಾದಾಗ ಗೊತ್ತಾಗುತ್ತದೆ ಆ ಕಂಪನಿಯು ಮಾಲಿಕ ಸುರೇಶ ಎಂದು ಕೆಲಸ ಕೇಳಿ ಕೊಂಡು ಬಂದ ದಂಪತಿಗಳು ದೀಪಾ ಮತ್ತು ಅವಳ ಗಂಡ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

09 ನವೆಂಬರ್ 2017

ಹನಿಗವನಗಳು (ನಯನ)

ಹನಿಗವನಗಳು
*೧*
*ಹರೋಹರ*

ನನ್ನವಳು ಖುಷಿಯಾಗಿದ್ದಾಗ ನೋಡಲು
ನಯನಮನೋಹರ
ಸಿಟ್ಟುಬಂದಾಗ ಅವಳ ನೋಡಿದರೆ
ಹರೋಹರ
*೨*
*ಸಾಕ್ಷಿ*

ಅವಳ ಕಣ್ಣು ಮೀನಿನಂತೆ
ಅದಕೆ ಅವಳು
‌ಮೀನಾಕ್ಷಿ
ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದಕ್ಕೆ
ನನಗಿವೆ ಈಗ
ಎರಡು ಮಕ್ಕಳು ಸಾಕ್ಷಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 ನವೆಂಬರ್ 2017

ಕಸಬರಿಕೆ (ಲೇಖನ)

*ಕಸಬರಿಕೆ*
ಕಸಬರಿಕೆ ,ಪೊರಕೆ, ಪರಕೆ,ಪರಿಕೆ ಈಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಈ ಸಾಧನ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಮನೆಯ ಸ್ವಚ್ಛತೆ ಯನ್ನು ಪೂರಕ ಇಲ್ಲದೆ ವಹಿಸಿಕೊಳ್ಳಲು ಅಸಾಧ್ಯ. ಹಳ್ಳಿಗಳಲ್ಲಿ ವಿವಿಧ ಬಗೆಯ  ವಸ್ತುಗಳಿಂದ ಪೊರಕೆಗಳನ್ನು ಮಾಡಿ ಉಪಯೋಗಿಸುವರು. ಈ ಪೊರೆಕೆಗಳು ನನ್ನನ್ನು ಬಾಲ್ಯದ ನೆನಪುಗಳಿಗೆ ಕೊಂಡೊಯ್ಯುತ್ತವೆ. ನಮ್ಮ ಊರಿನಲ್ಲಿ ವಿವಿಧ ರೀತಿಯ ಪೊರಕೆಯ ಬಳಕೆ ಇತ್ತು .ಮನೆಯ ಒಳಗಡೆ ಕಸ ಗುಡಿಸಲು ಎಳೆಯ ಈಚಲು ಮರದ ಎಲೆಗಳಿಂದ ಮಾಡಿದ ,ಹಾಗೂ ಮೃದುವಾದ ಒಣ  ಹುಲ್ಲಿನಪೊರಕೆ ಬಳಸುತ್ತಿದ್ದೆವು. ಮನೆಯ ಮುಂದಿನ ಅಂಗಳ ಗುಡಿಸಲು ಅಡಿಕೆ ಮರದ ಒಣಗಿದ ಎಲೆಗಳಿಂದ ಮಾಡಿದ ಪೊರಕೆಗಳನ್ನು ಉಪಯೋಗಿಸುತ್ತಿದ್ದೆವು.ಇನ್ನು ಕುರಿ ಹಟ್ಟಿ, ದನದ ಹಕ್ಕೆಗಳನ್ನು ಗುಡಿಸಲು "ಬಂದ್ರೆ"ಎಂಬ ಗಿಡದಿಂದ ತಯಾರಿಸಿದ ,ಹಾಗೂ ತೆಂಗಿನ ಗರಿಗಳಿಂದ ಮಾಡಿದ ಪೊರಕೆಗಳನ್ನು ಬಳಸುತ್ತಿದ್ದೆವು ಈ ಪೊರಕೆ ಗಳನ್ನು ಸ್ಥಳೀಯ ಸಸ್ಯ ಬಳಸಿ ಪರಿಸರಸ್ನೇಹಿ ಆಗಿ ಬಳಸುತ್ತಿದ್ದೆವು ಈಗ ಬದಲಾದ ಕಾಲದಲ್ಲಿ ಪ್ಲಾಸ್ಟಿಕ್, ಮುಂತಾದ ಪರಿಸರಕ್ಕೆ ಮಾರಕವಾದ ವಸ್ತುಗಳು ಹೆಚ್ಚಾಗಿ ಬಳಸುವದು ಹೆಚ್ಚಾಗಿದೆ. ನಾವೆಲ್ಲರೂ ಜಾಗೃತರಾಗಿ ಇನ್ನೂ ಮುಂದಾದರೂ ಪರಿಸರ ಪೂರಕ ಪೊರಕೆ ಬಳಸೋಣ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನೋಟ್ ಬ್ಯಾನ್ ಗೆ ವರ್ಷ...(ಲೇಖನ)

ನೋಟ್ ಬ್ಯಾನ್ ಒಂದು ಐತಿಹಾಸಿಕ ನಿರ್ಧಾರ ಇಂತಹ ದಿಟ್ಟ ನಿರ್ಧಾರವನ್ನು ಮುಂದಿನ ನೂರು ವರ್ಷಗಳ ಅಂತರದಲ್ಲಿ ಯಾವ ನಾಯಕನು ತೆಗೆದುಕೊಳ್ಳುವುದು ಅನುಮಾನ .
ನೋಟ್ ಬ್ಯಾನ್ ನಿಂದ ದೇಶದ ಅರ್ಥಿಕ ಪರಿಸ್ಥಿತಿ ತೊಂದರೆಗಳನ್ನು ಅನುಭವಿಸಿದೆ ಎಂದು ಬೊಬ್ಬೆ ಹೊಡೆಯುವವರು ಕೇವಲ ರಾಜಕೀಯ ಪ್ರೇರಿತ ಹೇಳಿಕೆ ಎಂಬುವುದು ಎಲ್ಲರಿಗೂ ತಿಳಿದ ವಿಷಯ .
ಈ ದಿಟ್ಟ ನಿರ್ಧಾರವನ್ನು ವಿಶ್ವಬ್ಯಾಂಕ್. ಐ.ಎಮ್ ಎಪ್ ನಂತಹ ಅಂತರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ಮುಕ್ತವಾಗಿ ಹೊಗಳಿದ್ದಾರೆ.
ಮತ್ತು ವಿಶ್ವದ ಹೂಡಿಕೆ ಸ್ನೇಹಿ ದೇಶಗಳ ಸೂಚ್ಯಾಂಕದಲ್ಲಿ ಭಾರತ ಕೇವಲ ಒಂದೇ ವರ್ಷದ ಅಂತರದಲ್ಲಿ 130 ನೇ ಸ್ಥಾನದಿಂದ100 ಸ್ಥಾನಕ್ಯ ಜಿಗಿದಿರುವುದು ನೋಟ್ ಬ್ಯಾನ್ ವಿರೋಧಿ ಪಡೆಗೆ ಕಾಣುವುದಿಲ್ಲವೆ .?
ಭಯೋತ್ಪಾದನೆ ಚಟುವಟಿಕೆಗಳನ್ನು ಮಟ್ಟಹಾಕಿರುವುದು,ಕಪ್ಪಹಣಕ್ಕೆ ಕಡಿವಾಣಹಾಕಿರುವುದು, ಅನವಶ್ಯಕ ಬೇನಾಮಿ ವ್ಯವಹಾರ ಕಡಿಮೆ ಆಗಿರುವುದು,ತೆರಿಗೆಗಳ್ಳರಿಗೆ ನಡುಕ ಹುಟ್ಟಿಸಿರವುದು.ಬಡ್ಡಿದರ ಇಳಿಕೆಆಗಿರುವುದು,ಗೃಹಖರೀದಿ ಅಗ್ಗವಾಗುರುವುದು ,ಈಗೆ ಒಂದೇ ಎರಡೆ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತದೆ.
ಇಂತಹ ದೃಢನಿರ್ಧಾರವನ್ನು ದೇಶದ75% ಜನ ಬೆಂಬಲಿಸಿದ್ದು ಒಳ್ಳೆಯದು ಜಯಿಸುತ್ತದೆ ಎಂಬುದಕ್ಕೆ ಸಾಕ್ಷಿ .
ಇಂತಹ ದಿಟ್ಟ ನಿರ್ಧಾರದ ಪ್ರತಿಫಲ ದಿಂದ ಕೆಲವೇ ವರ್ಷಗಳ ಅಂತರದಲ್ಲಿ ಭಾರತ ವಿಶ್ವದ ಬಲಿಷ್ಠ ಅರ್ಥವ್ಯವಸ್ಥೆ ಹೊಂದಲಿದೆ

*ಸಿ.ಜಿ.ವೆಂಕಟೇಶ್ವರ*
*ಶಿಕ್ಷಕರು*
*ಗೌರಿಬಿದನೂರು*