08 ಅಕ್ಟೋಬರ್ 2017

ಹನಿ ಗಳು (ಸ್ವಚ್ಛತೆ ಕುರಿತ ಹನಿಗವನಗಳು)

              ಹನಿಗವನಗಳು
*೧*
*ಸ್ವಚ್ಛ ಭಾರತ*

ಎತ್ತನೋಡಿದರತ್ತ ಕಸ
ತುಂಬಿದೆ ನದಿತೊರೆಗಳಲಿ ವಿಷ
ಇಂದೇ ಪಣ ತೊಡೋಣ
ಸ್ವಚ್ಛ ಭಾರತ ಮಾಡೋಣ .

*೨*

*ಬೆಳಕು*

ಇನ್ನೆಷ್ಟು   ದಿನ ಕೊಳಕು ?
ಮೂಡಲಿ ಈದಿನವೆ  ಬೆಳಕು
ಮರೆಯಾಗಲಿ ಕೊಳೆ
ಮೆರೆಯಲಿ ಎಲ್ಲೆಲ್ಲೂ ಕಳೆ
*೩*

*ಹಾಸ್ಯ ಚಟಾಕಿ*

ಕಡಿಮೆ ಮಾಡೋಣ ಪಟಾಕಿ
ಹಾರಿಸೋಣ ಹಾಸ್ಯ ಚಟಾಕಿ
ಮಾಡದಿರೋಣ ಮಾಲಿನ್ಯ
ಹಣತೆಯ ಬೆಳಕೇ  ಅನನ್ಯ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 ಅಕ್ಟೋಬರ್ 2017

ಸಮಯವಿಲ್ಲ (ಕವನ)

           
                *ಸಮಯವಿಲ್ಲ*

ಯಾರನ್ನೆ ಕೇಳಿ ಸಿದ್ದ ಉತ್ತರ ಸಮಯವಿಲ್ಲ!
ಸಮಯದ ಮಹತ್ವ ಅವರಿಗಿನ್ನೂ ತಿಳಿದಿಲ್ಲ !


ಗಂಟೆಗಟ್ಟಲೆ ಮೋಬೈಲ್ ಲೋಕದಲ್ಲಿ ಮುಳುಗಿರುವಿರಲ್ಲ/
ಹಿತವಚನ,ಪ್ರವಚನ ಕೇಳಲು ಸಮಯವಿಲ್ಲ/
ಬದುಕುವ ಬದುಕಿಸುವ  ಮಾತುಗಳಿಗೆ ಬೆಲೆಯಿಲ್ಲ /
ಚಾಡಿ ಮಾತು,ಕೆಟ್ಟಮಾತುಗಳಿಗೆ ಕಿವಿ ಕೊಡುವಿರಲ್ಲ /

ದೀರ್ಘಾವಧಿಯ ಸಿನಿಮಾ ಸೀರಿಯಲ್ ನೋಡಲು ತಪ್ಪಿಸಲ್ಲ/
ಆತ್ಮಕ್ಕೆ ಬೆಳಕುನೀಡುವ ಕಿರು ಪ್ರಾರ್ಥನೆಗೆ ಸಮಯವಿಲ್ಲ/
ದಾನ ಮಾಡಲು ನಿಮಗೆ ಹತ್ತು ರೂ ಸಿಗಲಿಲ್ಲ/
ಲಕ್ಷಾಂತರ ಮೌಲ್ಯದ ಶಾಪಿಂಗ್ ಮರೆಯುವುದಿಲ್ಲ/

ಗಂಟೆಗಟ್ಟಲೆ ಒಣ ಹರಟೆ ಹೊಡೆಯುವಿರಲ್ಲ /
ಧ್ಯಾನ ಮಾಡಲು ನಿಮಗೆ ಸಮಯವೇ ಇಲ್ಲ/
ಜಾತಿ ಮತ ಧರ್ಮವೆಂದು ಕಚ್ಚಾಡುವಿರಲ್ಲ
ನೀಲಾಕಾಶವ ನೋಡಿ ವಿಶಾಲತೆಯ ಅರಿಯಲಿಲ್ಲ/

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 ಅಕ್ಟೋಬರ್ 2017

ನಾವು ಶಿಕ್ಷಕರು (ಕವನ)

               *ನಾವು ಶಿಕ್ಷಕರು*

ನಾವು ಶಾಲೆಯ  ಶಿಕ್ಷಕರು
ಮಕ್ಕಳ ಮಾರ್ಗದರ್ಶಕರು

ಬೆಳೆಸುವೆವು ಸವಿ ಗುಣಗಳ
ಇಳಿಸುವೆವು  ಅನಕ್ಷರತೆಯ
ಸಾರುವೆವು ಸಮರಸದ ಮಂತ್ರ
ಕಲಿಸುವೆವು ಬಳಸಿ ಹೊಸ  ತಂತ್ರ

ಪರಂಪರೆಯ ರಕ್ಷಿಸುವೆವು
ನಿರಂತರವು ಕಲಿಸುವೆವು
ಮಾದರಿ ನಾವು ಸಮಾಜಕ್ಕೆ
ತೋರುವೆವು ದಾರಿ ಜೀವನಕ್ಕೆ

ಮಕ್ಕಳನು ಶಾಲೆಗೆ ಕರೆಯುವೆವು
ತೋರಣವ ಕಟ್ಟಿ ಸ್ವಾಗತಿಸುವೆವು
ಭಾರತಾಂಬೆಗೆ ಬಾಗಿ ನಮಿಸುವೆವು
ವಿಶ್ವಶಾಂತಿಗೆ ಕರೆ ನೀಡುವೆವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಅಕ್ಟೋಬರ್ 2017

ಗಜಲ್( ಬೆಳಕು ನೀಡು ) ಮಾತು ಕತೆ ಪತ್ರಿಕೆಯಲ್ಲಿ ಪ್ರಕಟಿತ ಗಜಲ್

   



ಗಜಲ್*,ಬೆಳಕು ನೀಡು


ಕತ್ತಲಲಿಹುದು ಜಗ ಬೆಳಗಲು  ಬೆಳಕು ನೀಡು
ನಮ್ಮೆದೆಯ ಹೃದಯಗಳು ನಲಿಯಲು ಬೆಳಕು ನೀಡು /

ಲೋಕದಲಿ ಶೋಕ ಹೆಚ್ಚಾಗುತಿದೆ ನೋಡು/
ಶೋಕತಪ್ತ ಮನಗಳು ಕುಣಿಯಲು  ಬೆಳಕು ನೀಡು /

ಜನಮನಗಳಲಿ ಪ್ರೀತಿಯಿಲ್ಲ ನೀತಿ ನಿಯಮಗಳ ಭಯವಿಲ್ಲ
ಸಕಲರೂ   ನೀತಿವಂತರಾಗಲು ಬೆಳಕು‌ ನೀಡು /

ಹಸುಳೆಗಳ ಲೆಕ್ಕಿಸದೇ ಅತ್ಯಾಚಾರ ಮಾಡುತಿಹರು/
ಕೆಟ್ಟವರ, ಕಾಮಾಂಧರ ಮನ ಕರಗಲು  ಬೆಳಕು ನೀಡು/

ಧರ್ಮದ ಹೆಸರಿನಲಿ ಅಧರ್ಮದ ಆಟಗಳು
ದೇಶ ಒಡೆವ ದುಷ್ಟಶಕ್ತಿಅಡಗಲು  ಬೆಳಕು ನೀಡು /

ಭ್ರಷ್ಟಾಚಾರವ ಬೆಳೆಸಿ ರಾಷ್ಟ್ರ ಮಾರುವ ಹಂತಕ್ಕಿಳಿದಿಹರು
ಕೆಟ್ಟ ಶಕ್ತಿಗಳ  ಹುಟ್ಟಡಗಿಸಲು ಬೆಳಕು ನೀಡು /

ಪ್ರಾಣಿ ಪಕ್ಷಿಗಳಿಗೆ ದಯೆಯಿಲ್ಲ ಹಿಂಸೆಗೆ ಕೊನೆಯಿಲ್ಲ/
 ಶ್ರೀ ದೇವಿತನಯನೇ ಅಹಿಂಸೆಪಾಲಿಸಲು  ಬೆಳಕು ನೀಡು/

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

04 ಅಕ್ಟೋಬರ್ 2017

ದುಃಖ ನನಗಿರಲಿ (ಚಿತ್ರ ಕವನ)

           
  *ದುಃಖ ನನಗಿರಲಿ*


ನೀ ನನಗೆ ಭಾರವಲ್ಲ ಮಗಳೆ
ನಾನಿರುವುದು ಇಳೆಯ ಮೇಲೆ

ಬಿಸಿಲು ಮಳೆ ಚಳಿ ಇರಲಿ
ನಿನ್ನ ಕಾಪಾಡದೆ ಹೇಗಿರಲಿ
ನನಗಾವ ಕಷ್ಟಗಳ ಪರಿವಿಲ್ಲ
ನನ್ನೊಡನೆ ನೀನಿರುವೆಯಲ್ಲ

ನಿನ್ನ ಸವಿ ಮಾತೇ ಪ್ರೇರಣೆ
ನೀನಿದ್ದರೆ ಬರುವುದು ಸಹನೆ
ನೀ ನನ್ನ ಬಲವಾದ ಕನಸು
ನಿನ್ನ ಪ್ರತಿ ಮಾತು ಸೊಗಸು

ನನ್ನ ಹಿತ ಬೇಕಿಲ್ಲ
ನಿನ್ನ ಸುಖ ಮರೆತಿಲ್ಲ
ಜಗದ ದುಃಖ ನನಗಿರಲಿ
ಇರುವ ಸುಖವೆಲ್ಲಾ ನಿನಗಿರಲಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*