28 ಸೆಪ್ಟೆಂಬರ್ 2017

ಶ್ರೀ ದೇವಿ ಕವನದ ಸ್ವ ವಿಮರ್ಶೆ.

        *ಶ್ರೀದೇವಿ**(ಅಮ್ಮ)

ನನ್ನ ಗೀತೆಯ ವಿಮರ್ಶೆ

*ನೀ ನನ್ನ ಪಾಲಿನ ದೈವ*
*ತ್ಯಾಗಮಯಿ ಜೀವಿ ನನ್ನವ್ವ*

ಎಲ್ಲರಿಗೂ ಇರುವಂತೆ ನನಗೂ ನನ್ನವ್ಚ ದೇವರೇ ಆದರೆ ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ನನ್ನ ತಾಯಿ ತನ್ನ ಜೀವನವನ್ನು ನನಗಾಗಿ ತ್ಯಾಗಮಾಡಿರುವುದ ಮರೆಯಲಾರೆ.

*ಹಾರೈಕೆಯಲಿ ಬತ್ತದ ಒರತೆ
ನೀಗಿಸಿದೆ ಅಪ್ಪನ ಕೊರತೆ
ತಾಳ್ಮೆಯಲಿ ನಿಜದಿ ಭೂಮಾತೆ
ಒಳ್ಳೆ  ಗುಣಗಳ ನಿನ್ನಿಂದ ಕಲಿತೆ*

ನಾನು ಹದಿನೈದು ವರ್ಷದ ಹುಡುಗನಾದರೂ ನನಗೆ ಅನಾರೋಗ್ಯ ಕಾಡಿದಾದ ಕಂಕುಳಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ಕೊಂಡೊಯ್ದು ನನ್ನ ಅಮ್ಮನವರ ಹಾರೈಕೆ ಹೇಗೆ ಮರೆಯಲಿ?
ನನಗೆ ಮೂರು ವರ್ಷದ ಪ್ರಾಯವಿದ್ದಾಗ ನನ್ನ ತಂದೆ ಕಾಲವಾದಾಗ ಆಕೊರತೆ ಕಾಣದಂತೆ ಅಪ್ಪನಾಗಿ ನನ್ನ ಸಲಹಿದ ಮಹಾ ಮಾತೆ ನನ್ನ ತಾಯಿ.
ಸಹಾಯ ಕರುಣೆ ಮುಂತಾದ ಸದ್ಗುಣಗಳ ಗಣಿ ನನ್ನವ್ವ ನಾನು ಕೆಲ ಗುಣಗಳನ್ನು ಬಳುವಳಿ ಪಡೆದಿರುವೆ

*ಮಾಡಿದೆ ಕೂಲಿನಾಲಿಯ ಜೀವನ
ದುಡಿದೆ ಹಗಲಿರುಳು ಕ್ಷಣ ಕ್ಷಣ
ನೀ ಹೊಸ ಬಟ್ಟೆ ಉಡಲಿಲ್ಲ
ನನಗುಡಿಸುವುದ ಮರೆಯಲಿಲ್ಲ*

ನನ್ನ ತಾಯಿ ಜೀವನ ಮಾಡಲು ನಮ್ಮ ಬೆಳೆಸಲು ಕೂಲಿ ಮಾಡಿದರು ಅವರಿಗೆ ಬಟ್ಟೆ ಇಲ್ಲದಿದ್ದರೂ ನಮಗೆ ಹೊಸ ಬಟ್ಟೆ ತೊಡಿಸಿ ಸಂಭ್ರಮಿಸುತ್ತಿದ್ದರು .

*ನಾನು ಹೆಸರಿಗಷ್ಟೇ ಅಕ್ಷರಸ್ಥ
ನೀ ಜೀವನ ಪಾಸಾದ ಅನಕ್ಷರಸ್ಥೆ
ಹೆತ್ತು ಹೊತ್ತು ಸಲಹಿದೆ ನನ್ನ
ಹೇಗೆ ತೀರಿಸಲಿ ನಿನ್ನ ಋಣವನ್ನ*

ನಮ್ಮಮ್ಮ ಓದು ಬರಹ ಬರದ ಅನಕ್ಷರಸ್ಥೆ ಆದರೂ ಜೀವನದ ವಿಶ್ವವಿದ್ಯಾಲಯದಲ್ಲಿ ನೀನು ಡಾಕ್ಟರೇಟ್ .ನಿನ್ನ ಋಣ ತೀರಿಸಲು ನನ್ನಿಂದಾಗದು .

**ಬಾಳಿ ತೋರಿಸಿದೆ ಸರೀಕರೊಡನೆ
ತಗ್ಗಿ  ಬಗ್ಗಿ ನಡೆದೆ ಹಿರೀಕರೊಡನೆ
ನನಗೆ ನೀಡಿದೆ ಜೀವನದ ಸವಿ
ನೀನೇ ನನ್ನ ಪಾಲಿನ ಶ್ರೀ ದೇವಿ*

ನಮ್ಮ ಊರಿನ ನಮ್ಮವರ ಕೊಂಕಿನ ನಡುವೆ ಬದುಕಿ ತೋರಿಸಿದೆ ನಮ್ಮಮ್ಮ ನಮಗೆ ಕಷ್ಟದ ಅನುಭವ ನೀಡದೆ ಬರೀ ಸುಖ ನೀಡಿದರು
ನಮ್ಮಮ್ಮನ ಹೆಸರೇ**ಶ್ರೀದೇವಮ್ಮ** ನನ್ನ ಪಾಲಿನ ದೇವಿ ನನ್ನ ಅಮ್ಮನಿದ್ದರೆ ಆನೆ ಬಲವಲ್ಲ ಇನ್ನೂ ಹೆಚ್ಚು ಬಲ.ಈಗ  ನನ್ನ ಅಮ್ಮ ನನ್ನೊಂದಿಗೆ ಇದ್ದಾರೆ ಎನ್ನುವುದು ಹೆಮ್ಮೆ.

ಶ್ರೀ ದೇವಿ (ಕವನ)

                *ಶ್ರೀ ದೇವಿ*

ನೀ ನನ್ನ ಪಾಲಿನ   ದೈವ
ತ್ಯಾಗಮಯಿ  ಜೀವಿ ನಮ್ಮವ್ವ

ಹಾರೈಕೆಯಲಿ ಬತ್ತದ ಒರತೆ
ನೀಗಿಸಿದೆ ಅಪ್ಪನ ಕೊರತೆ
ತಾಳ್ಮೆಯಲಿ ನಿಜದಿ ಭೂಮಾತೆ
ಒಳ್ಳೆ  ಗುಣಗಳ ನಿನ್ನಿಂದ ಕಲಿತೆ  /

ಮಾಡಿದೆ ಕೂಲಿನಾಲಿಯ ಜೀವನ
ದುಡಿದೆ ಹಗಲಿರುಳು ಕ್ಷಣ ಕ್ಷಣ
ನೀ ಹೊಸ ಬಟ್ಟೆ ಉಡಲಿಲ್ಲ
ನನಗುಡಿಸುವುದ ಮರೆಯಲಿಲ್ಲ/

ನಾನು ಹೆಸರಿಗಷ್ಟೇ ಅಕ್ಷರಸ್ಥ
ನೀ ಜೀವನ ಪಾಸಾದ ಅನಕ್ಷರಸ್ಥೆ
ಹೆತ್ತು ಹೊತ್ತು ಸಲಹಿದೆ ನನ್ನ
ಹೇಗೆ ತೀರಿಸಲಿ ನಿನ್ನ ಋಣವನ್ನ./

ಬಾಳಿ ತೋರಿಸಿದೆ ಸರೀಕರೊಡನೆ
ತಗ್ಗಿ  ಬಗ್ಗಿ ನಡೆದೆ ಹಿರೀಕರೊಡನೆ
ನನಗೆ ನೀಡಿದೆ ಜೀವನದ ಸವಿ
ನೀನೇ ನನ್ನ ಪಾಲಿನ ಶ್ರೀ ದೇವಿ /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 ಸೆಪ್ಟೆಂಬರ್ 2017

ಪ್ರೀತಿಯ ಮಳೆ (ಕವನ)

                     ೧
             *ಪ್ರೀತಿಯ ಮಳೆ*

ನಲ್ಲೆ ನೀನಿರಲು‌ ಸ್ವರ್ಗ ನನಗೇಕೆ
ಎಲ್ಲೆಡೆ ಸುಖ ಸಂತೋಷದ ಕೇಕೆ

ಬಳಿ ಸಾರಿ ಬಂದಾಗ ಹಬ್ಬ
ನೀ ನನ್ನ ತಬ್ಬಲು ಅಬ್ಬಬ್ಬಾ
ಇರುಳಲಿ  ಬೆಳಕು ಬೇಕಿಲ್ಲ
ನಿನ್ನ ಕಣ್ಣ ಮಿಂಚು ಸಾಕಲ್ಲ

ಸವಿ ನಗುವೆ ನವಸುಮ
ಕಣ್ಣಂಚಲ್ಲೇ ಸಮಾಗಮ
ಮಾತುಗಳೆಲ್ಲಾ ಸವಿಬೆಲ್ಲ
ಸಾಟಿ ನಿನಗೆ ಬೇರಾರಿಲ್ಲ

ನಿನ್ನ  ಒಲವೆನಗೆ ಅಮಲು
ನನ್ನ ಮನವೀಗ  ನವಿಲು
ಸುರಿಸು ಪ್ರೀತಿಯ ಮಳೆ
ತಬ್ಬುವಂತೆ ಇಳೆಯ ಮಳೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 ಸೆಪ್ಟೆಂಬರ್ 2017

ನಮಗೆ ತರವೆ?(ಕವನ)



                 *ನಮಗೆ ತರವೆ*

ಯಾರೇ ಸಿಗಲಿ ಕೇಳುವೆವು ಕ್ಷೇಮವೇ
ಈ ಪ್ರಶ್ನೆ ನಮಗೆ ತರವೆ?

ಕಾನನವ ನಾಶಮಾಡಿಹೆವು
 ಮರಗಳಹನನ ಮಾಡಿಹೆವು
 ಮಳೆಯಿಲ್ಲ ಬೆಳೆಯಿಲ್ಲ
ಕ್ಷೇಮದ ಮಾತಿಲ್ಲವೇ ಇಲ್ಲ /

ನಗರೀಕರಣ ಜಾಗತೀಕರಣ
ನಮ್ಮ ಸಂಸ್ಕೃತಿಗಳ ಹರಣ
ಮೌಲ್ಯಗಳಿಗೆ ಬೆಲೆಯಿಲ್ಲ
ಅನೀತಿಗಳಿಗೆ ಎಣೆಯಿಲ್ಲ /

ಅವ್ಯಾಹತವಾಗಿದೆ ಅನಾಚಾರ
ನಿರಂತರವಾಗಿ ನಡೆದಿವೆ ಅತ್ಯಾಚಾರ
ಆಧುನಿಕ ಅಮಾನವೀಯ ಲೋಕದಲಿ
ಎಲ್ಲಿ ಹುಡುಕಲಿ ನೆಮ್ಮದಿ ಈ ನರಕದಲಿ /

ಮತಧರ್ಮದ ನಡುವೆ ಕಚ್ಚಾಟ
ನಿಂತಿಲ್ಲ ಅಶಾಂತಿಯ ಹುಚ್ಚಾಟ
ತಿಳಿದಿಲ್ಲ  ಮಾನವೀಯ ಮೌಲ್ಯ
ಉಳಿಸು ಈ ಜಗ ಅಮೂಲ್ಯ /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*