17 ಸೆಪ್ಟೆಂಬರ್ 2017

       
           ಚಿತ್ರ ಕವನ

*ಬಾ ಗೆಳೆಯ*

ಎಂದು ಬರುವೆ ಪ್ರಿಯಕರ
ಹಿಡಿಯಲು ನನ್ನ ಕರ

ಕಾದು ಕೂತಿಹೆ ಇಲ್ಲಿ
ಹಸಿವು ನಿದ್ರೆ ನನಗಿನ್ನೆಲ್ಲಿ
ದಾರಿಯನೆ ನೋಡುತಿಹೆ
ಆರಿಗೇಳದೇ ಸಾರಿ ಬಾ ಗೆಳೆಯ .

ಉಬ್ಬು ತಗ್ಗುಗಳ ದಾಟಿ
ಮಬ್ಬುಗತ್ತಲೆಗೆ ಮುನ್ನ
ತಬ್ಬಿ ಮುದ್ದಾಡಲು ನನ್ನ
ಒಬ್ಬಳೇ ಕಾದಿಹೆನು ಬಾ ಗೆಳೆಯ.

ದಾರಿ ಕಾದೆನು ನಾನು
ಯಾರ ಪರಿವೆಇಲ್ಲದೆ
ದೂರವಿರುವ ನೀ
ಬರುವೆ ಎಂದು  ಬಾ ಗೆಳೆಯ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
           
             ಹನಿಗವನ
            ದುಪ್ಪಟ್ಟು

ನನ್ನ ಹೆಜ್ಜೆಗೆ ಕಟ್ಟುವೆ ಗೆಜ್ಜೆ
ಮುಖದಲ್ಲಿದೆ ಲಜ್ಜೆ
ನನ್ನ ವದನಕೆ ಮರೆ ದುಪ್ಪಟ್ಟ
ನ‌ನ್ನವನು ಕಂಡರೆ ಸಂತೋಷ ದುಪ್ಪಟ್ಟು

ಸಿ‌.ಜಿ.ವೆಂಕಟೇಶ್ವರ
ಗೌರಿಬಿದನೂರು.

16 ಸೆಪ್ಟೆಂಬರ್ 2017

ಕವನ "ಮನ್ನಿಸಿ ಬಾರೆ "

               ಮನ್ನಿಸಿ ಬಾರೆ


ಮುನಿಸು ಬಿಡು
ಮನ್ನಿಸಿ ಬಿಡು
ರಾಣಿ ನೀ ನನ್ನೆದೆಯ ಅರಮನೆಗೆ
ಬೋಣಿ ಮಾಡು ನನ್ನಧರಕೆ

ಮನ್ನಿಸಿಬಿಡು ನನ್ನ
ಇನ್ನು ನೋಯಿಸೆನು
ಚಿನ್ನದ ಮನಸೋಳೆ
ಬೆನ್ನು ತಿರುಗಿಸಬೇಡ ಬಾರೆ

ತಪ್ಪಾಗಿದೆ ನನ್ನಿಂದ ನನ್ನ
ಬೆಪ್ಪುತನವನು ಕ್ಷಮಿಸಿ
ಸಪ್ಪೆಯಾದ ನನ ಜೀವನದಿ
ಅಪ್ಪಿ ಮುದ್ದಾಡಲು ಬಾರೆ

ದೇವಾನುದೇವರು ತಪ್ಪೆಸಗಿಹರು
ನಾನಾವ ಲೆಕ್ಕ ಹುಲಮಾನವ
ಇನ್ನೆಂದು ನೋಯಿಸೆನು
ನನ್ನೊಂದಪರಾಧವ ಮನ್ನಿಸಿ ಬಾರೆ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

15 ಸೆಪ್ಟೆಂಬರ್ 2017

ಸಮಯ ಕುರಿತ ನನ್ನ ಕವನ *ಮನವಿ .*

                   * ಮನವಿ*

ಕಾಲವೇ ನಿಲ್ಲು ಓಡದಿರು
ನಿಂತಿಲ್ಲ ಅನ್ಯಾಯ ಬತ್ತಿಲ್ಲ ಕ್ರೌರ್ಯ
ಜಗದಿ ಶಾಂತಿ ನೆಲೆಸುವವರೆಗೆ
ಓಡದಿರು ನಿಲ್ಲು .

ಅರಿತಿಲ್ಲ ನಮ್ಮ ನಾವು
ಬೆರೆತಿಲ್ಲ ಪರಿಸರದಿ
ನಮಗರಿವು ಮೂಡಿ ಬೆರೆವವರೆಗೆ
ಓಡದಿರು ನಿಲ್ಲು.

ಬಂದಿಲ್ಲ ನಮ್ಮಲ್ಲಿ ಸಮಾನತೆ
ನಿಂತಿಲ್ಲ ದುರ್ಬಲರ ಶೋಷಣೆ
ಸರ್ವರಿಗೂ ಸಮಪಾಲು ಸಿಗುವವರೆಗೆ
ಓಡದಿರು ನಿಲ್ಲು

ದಯವಿಲ್ಲ ಪ್ರಾಣಿಗಳ ಮೇಲೆ
ಕಚ್ಚಾಡುತಿಹೆವು ಧರ್ಮದೆಸರಿನಲಿ
ದಯವೇ ಧರ್ಮದ ಮೂಲವಾಗುವವರೆಗೆ
ಓಡದಿರು ನಿಲ್ಲು.

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

14 ಸೆಪ್ಟೆಂಬರ್ 2017

ಹುಟ್ಟಿದ ಹಬ್ಬಕ್ಕೆ ದೇವರ ಭಜನೆ,ಆತ್ಮಾನಂದ ಸಂಪಾದನೆ.

                 ಇತ್ತೀಚಿಗೆ ನನ್ನ ಸಹೋದ್ಯೋಗಿಯೊಬ್ಬರ ಮಗನ ಹುಟ್ಟು ಹಬ್ಬದ ಪ್ರಯುಕ್ತ ಅವರ ಆಹ್ವಾನದ ಮೇರೆಗೆ ಹುಟ್ಟು ಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ ಆ ಹುಟ್ಟು ಹಬ್ಬ ಒಂದು ರೀತಿಯಲ್ಲಿ ವಿಶೇಷವಾಗಿತ್ತು 
ಅಂದು ಸಂಜೆ ಭಜನೆ ತಂಡವನ್ನು ಕರೆಸಿ ದೇವರ ಭಜನೆ ಮಾಡಿಸಲಾಯಿತು ಹಿರಿಕಿರಿಯರೆನ್ನದೇ ಎಲ್ಲರೂ ಭಜನೆ ಮಾಡುತ್ತಾ ಭಾವಪರವಶರಾದ ಪ್ರಸಂಗ ಅವರ್ಣನೀಯ 
ಭಜನೆಯ ನಂತರ ಹುಟ್ಟು ಹಬ್ಬದ ಮಹತ್ವ ಕುರಿತು ಹಿರಿಯರಿಂದ ಆಶೀರ್ವದಿಸಿ ಅಕ್ಷತೆ ಹಾಕಿ ಎಲ್ಲರೂ ಹರಸಿ‌ ಆಯರಾರೋಗ್ಯ ನೀಡಲು ಹರಸಿದರು .ಜೊತೆಗೆ ಅಲ್ಲಿ ನೆರೆದ ಪ್ರತಿಯೊಬ್ಬರೂ ಸತ್ಸಂಗ ಮಾಡಿ ಕೆಲ ಕಾಲ ಆಧುನಿಕ ಜೀವನದ ಜಂಜಡದಿಂದ ದೂರಾಗಿ ,ಮೊಬೈಲ್ ,ವಾಟ್ಸಪ್, ಫೇಸ್ಬುಕ್, ಸೀರಿಯಲ್ ಗೊಡವೆ ಇಲ್ಲದೇ ಆತ್ಮಕ್ಕೆ ಆನಂದವನ್ನು ಹೊಂದಿದ ಧನ್ಯತಾ ಭಾವ ಉಂಟಾಗಿದ್ದು ಸುಳ್ಳಲ್ಲ 
ಪಾಶ್ಚಾತ್ಯರ ಸಂಸ್ಕೃತಿಯು ಮಾತ್ರ ಉತ್ತಮ ಭಾರತೀಯ ಸಂಸ್ಕೃತಿಯು ಕೀಳು ಎಂಬ ಪೂರ್ವ ನಿರ್ಧರಿತ ,ಪೂರ್ವಾಗ್ರಹ ಪೀಡಿತ ಮನಸುಗಳು ಬದಲಾಗಬೇಕಿದೆ 
ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಸಹ ಮಕ್ಕಳ ಹುಟ್ಟು ಹಬ್ಬಗಳನ್ನು ಕೇಕ್ ಕತ್ತರಿಸಿ ಕ್ಯಾಂಡಲ್ ಆರಿಸಿ ಹುಟ್ಟಿದ ಹಬ್ಬಗಳನ್ನು ಆಚರಿಸುತ್ತಾರೆ ಇದರ ಪರಿಣಾಮ ಗಲ್ಲಿಗಳಿಗೊಂದು ಬೇಕರಿಗಳ ಉಗಮ ,ಇದು ಹೊಸ ವರ್ಷ, ವಾಲೆಂಟೇನ್ ಡೇ ಆ ಡೇ ,ಈ ಡೇ ಗಳ ಭರಾಟೆಗಳಿಗೆ ಮಿತಿಇಲ್ಲದೇ ಆಚರಿಸುತ್ತಾರೆ, ಆದರೆ ಅದಕ್ಕಿಂತಲೂ ಉನ್ನತವಾದ ದ್ಯೇಯ ಸಾಂಸ್ಕೃತಿಕ ಮೌಲ್ಯವಿರುವ ಆಚರಣೆಗೆ ಮುಂದಾಗದಿರುವುದು ಶೋಚನೀಯ ಸಂಗತಿ .ಅಂದರೆ ನಾನು ಪಾಶ್ಚಿಮಾತ್ಯ ಅಥವಾ ಬೇರೆ ಸಂಸ್ಕೃತಿಯ ವಿರೋಧಿ ಅಲ್ಲ ,ಸಾಂಸ್ಕೃತಿಕ ಬದಲಾವಣೆ, ಸಾಂಸ್ಕೃತೀಕರಣದ ಬೇಕು  ಆದರೆ ಆ ಭರಾಟೆಗಳಿಗೆ ನಮ್ಮ ಸಂಸ್ಕೃತಿಯ ಪತನವಾಗಬಾರದು.ನಮ್ಮ ಹಿರಿಯರು ಮಾಡಿರುವ ಕೆಲ ಉನ್ನತವಾದ ಆಚರಣೆಗಳಲ್ಲಿ ವೈಜ್ಞಾನಿಕ ತಳಹದಿಯ ಉನ್ನತ ಚಿಂತನೆಯ ಅನುಭವ ಇದೆ ಅವುಗಳನ್ನು ಉಳಿಸಿ ಬೆಳೆಸಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯಬೇಕಿದೆ.

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು.