21 ಫೆಬ್ರವರಿ 2019

ಅವ್ವ (ವಿಶ್ವ ಮಾತೃಭಾಷೆ ದಿನದ ಪ್ರಯುಕ್ತ)

           *ಅವ್ವ*

ಎನಿತು ಇನಿದು
ನಮ್ಮ ಕನ್ನಡ.
ವ್ಯಾಮೋಹವೇಕೆ
ಅನ್ಯ ಭಾಷೆಗಳ ಮೇಲೆ?
ನಿಲ್ಲಸಿ ಸಾಕು ಕರೆದದ್ದು
ಮಮ್ಮಿ .
ಮಾಡಿದ್ದು ಸಾಕು
ಅಮ್ಮನನ್ನು ದೆವ್ಚ.
ಇನ್ನಾದರೂ
ಕರೆಯೋಣ ಪ್ರೀತಿಯಿಂದ
 ಅವ್ವ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಇಂದು ವಿಶ್ವ ಮಾತೃಭಾಷೆ* ದಿನ ಅದರ ನೆನಪಲ್ಲಿ

15 ಫೆಬ್ರವರಿ 2019

ಜೈ ಭಾರತಾಂಭೆ ( ಹುತಾತ್ಮ ಯೋಧರಿಗೆ ನಮನ)

*ಜೈ ಭಾರತಾಂಬೆ*

ನರಿಬುದ್ದಿಯ ಉಗ್ರರೇ
ನಾಚಿಕೆಯಿಲ್ಲದ ನೀವು
ಮನುಷ್ಯರೇ?

ಎದುರು ನಿಲ್ಲಲು
ಅದುರುವ ನೀವು
ಬೆನ್ನಿಗೆ ಚೂರಿ ಹಾಕುವಿರಾ?
ಭಾರತೀಯರ ಕಿಚ್ಚು
ಜ್ವಾಲೆಯಾಗಿ ಉರಿದರೆ
ನೀವು ಉಳಿಯುವಿರಾ?

ಸಮರದಲಿ ಸೋತು
ಸುಣ್ಣವಾದ ಪಾಪಿಸ್ತಾನದ
ಪಾಪಿಗಳೇ, ರಕ್ತಪಿಪಾಸುಗಳೇ
ನಮ್ಮನು ಕೆಣಕಿದ್ದೀರಿ
ಮುಂದೆ ವಿಶ್ವ ಭೂಪಟದಲಿ
ನಿಮ್ಮ ದೇಶವನ್ನು ಹುಡುಕುತ್ತೀರಿ

ನಮ್ಮ ಯೋಧರ ಪ್ರಾಣಹರಣಮಾಡಿದ
ನಿಮ್ಮನು ಸುಮ್ಮನೆ ಬಿಡೆವು
ಶಾಂತವಾಗಿರುವುದು
ನಮ್ಮ ದೌರ್ಬಲ್ಯವಲ್ಲ
ಹುಲಿಯನ್ನು ಕೆಣಕಿದ
ನಿಮಗೆ ಉಳಿಗಾಲವಿಲ್ಲ
ದಿಟ್ಡತನದಿ ನಿಮ್ಮ ಹುಟ್ಟಡಗಿಸಿ
ಘರ್ಜಿಸುವೆವು ಜೈ ಭಾರತಾಂಬೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*






14 ಫೆಬ್ರವರಿ 2019

ಗಜ್ಹಲ್ ೫೨ (ನೆಮ್ಮದಿ)

*ಗಜ್ಹಲ್*


ಹೆಣ್ಣು ಹೊನ್ನು ಮಣ್ಣಿದೆ ಸಿಗಬಹುದೆ ನೆಮ್ಮದಿ
ಮಣ್ಣಾಗುವ ಮುನ್ನವಾದರೂ ಲಭಿಸುವುದೆ ನೆಮ್ಮದಿ

ಏಸು ದಿನ ನೀರಲಿದ್ದರೆ ಮೆದುವಾಗುವುದೆ ಕಲ್ಲು
ನದಿಗಳಲಿ ತೀರ್ಥ ಸ್ನಾನ ಮಾಡಿದರೆ ದೊರೆವುದೆ ನೆಮ್ಮದಿ

ಮನಃಪೂರ್ವಕವಾಗಿ ದಾನ ಧರ್ಮ ಮಾಡಲಿಲ್ಲ
ತೋರಿಕೆಯ ಸಹಾಯಹಸ್ತ ಚಾಚಿದರೆ ಸಿಗುವುದೆ ನೆಮ್ಮದಿ

ಮಾಡುವುದು ಅನಾಚಾರ ಮನೆಮುಂದೆ ವೃಂದಾವನ
ಒಳಗೊಂದು ಹೊರಗೊಂದು ಇದ್ದರೆ ಕಾಣಬಹುದೆ ನೆಮ್ಮದಿ

ಸಿಹಿಯೇ ಬೇಕು ಜೀವನದಿ ಸಿಹಿಜೀವಿಗೆ
ಕಹಿಯ ದಾರಿ ಸವೆಸದೇ ಪಡೆಯಬಹುದೆ ನೆಮ್ಮದಿ

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*