15 ಮಾರ್ಚ್ 2025

ಸಹೃದಯ



 


ಸಹೃದಯ.


ಸಹೃದಯಿ ಎಂಬುದು ಸಮಾನ್ಯ ವಾಗಿ ನಾವು ಉತ್ತಮ ಗುಣ ನಡತ  ಹೊಂದಿದ ವ್ಯಕ್ತಿಯ ಕುರಿತ ಮಾತನಾಡುವಾಗ ಬಳಸುವ ಪದ  ಭಾರತೀಯ ಕಾವ್ಯಮೀಮಾಂಸೆಯಲ್ಲಿ ಸಹೃದಯ ಅಥವಾ ಸಹೃದಯಿ ಎಂಬುದು ಒಂದು ಪ್ರಮುಖ ಪರಿಕಲ್ಪನೆ. ಕವಿಹೃದಯಕ್ಕೆ ಸಮಾನವಾದ ಹೃದಯವುಳ್ಳವನು ಸಹೃದಯ. ಕಾವ್ಯವನ್ನು ಓದುವಾಗ ಕವಿಯ ಹೃದಯದೊಂದಿಗೆ ಇವನ ಹೃದಯವೂ ಸಮಾನವಾಗಿ ಮಿಡಿಯುತ್ತದೆ. ಇವನು ಕವಿಯ ಇಂಗಿತ, ಆಶಯಗಳನ್ನು ಸಹಾನುಭೂತಿಯಿಂದ ಅರಿತು ಕವಿಯ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾನೆ.


ಲೋಕ ವ್ಯಾಪಾರದಲ್ಲಿ ಸೌಂದರ್ಯಾನುಭವ ಹೊಂದಿ ತನ್ನ ವಿಶಿಷ್ಟ ಶಕ್ತಿಯಿಂದ ಕವಿಯು ಕೃತಿಯನ್ನು ರಚಿಸಿದರೆ ಅದು ಅರ್ಧ ಭಾಗದ ಕೆಲಸವಷ್ಟೇ ಆಗುತ್ತದೆ. ತೀವ್ರವಾದ ಆತನ ಅನುಭವಗಳು ಅನ್ಯಹೃದಯವೇದ್ಯವಾದಾಗ ಮಾತ್ರ ಅವನ ಕಾರ್ಯ ಪೂರ್ಣರೂಪ ಪಡೆದಂತೆ. ಇದು ಕವಿಯ ಮೂಲಭೂತ ಬಯಕೆ. ಕಾವ್ಯವನ್ನು ಓದಿ ಆ ಅನುಭವದ ಸುಖವನ್ನು ಪಡೆಯುವವರೇ ಇಲ್ಲದಿದ್ದರೆ ಆತನ ಕೃತಿ ವ್ಯರ್ಥ. "ಕಟ್ಟಿಯುಮೇನೊ ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೆ" ಎಂದು ಕನ್ನಡ ಕವಿ ಜನ್ನ ಹೇಳಿದ್ದಾನೆ. ಕವಿ ಕಾವ್ಯದಲ್ಲಿ ಒಡಮೂಡಿಸಿದ ಸೌಂದರ್ಯಾನುಭವವನ್ನು ಕಾವ್ಯದ ಮೂಲಕ ಏರಿ ಸಹೃದಯ ಮುಟ್ಟುತ್ತಾನೆ. ಅಭಿನವಗುಪ್ತನ ಪ್ರಕಾರ ಕಾವ್ಯವರ್ತುಲದ ಪೂರ್ಣತೆಯಲ್ಲಿ ಕವಿ ಹೇಗೋಹಾಗೆ ಸಹೃದಯನೂ ಪ್ರಧಾನ ಕೊಂಡಿಯಾಗಿದ್ದಾನೆ. ಕಾವ್ಯಮೀಮಾಂಸಕರು ಕವಿಗೆ ಹೇಳಿರುವಂತೆಯೇ ಸಹೃದಯನಿಗೂ ಕೆಲವು ಲಕ್ಷಣಗಳನ್ನು ಹೇಳಿದ್ದಾರೆ. ಇವುಗಳಲ್ಲಿ ಅತ್ಯಂತ ಗಮನೀಯವಾದದ್ದು ಅಭಿನವಗುಪ್ತನದು "ಯೇಷಾಂ ಕಾವ್ಯಾನುಶೀಲನಾಭ್ಯಾಸವಶಾತ್ ವಿಶದೀಭೂತೇ ಮನೋಮುಕುರೇ ವರ್ಣನೀಯ ತನ್ಮಯೀ ಭವನ ಯೋಗ್ಯತಾ ತೇ ಸ್ವಹೃದಯ ಸಂವಾದಭಾಜಃ ಸಹೃದಯಾಃ" ಅಂದರೆ ಕಾವ್ಯಾಭ್ಯಾಸದಿಂದ ಮನಸ್ಸೆಂಬ ಕನ್ನಡಿಯು ನಿರ್ಮಲವಾಗಿ ವರ್ಣನೀಯ ವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಿಗಿದೆಯೋ ಅವರೇ ಕವಿಹೃದಯಕ್ಕೆ ಸಮಾನ ಹೃದಯಸಂವಾದವುಳ್ಳ ಸಹೃದಯರು.


ಮೂರ್ತಗೊಳಿಸಿದ್ದನ್ನು ಕೃತಿಯ ಮೂಲಕ ತನ್ನ ಅನುಭವವಾಗಿಸಿಕೊಳ್ಳುವ  ಸಹೃದಯರಿಗೂ  ಪ್ರತಿಭೆ ಅಗತ್ಯ. ಕವಿಯ ಸೂಕ್ಷ್ಮಾನುಭವಗಳು ಸೂಚ್ಯವಾಗಿ ಧ್ವನಿಪೂರ್ಣ ಶಬ್ದಗಳಲ್ಲಿ ಅಡಕಗೊಂಡಿರುತ್ತವೆ. ಆ ಮಾತುಗಳ ಶಕ್ತಿಯಿಂದ ಅನುಭವದ ಅನೇಕ ಪದರುಗಳನ್ನು ಗುರುತಿಸುವ ಇವನ ಆಸ್ವಾದನ ಕ್ರಿಯೆಯೂ ಸೃಷ್ಟಿಕ್ರಿಯೆಯಂತೆ ವಿಶಿಷ್ಟ ಶಕ್ತಿಯಿಂದ ಮಾತ್ರವೇ ಸಾಧ್ಯ ಎಂಬುದನ್ನು ಆನಂದವರ್ಧನ ಒತ್ತಿ ಹೇಳಿದ್ದಾನೆ. ಈ ಶಕ್ತಿಯನ್ನು ಅಭಿನವಗುಪ್ತ ಪ್ರತಿಭಾ ಎಂದು ಗುರುತಿಸುತ್ತಾನೆ. ಕವಿಪ್ರತಿಭೆಗೆ ಸಮಾನವಲ್ಲದಿದ್ದರೂ ಇದು ಸಹೃದಯನ ಆಸ್ವಾದನ ಸಾಮರ್ಥ್ಯಕ್ಕೆ ಸಹಾಯವಾದ ಅನುಸೃಷ್ಟಿಶೀಲ ಪ್ರತಿಭೆ ಎನಿಸಿಕೊಳ್ಳುತ್ತದೆ. ರಾಜಶೇಖರನೆಂಬ ಕಾವ್ಯ ಮೀಮಾಂಸಕ ಈ ಎರಡೂ ರೀತಿಯ ಪ್ರತಿಭೆಗಳನ್ನು ಗುರುತಿಸಿ ಕವಿಪ್ರತಿಭೆಯನ್ನು ಕಾರಯಿತ್ರೀ ಎಂದೂ ಸಹೃದಯನ ಪ್ರತಿಭೆಯನ್ನು ಭಾವಯಿತ್ರೀ ಎಂದೂ ಕರೆದಿದ್ದಾನೆ. ಪಾಶ್ಚಾತ್ಯ ಮೀಮಾಂಸಕರು ಕೊಡುವ ಓದುಗನ ಪರಿಕಲ್ಪನೆಯೂ ಸಹೃದಯ ಪರಿಕಲ್ಪನೆಗೆ ಸಂವಾದಿಯಾಗಿದೆ.


ಸಿಹಿಜೀವಿ ವೆಂಕಟೇಶ್ವರ


12 ಮಾರ್ಚ್ 2025

ಡೈರಿ ಮಿಲ್ಕ್ . ಹನಿಗವನ

 




ಡೈರಿ ಮಿಲ್ಕ್


ಲವ್ ಮಾಡುವಾಗ 

ಅವನು ಅವಳಿಗೆ

ದಿನವೂ ತಂದು ಕೊಡುತ್ತಿದ್ದ 

ಡೈರಿ ಮಿಲ್ಕು|

ಮದುವೆಯಾದ ನಂತರ 

ಈಗ ತಂದುಕೊಡುತ್ತಿದ್ದಾನೆ

ಡೈಲಿ ಮಿಲ್ಕು||


ಸಿಹಿಜೀವಿ ವೆಂಕಟೇಶ್ವರ

07 ಮಾರ್ಚ್ 2025

ಸಿಹಿಜೀವಿಯ ಹನಿ.

 

ಬೇರೆಯವರ ಜೀವನದಲ್ಲಿ ನೀವು

ನೀಡದಿದ್ದರೂ ಪರವಾಗಿಲ್ಲ ಅಕ್ಕರೆ|

ಆದರೆ ಉಳಿಸಿ ಹೋಗದಿರಿ ಮನದಲ್ಲಿ

ಮಾಯಲಾಗದ ಗಾಯದ ಬರೆ|

28 ಫೆಬ್ರವರಿ 2025

ಕಂಬನಿಯ ಕುಯಿಲು ಪುಸ್ತಕ ಪರಿಚಯ.


 


ಕಂಬನಿಯ ಕುಯಿಲು..


ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಶಾ ಮಂ ಕೃಷ್ಣ ರಾಯರವರ ಸಂಪಾದಕತ್ವದ ತ ರಾ ಸು ಸಾಹಿತ್ಯ ಸಂಪದ ಸಂಪುಟ ಒಂದರ ಐತಿಹಾಸಿಕ ಕಾದಂಬರಿಗಳ ಸೆಟ್ ನಲ್ಲಿ ಮೂರು ಕಾದಂಬರಿಗಳಲ್ಲಿ.   ಎರಡನೇ ಕಾದಂಬರಿ "ಕಂಬನಿಯ ಕುಯಿಲು" ಕಾದಂಬರಿಯನ್ನು ಶಿವರಾತ್ರಿ ಜಾಗರಣೆ ಮಾಡುತ್ತಾ ಓದಿದೆ.


ಮದಕರಿನಾಯಕರ ಮರಣದ ಶೋಕದಿಂದ ಮೊದಲುಗೊಳ್ಳುವ ಕಾದಂಬರಿಯು ಗೌರವ್ವನಾಗತಿಯು ತನ್ನ ಹಠದಿಂದಾಗಿ ಸಹಗಮನಕ್ಕೆ ಸಿದ್ದವಾಗಿರುವ ಹಿರಿಯ ಓಬವ್ವನಾಗತಿಯ ಮೇಲೆ ದುರ್ಗದ ಭವಿಷ್ಯದ ಭಾರ ಹಾಕಿ ತಾನು ಸಹಗಮನ ಮಾಡುತ್ತಾಳೆ. ಇಹಲೋಕದ ಬಂಧನಗಳಿಂದ ಮುಕ್ತಳಾಗಿ ಸ್ವರ್ಗ ಸೇರುವ ಆತುರದಲ್ಲಿದ್ದ ಓಬವ್ವನಾಗತಿಗೆ ಬಿದ್ದ ಕರ್ತವ್ಯ ನಿರ್ವಹಿಸುವಾಗ ಇನ್ನೇನು ಎಲ್ಲಾ ತಾವಂದುಕೊಂಡಂತೆ   ಮದಕರಿನಾಯಕರ   ಆಸೆಯ ಈಡೇರಿಕೆಯಾಯಿತು ಎನ್ನುವಾಗ ಬರುವ ವಿವಿಧ ವಿಘ್ನಗಳನ್ನು ಭುವನಪ್ಪ, ಕಸ್ತೂರಿ ನಾಯಕ, ಗಿರಿಜೆ ಮುಂತಾದವರ ಬೆಂಬಲದಿಂದ ಚಾಕಚಕ್ಯತೆಯಿಂದ ನಿಭಾಯಿಸಿದರೂ ಕೊನೆಗೆ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡದ್ದು ಓದುವಾಗ ಕಂಬನಿ ಬೀಳುತ್ತದೆ.

 

ಲಿಂಗಪ್ಪನಾಯಕರ ಮಾತೃಪ್ರೇಮ, ತ್ಯಾಗಗಳ ಬಗ್ಗೆ ಓದುವಾಗ ಮನ ನೋಯುತ್ತದೆ. ಭುವನಪ್ಪನವರಿಗೆ ದುರ್ಗದ ಮೇಲಿರುವ ಅಪಾರ ನಿಷ್ಠೆಯಿಂದ ಆಗಲಿರುವ ಅನಾಹತ  ತಪ್ಪಿಸಲು ಶತಾಯಗತಾಯ ಪ್ರಯತ್ನ ಮಾಡುವ ಜೊತೆಯಲ್ಲಿ ತನ್ನ  ಪ್ರಧಾನಿ ಹುದ್ದೆಯನ್ನು ರಾಜ್ಯದ ಒಳಿತಿಗಾಗಿ ತ್ಯಾಗ ಮಾಡಿದರೂ ಕೊನೆಗೆ ತಮ್ಮ ಕೈ ಮೀರಿ ಒಳಶತೃಗಳ ಪಿತೂರಿಗೆ ಪ್ರಾಣ ಅರ್ಪಿಸಿದ್ದನ್ನು ಓದುವಾಗ ಕಂಬನಿ ಹನಿಯುತ್ತದೆ.

  ನ್ಯಾಯದ ಹೆಸರಿನಲ್ಲಿ ದ್ವೇಷ,ಕಠೋರತೆ, ಹಠಗಳೇ ರೂಪವೆತ್ತಂತೆ ನಿಲ್ಲುವ ದಳವಾಯಿ ಮುದ್ದಣ್ಣ ಖಳನಾಯಕನ ಕುತಂತ್ರಗಳನ್ನು ಓದುವಾದ ಮೈ ಉರಿಯುತ್ತದೆ.  ತನ್ನ ಅಸಮಾಧಾನದ ಸಣ್ಣ ಕಿಡಿಯಿಂದ ಆರಂಭವಾದ ಒಳಸಂಚು ದುರ್ಗವನ್ನೇ ದಹಿಸುವಾಗ ಅದನ್ನು ಹಿಡಿತಕ್ಕೆ ತರಲಾಗದೇ ತಾವೇ ಬೆಂದು ಮಾರಣಹೋಮಕ್ಕೆ ಮೊದಲ ಬಲಿಯಾಗುವ ದಳವಾಯಿ ದೇಸಣ್ಣನ ರುಂಡ ಎಗರುವಾಗ ಭಯವಾಗುತ್ತದೆ.

  ದುರ್ಗದ ಅಂತಃಕಲಹದಲ್ಲಿ ಕರ್ತವ್ಯ ನಿಷ್ಠೆಗೆ ಹೆಸರಾದ   ಗಿರಿಜವ್ವ ತದ್ವಿರುದ್ಧವಾದ ಗುಣಗಳ   ವೀರನಾಯಕನ ದುರಂತ ಅಂತ್ಯವನ್ನು ಓದುವಾಗ ನಮ್ಮ ಅಳು ತಡೆಯುವುದು ಕಷ್ಟ.

 ಕಸ್ತೂರಿನಾಯಕ ದುರ್ಗದ ನಾಯಕರ ಪ್ರಾಣ ರಕ್ಷಣಾ ಕವಚ.ಆದರೂ ನಾಯಕರ ಸಾವಿನ ಸುದ್ದಿ ತಿಳಿದು ತನ್ನ ಆತ್ಮಹುತಿ ಮಾಡಿಕೊಳ್ಳುವುದು ನೋಡಿ ಮನ ಮಿಡಿಯುತ್ತದೆ. 

ಈ ಕಾದಂಬರಿ ಓದುವಾಗ  ರಾಜ್ಯ, ಅರಮನೆ, ವೈಭವ, ಅಧಿಕಾರಗಳ ಬಗ್ಗೆ ಜಿಗುಪ್ಸೆ ಮೂಡಿಸುತ್ತದೆ.  

ಕಾದಂಬರಿ ಓದಿ ಮುಗಿಸಿದ ಎರಡು ಮೂರು ದಿನ ಒಂದು ರೀತಿಯ ಬೇಸರ ಆವರಿಸುವುದು ಸತ್ಯ. ಅಷ್ಟು ಪರಿಣಾಮಕಾರಿಯಾಗಿ ದುರ್ಗದ ಇತಿಹಾಸದ ಹಿನ್ನೆಲೆಯಲ್ಲಿ ಕಾದಂಬರಿ ರಚಿಸಿದ   ತ ರಾ ಸು ರವರ ಪ್ರತಿಭೆಯನ್ನು ಎಷ್ಟು ಹೊಗಳಿದರೂ ಸಾಲದು. ಅವರ ಮತ್ತೊಂದು ಕಾದಂಬರಿ "ರಾಜ್ಯ ದಾಹ " ಓದಿ ಮತ್ತೆ ಸಿಗುತ್ತೇನೆ

ಧನ್ಯವಾದಗಳು

ನಿಮಗೆ ತ ರಾ ಸು ರವರ ಯಾವ ಕಾದಂಬರಿ ಇಷ್ಟ ಎಂದು ಹೇಳಬಹುದು.


ಸಿಹಿಜೀವಿ ವೆಂಕಟೇಶ್ವರ


27 ಫೆಬ್ರವರಿ 2025

ಜ್ಞಾನಾಮೃತ ಉಣಬಡಿಸಲು ಸಿದ್ಧವಾಗುತ್ತಿರುವ ಶಿವಶರಣರ ವಚನಾಮೃತ ಮಂಟಪ.

 




ಜ್ಞಾನಾಮೃತ ಉಣಬಡಿಸಲು ಸಿದ್ಧವಾಗುತ್ತಿರುವ   ಶಿವಶರಣರ ವಚನಾಮೃತ ಮಂಟಪ.


ಪುರಾತನ ಕಾಲದಿಂದಲೂ ದೇವಾಲಯಗಳು ಭಕ್ತಿಯ ಸ್ಥಳಗಳೂ ಆಗಿ ಕೆಲವೊಮ್ಮೆ ಮನರಂಜನಾ ತಾಣಗಳಾಗಿಯೂ ಗುರುತಿಸಲ್ಪಟ್ಟಿದ್ದವು.ದೇವಾಲಯಗಳಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಹಿಂದಿನ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದವು.ಮನರಂಜನಾ ಪರಿಕಲ್ಪನೆ ಮತ್ತು ವ್ಯಾಪ್ತಿ ಬದಲಾದ ಕಾಲಘಟ್ಟದಲ್ಲಿ ಮನರಂಜನೆಗೆ ಇತರೆ ಮಾಧ್ಯಮಗಳ ಭರಪೂರ ಬೆಳವಣಿಗೆಯ ನಂತರ ದೇವಾಲಯಗಳು ಕೇವಲ ಭಕ್ತಿಯ ತಾಣಗಳಾದವು.ಕೆಲ ದೇವಾಲಯಗಳು ಜ್ಞಾನ ಪಸರಿಸುವ ತಾಣಗಳಾಗಿ‌‌ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದ್ದವು. ಅಲ್ಲಿ ವೇದ,ಉಪನಿಷತ್ ಮುಂತಾದವುಗಳ  ಕಲಿಕೆ  ನಡೆಯುತ್ತಿತ್ತು. ಈಗಲೂ ಕೆಲ ದೇವಾಲಯಗಳು ಜ್ಞಾನ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.ಅಂತಹ ದೇವಾಲಯಗಳಲ್ಲಿ 





ಸಿದ್ದರಾಮೇಶ್ವರ75 ನೇ ಗದ್ದುಗೆಯಿರುವ ಬೆಳಗುಂಬದ ದೇವಾಲಯ ಭಕ್ತರ ಮತ್ತು ಜ್ಞಾನಾರ್ಥಿಗಳ ಗಮನ ಸೆಳೆಯುತ್ತಿದೆ.

ಆತ್ಮೀಯರು, ಸಹೋದ್ಯೋಗಿಗಳು ಹಾಗೂ  ಕಲಾವಿದರಾದ ಕೋಟೆ ಕುಮಾರ್ ರವರೊಂದಿಗೆ ಇತ್ತೀಚಿಗೆ ಈ ದೇವಾಲಯಕ್ಕೆ ಭೇಟಿ ನೀಡಿ ಕಳೆದ ವರ್ಷ ಜೀರ್ಣೋದ್ಧಾರಗೊಂಡ ದೇವಾಲಯದಲ್ಲಿ  ಸಿದ್ದರಾಮೇಶ್ವರ ಸ್ವಾಮಿಯ ದರ್ಶನ ಪಡೆದು ಹೊರಬಂದಾಗ  ನಮ್ಮನ್ನು ಸೆಳೆದ ಮಂದಿರವೇ "ಶಿವ ಶರಣರ ವಚನಾಮೃತ" ಎಂಬ ಹೆಸರಿನ ಈ ಕಿರುಮಂಟಪ.

ಇದನ್ನು ತುಮಕೂರಿನ ಶ್ರೀ ಜಗಜ್ಯೋತಿ   ಬಸವೇಶ್ವರ ಟ್ರಸ್ಟ್ ನವರು ನಿರ್ಮಿಸಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಹಿರಿಯ ಗಾಂಧೀವಾದಿ ಶ್ರೀ ಎಂ  ಬಸವಯ್ಯರವರ ಮುಂದಾಳತ್ವದಲ್ಲಿ ಪೌಳಿಶಂಕರಾನಂದಪ್ಪ ಮುಂತಾದವರ ಸಕಾರಾತ್ಮಕ ಯೋಚನೆಯ ಫಲವಾಗಿ  ಒಂದು ಸುಂದರವಾದ ಜ್ಞಾನ ಮಂಟಪ ತಲೆ ಎತ್ತಿದೆ.ಎರಡು ಭಾಗದಲ್ಲಿ ಇರುವ ಈ ವಚನಾಮೃತ ಮಂಟಪದಲ್ಲಿ  ವಚನ ಪಿತಾಮಹ ಫ ಗು ಹಳಕಟ್ಟಿ ಅವರ ಭಾವಚಿತ್ರ ಇಟ್ಟು ಅವರಿಗೆ ಗೌರವ ಸೂಚಿಸಲಾಗಿದೆ. ಬಸವಣ್ಣನವರಾದಿಯಾಗಿ ಹನ್ನೆರಡನೆಯ ಶತಮಾನದಿಂದ ಆರಂಭವಾಗಿ ಇಪ್ಪತ್ತೊಂದನೇ ಶತಮಾನದ ಶರಣರೂ  ಸೇರಿದಂತೆ  ಒಟ್ಟು 64  ಶಿವಶರಣರ ವಚನಗಳು ನಮ್ಮನ್ನು ಇಲ್ಲಿ ಶರಣು ಬನ್ನಿ ಎನ್ನುತ್ತಾ ಸ್ವಾಗತಿಸುತ್ತವೆ. 

 ವಚನಾಮೃತ ಮಂಟಪವು ಅನುಭವ ಮಂಟಪದ ಹಾಗೆ ಗೋಚರಿಸುತ್ತದೆ. ಭಕ್ತಿ ಹಾಗೂ ಜ್ಞಾನದ ಸಂಗಮವಾದ ಇಂಥಹ ಮಂದಿರಗಳು ನಾಡಿನಾದ್ಯಂತ ಹೆಚ್ಚಾಗಲಿ ತನ್ಮೂಲಕ ಜಂಜಡದ ಈ ಕಾಲದಲ್ಲಿ  ಜನರಿಗೆ ಶಾಂತಿ ನೆಮ್ಮದಿಯ ಜೊತೆಯಲ್ಲಿ ಜ್ಞಾನ ಲಭಿಸಲಿ ಎಂದು ಕಲಾವಿದರಾದ ಕೋಟೆ ಕುಮಾರ್ ರವರು ಅಭಿಪ್ರಾಯ ಪಟ್ಟರು.



ಬಸವಣ್ಣ, ಚನ್ನಬಸವೇಶ್ವರ, ಅಕ್ಕಮಹಾದೇವಿ, ಎಡೆಯೂರು ಸಿದ್ಧಲಿಂಗೇಶ್ವರ,ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ, ಕೂಗಿನ ಮಾರಯ್ಯ, ಬಹುರೂಪಿ ಚೌಡಯ್ಯ, ಮರುಳ ಶಂಕರದೇವ, ಕುರುಬ ಗೊಲ್ಲಾಳ, ಕಲ್ಬುರ್ಗಿ ಸಂಗನ ಬಸವೇಶ್ವರ, ಮಾತೆ ಮಹದೇವಿ, ಉದ್ದಾನೇಶ್ವರ  ಶಿವಯೋಗಿಗಳು, ಹಾನಗಲ್ ಕುಮಾರ ಸ್ವಾಮಿ, ಸರ್ವಜ್ಞ, ಅಲ್ಲಮಪ್ರಭು, ಸಿದ್ದರಾಮೇಶ್ವರ, ಮುಂತಾದ ಶರಣರ ಹಾಗೂ ವಚನಕಾರರ ಭಾವಚಿತ್ರ ಸಹಿತವಾಗಿ ಪ್ರಮುಖ 85 ವಚನಗಳನ್ನು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿದ್ದಾರೆ.

21 ನೇ ಶತಮಾನದ  ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು, ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರ ಸಮೇತ  ವಚನಗಳು ಭಕ್ತರ ಮತ್ತು ಜ್ಞಾನಾರ್ಥಿಗಳನ್ನು ಸೆಳೆಯುತ್ತಿವೆ.

ಇತ್ತೀಚಿಗೆ ಈ ಮಂಟಪ ನಿರ್ಮಾಣವಾಗಿರುವುದನ್ನು ತಿಳಿದು ದೇವಾಲಯಕ್ಕೆ ಆಗಮಿಸುವ ಭಕ್ತರು ಉದ್ಘಾಟನೆಗೆ ಸಿದ್ದವಾಗಿರುವ ಈ ಮಂಟಪವನ್ನು ನೋಡಿ ಬಹಳ ಸಂತಸ ವ್ಯಕ್ತಪಡಿಸುತ್ತಾರೆ ಎಂದು

ಬೆಳಗುಂಬದ ಶ್ರೀ ಸಿದ್ದರಾಮೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀಶಾಂತಮಲ್ಲೇಶಯ್ಯ ರವರು ಮಾಹಿತಿ ನೀಡಿದರು.

ಶೀಘ್ರದಲ್ಲೇ ಈ ಶಿವಶರಣರ ವಚನಾಮೃತ ಮಂಟಪವು ಅಧಿಕೃತವಾಗಿ ಉದ್ಘಾಟನೆಯಾಗಲಿದೆ.ಇದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ಜೊತೆಯಲ್ಲಿ ಜನರಲ್ಲಿ ಭಕ್ತಿ ಮತ್ತು ಜ್ಞಾನ ಪಸರಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಪ್ರಯತ್ನಗಳು ನಾಡಿನೆಲ್ಲಡೆ ಆಗಲಿ ಎಂಬುದು ಎಲ್ಲ ಜ್ಞಾನಾರ್ಥಿಗಳ ಬಯಕೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

9900925529