31 ಮಾರ್ಚ್ 2024

ಹತ್ತನೇ ತರಗತಿ ಜಸ್ಟ್ ಪಾಸ್, ಇಂದು ಡಿ ಸಿ.

 


ಹತ್ತನೇ ತರಗತಿ ಜಸ್ಟ್ ಪಾಸ್, ಇಂದು ಡಿ ಸಿ.



ಹತ್ತನೇ ತರಗತಿ ಮತ್ತು ಪಿ ಯು ಸಿ ಗಳಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ಚೆನ್ನಾಗಿ ಓದುವ ಮಕ್ಕಳನ್ನು ಹುರಿದುಂಬಿಸುವ ಶಿಕ್ಷಕರು ಕಡಿಮೆ ಅಂಕಗಳನ್ನು ಗಳಿಸುವ ಮಕ್ಕಳನ್ನು ಕೆಲ ಶಿಕ್ಷಕರು ಅಷ್ಟೇ ಬಿಡು ನಿನ್ನ ಹಣೆಬರಹ ಎಂದು ಷರಾ ಬರೆದಬಿಡುವರು.ಆದರೆ ಇಲ್ಲೊಬ್ಬ ಸಾಧಕ ಹತ್ತನೆಯ ತಎರಗತಿಯಲ್ಲಿ ದಿದ್ದಾರಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳಲ್ಲಿ ಕೇವಲ 35 ಅಂಕಗಳಿಸಿ ಪಾಸಾದವರು ಈಗ ಭಾರತದ ಅತ್ಯುನ್ನತ ಪರೀಕ್ಷೆಯಾದ ನಾಗರೀಕ ಸೇವಾ ಪರೀಕ್ಷೆ ಪಾಸ ಮಾಡಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರೇ ಶ್ರೀ 

ತುಷಾರ್ ಸುಮೇರಾ 


ಅವರ ಜೀವನ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ಇವರು 2012ರ ಬ್ಯಾಚ್ನ ಐಎಎಸ್ ಅಧಿಕಾರಿ. ಪ್ರಸ್ತುತ ಗುಜರಾತ್ನ ಭರೂಚ್ನ ಕಲೆಕ್ಟರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಅವರ 10 ನೇ ತರಗತಿಯ ಅಂಕಪಟ್ಟಿ ಬಹಳ ವೈರಲ್ ಆಗಿತ್ತು. ತುಷಾರ್ ಸುಮೇರಾ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನದಲ್ಲಿ ಕೇವಲ ಉತ್ತೀರ್ಣ ಅಂಕಗಳನ್ನಷ್ಟೇ ಗಳಿಸಿದ್ದರು. ಆದರೆ ವಿಶ್ವದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಯನ್ನು ಪಾಸ್ ಮಾಡಿ ಯಶಸ್ವಿಯಾಗಿದ್ದಾರೆ.

 ಕಳೆದ ವರ್ಷ ತುಷಾರ್ ಸುಮೇರಾ ಅವರ 10 ನೇ ತರಗತಿಯ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿತ್ತು.  ಅದರಲ್ಲಿ ಅವರು ಇಂಗ್ಲಿಷ್ನಲ್ಲಿ 35, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ ಕೇವಲ 38 ಅಂಕಗಳನ್ನು ಗಳಿಸಿದ್ದಾರೆ.  

ಆರಂಭದಲ್ಲಿ ಸರಾಸರಿಗಿಂತ ಕಡಿಮೆ ವಿದ್ಯಾರ್ಥಿಯಾಗಿದ್ದರೂ, ಅವರು UPSC ಉತ್ತೀರ್ಣರಾಗಿರುವುದು ದೊಡ್ಡ ಸಾಧನೆಯಾಗಿದೆ.   100ರಲ್ಲಿ ಇಂಗ್ಲಿಷ್ನಲ್ಲಿ 35 ಮತ್ತು ಗಣಿತದಲ್ಲಿ 36 ಅಂಕಗಳನ್ನು ಪಡೆದಾಗ ಇಡೀ ಊರ ಜನರು ಮತ್ತು  ಶಾಲೆಯಲ್ಲಿ ಶಿಕ್ಷಕರು ಎಂದಿನಂತೆ ಸಿದ್ದ ಮಾದರಿಯ ಬೈಗುಳ ಸುರಿಸಿ ನೀನು ಭವಿಷ್ಯದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದಿದ್ದರು.  

ತುಷಾರ್ ಸುಮೇರಾ ಅವರು ಕಲಾ ಪದವಿ ಪಡೆದ ನಂತರ ಶಿಕ್ಷಕರಾಗಿ ಕೆಲಸ ಮಾಡಿದರು. ಅವರು 2012 ರಲ್ಲಿ UPSC ಬರೆದು ಪಾಸ್ ಆದರು.

ಅದೇ ಊರ ಜನ ಇವರನ್ನು ಕರೆದು ಸನ್ಮಾನ ಮಾಡಿದರು. ಅವರ ಸ್ವಯಂ ಅಧ್ಯಯನ, ಸತತ ಪ್ರಯತ್ನದಿಂದಲೇ ಯಶಸ್ಸು ಪಡೆದು ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಕಡಿಮೆ ಅಂಕ ಪಡೆದಾಗ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ವಿದ್ಯಾರ್ಥಿಗಳು, ಯಾವುದೋ ಕಾರಣದಿಂದಾಗಿ ಮಕ್ಕಳು ಚೆನ್ನಾಗಿ ಓದದೇ ಇರುವಾಗ ಅನವಶ್ಯಕ ಟೀಕೆ ಮಾಡಿ ನಿಷ್ಪ್ರಯೋಜಕ ಎಂಬ ಬಿರುದು ನೀಡುವ ಪಾಲಕರು ತುಷಾರ್ ರವರ ಜೀವನದ ಯಶೋಗಾಥೆಯನ್ನು ಒಮ್ಮೆ ಓದಲೇಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


ಕಲ್ಮುರುಡೇಶ್ವರನ ಬಿಲ್ವ ವನ




 


ಕಲ್ಮುರುಡೇಶ್ವರನ ಬಿಲ್ವ ವನ  


ಚಿಕ್ಕಮಗಳೂರಿನ ನಿಸರ್ಗದ ಒಡಲಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಹೊರಟ ನಮ್ಮ ಸಮಾನ ಮನಸ್ಕ ತಂಡ ಮೊದಲು ಭೇಟಿ ನೀಡಿದ್ದು ಕಡೂರು ತಾಲೂಕಿನ ಸಖರಾಯಪಟ್ಟಣದ " ಕಲ್ಮುರುಡೇಶ್ವರ ದೇವಾಲಯ " ಕ್ಕೆ  ದೇವಾಲಯದ ಶಿಲ್ಪಕಲೆ ವಿಶೇಷವಾಗಿ ನಮ್ಮ ಕಣ್ಮನ ಸೆಳೆಯುತ್ತದೆ. ದೇವರ ಆಶೀರ್ವಾದ ಪಡೆದು ಹೊರಬಂದ ನಮಗೆ ಮತ್ತೊಂದು ಅಚ್ಚರಿ ಕಾದಿತ್ತು! ದೇವಳದ ಸುತ್ತಲೂ ಎತ್ತ ನೋಡಿದಡತ್ತ ಬಿಲ್ವ ಪತ್ರೆ ಮರಗಳು.ಒಂದಲ್ಲ ಎರಡಲ್ಲ ನೂರಲ್ಲ  ಹತ್ತತ್ತರ ಸಾವಿರ ಬಿಲ್ವ ಮರಗಳು ಅಲ್ಲಿ ಕಾಣಸಿಗುತ್ತವೆ ಎಂದು ಸ್ಥಳೀಯರು ಮಾಹಿತಿಯನ್ನು ನೀಡಿದರು.

ಈ   ಬಿಲ್ವಪತ್ರೆ ಮರಗಳನ್ನ ಯಾರೊಬ್ಬರು ನೆಟ್ಟಿಲ್ಲ, ಬೆಳೆಸಿಲ್ಲ. ಈ ಬಿಲ್ವಪತ್ರೆಯ ಪಾರ್ಕ್ ಶಿವನ ತವರೆಂಬುದು ಭಕ್ತರ ನಂಬಿಕೆ. ಈ 

ಬಿಲ್ವಪತ್ರೆಯ ವನ ಹುಟ್ಟಿರೋದಕ್ಕೆ ಒಬ್ಬೊಬ್ಬರು ಒಂದೊಂದು ಕಥೆ ಹೇಳುತ್ತಾರೆ. ಸುಮಾರು 800 ವರ್ಷಗಳ ಹಿಂದೆ ಸನ್ಯಾಸಿಯೊಬ್ಬರು ಇಲ್ಲಿನ ಮಠದ ಬಳಿ ತಪಸ್ಸಿಗೆ ಕುಳಿತ್ತಿದ್ದರಂತೆ   ಆಗ ಪ್ರಶಾಂತತೆಗಾಗಿ ತನ್ನ ಕೊರಳಲ್ಲಿದ್ದ ರುದ್ರಾಕ್ಷಿ ಸರವನ್ನ ಋಷಿ ಮುನಿಗಳು ಚಿಮ್ಮಿದರಂತೆ, ಇದರಿಂದ ಬಿದ್ದ ರುದ್ರಾಕ್ಷಿಗಳಿಂದಲೇ ಸಾವಿರಾರು ಬಿಲ್ವಪತ್ರೆಯ ಮರಗಳು ಬೆಳೆದು ನಿಂತು, ಬಿಲ್ವವನ ನಿರ್ಮಾಣವಾಯಿತೆಂಬುದು ಸ್ಥಳಿಯ ನಂಬಿಕೆ. ಇನ್ನೂ ಹಲವರು ವೀರಶೈವ ಧರ್ಮದ ಗುರುಗಳಾದ ಮರುಳಸಿದ್ದರು ಇಲ್ಲಿ ಐಕ್ಯರಾಗಿರುವುದರಿಂದ ಕಲ್ಮರಡಿ ಮಠದ ಸುತ್ತಲೂ ಬಿಲ್ವಮರಗಳು ಬೆಳೆದು ನಿಂತಿವೆ ಎಂದು ನಂಬಿಕೊಂಡಿದ್ದಾರೆ. ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರೋ ಇಲ್ಲಿನ ಬಿಲ್ವಮರಗಳನ್ನ ಯಾರೂ ಎಣಿಸಬಾರದಂತೆ. ಹಿರಿಯರ ಪ್ರಕಾರದ ಇಲ್ಲಿನ ಮರಗಳನ್ನ ಯಾರೂ ನೆಟ್ಟು ಬೆಳೆಸಿದ್ದಲ್ಲವಂತೆ. ಜೊತೆಗೆ ಇಲ್ಲಿರೊ ಮರಗಳಿಗೆ ಯಾರೂ ಗೊಬ್ಬರ, ನೀರನ್ನ ಹಾಕಿ ಪೋಷಣೆ ಮಾಡುತ್ತಿಲ್ಲ. ಆದರೂ ಕೂಡ ಇಲ್ಲಿ ಬಿಲ್ವ ಮರಗಳು ಬೃಹದಾಕಾರವಾಗಿ ಬೆಳೆದು ನಿಂತಿವೆ. 

  ಕಲ್ಮರಡಿ ಮಠದಲ್ಲಿ ದೈವಿ ಶಕ್ತಿಯಿಂದ ಬಿಲ್ವಮರಗಳು ಹುಟ್ಟಿಕೊಂಡಿವೆ ಎಂಬುದು ಭಕ್ತರ ನಂಬಿಕೆ. ಆದ್ರೆ, ಮಣ್ಣಿನಲ್ಲಿ ಹೆಚ್ಚು ಗಂಧಕದ ಅಂಶವಿರುವಲ್ಲಿ ಈ ಅಪರೂಪದ ಮರಗಳು ಹುಟ್ಟಿ ಬೆಳೆಯುತ್ತವೆ ಅನ್ನೋದು ವೈಜ್ಞಾನಿಕ ಕಾರಣ. ಆದ್ರೆ, ಈ ಮರಗಳನ್ನ ಜನಸಾಮಾನ್ಯರು ನೆಟ್ಟಿ ಬೆಳೆಸೋದು ಅಸಾಧ್ಯ. ಈ ಮರದಡಿಯಲ್ಲಿ ವಿಹರಿಸಿದರೆ ಆರೋಗ್ಯ ವೃದ್ಧಿಯಾಗುತ್ತಂತೆ. ನಾವು ಸಹ ಕೆಲ ಕಾಲ ಆ ವನದಲ್ಲಿ ವಿಹರಿಸಿದೆವು.  ಸುತ್ತಮುತ್ತಲಿನ ಜನರು ಮತ್ತು ಭಕ್ತರು ತಮ್ಮ ವಿಶ್ರಾಂತಿ ಸಮಯದಲ್ಲೆಲ್ಲಾ ಇಲ್ಲಿಗೆ ಬಂದು ವಿಹರಿಸುತ್ತಾರೆ. ಕಲ್ಮುರುಡೇಶ್ವರ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸುತ್ತಾನೆ ಎಂಬ ನಂಬಿಕೆ. ಅದಕ್ಕಾಗಿಯೇ ದೂರದೂರಿಂದಲೂ ಭಕ್ತರ ದಂಡೇ ಹರಿದುಬರುತ್ತಿದೆ. ಶಿವಪೂಜೆಗೆ ಬಿಲ್ವಪತ್ರೆ ಶ್ರೇಷ್ಠವಾಗಿರೋದ್ರಿಂದ ಶಿವರಾತ್ರಿಯಂದು ಭಕ್ತರು ಬಿಲ್ವಪತ್ರೆಯ ಮರವೇರಿ ಪತ್ರೆಯನ್ನ ಕೊಯ್ದು ದೇವರಿಗೆ ಸಮರ್ಪಿಸಿ ಧನ್ಯತಾ ಭಾವ ವ್ಯಕ್ತಪಡಿಸುತ್ತಾರೆ.

ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿರೋ ಕಲ್ಮರಡಿ ಮಠಕ್ಕೆ ಕೇವಲ ಚಿಕ್ಕಮಗಳೂರಿನ ಭಕ್ತರಷ್ಟೆ ಇಲ್ಲ. ರಾಜ್ಯದ ಮೂಲೆ-ಮೂಲೆಗಳಿಂದಲೂ ಭಕ್ತರ ಮಾಹಾಪುರವೇ ಹರಿದು ಬರುತ್ತಿದೆ. ಸಖರಾಯಪಟ್ಟಣ ಸುತ್ತಮುತ್ತಲಿನ ಗ್ರಾಮಸ್ಥರು ಯಾವುದೇ ಕೆಲಸ ಮಾಡಬೇಕಾದರೂ ಕಲ್ಮುರುಡೇಶ್ವರ ಪ್ರಸಾದ ಪಡೆದು, ಅನುಮತಿ ಕೇಳಿಯೇ ಮುಂದಿನ ಹೆಜ್ಜೆ ಇಡುವುದು. ಇನ್ನು ಕ್ಷೇತ್ರದಲ್ಲಿ ಮರುಳಸಿದ್ದೇಶ್ವರನೂ ಐಕ್ಯವಾಗಿರೋದ್ರಿಂದ ಕ್ಷೇತ್ರದಲ್ಲಿ ತ್ರಿಕಾಲ ಪೂಜೆ, ಕಾರ್ತಿಕಾ ಮಾಸದಲ್ಲಿ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯುತ್ತವೆ. ಇಲ್ಲಿನ ಕಲ್ಮುರುಡೇಶ್ವರನಿಗೆ ಭಕ್ತರು ಬಿಲ್ವಪತ್ರೆಯನ್ನ ಸಮರ್ಪಿಸಿ  ನಿತ್ಯವೂ  ಬಿಲ್ವಪತ್ರೆಯಿಂದಲೇ ಅಭಿಷೇಕ ಮಾಡುವರು.


ಅಲ್ಲದೇ ಬಿಲ್ವಪತ್ರೆಯನ್ನೇ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡ್ತಿರೋದು ಇಲ್ಲಿನ ಮತ್ತೊಂದು ವಿಶೇಷ. ಬಿಲ್ವವನದಲ್ಲಿರೋ ಪತ್ರೆಯನ್ನ ಕೊಯ್ದು ಇತರರಿಗೆ ದಾನ ಮಾಡಿದ್ರೆ ಒಳಿತಾಗುತ್ತೆಂಬುದು ಭಕ್ತರ ನಂಬಿಕೆ. ಅದಕ್ಕಾಗಿಯೇ ಚಿಕ್ಕಮಗಳೂರು, ಕಡೂರು ಸೇರಿದಂತೆ ಸುತ್ತಮುತ್ತಲಿನ ಜನ ವಾರಕ್ಕೊಮ್ಮೆ ಬಂದು ಪತ್ರೆ ಕೊಯ್ದು ದೇವಾಲಯ ಹಾಗೂ ನೆರೆಹೊರೆಯವರಿಗೆ ದಾನ ಮಾಡುತ್ತಾರೆ. ಶಿವರಾತ್ರಿಯ ದಿನದಂದು ಇಲ್ಲಿಗೆ ಬರೋ ಭಕ್ತರು ಬಿಲ್ವವನದಲ್ಲಿಯೇ ರಾತ್ರಿಯೆಲ್ಲಾ ಜಾಗರಣೆ ಮಾಡುತ್ತಾರೆ. ನೈಸರ್ಗಿಕವಾಗಿ ಬೆಳೆದಿರೋ ಬಿಲ್ವಪತ್ರೆ ವನ ವರ್ಷ ಕಳೆದಂತೆ ಸಮೃದ್ಧಿಯಾಗ್ತಿದೆ. ಬೇರೆಡೆ ಪಾಲನೆ-ಪೋಷಣೆ ಮಾಡಿದ್ರು ಬೆಳೆಯದ ಬಿಲ್ವಪತ್ರೆ ಮರಗಳು ಈ ನೆಲದಲ್ಲಿ ಸಾವಿರಾರು ಬೆಳೆದು ನಿಂತಿರೋದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.

ದೈವಿಕ ಮತ್ತು ಪ್ರಾಕೃತಿಕ ಶಿಲ್ಪಕಲಾ ಮಹತ್ವದ ಈ ತಾಣಕ್ಕೆ ನೀವು ಒಮ್ಮೆ ಭೇಟಿ ಕೊಡಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529





ಅತ್ತಿಗೆ, ನಾದಿನಿಯರು ಡಿಚ್ಚಿ ಹೊಡೆಯುವ ವಿಶಿಷ್ಟ ಆಚರಣೆ!


ಅತ್ತಿಗೆ, ನಾದಿನಿಯರು ಡಿಚ್ಚಿ ಹೊಡೆಯುವ ವಿಶಿಷ್ಟ ಆಚರಣೆ!



ಹಿರಿಯೂರು ತಾಲೂಕಿನ ಐಮಂಗಲ ಹೋಬಳಿ ಸಿ.ಎನ್. ಮಾಳಿಗೆ ಗ್ರಾಮದ ಅಹೋಬಲ ನರಸಿಂಹ ಸ್ವಾಮಿಯ ಕಾರ್ತೀಕ ಮಹೋತ್ಸವದ ಜಾತ್ರೆಯಲ್ಲಿ ಅತ್ತಿಗೆ, ನಾದಿನಿ ಯರು ಡಿಚ್ಚಿಹೊಡೆದುಕೊಳ್ಳುವ ವಿಶಿಷ್ಟ ಆಚರಣೆಯೊಂದು ಪ್ರತಿವರ್ಷವೂ ನಡೆಯುತ್ತದೆ.


ದೇವಸ್ಥಾನದ ಒಂದು ಬದಿ ಅತ್ತಿಗೆಯರು ಮತ್ತು ಇನ್ನೊಂದು ಬದಿ ನಾದಿನಿಯರು ನಿಂತು ಓಡಿ ಬಂದು ಡಿಚ್ಚಿ ಹೊಡೆದುಕೊಳ್ಳುವ ಸಂಪ್ರದಾಯ ಪ್ರತಿ ವರ್ಷದಂತೆ ಈ ವರ್ಷ ನಡೆಯಿತು. ಬುಡಕಟ್ಟು ಮೂಲ ನೆಲೆಯಿಂದಲೇ ಬಂದಿರುವ ದೈವಭಕ್ತಿ ನಂಬಿಕೆಯಲ್ಲಿ ಅತ್ತಿಗೆ ನಾದಿನಿಯ ಭಾಂದವ್ಯದ ಪ್ರತೀಕವಾಗಿ ಈ ಆಚರಣೆ. ರೂಢಿಗತವಾಗಿ ಬಂದಿದೆ.


ವಿವಾಹವಾಗಿ ಬೇರೆ ಊರಿಗೆ ಹೋಗಿರುವ ನಾದಿನಿ ಯರನ್ನು ಊರಿನ ಹೆಬ್ಬಾಗಿಲ ಬಳಿ ಮೆರವಣಿಗೆ ಮೂಲಕ ಕರೆ ತರುತ್ತಾರೆ. ಪರಸ್ಪರ ಎದುರುಗೊಂಡ ಅತ್ತಿಗೆ, ನಾದಿನಿ ಯರು ದೇವರಸಮ್ಮುಖದಲ್ಲಿ ಪ್ರೀತಿಯ ಅಪ್ಪುಗೆಯೊಂದಿಗೆ ಮೂರುಬಾರಿ ತಲೆಯಲ್ಲಿ ಪರಸ್ಪರ ಡಿಚ್ಚಿಹೊಡೆದುಕೊಳ್ಳುವ

ಮೂಲಕ ತವರು ಮನೆ ಪ್ರೀತಿ ಗಟ್ಟಿಗೊಳಿಸಿಕೊಳ್ಳುತ್ತಾರೆ.


ಮಹಿಳೆಯರಮಧ್ಯೆ ಬರುವ ಸಣ್ಣಪುಟ್ಟಭಿನ್ನಾಭಿಪ್ರಾಯ ಮರೆತು ಒಂದಾಗಿ ಬಾಳುವ ರೂಪಕವಾಗಿ ಈ ಆಚರಣೆ ನಡೆದು ಬಂದಿದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಈ ಸಂಪ್ರದಾಯ ನಡೆಯುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

ಹಾಯ್ಕುಗಳು

  ಅಪ್ರಕಟಿತ

*ಹಾಯ್ಕುಗಳು*



ದಾನವನಾಗಿ

ದರ್ಪವ ತೋರದಿರು

ದಾನವ ಮಾಡು 



 ಉನ್ನತ ದರ್ಜೆ 

ಹಣದಿಂದ ಬರಲ್ಲ 

ವ್ಯಕ್ತಿತ್ವದಿಂದ 


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

ಮಾನವೀಯ ಗುಣಗಳ ಒರತೆ


ಮಾನವೀಯ ಗುಣಗಳ ಒರತೆ 


"ಕಾಲ ಕೆಟ್ಟೋಯ್ತು, ಮಾನವೀಯತೆಗೆ ಬೆಲೆ ಇಲ್ಲ. ಎಲ್ಲಾ ಸ್ವಾರ್ಥಿಗಳು.ಮೌಲ್ಯಗಳು ಅದಃಪತನ ಹೊಂದಿವೆ" ಹೀಗೆ ನಾವು ಆಗಾಗ್ಗೆ ಮಾತನಾಡಿಕೊಳ್ಳುತ್ತೇವೆ.ಯಾವುದೋ ಘಟನೆ, ಅಥವಾ ವ್ಯಕ್ತಿಗಳ ಅಧಾರದ ಮೇಲೆ ಸಾರಾಸಗಟಾಗಿ ಇಡೀ ಸಮಾಜವನ್ನು ಮೌಲ್ಯಮಾಪನ ಮಾಡುವಲ್ಲಿ ನಾವು ನಿಸ್ಸೀಮರಾಗಿದ್ದೇವೆ.ನಾವಂದುಕೊಂಡಂತೆ ಸಮಾಜದಲ್ಲಿ ಎಲ್ಲರೂ ಕೆಟ್ಟವರಲ್ಲ ಒಳ್ಳೆಯವರು ಇಲ್ಲದೇ ಇಲ್ಲ.ಸುಮ್ಮನೆ ನಿಮ್ಮ ಬೈಕ್ ಸ್ಟ್ಯಾಂಡ್ ತೆಗೆಯದೆ ಬೈಕ್ ಓಡಿಸಿ   ನೋಡಿ ಹತ್ತಾರು ಕೈಗಳು ನಿಮ್ಮ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಬೈಕ್ ಸ್ಟಾಂಡ್ ತೆಗೆಯಲು ಹೇಳುತ್ತಾರೆ. ಮಾನವೀಯತೆಯ ಒರತೆ ಕಡಿಮೆಯಗಿರಬಹುದು ಆದರೆ  ನಮ್ಮಲ್ಲಿ ಈಗಲೂ ಹರಿಯುತ್ತಿದೆ.ಇದಕ್ಕೆ ಪೂಕವಾಗಿ ನಾನಿರುವ ಒಂದು ಗುಂಪಿನಲ್ಲಿ ಸಹೃದಯರೊಬ್ಬರು ಒಂದು ಸಂದೇಶ ಮುನ್ನಾಯಿಸಿದ್ದರು ಅದು ಹೀಗಿದೆ.


ಮನೆಗೆ ಹೊರಟಿದ್ದೆ ಎಲೆಕ್ರ್ಟಿಕ್ ಕಂಬಕ್ಕೆ ಯಾರೋ ಒಂದು ಬೋರ್ಡ್ ನೇತು ಹಾಕಿದ್ದರು. ಅದರಲ್ಲಿ ಏನು ಬರೆದಿರಬಹುದು ಎಂದು ಕುತೂಹಲ ಉಂಟಾಯಿತು ಹತ್ತಿರ ಹೋಗಿ ನೋಡಿದರೆ ಅದರಲ್ಲಿ ಬರೆದಿತ್ತು

ಈ ರಸ್ತೆಯಲ್ಲೆಲ್ಲೊ ಐವತ್ತು ರುಪಾಯಿಯನ್ನು ಕಳೆದುಕೊಂಡಿದ್ದೇನೆ ನಿಮಗೆ ಯಾರಿಗಾದರೂ ಸಿಕ್ಕರೆ, ಈ ವಿಳಾಸದಲ್ಲಿರುವ ನನಗೆ ತಲುಪಿಸಿ. ನನ್ನ ಕಣ್ಣಿನ ದೃಷ್ಟಿ ತುಸು ಮಂಜಾಗಿದೆ ದಯವಿಟ್ಟು ಸಹಾಯ ಮಾಡಿ.


ನಾನು ಆವಿಳಾಸವನ್ನು ಗಮನಿಸಿದೆ. ಅಲ್ಲಿರುವ ವ್ಯಕ್ತಿಯನ್ನು ನೋಡಬೇಕು ಎಂದು ಬಲವಾಗಿ ಅನಿಸಿತು. ಆ ವಿಳಾಸದ ಬಳಿ ಹೋದಾಗ ಗುಡಿಸಲಿನಂತ ಮನೆಯ ಮುಂದೆ ಮುದುಕಿಯೊಬ್ಬಳು ಕುಳಿತಿದ್ದಳು. ಆಕೆ ಬಸವಳಿದಿದ್ದಳು ನಾನು ಬರುತ್ತಿರುವ ಸದ್ದನ್ನು ಕೇಳಿ ಯಾರು? ಎಂದಳು ನಾನು ಅಜ್ಜಿ ,ಈ ದಾರಿಯಲ್ಲಿ ಬರುವಾಗ ಐವತ್ತು ರೂಪಾಯಿ ಸಿಕ್ಕಿತು. ಕರೆಂಟ್ ಕಂಬದ ಮೇಲೆ ಬರೆದ ಬೋರ್ಡ್ ನೋಡಿದೆ. ನಿಮಗೆ ಕೊಟ್ಟು ಹೋಗೋಣ ಎಂದು ಬಂದೆ ಅಂದೆ.


ನನ್ನ ಮಾತು ಕೇಳಿ ಅವಳ ಕಣ್ಣು ತೇವವಾದವು. ಈಗಾಗಲೆ 40-50 ಮಂದಿ ಬಂದು ದಾರಿಯಲ್ಲಿ ತಮಗೆ ಐವತ್ತು ರೂಪಾಯಿ ಸಿಕ್ಕಿತೆಂದು ಕೊಟ್ಟು ಹೋಗಿದ್ದಾರೆ. ಆಷ್ಟಕ್ಕೂ ಆ ಕರೆಂಟ್ ಕಂಬದ ಮೇಲೆ ನಾನು ಬೋರ್ಡ್ ನೇತು ಹಾಕಿಲ್ಲ ನನಗೆ ಓದಲು ಬರೆಯಲು ಬರುವುದಿಲ್ಲ, ಎಂದಳು . ಪರವಾಗಿಲ್ಲ ಐವತ್ತು ರುಪಾಯಿ ಇಟ್ಟುಕೊಳ್ಳಿ ಎಂದೆ.


ನೀವು ಇಲ್ಲಿಂದ ಹೋಗುವಾಗ ಆ ಕಂಬದ ಮೇಲೆ ಬರೆದ  ಬೋರ್ಡ್ ತೆಗೆದುಹಾಕಿ ಎಂದು ನನ್ನನ್ನು ವಿನಂತಿಸಿದಳು. ಸೋಜಿಗವೆಂದರೆ ತನ್ನನ್ನು ನೋಡಲು ಬಂದವರಿಗೆಲ್ಲ  ಬೋರ್ಡ್ ಅನ್ನು ತೆಗೆದು ಹಾಕುವಂತೆ ಹೇಳುತ್ತಿದ್ದಳು. ಆದರೆ ಯಾರೂ ಹಾಗೆ ಮಾಡಿರಲಿಲ್ಲ.

ನಾನು ವಾಪಸ್ ಬರುವಾಗ ಯೋಚಿಸಲಾರಂಬಿಸಿದೆ, ಕರೆಂಟ್ ಕಂಬದ ಮೇಲೆ ಯಾರು ಈ ಬೋರ್ಡ್ ತಗುಲಿ ಹಾಕಿರಬಹುದು? ತನ್ನನ್ನು ನೋಡಲು ಬಂದವರಿಗೆಲ್ಲ ಅದನ್ನು ತೆಗೆದು ಹಾಕಿ ಎಂದು ಹೇಳಿದರೂ ಯಾರೂ ತೆಗೆದು ಹಾಕಲಿಲ್ಲ?

ಯಾರೋ ಒಬ್ಬನಿಗೆ ಆ ಮುದುಕಿಗೆ ಸಹಾಯ ಮಾಡಬೇಕೇಂದು ಅನಿಸಿರಬೇಕು, ಆತ  ಬೋರ್ಡ್ ಅನ್ನು ಹಾಕಿರಬೇಕು.

ಒಬ್ಬರಿಗೆ ಸಹಾಯ ಮಾಡಬೇಕು ಅನಿಸಿದರೆ ಎಷ್ಟೋಂದು ದಾರಿಗಳಿವೆಯಲ್ಲ.


ಅಷ್ಟೊತ್ತಿಗೆ ಯಾರೋ ಕರೆದಂತಾಯಿತು. "ಸಾರ್ ಈ ಅಡ್ರೆಸ್ ನಲ್ಲಿರುವ ವ್ಯಕ್ತಿಯನ್ನು ಬೇಟಿ ಮಾಡುವುದು ಹೇಗೆ? ಅಲ್ಲಿಗೆ ಹೋಗುವುದು ಹೇಗೆ? ನನಗೆ ದಾರಿಯಲ್ಲಿ ಐವತ್ತು ರೂಪಾಯಿ ಸಿಕ್ಕಿತು ಅವರಿಗೆ ತಲುಪಿಸಬೇಕಾಗಿದೆ" ಎಂದು ದಾರಿಹೋಕನೊಬ್ಬ ಹೇಳಿದ 


ನಾನು ಗದ್ಗದಿತನಾದೆ...


ಕೆಟ್ಟತನವನ್ನೇ ವಿಜೃಂಬಿಸುವ ಅಹಿಂಸೆಯನ್ನು ದಿನಗಟ್ಟಲೇ ವೈಭವೀಕರಿಸುವ ಮಾಧ್ಯಮಗಳು ಬರೀ ಮಚ್ಚು ಕೊಚ್ಚು ಮಾತ್ರವೇ ಸಿನಿಮಾ ಎಂದು ರೀಲು ಸುತ್ತುವವರು ಇಂತಹ ಮಾನವೀಯ ಸಂಬಂಧಗಳು ಮೌಲ್ಯಗಳನ್ನು ಎತ್ತಿ ತೋರಿಸುವ ಮೂಲಕ ಪ್ರೀತಿ, ಕರುಣೆ, ಮಾನವೀಯತೆಯ ಒರತೆಗಳ ಹೆಚ್ಚಿಸುವ  ಕೆಲಸ ಮಾಡಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.    


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಶಿಕ್ಷಕರು

9900925529