29 ಸೆಪ್ಟೆಂಬರ್ 2018

ಗಜಲ್47(ಭಗತ್ ಸಿಂಗ್)

                  *ಗಜಲ್*

ದೇಶಭಕ್ತರಾದ  ಭಗತ್ ಸಿಂಗ್ ಹೆಸರು ಕೇಳಿದರೇನೋ ಪುಳಕ
ಇನ್ ಕ್ವಿಲಾಬ್ ಜಿಂದಾಬಾದ್  ಎಂದವನ ನೆನೆದರೇನೋ ಪುಳಕ

ಮದುವೆ ಮಕ್ಕಳಾದರೆ ಮಾತ್ರ ಜೀವನವೆಂದರು
ಬಾಲ್ಯವಿವಾಹ ಧಿಕ್ಕರಿಸಿದ ಧೀರನ ಸ್ಮರಿಸಿದರೇನೋ ಪುಳಕ

ಬದುಕಲು ನೂರಾರು ವೇಷ ಬಣ್ಣ ಹಚ್ಚದೇ ನಟನೆ
ಬಾಲ್ಯದಿ ರಾಣಾಪ್ರತಾಪ್ ಚಂದ್ರ ಗುಪ್ತರ ಪಾತ್ರ ಅಭಿನಯ ಸವಿದರೇನೋ ಪುಳಕ

ಅನವಶ್ಯಕ ರಕ್ತದೋಕುಳಿ‌ಹರಿಯುತಿದೆ ಪ್ರತಿದಿನ
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಮಣ್ಣನು ಪೂಜಿಸಿದವನ ಭಜಿಸಿದರೇನೋ ಪುಳಕ

ಗೊತ್ತು ಗುರಿಯಿಲ್ಲ ಇಂದಿನ ಯುವ ಪೀಳಿಗೆಗೆ
ಚಿಂತನೆಯ ಕೊಲ್ಲಲಾಗದು ಸ್ಪೂರ್ತಿ ಹೊಸಕಲಾಗದೆಂದು ಕರೆನೀಡಿದವನ ನೋಡಿದರೇನೋ ಪುಳಕ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

27 ಸೆಪ್ಟೆಂಬರ್ 2018

ಪ್ರೀತಿಸೋಣ (ಕವನ) ಸ್ನೇಹ ಸಂಗಮ ಬಳಗದ ಸ್ಪರ್ಧೆಯಲ್ಲಿ ಅತ್ಯುತ್ತಮ ಕವನ ಎಂದು ಪುರಸ್ಕೃತ ಕವನ


              *ಪ್ರೀತಿಸೋಣ*

ನಮ್ಮ ಸುತ್ತಮುತ್ತಲಿರುವರುವರು
ನಮಗೆ ಪರಿಚಿತರಾಗಿಲ್ಲ
ನೆರೆಯಲ್ಲಿರುವವರ ಹೊರೆಯಂತೆ ಕಾಣುವೆವು
ಹಗೆ ಸಾದಿಸುವೆವು ಯಾವುದೋ ಊರಿನ ಯಾರನ್ನೋ ಮುಖಪುಟದಲ್ಲಿ
ಬಲವಂತದಿ ಪ್ರೆಂಡ್ ರಿಕ್ವೆಸ್ಟ್ ಕಳಿಸಿ ಅವರ ಮುಖ ಹೇಗಿದ್ದರೂ ಲೈಕ್ ಒತ್ತಿದ್ದೇ ಒತ್ತಿದ್ದು .


ನಮ್ಮ ಬಂಧುಗಳ ಕಷ್ಟಗಳಿಗೆ ಸ್ಪಂದಿಸಲಿಲ್ಲ
ಸಾವು ತಿಥಿಗಳಿಗೆ ಹೋಗಲೇಇಲ್ಲ
ಟಿ ವಿ ಧಾರಾವಾಹಿಗಳಲಿ ಬರುವ ಪುಟ್ಟ ಗೌರಿ
ರಾಧಾ ಳ ಸಂಕಟಕ್ಕೆ ಮರುಗಿ ಕಣ್ಣೀರಿನ
ಕೋಡಿ ಹರಿಸುವರು ಸಾಲದೆಂಬಂತೆ
ಮತ್ತೊಮ್ಮೆ ವೂಟ್ ನಲ್ಲಿ ನೋಡಿ
ಅವರ ನಾಟಕದ ಕಷ್ಟಕ್ಕೆ ಅತ್ತಿದ್ದೇ ಅತ್ತಿದ್ದು

ಮನೆಯಲಿ‌ಗಂಟು ಕಟ್ಟಿಕೊಂಡ ಮುಖ
ಮಕ್ಕಳು‌ ಬಂದು‌ ನಗಿಸಿದರೂ ಅರಳೆಣ್ಣೆ
ಕುಡಿದವರ ಹಾಗೆ ನಗಲು ಚೌಕಾಸಿ ಮಾಡಿ
ಕೋಣೆಗೆ ಹೋಗಿ ಯೂಟ್ಯೂಬ್ ನಲ್ಲಿ
ಸ್ಟಾಂಡ್ಅಪ್ ಕಾಮಿಡಿ ಎಪಿಸೋಡ್
ನೋಡಿ ನಕ್ಕುದ್ದೇ ನಕ್ಕಿದ್ದು

ದೇವರಂತಹ ಅಪ್ಪ ಅಮ್ಮಂದಿರ ಪೂಜೆಯಿಲ್ಲ
ಇನ್ನೆಲ್ಲೋ ಇರುವ ದೇವರ ಕಾಣುವ ಹಂಬಲ
ಬ್ರಹ್ಮಾಂಡ ಬೃಹತ್‌ ಬ್ರಹ್ಮಾಂಡದ ಲ್ಲಿ  ದೇವರ
ಕಾಣಲು ಟಿ ವಿ ಯೂಟೂಬ್ ಪೇಸ್ ಬುಕ್
ಗಳಲಿ ಹುಡುಕಿದ್ದೇ ಹುಡುಕಿದ್ದು

ಈ ಸಾಮಾಜಿಕ ಮಾದ್ಯಮಗಳಿಗೆ
ನಾವು ದಾಸರಾಗಿದ್ದು ಸಾಕು
ಇನ್ನಾದರೂ ಮನುಷ್ಯರನ್ನು  ಪ್ರೀತಿಸೋಣ
ಸಾಮಾಜಿಕ ಮಾಧ್ಯಮಗಳನ್ನು
ವಿವೇಚನೆಯಿಂದ ಬಳಸೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 ಸೆಪ್ಟೆಂಬರ್ 2018

*ಮಗು ಅಳುವ ಸದ್ದು(ನ್ಯಾನೋ ಕಥೆ)

                     *ನ್ಯಾನೋ ಕಥೆ*

*ಮಗು ಅಳುವ ಸದ್ದು*

ವಾರ ,ತಿಂಗಳು, ವರ್ಷಗಟ್ಟಲೆ ಆಸ್ಪತ್ರೆಗಳಿಗೆ ಅಲೆದ ದಂಪತಿಗಳು ,ವಿವಿಧ ದೇವರುಗಳಿಗೆ ಹರಕೆ ಹೊತ್ತರು ,15 ವರ್ಷಗಳಾದರೂ ಮಕ್ಕಳಾಗಲಿಲ್ಲ ."ಇವಳು ಬಂಜೆ ಬಿಡು " "ಇವರಿಗೆಲ್ಲಿ ಮಕ್ಕಳಾಗುತ್ತವೆ " ಎಂಬ ಚುಚ್ಚು ನುಡಿಗಳ ಕೇಳಿದರೂ  ದಂಪತಿಗಳು ಭರವಸೆ ಕಳೆದುಕೊಳ್ಳಲಿಲ್ಲ .ಕಳೆದ ರಾತ್ರಿ ಆ ದಂಪತಿಗಳ ಮನೆಯಲ್ಲಿ ಮಗು ಅಳುವ ಸದ್ದು ಕೇಳಿತು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 ಸೆಪ್ಟೆಂಬರ್ 2018

ಯಾವಾಗ?(ಹನಿಗವನ)

                        *ಯಾವಾಗ?*

ದಿನ ದಿನ ಬರುವ
ದಿನಕರನು
ದಿನದಲಿ ಧರೆ ಬೆಳಗಿ
ಚಂದಿರಗೆ ಸಾಲ ನೀಡಿ
ಇರುಳಲಿ ಬೆಳಗುವನು
ತಮವ ಓಡಿಸುವನು
ಅಂದಕಾರದಲಿರುವ
ನಾವು ಬೆಳಗುವುದು
ಯಾವಾಗ?

*ಸಿ ಜಿ.ವೆಂಕಟೇಶ್ವರ
*ಗೌರಿಬಿದನೂರು*

21 ಸೆಪ್ಟೆಂಬರ್ 2018

ಮೌನವಾಗಿರೋಣ (ಕವನ)

             *ಮೌನವಾಗಿರೋಣ*

ಅತಿಯಾಗಿ ಬಾಯಿಬಿಟ್ಟರೆ
ಮೀನು ಬದುಕಲಾರದು
ಮಿತಿ ಮೀರಿ  ಮಾತನಾಡಿದರೆ
ತೊಂದರೆಗಳು  ತಪ್ದದು

ನಾಲಿಗೆಯ ಹರಿ ಬಿಟ್ಟರೆ
ಹರಿ ಹರರು  ಮುನಿವರು
ಯೋಚಿಸದೆ ಮಾತನಾಡಿದರೆ
ಕಷ್ಟಗಳು ಸಾವಿರಾರು

ಮಾತು ಮಾತಿಗೆ ‌ಜಗಳವೇಕೆ
ಮಾತಿನಲಿ ಹಿತವಿರಲಿ
ಮಾತಿನಲಿ ಮಧುರವಿರಲಿ
ಮಾತುಗಳು ಮೃದುವಾಗಿರಲಿ

ಮಾತು ಮನ ನೋಯಿಸದಿರಲಿ
ಮಾತುಗಳ ತುಪ್ಪದಂತೆ ಬಳಸೋಣ
ಮಾತುಮನೆ ಮುರಿಯದಿರಲಿ
ಕೆಟ್ಟ ಮಾತಿಗಿಂತ ಮೌನವಾಗಿರೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*