27 ಡಿಸೆಂಬರ್ 2025

ಬಹುಮುಖ ಪ್ರತಿಭೆಯ ಕಲಾವಿದರು ನಮ್ಮ ಕೋಟೆ ಕುಮಾರ್.

 






ಬಹುಮುಖ ಪ್ರತಿಭೆಯ ಕಲಾವಿದ, ಕೋಟೆ ಕುಮಾರ್.



ಲಲಿತ ಕಲೆಗಳು ಮಾನವನ ವಿಕಾಸಕ್ಕೆ ತಮ್ಮದೇ ಆದ ಪ್ರಭಾವ ಬೀರುತ್ತವೆ. ಕೆಲವರು ತಮ್ಮ ವೃತ್ತಿಯ ಜೊತೆಯಲ್ಲಿ ಪ್ರವೃತ್ತಿಯನ್ನು ಬೆಳೆಸಿಕೊಂಡು ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅಂತಹವರ ಸಾಲಿಗೆ ಸೇರುವ ಮೇರು ವ್ಯಕ್ತಿತ್ವವೇ ಕೋಟೆಕುಮಾರ್.

ಕೋಟೆಕುಮಾರ್ ಎಂದು ಪ್ರಖ್ಯಾತವಾದ ಕಲಾವಿದರೂ ಲೇಖಕರೂ  ಸಂಘಟಕರೂ ಆದ ಇವರನ್ನು ಅವರ ವಿದ್ಯಾರ್ಥಿಗಳು ಎಮ್ ಎಸ್ ಕೆ ಎಂದೇ ಪ್ರೀತಿಯಿಂದ ಕರೆಯುತ್ತಾರೆ.
ಎಂ ಜಿ ಎಸ್ ಆರಾಧ್ಯ ಮತ್ತು ಎಂ ಬಿ ಶಿವಮ್ಮ ದಂಪತಿಗಳ ಮಗನಾಗಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆಯಲ್ಲಿ ಡಿಸೆಂಬರ್ ಒಂಭತ್ತರ 1965 ರಲ್ಲಿ ಜನಿಸಿದ ಇವರು  B A ,MA, MFA ಪದವಿ ಪಡೆದು
ಚಿತ್ರಕಲಾ ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಾ 36 ವರ್ಷಗಳ ಕಾಲ ಬೋಧನಾ ಕಾರ್ಯದಲ್ಲಿ ತೊಡಗಿ ಸಾವಿರಾರು ಮಕ್ಕಳಿಗೆ ಜ್ಞಾನವನ್ನು ಉಣಬಡಿಸಿದ್ದಾರೆ. ವೃತ್ತಿಯ ಜೊತೆಯಲ್ಲಿ ಪ್ರವೃತ್ತಿಯನ್ನು ಬೆಳೆಸಿಕೊಂಡ ಇವರು ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಲೇಖನ ಮತ್ತು ವ್ಯಂಗ್ಯಚಿತ್ರ ಬರೆದು ಓದುಗರ ಮತ್ತು ಕಲಾರಸಿಕರ ಮೆಚ್ಚುಗೆ ಪಡೆದಿದ್ದಾರೆ. ಇವರು ಹವ್ಯಾಸಿ ಛಾಯಾಚಿತ್ರಕಾರರಾಗಿ ನೂರಾರು ವನ್ಯ ಜೀವಿ ಚಿತ್ರ ಮತ್ತು ಇತರೆ ಚಿತ್ರಗಳನ್ನು ತೆಗೆದು ಹಲವಾರು ಪತ್ರಿಕೆಗಳಿಗೆ ಕಳಿಸಿದ್ದಾರೆ.
ಇಂದಿನ ಆಧುನಿಕ ಕಾಲದ ಪ್ರಭಾವಿ ಸಮಾಜಿಕ ಮಾಧ್ಯಮ ವಾದ ಯೂಟ್ಯೂಬ್ ಬಳಸಿಕೊಂಡು ಪ್ರವಾಸಿ ತಾಣಗಳು, ವಿವಿಧ ಸಮಾರಂಭಗಳು,,ವಿಶೇಷವಾದ ಸ್ಥಳಗಳ ನೂರಾರು ವೀಡಿಯೋ ಮಾಡಿ ಕಲ್ಚರಲ್ ವ್ಯಾಲಿ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.


ಮಾನವನ ಬದುಕು ಬೌದ್ಧಿಕ ಮತ್ತು ಅಂತರಂಗಿಕ ಸಂವೇದನೆಗಳ ಸಂಗಮವಾಗಿದ್ದು, ಪ್ರಕೃತಿಯಲ್ಲಿನ ಅನುಸಂದಾನದಲ್ಲಿ ಆಸೆ ಎಂಬ ಮುನ್ನೋಟದಲ್ಲಿ ಆನಂದವೆಂಬ ಹಂತಕ್ಕೆ ಸಮಷ್ಟಿಗೊಳಿಸುವ ಮನಸ್ಸಿನ ಕ್ರಿಯೆಯಾಗಿದೆ. ಭೌತಿಕವಾಗಿ ಅನುಭವಿಸಿದ ಅತ್ಯಂತ ಆನಂದ ಮತ್ತು ದುಃಖ ಕಷ್ಟ ಕ್ಷಣಗಳ ದಾಖಲೆ ಮನಸ್ಸಿನಲ್ಲಿ ನೆಲೆನಿಂತಿರುತ್ತದೆ. ಇಂತಹ ಘಟನೆಗಳು ಪದೇ ಪದೆ ನೆನಪಿನಲ್ಲಿ ಬಂದು ಮತ್ತೆ ಮತ್ತೆ ಅನುಭವಿಸುವ ಆಸೆ ಮಾನವನದ್ದಾಗಿದೆ. ಕಾಲಪಕ್ವತೆಯಲ್ಲಿ ಅಸ್ತಿತ್ವದ ಹುಡುಕಾಟ ಬದುಕಿನ ಗೊಂದಲದಲ್ಲಿ ಅಸ್ಪಷ್ಟ ಅನಿಸಿಕೆಗಳಿಗೊಂದು ಮೂರ್ತರೂಪ ಕೊಡುವ ಪ್ರಯತ್ನ, ಜೀವದ ತುಡಿತ ಪ್ರತಿಯೊಂದೂ ಉಸಿರಿನಲ್ಲೂ ಹುಡುಕಾಟ, ಆದಿ ಅಂತಿಮವಿಲ್ಲದ ಅಗೋಚರ ಅನಂತದತ್ತ ಈ ಮಹಾಯಾನದಲ್ಲಿ ಕಂಡ ಬೆಳಕು, ಶಬ್ದ, ಸ್ಪರ್ಶ, ಗಂಧ, ರುಚಿಗಳಲ್ಲಿ ಪಂಚಭೂತಗಳನ್ನೂ ಅನುಭವಿಸಿ ಮತ್ತೆ ಪಂಚಭೂತಗಳಲ್ಲೇ ಅಂತಿಮ ಸೇರುವ ಸತ್ಯದ ಹುಡುಕಾಟವೇ ಕಲೆ ಎನ್ನಬಹುದು.ಕಲಾ ಕ್ಷೇತ್ರ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ.ಅಂತಹ ವಿರಳ ಆಯ್ಕೆಯಲ್ಲಿ ಕೋಟೆ ಕುಮಾರ್ ಕೂಡಾ ಒಬ್ಬರು.




ಕೋಟೆ ಕುಮಾರ್ ರವರ ಬಾಲ್ಯವೇ ಅವರನ್ನು ಮುಂದೆ ಓರ್ವ ಸಮಾಜಮುಖಿ ವ್ಯಕ್ತಿಯನ್ನಾಗಿ ರೂಪಿಸಿತು.
ರಸ್ತೆ ಮತ್ತು ವಿದ್ಯುತ್‌ ಇಲ್ಲದ ಊರಿನಲ್ಲಿ   ಅಲ್ಲಿನ ಜನ ಪ್ರಾಕೃತಿಕವಾಗಿ ಬದುಕುತಿದ್ದ ಕಾಲ. ಸೂರ್ಯ ಚಂದ್ರರ ಬೆಳಕಿನಲ್ಲಿ ಕಾಲ ಕಳೆಯುತ್ತಿದ್ದವರು, ದನ, ಕರು, ಕುರಿ ಮೇಕೆಗಳೇ ಜೀವನಾಧಾರ. ವ್ಯವಸಾಯ ಅಲ್ಲಿನ ಮುಖ್ಯ ಕಸುಬು. ಸುತ್ತಲೂ ಗುಡ್ಡ, ಬೆಟ್ಟ, ತೊರೆ, ಕೆರೆಗಳ ಸಾಲು ಸಾಲು, ಊರ ಮಧ್ಯದ ಅರಳೀಮರ, ಈರೇಹಕ್ಕಿಗಳ ತವರು, ಬೆಳಗುರಾತ್ರಿ ಚಿಲಿಪಿಲಿ ನಾದ. ಅಲ್ಲಿನ ಜನರಲ್ಲಿ ಹಣದ ವ್ಯವಹಾರಕ್ಕಿಂತ ಮಧುರ ಮೈತ್ರಿಯ ಕಾಲ, ಯಾವ ನಾಗರೀಕತೆಯ ಸೊಂಕು ಇಲ್ಲದ ಅಪ್ಪಟ ಗ್ರಾಮೀಣ ಬದುಕು. ಊರ ಮುಂದಿನ ಮಾರಿ ಗುಡಿ, ಅರಳೀಕಟ್ಟೆ, ಊರ ಆಚೆಯ ಮಲ್ಲಪ್ಪ ಊರ ದೇವರುಗಳು. ವರ್ಷಕ್ಕೊಮ್ಮೆ ನಡೆವ ಊರ ಹಬ್ಬಕ್ಕೆ ಸೇರುವ ಬಂದುಬಳಗ: ರಾತ್ರಿ ಬೆಳಗು ಅರೆ ತಮಟೆಗಳ ನಾದ; ಕುರಿ, ಕೋಳಿ, ಕೋಣಗಳ ಬಲಿ; ರಾತ್ರಿ ಪೂರಾ ದೊಡ್ಡಾಟ ಚಿಕ್ಕಾಟ ಇವೆಲ್ಲಾ ಆಗೊಮ್ಮೆ ಈಗೊಮ್ಮೆ ಕಾಡುವ ನೆನಪುಗಳು, ಬೇಸಿಗೆ ಬಂತೆಂದರೆ ಗೊಂಬೆರಾಮರ ಚಕ್ಕಳದ ಗೊಂಬೆಯಾಟ, ದೊಂಬರಾಟ, ಕುಕ್ಕೆಮಾರಿ, ಪ್ಲೇಗಮ್ಮ, ಕೋಲೆಬಸವ, ಬುಡುಬುಡಿಕೆ ಇವರೆಲ್ಲರೂ ಹಳ್ಳಿ ಮಕ್ಕಳಿಗೆ ಸಾಂಸ್ಕೃತಿಕ ನೆಂಟರು. ಗೋಲಿ-ಬಳಪ ಆಡುವ ಹುಡುಗರು ಹಳ್ಳಿಗೆ ಹೊಸಬರು ಬಂದರೆ ಮಿಕಿಮಿಕಿ ನೋಡುವ, ಸೈಕಲ್ ಮೋಟಾರ್ ಗಾಡಿ ಬಂದರೆ ಓ.ಎಂದು ಹಿಂದೆ ಓಡುತ್ತಿದ್ದ  ಬಗೆ ವಾರಕ್ಕೊಮ್ಮೆ ಬರುತ್ತಿದ್ದ ಪಾಪಂಪಾಪ್‌ನ ಸಾಬರಿಗೆ ಹೊಂಗೆಬೀಜ, ಬೇವಿನಬೀಜ ಕೊಟ್ಟು ಜಿನುಗು ಬೆಲ್ಲ ತಿನ್ನುವ  ವಿಶೇಷ ತಿಂಡಿ.

ಅನ್ನ ಬಟ್ಟೆಗೆ ಬಲು ಕಷ್ಟ ವರ್ಷಕ್ಕೆ ಎರಡು ಕಾಕಿ ಚಡ್ಡಿ, ನೀಲಿ ಅಂಗಿ, ಹರಿದರೆ ಹಳೆ ಬಟ್ಟೆಯ ತೇಪೆ,ಪೆನ್ನು ಪೇಪ‌ರ್ ಅಪರೂಪ ಅದು ಸಿರಿವಂತರ ಸೊತ್ತು, ಇಂಥಹ ದಿನಗಳಲ್ಲಿ ಇದ್ದ ಬಳಪವೊಂದೇ ಬರೆಯುವ ಮಂತ್ರದಂಡ ವಾಗಿತ್ತು. ಮಾರಿಗುಡಿಯ ಬಂಡೆ, ಅದರ ಮೇಲೆ ಗಣೇಶ, ಲಿಂಗ, ಆನೆ, ಹೂವು ಚಿತ್ರಗಳ ಸರಮಾಲೆ. ಆಗ ಇವರಲ್ಲಿ ಚಿತ್ರಬಿಡಿಸುವ ಆಟ ಪದೇ ಪದೇ ನಡೆಯುತ್ತಿತ್ತು. ಇವರ  ಆಸೆ ಅರಿತ ಅಮ್ಮ ಕೂಲಿ ಮಾಡಿದ ನಾಲ್ಕು ರೂಪಾಯಿಯಲ್ಲಿ ಬಣ್ಣದ ಡಬ್ಬ, ಬರೆಯಲು ಪೆನ್ಸಿಲ್, ಪುಸ್ತಕ ತಂದುಕೊಟ್ಟಿದ್ದು ಮುಂದೆ ಇವರು ಕಲಾವಿದರಾಗಲು ಪ್ರೇರಣೆ ನೀಡಿದವು.
ಬಾಲ್ಯ ಕಳೆದು ಯೌವನದ ಕಾಲ ರಮ್ಯ ಜಗತ್ತಿನ ನಿಗೂಡ ಕತ್ತಲಲ್ಲಿ ಕಳೆದು ಹೋಗುವ ಕಾಲದಲ್ಲಿ ತುದಿ ಮೊದಲಿಲ್ಲದ ಕನಸಿನ ಪಯಣ ಅರಂಭವಾಯಿತು. ಬದುಕೆಂಬ ಮಾಯೆ ಎಲ್ಲವನ್ನೂ ನುಚ್ಚುನೂರು ಮಾಡುತ್ತಿದ್ದ ಬಡತನ! ಬದುಕಿಗಾಗಿ ಹೋರಾಟ ಒಂದೆಡೆಯಾದರೆ  ಮತ್ತೊಂದೆಡೆ ಕಲ್ಪನಾಲೋಕದ ಕುತೂಹಲ. ಎಸ್‌ಎಸ್‌ಎಲ್‌ಸಿ ಆದ ಮೇಲೆ ಮನೆಬಿಟ್ಟು ದೇಶ ಸುತ್ತಿದ್ದು! ಹೊಟ್ಟೆಪಾಡಿಗಾಗಿ ಕೂಲಿಮಾಡಿ ಮಣ್ಣುಕಲ್ಲು ಹೊತ್ತು ಅಲೆದದ್ದು, ಬದುಕಿನ ಒಂದೊಂದು ದಿನವೂ ಒಂದೊಂದು ಪಾಠ, ಲೋಕ ಸತ್ಯದ ಅರಿವು. ಮತ್ತೆ ತಂದೆಯ ಒಲವು ಮನೆ ಸೇರುವಂತೆ ಮಾಡಿತು. ಮುಂದೆ ಓದಲು ಬಲವಂತ ಮಾಡಿದ ಪರಿಣಾಮವಾಗಿ  ಚಿತ್ರ ಕಲಿತು ಶಿಕ್ಷಕನಾಗುವ ಆಸೆ ಕೈಗೂಡಿತು. ಬದುಕನ್ನು ಬಣ್ಣರೇಖೆಗಳಲ್ಲಿ ಕಟ್ಟಿಕೊಳ್ಳುವ ವಿಧಿ ಲಿಖಿತದಂತೆ  ಕೊನೆಗೂ ಬದುಕಿನಲ್ಲಿ ಹೋರಾಡಿ ನೆಲೆಕಂಡುಕೊಂಡರು.





ಗ್ರಾಮೀಣರಿಗೆ ಹೊಟ್ಟೆ ಬಟ್ಟೆಯಂತೆ ದೇವರು, ದೆವ್ವ, ಮಾಟಮಂತ್ರದೊಂದಿಗೆ ಬದುಕು ಹಾಸುಹೊಕ್ಕಾಗಿರುತ್ತದೆ.  ಸುಖವಿದ್ದರೆ ದೇವರು, ಕಷ್ಟಬಂದರೆ ಮಾಟ ಮಂತ್ರ ಅತಿಯಾದರೆ ದೆವ್ವ ಗಾಳಿ. ಓದು ಬರಹ, ವೈಚಾರಿಕತೆ ಇಲ್ಲದ ಮೂಢನಂಬಿಕೆಯ ಆಚರಣೆ. ಅದರಲ್ಲೂ ಒಂದೊಂದು ಸಾಂಸ್ಕೃತಿಕ ಆಚರಣೆ ಮಕ್ಕಳಾದ ನಮಗೆ ಅನುಕರಣೆಯ ಆರಂಭ. ರಾತ್ರಿ ಕುಣಿದ ದೈವ, ದೆವ್ವ ಬೆಳಗಾಗ ನಮ್ಮ ಮೇಲೆ ಬಂದು ಕುಣಿದ ಅನುಕರಣೆ ಇವುಗಳು ಕೋಟೆ ಕುಮಾರ್ ಜೀವನದಲ್ಲಿ ವೈಜ್ಞಾನಿಕ ಚಿಂತನೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ತಮ್ಮ ಕಲೆ ಮತ್ತು ಲೇಖನಗಳಲ್ಲಿ ಅಭಿವಕ್ತಿಗೊಳಿಸಲು ಪ್ರೇರಣೆಯಾದವು.1981ರಲ್ಲಿ ತುಮಕೂರಿನ ರವೀಂದ್ರ ಕಲಾ ನಿಕೇತನದಲ್ಲಿ ಶ್ರೀ ಬಾಬೂರಾವ್ ಹಾಗೂ ಕಿಶೋರ್‌ಕುಮಾರ್‌ರವರ ಮಾರ್ಗದರ್ಶನದಲ್ಲಿ ಆರಂಭವಾದ ಇವರ   ಕಲಾ ಶಿಕ್ಷಣ ಬಣ್ಣ ರೇಖೆಗಳ ಆಕರ್ಷಣೆ, ಬಂದು ಹೋಗುವ ಹಿರಿಯ ಕಲಾವಿದರ ಹಾಗೂ ಕಲಾಕೃತಿಗಳ ಆಕರ್ಷಣೆ ಮತ್ತು ಎಸ್.ಎಂ.ಪಂಡಿತ್, ರವಿವರ್ಮರ ಕಲಾಕೃತಿಗಳು ಸಹಜವಾಗಿ ಸೆಳೆದವು. ಮರುಕೃತಿ ಮಾಡಿ ಆನಂದಿಸಿ  ಅರಳಗುಪ್ಪೆ, ಹಂಪೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಇಲ್ಲಿಯ ಶಿಲ್ಪ ವೈಭವ, ಉತ್ತರ ಕರ್ನಾಟಕದ ಜನಜೀವನ ಶೈಲಿ, ಶಿಲ್ಪಗಳ ರೇಖಾಚಿತ್ರ ರಚಿಸುವುದು, ನಿಸರ್ಗಚಿತ್ರ ರಚನೆ ಇವು ಮನಸ್ಸಿನ ಮೇಲೆ ಗಾಢ ಪ್ರಭಾವಬೀರಿದ ಸನ್ನಿವೇಶಗಳು, ಕಲಾಸಂಮೃದ್ಧಿಯ ಆಳ ಅಧ್ಯಯನ ಮಾಡಬೇಕೆಂಬ ಬಯಕೆಯ ಪರಿಣಾಮವಾಗಿ ಆರ್.ಎಂ.ಹಡಪದ್, ಜೆ.ಎಸ್.ಎಂ.ಮಣಿ, ಉಮೇಶ್ ಮುಂತಾದವರ ಮಾರ್ಗದರ್ಶನದಲ್ಲಿ ಶಿಕ್ಷಣ ಮುಂದುವರಿಸಿ ಸಂಯೋಜನೆ, ಭಾವಚಿತ್ರ, ವ್ಯಕ್ತಿಚಿತ್ರ, ಗ್ರಾಫಿಕಲ್ ಕಲೆ ಹೀಗೆ ವಿವಿಧ ಆಯಾಮದ ಕಲಾ ಪ್ರಾಕಾರಗಳನ್ನು ಅರಿತುಕೊಂಡ ಇವರಿಗೆ  ಸ್ವತಂತ್ರತೆಯ ಅರಿವಾದದ್ದು ಆರ್.ಎಂ.ಹಡಪದ್ ರವರಿಂದ. ಅಲ್ಲದೆ ಬೆಂಗಳೂರಿನ ಕಲಾಮಂದಿರ, ಚಿತ್ರಕಲಾ ಪರಿಷತ್, ವೆಂಕಟಪ್ಪ ಆರ್ಟ್ ಗ್ಯಾಲರಿಗಳಲ್ಲಿ ನಡೆಯುತ್ತಿದ್ದ ಕಲಾ ಪ್ರದರ್ಶನಗಳು, ರೋರಿಚ್, ರುಮಾಲೆ ಚನ್ನಬಸವಯ್ಯ, ಸುಬ್ರಹ್ಮಣ್ಯರಾಜು, ನಂಜುಂಡರಾವ್ ಮುಂತಾದವರ ಸಂಪರ್ಕ, ಅಲ್ಲದೆ ಕೆನ್ ಕಲಾ ಶಾಲೆಗೆ ಬಂದು ಹೋಗುತ್ತಿದ್ದ ಅನೇಕ ಜನ ಹಿರಿಯ ಕಲಾವಿದರು, ಕವಿಗಳು, ಚಿಂತಕರ ಮಾತುಗಳ ಸ್ಪೂರ್ತಿ ಪಿ.ಲಂಕೇಶ್, ಬರಗೂರು ರಾಮಚಂದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಎಂ.ಎಹಚ್.ಕೃಷ್ಣಯ್ಯ, ಜಾನ್ ದೇವರಾಜ್,  ಸಿ.ಚಂದ್ರಶೇಖರ್, ಎಂ.ಟಿ.ವಿ.ಆಚಾರ್ಯ, ಕೃಷ್ಣಶೆಟ್ಟಿ ಮುಂತಾದ ಹಿರಿಯರ ಪ್ರಭಾವ ಇವರ ಕಲಾಕೃತಿಗಳಲ್ಲಿ ಕಾಣಬಹುದು.






ಜಲವರ್ಣ, ತೈಲವರ್ಣ, ಅಕ್ರಲಿಕ್ ಮಾದ್ಯಮದಲ್ಲಿ ಸಮಕಾಲೀನ ತತ್ವಗಳ ಆಧಾರದಲ್ಲಿ ಪ್ರಸ್ತುತ ವಿದ್ಯಮಾನಗಳ ವಾಸ್ತವಿಕ ನೆಲೆಗಟ್ಟಿನ ಬದುಕಿನ ಅಂತರಾಳದ ಪ್ರೀತಿ, ಶಾಂತಿ, ಕೌರ್ಯ, ದ್ವಂದ್ವಗಳನ್ನು ಅಭಿವ್ಯಕ್ತಗೊಳಿಸುವ ಕೋಟೆ ಕುಮಾರ್ ರವರ ಕಲಾಕೃತಿಗಳಲ್ಲಿ ಬದುಕನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ. ಪ್ರಖರ ವರ್ಣಗಳಲ್ಲಿ ಸಂಯೋಜಿಸಿರುವ ಕಲಾಕೃತಿಗಳಲ್ಲಿ ಭೌತಿಕತೆಗಿಂತ ಭಾವನಾತ್ಮಕತೆಯೇ ಹೆಚ್ಚು ಪ್ರಾಬಲ್ಯ ಸಾದಿಸಿದೆ.ಇದರ ಜೊತೆಗೆ ವ್ಯಂಗ್ಯಚಿತ್ರಕಾರನಾಗಿ, ಸಮಕಾಲೀನ ಸಾಮಾಜಿಕ, ರಾಜಾಕೀಯ ವಿದ್ಯಮಾನಗಳನ್ನು ಕುರಿತು, ಹೊಣೆಗೇಡಿತನ, ಕೋಮುವಾದ  ಭ್ರಷ್ಟಾಚಾರ, ಸ್ವಾರ್ಥಪರ ವ್ಯವಸ್ಥೆಗಳನ್ನು ಹಾಗೂ ಜನಪ್ರತಿನಿಧಿಗಳನ್ನು ತೀವ್ರವಾಗಿ ಇವರ  ವ್ಯಂಗ್ಯಚಿತ್ರಗಳು ಲೇವಡಿ ಮಾಡುತ್ತವೆ.  


ಕೋಟೆ ಕುಮಾರ್ ರವರ ಕಲಾ ಸೇವೆಯನ್ನು ಗುರ್ತಿಸಿ ನೂರಾರು ಪ್ರಶಸ್ತಿಗಳು ಇವರನ್ನು ಹರಸಿ ಬಂದಿವೆ.ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ.
ಪ್ರಜಾವಾಣಿ ದಿನಪತ್ರಿಕೆಯ ರಾಜ್ಯಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಡಾ. ರಾಜ್ ಕುಮಾರ್ ಅಪಹರಣದ ಹಿನ್ನಲೆಯಲ್ಲಿ ರಚಿಸಿದ ವ್ಯಂಗ್ಯಚಿತ್ರಕ್ಕೆ ಇವರಿಗೆ  ಪ್ರಶಸ್ತಿ ಲಭಿಸಿದೆ. 'ಕ್ಯಾರಿಕೇಚರ್' ವಿಭಾಗದಲ್ಲೂ ವ್ಯಕ್ತಿಯ ಅಂತರಂಗ ಮತ್ತು ಬಹಿರಂಗ ವ್ಯಕ್ತಿತ್ವದ ಸೂಕ್ಷ್ಮವನ್ನು ಅಭಿವ್ಯಕ್ತಗೊಳಿಸುವಲ್ಲಿ ಪ್ರಯತ್ನಿಸಿದ್ದು 'ರಾಬ್ಬಿದೇವಿ' ಎಂಬ ಕ್ಯಾರಿಕೇಚರ್‌ಗೆ ದೆಹಲಿಯ ಹಿಂದೂಸ್ಥಾನ್ ಟೈಮ್‌ನ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ನೀಡಿದ್ದಾರೆ. ಅಲ್ಲದೆ ಕ್ಯಾಮ್ಲನ್ ಆರ್ಟ್ ಫೌಂಡೇಶನ್ ನಡೆಸಿದ ಅಖಿಲ ಭಾರತ ಕಲಾ ಸ್ಪರ್ಧೆಯಲ್ಲಿ "ಬುದ್ಧ ಮತ್ತು ಲ್ಯಾಡನ್" ಎಂಬ ತೈಲವರ್ಣದ ಕೃತಿಗೆ ಪ್ರಶಸ್ತಿ ಲಭಿಸಿದೆ. 'ಸ್ಥಿರ ಚಿತ್ರ' 'ಪ್ರಕೃತಿ ಚಿತ್ರ'ಕ್ಕೆ ಮೈಸೂರು ಸದರಾ ಪ್ರಶಸ್ತಿ ಅಲ್ಲದೆ 'ಜಾನಪದ ಮಹಿಳೆ' ಎಂಬ ಕಲಾಕೃತಿಗೆ ನಾಗಪುರದ ರಾಷ್ಟ್ರೀಯ ಕಲಾಸ್ಪರ್ಧೆಯಲ್ಲಿ ಪ್ರಶಸ್ತಿ, ಅಲ್ಲದೆ 'ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಿದ್ದಾರೆ.ಇದುವರೆಗೂ ದೆಹಲಿ, ಹೈದ್ರಾಬಾದ್, ಬೆಂಗಳೂರು, ನಾಗಪುರ, ಗೋವಾ, ಪಾಂಡಿಚೆರಿ, ಚನೈ ಮುಂತಾದ ಕಡೆ ಏಕವ್ಯಕ್ತಿ ಹಾಗೂ ಸಮೂಹ ಕಲಾ ಪ್ರದರ್ಶನ ನಡೆಸಿದ್ದಾರೆ. ಈ ಎಲ್ಲಾ ಸೃಜನಶೀಲ ಆಸಕ್ತಿಗಳ ನಡುವೆ ಹಿರಿಯ ಕಲಾವಿದರುಗಳು, ಸಾಹಿತಿಗಳ ಸಂಪರ್ಕ, ಅಲ್ಲದೆ ತುಮಕೂರಿನ ಕಲಾವಿದ ಗೆಳೆಯರ ಬಳಗದೊಂದಿಗೆ "ಕಲರ್ಸ್ ಗ್ರೂಪ್" ಎಂಬ ಸಾಂಸ್ಕೃತಿಕ ಸಂಘಟನೆ ಕಟ್ಟಿ ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ, ಯುವ ಕಲಾವಿದರ ಕಲಾ ಶಿಬಿರ, ಮನೆಗೊಂದು ಕಲಾಕೃತಿ, ನಿಮ್ಮೊಂದಿಗೆ ನಾವು ಕಾರ್ಯಕ್ರಮದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್, ವಿಜ್ಞಾನಕೇಂದ್ರ, ಕರ್ನಾಟಕ ಲಲಿತ ಕಲಾ

ಅಕಾಡೆಮಿ, ಚಿತ್ರಕಲಾ ಶಿಕ್ಷಕರ ಸಂಘ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯನಾಗಿ ಸೇವೆ ಸಲ್ಲಿಸಿರುವ ಇವರು   ಹೊಸ ಹೊಸ ಶೈಲಿಯ ಸರಣಿ ಚಿತ್ರಗಳ ರಚನೆಯಲ್ಲಿ ಒಂದು ಗಟ್ಟಿತನವನ್ನು ಕಂಡುಕೊಳ್ಳಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾರೆ.ಕೋಟೆ ಯವರ ಬಹುಪಾಲು ಕಲಾಕೃತಿಗಳು ಪ್ರಕೃತಿ ಮತ್ತು ಗ್ರಾಮೀಣ ಪರಿಸರದ ಬದುಕಿನ ಸಂವೇದನೆಯಲ್ಲಿ ಸೃಷ್ಟಿಗೊಂಡಿವೆ.  ಗ್ರಹಿಕೆಯಮೂರ್ತದಿಂದ ರೂಪಾಂತರ ಪಡೆದು ತನ್ನ ಸೃಜನಶೀಲತೆಯಲ್ಲಿ ಮಣ್ಣಿಗೆ ಹತ್ತಿರವಾಗಿ ಅದರ ಎಲ್ಲಾ ಧ್ವನಿ, ಸ್ಪರ್ಶ ಗಂಧಗಳೊಡನೆ ಬದುಕನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ. ನಮ್ಮ ಭವ್ಯ ಪರಂಪರೆ ಮತ್ತು ಸನಾತನ ಸಾಂಸ್ಕೃತಿಕ ಲೋಕವು ಪ್ರಕೃತಿದತ್ತವಾಗಿ ಬಂದಿದ್ದು ಈ ಪ್ರಕೃತಿಯು ತನ್ನದೇ ಆಶಯಗಳನ್ನು, ವೈಶಿಷ್ಟತೆಯನ್ನು, ಬದುಕಿನ ವಿಸ್ಮಯಗಳನ್ನು ಆಳವಾಗಿಹುದುಗಿಸಿಕೊಂಡಿದೆ. ಮಾನವ ಏನೇ ಕಲ್ಪನೆ ಮಾಡಿಕೊಂಡರೂ, ಅದು ಪ್ರಕೃತಿಕ ಒಂದು ಭಾಗವಾಗಿರುತ್ತದೆ. ಇದನ್ನು ಬಿಂಬಿಸುವ  ಈ ಪ್ರಯತ್ನ ಮಾಡಿದ ಇವರು ಜನಪದ ಕುರಿತಾದ ಚಿತ್ರ ಬಿಡಿಸಿದರು.

ಜನಪದ ಚಿತ್ರಗಳು ಪ್ರಾಚೀನ ಪರಂಪರೆಯನ್ನು ಹೊಂದಿದ್ದು ಇಂದಿಗೂ ತನ್ನಲ್ಲಿರುವ ಅನ್ವೇಷಣೆ, ಆಲೋಚನೆ, ಆನಂದ, ಸೌಂದರ್ಯ ಪ್ರಜ್ಞೆಗಳಿಂದ ಗತಕಾಲದ ವೈಭವವನ್ನು ವರ್ತಮಾನದಲ್ಲಿ ನಿಂತು ನೋಡಲು ಒಂದು ವೇದಿಕೆಯನ್ನು ನೀಡುತ್ತದೆ ಎಂಬುದನ್ನು ತಮ್ಮ ಕಲಾಕೃತಿಗಳಲ್ಲಿ ಬಿಂಬಿಸಿದ್ದಾರೆ.ಕಲಾಕೃತಿಗಳು ಅಲಂಕಾರಿಕ ಎಲ್ಲೆಯನ್ನು ಮೀರಿ ಸಾಮಾಜಿಕ ವಿಡಂಬನೆ, ಸಾಮಾಜಿಕ ಪರಿವರ್ತನೆಯ ಮಾಧ್ಯಮಗಳಾಗಿ ಹಾಗೂ ಜ್ಞಾನ ಚಿಂತನೆಗಳಾಗಿ ಬೆಳೆಯಬೇಕೆಂದು ಕೋಟೆಯವರ ಕಲಾಕೃತಿಗಳ  ಆಶಯ.
ಇವರ ಬಹುತೇಕ  ಕಲಾಕೃತಿಗಳು ವಿಶೇಷವಾಗಿ ಜನಪದ ಶೈಲಿಯ ನವ್ಯ ಕಲಾಕೃತಿಗಳಾಗಿದ್ದು ರೇಖಾ ಪ್ರಧಾನವಾದ ಚಿತ್ರ ಶೈಲಿಯನ್ನು ತನ್ನ ಅನುಕೂಲಕ್ಕೆತಕ್ಕಂತೆ ಬಣ್ಣಗಳ ಸಂಯೋಜನೆಯಿಂದ ಹೊಸ, ಹೊಸ ಸಾಧ್ಯತೆಗಳ ಹುಡುಕಾಟ ಮಾಡಿದ್ದಾರೆ. ಪ್ರಕೃತಿ ಮತ್ತು ಮಾನವ ಸಂಬಂಧಗಳನ್ನು ನೇರವಾಗಿ ನೀಡುವ ಪ್ರಯತ್ನ ಸರಳ ಅಲಂಕಾರವೂ ಭವ್ಯತೆಯನ್ನು ಸೃಷ್ಟಿಸುವಂತೆ ಸಂಯೋಜಿಸಲಾಗಿದೆ. ಹೆಚ್ಚು ಸಮತಲಾಕೃತಿಗಳಾಗಿದ್ದು, ಎರಡು ಆಯಾಮಗಳಲ್ಲಿ ಬಣ್ಣಗಳ ಬಳಕೆ ಮಾಡಲಾಗಿದೆ.


ಇರುವ ಖಾಲಿಜಾಗದಲ್ಲಿ ವಸ್ತು ವಿಷಯಕ್ಕನುಗುಣವಾಗಿ ಹೇಳಬೇಕಿರುವ ಮುಖ್ಯಾಂಶಗಳನ್ನು ಮೊದಲುಮಾಡಿ ಪೂರಕ ವಸ್ತು ವಿಷಯಗಳನ್ನು ಹಿನ್ನಲೆಯಾಗಿ ಬಳಸಿ ಸಾಂಕೇತಿಕ ಸನ್ನಿವೇಶಗಳನ್ನು ಸೃಷ್ಟಿಮಾಡಿ   ಮಾನವ ಸಂಬಂಧಗಳು ಆಶಯಗಳನ್ನು ಸಾಂಕೇತಿಕ ಸ್ವರೂಪವನ್ನು ಜನಪದ ಶೈಲಿಗೆ ಹೊಂದುವ ರೇಖಾಲಾಲಿತ್ಯವನ್ನು ಸಮನ್ವಯಗೊಳಿಸುವ ಇವರ ಶೈಲಿ ನನಗೆ ವೈಯುಕ್ತಿಕವಾಗಿ ಬಹಳ ಇಷ್ಟ ಆಗುತ್ತದೆ.

ಕ್ಯಾನ್ವಸ್ ಮೇಲೆ ರೇಖಾ ಸಂಯೋಜನೆ ಆದ ನಂತರ ಆಕ್ರಲಿಕ್ ತೆಳುವರ್ಣಗಳ ಲೇಪಿಸಿ  ಬೇಕಾದ ಬಿಳಿಜಾಗವನ್ನು ಹಾಗೆಯೇ ಖಾಲಿ ಕ್ಯಾನ್‌ವಸ್ ಉಳಿಸಿಕೊಂಡು ನಂತರ ಎರಡು ಆಯಾಮದ ನೆರಳು ಬೆಳಕಿನ ಬಣ್ಣಗಳೊಂದಿಗೆ ಮುಖ್ಯ ಆಕೃತಿಗಳನ್ನು ಪೂರ್ಣಗೊಳಿಸಿಕೊಂಡು ಅದರ ಆಶಯಚಿತ್ರಗಳಿಗೆ ಅದೇ ಬಣ್ಣಗಳ ಬಳಕೆ ಮಾಡಿಕೊಂಡು ಹಿನ್ನೆಲೆ ಮತ್ತು ಮುಖ್ಯ ಆಕೃತಿಗಳಿಗೆ ಸಹಜವಾಗಿ ವಿರುದ್ಧ ಬಣ್ಣಗಳ ಲೇಪನ ಮಾಡಿ . ಉಳಿದ ಖಾಲಿ ಜಾಗ ಅಥವಾ ಹಿನ್ನೆಲೆ ದೃಢೀಕರಿಸುವ ಜಾಗಕ್ಕೆ ದಪ್ಪನಾಗಿ (ಸ್ಪೆಕ್ಟರ್) ಬಳಸಿ ವಿಭಿನ್ನ ಆಯಾಮ ಸೃಷ್ಟಿಸುವ ರೀತಿ ಗಮನ ಸೆಳೆಯಿತು. ಇವರು  ಅಕ್ರಲಿಕ್ ಬಣ್ಣಗಳನ್ನು ತೈಲವರ್ಣಗಳಂತೆ ಬಳಸಿಕೊಳ್ಳುವ ಜೊತೆಗೆ ಪೋಸ್ಟರ್ ವರ್ಣಗಳ ರೀತಿ ಹಾಗೂ ಜಲವರ್ಣಗಳ ರೀತಿ ಬಳಕೆ ಮಾಡುತ್ತಾರೆ.ಗ್ರಾಮ ಸಂಸ್ಕೃತಿಯ ಆಳ ಅಧ್ಯಯನದ ಜೊತೆಗೆ ಬೇರೆ ಬೇರೆ ಜನಪದ ಕಲೆಗಳಾದ ತೊಗಲುಗೊಂಬೆ, ಅಚ್ಚೆ, ರಂಗೋಲಿ, ಬೆಳದಿಂಗಳ ಕಲೆ, ಕಸೂತಿ, ಕೌದಿ, ಬೂತಾರಾದನೆ, ಯಕ್ಷಗಾನ, ಭಿತ್ತಿಚಿತ್ರ, ಮುಖವಾಡಗಳು, ಕಿನ್ನಾಳಕಲೆ ಮುಂತಾದ ಪ್ರಾಕರಗಳ ಸಂಕೇತಗಳನ್ನು ತೆಗೆದುಕೊಂಡು ಜನಪದರ ಮೂಲ ಆಶಯ ಮತ್ತು ಅನುಭವಗಳನ್ನು ಸಂಶೋದಿಸಿ ಕ್ರಿಯಾತ್ಮಕ ರೂಪ ಕೊಡುವ ಪ್ರಯತ್ನ ಮಾಡಿದ್ದಾರೆ.

ಇಂತಹ ಅಪ್ರತಿಮ ಬಹುಮುಖ ಪ್ರತಿಭೆಯ ಕೋಟೆ ಕುಮಾರ್ ರವರು ಆರು ವರ್ಷಗಳ ಕಾಲ ನನ್ನ ಸಹೋದ್ಯೋಗಿಯಾಗಿದ್ದರು ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ.ನನ್ನ ಶೈಕ್ಷಣಿಕ, ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಹಾಗೂ ವೈಯಕ್ತಿಕವಾಗಿ ನನಗೆ ಅಮೂಲ್ಯವಾದ ಸಲಹೆ ಮಾರ್ಗದರ್ಶನ ನೀಡಿ ಬೆಂಬಲಿಸಿದ್ದಾರೆ.ಶ್ರೀಯುತರು ಇದೇ ಡಿಸೆಂಬರ್ ತಿಂಗಳ 31 ರಂದು  ಸರ್ಕಾರಿ  ಕೆಲಸದಿಂದ ವಯೋ ನಿವೃತ್ತಿ ಹೊಂದುತ್ತಿದ್ದಾರೆ.ಇವರಿಗೆ ದೇವರು ಆಯುರಾರೋಗ್ಯ ಐಶ್ವರ್ಯ ಕರುಣಿಸಲಿ ಅವರ ಸಾಹಿತ್ಯ, ಕಲಾ ಸೇವೆ ಮುಂದುವರೆಯಲಿ ಎಂದು ನಾನು ಮನದುಂಬಿ ಹಾರೈಸುವೆ.ನೀವೂ ಕೋಟೆ ಕುಮಾರ್ ರವರಿಗೆ ಹಾರೈಸಲು ಈ ನಂಬರ್ 9886258195

ಸಿಹಿಜೀವಿ ವೆಂಕಟೇಶ್ವರ
ಸಾಹಿತಿಗಳು ಹಾಗೂ ಶಿಕ್ಷಕರು
ತುಮಕೂರು
9900925529.



11 ಡಿಸೆಂಬರ್ 2025

ಗಾಂಧಾರಿ ಕಲೆ ಯಿಂದ ಶಾಲಾ ಕಾಲೇಜುಗಳಲ್ಲಿ ಕಾಪಿ ತಡೆಯಬಹುದು!


 ಪರೀಕ್ಷೆಗಳಲ್ಲಿ ಕಾಪಿ ಮಾಡುವುದು  ದೊಡ್ಡ ಪಿಡುಗಾಗಿದ್ದು ಕೆಲ ಪರೀಕ್ಷೆಗಳಿಗೆ ಸಿ ಸಿ ಟಿ‌ವಿ ಕ್ಯಾಮರಾ ಹಾಕಿ ವೆಬ್ ಕಾಸ್ಟ್ ಮಾಡಿದರೂ ಕೆಲವೆಡ ನಕಲಾಗುತ್ತಿರುವ ಈ ಕಾಲದಲ್ಲಿ  ಬಳ್ಳಾರಿಯಲ್ಲಿ  ಓರ್ವ ವಿದ್ಯಾರ್ಥಿನಿ  ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರಾಮಾಣಿಕತೆಯಿಂದ  ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ಸರ್ವರ ಮೆಚ್ಚುಗೆ ಗಳಿಸಿದ್ದಾಳೆ.


  ಹಿಮಾಬಿಂದು ಎಂಬ ಈ ವಿದ್ಯಾರ್ಥಿನಿ
'ಗಾಂಧಾರಿ' ವಿದ್ಯೆ ಕಲಿತು  ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ 8ನೇ ತರಗತಿಯ ಎಫ್‌ಎ 4ರ ಆರು ವಿಷಯ ಗಳ ಪರೀಕ್ಷೆ ಬರೆದು  ಗಮನ ಸೆಳೆದಿದ್ದಾಳೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶ, ವಾಸನೆ ಹಾಗೂ ಶಬ್ದದಿಂದಲೇ ವ್ಯಕ್ತಿ ಹಾಗೂ ವಸ್ತುಗಳನ್ನು ಗುರುತಿಸುವ ಅಪರೂಪದ 'ಗಾಂಧಾರಿ ಕಲೆ' ಕರಗತ ಮಾಡಿಕೊಂಡಿರುವುದು ವಿಶೇಷ.

ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ರಾಮಾಂಜಿನಿ ಹಾಗೂ ಕವಿತಾ ದಂಪತಿ ಹಿರಿಯ ಮಗಳು ಹಿಮಾಬಿಂದು, ಪದ್ಮನಾಭ ಗುರೂಜಿ ಆನ್‌ಲೈನ್‌ನಲ್ಲಿ ನೀಡಿದ ಪಾಠಗಳ ನೆರವಿನಿಂದ ಈ ವಿದ್ಯೆ ಕಲಿತಿದ್ದಾಳೆ.

"ನನ್ನ ಮಗಳು ನಾಲ್ಕನೇ ತರಗತಿ ಯಲ್ಲಿದ್ದಾಗ ಕಲಿಕೆಯಲ್ಲಿ ಬಹಳ ಹಿಂದುಳಿದಿದ್ದಳು. ಗಾಂಧಾರಿ ವಿದ್ಯೆ ಕಲಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಸದಾ ಕ್ರಿಯಾಶೀಲರಾಗಿ ಇರುತ್ತಾರೆ ಎನ್ನುವ ಸ್ನೇಹಿತರ ಸಲಹೆ ಮೇರೆಗೆ ಈ ವಿದ್ಯೆ ಕಲಿಸಿದೆ. ಈ ಪ್ರಯೋಗದ ನಂತರ ಕ್ಲಾಸ್‌ಗೆ ಪ್ರಥಮ ಸ್ಥಾನದಲ್ಲಿ ಬರುತ್ತಿದ್ದಾಳೆ,'' ಎಂದು ಆ ವಿದ್ಯಾರ್ಥಿನಿಯ ತಂದೆ  ರಾಮಾಂಜಿನಿ ರೆಡ್ಡಿ ಸಂತಸ ಹಂಚಿಕೊಂಡಿದ್ದಾರೆ.

ಎಲ್ಲಾ ಸ್ತರಗಳ ಪರೀಕ್ಷೆಯಲ್ಲಿ ಇಂತಹ ಗಾಂಧಾರಿ ವಿದ್ಯೆ ಅಳವಡಿಸಿದರೆ ಹೇಗೆ? ಸಿ ಸಿ ಟಿ ವಿ ಪರೀಕ್ಷಾ ಸಿಬ್ಬಂದಿ ಇತರೆ ಖರ್ಚನ್ನು ಉಳಿಸಬಹುದೇ? ಈ ವಿಷಯದ ಬಗ್ಗೆ ಚರ್ಚೆ ಅಗತ್ಯವಿದೆ.ನೀವೇನಂತೀರಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

21 ನವೆಂಬರ್ 2025

ಡಾಲ್ಬಿ ಅಟ್ಮಾಸ್ ನಲ್ಲಿ ಸಿನಿಮಾ ನೋಡೋದೆ ಮಜಾ...





ತಾವು ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ತಮ್ಮ ಮನರಂಜನೆಗೆ ಮೀಸಲಿಡುವ ಜನರಲ್ಲಿ ನಾನೂ ಒಬ್ಬ.ಉತ್ತಮ ಕಥೆ, ಬಿಗಿಯಾದ ಚಿತ್ರಕಥೆ, ಹಿನ್ನೆಲೆ ಸಂಗೀತ, ಮಧುರವಾದ ಹಾಡು ಹಾಸ್ಯ ಇರುವ ಚಿತ್ರ ಯಾವುದಾದರೂ ಯಾವುದೇ ಭಾಷೆಯಾದರೂ ನಾನು ಥಿಯೇಟರ್‌ ಗೆ ಹೋಗುತ್ತೇನೆ‌.ಕೆಲವೊಮ್ಮೆ ಕುಟುಂಬ ಸಮೇತ ಕೆಲವೊಮ್ಮೆ ಒಂಟಿಯಾಗಿಯೇ ಸಿನಿಮಾ ವೀಕ್ಷಣೆ ಮಾಡಲು ಹೊರಡುವೆ.ಹತ್ತಾರು ಓಟಿಟಿ ನೂರಾರು ವೆಬ್ಸೈಟ್ ಗಳಲ್ಲಿ ಸಿನಿಮಾ ಲಭ್ಯವಿದ್ದರೂ ನಾನು ಅಲ್ಲಿ ಸಿನಿಮಾ ನೋಡಲು ಇಚ್ಚಿಸುವುದಿಲ್ಲ. ಸಿನಿಮಾ ಮಂದಿರದಲ್ಲಿ  ಡಾಲ್ಬಿ ಅಟ್ಮಾಸ್  ಎಫೆಕ್ಟ್ ನಲ್ಲಿ ಸಿನಿಮಾ ಎಂಜಾಯ್ ಮಾಡುವುದೇ ಇಂದು ಸುಂದರ ಅನುಭೂತಿಯನ್ನು ನೀಡುತ್ತದೆ.



ಸಿಹಿಜೀವಿ ವೆಂಕಟೇಶ್ವರ...

ತುಮಕೂರು

11 ನವೆಂಬರ್ 2025

ಅಮ್ಮ ಮಗನಿಗೆ ನಮನಗಳು..

ಕರುನಾಡಿನ ಜನತೆಯಾದ ನಾವು ಸದಾ ಕೃತಜ್ಞತೆ ಸೂಚಿಸಿ  ಸ್ಮರಿಸುವ ಹೆಸರುಗಳಲ್ಲಿ ಈ ಚಿತ್ರದಲ್ಲಿರುವ ತಾಯಿ ಮಗನ ಹೆಸರು ಅಗ್ರ ಸ್ಥಾನದಲ್ಲಿರುತ್ತದೆ.ಅಂದಿನ ನಮ್ಮ ಮೈಸೂರು ಸಂಸ್ಥಾನವನ್ನು ಮಾದರಿ ರಾಜ್ಯ ಮಾಡುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹಳ ಉತ್ತಮ ಕಾರ್ಯ ಮಾಡಿದ್ದಾರೆ.ಚಿಕ್ಕ ವಯಸ್ಸಿನಲ್ಲೇ ರಾಜನಾದ ಮಗನಿಗೆ  ಬಾಲ್ಯದಿಂದಲೂ   ಉತ್ತಮ ಶಿಕ್ಷಣ ನೀಡಿ ಒಬ್ಬ ಆಡಳಿತಗಾರನಾಗಿ ಮಾಡುವ ಕಾರ್ಯ ಮಾಡುತ್ತಲೇ ತಾನೂ ಓರ್ವ ಶ್ರೇಷ್ಠ ಆಡಳಿತಗಾರ್ತಿ ಎಂದು ತೋರಿದ ವಾಣಿ ವಿಲಾಸ ಕೆಂಪರಾಜ ನಂಜಮ್ಮಣ್ಣಿ ರವರನ್ನು ನಾವು ದಿನವೂ ನೆನೆಯಬೇಕು.ಇತ್ತೀಚಿಗೆ ವಾಣಿ ವಿಲಾಸ ಪುರಕ್ಕೆ ಕುಟುಂಬ ಸಮೇತ ಭೇಟಿ ನೀಡಿದಾಗ ಈ ಪುತ್ತಳಿಗಳನ್ನು ಕಂಡು ಪುಳಕಗೊಂಡು ಮನದುಂಬಿ ನಮಿಸಿದೆ.ನಮ್ಮ ಮಕ್ಕಳಿಗೆ ಅವರ ಬಗ್ಗೆ ಹೆಮ್ಮೆಯಿಂದ ಪರಿಚಯ ಮಾಡಿದೆ..

ಹಿರಿಯೂರು ತಾಲ್ಲೂಕಿನ ರೈತರು ಇವರನ್ನು ಪೂಜಿಸುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗದ ವಿವಿಧ ನಗರಗಳು ಸಹ ಮಾರಿ ಕಣಿವೆ ನೀರನ್ನು ಕುಡಿಯುತ್ತಿದ್ದಾರೆ.

ಅಮ್ಮ ಮಗನಿಗೆ ಎಲ್ಲರ ಪರವಾಗಿ ಧನ್ಯವಾದಗಳು..

#VvSagarDam #Hiriyur #Chitradurga #Vanivilaasa #TravelDiaries #NatureLovers #ExploreIndia #WaterDam #AdventureAwaits #LandscapePhotography #IncredibleIndia #HiddenGems #VisitKarnataka #TouristAttraction #TravelGoals #ScenicViews #DiscoverMore #BeautifulDestinations #KarnatakaTourism


 #VvSagarDam #Hiriyur #Chitradurga #Vanivilaasa #TravelDiaries #NatureLovers #ExploreIndia #WaterDam #AdventureAwaits #LandscapePhotography #IncredibleIndia #HiddenGems #VisitKarnataka #TouristAttraction #TravelGoals #ScenicViews #DiscoverMore #BeautifulDestinations #KarnatakaTourism

31 ಅಕ್ಟೋಬರ್ 2025

ಕರುನಾಡ ಕಣ್ಮಣಿಗಳು.. ಭಾಗ ೧ ಸಿದ್ದಪ್ಪ ಕಂಬಳಿ

 


ಕರುನಾಡ ಕಣ್ಮಣಿಗಳು..

ಭಾಗ ೧

ಸಿದ್ದಪ್ಪ ಕಂಬಳಿ





ಕರ್ನಾಟಕದ ಏಕೀಕರಣದ ಕನಸು ಕಂಡು ಆ ನಿಟ್ಟಿನಲ್ಲಿ ಹೋರಾಟ ಮಾಡಿದ ಅನೇಕ ಮಹನೀಯರಲ್ಲಿ ಸಿದ್ದಪ್ಪ ಕಂಬಳಿ ಕೂಡಾ ಒಬ್ವರು. ನಮ್ಮ ನಾಡಿನ ಜನರ ಶಿಕ್ಷಣಕ್ಕಾಗಿ ಅನೇಕ  ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಸಿದ್ದಪ್ಪ ನವರನ್ನು ಇಂದು ನಾವೆಲ್ಲರೂ ಕೃತಜ್ಞತೆಯಿಂದ ನೆನೆಯಬೇಕಿದೆ.

ತೋಟಪ್ಪ ಮತ್ತು ಗಂಗಮ್ಮ ದಂಪತಿಗಳ ಮಗನಾಗಿದ್ದ ಸಿದ್ದಪ್ಪ ರವರು 1882ರಲ್ಲಿ ಜನಿಸಿದರು. ಈ ದಂಪತಿಗಳು ಕಂಬಳಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಶ್ರೀ ಸಿದ್ಧಾರೂಢರ ಆಶೀರ್ವಾದದಿಂದ ಸಿದ್ದಪ್ಪ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು ಮತ್ತು ಸಮಾಜದ ಬಡ ವರ್ಗಗಳಿಗೆ ಸೇವೆ ಸಲ್ಲಿಸುವಲ್ಲಿ ನಂಬಿಕೆ ಇಟ್ಟ ವ್ಯಕ್ತಿಯಾಗಿ ವಿಕಸನಗೊಂಡರು. ಹುಬ್ಬಳ್ಳಿ ಮತ್ತು ಧಾರವಾಡದ ಕನ್ನಡ ಮಾತನಾಡುವ ಪ್ರದೇಶಗಳಲ್ಲಿಯೂ ಮರಾಠಿ ಪ್ರಾಬಲ್ಯ ಹೊಂದಿದ್ದ ಸಮಯದಲ್ಲಿ, ಸಿದ್ದಪ್ಪ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಐತಿಹಾಸಿಕ ಪಟ್ಟಣವಾದ ಲಕ್ಕುಂಡಿಯಲ್ಲಿ ಮುಗಿಸಿದರು. ನಂತರ ಧಾರವಾಡದಲ್ಲಿ ಪ್ರೌಢಶಾಲೆಗೆ ಹೋಗಿ ಪುಣೆಯಲ್ಲಿ ಪದವಿ ಪಡೆದರು. ಅವರು ಬಾಂಬೆಯ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದು  ಪ್ರಸಿದ್ಧ ವಕೀಲರಾದರು. ಕಾಲ ಕಳೆದಂತೆ ಅವರು ದೀನದಲಿತರ ಪರವಾಗಿ ಹೋರಾಡಿದರು.  ಅನೇಕ ಕನ್ನಡ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕಂಬಳಿಯವರು
1917 ರಲ್ಲಿ  ಆಗಿನ  ಹುಬ್ಬಳ್ಳಿ  ಪುರಸಭೆಯ ಸದಸ್ಯರಾಗಿ ಆಯ್ಕೆಯಾದರು. 1921 ರಲ್ಲಿ CMC ಯ ಕಾನೂನು ಸಲಹೆಗಾರರಾದರು.ವಕೀಲರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಮಂಡಳಿಯ ಅಧ್ಯಕ್ಷರಾಗಿ ಜಾಗೂ  ಬಾಂಬೆ ಪ್ರಾಂತೀಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಶಿಕ್ಷಕರ ತರಬೇತಿ ಅಗತ್ಯ ಕಂಡ ಅವರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಕರ ತರಬೇತಿ ಕಾಲೇಜನ್ನು ಸ್ಥಾಪಿಸಿದರು. ಆದರೆ, ಸರ್ಕಾರವು ಕಠಿಣ ಕ್ರಮಗಳನ್ನು ಉಲ್ಲೇಖಿಸಿ 1922 ರಲ್ಲಿ ಅದನ್ನು ಮುಚ್ಚಿತು. ಕಾಲೇಜನ್ನು ಮತ್ತೆ ತೆರೆಯುವಂತೆ ಕಂಬಳಿಯವರು ನೋಡಿಕೊಂಡರು. 
ಹರಿದು ಹಂಚಿಹೋಗಿದ್ದ ನಮ್ಮ ನಾಡಿನ ಎಕೀಕರಣ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸಿದ ಅವರು
1926 ರಲ್ಲಿ ಕರ್ನಾಟಕ ಏಕೀಕರಣ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಆಗಿನ  ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಅವರ ಕರ್ತವ್ಯ, ಕಾರ್ಯವೈಖರಿ, ಅಧ್ಯಯನಶೀಲತೆ ಮತ್ತು ಸಮರ್ಪಣೆಯಿಂದ ಬ್ರಿಟಿಷರು ಬೆರಗಾದರು. ವೆಚ್ಚವನ್ನು ಉಳಿಸಲು ಸರ್ಕಾರ ಧಾರವಾಡದ ಕರ್ನಾಟಕ ಕಾಲೇಜನ್ನು ಮುಚ್ಚಲು ಯೋಜಿಸುತ್ತಿತ್ತು ಆದರೆ ಕಾಲೇಜು ಮುಚ್ಚಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಂಬಳಿಯವರು  ಕಠಿಣ ನಿಲುವು ತೆಗೆದುಕೊಂಡರು.
ಈ ಕಾಲೇಜನ್ನು ಸರ್ಕಾರಿ ನಿಧಿಯಿಂದ ಸ್ಥಾಪಿಸಲಾಗಿಲ್ಲ, ಬದಲಾಗಿ ಜನರ ಕೊಡುಗೆಯಿಂದ ಸ್ಥಾಪಿಸಲಾಗಿದೆ ಎಂದು ಹೇಳುವ ಮೂಲಕ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಕಾಲೇಜು ಮುಚ್ಚಿದರೆ ಜನರು ತಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದರು. ಅವರ ಒತ್ತಾಯದ ಮೇರೆಗೆ ಸರ್ಕಾರ ಕಾಲೇಜನ್ನು ಮುಚ್ಚುವ ಕ್ರಮವನ್ನು ಕೈಬಿಟ್ಟಿತು. ನಂತರದ ದಿನಗಳಲ್ಲಿ ಈ ಸಂಸ್ಥೆಯು ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿ ಪ್ರಗತಿ ಸಾಧಿಸಿತು. 


ಕರ್ನಾಟಕದ ಏಕೀಕರಣವು ಸಿದ್ದಪ್ಪರವರ ಬಹುಕಾಲದ ಕನಸಾಗಿತ್ತು. ದುರದೃಷ್ಟವಶಾತ್ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದರು.  ಆರು ವರ್ಷಗಳ ಅನಾರೋಗ್ಯದ ನಂತರ ಏಪ್ರಿಲ್ 1956 ರಲ್ಲಿ ನಿಧನರಾದರು. ಕೆಲವು ತಿಂಗಳುಗಳ ನಂತರ, ನವೆಂಬರ್ 1956 ರಲ್ಲಿ ಏಕೀಕೃತ ಕರ್ನಾಟಕ ಉದಯವಾದಾಗ ಅವರ ಕನಸು ನನಸಾಗಿತ್ತು.  ಆದರೆ ಅದನ್ನು ನೋಡಲು ಅವರಿರಲಿಲ್ಲ.
ಇಂದಿನ ‌ಕಲುಷಿತ ರಾಜಕೀಯ ವ್ಯವಸ್ಥೆಯನ್ನು ನೀಡಿದಾಗ
ರಾಜಕೀಯ ಪ್ರವೇಶಿಸಲು ಯೋಜಿಸುತ್ತಿರುವ ಯುವಕರಿಗೆ ಕಂಬಳಿಯವರು  ನೀಡಿದ ಸಂದೇಶವು ಗಮನ ಸೆಳೆಯುತ್ತದೆ. "ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಪೋಷಿಸಲು ನಿಮಗೆ ಸಾಧನವಿದ್ದರೆ ಮಾತ್ರ ನೀವು ರಾಜಕೀಯಕ್ಕೆ ಧುಮುಕಿ. ಇಲ್ಲದಿದ್ದರೆ, ರಾಜಕೀಯ ಪ್ರವೇಶಿಸುವ ಕನಸು ಕಾಣಬೇಡಿ. ಸುರಕ್ಷಿತ ಮತ್ತು ಸುಸ್ಥಿರ ಆದಾಯದ ಮೂಲವಿಲ್ಲದ ರಾಜಕಾರಣಿ ಭ್ರಷ್ಟನಾಗುತ್ತಾನೆ" ಅವರ ಮಾತುಗಳು ಎಷ್ಟು ಸತ್ಯ ಎಂಬುದಕ್ಕೆ ಇಂದಿನ ರಾಜಕಾರಣಿಗಳೇ ಜೀವಂತ ಸಾಕ್ಷಿ.



ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು  ಸಿದ್ದಪ್ಪ ಕಾಂಬ್ಳಿಯವರ ಪ್ರತಿಮೆಯನ್ನು ಸ್ಥಾಪಿಸಿದೆ. ರಸ್ತೆಯೊಂದಕ್ಕೆ ಅವರ ಹೆಸರನ್ನಿಟ್ಟು ಗೌರವಿಸಿದೆ. ಧಾರವಾಡದ ಕರ್ನಾಟಕ ಕಾಲೇಜಿನ ಆವರಣದಲ್ಲಿ ಕಾಂಬ್ಳಿಯವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
 
ಇಂತಹ ಮಹಾನ್ ನಾಯಕರ ಆದರ್ಶಗಳನ್ನು ನಮ್ಮ ಯುವಕರು ಇಂದು ಮೈಗೂಡಿಸಿಕೊಳ್ಳಲಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು