31 ಡಿಸೆಂಬರ್ 2024

ಅರೆ ಬರೆ ಜ್ಞಾನ ವಿಶಾಕಾರಿ..(ಲೇಖನ)


 


ಅರೆಬರೆ ಜ್ಞಾನ ವಿನಾಶಕಾರಿ


ಏರ್‌ಪ್ಲೇನ್ ಕ್ಲೀನರ್ ಒಬ್ಬ  ಪೈಲಟ್‌ನ ಕಾಕ್‌ಪಿಟ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ, "ಹೌ ಟು ಫ್ಲೈ ಆನ್ ಏರ್‌ಪ್ಲೇನ್ ಫಾರ್ ಬಿಗಿನರ್ಸ್  (ವಾಲ್ಯೂಮ್1)" ಎಂಬ  ಪುಸ್ತಕವನ್ನು ನೋಡಿದ.


  ಮೊದಲ ಪುಟವನ್ನು ತೆರೆದ "ಎಂಜಿನ್ ಅನ್ನು ಪ್ರಾರಂಭಿಸಲು, ಕೆಂಪು ಗುಂಡಿಯನ್ನು ಒತ್ತಿ...".  ಅವನು ಹಾಗೆ ಮಾಡಿದನು ಮತ್ತು ವಿಮಾನದ ಎಂಜಿನ್ ಆನ್ ಆಯ್ತು...


 ಅವನು ಸಂತೋಷದಿಂದ ಮುಂದಿನ ಪುಟವನ್ನು ತೆರೆದ...:

 "ಏರೋಪ್ಲೇನ್ ಚಲಿಸುವಂತೆ ಮಾಡಲು, ನೀಲಿ ಗುಂಡಿಯನ್ನು ಒತ್ತಿ... "ಅವನು ಹಾಗೆ ಮಾಡಿದನು ಮತ್ತು ವಿಮಾನವು ಅದ್ಭುತ ವೇಗದಲ್ಲಿ ಚಲಿಸಲು ಪ್ರಾರಂಭಿಸಿತು ...


  ಹಾರಬೇಕೆಂದು ಬಯಸಿ,  ಮೂರನೇ  ಪುಟವನ್ನು ತೆರೆದ  ವಿಮಾನವನ್ನು ಹಾರಿಸಲು ದಯವಿಟ್ಟು ಹಸಿರು ಬಟನ್ ಒತ್ತಿರಿ...ಎಂದಿತ್ತು "ಅವನು ಹಾಗೆ ಮಾಡಿದ ಮತ್ತು ವಿಮಾನವು ಹಾರಲು ಪ್ರಾರಂಭಿಸಿತು ...


 ಅವನು ಉತ್ಸುಕನಾಗಿದ್ದ...!!


 ಇಪ್ಪತ್ತು  ನಿಮಿಷಗಳ ಹಾರಾಟದ ನಂತರ, ತೃಪ್ತನಾಗಿ ಆಕಾಶದಿಂದ ಭೂಮಿಗೆ ಇಳಿಯಲು ಬಯಸಿದ್ದ. ಆದ್ದರಿಂದ ಅವನು ನಾಲ್ಕನೇ  ಪುಟಕ್ಕೆ ನೋಡಲು ಪುಸ್ತಕ ತಿರುವಿದ. ಅವನಿಗೆ ಅಚ್ಚರಿ ಕಾದಿತ್ತು.

  ನಾಲ್ಕನೇ ಪುಟದಲ್ಲಿ ಹೀಗಿತ್ತು  "ವಿಮಾನವನ್ನು ಹೇಗೆ ಇಳಿಸುವುದು ಎಂದು ತಿಳಿಯಲು, ದಯವಿಟ್ಟು ಹತ್ತಿರದ ಪುಸ್ತಕದಂಗಡಿಯಲ್ಲಿ ವಾಲ್ಯೂಮ್ 2 ಪುಸ್ತಕ  ಖರೀದಿಸಿ!"


ನಾವೂ ಬಹಳ ಜನ ಹೀಗೆಯೇ ಯಾವುದೇ ವಿಷಯಗಳ ಬಗ್ಗೆ ಸಂಪೂರ್ಣವಾಗಿ ತಿಳಿಯದೇ ಸಾಹಸ ಕಾರ್ಯಗಳಿಗೆ ಕೈ ಹಾಕಿ ಕೈ ಸುಟ್ಟುಕೊಂಡ ಉದಾಹರಣೆಗಳು ಬಹಳ ಇವೆ.half knowledge dangerous ಅಲ್ಲವೆ?


 ಸಿಹಿಜೀವಿ ವೆಂಕಟೇಶ್ವರ


30 ಡಿಸೆಂಬರ್ 2024

ಅಮ್ಮನ ಮುತ್ತಿನ ಶಕ್ತಿ ! (ಲೇಖನ )


 ಅಮ್ಮನ ಮುತ್ತಿನ ಶಕ್ತಿ 


ನಮ್ಮ ಮಕ್ಕಳ ಇಷ್ಟ, ಅವರ ಪ್ರತಿಭೆಯನ್ನು ಗುರುತಿಸುವಲ್ಲಿ ಬಹುತೇಕ ಪೋಷಕರು ಸೋತಿದ್ದೇವೆ.ನಮ್ಮಿಷ್ಟದ ಡಾಕ್ಟರ್ ಇಂಜಿನಿಯರ್ ನಮ್ಮ ಮನೆಯಿಂದ ಬರಲೆಂಬ ಹಪ ಹಪಿ ನಮ್ಮದು. ಅಲ್ಲೊಬ್ಬ ತಾಯಿ ಅಂದು ಬಾಲ್ಯದಲ್ಲೇ ತನ್ನ ಮಗನ ಆಸಕ್ತಿ ಗುರ್ತಿಸಿ ನೀಡಿದ ಒಂದು ಪ್ರೋತ್ಸಾಹದಾಯಕ ಪ್ರೀತಿಯ ಮುತ್ತು ಅವನನ್ನು ಮುಂದೆ ಜಗತ್ತಿನ ಶ್ರೇಷ್ಠ ಚಿತ್ರ ಕಲಾವಿದರ ಸಾಲಿನಲ್ಲಿ ನಿಲ್ಲಿಸಿತು.

ಆ ಶ್ರೇಷ್ಠ ಕಲಾವಿದರನೇ ಬೆಂಜಮಿನ್ ವೆಸ್ಟ್!


 ಎರಡು ಶತಮಾನಗಳ ಹಿಂದೆ ರಚಿಸಲ್ಪಟ್ಟ ಅವನ ಕೃತಿಗಳು ಇಂದು ಲಕ್ಷಾಂತರ ಡಾಲರುಗಳಷ್ಟು ಬೆಲೆಬಾಳುತ್ತವೆ.  ಬೆಂಜಮಿನ್ ವೆಸ್ಟ್  ಇಂಗ್ಲೆಂಡಿನ ರಾಯಲ್ ಅಕ್ಯಾಾಡೆಮಿ ಆಫ್ ಆರ್ಟ್ ಸಂಸ್ಥೆಯ ಅಧ್ಯಕ್ಷರಾಗಿದ್ದವರು. ಆಗಿನ ಇಂಗ್ಲೆಂಡ್ ದೊರೆಗಳ ಆಪ್ತಮಿತ್ರರಾಗಿದ್ದವರು.

 ಬೆಂಜಮಿನ್ನರು ಯಾವುದೇ ಕಲಾಶಾಲೆಯ ವಿದ್ಯಾರ್ಥಿಯಾಗಿ ಕಲೆಯನ್ನು ಕಲಿತವರಲ್ಲ. ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದಾಗ ಯಾವುದೇ ಚಿತ್ರಕಲಾ ಶಾಲೆಗೂ ಹೋಗದೆ ಯಾರಿಂದಲೂ ಪಾಠ ಹೇಳಿಸಿಕೊಳ್ಳದೆ ಇಷ್ಟೊಂದು ಪ್ರಖ್ಯಾತ ಚಿತ್ರಕಾರರಾಗಲು ಸ್ಫೂರ್ತಿ ಯಾರೆಂದು ಕೇಳಿದಾಗ ಅವರು ನನ್ನ ಹೆತ್ತ ತಾಯಿ ನನಗೆ ಕೊಟ್ಟ ಒಂದು ಸಿಹಿಮುತ್ತು ನಾನು ಈ ಮಟ್ಟಕ್ಕೇರಲು ಕಾರಣವಾಯಿತು! ಎಂದರಂತೆ. ಅದು ಹೇಗೆಂದು ಕೇಳಿದಾಗ ಅವರು ಹೇಳಿಕೊಂಡ ಘಟನೆ ಹೀಗಿದೆ.


ಬಡ ಕುಟುಂಬದವರಾದ ಅವರ ತಾಯಿ ಸಂಸಾರ ನಿರ್ವಹಣೆಗಾಗಿ ಸಿರಿವಂತರ ಮನೆಗಳಲ್ಲಿ ಕೆಲಸ ಮಾಡಬೇಕಾಗಿತ್ತಂತೆ. ಒಮ್ಮೆ ಯಾವುದೋ ಮನೆಯವರು ಆಕೆಗೆ ಬರೆಯಲು ಉಪಯೋಗಿಸುವ ಕಪ್ಪು, ನೀಲಿ, ಕೆಂಪು ಮತ್ತು ಹಸಿರು ಶಾಯಿಯ ಶೀಷೆಗಳನ್ನು ತರಲಿಕ್ಕೆ ಕಳುಹಿಸಿದ್ದರಂತೆ. ಅವನ್ನೆಲ್ಲ ಆಕೆ ಕೊಂಡುಕೊಳ್ಳುವಷ್ಟರಲ್ಲಿ ಕತ್ತಲಾಗಿತ್ತು. ಮರುದಿನ ಅದನ್ನು ಕೊಂಡೊಯ್ದರಾದೀತು ಎಂದುಕೊಂಡು ಆಕೆ ಅವೆಲ್ಲವನ್ನು ಮನೆಗೆ ತಂದಿಟ್ಟರು. ಆಕೆಗೆ ಬೆಂಜಮಿನ್ ವೆಸ್ಟ್ ಒಬ್ಬ ಏಳೆಂಟು ವರ್ಷದ ಮಗ ಮತ್ತು ಎರಡು ವರ್ಷ ವಯಸ್ಸಿನ ಸ್ಯಾಲಿ ಎಂಬ ಹೆಣ್ಣು ಮಗಳು ಇದ್ದರು. ಮರುದಿನ ಮುಂಜಾನೆ ಆಕೆ ಕೆಲಸಕ್ಕೆ ಹೋಗುವಾಗ ಬಣ್ಣಬಣ್ಣದ ಶಾಯಿಯ ಶೀಷೆಗಳನ್ನು ತೆಗೆದುಕೊಂಡು ಹೋಗಲು ಮರೆತುಬಿಟ್ಟರು.


ಆಕೆ ಮಗ ಬೆಂಜಮಿನನಿಗೆ ನಿನ್ನ ತಂಗಿ ಸ್ಯಾಾಲಿಯನ್ನು ನಾನು ಬರುವವರೆಗೂ ನೋಡಿಕೋ ಎಂದು ಹೇಳಿ ಹೋದರು. ತಂಗಿಯನ್ನು ಆಟವಾಡಿಸುತ್ತಿದ್ದ ಬೆಂಜಮಿನ್ನನ ಕಣ್ಣಿಗೆ ಬಣ್ಣಬಣ್ಣದ ಶಾಯಿಯ ಶೀಶೆಗಳು ಕಂಡವು. ಆತ ಅವನ್ನು ತನಗೆತಿಳಿದಂತೆ ಮಿಶ್ರಣ ಮಾಡಿದ. ಅವನ್ನು ಬಳಸಿಕೊಂಡು ತನ್ನ ಮುದ್ದು ತಂಗಿ ಸ್ಯಾಲಿಯ ಚಿತ್ರವನ್ನು ಗೋಡೆಯ ಮೇಲೆ ಬಿಡಿಸತೊಡಗಿದ.  ಹಾಗೆ ಮಾಡುವಾಗ ಮನೆಯ ನೆಲದ ಮೇಲೆ, ಅಲ್ಲಿದ್ದ ಕುರ್ಚಿ-ಮೇಜು-ಮಂಚಗಳ ಮೇಲೆ ಮತ್ತು ಗೋಡೆಯ ಮೇಲೆ ಬಣ್ಣ ಚೆಲ್ಲಾಪಿಲ್ಲಿಯಾಗಿ ಚೆಲ್ಲಿತ್ತು. ನೋಡಲು ಅಲ್ಲೇನೋ  ರಾದ್ಧಾಂತವಾದಂತೆ ಕಾಣುತ್ತಿತ್ತು!


ಬೆಂಜಮಿನರ ತಾಯಿ ಮನೆಗೆ ಬಂದಾಗ, ಮನೆಯ ನೆಲ, ಗೋಡೆಗಳು, ಮೇಜು-ಮಂಚಗಳ ಮೇಲೆ ಬಿದ್ದಿದ್ದ ಬಣ್ಣದೋಕುಳಿಯ ರಾದ್ಧಾಂತವನ್ನು ನೋಡಿದರು. ಬೇರೆ ಯಾರಾದರೂ ತಾಯಿ ಆ ರಾದ್ಧಾಂತವನ್ನು ನೋಡಿ ಏನು ಮಾಡಿತಿದ್ದರೋ ಏನೋ? ಆದರೆ ಆಕೆ ಮಗನ ಮೇಲೆ ಸಿಟ್ಟುಗೊಳ್ಳಲಿಲ್ಲ. ಮಗನಿಗೆ ಪೆಟ್ಟು ಕೊಡಲಿಲ್ಲ. ಗೋಡೆಯ ಮೇಲೆ ಮುಸುಕು ಮುಸುಕಾಗಿ ಬಿಡಿಸಲಾಗಿದ್ದ ಮಗಳು ಸ್ಯಾಲಿಯ ಚಿತ್ರವನ್ನು ನೋಡಿದರು. ಮಗನನ್ನು ಹತ್ತಿರ ಕರೆದು ಈ ಚಿತ್ರವನ್ನು ಬಿಡಿಸಿದ್ದು ನೀನೇನಾ? ಎಂದು ಕೇಳಿದರು. ಆತ ಅಂಜುತ್ತಲೇ ಹೌದೆಂದ. ತಕ್ಷಣ ತಾಯಿ ಮಗನನ್ನು ತಬ್ಬಿಕೊಂಡರು. ಕೆನ್ನೆಗೆ ಮುತ್ತು ಕೊಟ್ಟರು. ಎಷ್ಟು ಅದ್ಭುತವಾಗಿ ನಿನ್ನ ತಂಗಿಯ ಚಿತ್ರವನ್ನು ಬಿಡಿಸಿದ್ದೀಯ ಎಂದು ಉದ್ಘಾರ ತೆಗೆದರು!


ಮುಂದೊಂದು ದಿನ ಹೆಸರಾಂತ ಚಿತ್ರಕಾರನಾದ ಬೆಂಜಮಿನ್ ವೆಸ್ಟ್ ಅಂದು ಹುಟ್ಟಿಕೊಂಡ! ಆ ಮುತ್ತು ಮತ್ತು ಪ್ರೋತ್ಸಾಹದ ಮಾತುಗಳೇ ಆತನಿಗೆ ಸ್ಫೂರ್ತಿ ಎಂದು ಬೆಂಜಮಿನ್ನರು ಹೇಳಿಕೊಂಡರಂತೆ! ಅಂದಿನ ಪರಿಸ್ಥಿತಿಯಲ್ಲಿ ಬೆಂಜಮಿನರ ತಾಯಿಯ ಸ್ಥಳದಲ್ಲಿ ನಾವಿದ್ದಿದ್ದರೆ ನಾವೇನು ಮಾಡುತ್ತಿದ್ದೆವು? 

ಒಮ್ಮೆ ಯೋಚಿಸೋಣ.ನಮ್ಮ ಮಕ್ಕಳ ಆಸಕ್ತಿ ಅಭಿರುಚಿಗಳನ್ನು ಗೌರವಿಸೋಣ.ಬೆಂಬಲಿಸೋಣ.

ಯಾರಿಗೆ ಗೊತ್ತು

ಮುಂದೊಂದು ದಿನ ನಮ್ಮ ಮಕ್ಕಳು ಅವರಿಷ್ಟದ ಕ್ಷೇತ್ರದಲ್ಲಿ ಅದ್ಭುತ  ಸೃಷ್ಟಿಸಬಹುದು.


ಸಿಹಿಜೀವಿ ವೆಂಕಟೇಶ್ವರ

27 ಡಿಸೆಂಬರ್ 2024

ಹೊಸ ಕ್ಯಾಲೆಂಡರ್ ವರ್ಷದಲ್ಲಿ ಹೊಸದನ್ನು ಸಾಧಿಸೋಣ...

 


ಹೊಸ ಕ್ಯಾಲೆಂಡರ್ ವರ್ಷದಲ್ಲಿ ಹೊಸದನ್ನು ಸಾಧಿಸೋಣ...


ಈ ವರ್ಷ ಅಟಾಮಿಕ್ ಹ್ಯಾಬಿಟ್ ಎಂಬ ಪುಸ್ತಕ ಓದಿದೆ.ನನ್ನ ಮಗಳು ಸಹ ಆ ಪುಸ್ತಕ ಇಷ್ಟ ಪಟ್ಟು  ಮತ್ತೆ ಮತ್ತೆ ಓದುತ್ತಿದ್ದಾಳೆ.

ಈ ಪುಸ್ತಕದ ತಿರುಳು ಇಷ್ಟೇ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಜೀವನದಲ್ಲಿ ಅದ್ಭುತ ಸಾಧಿಸಬಹುದು. 

ಮುಂಬರುವ 2025 ರಲ್ಲಿ   ನಾವೆಲ್ಲರೂ ಸಣ್ಣ ಬದಲಾವಣೆ ಮಾಡಿಕೊಂಡು ನಮ್ಮ ಸಾಧನೆಗೆ ಮುನ್ನುಡಿ ಬರೆಯೋಣ.

 ಆಸೆಗಳನ್ನು ಗುರಿಗಳಾಗಿ  ಬದಲಾಯಿಸಿಕೊಳ್ಳೋಣ.

 ಆಲ್ಕೋಹಾಲ್ ನಿಂದ  ನೀರಿಗೆ ಬದಲಾಯಿಸಿಕೊಳ್ಳೋಣ.

 ಖರ್ಚನ್ನು  ಕಡಿಮೆ ಮಾಡಿ  ಉಳಿತಾಯ ಮಾಡೋಣ.

 ಟಿ ವಿ ನೋಡುವುದನ್ನು ಕಡಿಮೆ ಮಾಡಿ ಪುಸ್ತಕ ಹೆಚ್ಚು ಓದೋಣ.

 ಭಯ ಪಡುವುದನ್ನು ಬಿಟ್ಟು ಸಾಧಿಸಿವ  ಸಂಕಲ್ಪ ಮಾಡೋಣ.

 ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ  ಕೆಲಸ ಮಾಡಲು ಪ್ರಯತ್ನ ಮಾಡೋಣ. 

 ವಿಷಕಾರಿ ಸ್ನೇಹಿತರ ಸೋಗಿನಲ್ಲಿರುವ ಹಿತ ಶತ್ರುಗಳ ಬದಲಿಗೆ ನಮ್ಮ ಮಾರ್ಗದರ್ಶನ ಮಾಡುವವರ ಜೊತೆಯಲ್ಲಿ ಕಾಲ ಕಳೆಯೋಣ.

ದೂರುವುದನ್ನು ನಿಲ್ಲಿಸಿ ಕೃತಜ್ಞತೆ ತೋರೋಣ.

ಹಗಲುಗನಸು ಕಾಣುವುದನ್ನು ನಿಲ್ಲಿಸೋಣ ಕನಸು ನನಸಾಗಿಸಲು ಪ್ರಯತ್ನ ಮಾಡೋಣ.


 ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು ಮುಂಬರುವ ಕ್ಯಾಲೆಂಡರ್ ವರ್ಷದಲ್ಲಿ  ನಾವು ಹೇಗೆ ದೊಡ್ಡ ಫಲಿತಾಂಶಗಳನ್ನು ಪಡೆಯೋಣ. 

ಸಿಹಿಜೀವಿ ವೆಂಕಟೇಶ್ವರ

ತುಮಕೂರು.



ಐತಿಹಾಸಿಕ ಮಹತ್ವದ "ಈಸ್ಟರ್ನ್ ಎಕ್ಸ್‌ಪೀರಿಯೆನ್ಸಸ್"


 


ಐತಿಹಾಸಿಕ ಮಹತ್ವದ  "ಈಸ್ಟರ್ನ್ ಎಕ್ಸ್‌ಪೀರಿಯೆನ್ಸಸ್"


ಕರ್ನಾಟಕದ ಸಾಮಾನ್ಯ  ಜನತೆಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಚಿರಪರಿಚಿತ ಆ ಆಸ್ಪತ್ರೆ ಕಟ್ಟಿಸಿದ ಕಮಿಷನರ್ ಲೂಯಿ ಬೆಂಥಾಮ್ ಬೌರಿಂಗ್.ಅವನೊಬ್ಬ ಕೇವಲ ಆಡಳಿತಗಾರನಾಗಿರದೇ ಬಹುಮಖ ಪ್ರತಿಭೆಯ ವ್ಯಕ್ತಿಯಾಗಿದ್ದ. ಅವನು ತನ್ನ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದಾನೆ ಆ ಪುಸ್ತಕವೇ "ಈಸ್ಟರ್ನ್ ಎಕ್ಸ್‌ಪೀರಿಯೆನ್ಸಸ್" ಆಂಗ್ಲ ಭಾಷೆಯಲ್ಲಿ ಇರುವ ಇದು  19 ನೇ ಶತಮಾನದ ಮಧ್ಯಭಾಗದಲ್ಲಿ ಭಾರತದ ವಿವಿಧ ಪ್ರದೇಶಗಳ, ವಿಶೇಷವಾಗಿ ಮೈಸೂರಿನ ವಿವರವಾದ ವಿವರಣೆಗಳನ್ನು ನೀಡುತ್ತದೆ. ಇದು ಆ ಕಾಲದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಒಳನೋಟಗಳನ್ನು ಒದಗಿಸುತ್ತದೆ. ಬ್ರಿಟಿಷ್ ವಸಾಹತುಶಾಹಿ ಆಡಳಿತ ಮತ್ತು ಸ್ಥಳೀಯ ಜನಸಂಖ್ಯೆಯೊಂದಿಗಿನ ಅದರ ಪರಸ್ಪರ ಕ್ರಿಯೆಯ ಮೌಲ್ಯಯುತ ವಿವರಣೆಯನ್ನು ಈ ಪುಸ್ತಕ ನೀಡುತ್ತದೆ.


ಈ  ಪುಸ್ತಕವು ಮೈಸೂರು, ಕೂರ್ಗ್ ಮತ್ತು ಪಂಜಾಬ್ ಅನ್ನು ಒಳಗೊಂಡ ಭೌಗೋಳಿಕ ವಿವರಣೆಗಳು ಮತ್ತು ಐತಿಹಾಸಿಕ ಹಿನ್ನೆಲೆಗಳನ್ನು ನೀಡುತ್ತದೆ. ಇದು ಬ್ರಿಟಿಷ್ ಪ್ರಭಾವದ ಅಡಿಯಲ್ಲಿ ಭಾರತದ ವಿವಿಧ ಭಾಗಗಳನ್ನು ಅರ್ಥಮಾಡಿಕೊಳ್ಳಲು ಒಂದು ಮೌಲ್ಯಯುತ ಸಂಪನ್ಮೂಲವಾಗಿದೆ. ಅದರಲ್ಲೂ ವಿಶೇಷವಾಗಿ ಈ  ಪುಸ್ತಕವು ಮೈಸೂರಿನ ಆರಂಭಿಕ ಆಡಳಿತಗಾರರು, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರ ಏಳ್ಗೆ ಮತ್ತು ನಂತರ ಹಿಂದೂ ರಾಜವಂಶದ ಪುನಃಸ್ಥಾಪನೆಯ ಬಗ್ಗೆ ಪ್ರಸ್ತಾಪಿಸುತ್ತದೆ. ಇದು ಆಡಳಿತ, ಆರ್ಥಿಕತೆ ಮತ್ತು ಜನರ ಸಾಮಾಜಿಕ ಜೀವನದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇದು ರಾಜ್ಯದ ವಿಶಿಷ್ಟ ರಾಜಕೀಯ ಪಥ ಮತ್ತು ಬ್ರಿಟಿಷರೊಂದಿಗಿನ ಅದರ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ. ಬೆಂಗಳೂರು, ಶ್ರೀರಂಗಪಟ್ಟಣ ಮತ್ತು ಇತರ ಪ್ರಮುಖ ಪಟ್ಟಣಗಳ ವಿವರಣೆಯ ಜೊತೆಯಲ್ಲಿ ಆ ನಗರಗಳ ಐತಿಹಾಸಿಕ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಆ ಭಾಗದ  ಕೋಟೆಗಳ ವಿವರಗಳನ್ನು ಸಹ ನೀಡುತ್ತದೆ. ಅವುಗಳ ನಿರ್ಮಾಣ, ರಕ್ಷಣೆ ಮತ್ತು ಅವುಗಳಿಗೆ ಸಂಬಂಧಿಸಿದ ಐತಿಹಾಸಿಕ ಘಟನೆಗಳನ್ನು ವಿವರಿಸುತ್ತದೆ.

 "ಈಸ್ಟರ್ನ್ ಎಕ್ಸ್‌ಪೀರಿಯೆನ್ಸಸ್" ಮೈಸೂರಿನಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ. ಸರ್ ಮಾರ್ಕ್ ಕಬ್ಬನ್ ಅವರಂತಹ ಪ್ರಮುಖ ವ್ಯಕ್ತಿಗಳ ಪಾತ್ರಗಳನ್ನು ವಿವರಿಸುತ್ತದೆ. ಬ್ರಿಟಿಷ್ ಪ್ರಭಾವದ ಅಡಿಯಲ್ಲಿ ಸ್ಥಳೀಯ ರಾಜ್ಯವನ್ನು ಆಳುವ ಸವಾಲುಗಳನ್ನು ಚರ್ಚಿಸುತ್ತದೆ, ಕಾನೂನು, ನ್ಯಾಯ ಮತ್ತು ಬ್ರಿಟಿಷ್ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತಗಾರರ ನಡುವಿನ ಸಂಬಂಧದ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಆಡಳಿತದಲ್ಲಿ ಸ್ಥಳೀಯ ಜನರನ್ನು ಹೇಗೆ ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಮತ್ತು ಭವಿಷ್ಯದ ನೀತಿಗಾಗಿ ಕೆಲವು ಸಲಹೆಗಳನ್ನು ನೀಡುತ್ತದೆ.

ನಮ್ಮ ಧಾರ್ಮಿಕ ಸಂಪ್ರದಾಯಗಳು ಮತ್ತು ವಿವಿಧ ಸಮುದಾಯಗಳ ಜೀವನ ಸೇರಿದಂತೆ ಮೈಸೂರಿನ ಸಾಮಾಜಿಕ ರಚನೆಯನ್ನು ವಿವರಿಸುತ್ತದೆ. ಕ್ರಿಶ್ಚಿಯನ್ ಮಿಷನರಿ ಚಟುವಟಿಕೆಗಳು ಮತ್ತು ಹೆಸರು ಇಡುವ ಸಂಪ್ರದಾಯಗಳನ್ನು ಒಳಗೊಂಡಂತೆ ಸಾಂಸ್ಕೃತಿಕ ಟಿಪ್ಪಣಿಗಳನ್ನು ಸಹ ನೀಡುತ್ತದೆ.

ಭೂ ಕಂದಾಯ, ವ್ಯಾಪಾರ ಮಾರ್ಗಗಳು, ಕೃಷಿ ಉತ್ಪನ್ನಗಳು ಮತ್ತು ಶ್ರೀಗಂಧದಂತಹ ಬೆಲೆಬಾಳುವ ಸಂಪನ್ಮೂಲಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಲಂಬಾಣಿ ಮತ್ತು ಕೊರ್ಚರ್ಸ್‌ನಂತಹ ವ್ಯಾಪಾರದಲ್ಲಿ ತೊಡಗಿರುವ ಅಲೆಮಾರಿ ಬುಡಕಟ್ಟುಗಳ ಜೀವನೋಪಾಯದ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ.

ಈ ಪುಸ್ತಕ ನಮಗೆ  19 ನೇ ಶತಮಾನದಲ್ಲಿ ಬ್ರಿಟಿಷ್-ಭಾರತೀಯ ಸಂಬಂಧಗಳ ಸಂಕೀರ್ಣ ಮತ್ತು ಬದಲಾಗುತ್ತಿದ್ದ  ಬ್ರಿಟಿಷರ ಆಡಳಿತ ತಂತ್ರಗಳನ್ನು ಪ್ರತಿಬಿಂಬಿಸುತ್ತದೆ. ಪ್ರಾಂತ್ಯಗಳನ್ನು ಸ್ವಾಧೀನಪಡಿಸಿಕೊಳ್ಳುವುದು, ಸ್ಥಳೀಯ ಆಡಳಿತಗಾರರ ಪುನಃಸ್ಥಾಪನೆ ಮತ್ತು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಬ್ರಿಟಿಷರ ಪಾತ್ರವನ್ನು ನಮಗೆ ತಿಳಿಸಿಕೊಡುತ್ತದೆ.

 ನಂದಿದುರ್ಗದ ವಶಪಡಿಸಿಕೊಳ್ಳುವಿಕೆ ಮತ್ತು ಶ್ರೀರಂಗಪಟ್ಟಣದ ಮುತ್ತಿಗೆ ಸೇರಿದಂತೆ ಹಲವಾರು ಮಿಲಿಟರಿ ಘಟನೆಗಳನ್ನು ಈ ಪುಸ್ತಕದಲ್ಲಿ ದಾಖಲೆಯಾಗಿವೆ. ಮತ್ತು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರಂತಹ ಪ್ರಮುಖ ಐತಿಹಾಸಿಕ ವ್ಯಕ್ತಿಗಳ ಜೀವನ ಮತ್ತು ಪಾತ್ರಗಳ ಬಗ್ಗೆ ವಿವರಗಳನ್ನು ಒದಗಿಸುತ್ತದೆ. ಭಾರತೀಯ ಐತಿಹಾಸಿಕ ಘಟನೆಗಳ ದಾಖಲೆಯ ಜೊತೆಯಲ್ಲಿ ವಿದೇಶಿ ಘಟನೆಗಳು ಸಹ ಈ ಪುಸ್ತಕದಲ್ಲಿ ದಾಖಲಾಗಿವೆ. ಚೀನಾದಲ್ಲಿ 1854 ರಲ್ಲಿ ಲೇಖಕರು ನಾಂಕಿಂಗ್‌ಗೆ ಭೇಟಿ ನೀಡಿದ ಆಧಾರದ ಮೇಲೆ ತೈಪಿಂಗ್ ದಂಗೆಯ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ. ಆ ಕಾಲದ ರಾಜಕೀಯ ಪರಿಸ್ಥಿತಿಗಳು, ತೈಪಿಂಗ್ ಆಂದೋಲನದ ಸ್ವರೂಪ ಮತ್ತು ವಿದೇಶಿಯರೊಂದಿಗಿನ ಅವರ ಸಂವಹನಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಒಟ್ಟಾರೆಯಾಗಿ  "ಈಸ್ಟರ್ನ್ ಎಕ್ಸ್‌ಪೀರಿಯೆನ್ಸಸ್" ಐತಿಹಾಸಿಕವಾಗಿ ಮಹತ್ವದ ಪುಸ್ತಕವಾಗಿದೆ. ಇದು ಭಾರತದ, ವಿಶೇಷವಾಗಿ ಮೈಸೂರಿನ ಬಹುಮುಖ ನೋಟವನ್ನು ನೀಡುತ್ತದೆ ಮತ್ತು 19 ನೇ ಶತಮಾನದ ಮಧ್ಯಭಾಗದ ಚೀನಾದ ಒಂದು ಅನನ್ಯ ನೋಟವನ್ನು ಒದಗಿಸುತ್ತದೆ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆ, ಸ್ಥಳೀಯ ಆಡಳಿತ, ಸಾಮಾಜಿಕ , ಆರ್ಥಿಕ ಪರಿಸ್ಥಿತಿಗಳು ಮತ್ತು ಪ್ರಾದೇಶಿಕ ಇತಿಹಾಸದ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ಇದು ಒಂದು ಸಮೃದ್ಧ ಮೂಲವಾಗಿದೆ. ಈ ಅವಧಿಯ ಭಾರತೀಯ ಇತಿಹಾಸವನ್ನು ಅಧ್ಯಯನ ಮಾಡುವ ಇತಿಹಾಸಕಾರರಿಗೆ ಇದು ಅಮೂಲ್ಯವಾದ ಸಂಪನ್ಮೂಲವಾಗಿದೆ.


ಸಿಹಿಜೀವಿ ವೆಂಕಟೇಶ್ವರ.

ಶಿಕ್ಷಕರು 

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

ತುಮಕೂರು

 


25 ಡಿಸೆಂಬರ್ 2024

ಮಡಿಕೆ ಸೋಡಾ


 #ಮಡ್ಕೆ_ಮಿರ್ಚಿ_ಸೋಡ


ಧರ್ಮಸ್ಥಳದಿಂದ ಕುಕ್ಕೆ ಮಾರ್ಗ ನೀವು ಪ್ರಯಾಣ ಮಾಡುವಾಗ ಪ್ರಯಾಣದ ಆಯಾಸ ಕಡಿಮೆ ಮಾಡಲು ಅಲ್ಲಲ್ಲಿ ಪುಲ್ಜಾರ್ ಸೋಡಾ, ಮಡ್ಕೆ ಸೋಡಾ, ಜೋಳದ ತೆನೆ ,ಅನಾನಸ್ ಮಾರುವ ಗೂಡಂಗಡಿ ಕಾಣಬಹುದು. ಇಂದು ನಾನು ಈ ಮಾರ್ಗವಾಗಿ ಹೋಗುವಾಗ ಮಡ್ಕೆ ಸೋಡ ಕುಡಿದೆ.ಸೋಡ, ಪುದೀನ ,ಜಲ ಜೀರಾ ನಿಂಬೆ ಹಣ್ಣು, ಮೆಣಸಿನ ಕಾಯಿ ಹಾಕಿ ಹದವಾಗಿ ಮಾಡಿದ ಸೋಡಾ ಸ್ವಲ್ಪ ಖಾರ ಸ್ವಲ್ಪ ಸಿಹಿ ಯೊಂದಗಿನ ರುಚಿ ವಿಭಿನ್ನವಾಗಿತ್ತು. ಈ ಕಡೆ ಬಂದರೆ ನೀವು ಒಮ್ಮೆ ರುಚಿ ನೋಡಬಹುದು.

#sihijeeviVenkateshwara 

#soda #cool #drinks #cooldrinks