08 ಡಿಸೆಂಬರ್ 2024

ಬಾರೆ ಹಣ್ಣು ತಿನ್ನೋಣ ಬಾರೆ


 


ಬಾರೆ ಹಣ್ಣು ತಿನ್ನೋಣ ಬಾರೆ


ನಾನು ಬಾಲ್ಯದಲ್ಲಿ ಬಹಳ ಇಷ್ಟ ಪಟ್ಟು ತಿಂದ ಹಣ್ಣುಗಳೆಂದರೆ  ಬಾರೆ ಹಣ್ಣು ಮತ್ತು ಕಾರೆ ಹಣ್ಣು.ಕಾರೆ ಹಣ್ಣು ಕೀಳಲು ಹೋಗಿ ಅಂಗೈ ಮುಂಗೈ ತರಚು ಗಾಯಗಳಾದರೂ ಬಾಯಲ್ಲಿ ಆ ಹಣ್ಣಿನ ಸ್ವಾದದ ಮುಂದೆ ಅವು ಮಾಯವಾಗುತ್ತಿದ್ದವು.

ನಮ್ಮ ಊರಿನ ನಮ್ಮ ಮನೆಯ ಹಿಂದೆ ಚಿಕ್ಕಜ್ಜರ ರೊಪ್ಪವಿತ್ತು.ರೊಪ್ಪವೆಂದರೆ    ಪ್ರಾಣಿಗಳಿಗೆ  ಒಣ ಹುಲ್ಲು ಸಂಗ್ರಹಿಸುವ ಸಂರಕ್ಷಿತತಾಣ.ಅಲ್ಲಿ ಒಂದು ಬಾರೆ ಮರವಿತ್ತು.ಅದು ಹಣ್ಣು ಬಿಡುವ ಕಾಲಕ್ಕೆ ಊರಿನ ನನ್ನ ವಯಸ್ಸಿನ ಹುಡುಗರೆಲ್ಲ ಆ ಮರಕ್ಕೆ ಆಳಿಗೊಂದು ಕಲ್ಲು ಎಸೆದು ಹಣ್ಣು ಬೀಳಿಸಿಕೊಂಡು ತಿನ್ನುತ್ತಿದ್ದೆವು.ಬಾರೆ ಹಣ್ಣುಗಳಲ್ಲಿ ಮೂರು ರೀತಿ. ಹಸಿರು ಬಣ್ಣದಿಂದ ಕೂಡಿದ ಹಣ್ಣು ಬಹಳ ಕಹಿ ಮತ್ತು ಒಗರು.ಸುಕ್ಕಾದ ಕೆಂಪು ಬಣ್ಣದ ಹಣ್ಣುಗಳು ಸಿಹಿಯಾಗಿದ್ದರೂ ಅದರಲ್ಲಿ ಹುಳುಗಳು ಜಾಸ್ತಿ. ನನಗೆ ದೋರೆಗಾಯಿ ಬಾರೆ ಹಣ್ಣು ಬಹಳ ಇಷ್ಟವಾಗುತ್ತಿತ್ತು.ಇಂತಹ ಹಣ್ಣುಗಳಲ್ಲೂ ಕೆಲವೊಮ್ಮೆ ಹುಳುಗಳ ಇರುವಿಕೆಯನ್ನು ಗಮನಿಸಿ ಬಿಸಾಡಿದ ನೆನಪು.

ಬಾಲ್ಯದಲ್ಲಿ ನಾವು ಬರೀ ಸಂತೋಷಕ್ಕಾಗಿ ಮತ್ತು ಹೊಟ್ಟೆ ತುಂಬಲು ತಿನ್ನುತ್ತಿದ್ದ ಹಣ್ಣು ಔಷಧಿಗಳ ಆಗರ ಎಂಬುದು ಹಲವಾರು ಪುಸ್ತಕ ಓದಿದಾಗ ತಿಳಿಯಿತು.

ಬೇರೆ ಬೇರೆ ಭಾಗದಲ್ಲಿ ಈ ಹಣ್ಣನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ.

ಬೋರೆ ಹಣ್ಣು, ಬಾರೆ ಹಣ್ಣು, ಬುಗುರಿ ಹಣ್ಣು ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ

ಈ   ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಖನಿಜ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಸ್ನಾಯುಗಳು, ನರಮಂಡಲ ಮತ್ತು ಚರ್ಮಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳಿಂದ ತುಂಬಿದೆ. ಬೋರೆ ಹಣ್ಣುಗಳಲ್ಲಿರುವ ಪೊಟ್ಯಾಸಿಯಮ್, ರಂಜಕ, ಮ್ಯಾಂಗನೀಸ್, ಕಬ್ಬಿಣ ಹಾಗೂ ಸತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಇದರಲ್ಲಿರುವ ಕಬ್ಬಿಣದ ಅಂಶವು ಹಿಮೋಗ್ಲೋಬಿನ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.


   ಇದರಲ್ಲಿರುವ ಕಬ್ಬಿಣದ ಅಂಶವು ಹಿಮೋಗ್ಲೋಬಿನ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ಬೋರೆ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ಮೈಬಣ್ಣಕ್ಕೆ ಹೆಚ್ಚಿನ ಕಾಂತಿ ನೀಡಲು ಸಹಕಾರಿಯಾಗಿದೆ. ಅಲ್ಲದೆ ಮೊಡವೆಗಳು ಇಲ್ಲದಂತೆ ಚರ್ಮವನ್ನು ರಕ್ಷಿಸುತ್ತದೆ. ಈ ಹಣ್ಣನ್ನು ಒಣಗಿಸಿ ತಿನ್ನುವುದರಿಂದ ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕದ ಅಂಶ ಮೂಳೆಗಳನ್ನು ಬಲಪಡಿಸಲು ಬಹಳ ಉಪಯುಕ್ತವಾಗಿದೆ. ಅಲ್ಲದೆ ಈ ಹಣ್ಣುಗಳಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಆಂಟಿಆಕ್ಸಿಡೆಂಟ್ ಫೈಟೊಕೆಮಿಕಲ್ಸ್, ಪಾಲಿಸ್ಯಾಕರೈಡ್ಗಳು, ಫ್ಲೇವನಾಯ್ಡ್ಗಳು ಮತ್ತು ಸಪೋನಿನ್ಗಳು ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ. ಅದಲ್ಲದೆ ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಗುಣವನ್ನು ಹೊಂದಿರುವುದರಿಂದ ಮಧುಮೇಹಿಗಳಿಗೂ ಒಳ್ಳೆಯದು. ಮಲಬದ್ಧತೆಯ ಸಮಸ್ಯೆ ಇರುವವರು ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ.


ಬೋರೆ ಹಣ್ಣು ಆಸ್ಟಿಯೋಆರ್ಥ್ರೈಟಿಸ್ ತಡೆಗಟ್ಟಲು ಸಹಾಯ ಮಾಡುತ್ತದೆ. ಈ ಹಣ್ಣುಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತವೆ. ಇದು ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನ ಪೇಸ್ಟ್ ಮಾಡಿ ಅದನ್ನು ಚರ್ಮದ ಮೇಲೆ ಹಚ್ಚುವುದರಿಂದ ಗಾಯವು ಗುಣವಾಗುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ಅಲ್ಲದೆ ಈ ಹಣ್ಣಿನ ಆಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಇದು ಸೋಂಕುಗಳನ್ನು ತಡೆಯುತ್ತದೆ. ಜೊತೆಗೆ ಹಸಿವನ್ನು ತಡೆದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಸಹಾಯಮಾಡುತ್ತದೆ.

ಪ್ರಸ್ತುತ ನಗರದಲ್ಲಿ ವಾಸಿಸುವ ನಾನು 

ಇಂತಹ ಬಹೂಪಯೋಗಿ ಬಾರೆ ಹಣ್ಣನ್ನು  ಕಂಡರೆ ಮೊದಲು ಕೊಂಡು ಮನೆಗೆ ತೆಗೆದುಕೊಂಡು ಹೋಗಿ ಕುಟುಂಬಸಮೇತ ತಿನ್ನುತ್ತೇನೆ.

ನಿಮ್ಮ ಕಣ್ಣಿಗೆ ಈ ಹಣ್ಣು ಬಿದ್ದರೆ ನೀವೂ ಸೇವಿಸಬಹುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


04 ಡಿಸೆಂಬರ್ 2024

ಬಾಳಿಗೆ ತಂಪು ನೀಡಿದ ಚಂದ್ರ


 


ಬಾಳಿಗೆ ತಂಪು ನೀಡಿದ ಚಂದ್ರ


ಕೆಲವರೇ ಹಾಗೇ ತಮ್ಮ ಪಾಡಿಗೆ ತಾವು ಅಗತ್ಯವಿರುವವರಿಗೆ  ಒಳಿತು ಮಾಡುತ್ತಾ ಯಾರಿಗೂ ಹೇಳದೇ  ನಿರ್ಲಿಪ್ತವಾಗಿ ಇದ್ದುಬಿಡುತ್ತಾರೆ.ಅಂತಹ ಪುಟ್ಟ ಸಹಾಯ ಪಡೆದವರ ಜೀವನದಲ್ಲಿ ಅಪಾರವಾದ ಬದಲಾವಣೆಯಾಗಿ ಸಮಜದಲ್ಲಿ ತುಸು ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ. 

    ಅದು  ಅರ್ಧರಾತ್ರಿಯ ಸಮಯ. ಆ ಡಾಕ್ಟರ್ ತಮ್ಮ ಕೆಲಸವೆಲ್ಲಾ ಮುಗಿಸಿ ಮಲಗಿ ಹತ್ತು ನಿಮಿಷವಾಗಿಲ್ಲ, ಯಾರೋ ಬಾಗಿಲು ತಟ್ಟಿದರು.

    ‌ಡಾಕ್ಟರು ಬಹಳ ನಿಯತ್ತಿನ ಮನುಷ್ಯ. ಬೇಸರ ಪಟ್ಟುಕೊಳ್ಳದೆ ಹೋಗಿ ತೆಗೆದರು. ಬಂದ ಮನುಷ್ಯ ಇವರ ಕಾಲು ಹಿಡಿದುಕೊಂಡು "ಸಾರ್, ಒಬ್ಬ ಗರ್ಭಿಣಿ ಹೆಂಗಸು ಬಹಳ ಪ್ರಸವವೇದನೆ ಅನುಭವಿಸುತ್ತಿದ್ದಾಳೆ ಸಾರ್. ಆಕೆಯನ್ನು ನೀವೇ ಕಾಪಾಡಬೇಕು ಸಾರ್. ದಯಮಾಡಿ ನೀವೇ ಬಂದು ಅವಳನ್ನು ಉಳಿಸಬೇಕು, ಆಗಲ್ಲ ಅನ್ನಬೇಡಿ ಸಾರ್" ಎಂದು ಅಲವತ್ತುಕೊಂಡ.

 ಸುಮಾರು ೭೦ ವರ್ಷಗಳ ಕೆಳಗೆ ಮಹಾರಾಷ್ಟ್ರದ ಮೂಲೆಯಲ್ಲೊಂದು ಗ್ರಾಮದಲ್ಲಿನ ಡಾಕ್ಟರ್ ಅವರು. ತಕ್ಷಣ ಅವನೊಂದಿಗೆ ಹೊರಟರು.

    ಆ ಹೆಂಗಸು 19-20ರ ವಯಸ್ಸಿನವಳಿದ್ದಿರಬೇಕು.  ಆಕೆಗೆ ಪ್ರಸವ ನಿಜಕ್ಕೂ ಕಷ್ಟದಾಯಕವಾಗಿತ್ತು.ಬೆಳಗಿನ ಜಾವವಾಗಿತ್ತು. ಆ ಹೆಂಗಸು ಡಾಕ್ಟರ ಕೈಹಿಡಿದುಕೊಂಡು "ಡಾಕ್ಟರ್ ಸಾಹೇಬರೇ, ನನ್ನ ಗಂಡ ನನ್ನ ಬಿಟ್ಟು ಹೋದ. ನಾನು ದಟ್ಟ ದಾರಿದ್ರ್ಯದಲ್ಲಿದ್ದೇನೆ. ನಾನು ಹುಟ್ಟುವ ಮಗುವನ್ನು ಸಾಕುವ ಸ್ಥಿತಿಯಲ್ಲಿ ಇಲ್ಲ. ನನ್ನನ್ನು ಉಳಿಸಬೇಡಿ. ಬೇಡಿಕೊಳ್ಳುತ್ತೇನೆ ನನ್ನನ್ನು ಸಾಯಿಸಿಬಿಡಿ. ಬದುಕಿ ಏನೂ ಉಪಯೋಗವಿಲ್ಲ".

    ಡಾಕ್ಟರ್ ಗೇ ಮನಸ್ಸಿನಲ್ಲಿ ಕಸಿವಿಸಿಯಾಯಿತು. ಎಲ್ಲಾ ಪೇಷಂಟ್ ಗಳೂ 'ಹೇಗಾದರೂ ಮಾಡಿ ನನ್ನನ್ನು ಉಳಿಸಿ' ಎಂದು ಬೇಡಿಕೊಂಡರೆ ಈ ಅಸಹಾಯಕ ಹೆಂಗಸು ನನ್ನನ್ನು ಉಳಿಸಬೇಡಿ ಎಂದು ಬೇಡಿಕೊಳ್ಳುತ್ತಿದ್ದಾಳೆ. ಅಂದಮೇಲೆ ಅವಳಿಗೆ ಬದುಕು ಎಷ್ಟು ದುರ್ಭರವೆನಿಸಿರಬೇಡ, ಎನಿಸಿ ಹೇಳಿದರು "ನಾನು ಡಾಕ್ಟರ್ ಆಗಿ ನನಗೆ ಪೇಷಂಟ್ ಗಳನ್ನು ಉಳಿಸುವುದು ಮಾತ್ರ ಗೊತ್ತು ಹೊರತು ಸಾಯಿಸುವುದು ಗೊತ್ತಿಲ್ಲವಮ್ಮಾ. ನೀನು ಯೋಚನೆ ಮಾಡಬೇಡ. ಅದರ ವಿಚಾರ ಹೆರಿಗೆಯ ನಂತರ ನೋಡಿಕೊಳ್ಳೋಣ" ಎಂದು‌ ಹೇಳಿ ಸಮಾಧಾನ ಪಡಿಸಿ ಪ್ರಸವದ ಕಾರ್ಯವನ್ನು ಮುಂದುವರೆಸಿದರು.

ಕೆಲವು ಗಂಟೆಗಳ ಕಾಲ ಪ್ರಯಾಸ ಪಟ್ಟಮೇಲೆ ಕೊನೆಗೆ ಹೆರಿಗೆಯಾಗಿ ಹೆಣ್ಣು ಮಗುವನ್ನು ಹೆತ್ತಳು. ಸಂತೋಷ ಪಡಬೇಕೋ ದುಃಖ ಪಡಬೇಕೋ‌ ತಿಳಿಯದ ಸ್ಥಿತಿಯಲ್ಲಿದ್ದಳು ಆಕೆ.

     ಡಾಕ್ಟರ್ ಹೊರಡಲು ಸಿದ್ಧರಾಗುತ್ತಾ ಆಕೆಗೆ ಆಶ್ವಾಸನೆ ಕೊಟ್ಟರು "ನೀನು ಚಿಂತೆ ಮಾಡಬೇಡ ತಾಯಿ. ನಾನೇನು ಫೀಸ್  ತಗೋಳ್ತಾ ಇಲ್ಲ. ಬದಲು ನಾನೇ ನಿನಗೆ ಈ ನೂರು ರೂಪಾಯಿ ಕೊಡ್ತಿದ್ದೀನಿ ಇಟ್ಟುಕೋ.

ನಿನಗೆ ಯಾರೂ ಇಲ್ಲ ಅಂದುಕೋಬೇಡ. ನಾನಿದ್ದೀನಿ. ನೀನು ಸುಧಾರಿಸಿಕೊಂಡಮೇಲೆ ಹತ್ತಿರದ ಪುಣೆಗೆ ಹೋಗಿ ಅಲ್ಲಿನ ನರ್ಸಿಂಗ್ ಕಾಲೇಜಿನಲ್ಲಿ ಇಂಥ ಹೆಸರಿನ ಗುಮಾಸ್ತ ಒಬ್ಬರಿದ್ದಾರೆ, ಅವರಿಗೆ ಈ ಪತ್ರ ಕೊಡು. ನಿನಗೆ ಸಹಾಯ ಮಾಡುತ್ತಾರೆ."  

ಡಾಕ್ಟರು ಏನೋ ಒಂದು ಸಂತೃಪ್ತಿಯಿಂದ ವಾಪಸ್ ಹೊರಟರು.

     ಅವರು ಹೇಳಿದಂತೆ ಆಕೆ ಪುಣೆಗೆ ಹೋಗಿ ಆ ಗುಮಾಸ್ತನನ್ನು ಭೇಟಿಯಾಗಿ ಡಾಕ್ಟರ್ ಕೊಟ್ಟ ಪತ್ರವನ್ನು ಕೊಟ್ಟಳು. ಆ ಪತ್ರ ಓದಿದ ಕೂಡಲೇ ಆತ ಆಕೆಯನ್ನು ನರ್ಸಿಂಗ್ ಟ್ರೈನಿಂಗ್ ಗೆ ಸೇರಿಸಿಕೊಂಡು ಹಾಸ್ಟೆಲ್ನಲ್ಲಿ ವಾಸಕ್ಕೂ ಅನುವುಮಾಡಿಕೊಡುತ್ತಾರೆ. 

8 ತಿಂಗಳ ಟ್ರೈನಿಂಗ್ ಮುಗಿದ ನಂತರ ಉದ್ಯೋಗವನ್ನೂ ಕೊಡಿಸುತ್ತಾರೆ.

     ಇಪ್ಪತ್ತೈದು ವರ್ಷಗಳು ಕಳೆದಿವೆ. ಆ ಡಾಕ್ಟರ್ ಈಗ ಮೆಡಿಕಲ್ ಕಾಲೇಜಿನಲ್ಲಿ ಸೀನಿಯರ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ಯೂನಿವರ್ಸಿಟಿಯವರು

ತಮ್ಮ ಮೇಧಾವಿ ವಿದ್ಯಾರ್ಥಿಗಳಿಗೆ ಬಂಗಾರದ ಮೆಡಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಇವರನ್ನು ಆಹ್ವಾನಿಸಿದ್ದಾರೆ. ಆ ಕಾರ್ಯಕ್ರಮ ಮುಗಿದ‌ನಂತರ 'ಚಂದ್ರಾ' ಹೆಸರಿನ ಒಬ್ಬ ಯುವತಿ ಬಂದು ಈ ಡಾಕ್ಟರ್ ರನ್ನು ಭೇಟಿಯಾಗಿ 'ಸರ್, ತಾವು ದಯವಿಟ್ಟು ನಮ್ಮ ಮನೆಗೆ ಬರಬೇಕು' ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಇನ್ಯಾವುದೇ ಡಾಕ್ಟರ್ ಆಗಿದ್ದರೆ ಸಾಧ್ಯವಿಲ್ಲ ಎಂದು ಹೊರಟುಬಿಡುತ್ತಿದ್ದರೇನೋ. ಆದರೆ ಈತ ಸ್ವಲ್ಪ ಮೃದುಮನಸ್ಸಿನವರು. ವಾಪಸ್ ಮನೆಗೆ‌ಹೋಗುವಾಗ ಹಾಗೇ ಈ ಹುಡುಗಿಯ ಮನೆಗೆ ಹೊಕ್ಕು ಹೋದರೇನಾಯ್ತು, ಎಂದುಕೊಂಡು ಆಗಲಿ ಎಂದೊಪ್ಪಿ ಅವಳ ಜೊತೆ ಹೊರಡುತ್ತಾರೆ.

      ಅಲ್ಲಿ ಆ ಹುಡುಗಿಯ ತಾಯಿ ಟೀ ತಂದು ಕೊಡುತ್ತಾ ತನ್ನ ಪರಿಚಯ, ಊರು ಇತ್ಯಾದಿ ಹೇಳುವಾಗ ಡಾಕ್ಟರರ ಮನಸ್ಸು ತಾವು ಅದೇ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳನ್ನು ನೆನೆಯುತ್ತದೆ. ಅಷ್ಟರಲ್ಲಿ ಆ ಯುವತಿ ಡಾಕ್ಟರ್ ರ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾಳೆ. ಡಾಕ್ಟರಿಗೆ ಬಹಳ ಸಂಕೋಚವೆನಿಸಿ ', ಯಾಕಮ್ಮ ನನಗೆ ನಮಸ್ಕಾರ ಮಾಡುತ್ತಿದ್ದೀಯ' ಎಂದು ಕೇಳಿದಾಗ ಅವಳ ತಾಯಿ ಹೇಳುತ್ತಾಳೆ ' ಡಾಕ್ಟರ್ ಸಾಹೇಬರೇ, ಅವತ್ತು ರಾತ್ರಿ ನನ್ನ ಗುಡಿಸಿಲಿಗೆ ಬಂದು ನನಗೆ ಹೆರಿಗೆ ಮಾಡಿಸಿದಿರಲ್ಲ, ನೆನಪಿದೆಯೇ. ಆಗ ಹುಟ್ಟಿದ ಹೆಣ್ಣು ಮಗುವೇ ಈ ಹುಡುಗಿ.  ಅಂದು ನೀವು ನನಗೆ ತೋರಿಸಿದ ದಯೆಯಿಂದಾಗಿ ನಾನು ಆ ಮಗುವನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಿ ಹೆಚ್ಚಿನ ವಿದ್ಯಾಭ್ಯಾಸ ಕೂಡಾ ಕೊಡಿಸಲಿಕ್ಕಾಯಿತು. ನೀವು ನನ್ನ ಪಾಲಿನ ದೇವರಾಗಿ ಬಂದು ನನ್ನನ್ನು ಕಾಪಾಡಿದಿರಿ. ನನ್ನ ಬದುಕಿಗೊಂದು ದಾರಿಮಾಡಿಕೊಟ್ಟಿರಿ. ಅದಕ್ಕೇ ಅವಳಿಗೆ ನಿಮ್ಮ ಹೆಸರನ್ನೇ ಇಟ್ಟಿದ್ದೇನೆ, 'ಚಂದ್ರಾ' ಎಂದು"

ಎಂದು ಕಣ್ಣೊರೆಸಿಕೊಂಡಳು.  

ಚಂದ್ರಾ ಹೇಳಿದಳು "ಇಷ್ಟರಲ್ಲೇ ನಾವು ಬಡವರಿಗಾಗಿ ಉಚಿತ ಆಸ್ಪತ್ರೆಯನ್ನು ಪ್ರಾರಂಭಿಸುತ್ತಿದ್ದೇವೆ. ಅದಕ್ಕೂನಿಮ್ಮ ಹೆಸರೇ ಇಡುತ್ತೇವೆ. ದಯಮಾಡಿ ಅದರ ಉದ್ಘಾಟನೆಗೆ ನೀವೇ ಬರಬೇಕು ಸರ್". ಅವಳ ಮಾತು ಡಾಕ್ಟರ ಕಣ್ಣಲ್ಲೂ ನೀರು ತರಿಸಿತು. ಆಗಲಿ ಎಂದು ತಲೆಯಾಡಿಸಿದರು.

      ಆ ಡಾಕ್ಟರ್ ಯಾರು ಗೊತ್ತೇ?

ಇನ್ಯಾರೂ ಅಲ್ಲ ಡಾಕ್ಟರ್ ರಾಮಚಂದ್ರ ಕುಲಕರ್ಣಿಯವರು.

ಇನ್ಫೋಸಿಸ್ ಖ್ಯಾತಿಯ ಶ್ರೀಮತಿ ಸುಧಾಮೂರ್ತಿ ಯವರ ತಂದೆ. ಅವರೂ ತಂದೆಯ ಹೆಜ್ಜೆಗಳಲ್ಲೇ ಮುಂದುವರೆದು ಕರುಣಾಮಯಿ ಸಮಾಜಸೇವಕಿಯಾಗಿ ಸೇವೆ ಸಲ್ಲಿಸುತ್ತಿರುವ ವಿಷಯ ನಮಗೆಲ್ಲ ತಿಳಿದಿದೆ.


 ಸಿಹಿಜೀವಿ ವೆಂಕಟೇಶ್ವರ

ತುಮಕೂರು

19 ನವೆಂಬರ್ 2024

ಮುತ್ತಿನಂಥಹ ಮಾತು..


 

#ಮುತ್ತಿನಂಥಮಾತು..

ಸಂಬಂಧಗಳು ಯಾವಾಗಲೂ ಆಗಿರಬೇಕು ಶ್ರೀಗಂಧ|
ಹಲವಾರು ತುಂಡುಗಳಾದರೂ
ಬೀರುತ್ತಿರಬೇಕು  ಸುಗಂಧ||

ಸಿಹಿಜೀವಿ ವೆಂಕಟೇಶ್ವರ..
#sihijeeviVenkateshwara
#personaldevelopment #quotes #articlewriting #tumkur

15 ನವೆಂಬರ್ 2024

ಬಿರ್ಸಾಮುಂಡಾ_ಜಯಂತಿ


 



#ಬಿರ್ಸಾಮುಂಡಾ_ಜಯಂತಿ 


"ಅಬುವಾ ರಾಜ್ ಅತೆ ಜನ, ಮಹಾರಾಣಿ ರಾಜ್ ತುಂಡು ಜನ" ಇದು ಬಿರ್ಸಾ ಬುಡಕಟ್ಟು ಭಾಷೆಯ ವಾಕ್ಯ. "ರಾಣಿಯ ಆಡಳಿತವನ್ನು ರದ್ದುಗೊಳಿಸಿ ನಮ್ಮ ಆಡಳಿತವನ್ನು ಸ್ಥಾಪಿಸಿ" ಎಂಬ ಅರ್ಥದ ಘೋಷವಾಕ್ಯ ನೀಡಿದ,  ನಮ್ಮ ರಾಜ್ಯ, ನಮ್ಮ ಆಡಳಿತ ಎಂದು ಗುಡುಗಿದ, ಜಾರ್ಖಂಡ್ ಭೂಮಿಯಿಂದ ಬಂದ  ಭಾರತೀಯ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಲಕ್ಷಾಂತರ ಬುಡಕಟ್ಟು ಜನರಿಗೆ ಸ್ಫೂರ್ತಿಯ ಚೇತನವೇ ಬಿರ್ಸಾ ಮುಂಡ!


ಇಂದು ಬಿರ್ಸಾ ಮುಂಡಾ ರವರ 150 ನೇ ಜಯಂತಿ.  ಪ್ರಕೃತಿ ಪ್ರೇಮಕ್ಕೆ ಈ ವ್ಯಕ್ತಿ ನಿದರ್ಶನವಾಗಿದ್ದು, ನೀರು, ಕಾಡು, ಭೂಮಿ ಎಂದಾಗ ಇಂದಿಗೂ ಜನ ಇವರನ್ನು ನೆನಪಿಸಿಕೊಳ್ಳುತ್ತಾರೆ. 


ಬಿರ್ಸಾ ಮುಂಡಾ ಯುವ ಸ್ವಾತಂತ್ರ್ಯ ಹೋರಾಟಗಾರ ಮತ್ತು ಬುಡಕಟ್ಟು ಸಮುದಾಯದ ನಾಯಕ. ಬಿರ್ಸಾ ಮುಂಡಾ ಮುಂಡಾ ಬುಡಕಟ್ಟಿಗೆ ಸೇರಿದವರು. ಅವರು 1875 ರ ನವೆಂಬರ್ 15 ರಂದು ಜಾರ್ಖಂಡ್ನಲ್ಲಿ ಜನಿಸಿದರು . ಬಿರ್ಸಾ 'ಉಲ್ಗುಲಾನ್' ಅಥವಾ 'ದಿ ಗ್ರೇಟ್ ಟುಮಲ್ಟ್' ಎಂಬ ಚಳವಳಿಯನ್ನು ಆರಂಭಿಸಿದರು. ಆ ಸಮಯದಲ್ಲಿ ಜನರು ಅವರನ್ನು "ಧರ್ತಿ ಅಬ್ಬಾ" ಎಂದು ಕರೆಯುತ್ತಿದ್ದರು, ಅಂದರೆ "ಭೂಮಿಯ ತಂದೆ". ಅವರು ಬ್ರಿಟಿಷ್ ಮಿಷನರಿಗಳು ಮತ್ತು ಅವರ ಮತಾಂತರ ಚಟುವಟಿಕೆಗಳ ವಿರುದ್ಧ ಪ್ರಮುಖ ಧಾರ್ಮಿಕ ಚಳುವಳಿಯನ್ನು ರಚಿಸಿದರು. ಮುಖ್ಯವಾಗಿ ಮುಂಡಾ ಮತ್ತು ಓರಾನ್ ಬುಡಕಟ್ಟು ಸಮುದಾಯಗಳ ಜನರ ಸಹಾಯದಿಂದ ಕ್ರಿಶ್ಚಿಯನ್ ಮಿಷನರಿಗಳ ಧಾರ್ಮಿಕ ಪರಿವರ್ತನೆ ಚಟುವಟಿಕೆಗಳ ವಿರುದ್ಧ ಅವರು ಬಂಡಾಯವೆದ್ದರು. ನೀರು, ಅರಣ್ಯ, ಭೂಮಿ ಮತ್ತು ಆದಿವಾಸಿಗಳಿಗೆ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ.


ಬಿರ್ಸಾ ಮುಂಡಾ ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಆಂದೋಲನ ನಡೆಸಿದ್ದರು. ಜಮೀನ್ದಾರಿ ಪದ್ಧತಿ ಮತ್ತು ಬ್ರಿಟಿಷರ ಆಡಳಿತದ ವಿರುದ್ಧ ದೊಡ್ಡ ಹೋರಾಟ ನಡೆಸಿದರು. ಬಿರ್ಸಾ ಮುಂಡಾ ಆದಿವಾಸಿಗಳಿಗೆ ನೀರು, ಕಾಡುಗಳನ್ನು ರಕ್ಷಿಸಲು ಸ್ಫೂರ್ತಿ ನೀಡಿದರು ಮತ್ತು ಉಲ್ಗುಲಾನ್ ಎಂಬ ಚಳವಳಿಯನ್ನು ಪ್ರಾರಂಭಿಸಿದರು. ಈ ಚಳುವಳಿ ಬ್ರಿಟಿಷ್ ಆಡಳಿತ ಮತ್ತು ಮಿಷನರಿಗಳ ವಿರುದ್ಧವಾಗಿತ್ತು.


ಬಿರ್ಸಾ ಮುಂಡಾ ರವರು "ಅಬುವಾ ಡಿಶುಂ ಅಬುವಾ ರಾಜ್" ಎಂಬ ಘೋಷಣೆಯನ್ನು ನೀಡಿದ್ದರು. ಅವರು ಅಬುವಾ ರಾಜ್ ಅತೆ ಜನ, ಮಹಾರಾಣಿ ರಾಜ್ ತುಂಡು ಜನ" ಅಂದರೆ "ರಾಣಿಯ ಆಡಳಿತವನ್ನು ರದ್ದುಗೊಳಿಸಿ ನಮ್ಮ ಆಡಳಿತವನ್ನು ಸ್ಥಾಪಿಸಿ" ಎಂದು ಹೇಳಿದರು. ನಮ್ಮ ರಾಜ್ಯ, ನಮ್ಮ ಆಡಳಿತ ಎಂದರ್ಥ. ಇದು ಜಾರ್ಖಂಡ್ ಭೂಮಿಯಿಂದ ಬಂದ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಲಕ್ಷಾಂತರ ಬುಡಕಟ್ಟು ಜನರಿಗೆ ಸ್ಫೂರ್ತಿಯ ಮೂಲವಾಗಿತ್ತು.

ಬಿರ್ಸಾ ಮುಂಡಾರವರು ಇನ್ನೂ ಹಲವಾರು ಘೋಷಣೆ ನೀಡಿ ಅವುಗಳನ್ನು ಕಾರ್ಯರೂಪಕ್ಕೆ  ತರಲು ಬಹಳ ಶ್ರಮಿಸಿದರು. ಅವರ ಇತರೆ ಘೋಷಣೆಗಳೆಂದರೆ 

"ವಿಜಯವು ಹೋರಾಟದ ಮೂಲಕ ಮಾತ್ರ ಬರುತ್ತದೆ, ಶರಣಾಗತಿಯ ಮೂಲಕ ಅಲ್ಲ." 

"ನಮ್ಮ ಮಾತೃಭೂಮಿಯನ್ನು ರಕ್ಷಿಸುವುದು ನಮ್ಮ ಕರ್ತವ್ಯ." 

"ಶಿಕ್ಷಣ, ಹೋರಾಟ ಮತ್ತು ಏಕತೆಯ ಮೂಲಕ ಮಾತ್ರ ನಾವು ನಮ್ಮ ಹಕ್ಕುಗಳನ್ನು ಸಾಧಿಸಬಹುದು." 


ಬಿರ್ಸಾ ಮುಂಡಾರವರ 150ನೇ ಜನ್ಮ ದಿನದ ಪ್ರಯುಕ್ತ ಸರ್ಕಾರಗಳು ದೇಶಾದ್ಯಂತ ಅವರ ಜಯಂತಿ ಆಚರಿಸುವ ಮೂಲಕ ಗೌರವ ಸೂಚಿಸುತ್ತಿರುವುದು ಬಹಳ ಉತ್ತಮ ಕಾರ್ಯ. ಇದರ ಜೊತೆಯಲ್ಲಿ ದೇಶಾದ್ಯಂತ ಶಾಲಾ ಕಾಲೇಜುಗಳಲ್ಲಿ ಮುಂಡಾರವ ಬಗ್ಗೆ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಯುವ ಜನರಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ತುತ್ಯಾರ್ಹ.

ಇಂತಹ ಮಹಾನ್ ಚೇತನಕ್ಕೆ ನಾವು ಇಂದು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಾ ನಮ್ಮ ಸ್ವಾತಂತ್ರ್ಯ ಹೋರಾಟಕ್ಕಾಗಿ ಮಡಿದ ಸಾವಿರಾರು ಹುತಾತ್ಮರ ನೆನಯೋಣ..


ಸಿಹಿಜೀವಿ ವೆಂಕಟೇಶ್ವರ

ತುಮಕೂರು.


#sihijeeviVenkateshwara 

#ಬಿರ್ಸಾಮುಂಡ #BirsaMunda #BirsaMundaJayanti #JanjatiyaGauravDiwasv

12 ನವೆಂಬರ್ 2024

ಒಳಿತಿಗೆ ಸಾವಿಲ್ಲ...


 


ಒಳಿತಿಗೆ ಸಾವಿಲ್ಲ...


ಇಂದು ಆಳಾಗಿದ್ದವ ನಾಳೆ ಅರಸನಾಗಬಹುದು.ಅರಸ ಭಿಕ್ಷೆ ಬೇಡುವ ಸ್ಥಿತಿ ಬರಬಹುದು. ಯಾರಿಗೂ ಯಾವುದೂ ಶಾಶ್ವತವಲ್ಲ ಇದನ್ನರಿತು ನಾವು ಬಾಳಬೇಕು. ನಮ್ಮ ನಡವಳಿಕೆಗಳು ನಮ್ಮ ಒಳ್ಳೆಯತನ ನಮ್ಮ ವ್ಯಕ್ತಿತ್ವದ ಭಾಗವಾಗಿರುತ್ತವೆ.ಇದಕ್ಕೆ ಪೂರಕವಾದ ಒಂದು ಕಥೆ ಓದಿ..


ಒಂದು ಕುಟುಂಬವಿತ್ತು. ಇಬ್ಬರೂ ಮಕ್ಕಳು. ಇಬ್ಬರು ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಒಟ್ಟಿಗೆ ಕುಳಿತರು. ಅಂದರೆ ಹಿರಿಯವನು ದಡ್ಡನಾಗಿದ್ದು, ಅನುತ್ತೀರ್ಣನಾಗಿ ಬಂದಿದ್ದನು. ತಮ್ಮ ಬುದ್ಧಿವಂತ. ಫಲಿತಾಂಶ ಬಂದಿತ್ತು. ತಂದೆ ಇಬ್ಬರಿಗೂ ಹಣ ನೀಡಿ ಪಾಸಾದಲ್ಲಿ ಸಿಹಿ ಹಂಚಿ ಎಂದು ಹೇಳಿದನು. ಫಲಿತಾಂಶ ಈಗಿನಂತೆ ಆಗ ಇರಲಿಲ್ಲ. ಆಗ ನೋಟಿಸ್ ಬೋರ್ಡ್ ನಲ್ಲಿ ಹಾಕುತ್ತಿದ್ದರು. ಇಬ್ಬರು ಶಾಲೆಗೆ ಹೋದರು. ಅಣ್ಣ ಫಲಿತಾಂಶ ನೋಡಿದ, ತಮ್ಮ ಶಾಲೆಗೆ ಪ್ರಥಮ ಬಂದಿದ್ದನು. ಅಣ್ಣನಿಗೆ ಎಷ್ಟು ಸಂತೋಷ ಎಂದರೆ ಇಡೀ ಶಾಲೆಗೆ ತಮ್ಮ ಪ್ರಥಮ ಎಂದು ಸಿಹಿ ಖರೀದಿಸಿ ಎಲ್ಲರಿಗೂ ಹಂಚುತ್ತಿದ್ದ. ಎಲ್ಲರೂ ಕೇಳುತ್ತಿದ್ದರು ಏನಪ್ಪಾ ಪಾಸಾದೆ ಏನು?. ಅದಕ್ಕೆ ಆತ ಹೇಳುತ್ತಿದ್ದ, ನನ್ನ ತಮ್ಮ ಇಡೀ ಶಾಲೆಗೆ ಪ್ರಥಮ ಎಂದು. ಅದಕ್ಕೆ ಅವರೆಲ್ಲರೂ ಇವನೊಬ್ಬ ಹುಚ್ಚ ಎನ್ನುತ್ತಿದ್ದರು. ಇಲ್ಲಿ ತಮ್ಮ ಫಲಿತಾಂಶ ನೋಡಿದ, ತಾನು ಶಾಲೆಗೆ ಪ್ರಥಮ ಬಂದಿದ್ದನ್ನು ನೋಡಿ ಸಂತೋಷವಾಯಿತು. ನಂತರ ಅಣ್ಣನ ಫಲಿತಾಂಶ ನೋಡಿದ ಆತನ ಹೆಸರು, ನೊಂದಣಿ ಸಂಖ್ಯೆ ಇರಲಿಲ್ಲ. ಆತನಿಗೆ ಅಣ್ಣನ ಬಗ್ಗೆ ಅಷ್ಟು ತಾತ್ಸಾರವಾಯಿತು. ಊರಿನ ತುಂಬಾ ಅಣ್ಣ ಅನುತ್ತೀರ್ಣ ಎಂದು ಹೇಳುತ್ತಾ ಹೊರಟಿದ್ದನು. ಇಬ್ಬರು ಮನೆಗೆ ಬಂದರು ತಂದೆ ನೋಡಿದ ಅಣ್ಣನ ಕೈಯಲ್ಲಿ ಸಿಹಿ ಇತ್ತು. ತಂದೆ ಇಬ್ಬರೂ ಪಾಸಾಗಿದ್ದಾರೆಂದು ಭಾವಿಸಿ, ಒಳ್ಳೆಯದು ಇಬ್ಬರೂ ಪಾಸಾಗಿದ್ದರಲ್ಲ ಬಹಳ ಸಂತೋಷವಾಯಿತು ಎಂದನು. ಆಗ ಅಣ್ಣ ಹೇಳಿದ ನನ್ನ ತಮ್ಮ ಶಾಲೆಗೆ ಪ್ರಥಮ ಬಂದಿದ್ದಾನೆ, ಅದಕ್ಕೆ ನಾನು ಸಿಹಿ ಹಂಚಿದ್ದೇನೆ ಎಂದು. ತಮ್ಮ ಹೇಳಿದ ಅಣ್ಣ ಅನುತೀರ್ಣನಾಗಿದ್ದಾನೆ ಎಂದು. ಆಗ ತಂದೆ ಹೇಳಿದನು, "ಏನೋ ಇಷ್ಟು ದಡ್ಡ. ನೀನು ಫೇಲ್ ಆಗಿದ್ದು ಸಿಹಿ ಹಂಚುತ್ತಿದ್ದೀಯಲ್ಲ" ಎಂದನು. ಆಗ ಅಣ್ಣ ತಂದೆಗೆ ಹೇಳಿದ, "ನನ್ನ ತಮ್ಮ ಶಾಲೆಗೆ ಪ್ರಥಮ ಬಂದಿದ್ದಾನೆ. ಅದಕ್ಕಿಂತ ದೊಡ್ಡ ಸಂತೋಷ ಎಲ್ಲಿದೆ...? ಅಣ್ಣ ಶಾಲೆಗೆ ಹೋಗಿ ಮುಖ್ಯ ಶಿಕ್ಷಕರಿಗೆ ಸಿಹಿ ನೀಡಿದ. ಈತ ಫೇಲ್ ಆಗಿರುವುದು ಮುಖ್ಯ ಶಿಕ್ಷಕರಿಗೆ ಗೊತ್ತಿತ್ತು. ಸಿಹಿ ಪಡೆದು ಹೇಳಿದರು... "ನಿನ್ನ ತಮ್ಮನಂತವರು ನೂರು ಜನ ಹುಟ್ಟುತ್ತಾರೆ. ನಿನಗೆ ನಾನು ವಿದ್ಯೆ ಕೊಡಬಹುದು. ಇಂತಹ ಹೃದಯ ಕೊಡಲು ಸಾಧ್ಯವಿಲ್ಲ." ಎಂದು ಹೇಳಿ ಆತನನ್ನು ಕರೆಸಿ ವಿದ್ಯೆ ನೀಡಿದರು. ಮುಂದೆ ಆತ ದೊಡ್ಡ ಸಂತನಾದನು. ಅಣ್ಣನ ಹೆಸರು ಎಲ್ಲಾ ಕಡೆ ಪ್ರಸಾರವಾಯಿತು. ತಮ್ಮನ ಹೆಸರು ಎಲ್ಲೂ ಇರಲಿಲ್ಲ.  


 ಸಿಹಿಜೀವಿ ವೆಂಕಟೇಶ್ವರ

ತುಮಕೂರು