16 ಮಾರ್ಚ್ 2024

ಮೆದುಳಿನ ಮೂಲ ಕರುಳು! (ಪುಸ್ತಕ ವಿಮರ್ಶೆ)


 



 ಮೆದುಳಿನ ಮೂಲ ಕರುಳು..


ಆತ್ಮೀಯರಾದ ಗುಬ್ಬಚ್ಚಿ ಸತೀಶ್ ರವರ ಗುಬ್ಬಚ್ಚಿ ಪುಸ್ತಕ ಉದ್ಘಾಟನೆಗೆ ಅತಿಥಿಯಾಗಿ ಹೋದಾಗ ಖರೀದಿಸಿದ ಡಾ ಕೆ ಎನ್ ಗಣೇಶಯ್ಯ ರವರ ಹೊಕ್ಕಳ ಮೆದುಳು ಕಥಾಂಬರಿ ಓದಿದಾಗ ಹೌದು ಇದು ಕಥೆಯೂ ಅಲ್ಲ ಕಾದಂಬರಿಯೂ ಅಲ್ಲ ಅವೆರಡರ ಮಧ್ಯದ ಒಂದು ಪ್ರಕಾರ ಎಂದು ಲೇಖಕರ ಮಾತಿನಲ್ಲಿ ಗಣೇಶಯ್ಯ ರವರು ಹೇಳಿದ್ದು ಸತ್ಯ ಎನಿಸಿತು.


ಕಳೆದ ಭಾನುವಾರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ಅಂಕಣದಲ್ಲಿ ಬೆಂಕಿಯ ಆವಿಷ್ಕಾರ ನಮ್ಮ ಮೆದುಳಿನ ವಿಕಾಸಕ್ಕೆ ಹೇಗೆ ನಾಂದಿಯಾಯಿತು ಎಂಬುದನ್ನು ವೈಜ್ಞಾನಿಕವಾಗಿ ವಿವರಣೆ ನೀಡಿದ ಅಂಕಣ ಓದಿದ ನನಗೆ ಈ ಹೊಕ್ಕಳ ಮೆದುಳು ಪುಸ್ತಕದ ಬಗ್ಗೆ ಕುತೂಹಲ ಹೆಚ್ಚಾಗಿ ಓದಿದೆ.


ಇಲ್ಲಿಯೂ ಗಣೇಶಯ್ಯ ರವರ ಕಾದಂಬರಿ ಶೈಲಿ ಪೂರಕ ಮಾಹಿತಿಗೆ ಅಡಿಟಿಪ್ಪಣಿಗಳು ಗಮನ ಸೆಳೆಯುತ್ತವೆ ಎಂದಿನಂತೆ ವಿಷಯದ ಆಯ್ಕೆಯಲ್ಲಿ ಈ ಬಾರಿಯೂ ಅವರು ಹೊಸತೊಂದು ಪ್ರಚಲಿತ ವೈಜ್ಞಾನಿಕ ಮತ್ತು ಜೀವಶಾಸ್ತ್ರದ ವಿಷಯ ತೆಗೆದುಕೊಂಡು ಬಹಳ ಚೆಂದವಾಗಿ ನಿರೂಪಿಸಿದ್ದಾರೆ.


ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ 'ವಿಜ್ಞಾನ, ಧರ್ಮ ಮತ್ತು ಆಧ್ಯಾತ್ಮಿಕತೆ' ಎಂಬ ಅಂತಾರಾಷ್ಟ್ರೀಯ ಕಮ್ಮಟದಲ್ಲಿ ಭಾಗವಹಿಸಿಲು ಆಹ್ವಾನಿತಗೊಂಡಿದ್ದ ಭಾರತದ ಧರ್ಮಗುರುಗಳು ಅಚ್ಚರಿಯ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲಿನ ಮಾನಸಿಕ ಆಸ್ಪತ್ರೆಯಲ್ಲಿ ನಡೆದ ದುರಂತವೊಂದಕ್ಕೆ ಇಂದಿನ ನ್ಯಾಯಪದ್ಧತಿಯ ಆವರಣದಲ್ಲಿ ಸೂಕ್ತ ಮತ್ತು ಸಿದ್ಧ ಪರಿಹಾರ ಸಿಗದ ಕಾರಣ, ವಿಜ್ಞಾನಿಗಳ, ನ್ಯಾಯಪಾಲಕರ ಮತ್ತು ಧರ್ಮಗುರುಗಳ ನಡುವೆ ಒಂದು ಜಾಗತಿಕ ಚರ್ಚೆಯನ್ನು ಏರ್ಪಡಿಸಲಾಗಿರುತ್ತದೆ. ಮಾನಸಿಕ ಸ್ಥಿತಿಯಲ್ಲಾಗುವ ಪಲ್ಲಟಗಳ ಬಗ್ಗೆ ನಡೆದ ಈ ಚರ್ಚೆಯಲ್ಲಿ ಎದುರಾಗುವ ಅಂಶಗಳು ಕುತೂಹಲಕಾರಿ ಹಾಗೂ ಹೊಸ ಹೊಳವುಗಳನ್ನು ನೀಡುತ್ತವೆ.

ಆ ಚರ್ಚೆ ಕೆಲವೊಮ್ಮೆ ನಾನು ನಾನಾ ಅಥವಾ ನಾವಾ ಎಂಬ ಅನುಮಾನ ಮೂಡಿಸಿ ಕೊನೆಗೆ ನಮ್ಮ ದೇಹ ಕೇವಲ ನಾನಲ್ಲ ನಾವು ಎಂಬ ತೀರ್ಮಾನಕ್ಕೆ ಬರಲಾಯಿತು.ಈಗ ನಿಮ್ಮಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು ಅದಕ್ಕೆ ನೀವು ಪುಸ್ತಕ ಓದಿಯೇ ಪರಿಹಾರ ಕಂಡುಕೊಳ್ಳಬೇಕು.


ಕೊಲೆ ಮಾಡಿದ ವೈಸರ್ ಈ ಕೊಲೆ ನಾನೊಬ್ಬನೇ ಮಾಡಿಲ್ಲ ಬೇರೆಯವರು ಸೇರಿ ಮಾಡಿದೆವು ಎಂದು ಜಡ್ಜ್ ಮುಂದೆ  ದೃಢವಾಗಿ ಹೇಳಿದಾಗ ಅದರಂತೆ  ತನಿಖೆ ಕೈಗೊಂಡಾಗ ಹೊರಬಂದ ಸತ್ಯಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಬ್ಯಾಕರ್ ನ ಸ್ವಾರ್ಥ ಮತ್ತು ಫಾರ್ಮ ಕಂಪನಿಗಳ ಅನೈತಿಕ ಮತ್ತು ಲಾಭಕೊರತನದ ಆಸೆಯ ಬಗ್ಗೆ ಕಾದಂಬರಿಕಾರರು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ.

ನಮ್ಮ ಕರುಳಿಗೂ ಮೆದುಳಿಗೂ ಅವಿನಾಭಾವ ಸಂಬಂದವಿದೆ ಎಂಬುದನ್ನು ಗಟ್ ಬ್ರೈನ್ ಆಕ್ಸಿಸ್ ನಲ್ಲಿ ಜೀವ ವಿಜ್ಞಾನಿಗಳು ವಿವರಿಸಿದ್ದಾರೆ. ಕರುಳು ಮತ್ತು ಮೆದುಳಿನ ನಡುವೆ ಇರುವ ಸಂಬಂಧದಿಂದಾಗಿ ಮಾನವನ ಅದೆಷ್ಟು ಜೀವನ ಕ್ರಮಗಳು ಮತ್ತು ವರ್ತನೆಗಳು ಈ ಸೂಕ್ಷ್ಮಾಣುಗಳಿಂದ ನಿಗ್ರಹಿಸಲ್ಪಟ್ಟಿವೆ ಎನ್ನುವ ಬಗ್ಗೆ ದಿನನಿತ್ಯವೂ ಹೊಸ ಹೊಸ ಅನ್ವೇಷಣೆಗಳು ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಈ ಕಥಾಂಬರಿ ನಮಗೆ ಹೊಸ ಜ್ಞಾನ ನೀಡುತ್ತದೆ.


ಮೂಲತಃ ವೈಸರ್ ಒಳ್ಳೆಯವನಾದರೂ ಅವನ ದೇಹದಲ್ಲಿ ಅವನಿಗೆ ಗೊತ್ತಾಗದಂತೆ ಕ್ರೂರ ಮನಸ್ಸಿನ ವ್ಯಕ್ತಿಯಾದ ಕಾರ್ಲೋಸ್ ನ ಕರುಳಿನ ಜೀವ ಕೋಶಗಳನ್ನು ಕಲ್ಚರ್ ಮಾಡಿ  ಅವನ ದೇಹ  ಸೇರುವಂತೆ ಮಾಡಿದಾಗ ಉಂಟಾಗುವ ಬೆಳವಣಿಗೆಯಲ್ಲಿ ವೈಸರ್ ನು   ಬ್ಯಾಕರ್ ಸಾವಿಗೆ ಕಾರಣನಾಗಿದ್ದು ಹೊರಗಿನಿಂದ ಬಂದ ಜೀವಕೋಶಗಳಿಂದ! ಆಗ ಶಿಕ್ಷೆ ಯಾರಿಗೆ ಕೊಡಬೇಕು? ವೈಸರ್ಗೊ? ಅಥವಾ ಅನಾಹುತಕಾರಿ ಜೀವಕೋಶಕ್ಕೋ? 

ಈ ಗೊಂದಲದ ಹಿನ್ನೆಲೆಯಲ್ಲಿ ನಡೆದ ಚರ್ಚೆಯಲ್ಲಿ ನಮ್ಮನ್ನು ಚಿಂತನೆಗೀಡು ಮಾಡುವ ಅಂಶಗಳು ಬಯಲಿಗೆ ಬರುತ್ತವೆ. 

ಇಂತಹ ವೈಜ್ಞಾನಿಕ ಸಂಶೋಧನೆ ಮತ್ತು   ಎ ಐ ಬಳಕೆಯ ಸಮಾಜದಲ್ಲಿ ನಮ್ಮ ಇಂದಿನ ಎಲ್ಲ ನ್ಯಾಯಾಂಗ ನಿಯಮಗಳು ಮತ್ತು ಕಾನೂನುಗಳು

ಮಾನವನನ್ನು ಪ್ರಕೃತಿಯಿಂದ ಬೇರ್ಪಡಿಸಿ, ಹೊರಗೆಳೆದು ಆತನೊಬ್ಬ ವಿಶೇಷ ಜೀವಿ

ಎಂಬ ಕಲ್ಪನೆಯಲ್ಲಿ ರೂಪುಗೊಂಡಿವೆ ಎನ್ನುವುದು ವಿದಿತ. ಆ ಕಾರಣದಿಂದಾಗಿಯೇ

ನಮ್ಮ ನ್ಯಾಯನಿಯಮಗಳಲ್ಲಿ ಕಾನೂನುಗಳಲ್ಲಿ  ಹಲವು ವೈರುಧ್ಯಗಳು ನುಸುಳಿವೆ  ನಮ್ಮನ್ನು ಪ್ರಕೃತಿಯಿಂದ ಬೇರ್ಪಡಿಸಿಕೊಳ್ಳದೆಯೇ, ನಾವೆಲ್ಲರೂ ಅದರ ಭಾಗವಷ್ಟೆ ಎಂಬ ಚಿಂತನೆಯ ಆವರಣದಲ್ಲಿ ನಮ್ಮ ಕಾನೂನು ವ್ಯವಸ್ಥೆಯನ್ನು

ರೂಪಿಸಲು ಕಾಲ ಬಂದಿದೆ 

ವ್ಯವಸ್ಥೆಯನ್ನು, ನಿಯಮಗಳನ್ನು ವಿವಿಧ ದೃಷ್ಟಿಕೋನದಲ್ಲಿ ನೋಡುವುದರಿಂದ  ಈ ಕಾಲಕ್ಕೆ ತಕ್ಕಂತೆ 

ಕಾನೂನುಗಳನ್ನು ರಚಿಸುವ ಅವಶ್ಯಕತೆಗಳು ಮತ್ತು ಸಾಧ್ಯತೆಗಳು ಹುಟ್ಟಿಕೊಳ್ಳುತ್ತವೆ.

ಪರಿಸರದತ್ತ ನಮ್ಮ ದೃಷ್ಟಿ ಬದಲಾಗುತ್ತಿರುವ ಈ ಪರ್ವಕಾಲದಲ್ಲಿ ಅಂತಹ ಚಿಂತನೆಗಳ ಅವಶ್ಯಕತೆ ಹೆಚ್ಚಿದೆ. ಮಾನವನನ್ನು ಪ್ರಕೃತಿಯ ತುಟ್ಟತುದಿಯಲ್ಲಿಟ್ಟು, ಅವನಿಗೆಂದೇ ಪಕೃತಿ, ಅವನಿಂದಲೇ ಪ್ರಕೃತಿ ಎಂಬ ಭಾವವೂ ಬದಲಾಗಬೇಕು. 


ಕಥಾಂಬರಿಯು ಸುಖಾಂತವಾಗಿ ವೈಜರ್ ನಿರಪರಾಧಿ ಎಂದು ತೀರ್ಪು ಕೊಟ್ಟಾಗ ಕ್ಯಾಥರೀನ್ ಮತ್ತು ವೈಜರ್ ನಡುವಿನ ಸಂಭಾಷಣೆ ನಮ್ಮನ್ನು ವಿವಿಧ ಆಯಾಮಗಳಲ್ಲಿ ಚಿಂತನೆ ಒಡ್ಡುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

ಪರೋಪಕಾರಾರ್ಥಂ ಇದಂ ಶರೀರಂ"(ಮಾನವರಾಗೋಣ)

 


ಪರೋಪಕಾರಾರ್ಥಂ ಇದಂ ಶರೀರಂ"


ನಾನು ಗೌರಿಬಿದನೂರಿನಲ್ಲಿ  ಕೆಲಸ ಮಾಡುವಾಗ ತೆಲುಗು ‌ಪಿಲ್ಮ್ ಗಳನ್ನು ಫಸ್ಟ್ ಡೇ ಫಸ್ವ್ ಶೋ ನೋಡುವ ಅಭ್ಯಾಸವಿತ್ತು. ಆಗ ನೋಡಿದ ಕೆಲವು ಚಿತ್ರಗಳಲ್ಲಿ ಮೆಗಾ ಸ್ಟರ್ ಚಿರಂಜೀವಿ ಅಭಿನಯದ ಟ್ಯಾಗೋರ್ ಚಿತ್ರ ನನಗೆ ಬಹಳ ಮೆಚ್ಚುಗೆಯಾಗಿತ್ತು ಅದಕ್ಕೆ ಕಾರಣ ಆ ಚಿತ್ರದ ಸಂದೇಶ! 

" ಯಾರಿಂದಲಾದರೂ ನೀನು  ಸಹಾಯ ಪಡೆದರೆ , ನೀನು ಮೂವರಿಗೆ  ಸಹಾಯ ಮಾಡು.ಪ್ರತಿಯಾಗಿ ಏನನ್ನೂ ಅಪೇಕ್ಷಿಸದೇ ಸಹಾಯ ಪಡೆದವರು  ಮತ್ತೆ ಮೂವರಿಗೆ ಸಹಾಯ ಮಾಡಲಿ" 

ಇದೇ ರೀತಿಯ ಸಂದೇಶ ಹೊತ್ತ ಒಂದು ಲೇಖನವನ್ನು ಮುಖ ಪುಟದಲ್ಲಿ ಓದಿದೆ...


ಕಾರು ನಿಂತಿತು,ಅದರಿಂದ ತರುಣಿಯೊಬ್ಬಳು ಕೆಳಗಿಳಿದಳು.ಟೈರ್ ಪಂಕ್ಚರ್ ಆಗಿತ್ತು.ಸ್ಟೆಪ್ನಿ ಇದ್ದರೂ ಅವಳಿಗೆ ಟೈಯರ್ ಚೇಂಜ್ ಮಾಡಲು ಬರುತ್ತಿರಲಿಲ್ಲ.

ರಸ್ತೆಯ ಬದಿಗೆ ನಿಂತು ಸಹಾಯಕ್ಕಾಗಿ ಯಾರನ್ನಾದರೂ ಹುಡುಕುತ್ತಿದ್ದಳು  ಯಾರೂ ನಿಲ್ಲುತ್ತಿಲ್ಲ. ಕೈಯಲ್ಲಿನ ವಾಚ್ ನೋಡಿಕೊಂಡಳು ಸಂಜೆ ಆರು ದಾಟಿದೆ.  ನಿಧಾನವಾಗಿ  ಕತ್ತಲಾಗುತ್ತಿದೆ.ಮನದಲ್ಲಿ ಆತಂಕ.ತಾನಿರುವುದು ಒಬ್ಬಳೇ.  ಬೇರೆ ಯಾರೂ ಇಲ್ಲ.ಇನ್ನೂ ಕತ್ತಲಾದರೆ???!!


ಸಮೀಪದಲ್ಲಿ ಯಾವುದೇ ಮನೆಗಳಿಲ್ಲ.ಸೆಲ್ ಕಾರ್ಯನಿರ್ವಹಿಸುತ್ತಿಲ್ಲ .ಆಗಲೇ ಸುಮಾರು ಒಂದು ಗಂಟೆ ಕಳೆದಿತ್ತು.ಭಯವಾಗಲು ಶುರುವಾಯಿತು. ಚಳಿಯೂ ಹೆಚ್ಚುತ್ತಿತ್ತು.


ಹಾದು ಹೋಗುತ್ತಿದ್ದ ಬೈಕೊಂದು ಮುಂದೆ ಹೋಗಿ  ಹಿಂತಿರುಗಿ ಬಂತು.ಒಬ್ಬ ವ್ಯಕ್ತಿ ಬೈಕ್ ಸ್ಟ್ಯಾಂಡ್ ಹಾಕಿ ಆಕೆಯ ಬಳಿ ಬಂದ.ಆಕೆಗೆ ಸಹಜವಾಗಿಯೇ ಭಯವಾಯಿತು.ಯಾರು?  ಅವನು ಯಾಕೆ ಬರುತ್ತಿದ್ದಾನೆ?


ಅವನು ನಗುತ್ತಾ ಹತ್ತಿರ ಬಂದನು.ಟೈರ್ನಲ್ಲಿ ಗಾಳಿ ಇಲ್ಲದಿರುವುದನ್ನು ನೋಡಿದ. ಅವಳು ಭಯಪಡುತ್ತಿದ್ದಾಳೆಂದು ಅವನಿಗೆ ಅರಿವಾಯಿತು.

"ಭಯ ಬೇಡ,ನಿಮಗೆ ಸಹಾಯ ಮಾಡಲು ಬಂದಿದ್ದೇನೆ.ತುಂಬಾ ಚಳಿಯಿದೆ.ನೀವು ಕಾರಿನಲ್ಲಿ ಕುಳಿತುಕೊಳ್ಳಿ.ನಾನು ಸ್ಟೆಪ್ನಿಯನ್ನು ಬದಲಾಯಿಸುತ್ತೇನೆ"ಎಂದು ಅವನು ಹೇಳಿದ.ಅವಳು ಹೆದರುತ್ತಲೇ ಇದ್ದಳು.


"ನನ್ನ ಹೆಸರು ಮಹೇಶ್.ನಾನು ಇಲ್ಲಿಯೇ ಸಮೀಪದ ಮೆಕ್ಯಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ   ಎಂದನು.ಅವನು ಡಿಕ್ಕಿಯನ್ನು ತೆರೆದು ಅಗತ್ಯ ಸಾಮಾನುಗಳನ್ನು ತೆಗೆದುಕೊಂಡು ಕಾರಿನ ಕೆಳಗೆ ತೂರಿಕೊಂಡು ಜಾಕ್ ಎತ್ತಿ  ಟೈರ್ ಬದಲಿಸುವ ಕಾಯಕ ಆರಂಭಿಸಿದ.  ಡಾಂಬರು ರಸ್ತೆಯಲ್ಲಿ ಕೈಗಳು ತರಚಿಕೊಳ್ಳುತ್ತಿದ್ದವು.ಆದರೂ ಕಷ್ಟಪಟ್ಟು ಟೈರ್ ಬದಲಾಯಿಸಿದ.ಸಾಮಾನುಗಳನ್ನು ಮತ್ತೆ ಕಾರಿಗೆ ಹಾಕಿದ.ಅವಳು ಪರ್ಸ್ ತೆಗೆದು ಹಣ ಕೊಡಲು ಹೋಗುತ್ತಿದ್ದಂತೆ ಅವನು ಬೇಡ ಎಂದ.  


ಆಗ ಅವಳು ನೀವು ಇದನ್ನು ನಿರಾಕರಿಸಬೇಡಿ. ನೀವು ಈ ಸಹಾಯವನ್ನು ಮಾಡಿರದಿದ್ದರೆ....

"ನನ್ನ ಪರಿಸ್ಥಿತಿಯನ್ನು ನೆನೆದರೆ.ನನಗೇ ಭಯವಾಗುತ್ತಿದೆ" ಎಂದಳು 

ಆಗ ಅವನು ನಾನು ಕಷ್ಟದಲ್ಲಿದ್ದಾಗ ಯಾರೋ ನನಗೆ ಸಹಾಯ ಮಾಡಿದರು ಅಷ್ಟಕ್ಕೂ

ನೀವು ಸಹಾಯ ಮಾಡಲು ಬಯಸಿದರೆ ಯಾರಾದರೂ ತೊಂದರೆಯಲ್ಲಿದ್ದಾರೆ ಎಂದು ನಿಮಗೆ ತಿಳಿದರೆ ನನ್ನ ಹೆಸರಲ್ಲಿ ಅವರಿಗೆ ಸಹಾಯ ಮಾಡಿಬಿಡಿ" ಎನ್ನುತ್ತಲೇ ನಿಲ್ಲದೆ ಹೊರಟೇ ಬಿಟ್ಟನು.


ಮನಸ್ಸಿನಲ್ಲಿ ಅವನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಕಾರನ್ನು ಓಡಿಸ ತೊಡಗಿದಳು.ಆಗ ಹಸಿವಾಗ ತೊಡಗಿತು.ಅಲ್ಲದೆ ಅವಳು ಇನ್ನೂ ಬಹಳ ದೂರ ಸಾಗಬೇಕಾಗಿತ್ತು.ಹಸಿವು ಮತ್ತು ಚಳಿ ಅವಳನ್ನು ರಸ್ತೆ ಬದಿಯ ಹೋಟೆಲ್‌ಗೆ ಹೋಗುವಂತೆ ಮಾಡಿತು. ಅದೊಂದು ಚಿಕ್ಕ ಹೋಟೆಲ್.ಗರ್ಭಿಣಿ ಮಹಿಳೆ ಗ್ರಾಹಕರ ಟೇಬಲ್ಗಳಿಗೆ ಸೇವೆ ಸಲ್ಲಿಸುತ್ತಿದ್ದಾಳೆ.  ಅವಳನ್ನು ನೋಡುತ್ತಿದ್ದರೆ ತುಂಬು ಗರ್ಭಿಣಿ ಅನ್ನಿಸಿತು. ಪ್ರಸವದ  ದಿನಗಳು ಸಮೀಪಿಸುತ್ತಿರುವಂತೆ ತೋರುತ್ತಿತ್ತು ಭಾರವಾಗಿ ನಡೆಯುವುದು,

ಎಲ್ಲಾ ಟೇಬಲ್ಗಳಿಗೆ ಹೋಗುವುದು,ಬೇಕಾದ ಆರ್ಡರ್ ತೆಗೆದುಕೊಳ್ಳುವುದು,ಬಡಿಸುವುದು,ಬಿಲ್ ತೆಗೆದುಕೊಳ್ಳುವುದು,ಚಿಲ್ಲರೆ ವಾಪಾಸ್ ಕೊಡುವುದು ಹೀಗೆ ಎಲ್ಲವನ್ನೂ ಒಬ್ಬಳೇ ಮಾಡುತ್ತಿದ್ದಳು.

ಆದರೂ ಅವಳ ಮುಖದಲ್ಲಿ ಮಾಸದ ನಗು!!


ಅವಳು ಈ ತರುಣಿಯ ಮೇಜಿನ ಬಳಿ ಬಂದಳು.  ನಗುತ್ತಾ "ನಿನಗೆ ಏನು ಬೇಕು?ಎಂದು ಕೇಳಿದಳು.

ಅಷ್ಟು ಕಷ್ಟಪಡುತ್ತಿದ್ದರೂ ಆಕೆಯ ಮುಖದಲ್ಲಿ ಮರೆಯಾಗದ ನಗು ಹೇಗಿದೆ?ಎಂದು ತರುಣಿ ಮನದಲ್ಲಿ ಆಶ್ಚರ್ಯಪಡುತ್ತಾ  ಆರ್ಡರ್ ಮಾಡಿದಳು.ಆಹಾರ ಬಂತು,ಊಟ ಮುಗಿಸಿ ಅವಳಿಗೆ 2000 ರೂಪಾಯಿಯ ನೋಟು ಕೊಟ್ಟಳು.

ಹೋಟೆಲ್ನಾಕೆ ಚಿಲ್ಲರೆ ತರಲು ಕೌಂಟರ್ನೆಡೆಗೆ ಹೋದಳು.ಹಿಂತಿರುಗಿ ಬಂದಾಗ ತರುಣಿ ಕಾಣಲಿಲ್ಲ. ಅವಳು ಕುಳಿತಿದ್ದ ಮೇಜಿನ ಮೇಲಿದ್ದ ನೀರಿನ ಲೋಟದ ಕೆಳಗೆ ಒಂದು ಕಾಗದ ಮತ್ತು ನಾಲ್ಕು 2000 ನೋಟುಗಳು ಕಾಣಿಸಿದವು.

ಹೋಟೆಲ್ನವಳಿಗೆ ಆ ಕಾಗದ ಓದಿ ಅಳು ತಡೆಯಲಾಗಲಿಲ್ಲ.

ಅದರಲ್ಲಿ ಬರೆದಿತ್ತು 

"ನಿಮ್ಮ ನಗುತ್ತಿರುವ ಮುಖವು ನೀವು ಬಳಲುತ್ತಿಲ್ಲ ಎಂದು ತೋರುತ್ತಿದೆಯಾದರೂ ತುಂಬು ಗರ್ಭಿಣಿಯಾದ ನೀವು ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿರುವೆರೆಂದರೆ ನಿಮಗೆ ಖಂಡಿತಾ ಹಣದ ಅವಶ್ಯಕತೆ ಇರುವಂತಿದೆ.ನನಗೆ ಈಗಷ್ಟೇ ಒಬ್ಬ ಮಹನೀಯ ಸಹಾಯ ಮಾಡಿದ್ದಾನೆ.

ನಾನು ನಿಮಗೆ ಸಹಾಯ ಮಾಡುತ್ತಿದ್ದೇನೆ.ಅದೇ ರೀತಿಯಲ್ಲಿ ನೀವೂ ಇತರರಿಗೆ ಸಹಾಯ ಮಾಡಿ." ಎಂದು ಬರೆದಿತ್ತು.


ಹೋಟೆಲ್ ಮುಚ್ಚಿ ಮನೆಗೆ ಬಂದಳು.ಅಷ್ಟರಲ್ಲೇ ಕೆಲಸಕ್ಕೆ ಹೋಗಿದ್ದ ಅವಳ ಗಂಡ ಮನೆಗೆ ಬಂದು ದಣಿವಾರಿಸಿಕೊಳ್ಳಲು ಮಂಚದಲ್ಲಿ ಮಲಗಿದ್ದ. ಅವನ ಕೈಗಳು ತರಚಿಕೊಂಡು ರಕ್ತದ ಕಲೆಗಳಿಂದ ಕೂಡಿದ್ದವು.ಅವಳ ಗಂಡ ಬೇರೆ ಯಾರೂ ಆಗಿರದೆ ಆ ಯುವತಿಗೆ ಟೈರ್ ಬಲಾಯಿಸಿ ಕೊಟ್ಟಿದ್ದ ಅದೇ ಮೆಕ್ಯಾನಿಕ್ ಆಗಿದ್ದ!


ಇವಳು ಅವನ ಪಕ್ಕದಲ್ಲಿ ಹಾಸಿಗೆಯ ಮೇಲೆ ಕೂಡುತ್ತಾ,ತನ್ನ ಪ್ರಸವವಾದರೆ ದುಡ್ಡನ್ನು ಹೊಂದಿಸುವುದು ಹೇಗೆ ಎಂದು ನಾವು ಚಿಂತಿತರಾಗಿದ್ದೆವಲ್ಲವೇ? ಇನ್ನು ಆ ಆತಂಕ ಬೇಡ!  ದೇವರು ನಮಗೆ ಸಹಾಯ ಮಾಡಿದನು ಎನ್ನುತ್ತಾ ನಡೆದುದೆಲ್ಲವನ್ನೂ ಶಾಂತವಾಗಿ ಹೇಳಿದಳು, ಅವನ ಕಣ್ಣಂಚಿನಲ್ಲಿ ಎರಡು ಹನಿ ಜಾರಿದವು...


ಅಗತ್ಯವಿರುವಾಗ ನಾವು ಇತರರಿಗೆ ಸಹಾಯ ಮಾಡುವ ಗುಣ ನಮ್ಮ ಭಾರತೀಯರಲ್ಲಿ ರಕ್ತಗತವಾಗಿ ಬಂದಿದೆ."ಪರೋಪಕಾರಾರ್ಥಂ ಇದಂ ಶರೀರಂ" ಎಂಬಂತೆ ನಾವು 

ನಿಜವಾಗಿಯೂ ಸಹಾಯಕ್ಕೆ ಅರ್ಹರಾಗಿರುವವರಿಗೆ ಸಹಾಯ ಮಾಡೋಣ. ಈ ಪ್ರಪಂಚ ಸಮಾಜ ಸರಿಯಿಲ್ಲ ಎಂಬ ಸಿನಿಕತನ ಬಿಟ್ಟು ಇನ್ನ ಒಳ್ಳೆಯತನವಿದೆ ಎಂದು ಸಾಬೀತುಮಾಡೋಣ.



ಸಿಹಿಜೀವಿ ವೆಂಕಟೇಶ್ವರ

ತುಮಕೂರು

14 ಮಾರ್ಚ್ 2024

ಚಿತ್ರ ವಿಮರ್ಶೆ೨ ಪೈಟರ್ ..

 

ಚಿತ್ರ ವಿಮರ್ಶೆ೨

ಪೈಟರ್ ..


ರಿಲೀಸ್ ಆದ ಮೊದಲ ದಿನ 

ಮಿಶ್ರ ಪ್ರತಿಕ್ರಿಯೆಯನ್ನು ಪಡೆದ ಪೈಟರ್ ಚಲನಚಿತ್ರವನ್ನು ಐನಾಕ್ಸ್ 3 d ಚಿತ್ರಮಂದಿರದಲ್ಲಿ ನೋಡಿದೆ. 

ರಿತಿಕ್ ರೋಷನ್ ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ರವರು ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಎರಡು ಗಂಟೆ 46 ನಿಮಿಷಗಳ ವೈಮಾನಿಕ ಯುದ್ಧದ ಕಥೆ ಮತ್ತು ಪ್ರಸ್ತುತ ಪಡಿಸಿದ ರೀತಿಯಲ್ಲಿ ಎಲ್ಲೂ ಬೋರ್ ಹೊಡೆಯುವುದಿಲ್ಲ.


ಕೋನಿಫೆರಸ್ ಮರಗಳಿಂದ ಕೂಡಿದ ಹಿಮಾಲಯದ ಹಿಮದಿಂದ ಆವೃತವಾದ ಪರ್ವತಗಳ ದೃಶ್ಯಗಳು ತ್ರಿಡಿ ನಲ್ಲಿ ಮುದ ನೀಡುತ್ತವೆ ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನ ಮತ್ತು ಕಥೆ ಹೇಳುವಿಕೆಯು ಗಮನ ಸೆಳೆಯುತ್ತದೆ. 

ಕೆಲ ತಾಂತ್ರಿಕ ಅಂಶಗಳನ್ನು

 IAF ಅನುಭವಿಗಳು   ನೀಡಿದ ಸಲಹೆಯನ್ನು ಆಲಿಸಿದ್ದಾರೆ.

ಇಡೀ ಕಥೆಯು ಹೃತಿಕ್ ರೋಷನ್ ಅವರ ಪ್ಯಾಟಿ, ಗುಂಗ್-ಹೋ ಫೈಟರ್ ಪೈಲಟ್ ಮತ್ತು ಧ್ರುವ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಅನ್ನು ಹಾರಿಸುವ ಸುಂದರ ದೀಪಿಕಾ ಪಡುಕೋಣೆ ಅವರ  ಸುತ್ತ ಸುತ್ತುತ್ತದೆ.

 ಪುಲ್ವಾಮಾ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ವಿಶೇಷವಾಗಿ ಆಯ್ಕೆಯಾದ ವಾಯು ಯೋಧರ ತಂಡದಲ್ಲಿ.

ಅನಿಲ್ ಕಪೂರ್ ಲೀಡಿಂಗ್ ಆಫಿಸರ್ ಆಗಿ ಶತ್ರು ದೇಶದ ವಿಧ್ವಂಸಕ ಕೃತ್ಯಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು.

 

ಚಿತ್ರದ ಸಂಭಾಷಣೆಗಳು ಕೆಲವೆಡೆ ಕಚಗುಳಿಯಿಡುವ   ಹಾಸ್ಯದಿಂದ ಕೂಡಿದ್ದು  ನಗುವನ್ನು ತರುತ್ತದೆ.ಕೆಲವು ಭಾವುಕ ಸನ್ನಿವೇಶಗಳಲ್ಲಿ ಕಣ್ಣಲ್ಲಿ ನೀರು ಜಿನುಗುತ್ತವೆ.

ಚಿತ್ರದಲ್ಲಿ ಯುದ್ಧದಲ್ಲಿ ವಿಮಾನಗಳನ್ನು ತೋರಿಸಲು ಉತ್ತಮ ಪ್ರಯತ್ನದೊಂದಿಗೆ  ಫೋಟೋಗ್ರಫಿಯ ಕಣ್ಣಿಗೆ ಔತಣ ನೀಡುತ್ತದೆ.

ಒಟ್ಟಾರೆ ಪೈಟರ್  ಎಲ್ಲಾ ವಯೋಮಾನದವರು ನೋಡಬೇಕಾದ ಚಿತ್ರವೆಂದರೆ ತಪ್ಪಾಗಲಾರದು. ಈ ಚಿತ್ರ ನೋಡಿ ಬಂದ ಮೇಲೆ   ಸೈನ್ಯದ ಬಗ್ಗೆ ಮತ್ತು ದೇಶದ ಬಗ್ಗೆ ಅಭಿಮಾನ ಇಮ್ಮಡಿಯಾಗುವುದರಲ್ಲಿ ಸಂದೇಹವಿಲ್ಲ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


ಶೂನ್ಯ ತಾರತಮ್ಯ ದಿನ

 


ಶೂನ್ಯ ತಾರತಮ್ಯ ದಿನ 


ಭಾರತೀಯ ಸಮಾಜದಲ್ಲಿ ಮತ್ತು ವಿಶ್ವದ ಎಲ್ಲಾ ದೇಶಗಳಲ್ಲಿ ಸಮ ಸಮಾಜ ನಿರ್ಮಾಣದಲ್ಲಿ ಹಲವು ಮಹಾನ್ ಪುರುಷರು ಪ್ರಯತ್ನ ಮಾಡಿದರೂ ಇಂದಿಗೂ ಅಲ್ಲಲ್ಲಿ ತಾರತಮ್ಯ ಇಣುಕಿ ನಮ್ಮನ್ನು ಅಣಕಿಸುತ್ತಿರುವುದು ವಿಪರ್ಯಾಸ.

ತಾರತಮ್ಯ ನಿವಾರಣೆ ದೃಷ್ಟಿಯಿಂದ  ವಿಶ್ವಸಂಸ್ಥೆ  ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರತಿ ವರ್ಷ ಮಾರ್ಚ್ 1 ರಂದು 

ಶೂನ್ಯ ತಾರತಮ್ಯ ದಿನವಾಗಿ ಆಚರಿಸಲಾಗುತ್ತದೆ.

  ವಿಶ್ವ ಸಂಸ್ಥೆಯ   ಎಲ್ಲಾ ಸದಸ್ಯ ರಾಷ್ಟ್ರಗಳಲ್ಲಿ ಕಾನೂನಿನ ಮುಂದೆ ಮತ್ತು ಆಚರಣೆಯಲ್ಲಿ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಈ ದಿನ ಹೊಂದಿದೆ . ಈ ದಿನವನ್ನು ಮೊದಲ ಬಾರಿಗೆ ಮಾರ್ಚ್ 1, 2014 ರಂದು ಆಚರಿಸಲಾಯಿತು ಮತ್ತು UNAIDS ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ಸಿಡಿಬೆ ಅವರು ಆ ವರ್ಷದ ಫೆಬ್ರವರಿ 27 ರಂದು ಬೀಜಿಂಗ್‌ನಲ್ಲಿ ಪ್ರಮುಖ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಿದರು .



ಎಚ್‌ಐವಿ ಅಥವಾ ಏಡ್ಸ್‌ನೊಂದಿಗೆ ಜೀವಿಸುವ ಜನರ ವಿರುದ್ಧ ತಾರತಮ್ಯವನ್ನು ಎದುರಿಸುವ ಯುಎನ್‌ಎಐಡಿಎಸ್‌ನಂತಹ ಸಂಸ್ಥೆಗಳಿಂದ ಈ ದಿನವನ್ನು ವಿಶೇಷವಾಗಿ ಗುರುತಿಸಲಾಗಿದೆ. 


ಭಾರತವು ತಾರತಮ್ಯ ವಿರೋಧಿ ಧೋರಣೆಯನ್ನು ಕಾನೂನು ಮತ್ತು ನೈತಿಕ ನೆಲೆಗಟ್ಟಿನಲ್ಲಿ ಜಾರಿಗೊಳಿಸಿದೆ. ಅದರಲ್ಲಿ ಪ್ರಮುಖವಾದ ಅಂಶಗಳೆಂದರೆ 

ಭಾರತದ ಸಂವಿಧಾನದ 14, 15, 16, 17 ಮತ್ತು 18

ಸಮಾನ ಸಂಭಾವನೆ ಕಾಯಿದೆ, 1976 ರ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತರಿಪಡಿಸುತ್ತದೆ.

ಭಾರತೀಯ ದಂಡ ಸಂಹಿತೆ , 1860 (ವಿಭಾಗ 153 ಎ) - ಜನಾಂಗ, ಜಾತಿ, ಲಿಂಗ, ಜನ್ಮ ಸ್ಥಳ, ಧರ್ಮ, ಲಿಂಗ ಗುರುತು, ಲೈಂಗಿಕ ದೃಷ್ಟಿಕೋನ ಅಥವಾ ಯಾವುದೇ ಇತರ ವರ್ಗದ ಆಧಾರದ ಮೇಲೆ ಜನರ ವಿರುದ್ಧ ತಾರತಮ್ಯ ಅಥವಾ ಹಿಂಸೆಯನ್ನು ಉತ್ತೇಜಿಸುವ ಭಾಷೆಯ ಬಳಕೆಯನ್ನು ಅಪರಾಧ ಮಾಡುತ್ತದೆ. 

ಮಾನಸಿಕ ಆರೋಗ್ಯ ಕಾಯಿದೆ, 2017 - ಜನಾಂಗ, ಜಾತಿ, ಧರ್ಮ, ಹುಟ್ಟಿದ ಸ್ಥಳ, ಲಿಂಗ, ಲಿಂಗ ಗುರುತು, ಲೈಂಗಿಕ ದೃಷ್ಟಿಕೋನ, ಅಂಗವೈಕಲ್ಯ ಅಥವಾ ಯಾವುದೇ ಇತರ ವರ್ಗದ ಆಧಾರದ ಮೇಲೆ ಜನರಿಗೆ ಮಾನಸಿಕ ಆರೋಗ್ಯ ಸೌಲಭ್ಯಗಳು ಅಥವಾ ಸೇವೆಗಳನ್ನು ಪ್ರವೇಶಿಸಲು ನಿರಾಕರಣೆ ಅಥವಾ ನಿರಾಕರಣೆ ನಿಷೇಧಿಸುತ್ತದೆ. 

ಹಿಂದೂ ಉತ್ತರಾಧಿಕಾರ ಕಾಯಿದೆ, 1956   ಆಸ್ತಿಯನ್ನು ಹೊಂದಿದ್ದ ಮಹಿಳೆಯರ "ಸೀಮಿತ ಮಾಲೀಕ" ಸ್ಥಿತಿಯನ್ನು ರದ್ದುಗೊಳಿಸಲಾಯಿತು, 2004 ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಪುತ್ರಿಯರಿಗೆ ಪುತ್ರರೊಂದಿಗೆ ಸಮಾನ ಉತ್ತರಾಧಿಕಾರದ ಹಕ್ಕುಗಳನ್ನು ನೀಡಲಾಯಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯಗಳ ತಡೆ) ಕಾಯಿದೆ, 1989 ಇದು  ನಿರ್ದಿಷ್ಟವಾಗಿ ಜಾತಿಯ ಆಧಾರದ ಮೇಲೆ ಎಲ್ಲಾ ರೀತಿಯ ತಾರತಮ್ಯ ಮತ್ತು ದ್ವೇಷದ ಅಪರಾಧಗಳನ್ನು  ಕುರಿತು ಚರ್ಚಿಸುತ್ತದೆ.


ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯಿದೆ, 2016 - ನಿರ್ದಿಷ್ಟವಾಗಿ ದೈಹಿಕ, ಮಾನಸಿಕ ವಿಕಲಾಂಗ ವ್ಯಕ್ತಿಗಳ ವಿರುದ್ಧ ತಾರತಮ್ಯ ಮತ್ತು ಹಿಂಸೆಯನ್ನು ನಿಷೇಧಿಸುತ್ತದೆ. 

ಇದರ ಜೊತೆಯಲ್ಲಿ ಕಾಲಕಾಲಕ್ಕೆ  ತಾರತಮ್ಯ ನಿವಾರಣೆಗೆ ಹಲವಾರು ಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ ಆದರೆ ಸಮರ್ಪಕವಾಗಿ ಅವುಗಳ ಅನುಷ್ಠಾನದ ಅಗತ್ಯವಿದೆ. ಇದಕ್ಕೆ ಜನರ ಮತ್ತು ಸಮುದಾಯದ ಸಕಾರಾತ್ಮಕ ಸ್ಪಂದನೆಯೂ ಅಪೇಕ್ಷಣೀಯ.


ಸಿಹಿಜೀವಿ ವೆಂಕಟೇಶ್ವರ

ದವಸ...ಹನಿ

 



ದವಸ 


ಪ್ರೀತಿಯಿಂದ ನುಡಿದನವನು

ಪ್ರಿಯೆ ನನಗಿಷ್ಟದ ತಿಂಡಿ

ತಿನಿಸುಗಳನ್ನು ಮಾಡಿ ಬಿಡು

ಈ ದಿವಸ|

ನಗುತ್ತಲೇ ಉತ್ತರಿಸಿದಳವಳು

ಇನಿಯ ಈಗಲೆ ತಂದು

ಬಿಡು ದವಸ|


ಸಿಹಿಜೀವಿ ವೆಂಕಟೇಶ್ವರ

ತುಮಕೂರು