27 ಜನವರಿ 2024

ಮಾನವರಾಗೋಣ..ಭಾಗ ೮

 


ಮಾನವರಾಗೋಣ 


 ಅಮೇರಿಕದಲ್ಲಿ ಒಬ್ಬ   ಖೈದಿಗೆ ಮರಣದಂಡನೆ ವಿಧಿಸಿದಾಗ, ಕೆಲವು ವಿಜ್ಞಾನಿಗಳು ಈ ಖೈದಿಯ ಮೇಲೆ ಕೆಲವು ಪ್ರಯೋಗಗಳನ್ನು ಮಾಡಬೇಕೆಂದು ಸೂಚಿಸಿದ್ದರಿಂದ ಖೈದಿಯನ್ನು ನೇಣು ಹಾಕುವ ಬದಲು ವಿಷಕಾರಿ ಹಾವಿನ  ದಾಳಿಯಿಂದ ಕೊಲ್ಲಲಾಗುವುದು ಎಂದು ತಿಳಿಸಲಾಯಿತು.


ಒಂದು ದೊಡ್ಡ ವಿಷಪೂರಿತ ಹಾವನ್ನು ಕೈದಿಯ ಮುಂದೆ ತರಲಾಯಿತು. ನಂತರ ಖೈದಿಯ ಕಣ್ಣುಗಳನ್ನು ಮುಚ್ಚಿ ಅವನನ್ನು ಕುರ್ಚಿಗೆ ಕಟ್ಟಲಾಯಿತು.  ಅವನಿಗೆ ಹಾವಿನಿಂದ ಕಚ್ಚಿಸಲಿಲ್ಲ, ಆದರೆ ಎರಡು ಪಿನ್ ಗಳಿಂದ ಚುಚ್ಚಲಾಯಿತು. ಆ ಖೈದಿ ಎರಡೇ ಸೆಕೆಂಡುಗಳಲ್ಲಿ ಸತ್ತುಹೋದ.

ಮರಣೋತ್ತರ ಪರೀಕ್ಷೆಯಲ್ಲಿ ಖೈದಿಯ ದೇಹದಲ್ಲಿ ಹಾವಿನ ವಿಷವನ್ನು ಹೋಲುವ ವಿಷವಿದೆ ಎಂದು ತಿಳಿದುಬಂತು.

ಎಲ್ಲರಿಗೂ ಅಚ್ಚರಿ!  ಈ ವಿಷ ಆ ಮೃತ ಖೈದಿಯ ದೇಹದಲ್ಲಿ ಎಲ್ಲಿಂದ ಬಂತು!!? ಅಥವಾ ಖೈದಿಯ ಸಾವಿಗೆ ಕಾರಣವೇನು!? 

ಇದಕ್ಕೆ ಸಿಕ್ಕ ಉತ್ತರವೇನೆಂದರೆ..  "ಮಾನಸಿಕ ಆಘಾತದಿಂದಾಗಿ ಆ ವಿಷವನ್ನು ಅವನ ದೇಹದಿಂದಲೇ ಉತ್ಪಾದಿಸಲಾಯಿತು!!!"


ಆದ್ದರಿಂದ ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಧನಾತ್ಮಕ ಅಥವಾ ಋಣಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಮ್ಮ ದೇಹವು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.

90% ಕಾಯಿಲೆಗಳಿಗೆ ಮೂಲ ಕಾರಣ ನಕಾರಾತ್ಮಕ ಆಲೋಚನೆಗಳಿಂದ ಉತ್ಪತ್ತಿಯಾಗುವ ಶಕ್ತಿ. 

ನಾವು ಮಾನಸಿಕವಾಗಿ ಆರೋಗ್ಯವಾಗಿದ್ದರೆ ದೈಹಿಕವಾಗಿ ಆರೋಗ್ಯವಿದ್ದಂತೆ ಸರಿ .ಕಷ್ಟ ಕಾಲದಲ್ಲಿ ನಮ್ಮ ಮನಸ್ಸನ್ನು ಸ್ಥಿರವಾಗಿ ಇಟ್ಟುಕೊಳ್ಳುವುದು ಅತ್ಯವಶ್ಯಕ. ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಯಾವುದೇ ಕಾರಣಕ್ಕೂ ಧೃತಿಗೆಡದೆ ಮುನ್ನೆಡೆಯಬೇಕು. ಕೆಲವರಂತೂ ಮಂಬರುವ ಕಲ್ಪಿತ ತೊಂದರೆಗಳನ್ನು ಊಹಿಸಿಕೊಂಡು ಹಿಂಸೆಪಡುವುದನ್ನು ನೋಡಲಾಗದು. ಬಾರದು ಬಪ್ಪುದು,ಬಪ್ಪುದು ತಪ್ಪುದು ಎಂಬ ಅಣ್ಣನ ವಚನವನ್ನು ನೆನಯುತ್ತಾ ಬಂದದ್ದೆಲ್ಲಾ ಬರಲಿ ರಾಘವೇಂದ್ರನ ದಯೆವೊಂದಿರಲಿ ಎಂದು ನಮ್ಮ ನಮ್ಮ  ಕಾಯಕ ಮಾಡಿದರೆ ಧರೆಯೇ  ಕೈಲಾಸವಾಗುವುದು ಅಲ್ಲವೇ?


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ತುಮಕೂರು


 


22 ಜನವರಿ 2024

ಮಾನವ ಜನ್ಮವನ್ನು ಪಾವನ ಮಾಡಿಕೊಳ್ಳೋಣ: ಡಾ.ಗುರುರಾಜ್ ಕರ್ಜಗಿ.





 


ಮಾನವ ಜನ್ಮವನ್ನು ಪಾವನ ಮಾಡಿಕೊಳ್ಳೋಣ: ಡಾ.ಗುರುರಾಜ್ ಕರ್ಜಗಿ.


ಜೀವರಾಶಿಗಳಲ್ಲಿ ಶ್ರೇಷ್ಠವಾದ ಮಾನವ ಜನ್ಮವನ್ನು ಡಿ ವಿ ಜಿ ಯಂತವರ ಸಾಹಿತ್ಯದ ಬೆಳಕಿನಲ್ಲಿ  ಪಾವನ ಮಾಡಿಕೊಳ್ಳೋಣ ಎಂದು ಶಿಕ್ಷಣ ತಜ್ಞರು ಹಾಗೂ ವಾಗ್ಮಿಗಳಾದ ಡಾ ಗುರುರಾಜ್ ಕರ್ಜಗಿರವರು ಕರೆ ನೀಡಿದರು.

ತುಮಕೂರಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಡಿ ವಿ ಜಿ ಯವರ ಜೀವನಧರ್ಮ  ದರ್ಶನ ಉಪನ್ಯಾಸ ಮಾಲಿಕೆಯ 100 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಡಿ ವಿ ಜಿಯವರು ಸಲ್ಲಿಸಿದ ಕೊಡುಗೆ ಅಪಾರ, ತುಮಕೂರಿಗೂ ಡಿ ವಿ ಜಿ ರವರಿಗೂ ಅವಿನಾಭಾವ ಸಂಬಂಧವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿರವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಿ ವಿ ಜಿ ರವರ ಸಹೋದರ ಸಂಬಂಧಿ ಆರ್ ಚಂದ್ರಮೌಳಿ ರವರು ಡಿ ವಿ ಗುಂಡಪ್ಪನವರ ಸಮಾಜ ಮುಖಿ ಚಿಂತನೆಗಳನ್ನು ಉದಾಹರಣೆ ಸಮೇತ ವಿವರಿಸಿದರು. 

ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಜಪಾನಂದ್ ಜೀ ಮಹಾರಾಜ್ ರವರು ಡಿ ವಿ ಜಿ ಯವರ ಗೀತೆಯನ್ನು ಹಾಡಿ ಕಗ್ಗಗಳ ಮಹತ್ವ ಮತ್ತು ಕನ್ನಡ ಭಾಷೆಯ ಬಳಕೆಯ ಬಗ್ಗೆ ಯುವ ಜನತೆಗೆ ಮಾರ್ಗದರ್ಶನ ನೀಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತುಮಕೂರು ಘಟಕದ ಅಧ್ಯಕ್ಷರಾದ ಕೆ ಎಸ್ ಸಿದ್ದಲಿಂಗಪ್ಪ ರವರು ಡಿ ವಿ ಜಿ ರವರ ಜೀವನ ಧರ್ಮದರ್ಶನ  ದ ನೂರು ಕಾರ್ಯಕ್ರಮ ಮಾಡಲು ಸಹಕರಿಸಿದ ಸರ್ವರನ್ನು ಸ್ಮರಿಸಿ ಧನ್ಯವಾದಗಳನ್ನು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ಡಿ ವಿ ಜಿ ರವರ ಕಗ್ಗ ವಾಚನ ಮತ್ತು ಗಮಕ ಕಲಾಶ್ರೀ ವಿದ್ವಾನ್ ಎಂ ಜಿ ಸಿದ್ದರಾಮಯ್ಯ ರವರು ವ್ಯಾಖ್ಯಾನ ಮಾಡಿದರು. 

ತುಮಕೂರು ವಿಶ್ವ ವಿದ್ಯಾನಿಲಯದದ ಉಪಕುಲಪತಿಗಳಾದ ಪ್ರೊ ಎಂ ವೆಂಕಟೇಶ್ವರಲು ಸ್ವಾಗತಿಸಿದರು.

ಪ್ರಜಾಪ್ರಗತಿ ಪತ್ರಿಕೆ ಸಂಪಾದಕರಾದ ಎಸ್ ನಾಗಣ್ಣ ರವರು ವಂದಿಸಿದರು.

ತುಮಕೂರು ಜಿಲ್ಲಾ ಕ ಸಾ ಪ ಮಹಿಳಾ ಪ್ರತಿನಿಧಿ ರಾಣಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

ವಾಸವಿ ಸಂಘದ ಅಧ್ಯಕ್ಷರಾದ ಡಾ ಆರ್.ಎಲ್ ರಮೇಶ್ ಬಾಬು, 

ಜಿಲ್ಲಾ ಕ ಸಾ ಪ ಸಂಘಟನಾ ಕಾರ್ಯದರ್ಶಿ ತೇಜಸ್ವಿ ಕಿರಣ್,

ತಾಲ್ಲೂಕು ಕ ಸಾ ಪ ಅಧ್ಯಕ್ಷರಾದ ಚಿಕ್ಕಬೆಳ್ಳಾವಿ ಶಿವಕುಮಾರ್,  ನಗರ ಕ ಸಾ ಪ ಅಧ್ಯಕ್ಷರಾದ ಗೀತಾ ನಾಗೇಶ್ ,ಕಾರ್ಯದರ್ಶಿ ಸಿಹಿಜೀವಿ ವೆಂಕಟೇಶ್ವರ, ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. 


19 ಜನವರಿ 2024

ಸನ್ಯಾಸಿಯಂತೆ ಯೊಚಿಸಿ, ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಿ.....


 


ಸನ್ಯಾಸಿಯಂತೆ ಯೊಚಿಸಿ, ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಿ.....


ನಾನು ಇತ್ತೀಚೆಗೆ   ಜಯ್  ಶೆಟ್ಟಿಯವರ "ಥಿಂಕ್ ಲೈಕ್ ಎ  ಮಾಂಕ್" ಪುಸ್ತಕ ಓದಿದೆ. ಅದನ್ನು ಓದಿದ  ಮೇಲೆ ಎಲ್ಲಾ ವಯೋಮಾನದವರು ಪದೇ ಪದೇ ಓದಬೇಕಾದ ಮತ್ತು ಆ ಪುಸ್ತಕದ ಕೆಲ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಲೇಬೇಕಾದ ಅಗತ್ಯವಿದೆ ಎನಿಸಿತು. ಮೂಲ ಇಂಗ್ಲಿಷ್ ಆದರೂ ನಾನು ಕನ್ನಡದ ಆವೃತ್ತಿಯನ್ನು ಓದಿದೆ.

ಇಡೀ ಪುಸ್ತಕ ಓದಿದ ಬಳಿಕ ಆ ಪುಸ್ತಕದ ಸಾರಾಂಶವನ್ನು ನಿಮ್ಮ ಬಳಿ ಹಂಚಿಕೊಳ್ಳಲು ಮನಸಾಗಿದೆ. ಆ ಪುಸ್ತಕದ ಸಾರಾಂಶವನ್ನು  ನಿಮಗೆ ಸಲಹೆ ರೂಪದಲ್ಲಿ ಈ ಕೆಳಗಿನ ಅಂಶಗಳ ರೂಪದಲ್ಲಿ ಸಲಹಾತ್ಮಕವಾಗಿ ಹೇಳಬಯಸುವೆ.


  ಗತದ ಗೊಡವೆಯ ಬಿಡಿ.  ಮತ್ತು ಭವಿಷ್ಯವನ್ನು ಅತಿಯಾಗಿ ಕಲ್ಪಿಸಿಕೊಂಡು ಹಗಲುಗನಸು ಕಾಣಬೇಡಿ. ಪ್ರಸ್ತುತ ಕ್ಷಣದಲ್ಲಿ ವಾಸಿಸಿ ಮತ್ತು ನೀವು ಏನು ಸಾಧಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸಿ.ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ.  ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಗುರಿಗಳನ್ನು ಹೊಂದಿ ಅದನ್ನು ತಲುಪಲು ಪ್ರಯಾಣದಲ್ಲಿದ್ದಾರೆ.  ನಿಮ್ಮ ಸ್ವಂತ ಗುರಿ ಮತ್ತು ಪ್ರಗತಿಯತ್ತ ಗಮನಹರಿಸಿ.ನಿಮ್ಮಲ್ಲಿರುವದಕ್ಕೆ ಕೃತಜ್ಞರಾಗಿರಿ.  ನಿಮ್ಮ ಜೀವನದಲ್ಲಿ ದೊಡ್ಡ ಅಥವಾ ಚಿಕ್ಕದಾದ ಯಶಸ್ಸನ್ನು ಸಂಭ್ರಮಿಸಿ  ಮತ್ತು  ಒಳ್ಳೆಯ ವಿಷಯಗಳನ್ನು ಪ್ರಶಂಸಿಸಲು ಸಮಯ ತೆಗೆದುಕೊಳ್ಳಿ.


 ಮೊದಲು ನಿಮ್ಮ ಬಗ್ಗೆ ನಿಮಗೆ ಹೆಮ್ಮೆಯಿರಲಿ. ಮತ್ತು ಇತರರಿಗೆ ದಯೆಯಿಂದಿರಿ.  ನಿಮ್ಮನ್ನು ಮತ್ತು ಇತರರನ್ನು ಸಹಾನುಭೂತಿ ಮತ್ತು ಕಾಳಜಿಯಿಂದ ನೋಡಿಕೊಳ್ಳಿ.

ನಿಯಮಿತವಾಗಿ ಧ್ಯಾನ ಮಾಡಿ.  ಧ್ಯಾನವು ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಪ್ರಬಲವಾದ ಸಾಧನವಾಗಿದೆ.


  ಸಾವಧಾನತೆಯನ್ನು ಅಭ್ಯಾಸ ಮಾಡಿ.  ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು   ಪ್ರಸ್ತುತ ಕ್ಷಣಕ್ಕೆ ಗಮನ ಕೊಡುವ ಅಭ್ಯಾಸ ರೂಢಿಸಿಕೊಳ್ಳಿ.

ಅತಿಯಾದ ಅಟ್ಯಾಚ್ ಮೆಂಟ್ ಬೇಕಿಲ್ಲ.ಕೆಲ ಜನರ, ಸ್ಥಳಗಳ,ಮತ್ತು ವಸ್ತುಗಳ ಮೇಲೆ ಅತಿಯಾದ ಅಟ್ಯಾಚ್ ಮೆಂಟ್  ದುಃಖಕ್ಕೆ ಕಾರಣವಾಗಬಹುದು.  ಅಟ್ಯಾಚ್ ಮೆಂಟ್  ಬಿಡಲು ಮತ್ತು ಹೆಚ್ಚು ನಿರಾತಂಕದ ಜೀವನವನ್ನು ನಡೆಸಲು ಕಲಿಯಿರಿ.

 ಗಾಂಧೀಜಿಯಿಂದ ಹಿಡಿದು ಹಲವು  ಮಹಾನ್ ವ್ಯಕ್ತಿಗಳು  ಸರಳವಾಗಿ ಬದುಕುವ ಮಾದರಿಯ ತೋರಿಸಿದ್ದಾರೆ.  ಸರಳತೆ ರೂಢಿಸಿಕೊಳ್ಳಿ  ವಸ್ತು ಆಸ್ತಿ ಮತ್ತು ಬಾಹ್ಯ ಸಂಪತ್ತನ್ನು ಬೆನ್ನಟ್ಟಬೇಡಿ.  ನಿಮಗೆ ನಿಜವಾಗಿಯೂ ಮುಖ್ಯವಾದುದನ್ನು ಮತ್ತು ಅವಶ್ಯಕತೆ ಇರುವುದನ್ನು  ಪಡೆಯಲು ಮಾತ್ರ ಗಮನ  ಕೇಂದ್ರೀಕರಿಸಿ ಮತ್ತು ಸರಳ ಜೀವನವನ್ನು ನಡೆಸಿ.


ಕೆಲವೊಮ್ಮೆ ನೀವು ಮಾಡಿದ ತಪ್ಪಿಗೆ  ನಿಮ್ಮನ್ನೇ ಕ್ಷಮಿಸಿಕೊಳ್ಳಿ ಅದೇ ರೀತಿಯಲ್ಲಿ  ಇತರರನ್ನು ಕ್ಷಮಿಸಿ ತನ್ಮೂಲಕ ನೀವು ದೊಡ್ಡವರಾಗಿ.

ಹೀಗೆ ಥಿಂಕ್ ಲೈಕ್ ಎ ಮಾಂಕ್ ಪುಸ್ತಕದ ಪ್ರಮುಖಾಂಶಗಳ ಆಧಾರದ ಸಲಹೆಗಳ   ಪಟ್ಟಿಯು ಬೆಳೆಯುತ್ತಾ ಸಾಗುತ್ತದೆ. 

ಜಯ್  ಶೆಟ್ಟಿಯವರ ಈ  ಪುಸ್ತಕವು ಹೆಚ್ಚು ಶಾಂತಿಯುತ ಮತ್ತು ತೃಪ್ತಿಕರ ಜೀವನವನ್ನು ನಡೆಸಲು ಪ್ರಾಯೋಗಿಕ ಮಾರ್ಗದರ್ಶಿಯಾಗಿದೆ.  ಅವರ ಪುಸ್ತಕದಲ್ಲಿನ ಪಾಠಗಳನ್ನು ಅನುಸರಿಸುವ ಮೂಲಕ ನಿಮ್ಮ ಮನಸ್ಸನ್ನು ಹೆಚ್ಚು ಶಾಂತವಾಗಿಸಿಕೊಳ್ಳಲು ಮತ್ತು  ಸಹಾನುಭೂತಿಯಿಂದ ವರ್ತಿಸುವ ತರಬೇತಿ ನೀಡಬಹುದು. ಇಂತಹ ಅನುಭವ ನಿಮ್ಮದಾಗಬೇಕಾದರೆ ನೀವು ಥಿಂಕ್ ಲೈಕ್ ಎ ಮಾಂಕ್ ಓದಿ ಬಿಡಿ. ಸನ್ಯಾಸಿಯಂತೆ ಯೊಚಿಸಿ, ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಿ.....


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529


 

18 ಜನವರಿ 2024

ಸೈಬರ್ ಕಳ್ಳರಿಂದ ರಕ್ಷಿಸಿಕೊಳ್ಳೋಣ.


 


ಸೈಬರ್ ಕಳ್ಳರಿಂದ ರಕ್ಷಿಸಿಕೊಳ್ಳೋಣ.


ಮೊನ್ನೆ ರಾತ್ರಿ ಎಂಟು ಮೂವತ್ತರ ಸುಮಾರಿಗೆ ಪೋಷಕರೊಬ್ಬರು ಕರೆ ಮಾಡಿ " ಯಾರೋ ಪೋನ್ ಮಾಡಿ ನಿಮ್ ಮಗಳಿಗೆ ಸ್ಕಾಲರ್ಶಿಪ್ ಕೊಡ್ತೀವಿ, ಒಂದೂವರೆ ಸಾವ್ರ ನಿಮ್ ಅಕೌಂಟ್ ನಿಂದ ಟ್ರಾನ್ಸ್ಪರ್ ಮಾಡಿ ಅಂತಾರೆ ,ಏನ್ ಮಾಡ್ಲಿ ಸರ್ " ಅಂತ ಕೇಳಿದರು. ನನಗೆ ಒಂದೆಡೆ ಖುಷಿ ಮತ್ತೊಂದು ಕಡೆ ಬೇಸರವಾಯಿತು.ಖುಷಿ ಯಾಕೆಂದರೆ ನಮ್ಮ ಶಾಲೆಯ ಮಕ್ಕಳಿಗೆ ಆರ್ಥಿಕ ಸಾಕ್ಷರತೆ ಬಗ್ಗೆ ಶಾಲಾ ಪ್ರಾರ್ಥನೆಯ ಸಮಯದಲ್ಲಿ ಹಾಗೂ ಪಾಠದ ಮಧ್ಯ ಆಗಾಗ್ಗೆ ಮಾಹಿತಿ ನೀಡುವಾಗ ಇಂತಹ ಸೈಬರ್ ಕ್ರೈಮ್ ಬಗ್ಗೆ  ಉದಾಹರಣೆ ಸಮೇತ  ಮಾಹಿತಿ ನೀಡಿ  ಜಾಗೃತರಾಗುವಂತೆ ತಿಳಿಸಿದ್ದೆವು.ಆ ವಿದ್ಯಾರ್ಥಿನಿ ಇಂತಹ ಕರೆ ಬಂದಾಗ ತನ್ನ ಪೋಷಕರಿಗೆ ನನಗೆ ಕರೆ ಮಾಡಲು ತಿಳಿಸಿದ್ದಳು ಇದರಿಂದ ಆನ್ಲೈನ್  ಆರ್ಥಿಕ ವ್ಯವಹಾರದ   ವಂಚನೆಯಿಂದ ಪಾರಾಗಿದ್ದರು.

ಬೇಸರದ ಸಂಗತಿಯೇನೆಂದರೆ,ಇಷ್ಟು ದಿನ ಸಂಪಾದನೆ ಮಾಡುವ ಟೆಕ್ಕಿಗಳು,ಗೃಹಿಣಿಯರು ನಿರುದ್ಯೋಗಿಗಳನ್ನು ಟಾರ್ಗೆಟ್ ಮಾಡಿ ಆಧಾರ್ ,ಓಟಿಪಿ, ಫಿಷಿಂಗ್, ವಿಷಿಂಗ್ , ಮುಂತಾದ ಮಾರ್ಗಗಳಲ್ಲಿ ಜನರ ಹಣಕ್ಕೆ ಕನ್ನ ಹಾಕಿದ್ದ ಖದೀಮರು ಈಗ ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳಿಗೆ ಕರೆ ಮಾಡಿ ಸ್ಕಾಲರ್ಶಿಪ್ ಹಣದ ಆಮಿಷ ನೀಡಿ ವಂಚಿಸುವ ಕಾಯಕಕ್ಕೆ ಇಳಿದಿದ್ದಾರೆ.

ಪೋಷಕರ ಜೊತೆಗೆ ಮಾತಾನಾಡಿದ ಸೈಬರ್ ಕಳ್ಳರ ಸಂಭಾಷಣೆಯ ರೆಕಾರ್ಡಿಂಗ್ ಅನ್ನು ಪೋಷಕರು ನನಗೆ ಕಳಿಸಿದರು. ಅದನ್ನು ಕೇಳಿದಾಗ ಅವರ ಮಾತುಗಾರಿಕೆ, ಸುಳ್ಳು ಹೇಳುವ ಕೌಶಲ್ಯ, ಕಂಡು ನಾನೇ ದಂಗಾದೆ. ಆ ಕಡೆಯಿಂದ ಮಾತನಾಡಿದ ಸೈಬರ್ ವಂಚಕಿಯ ಮಾತುಗಳ ಪ್ರಕಾರ ಸರ್ಕಾರ ಹೊಸದಾಗಿ ಮಕ್ಕಳಿಗೆ ನೇರವಾಗಿ ಗೂಗಲ್ ಪೇ ಅಥವಾ ಪೋನ್ ಪೇ ನಲ್ಲಿ ಮಾತ್ರ ಸ್ಕಾಲರ್ಶಿಪ್ ಹಣ ಹಾಕುತ್ತಾರಂತೆ. ಮಕ್ಕಳು 1500  ಹಣ ಹಾಕಿದರೆ ಅದೂ ಗೂಗಲ್ ಪೇ ನಲ್ಲಿ ಹಾಕಿದರೆ ಮಾತ್ರ ಆ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಲಿಂಕ್ ಓಪನ್ ಆಗುತ್ತಂತೆ. ವಿದ್ಯಾರ್ಥಿಗಳು ಈ ಆಫರ್ ತಿರಸ್ಕರಿಸಿದರೆ ಅಂತಹ ವಿದ್ಯಾರ್ಥಿಗಳನ್ನು ರೆಡ್ ಲಿಸ್ಟ್ ಗೆ ಸೇರಿಸುತ್ತಾರಂತೆ.ಅವರಿಗೆ ಲೈಪ್ ನಲ್ಲಿ ಸ್ಕಾಲರ್ಶಿಪ್ ಬರೋದೆ ಇಲ್ವಂತೆ.ಹೀಗೆ ರೈಲು ಬಿಡುತ್ತಾ ಮಕ್ಕಳ ಮತ್ತು ಪೋಷಕರನ್ನು ಭಾವನಾತ್ಮಕ ಬ್ಲಾಕ್ ಮೇಲೆ ಮಾಡಿದ್ದಳು ಸೈಬರ್ ಅಮ್ಮಣ್ಣಿ.

ನಾನು ಆ ಪೋಷಕರಿಗೆ ಯಾವುದೇ ಕಾರಣಕ್ಕೆ ಹಣ ಕೊಡಬೇಡಿ ಎಂದು ಸಲಹೆ ನೀಡಿದೆ.ಜೊತೆಯಲ್ಲಿ ಎಲ್ಲಾ ಸ್ಕಾಲರ್ಶಿಪ್ ಡಿ ಬಿ ಟಿ ಅಂದರೆ ನೇರವಾಗಿ ನಿಮ್ಮ ಮಕ್ಕಳ ಖಾತೆಗೆ ಹಣ ಬರುತ್ತದೆ. ಗೂಗಲ್ ಪೇ ನಲ್ಲಿ ಅಲ್ಲ ಎಂದು ಮನವರಿಕೆ ಮಾಡಿದೆ.

ಆ ಪೋಷಕರು ಹಣ ನೀಡದಿದ್ದಾಗ ಮತ್ತೊಮ್ಮೆ ಕರೆ ಮಾಡಿದ ವಂಚಕರು ಪೋಷಕರು ಮತ್ತು ಸಲಹೆ ನೀಡಿದ ಶಿಕ್ಷಕರನ್ನೇ ಬೈಯ್ದಿದ್ದಾರೆ.

ಈ  ಪ್ರಕರಣದ ತರುವಾಯ ನಮ್ಮ ಮುಖ್ಯ ಶಿಕ್ಷಕರು ಮತ್ತು ಎಲ್ಲಾ ಶಿಕ್ಷಕರು ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೇವೆ. ಶಾಲಾ ಪ್ರಾರ್ಥನಾ ಅವಧಿಯಲ್ಲಿ ಸುರಕ್ಷಿತ ಬ್ಯಾಕಿಂಗ್, ಸುರಕ್ಷಿತ ಮೊಬೈಲ್ ಬಳಕೆ ಮತ್ತು ಆರ್ಥಿಕ ಸಾಕ್ಷರತೆ ಬಗ್ಗೆ ಮಾಹಿತಿ ನೀಡಿದ್ದೇವೆ.ಪೋಷಕರಿಗೂ ಶಾಲಾ ವಾಟ್ಸಪ್ ಗುಂಪಿನ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಜಾರಿಯಲ್ಲಿದೆ.


ಸ್ಕಾಲರ್ಶಿಪ್ ಕೊಡುವುದಾಗಿ, ಹಣದ ಸಹಾಯ ಮಾಡುವುದಾಗಿ ನಿಮ್ಮ ನಂಬಿಸಿ, ನಿಮ್ಮಿಂದ ನಿಮ್ಮ ಅಕೌಂಟ್ ನಿಂದ ಹಣ ದೋಚುವ ಸೈಬರ್ ಕಳ್ಳರ ಬಗ್ಗೆ ಸದಾ ಜಾಗೃತರಾಗಿ   ಎಚ್ಚರಿಕೆ ವಹಿಸಿ.ಕಷ್ಟಪಟ್ಟು ಗಳಿಸಿದ ಹಣ ಖದೀಮರ ಪಾಲಾಗಲು ಬಿಡಬೇಡಿ.

ಜಾಗೃತರಾಗಿ..

ಇಂತಹ ಮೋಸದ ಕರೆಗಳು ಬಂದಾಗ

ಸೈಬರ್ ಕ್ರೈಮ್ ಪೋಲಿಸರಿಗೆ ಮಾಹಿತಿ ನೀಡಿ.ಮಕ್ಕಳಿಗೆ ಜಾಗೃತಿ ಮೂಡಿಸಿ.ಮಕ್ಕಳ ಕೈಗೆ ಅನವಶ್ಯಕವಾಗಿ ಪೋನ್ ಕೊಡದಿರಿ.ಇದು ಮಕ್ಕಳ ಮತ್ತು ಪೋಷಕರ ಹಿತಾಸಕ್ತಿಯ ಭಾಗವಾಗಿ  ಆರ್ಥಿಕ ಸಾಕ್ಷರತೆ ಮತ್ತು ಜಾಗೃತಿ ಮೂಡಿಸುವ ಅಭಿಯಾನ.ಬನ್ನಿ ಎಲ್ಲರೂ ಕೈಜೋಡೊಸೋಣ.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಮತ್ತು ಲೇಖಕರು

ತುಮಕೂರು 

9900925529

17 ಜನವರಿ 2024

ಮಿಡಿವ ಮನವೇ ಮಗಳು


 


ಮಿಡಿವ ಮನವೇ ಮಗಳು..


ಇಂದಿನ ದಿನಗಳಲ್ಲಿ ವೃದ್ದಾಶ್ರಮಗಳು ಹೆಚ್ಚಾಗುತ್ತಿವೆ.ಹೆತ್ತವರನ್ನು ಅವರ ಸಂಧ್ಯಾ ಕಾಲದಲ್ಲಿ ಗೌರವದಿಂದ ಕಾಣುವವರು ಕ್ರಮೇಣವಾಗಿ ಕಡಿಮೆಯಾಗುತ್ತಿದ್ದಾರೆ. ಇದಕ್ಕೆ ಅಪವಾದವೆಂಬಂತೆ ಗಂಡುಮಕ್ಕಳಿಗೆ ಹೋಲಿಸಿದರೆ ಹೆಣ್ಣು ಮಕ್ಕಳು ತಮ್ಮ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವ ನಿದರ್ಶನಗಳು ನಮಗೆ ಬಹಳ ಸಿಗುತ್ತವೆ. ನ್ಯಾಯಾಲಯ ಮಗಳಿಗೂ ಅಪ್ಪನ ಆಸ್ತಿಯಲ್ಲಿ ಸಮಪಾಲಿದೆ ಎಂದು ಆದೇಶ ಮಾಡಿದರೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ವಾದ ಮಾಡಿ ಸಹೋದರಿಯ ಸಾಗ ಹಾಕುವ ಸಹೋದರರೇ ಅಧಿಕ. ನಮ್ಮ ಬಹುತೇಕ ಹೆಣ್ಣು ಮಕ್ಕಳು ಅಪ್ಪನೇ ಆಸ್ತಿಯೆಂಬ ವಿಶಾಲ ಮನೋಭಾವದಿಂದ ತನ್ನ ಹೆತ್ತವರ ಬಗ್ಗೆ ಅಪಾರ ಗೌರವದಿಂದ ಗಂಡನ ಮನೆಯ ದಾರಿ ಹಿಡಿಯುವಳು.ಎಷ್ಟೋ ಬಾರಿ ಅಣ್ಣಂದಿರ ಅಪ್ಪ ಅಮ್ಮ ನ ನೋಡಿಕೊಳ್ಳದೇ ಮನೆಯಿಂದ ಹೊರಹಾಕಿದಾಗ ಮಿಡಿವ ಮನವೇ ಮಗಳು.ಹೆಣ್ಣು ಭ್ರೂಣ ಹತ್ಯೆ ,ಹೆಣ್ಣು ಶಿಶು ಹತ್ಯೆ ಮಾಡುವ ಮೂಢರು ಈ ಕಥೆ ಓದಬೇಕು.


ಅದು ದೊಡ್ಡ ಶ್ರೀಮಂತ ಕುಟುಂಬ. ಶ್ರೀಮಂತನಿಗೆ ಪತ್ನಿ ನಾಲ್ಕು ಜನ ಗಂಡು ಮಕ್ಕಳು ಒಬ್ಬಳು ಮಗಳು ಇದ್ದಳು. ಶ್ರೀಮಂತ ನ್ಯಾಯವಾಗಿ ಸಂಪಾದನೆ ಮಾಡಿ ಆಸ್ತಿ ಗಳಿಸಿ ಊರಿನಲ್ಲಿ ಹಾಗೂ ಸಮಾಜದಲ್ಲಿ ಒಳ್ಳೆ ಹೆಸರು ಪಡೆದಿದ್ದನು. ಕಷ್ಟ ಕಾಲ ಎಂದು ಬಂದವರಿಗೆ ಸಹಾಯ, ಕೆಲವರಿಗೆ ಸಾಲ ಕೊಡುತ್ತಿದ್ದನು. ಕುಟುಂಬದಲ್ಲಿ ಮಗಳನ್ನು ಒಳ್ಳೆಯ ಮನೆಗೆ ಕೊಟ್ಟು ವಿವಾಹ ಮಾಡಿದ್ದನು. ಮಾಡಿದ ಆಸ್ತಿಯನ್ನು  ನಾಲ್ಕು ಜನ ಗಂಡು ಮಕ್ಕಳು ಮತ್ತು ಒಬ್ಬಳು ಮಗಳು ಪತ್ನಿ ಎಲ್ಲರಿಗೂ ಸಮನಾಗಿ ಬರುವಂತೆ ವಿತರಣೆ ಮಾಡಿದ್ದನು. ಶ್ರೀಮಂತನು ವಯೊ ಸಹಜ ಕಾರಣದಿಂದ ಮೃತಪಟ್ಟನು. ಮುಂದಿನ ಸಂಸ್ಕಾರಕ್ಕಾಗಿ ತಯಾರು ಮಾಡುತ್ತಿದ್ದರು ಸಾಕಷ್ಟು ಬಂಧು ಬಳಗ, ಊರಿನವರು, ಮನೆ ಮಕ್ಕಳು ಎಲ್ಲಾ ನೆರದಿದ್ದರು. ಇಡೀ ಕುಟುಂಬ ದುಃಖದಲ್ಲಿ ಮುಳುಗಿತ್ತು. ಇನ್ನೇನು ಶವಯಾತ್ರೆ ಹೊರಡಬೇಕು ಅನ್ನುವ ಹೊತ್ತಿಗೆ ಒಬ್ಬ ಹಿರಿಯ ವ್ಯಕ್ತಿ ಬಂದು ಸ್ವಲ್ಪ ತಡೆಯಿರಿ ನನ್ನದೊಂದು ವಿನಂತಿ ಇದೆ ಕೇಳಿ ಎಂದಾಗ ಅಲ್ಲಿದ್ದವರ ಗಮನವೆಲ್ಲ 

ಏನು ಎಂಬಂತೆ ಅವನತ್ತ ಹರಿಯಿತು. 


ಬಂದ ವ್ಯಕ್ತಿ, ನೋಡಿ ಈ ಶ್ರೀಮಂತರು ಕೆಲವು ತಿಂಗಳ ಹಿಂದೆ ನನ್ನಿಂದ 25 ಲಕ್ಷ ಸಾಲ ಪಡೆದಿದ್ದರು. ಅದನ್ನು ಹಿಂತಿರುಗಿಸಿಲ್ಲ ಈ ದಿನ ಇವರು ಮೃತಪಟ್ಟರೆಂದು ತಿಳಿಯಿತು ಆದ್ದರಿಂದ ಸಾಲ ಪಡೆಯಲು ಬಂದಿದ್ದೇನೆ ನನ್ನ ಸಾಲ ಕೊಟ್ಟು ಮುಂದಿನ ಕಾರ್ಯ ಮಾಡಿ ಎಂದರು. ಆಗ ಕೆಲವು ಹಿರಿಯರು, ನೋಡಿ ಶವಸಂಸ್ಕಾರ ಮುಗಿದು ಬಿಡಲಿ ಆಮೇಲೆ ಮಾತುಕತೆ ಆಡೋಣ ಎಂದರು.

ಆ ವ್ಯಕ್ತಿ ಪಟ್ಟು ಬಿಡದಂತೆ ಇಲ್ಲ ನನಗೆ ಹಣವನ್ನಾದರೂ ಕೊಡಲಿ ಇಲ್ಲದಿದ್ದರೆ ಯಾರಾದರೂ ಕೊಡುವವರು ಜವಾಬ್ದಾರಿ ತೆಗೆದುಕೊಳ್ಳಲಿ ಎಂದರು. ಊರಿನವರೆಲ್ಲ ಆ ನಾಲ್ಕು ಗಂಡು ಮಕ್ಕಳ ಕಡೆ ದೃಷ್ಟಿ ಹರಿಸಿದರು. ಆದರೆ ಅವರ್ಯಾರು ತುಟಿ ಪಿಟಕ್ ಅನ್ನಲಿಲ್ಲ. ಹಾಗಾದರೆ ಯಾರು ಕೊಡುವವರು ಅದೇ  ಚರ್ಚೆಯಾಗಿ ಶವಸಂಸ್ಕಾರಕ್ಕೆ ವಿಳಂಬವಾಗುತ್ತಿತ್ತು. ಆಗ ಈ ಸುದ್ದಿ ಒಳಗಿದ್ದ ಹೆಂಗಸರು ಶ್ರೀಮಂತರ ಪತ್ನಿ ಮತ್ತು ಮಗಳ ಕಿವಿಗೂ ಬಿದ್ದಿತ್ತು. 


ಕೆಲವೇ ನಿಮಿಷಗಳಲ್ಲಿ, ದುಃಖ ತಪ್ತಳಾಗಿದ್ದ ಶ್ರೀಮಂತನ ಮಗಳು ಹೊರಗೆ ಬಂದು

ಒಂದು ಬಟ್ಟೆಯ ಗಂಟನ್ನು ತೆಗೆದು ಸಾಲ  ಕೊಡಬೇಕಾದ ವ್ಯಕ್ತಿಗೆ ಕೊಡುತ್ತಾ, ಇದು ನಮ್ಮ ತಂದೆ ಮಾಡಿಸಿಕೊಟ್ಟ ಒಡವೆಗಳು ಇದನ್ನು ತೆಗೆದುಕೊಂಡು ಶವಸಂಸ್ಕಾರಕ್ಕೆ ಅನುವು ಮಾಡಿಕೊಡಿ ನಮ್ಮ ತಂದೆ ಬಹಳ ಮರ್ಯಾದಸ್ತರು ಎಂದು ಕೈ ಮುಗಿದಳು. ಆ ವ್ಯಕ್ತಿ ಒಡವೆ ಗಂಟನ್ನು ತೆಗೆದುಕೊಂಡು ಹೋದರು. ಮತ್ತೆ ಮುಂದಿನ ಕಾರ್ಯವೆಲ್ಲವೂ ಮುಗಿಯಿತು.


ಮರುದಿನ   ಒಡವೆ ಗಂಟು ತೆಗೆದುಕೊಂಡು ಹೋಗಿದ್ದ  ವ್ಯಕ್ತಿ ಬಂದು ಒಡವೆ ಗಂಟನ್ನು ಶ್ರೀಮಂತನ ಮಗಳ ಕೈಗೆ ಕೊಟ್ಟು ಮಗಳೇ ಇದನ್ನು ನೀನು ತೆಗೆದುಕೋ ಇದು ನಿನ್ನದು, ಜೊತೆಗೆ ಈ 25 ಲಕ್ಷ ರೂಪಾಯಿಗಳು ನಿನಗೆ ಸೇರಿದ್ದು ಎಂದು ಕೊಟ್ಟರು.

ಎಲ್ಲರಿಗೂ ಆಶ್ಚರ್ಯವಾಯಿತು!ಇದು ಯಾವ ಹಣ? ಏಕೆ ಕೊಟ್ಟಿರಿ?ಎಂದು ಕೇಳಿದಾಗ, ಆ ಹಿರಿಯರು ಹೇಳಿದರು. ನಾನು ನಿಮ್ಮ ತಂದೆಗೆ ಸಾಲ ಕೊಟ್ಟಿಲ್ಲ.

ಅವರೇ ನನಗೆ 20 ಲಕ್ಷ  ಸಾಲ ಕೊಟ್ಟಿದ್ದರು. ನಾನು ಇನ್ನೆರಡು ಮೂರು ದಿನದಲ್ಲಿ ಕೊಡಬೇಕು ಎಂದುಕೊಂಡಿದ್ದೆ ಆದರೆ ಅಷ್ಟರಲ್ಲಿ ಮೃತರಾದ ಸುದ್ದಿ ಬಂದಿತು. ಹಣವನ್ನು ಯಾರಿಗೆ ಕೊಡಲಿ ಎಂಬ ಚಿಂತೆ ಶುರುವಾಯಿತು. ಅದಕ್ಕಾಗಿ ಈ ನಾಟಕ ಆಡಬೇಕಾಯಿತು ಎಂದರು.‌


ಅಲ್ಲಿ ಕುಳಿತಿದ್ದ ಗಂಡು ಮಕ್ಕಳೆಲ್ಲ ತಲೆ ತಗ್ಗಿಸಿದರು. ಬಾಕಿ ಇದ್ದವರೆಲ್ಲ ಹೆಣ್ಣು ಮಗಳ ಕಡೆ ಹೆಮ್ಮೆಯಿಂದ ನೋಡಿದರು. ಆ ಹೆಣ್ಣು ಮಗಳು ಆ ಹಣದಿಂದ ತಂದೆಯ ಸಂಸ್ಕಾರವನ್ನೆಲ್ಲ ಮಾಡಿಸಿ ಉಳಿದ ದುಡ್ಡನ್ನು ತಾಯಿಗೆ ಕೊಟ್ಟು ಗಂಡನ ಮನೆಗೆ ಹೊರಟು ಹೋದಳು.