10 ಅಕ್ಟೋಬರ್ 2023

ನೇತಾಜಿ ಐಲ್ಯಾಂಡ್

 






ಜನವಸತಿ ರಹಿತ ನೇತಾಜಿ ಸುಭಾಷ್ ಚಂದ್ರ ಬೋಸ್ ಐಲ್ಯಾಂಡ್. 


ಈಗ  ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು   ಮರುನಾಮಕರಣ ಹೊಂದಿರುವ ದ್ವೀಪಕ್ಕೆ ಸಮಾನ ಮನಸ್ಕರ ತಂಡದೊಂದಿಗೆ ಅಂಡಮಾನ್ ನ ಸೆಲ್ಯುಲಾರ್ ಜೈಲ್ ನೋಡಿದ ಮರು ದಿನ  ಭೇಟಿ ನೀಡಿದೆವು.ಪೋರ್ಟ್ ಬ್ಲೇರ್ ನಿಂದ ಮಹೇಶ್ವರಿ ಎಂಬ ಕ್ರೂಸರ್ ನಲ್ಲಿ  ನಮ್ಮ  ತಂಡದೊಂದಿಗೆ  ನೇತಾಜಿ ದ್ವೀಪದೆಡೆಗೆ ಪಯಣ ಬೆಳೆಸಿದೆವು.ನಮ್ಮ ಟೂರ್ ಗೈಡ್ ಈ ದ್ವೀಪದ ವಿಶೇಷತೆಗಳು ಮತ್ತು ಇತಿಹಾಸದ ಬಗ್ಗೆ ಹೇಳುತ್ತಾ ಹೋದ ನಮ್ಮ ಕಿವಿಗಳು ಅವನ ಮಾಹಿತಿಯನ್ನು ಕೇಳುತ್ತಾ ಕಣ್ಣುಗಳು ನಿಸರ್ಗ ಸೌಂದರ್ಯ ಸವಿಯುತ್ತಿದ್ದವು .ಆಗಾಗ್ಗೆ ನಮ್ಮ ಮೊಬೈಲ್ ನಲ್ಲಿ ಅದ್ಬುತ ಪ್ರಕೃತಿ ಸೌಂದರ್ಯ ಸೆರೆಯಾಗುತ್ತಿತ್ತು.
 ಮೊದಲು ರಾಸ್ ಐಲ್ಯಾಂಡ್ ಎಂದು ಕರೆಯಲಾಗುತ್ತಿದ್ದ ಇದು  ಅಂಡಮಾನ್ ದ್ವೀಪಸಮೂಹದಲ್ಲಿರುವ ಒಂದು  ದ್ವೀಪವಾಗಿದೆ. ಇದು ದಕ್ಷಿಣ ಅಂಡಮಾನ್ ಆಡಳಿತ ಜಿಲ್ಲೆ , ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸೇರಿದೆ. ಈ    ದ್ವೀಪವು ಕೇಂದ್ರ ಪೋರ್ಟ್ ಬ್ಲೇರ್ನಿಂದ ಪೂರ್ವಕ್ಕೆ 3 ಕಿಮೀ ದೂರದಲ್ಲಿದೆ.ಇದು   ಐತಿಹಾಸಿಕ ಅವಶೇಷಗಳನ್ನು ಒಳಗೊಂಡ  ಪ್ರವಾಸಿ ಆಕರ್ಷಣೆಯಾಗಿದೆ. 

ರಾಸ್ ದ್ವೀಪಕ್ಕೆ ಸಮುದ್ರ ಸಮೀಕ್ಷಕ ಡೇನಿಯಲ್ ರಾಸ್ ಹೆಸರಿಡಲಾಗಿತ್ತು. ಡಿಸೆಂಬರ್ 2018 ರಲ್ಲಿ ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಗೌರವಾರ್ಥವಾಗಿ ಇದನ್ನು ನೇತಾಜಿ ಸುಭಾಸ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ.

ಈ ದ್ವೀಪವನ್ನು ಪ್ರವಾಸಿಗರು ಕಾಲ್ನಡಿಗೆಯಲ್ಲಿ ಸಾಗುತ್ತಾ ಅಲ್ಲಲ್ಲಿ ಸಿಗುವ ಜಿಂಕೆ ಮತ್ತು ನವಿಲುಗಳ ನೋಡುತ್ತಾ ಆನಂದಿಸಬಹುದು. ವೃದ್ಧರು ಮತ್ತು ಮಕ್ಕಳಿಗೆ ಎಲೆಕ್ಟ್ರಿಕ್ ಕಾರ್ ವ್ಯವಸ್ಥೆ ಇದೆ. ಒಬ್ಬರಿಗೆ 80 ರೂಪಾಯಿಗಳನ್ನು ಪಾವತಿಸಿ ಈ ಸೌಲಭ್ಯ ಪಡೆಯಬಹುದು.
 ಬಜಾರ್, ಬೇಕರಿ, ಅಂಗಡಿಗಳ ಅವಶೇಷಗಳು,ನೀರಿನ ಸಂಸ್ಕರಣಾ ಘಟಕ , ಚರ್ಚ್ , ಟೆನ್ನಿಸ್ ಕೋರ್ಟ್ , ಪ್ರಿಂಟಿಂಗ್ ಪ್ರೆಸ್ , ಸೆಕ್ರೆಟರಿಯೇಟ್, ಆಸ್ಪತ್ರೆ , ಸ್ಮಶಾನ , ಈಜುಕೊಳ ,  ಬೃಹತ್ ಉದ್ಯಾನಗಳು ಮತ್ತು  ಮುಖ್ಯ ಆಯುಕ್ತರ ನಿವಾಸ , ಸರ್ಕಾರಿ ಭವನ , ಹಳೆಯ ಅಂಡಮಾನೀಸ್ ಹೋಮ್, ಟ್ರೂಪ್ ಬ್ಯಾರಕ್ಗಳು , ಎಲ್ಲಾ ಶಿಥಿಲಾವಸ್ಥೆಯಲ್ಲಿದ್ದು, ಹಳೆಯ ಬ್ರಿಟಿಷ್ ಆಡಳಿತವನ್ನು ನೆನಪಿಸುತ್ತದೆ.    

1880 ರ ದಶಕದ ಉತ್ತರಾರ್ಧದಲ್ಲಿ ರಾಸ್ ಐಲ್ಯಾಂಡ್ ಲಿಟರರಿ ಎಂಬ ಸಣ್ಣ  ನಿಯತಕಾಲಿಕವನ್ನು ಆರಂಭಿಸಿದ.  ಈ ಪ್ರದೇಶದ ಮೊದಲ ವಸಾಹತುಶಾಹಿ ದಿನಗಳ ಕಥೆಗಳು ಮತ್ತು ಆತ್ಮಚರಿತ್ರೆಗಳನ್ನು ಒಳಗೊಂಡ   ಪ್ರಕಟಣೆ ಮಾಡಲಾಗುತ್ತಿತ್ತು. ಇವು  ಇದೇ  ದ್ವೀಪದ ಉತ್ತರದ ತುದಿಯಲ್ಲಿರುವ ಪ್ರಿಂಟಿಂಗ್ ಪ್ರೆಸ್ ನಲ್ಲಿ ಪ್ರಿಂಟ್ ಆಗುತ್ತಿದ್ದವು.ಇಂದು ಅದರ ಶಿಥಿಲವಾದ ಕಟ್ಟಡ ನೋಡಬಹುದು.  

ದ್ವೀಪದ ಉತ್ತರದ ತುದಿಯವರೆಗೆ ಒಂದು ಮಾರ್ಗವಿದೆ, ಅಲ್ಲಿ ಹೊಸ ಕಾಂಕ್ರೀಟ್ 10 ಮೀ ಎತ್ತರದ ವೃತ್ತಾಕಾರದ ಲೈಟ್ಹೌಸ್ ಟವರ್ ಅನ್ನು 1977 ರಲ್ಲಿ ನಿರ್ಮಿಸಲಾಗಿದೆ. ತೀರದ ಕಡೆಯಿಂದ ಸುಮಾರು 50 ಮೀಟರ್  ದೂರದಲ್ಲಿರುವ ಬಂಡೆಯ ಮೇಲೆ. ಕಡಿಮೆ ಅಲೆಗಳಿರುವ ಸಂದರ್ಭದಲ್ಲಿ  ಗೋಪುರವನ್ನು ತಲುಪಬಹುದು. ನಾವು ಹೋದಾಗ ಕಡಿಮೆ ಅಲೆಗಳಿದ್ದ ಪರಿಣಾಮ ಲೈಟ್ ಹೌಸ್ ತಲುಪಿ ಫೋಟೋಗಳನ್ನು ಕ್ಲಿಕ್ ಮಾಡಿಕೊಂಡೆವು.  ಈ ಲೈಟ್ಹೌಸ್ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ  ಬ್ಯಾಟರಿಗಳನ್ನು ಚಾರ್ಜ್ ಮಾಡಲು ಫೋಟೋ ವೋಲ್ಟಾಯಿಕ್ ಪ್ಯಾನೆಲ್ಗಳನ್ನು ಪರಿಚಯಿಸಲಾಗಿದೆ ಎಂಬ ಮಾಹಿತಿಯನ್ನು ಗೈಡ್ ನೀಡಿದನು. 

ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪವು ದಟ್ಟವಾದ ಕಾಡುಗಳನ್ನು ಹೊಂದಿದೆ.  ಪ್ರವಾಸಿಗರ ಹೊರತಾಗಿ ಜನವಸತಿಗೆ ಇಲ್ಲಿ ಅವಕಾಶ ಕೊಟ್ಟಿಲ್ಲ.
ದ್ವೀಪದ ಅದ್ಭುತ ಪ್ರಕೃತಿ ಸೌಂದರ್ಯ ಸವಿಯಲು,ಮಚ್ಚೆಯುಳ್ಳ ಜಿಂಕೆಗಳು ಮತ್ತು ನವಿಲುಗಳನ್ನು ನೋಡಲು  ತಾಳೆ ಮತ್ತು ತೆಂಗಿನ ಮರಗಳ ಸೊಬಗು ಸವಿಯಲು ನೀವೂ  ಒಮ್ಮೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪಕ್ಕೆ ಬಂದು ಬಿಡಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529


ಅಂಡಮಾನ್.ಬಗ್ಗೆ ಒಂದು ಪರಿಚಯ...





 


ಭಾಗ ೫ ಅಂಡಮಾನ್.. ಒಂದು ಪರಿಚಯ..


ಅಂಡಮಾನ್ ದ್ವೀಪಗಳು   ಬಂಗಾಳ ಕೊಲ್ಲಿಯಲ್ಲಿರುವ ಭಾರತದ ಆಧೀನಕ್ಕೆ ಒಳಪಟ್ಟ ದ್ವೀಪ ಸಮೂಹ. ಈ ಸಮೂಹದಲ್ಲಿರುವ ಹೆಚ್ಚಿನ ದ್ವೀಪಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಎಂಬ ಹೆಸರಿನಲ್ಲಿ ಕೇಂದ್ರಾಧೀನ ಪ್ರದೇಶವಾಗಿ ಭಾರತಕ್ಕೆ ಸೇರಿದ್ದರೂ ಕೆಲವು ಸಣ್ಣ ದ್ವೀಪಗಳು ಮ್ಯಾನ್ಮಾರ್ ದೇಶಕ್ಕೆ ಸೇರಿವೆ.


ಪುರಾತತ್ವ ಶಾಸ್ತ್ರದ ಅನುಸಾರ ಅಂಡಮಾನ್ ದ್ವೀಪ ಸಮೂಹಗಳಲ್ಲಿ ಜನವಸತಿ ಸಾವಿರಾರು ವರ್ಷಗಳಿಂದಲೂ ಕಂಡುಬರುತ್ತದೆ.ಮಧ್ಯ ಶಿಲಾಯುಗದಿಂದ ದೇಶೀಯ ಅಂಡಮಾನ್ ಜನಾಂಗ 18ನೆಯ ಶತಮಾನದವರೆಗೆ ಅಲ್ಲಲ್ಲಿ ಚದುರಿದಂತೆ ಬದುಕಿದ್ದರು.ಪ್ರಸಿದ್ಧ ಭೂಗೋಳ ಶಾಸ್ತ್ರಜ್ಞ ಟಾಲೆಮಿ ಈ ದ್ವೀಪ ಸಮೂಹಗಳ ಅರಿತಿದ್ದು ತನ್ನ ಬರಹಗಳಲ್ಲಿ ಬೇರೊಂದು ಹೆಸರಿನಲ್ಲಿ ಉಲ್ಲೇಖಿಸಿದ್ದಾನೆ.20ನೆಯ ಶತಮಾನದ ಪರ್ಷಿಯನ್ ನಾವಿಕ ಬುಜುರ್ಗ್ ಇಬಿನ್ ಶೆಹ್ರಿಯಾರ್ ತನ್ನ ಪ್ರವಾಸ ಕಥನ ಐಜಾಬ್ ಅಲ್ ಹಿಂದ್ ಅಂದರೆ ಭಾರತದ ಅದ್ಭುತಗಳು  ಎಂಬ ಪುಸ್ತ್ರಕದಲ್ಲಿ ಈ ದ್ವೀಪ ಸಮೂಹಗಳಿಗೆ ಅಂಡಮಾನ್ ಎಂದೇ ಉಲ್ಲೇಖಿಸಿ ಇಲ್ಲಿ ನರಭಕ್ಷಕ ಜನಾಂಗದವರು ವಾಸಿಸುತ್ತಿದ್ದಾರೆ ಎಂದು ಬರೆದಿದ್ದಾನೆ.ಸಾ ಶ . 8೦೦ ರಿಂದ 1200ರ ವರೆಗೆ ತಮಿಳು ಚೋಳರು ತಮ್ಮ ಸಾಮ್ರಾಜ್ಯವನ್ನು ಸಮುದ್ರಾಚೆಗೆ ಈಗಿನ ಮಲೇಷ್ಯಾದವರೆಗೆ ವಿಸ್ತರಿಸಿದರು. ರಾಜೇಂದ್ರ ಚೋಳ  ಈ ದ್ವೀಪ ಸಮೂಹಗಳನ್ನು ಸುಮಾತ್ರದ ಶ್ರೀವಿಜಯ ಸಾಮ್ರಾಜ್ಯದ ಮೇಲೆ ದಂಡೆತ್ತಲು ಆಯಕಟ್ಟಿನ ನೌಕಾನೆಲೆಗಳನ್ನಾಗಿ ಮಾಡಿಕೊಂಡಿದ್ದನು.1798ರಲ್ಲಿ ಬ್ರಿಟಿಷರು ಇಲ್ಲಿ ತಮ್ಮ ನೌಕಾ ನೆಲೆ ಮತ್ತು ಕೈದಿಗಳಿಗಾಗಿ ವಸಾಹತನ್ನು ಸ್ಥಾಪಿಸಿದರು.1857ರ ಪ್ರಥಮ  ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೆರೆಸಿಕ್ಕ ಕೈದಿಗಳನ್ನು ಬಂಧಿಸಲು  ಪೋರ್ಟ್ ಬ್ಲೇರ್‍ ನಲ್ಲಿ ಬ್ರಿಟಿಷರು ದೊಡ್ಡ ಬಂಧೀಖಾನೆಯನ್ನು ನಿರ್ಮಿಸಿದರು.ಎರಡನೆಯ ಮಹಾಯುದ್ಧ ದಲ್ಲಿ ಈ ದ್ವೀಪ ಸಮೂಹಗಳು ಜಪಾನ್ ದೇಶದ ಸೇನೆಯ ವಶವಾಯಿತು. ಇಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ನೇತೃತ್ವದಲ್ಲಿ ಸ್ವತಂತ್ರ ನಮ್ಮ ತ್ರಿವರ್ಣ ಧ್ವಜ ಹಾರಿಸಿ  ಭಾರತದ ಮೊದಲ ಸರಕಾರವನ್ನು ರಚಿಸಲಾಯಿತು. 


ಬೌಗೋಳಿಕ ಲಕ್ಷಣಗಳು


ಉತ್ತರ ದಕ್ಷಿಣವಾಗಿ ಹಬ್ಬಿದ 300ರಿಂದ 700 ಮೀಟರ್ ಎತ್ತರದ ಬೆಟ್ಟಗಳು ಮತ್ತು ಅದರಿಂದಾದ ಕಣಿವೆಗಳು ಇಲ್ಲಿಯ ಮೇಲ್ಮೈ ಲಕ್ಷಣ.ಕರಾವಳಿಯಲ್ಲಿ ಅನೇಕ ಕೊಲ್ಲಿಗಳಿವೆ.ನದಿಗಳೆಲ್ಲವೂ ಸಣ್ಣವು.ಸಾಗರಿಕ ಉಷ್ಣವಲಯದ ಹವಾಮಾನ ಇಲ್ಲಿಯದು.ನಿತ್ಯಹರಿದ್ವರ್ಣದ ಕಾಡು ಗಳು, ಮ್ಯಾನ್‍ಗ್ರೋವ್ ಸಸ್ಯಗಳು ಇಲ್ಲಿಯ ಸಸ್ಯ ವೈವಿಧ್ಯಗಳು.ಇಲ್ಲಿ ನಾಟಾ ಮಾಡಬಹುದಾದ ಸುಮಾರು 200ಕ್ಕೂ ಹೆಚ್ಚಿನ ಸಸ್ಯ ಪ್ರಭೇದಗಳು ಕಂಡು ಬರುತ್ತವೆ.ವಾಣಿಜ್ಯಿಕ ಬಳಕೆಯಲ್ಲಿರುವ ಪ್ರಭೇದಗಳಲ್ಲಿ ಗರ್ಜನ್, ಪಡೋಕ್ ಮುಖ್ಯವಾದರೆ ಇತರೆ ಮರಗಳಲ್ಲಿ ರುದ್ರಾಕ್ಷ, ಧೂಪ ಮರ ಗಳು ಹೆಚ್ಚಿನ ಸಂಖ್ಯೆಯಲ್ಲಿವೆ.


2011 ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ 3,43,125. ಈ ಜನಸಂಖ್ಯೆಯಲ್ಲಿ ಇಲ್ಲಿಯ ಮೂಲವಾಸಿಗಳಾದ ಅಂಡಮಾನೀ ಅದಿವಾಸಿಗಳ ಸಂಖ್ಯೆ ಅತ್ಯಲ್ಪ..ಇದು ಐದು ಮುಖ್ಯ ಪಂಗಡಗಳಾದ ಗ್ರೇಟ್ ಅಂಡಮಾನೀಸ್, ಜರವಾ,ಜಂಗಿಲ್,ಒಂಗೇಸ್ ಮತ್ತು ಸೆಂಟನಲೀಸ್ ಗಳಲ್ಲಿ ಹರಡಿಕೊಂಡಿದೆ.ಹಲವಾರು ಜನಾಂಗಗಳು ನಶಿಸಿ ಹೋಗಿವೆ.ಇವುಗಳು ಪ್ರಪಂಚದ ಪ್ರಾಚೀನ ಜನಾಂಗಗಳಿಗೆ ಸೇರಿದವರು.



08 ಅಕ್ಟೋಬರ್ 2023

ಸೆಲ್ಯುಲಾರ್ ಜೈಲ್...ಅಂಡಮಾನ್..

 




ಪ್ರವಾಸ ೪.
ಅಂಡಮಾನ್ ನ  ಸೆಲ್ಯುಲಾರ್ ಜೈಲ್ 

"ಇದು ಬರೀ ಜೈಲಲ್ಲ ಸಾವಿರಾರು ದೇಶಭಕ್ತ ಆತ್ಮಗಳಿದ್ದ ಪುಣ್ಯ ತಾಣ. ಇದೊಂದು ದೇವಾಲಯಕ್ಕೂ ಮಿಗಿಲಾದ ಸ್ಥಳ.ಇದರ ಬಗ್ಗೆ ನಿಮಗೆ ಹೇಳುತ್ತಿರುವ ನಾನೇ ಧನ್ಯ. ಇಂತಹ ಸ್ಮಾರಕ ನೋಡಲು ಬಂದ ನೀವುಗಳೂ ಸಹ ಪುಣ್ಯವಂತರು" ಎಂದು ಆಂಗ್ಲ ಭಾಷೆಯಲ್ಲಿ ಗೈಡ್ ಹೇಳುವಾಗ ನಮ್ಮ ಸಹಯಾತ್ರಿಕರು ಭಾವುಕರಾದರು...
ನಿಜಕ್ಕೂ ಇಂತಹ ಸ್ಮಾರಕ ನೋಡಲು ಬಂದ ನಾವೇ  ಧನ್ಯರು ಎಂದರು.ನನ್ನ ಮನಸ್ಸೂ ಅದನ್ನೇ ಹೇಳಿತು.ಬ್ರಿಟಿಷರ ಕ್ರೌರ್ಯ, ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿದ್ದ ಶಿಕ್ಷೆಗಳನ್ನು ಕೇಳಿದರೇನೇ ಭಯವಾಗುತ್ತದೆ. ನಮ್ಮ ದೇಶಭಕ್ತರು ಅದೆಷ್ಟು ಕ್ರೂರವಾದ  ಹಿಂಸೆ ಅನುಭವಿಸಿ ಜೀವ ತ್ಯಜಿಸಿರಬಹುದು ಎಂದು ಬೇಸರವಾಯಿತು.

ಭಾರತದಲ್ಲಿನ ವಸಾಹತುಶಾಹಿ ಆಡಳಿತದ ಕರಾಳ ಕುರುಹುವಾಗಿ ಈ ಸೆಲ್ಯುಲಾರ್ ಜೈಲು   ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 
  ಏಳು ದಿನಗಳ   ದ್ವೀಪ ಪ್ರವಾಸಕ್ಕೆ ಹೊರಟ ನಾವು ಮೊದಲು ನೋಡಿದ್ದು ಅಂಡಮಾನದ ಸೆಲ್ಯುಲಾರ್ ಜೈಲನ್ನು.ನಮಗೆ ನಿಗದಿತ ಗೈಡ್ ಈ ರಾಷ್ಟ್ರೀಯ ಸ್ಮಾರಕದ ಬಗ್ಗೆ ಮಾಹಿತಿ ನೀಡುತ್ತಾ ಸಾಗಿದರು.ನಾವು ಕೇಳುತ್ತಾ ಅಲ್ಲಲ್ಲಿ ನಿಂತು ಪೋಟೋಗಳ ತೆಗೆಸಿಕೊಳ್ಳುತ್ತಾ ನಡೆದೆವು.
ಈ ಸೆರೆಮನೆ ಸಂಕೀರ್ಣವನ್ನು 1896 ಮತ್ತು 1906 ರ ಮಧ್ಯ ನಿರ್ಮಿಸಲಾಗಿದೆ.ಬ್ರಿಟಿಷರು   ಅಂಡಮಾನ್ ನಿಕೋಬಾರ್   ದ್ವೀಪಗಳ ಜಾಗಯನ್ನು ಭಾರತದ ಪ್ರಥಮ ಸ್ವಾತಂತ್ರ್ಯದ  ನಂತರ ಸೆರೆಮನೆಯಾಗಿ ಉಪಯೋಗಿಸಲಾರಂಭಿಸಿದರು.
ಬ್ರಿಟಿಶರು  ಸಾವಿರಾರು ಜನರನ್ನು ಸಾವಿನ ಬಾಯಿಗೆ ನೂಕಿದರು‌.ಕೆಲವರನ್ನು ಸಿಕ್ಕ ಸಿಕ್ಕಲ್ಲಿ ಮರಗಳಿಗೆ ನೇಣು ಹಾಕಿದರು. ತೋಪುಗಳ ಬಾಯಿಗೆ ಕಟ್ಟಿ ಹಲವರನ್ನು ಉಡಾಯಿಸಿದರು. ಇನ್ನೂ ಕೆಲವರು ಈ  ದ್ವೀಪದಲ್ಲಿರುವ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದವರು ತಮ್ಮ ಕುಟುಂಬದಿಂದ ದೂರಾಗಿ ದೇಶದಿಂದಲೂ ದೂರಾಗಿರುತ್ತಿದ್ದರು. ಸುಮಾರು 200 ದಂಗೆಕೋರರನ್ನು ಜೈಲರ್ ಡೇವಿಡ್ ಬ್ಯಾರಿ ಮತ್ತು ಜೇಮ್ಸ್ ಪ್ಯಾಟಿಸನ್ ವಾಕರ್ ಇವರ ವಶಕ್ಕೆ ನೀಡಿ ಇವರನ್ನೆಲ್ಲಾ ದ್ವೀಪಗಳಿಗೆ ಸಾಗಿಸಲಾಗಿತ್ತು. 
ಅವರನ್ನು ಪ್ರಮುಖ ಕೇಂದ್ರಸ್ಥಾನದಿಂದ ದೂರವಿಡುವುದಲ್ಲದೇ ಅವರನ್ನು ಸರಪಳಿಯಿಂದ ಬಂಧಿಸಿ ಕಟ್ಟಡ ರಚನೆ,ಸೆರೆಮನೆಗಳ ನಿರ್ಮಾಣ ಮತ್ತು ಬಂದರು ಸ್ಥಳದ ಕಾವಲಿಗೆ ಬಳಸಲಾಗುತ್ತಿತ್ತು. ಈ ಕಾರ್ಯಾಚರಣೆ ಅವಧಿಯಲ್ಲಿ ಹಲವರು ಮೃತಪಟ್ಟರು. ಎಂದು ನಮ್ಮ ಗೈಡ್ ಹೇಳುವಾಗ ನಮ್ಮ ಮನಸ್ಸು ಭಾರವಾಯಿತು.ಗೈಡ್ ಮುಂದುವರೆಸಿದನು.
 ಇದರ ಮೂಲ ಕಟ್ಟಡವು ಕಡುಗೆಂಪಿನ ಇಟ್ಟಿಗೆಯದ್ದಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆಗಳನ್ನು ಬರ್ಮಾದಿಂದ ತರಲಾಗಿತ್ತು.
ಕಟ್ಟಡಕ್ಕೆ ಏಳು ರೆಕ್ಕೆಗಳಂತೆ ಕಮಾನುಗಳಿವೆ.ಮಧ್ಯದ ಗೋಪುರವು ಅದರ ಸಮತೋಲನ ಮಾಡಿದಂತೆ ಕಾಣಿಸುತ್ತದೆ.ಅಲ್ಲಿನ ಗೃಹರಕ್ಷಕ ದಳದವರು ಕೈದಿಗಳ ಮೇಲೆ ಸದಾ ಕಣ್ಣಿಡಲೂ ಸಹ ಇದು ನೆರವಾಗುತ್ತಿತ್ತು. ಈ ರೆಕ್ಕೆಗಳ ಆಕಾರದ ಅಂಚುಗಳು ಗೋಪುರದ ಮೇಲ್ಭಾಗದಲ್ಲಿ ಸಾಲಿನಂತೆ ಬೈಸಿಕಲ್ ಚಕ್ರಕ್ಕಿರುವ ಸ್ಪೋಕ್ಸ್ ನಂತೆ  ಕಾಣುತ್ತಿದ್ದವು. ದೊಡ್ಡದಾದ ಗಂಟೆಯೊಂದನ್ನು ಗೋಪುರದಲ್ಲಿಡಲಾಗಿತ್ತು,ಯಾವಾಗಲಾದರೂ ತುರ್ತು ಸಂದರ್ಭ ಬಂದಾಗ ಸಂಭಂಧಿಸಿದವರನ್ನು ಎಚ್ಚರಿಸಲು ಅನುಕೂಲವಾಗುತ್ತಿತ್ತು.
ಪ್ರತಿ ರೆಕ್ಕೆಯ ಅಂಚಿನಲ್ಲಿ ಪೂರ್ಣಗೊಂಡ ಭಾಗದಲ್ಲಿ ಮೂರು ಮಹಡಿಯ ಅಂಕಣಗಳಿದ್ದವು. ಒಟ್ಟು 698 ಸೆಲ್ಯುಲಾರ್ ಜೈಲ್ ಕೋಣೆಗಳ ರಚನೆಯಾಗಿದ್ದವು.  ಪ್ರತಿ ಸೆಲ್  15x8 ಅಡಿ ಉದ್ದದ ಈ ಕೊಠಡಿಗಳಿಗೆ ಮೂರು ಮೀಟರ್ ಎತ್ತರದಲ್ಲಿ ಗಾಳಿ ಬೆಳಕಿಗೊಂದು ಕಿಂಡಿಯಿತ್ತು. ಎಂದು ವಿವರಿಸುವಾಗ ನಾವೂ ಆ ಕೋಣೆಯ ಒಳ ಹೊಕ್ಕು ವೀಕ್ಷಿಸಿದೆವು.
 ಯಾವುದೇ ಕೈದಿಯು ಇನ್ನೊಬ್ಬನೊಂದಿಗೆ ಯಾವುದೇ ರೀತಿಯ ಸಂವಹನ ಅಥವಾ ಸಂಪರ್ಕ ಮಾಡಬಾರದೆಂಬ ಉದ್ದೇಶದಿಂದ ಇದನ್ನು ಸೆಲ್  ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಅವರೆಲ್ಲರನ್ನೂ ಒಂಟಿಯಾಗಿ ಏಕಾಂಗಿತನದಲ್ಲೇ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು.

ಏಕಾಂಗಿತನದ ಬಂಧನದಿಂದ ಸ್ವಾತಂತ್ರ್ಯ ಹೋರಾಟಗಾರರು  ಮತ್ತು ರಾಜಕೀಯ ನಾಯಕರ ನಡುವೆ ಸಂಪರ್ಕ ಬೆಳೆಯಬಾರದೆಂದು ಈ ವ್ಯವಸ್ಥೆ ಮಾಡಲಾಗಿತ್ತು. ಅಂಡಮಾ ನ್ ದ್ವೀಪವು ಬ್ರಿಟಿಷ್ ಸರ್ಕಾರದ ಉದ್ದೇಶ ಸಾರ್ಥಕಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಿತ್ತು.
ಸೆಲ್ಯುಲರ್ ಜೈಲಿನಲ್ಲಿದ್ದ ಹೆಸರಾಂತ ಹೋರಾಟಗಾರರೆಂದರೆ ಡಾ. ದಿವಾನ್ ಸಿಂಗ್ ಕಾಲೆಪಾನಿ,ಮೌಲಾನಾ ಫಜ್ಲ್-ಇ-ಹಕ್ ಖೈರಾಬಾದಿ,ಯೋಗೇಂದ್ರ ಶುಕ್ಲಾ, ಬಟುಕೇಶ್ವರ್ ದತ್ತ್,ಮೌಲಾನಾ ಅಹ್ಮದುಲ್ಲಾ, ಮೊವ್ಲಿ ಅಬ್ದುಲ್ ರಹೀಮ್ ಸಾದಿಕ್ ಪುರಿ,ಬಾಬುರಾವ್ ಸಾವರ್ಕರ್,ವಿನಾಯಕ ದಾಮೋದರ ಸಾವರ್ಕರ್, ಭಾಯಿ ಪರ್ಮಾನಂದ,ವಿ.ಒ.ಚಿದಂಬರಮ್ ಪಿಳ್ಳೈ,ಸುಬ್ರಮಣ್ಯಂ ಶಿವ,ಸೋಹನ್ ಸಿಂಗ್,ವಾಮನ್ ರಾವ್ ಜೋಶಿ ಮತ್ತು ನಂದ್ ಗೋಪಾಲ್ ಪ್ರಮುಖರು.
ಎರಡನೇ ಮಹಾಯುದ್ಧದ ಕಾಲದಲ್ಲಿ ಈ ದ್ವೀಪ ಜಪಾನ್ ನ ವಶವಾಯಿತು.
ಸುಭಾಷ್ ಚಂದ್ರ ಬೋಸ್ ಅವರು ಕೂಡಾ ಈ  ದ್ವೀಪಕ್ಕೆ ಭೇಟಿ ನೀಡಿದ್ದರು 
ಜಪಾನಿಯರ ಕಾಲದಲ್ಲಿ  ಸೆಲ್ಯುಲಾರ್ ಜೈಲಿನ  ಏಳು ರೆಕ್ಕೆ ಗೋಪುರಗಳಲ್ಲಿ ಎರಡನ್ನು ನಾಶಗೊಳಿಸಲಾಯಿತು.
ಮತ್ತೆ 1945ರಲ್ಲಿ ಈ ದ್ವೀಪದ  ಬ್ರಿಟಿಷರು  ನಿಯಂತ್ರಣ ಪಡೆದರು.ಸ್ವಾತಂತ್ರಾ ನಂತರ ಎಲ್ಲಾ ಕೈದಿಗಳ ಬಿಡುಗಡೆಯಾಯಿತು. ಅದರೊಂದಿಗೆ ದೇಶಭಕ್ತರ ಹಿಂಸೆಗೆ ಸಾಕ್ಷಿಯಾಗಿದ್ದ  ಪ್ರತಿ ಸೆಲ್ಯುಲಾರ್ ಕೋಣೆಗಳು ನಿಟ್ಟುಸಿರು ಬಿಟ್ಟವು.ನಂತರ
ಗೋಬಿಂದ್ ವಲ್ಲಭ್ ಪಂತ್ ಆಸ್ಪತ್ರೆಯನ್ನು ಸೆಲ್ಯುಲರ್ ಜೈಲು ಆವರಣದಲ್ಲಿ 1963ರಲ್ಲಿ ಆರಂಭಿಸಲಾಯಿತು. ಸದ್ಯ ಇದೀಗ 500ಹಾಸಿಗೆಗಳುಳ್ಳ ಆಸ್ಪತ್ರೆಯಾಗಿದ್ದು ಸುಮಾರು 40 ವೈದ್ಯರು ಸ್ಥಳೀಯ ಜನರ ಆರೋಗ್ಯ ರಕ್ಷಣೆ ಮಾಡುವಲ್ಲಿ ನಿರತರಾಗಿದ್ದಾರೆ. 
 ಸೆಲ್ಯುಲಾರ್ ಜೈಲು ನಿರ್ಮಾಣದ ಶತಮಾನೋತ್ಸವವನ್ನು  2006 ರಲ್ಲಿ ಆಚರಿಸಲಾಯಿತು.ಮತ್ತು  ಸೆಲ್ಯುಲಾರ್ ಜೈಲನ್ನು ರಾಷ್ಟ್ರೀಯ ಸ್ಮಾರಕವಾಗಿ ಸರ್ಕಾರ ಘೋಷಿಸಿತು.ಅಂದು  ಹಲವು ಕೈದಿಗಳನ್ನು ಭಾರತ ಸರ್ಕಾರ ಸನ್ಮಾಸಿತು.ಎಂದು ಹೇಳುತ್ತಾ ಸಂಜೆ ಇಲ್ಲಿ ಸೌಂಡ್ ಅಂಡ್ ಲೈಟ್ ಶೋ ಇದೆ ನೋಡಲು ಮರೆಯದಿರಿ ಎಂದು ಹೇಳುತ್ತಾ ಗೈಡ್ ಹೊರಟರು. ನಾವೆಲ್ಲರೂ ಇಂತಹ ಭವ್ಯ ಸ್ಮಾರಕ ನೋಡಿದ ಸಾರ್ಥಕ ಭಾವದಿಂದ ಸೆಲ್ಯುಲಾರ್ ಜೈಲಿನಿಂದ ಹೊರನಡೆದೆವು.
ಕಾಲಾಪಾನಿ 
ಕರಿನೀರಿನ ಶಿಕ್ಷೆಯ ಜೈಲ್ ಎಂಬ ನಾಮಾಂಕಿತ ಈ ರಾಷ್ಟ್ರೀಯ ಸ್ಮಾರಕವನ್ನು ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕು....


*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
9900925529

06 ಅಕ್ಟೋಬರ್ 2023

ಸಿಹಿಜೀವಿ ಕಂಡ ಅಂಡಮಾನ್ ಭಾಗ ೨




ಭಾಗ ೨
ಕೆಂಪೇಗೌಡ ಏರ್ಪೋರ್ಟ್ ನಲ್ಲಿ..

ತುಮಕೂರಿನಿಂದ ಬಸ್ ನ ಮೂಲಕ ಹೊರಟ ನಾವು ದೇವನಹಳ್ಳಿ ತಲುಪಿದಾಗ ಕೆಂಪೇಗೌಡರ ಬೃಹತ್ ಕಂಚಿನ ವಿಗ್ರಹ ನಮ್ಮ ಎಡಭಾಗದಲ್ಲಿ ಗೋಚರಿಸಿತು.ಅದರ ಮುಂದೆ ಸಾಗಿದಾಗ ಸಿಕ್ಕಿದ್ದೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ನಾವು ಅಂಡಮಾನ್ ತಲುಪಲು ಬೆಂಗಳೂರಿನಿಂದ ಚೆನ್ನೈ ಗೆ ವಿಮಾನದ ಮೂಲಕ ತೆರಳಿ ಅಲ್ಲಿಂದ ಪೋರ್ಟ್ ಬ್ಲೇರ್ ಗೆ ಪಯಣ ಮಾಡಲು ಟಿಕೆಟ್ ಬುಕ್ ಆಗಿತ್ತು.
ಬೋರ್ಡಿಂಗ್ ಪಾಸ್ ಪಡೆದು ಚೆಕ್ ಇನ್ ಆಗಲು ತೆರಳಿದ ನಮ್ಮ ಪ್ರವಾಸಿ ತಂಡಕ್ಕೆ  ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಡಿಜಿ ಯಾತ್ರಾ ಎಂಬ ಉಪಕ್ರಮದ ಮೂಲಕ ಸುಲಭವಾಗಿ ಚೆಕ್ ಇನ್ ಆಗಲು ಸಹಾಯ ಮಾಡಿದರು.  ಲಗೇಜ್ ಕೌಂಟರ್ ನಲ್ಲಿ ನಮ್ಮ ಲಗೇಜ್ ನೀಡಿ ವಿಮಾನ ಏರಲು 12 ನೇ ಕೌಂಟರ್ ನಲ್ಲಿ ಚೆಕ್ ಇನ್ ಆಗಿ ನಮ್ಮ ವಿಮಾನದತ್ತ ತರಳಿದೆವು. ಆಗ ನಮ್ಮ ಕಣ್ಣಿಗೆ ಕೆಂಪೇಗೌಡ ವಿಮಾನ ನಿಲ್ದಾಣದ ಕೆಲ ಸಂಗತಿಗಳು ಅಚ್ಚರಿ ಮತ್ತು  ಹೆಮ್ಮೆ ಮೂಡಿಸಿದವು.

ಈ ನಿಲ್ದಾಣವು   4700 ಎಕರೆಗಳಷ್ಟು ವಿಸ್ತಾರ ಹೊಂದಿದೆ.  ಇದು ಬೆಂಗಳೂರು ಮಧ್ಯ ಭಾಗದಿಂದ ಸುಮಾರು 4೦ ಕಿ.ಮಿ. ದೂರದಲ್ಲಿ ದೇವನಹಳ್ಳಿಯಲ್ಲಿದೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದ ಕೊರತೆಯಿಂದ ಹೊಸದಾಗಿ ಜುಲೈ 2005ರಲ್ಲಿ ಇದರ ಕಟ್ಟುವಿಕೆ ಪ್ರಾರಂಭವಾಗಿ, ಮೇ 23, 2008ರಂದು ತನ್ನ ಕಾರ್ಯಾರಂಭ ಮಾಡಿತು. ಇತ್ತೀಚಿಗೆ ಟರ್ಮಿನಲ್ 2 ನಿರ್ಮಾಣವಾಗಿದೆ ಹಾಗೂ ಅದೀಗ ಕಾರ್ಯಾಚರಣೆಯಲ್ಲಿದೆ. ಇದು ಪ್ರಯಾಣಿಕರ ದಟ್ಟಣೆಯ ಆಧಾರದ ಮೇಲೆ ಭಾರತದ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಮನ್ನಣೆ ಪಡೆದಿದೆ.ಹಾಗೂ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

'ಎಕ್ಸ್ಪ್ರೆಸ್ ವೇ' ಮತ್ತು 'ಹೈಸ್ಪೀಡ್ ರೈಲ್ವೆ' ಲೈನಿನ ಯೋಜನೆಯ 'ನೀಲನಕ್ಷೆ' ತಯಾರಾಗಿದೆ. ಟ್ಯಾಕ್ಸಿ ಸೇವೆ, ಮತ್ತು ಕೆ. ಎಸ್. ಆರ್. ಟಿ. ಸಿ ಹವಾನಿಯಂತ್ರಿತ ಬಸ್‍ಗಳು ಪ್ರತಿ 15 ನಿಮಿಷಕ್ಕೆ ಒಂದರಂತೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಯಾವ ಮೂಲೆಯಿಂದಲಾದರೂ ಹೊರಟು ವಿಮಾನ ನಿಲ್ದಾಣವನ್ನು ಸುಮಾರು ಒಂದರಿಂದ ಒಂದೂವರೆ ಗಂಟೆಗಳಲ್ಲಿ ತಲುಪುವ ವ್ಯವಸ್ಥೆ ಗಮನಾರ್ಹವಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ 'ಬಿ ಐ ಎ ಎಲ್ ಸಹಾಯವಾಣಿ' ಯ ಸೌಲಭ್ಯವಿದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಮಾರ್ಗ, ಸಾರಿಗೆ ಸೌಲಭ್ಯಗಳ ವಿವರಗಳು, ಮತ್ತು ಸಾಮಾನ್ಯ ಮಾಹಿತಿಗಳನ್ನು ದೂರವಾಣಿಯ ಮೂಲಕ ಕೂಡಲೆ ಪಡೆಯ ಬಹುದು.  ವಿಮಾನವೇರುವ ಮೊದಲು ನಡೆಸುವ 'ಭದ್ರತಾ ತಪಾಸಣೆಯ ವಿಧಿ' ಯಲ್ಲಿ ಪ್ರಯಾಣಿಕರು 'ಹಲವು ಕ್ಯೂ' ಗಳಲ್ಲಿ ಕಾದು ಮುಂದುವರೆಯುವ ಬದಲು, 'ಒಂದೇ ಹಂತದ ತಪಾಸಣಾ ವ್ಯವಸ್ಥೆ 'ಯನ್ನು ನಿರೂಪಿಸಲಾಗಿದೆ. 53  'ಚೆಕ್-ಇನ್ ಕೌಂಟರ್' ಗಳು, ಹಾಗೂ 18  'ಸ್ವಯಂ ತಪಾಸಣಾಯಂತ್ರ' ಗಳನ್ನು ಸ್ಥಾಪಿಸಲಾಗಿದೆ. ಮಕ್ಕಳ ಉಪಚಾರ ಹಾಗೂ  ಆರೋಗ್ಯ ಸೇವೆಗೆ ಔಷಧಾಲಯ, ಡಯಾಪರ್ ಬದಲಾವಣೆ, ಹಾಲುಕುಡಿಸುವಿಕೆ ಇತ್ಯಾದಿಗಳಿಗೆ  ಪ್ರತ್ಯೇಕ ಜಾಗವಿದೆ.
ನಿಲ್ದಾಣದ ಒಳಗಡೆ ಸ್ವದೇಶಿ ಮತ್ತು ವಿದೇಶಿ ಖಾದ್ಯಗಳನ್ನು ಒಳಗೊಂಡ ಹೋಟೆಲ್ ಗಳಿವೆ. ನಮ್ಮ ಅನುಭವ ಕ್ಕಾಗಿ ಒಂದು ಕಾಫಿ ಕುಡಿದೆವು .ಕಾಫಿ ಸಾದಾರಣಾಗಿತ್ತು ಬೆಲೆ ಮಾತ್ರ ತುಸು ದುಬಾರಿ  200 ರೂಪಾಯಿಗಳು! ಎಷ್ಟೇ ಆದರೂ  ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲವೇ? 

 

ಸಿಹಿಜೀವಿ ಕಂಡ ಅಂಡಮಾನ್



 


ಭಾಗ ೧ 


ಸಿಹಿಜೀವಿ ಕಂಡ ಅಂಡಮಾನ್ 

ಅಂಡಮಾನ್ ನಲ್ಲಿ ಸಿಹಿಜೀವಿಯ ಸಿಹಿ ನೆನಪುಗಳು..

ಅಂಡಮಾನ್ ನಲ್ಲಿ ಸಿಹಿಜೀವಿ 


ಏನಿವು ಒಂದೇ ವಾಕ್ಯವನ್ನು ಬೇರೆ ಬೇರೆ  ರೀತಿಯಲ್ಲಿ ಬರೆದಿರುವಿರಲ್ಲ ಎಂಬ ನಿಮ್ಮ ಪ್ರಶ್ನೆ ಅಹಜ. ಈ ವಾಕ್ಯಗಳು ನನ್ನ ಸಹೋದ್ಯೋಗಿ ಬಂಧುಗಳು ನಾನು ಅಂಡಮಾನ್  ಪ್ರವಾಸ  ಹೊರಟು ನಿಂತಾಗ ನನ್ನ ಮುಂಬರುವ ಪ್ರವಾಸ ಕುರಿತಾಗಿ ನಾನು ಪ್ರವಾಸ ಕಥನ  ಬರೆಯಲೇಬೇಕೆಂದು ಆಗ್ರಹಪೂರ್ವಕವಾಗಿ  ನೀಡಿದ ಆಕರ್ಷಕ ಶೀರ್ಷಿಕೆಗಳು! ನನ್ನೆಲ್ಲಾ ಸಹೋದ್ಯೋಗಿ ಬಂಧುಗಳಿಗೆ ನಮನಗಳು 

ಖಂಡಿತವಾಗಿಯೂ  ಅವರ ನಿರೀಕ್ಷೆ ಹುಸಿಗೊಳಿಸುವುದಿಲ್ಲ. 


ನನ್ನ ವಿದ್ಯಾರ್ಥಿಗಳಿಗೆ ಭಾರತದ ಭೂಪಟ ಬರೆಯಲು ಹೇಳಿದರೆ ಅಂಡಮಾನ್ ನಿಕೋಬಾರ್ ಲಕ್ಷ್ಯ ದ್ವೀಪಗಳನ್ನು ಬರೆಯದೇ ನಕ್ಷೆ ಬಿಡಿಸುತ್ತಿದ್ದರು. ಎಷ್ಟು ಬಾರಿ ಹೇಳಿದರೂ ಆ ದ್ವೀಪಗಳನ್ನು ಬರೆಯುತ್ತಿರಲಿಲ್ಲ.ನಾನು ಪದೇ ಪದೇ ದ್ವೀಪಗಳ ಬರೆಯಲು ತಾಕೀತು ಮಾಡಿದಾಗ ಒಬ್ಬ ವಿದ್ಯಾರ್ಥಿ ಕೇಳಿಯೇ ಬಿಟ್ಟ ಸಾರ್ ನೀವು ಅಂಡಮಾನ್ ದ್ವೀಪಗಳ ನೋಡಿದ್ದೀರಾ? ಇಲ್ಲ ಎಂದೆ. ಅಂದೆ ಅಂಡಮಾನ್ ನೋಡುವ ನನ್ನ ಬಯಕೆ ಚಿಗುರೊಡೆಯಿತು.


ಮೈಸೂರಿನ ಸಿ ಟಿ ಇ ನಲ್ಲಿ ಬಿ ಎಡ್ ಓದುವಾಗ ನನ್ನ ಸಹಪಾಠಿಗಳೊಂದಿಗೆ ಪ್ರವಾಸ ಹೋದಾಗ 

ನಮ್ಮ ಕರ್ನಾಟಕ ಸೇಂಟ್ ಮೇರೀಸ್ ಐಲ್ಯಾಂಡ್ ನೋಡಿ ಪುಳಕಗೊಂಡಿದ್ದೆ. ಈಗ  ಮೂರು ಲಕ್ಷ ಜನಸಂಖ್ಯೆಯಿರುವ ತುಮಕೂರಿನಿಂದ ಮೂರುವರೆ ಚಿಲ್ರೆ ಲಕ್ಷ  ಜನಸಂಖ್ಯೆ ಇರುವ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಹೊರಟಿರುವೆ..


ಹೆಚ್ಚಿನ ವಿವರಗಳನ್ನು  ನಂತರ ನೀಡುವೆ.