04 ಜೂನ್ 2023

ಪ್ರತಿದಿನವೂ ಪರಿಸರ ದಿನಾಚರಣೆಯಾಗಲಿ....

 


ಪ್ರತಿದಿನವೂ ಪರಿಸರ ದಿನಾಚರಣೆಯಾಗಲಿ...

ಮತ್ತೊಮ್ಮೆ ಜೂನ್ ಬಂದಿದೆ.ಈ ತಿಂಗಳ ಐದು ವಿಶ್ವ ಪರಿಸರ ದಿನವೆಂದು ನೆನೆದು ಅಲ್ಲಲ್ಲಿ ಒಂದೊಂದು ಗಿಡನೆಟ್ಟು ಪೋಟೋ ಗೆ ಪೋಸ್ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದರೆ ಆ ವರ್ಷದ ಪರಿಸರ ದಿನ ಮುಗಿದಂತೆ ಉಳಿದಂತೆ ವರ್ಷಪೂರ್ತಿ ಪರಿಸರಕ್ಕೆ ಹಾನಿ ಮಾಡುವ ಕಾಯಕ ಮುಂದುವರೆಸುತ್ತಾ ಅತಿ ವೃಷ್ಟಿ ,ಅನವೃಷ್ಟಿ, ಉಷ್ಣಾಂಶ ಹಚ್ಚೆಳಕ್ಕೆ ನಾವೇ ಕಾರಣರಾದರೂ ಪ್ರಕೃತಿ ಮಾತೆ ಬೈಯ್ಯುತಾ ಮುಂದಿನ ವರ್ಷ ಜೂನ್ ಐದಕ್ಕೆ ಕಳೆದ ವರ್ಷ ನೆಟ್ಟ ಒಣಗಿದ ಗಿಡ ತೆಗೆದು ಹೊಸ ಗಿಡ ನೆಡುತ್ತೇವೆ?  

ವಿಶ್ವ  ಪರಿಸರ ದಿನಾಚರಣೆಯ 50ನೇ ವರ್ಷಾಚರಣೆಯಲ್ಲಿದ್ದೇವೆ. ಆದರೂ ಪರಿಸರ ಮಾಲಿನ್ಯದ  ಸವಾಲುಗಳು  ನಮ್ಮನ್ನು ಕಾಡುತ್ತಲೇ ಇವೆ.  ಪರಿಸರ ಸಮಸ್ಯೆಗಳಿಗೆ ಪ್ರತಿಕ್ರಿಯೆಯನ್ನು ಸಂಘಟಿಸಲು 1972ರಲ್ಲಿ ಆರಂಭ ಗೊಂಡ ವಿಶ್ವಸಂಸ್ಥೆಯ ಅಂಗಸಂಸ್ಥೆ ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮ (ಯುನೈಟೆಡ್ ನೇಷನ್ಸ್ ಎನ್ವಿರಾನ್ವೆಂಟ್ ಪ್ರೋಗ್ರಾಂ) ನಿಂದ ನೆದರ್ಲ್ಯಾಂಡ್ ಸಹಯೋಗದೊಂದಿಗೆ ಕೋಟ್ ಡಿ. ಐವರಿ ದೇಶ ಆತಿಥ್ಯ ವಹಿಸಿದೆ. ಈ ವರ್ಷದ ಥೀಮ್ ಸಲ್ಯೂಷನ್ ಟು ಪ್ಲಾಸ್ಟಿಕ್ ಪೊಲ್ಯೂಷನ್, ಯು ಎನ್ ಇ ಪಿ ವರದಿಯಂತೆ ಪ್ರತೀ ವರ್ಷವೂ ವಿಶ್ವದಾದ್ಯಂತ ಸುಮಾರು 430 ಮಿಲಿಯನ್ ಟನ್ ನಷ್ಟು ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ ಹಾಗೂ 2000 ಟ್ರಕ್ನಷ್ಟು ಪ್ಲಾಸ್ಟಿಕ್ನ್ನು ಪ್ರಪಂಚದಾದ್ಯಂತ ಕೆರೆ ನದಿ ಸಮುದ್ರಗಳಿಗೆ ಎಸೆಯಲಾಗುತ್ತಿದೆ.

ಪ್ಲಾಸ್ಟಿಕ್ ವಿಲೇವಾರಿ ಒಂದು ಜಾಗತಿಕ ಸಮಸ್ಯೆಯಾಗಿ ಬೆಳೆದು ನಿಂತಿದೆ, ಈ ಸಮಸ್ಯೆ ಜೈವಿಕ ಪ್ರಕ್ರಿಯೆಗಳನ್ನು ಬದಲಾಯಿಸುವ, ಆವಾಸ ಸ್ಥಾನಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಹವಾಮಾನ ವೈಪರೀತ್ಯಗಳಂತಹ ತೀವ್ರತರ ಸಮಸ್ಯೆಗಳಿಗೆ   ಎಡೆ ಮಾಡಿಕೊಡುತ್ತಿದೆ. ಈ ಪರಿಣಾಮಗಳು ನೇರವಾಗಿ ಜನಸಾಮಾನ್ಯನ ಸಾಮಾಜಿಕ ಸ್ವಾಸ್ಥ್ಯ, ಆಹಾರೋತ್ಪಾದನೆ, ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತಿದೆ.

ತೀವ್ರವಾಗಿ ಹೆಚ್ಚಳವಾಗುತ್ತಿರುವ ಪ್ಲಾಸ್ಟಿಕ್ ಮತ್ತು ಅದರ ಪರಿಣಾಮಗಳನ್ನು ಕಡಿಮೆ ಮಾಡಲೇಬೇಕಿರುವ ಅಗತ್ಯ ಉಂಟಾಗಿದ್ದು, ಯುಎನ್ಇಪಿಯು ಈ ಕುರಿತಂತೆ ಟರ್ನಿಂಗ್ ಆಫ್ ದ ಟ್ಯಾಪ್ ಎಂಬ ವರದಿಯನ್ನು ಸಿದ್ಧಪಡಿಸಿದ್ದು, ಮಾರುಕಟ್ಟೆ ರೂಪಾಂತರದ ಮೂಲಕ ಪ್ಲಾಸ್ಟಿಕ್ ನಿಯಂತ್ರಣ ಕುರಿತಂತೆ ಕ್ರಮವನ್ನು ರೂಪಿಸಿದೆ. ಇದು ಪರಿಸರ, ಆರ್ಥಿಕತೆ ಎರಡನ್ನೂ ಗಮನದಲ್ಲಿರಿಸಿಕೊಂಡು ಸಿದ್ಧಪಡಿಸಿದ ವರದಿ. ವರದಿಯ ಪ್ರಕಾರ ರಿಯೂಸ್, ರಿಸೈಕಲ್, ರಿ ಓರಿಯೆಂಟ್ ಹಾಗೂ ಡೈವರ್ಸಿಫೈ ಎಂಬ ಅಂಶಗಳಿಂದ ಪ್ಲಾಸ್ಟಿಕ್ ನಿರ್ವಹಣೆಗೆ ಮಾರ್ಗ ಸೂಚಿಯಾಗಿದೆ. 

ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನದ ಏರಿಕೆಯಲ್ಲಿಯೂ  ಪ್ಲಾಸ್ಟಿಕ್ನ ಪಾರಮ್ಯ ಮರೆಯಲಾಗದು. ಪ್ಲಾಸ್ಟಿಕ್ನ ತಯಾರಿಕೆಯಿಂದ ಹಿಡಿದು ವಿಲೇವಾರಿವರೆಗೂ ಇಂಗಾಲದ ತೀವ್ರತೆ ಇರುವ  ಚಟುವಟಿಕೆಗಳಾಗಿದ್ದು, ಜಾಗತಿಕವಾಗಿ ಪ್ಲಾಸ್ಟಿಕ್ ಉದ್ಯಮದ ತ್ವರಿತವಾದ ಹೆಚ್ಚಳದಿಂದಾಗಿ ಹಸಿರುಮನೆ ಅನಿಲಗಳ ಉತ್ಪಾದನೆಯೂ ಹೆಚ್ಚಾಗಿದೆ. ಇದು ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ. ಮನುಷ್ಯ ಬದುಕಬಲ್ಲ ಗರಿಷ್ಠ ತಾಪಮಾನವು 35 ಡಿಗ್ರಿ ಸೆಂಟಿಗ್ರೇಡ್ ಆಗಿದ್ದು, ಈ ವರ್ಷರ ಬೇಸಿಗೆಯಲ್ಲಿ ಭ ಭಾರತದ ಹಲವೆಡೆ  ಉಷ್ಣತೆಯು  ಪ್ರಮಾಣವು 45ಡಿಗ್ರಿ ದಾಟಿ
ಹೆಚ್ಚಿನ ತಾಪಮಾನವುಂಟಾಗಿ  ಬದುಕು  ಅಸಹನೀಯವಾಗಿರುವುದು ನಮ್ಮ ಕಣ್ಣ ಮುಂದಿದೆ.ಮುಂದಿನ ದಿನಗಳಲ್ಲಿ ಈ ಉಷ್ಣತೆ ಏರುವುದಿಲ್ಲ ಎಂಬುದಕ್ಕೆ ಖಾತ್ರಿ ಇಲ್ಲ.

ಜೀವ ವೈವಿಧ್ಯತೆಯ ಮೇಲೆಯೂ  ಪ್ಲಾಸ್ಟಿಕ್ನ ಪರಿಣಾಮ ಘನಘೋರ.
ಜೀವಿ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿನ ಬಳಕೆಯಿಂದಾಗಿ ಪ್ಲಾಸ್ಟಿಕ್ ನಿರಂತರವಾಗಿ ಉಳಿದು ಹೋಗಿದೆ. ನೀರಿನ ಆಕರಗಳಿಗೆ ಪ್ಲಾಸಿಕ್
ತ್ಯಾಜ್ಯ, ಪ್ಲಾಸ್ಟಿಕ್ ಉತ್ಪಾದನೆಯಿಂದ ಬಿಡುಗಡೆಯಾಗುವ ರಾಸಾಯನಿಕಗಳು ಜೀವ ವೈವಿಧ್ಯತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಸಾಗರ ಪರಿಸರ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಶೇ.10ರಷ್ಟು ಹೆಚ್ಚುತ್ತಲೇ ಇದ್ದು, ಸಾಗರ ಪರಿಸರ ವ್ಯವಸ್ಥೆಯಲ್ಲಿ ಶೇ. 86ರಷ್ಟು ಸರಿಸೃಪಗಳು, ಶೇ.44ರಷ್ಟು ಜಲಪಕ್ಷಿಗಳು, ಶೇ.43ರಷ್ಟು ಸಸ್ತನಿಗಳು ಅಪಾಯದಂಚಿಗೆ ತಲುಪಿದ್ದು, ಸುಮಾರು 800 ವಿವಿಧ ಜಾತಿಯ ಸಾಗರ ಜೀವ ವೈವಿಧ್ಯವು ಅಪಾಯದಂಚಿಗೆ ಸೇರಿವೆ. ಹೀಗೆಯೆ ಪ್ರಾಣಿ ಪಕ್ಷಿಗಳ ಆವಾಸ ಸ್ಥಾನ ನಾಶಕ್ಕೆ ಹಾಗು ಪರಿಸರ ವ್ಯವಸ್ಥೆಯ ಆಹಾರ ಸರಪಳಿಯಲ್ಲಿ ಪ್ಲಾಸ್ಟಿಕ್ ಸೇರಿಹೋಗಿರುವುದು ಅಪಾಯಕಾರಿ ಕರೆಗಂಟೆಯಾಗಿದೆ.

ಮಾನವನ ಆರೋಗ್ಯದ ಮೇಲೆ ಪ್ಲಾಸ್ಟಿಕ್ ದುಷ್ಪರಿಣಾಮಗಳು ಹಲವಾರು ಸಂಶೋಧನೆಗಳಿಂದ ಋಜುವಾತಾಗಿದೆ.
ಉಸಿರಾಟದಿಂದಲೋ, ಆಹಾರ ಸೇವನೆಯಿಂದಲೋ, ಸ್ಪರ್ಶದಿಂದಲೋ ಪ್ರತಿನಿತ್ಯ ಹಲವಾರು ರಾಸಾಯನಿಕಗಳ, ಮೈಕ್ರೋಪ್ಲಾಸ್ಟಿಕ್ನ ಸಂಪರ್ಕಕ್ಕೆ ಬರುತ್ತೇವೆ, ಡಬ್ಬ ಡಬ್ಲ್ಯುಎಫ್ನ ವರದಿಯೊಂದರಂತೆ ವಾರವೊಂದಕ್ಕೆ ಮನುಷ್ಯನು  ತನಗರಿವಿಲ್ಲದೇ  ಸುಮಾರು 5 ಗ್ರಾಂ ನಷ್ಟು ಪ್ಲಾಸ್ಟಿಕ್ ಅನ್ನು  ಸೇವಿಸುತ್ತಿದ್ದಾನೆ. ಇದು ಮನುಷ್ಯನಲ್ಲಿ, ಅನೇಕ ರೋಗಗಳಿಗೆ, ಶಾಶ್ವತ ನ್ಯೂನತೆಗಳಿಗೆ, ಮಕ್ಕಳಲ್ಲಿ ಶಿಶುಮರಣಕ್ಕೆ ಕಾರಣ ವಾಗುತ್ತಿರುವುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಹಾಗೂ ಪ್ಲಾಸ್ಟಿಕ್ನಿಂದ ಕ್ಯಾನ್ಸರ್, ಹಾರ್ಮೋನುಗಳ ಚಟುವಟಿಕೆಗಳಲ್ಲಿ ಬದಲಾವಣೆಗಳಾಗಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಪ್ಲಾಸ್ಟಿಕ್ ಆಹಾರ ಸರಪಳಿಯಲ್ಲಿ ಉಳಿದು ಹೋಗಿರುವುದು ಅಪಾಯಕಾರಿ ಬೆಳವಣಿಗೆ ಹೀಗೆ, ಜೀವಿ ಪರಿಸರ ಪ್ಲಾಸ್ಟಿಕ್ ಉಳಿದುಹೋಗಿದ್ದು, ಪ್ಲಾಸ್ಟಿಕ್ ನಿಯಂತ್ರಣ ಮತ್ತು ಪ್ಲಾಸ್ಟಿಕ್ನ ಅಪಾಯಗಳ ನಿರ್ಮೂಲನೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಿದೆ.

ಪ್ಲಾಸ್ಟಿಕ್ನಿಂದ ಮಾತ್ರವಲ್ಲದೇ, ಮಾನವನ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಂದ ಮೂಲಭೂತ ಅಂಶಗಳಾದ ಗಾಳಿ, ನೀರು, ಶಬ್ದ, ಮಣ್ಣು ಮಲಿನವಾಗುತ್ತಿವೆ, ಕೇವಲ ಆರ್ಥಿಕ ಅಭಿವೃದ್ಧಿಯಷ್ಟೇ ಅಲ್ಲದೆ ಪರಿಸರ ಸಂರಕ್ಷಣಾ ದೃಷ್ಟಿಕೋನ ಎಲ್ಲ ಅಭಿವೃದ್ಧಿಕಾರ್ಯಗಳ ಆರಂಭಕ್ಕೂ ಮೊದಲ ಆದ್ಯತೆಯಾಗಬೇಕು.

ಕಳೆದ ವರ್ಷ ಕೇಂದ್ರ ಸರ್ಕಾರ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಪೂರ್ಣವಾಗಿ ಜಾರಿಯಾಗದಿದ್ದರೂ ತಕ್ಕಮಟ್ಟಿಗೆ ಈ ಪ್ಲಾಸ್ಟಿಕ್ ನಿಷೇಧ ದಾರಿಯಾಗುತ್ತಿದೆ. ಹಣ್ಣು ,ದಿನಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಪೇಪರ್, ಮತ್ತು ಬಟ್ಟೆ ಚೀಲ ಬಳಕೆ ಹೆಚ್ಚಾಗಿದೆ. ಇದು ಸಕಾರಾತ್ಮಕ ಬದಲಾವಣೆಯ   ಸೂಚಕ  . ಇತ್ತೀಚಿಗಭೆ   ತಿರುಮಲಕ್ಕೆ ಭೇಟಿ ನೀಡಿದಾಗ ಅಲ್ಲಿ ಎಲ್ಲಾ ಮಾರಾಟ ಮಳಿಗೆಗಳಲ್ಲಿ ಪ್ಲಾಸ್ಟಿಕ್  ನೀರಿನ ಬಾಟಲ್ ಬದಲಿಗೆ ಗಾಜಿನ ನೀರಿನ ಬಾಟಲ್ ಮಾರುವುದು ಕಂಡು ಖುಷಿಯಾಯಿತು.ಮತ್ತೊಂದು ಉದಾಹರಣೆಯಾಗಿ ಕಳೆದ ವಾರ ಚಿಕ್ಕಮಗಳೂರಿನ ಝರಿ ಇಕೋ ಸ್ಟೇ ನಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ವಾತಾವರಣ ಕಂಡು ಖುಷಿಯಾಯಿತು.
ಪ್ಲಾಸ್ಟಿಕ್ ಮುಕ್ತ ಜಗವ ಕಾಣಲು ಮತ್ತು
ಪರಿಸರ ಸಂರಕ್ಷಣೆಯಲ್ಲಿ ಸರ್ಕಾರಗಳು ಯಾವುದೇ ಕಠಿಣ ಕಾನೂನು ಜಾರಿಗೊಳಿಸಿದರೂ   ವೈಯಕ್ತಿಕ ಮತ್ತು ಸಮುದಾಯದ ಪಾತ್ರ ಹಿರಿದು ನಮ್ಮ ಜವಾಬ್ದಾರಿ ಅರಿತು ನಾವು ನಮ್ಮ ಪರಿಸರ ಸಂರಕ್ಷಣೆಗೆ ಪಣ ತೊಡಬೇಕಿದೆ.ತನ್ಮೂಲಕ ಸುಸ್ಥಿರ ಅಭಿವೃದ್ಧಿಗೆ ಪಣ ತೊಡಬೇಕಿದೆ.ಅದಕ್ಕೆ ಪ್ರತಿದಿನವೂ ಪರಿಸರದಿನಾಚರಣೆ ಆಚರಿಸುವ ಮನಸ್ಥಿತಿಯನ್ನು ನಾವು ಹೊಂದಬೇಕಿದೆ.ಏಕೆಂದರೆ ಇರುವುದೊಂದೇ ಭೂಮಿ ಇದರ ಅವಶ್ಯಕತೆ ನಮಗಿದೆ .ನಮ್ಮ ಅವಶ್ಯಕತೆ ಭೂಮಿಗಿಲ್ಲ. ಈ ಭುವಿಯನ್ನು ಉಳಿಸುವ ಜವಾಬ್ದಾರಿ ನಮ್ಮದೆ ಅಲ್ಲವೇ? 

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು

01 ಜೂನ್ 2023

ಆಶಾದಾಯಕ ಜಿ ಡಿ ಪಿ ಬೆಳವಣಿಗೆ.

 


ಆಶಾದಾಯಕ ಆರ್ಥಿಕ ಪ್ರಗತಿ.


ನೆರೆಯ ಶ್ರೀಲಂಕಾ, ಮತ್ತು ಪಾಕಿಸ್ತಾನ ದೇಶಗಳಲ್ಲಿ ಹಣದುಬ್ಬರ ಮಿತಿಮೀರಿ ಆ ದೇಶಗಳ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ‌

ವಿಶ್ವದ ಬಹುತೇಕ ದೇಶಗಳು ಆರ್ಥಿಕ ಹಿಂಜರಿತದ ಭೀತಿಯಿಂದ ಬಳಲುತ್ತಾ , ಜಗತ್ತಿನ ಕೆಲ ದೈತ್ಯ ಕಂಪನಿಗಳು ಉದ್ಯೋಗ ಕಡಿತ ಮಾಡುವ ಈ ದಿನಗಳಲ್ಲಿ ಭಾರತದ ಜಿ ಡಿ ಪಿ ಏರಿಕೆಯ ಗತಿ ದಾಖಲಿಸಿರುವುದು ಭಾರತದ ಮತ್ತು ಜಗತ್ತಿನ ಪಾಲಿಗೆ ಇದು ಆಶಾದಾಯಕ ಸಂಗತಿಯಾಗಿದೆ.

ಭಾರತದ ಅರ್ಥವ್ಯವಸ್ಥೆಯು ಜನವರಿ ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡ 6.1ರಷ್ಟು ಬೆಳವಣಿಗೆ ಕಂಡಿದೆ. ಇದರಿಂದಾಗಿ ದೇಶದ ಅರ್ಥವ್ಯವಸ್ಥೆಯು  2022-23ನೆಯ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆಯು ಶೇ 7.2ರಷ್ಟು ಅದಂತಾಗಿದೆ. ತನ್ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ಜಿ ಡಿ ಪಿ ಇರುವ ದೇಶವಾಗಿದೆ ಹೊರಹೊಮ್ಮಿದೆ.ಇದೇ ವೇಳೆಯಲ್ಲಿ ಬಲಿಷ್ಠ ಆರ್ಥಿಕತೆ ಎಂದೇ ಹೆಸರಾದ ಅಮೆರಿಕ4%, ಚೀನಾ 3%. ಜಿಡಿಪಿ ಬೆಳವಣಿಗೆ ದಾಖಲಿಸಿ ಮೂರನೆ ಸ್ಥಾನಕ್ಕೆ ಕುಸಿದಿದೆ.

ಕೋವಿಡ್ ನಂತರ ಹಲವಾರು ಜಾಗತಿಕ ಸವಾಲುಗಳ ನಡುವೆಯೂ 

2021-22ರಲ್ಲಿ ದೇಶದ ಜಿಡಿಪಿ ಶೇ 9.1ರಷ್ಟು ಬೆಳವಣಿಗೆ ಸಾಧಿಸಿತ್ತು. 

ಕೃಷಿ, ತಯಾರಿಕೆ, ಗಣಿಗಾರಿಕೆ, ಹಾಗೂ  ನಿರ್ಮಾಣ ವಲಯಗಳಲ್ಲಿನ ಉತ್ತಮ ಬೆಳವಣಿಗೆಯು ಒಟ್ಟು ಬೆಳವಣಿಗೆಯು ನಿರೀಕ್ಷೆಗೆ ಮೀರಿದ ಮಟ್ಟವನ್ನು ತಲುಪುವಲ್ಲಿ ಕೊಡುಗೆ ನೀಡಿವೆ.


ಈ ಪ್ರಮಾಣದ ಬೆಳವಣಿಗೆಯ ಪರಿಣಾಮವಾಗಿ ದೇಶದ ವ್ಯವಸ್ಥೆಯ ಗಾತ್ರವು 3.3 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಅಲ್ಲದೆ, ಇದು ಮುಂದಿನ ಕೆಲವು ವರ್ಷಗಳಲ್ಲಿ ಅರ್ಥ ವ್ಯವಸ್ಥೆಯ ಗಾತ್ರವನ್ನು 5 ಟ್ರಿಲಿಯನ್ ಡಾಲರ್‌ಗೆ ಬೆಳೆಸುವುದಕ್ಕೆ ಭೂಮಿಕೆ ಸಜ್ಜುಮಾಡಿ ಕೊಟ್ಟಂತೆ ಆಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ದೇಶದ ಅರ್ಥ ವ್ಯವಸ್ಥೆಯು ಮಾರ್ಚ್ ತ್ರೈಮಾಸಿಕದಿಂದ ವೇಗವಾಗಿ ಬೆಳವಣಿಗೆ ಮುಖ್ಯ ಅರ್ಥ ಕಾಣುತ್ತಿದೆ ಎಂಬುದನ್ನು ಜಿಡಿಪಿ ಅಂಕಿ- ಅಂಶಗಳು ಹೇಳುತ್ತಿವೆ ಎಂದು ತಜ್ಞರು. ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ .

ಕಚ್ಚಾವಸ್ತುಗಳ ಬೆಲೆ ಕಡಿಮೆ ಆಗುತ್ತಿರುವ ಈ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ತಗ್ಗಿದೆ. ಇದು ಸಹ ಆರ್ಥಿಕ   ಚೇತರಿಕೆಗೆ ಕಾರಣವಾಗಿದೆ.

ಜಿಡಿಪಿಯ ಬೆಳವಣಿಗೆಯ ಜೊತೆಯಲ್ಲಿ ಕೆಲ ಸವಾಲುಗಳನ್ನು ಸಹ ನಾವು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕಿದೆ.  ಹಣದುಬ್ಬರ ನಿಯಂತ್ರಣಕ್ಕೆ ಬರಬೇಕಿದೆ. ಜಿಡಿಪಿಗೆ ಸೇವಾ ವಲಯದಷ್ಟೇ ಕೊಡುಗೆ ಸಲ್ಲಿಸಲು ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ರೈತರ ಆದಾಯವನ್ನು ದ್ಬಿಗುಣಗೊಳಿಸಲು ಕ್ರಮಕೈಗೊಂಡರೆ ಹಾಗೂ ಎಲ್ಲಾ ಮೂರು ವಲಯಗಳ ಆರ್ಥಿಕ ಚಟುವಟಿಕೆಗಳನ್ನು ಇನ್ನೂ ಉತ್ತೇಜನ ನೀಡುವ ಉಪಕ್ರಮಗಳನ್ನು ಜಾರಿಗೆ ತಂದದ್ದೇ ಆದರೆ ಭಾರತವು 5 ಟ್ರಿಲಿಯನ್ ಆರ್ಥಿಕತೆ ಹೊಂದಿದೆ ದೇಶವಾಗಿ ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

 

ಸ್ಯಾರಿಗೆ ಸಂಸ್ಥೆ.

 


*ಸ್ಯಾರಿಗೆ ಸಂಸ್ಥೆ*


ಮಹಿಳೆಯರಿಗೆ ಉಚಿತವಾಗಿ

ಪ್ರಯಾಣ ಕೈಗೊಳ್ಳಲು 

ಸಿದ್ದತೆ ನಡೆಸಿದೆ  ರಾಜ್ಯ ಸಾರಿಗೆ ಸಂಸ್ಥೆ|

ಪುರುಷರು ಕೈ ಕೈ ಹಿಸುಕಿಕೊಂಡು

ಹೆಸರು ಬದಲಾವಣೆ ಮಾಡಿದ್ದಾರೆ

ಕರ್ನಾಟಕ ಸ್ಯಾರಿಗೆ ಸಂಸ್ಥೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

31 ಮೇ 2023

ಹೃದಯದಲ್ಲಿದೆ.

 



ಹೃದಯದಲ್ಲಿದೆ...


ಈಗೀಗ ಅಲ್ಲಲ್ಲಿ ಯಾವದೋ

ಕಾರಣಕ್ಕಾಗಿ ಬೀದಿಗಳಲ್ಲಿ

ರಕ್ತ ಚೆಲ್ಲುತ್ತಲಿದೆ|

ಎಲ್ಲರೂ ಸೇರಿ ಎಲ್ಲಾ ಕಡೆ

ಹುಡುಕುತ್ತಲೇ ಇರುವರು

ಮಾನವೀಯತೆ ಎಲ್ಲಿದೆ?

ನಿಮ್ಮಂತರಾತ್ಮಗಳ ಪ್ರಶ್ನಿಸಿಕೊಳ್ಳಿ

ಅದು ನಿಮ್ಮ ಹೃದಯದಲ್ಲಿದೆ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


ಅತ್ತೆಯೂ ತಾಯಿಯೇ..

 



ಅತ್ತೆಯೂ ತಾಯಿಯೇ...

ಇತ್ತೀಚಿನ ದಿನಗಳಲ್ಲಿ  ಸರ್ಕಾರ ಪ್ರತಿ ತಿಂಗಳು ಕೊಡಲು ಉದ್ದೇಶಿರುವ  ಎರಡು ಸಾವಿರ ರೂಪಾಯಿಗಳನ್ನು ಮನೆಯ ಯಜಮಾನಿಗೆ ಕೊಡಲು ತೀರ್ಮಾನ ಮಾಡಿರುವಾಗ ಕೆಲವೆಡೆ ಯಜಮಾನಿ ಅತ್ತೆ ಅಥವಾ ಸೊಸೆಯೇ? ಎಂಬ ವಾದ ಮರುಜೀವ ಪಡೆದಿದೆ. 

ಕೆಲವು ಮನೆಗಳಲ್ಲಿ ಅತ್ತೆ ಸೊಸೆಯರು ತಾಯಿ ಮಗಳ ಸಂಬಂಧ ಹೊಂದಿದ್ದರೆ ಕೆಲ ಮನೆಗಳಲ್ಲಿ ತದ್ವಿರುದ್ಧವಾದ ವಾತಾವರಣ.

ಈ ಅಂಶಗಳನ್ನು ಗಮನಿಸಿದಾಗ ಕಥಾಮೃತ ದ ಒಂದು ಕಥೆ ನೆನಪಾಗುತ್ತದೆ.

ಒಬ್ಬ ತಾಯಿಗೆ ಒಬ್ಬ ಮಗನಿದ್ದ. ತಂದೆ ತೀರಿ ಹೋಗಿದ್ದ. ತಾಯಿಗೆ ಆಗಲೇ ಮುಪ್ಪು ಆವರಿಸಿತ್ತು. ಮಗನ ಮದುವೆಯೂ ಆಗಿತ್ತು. ಹೊಸದಾಗಿ ಸೊಸೆ ಮನೆ ನಡೆಸಲು ಬಂದಿದ್ದಳು. ಸೊಸೆಗೆ ಸ್ವಾತಂತ್ರ್ಯ ಬೇಕಾಗಿ ತಾನೇ ಮನೆಯ ಮಾಲೀಕಳಾಗುವ ಅದಮ್ಯ ಬಯಕೆ ಅವಳಿಗಿತ್ತು. ಆದರೆ ಮನೆಯಲ್ಲಿ ಅತ್ತೆ ಇರುವವರೆಗೆ ಅದು ಸಾಧ್ಯವಿರಲಿಲ್ಲ.

ಒಂದು ದಿನ ಸತಿಯು ಪತಿಗೆ ಹೇಳಿದಳು-''ನಮ್ಮದು ಸಣ್ಣ ವಯಸ್ಸು, ನಾವು ಈ ಮನೆಯಲ್ಲಿ ಸಂತಸದಿಂದ ಜೀವನ ಸಾಗಿಸಬೇಕು. ಅದಕ್ಕೆ ನಮಗೆ ಸ್ವಾತಂತ್ರ್ಯ ಬೇಕು. ನಿಮ್ಮ ತಾಯಿ ಈ ಮನೆಯಲ್ಲಿ ಇರುವವರೆಗೆ ಸಂತಸದ ಜೀವನ ನಡೆಸುವುದು ಸಾಧ್ಯವಿಲ್ಲ. ಎಲ್ಲಿಯಾದರೂ ದೂರ ಹೋಗಿ ತಿರುಗಿ ಬಾರದಂತೆ ನಿಮ್ಮ ತಾಯಿಯನ್ನು ಬಿಟ್ಟು ಬಾ,'' ಎಂದಳು. ''ಸ್ವಾತಂತ್ರ್ಯ ಇಲ್ಲದೆ ಸಂತಸ ಇಲ್ಲ,'' ಎಂಬ ಸತಿಯ ಮಾತು ಪತಿಗೂ ಒಪ್ಪಿಗೆಯಾಯಿತು. ಪತ್ನಿ ಹೇಳಿದ್ದೇ ವೇದವಾಕ್ಯವೆಂದು ಭಾವಿಸಿದ ಪತಿ ಮರುದಿನವೇ ತಾಯಿಯನ್ನು ಊರ ಆಚೆಗೆ ಇರುವ ಅರಣ್ಯಕ್ಕೆ ಕರೆದುಕೊಂಡು ಹೋದ. ಮೊದಲೇ ಅವಳಿಗಾಗಿ ಅಲ್ಲಿ ನಿರ್ಮಿಸಲಾಗಿದ್ದ ಒಂದು ಗುಡಿಸಲಲ್ಲಿ ಬಿಟ್ಟು ಹೇಳಿದ- ''ತಾಯಿಯೇ, ನಿನಗೂ ನನ್ನ ಸತಿಗೂ ಹೊಂದಾಣಿಕೆ ಆಗುತ್ತಿಲ್ಲ. ಹೀಗಾಗಿ ನಮ್ಮ ಸಂತಸದ ಜೀವನಕ್ಕೆ ಅವಕಾಶ ಸಿಗುತ್ತಿಲ್ಲ. ನೀನು ಇಲ್ಲಿಯೇ ಸುಖವಾಗಿರು. ನಿನಗೆ ಜೀವನೋಪಾಯಕ್ಕೆ ಬೇಕಾಗುವುದನ್ನೆಲ್ಲ ಇಲ್ಲಿಯೇ ತಂದು ಕೊಡುತ್ತೇನೆ,'' ಅದು ಕ್ರೂರ ಮೃಗಗಳಿಂದ ತುಂಬಿದ ಅರಣ್ಯವಾಗಿತ್ತು. ಅಲ್ಲಿ ಎಂಥವರಿಗೂ ಇರುವುದು ಅಸಾಧ್ಯವಾಗಿತ್ತು. ಆದರೆ ಮಗನ ಸುಖದ ಮುಂದೆ ಯಾವ ತೊಂದರೆಯೂ ಲೆಕ್ಕಕ್ಕಿಲ್ಲ ಎಂದು ಭಾವಿಸಿದ ತಾಯಿ ಅಲ್ಲಿಯೇ ಗುಡಿಸಲಿನಲ್ಲಿ ವಾಸಿಸಲು ಒಪ್ಪಿದಳು. ತಾಯಿಯನ್ನು ಬಿಟ್ಟು ಮಗನು ಮನೆಗೆ ಹೊರಟು ನಿಂತ. ತಾಯಿ ತನ್ನ ಕೊರಳಲ್ಲಿದ್ದ ಒಂದು ಆಭರಣವನ್ನು ಕೊಡುತ್ತ ಮಗನಿಗೆ ಹೇಳಿದಳು, ''ಇದು ನಿನ್ನ ತಂದೆ ನನಗೆ ಕೊಟ್ಟ ಅತ್ಯಂತ ಪ್ರೀತಿಯ ಕಾಣಿಕೆ. ಇದನ್ನು ನನ್ನ ಪ್ರಾಣದಂತೆ ಇದುವರೆಗೆ ಕಾಪಾಡಿರುವೆ. ಇನ್ನು ಮುಂದೆಯೂ ಕಾಪಾಡಬೇಕೆಂಬುಂದು ನಿನ್ನ ಸತಿಗೆ ನನ್ನ ಕೊನೆಯ ಹರಕೆ. ನೀವಿಬ್ಬರೂ ಸುಖವಾಗಿರಿ,'' 


ಮಗನು ಅರಣ್ಯದಿಂದ ಮನೆಗೆ ವಾಪಸ್‌ ಬಂದ. ಅವನ ಸತಿಗೆ ಅಪಾರ ಸಂತಸ. ನಾವಿನ್ನು ಸ್ವಚ್ಛಂದವಾಗಿರಬಹುದು ಎಂದುಕೊಂಡಳು. ತಾಯಿ ಕೊಟ್ಟ ಆಭರಣವನ್ನು ಸತಿಗೆ ಕೊಡುತ್ತ ಪತಿಯು ಹೇಳಿದ-''ಇದು ನಿನಗೆ ನನ್ನ ತಾಯಿಯ ಕೊನೆಯ ಹರಕೆ,'' ಅದನ್ನು ಕೇಳುತ್ತಲೇ ಅವಳ ಹೃದಯ ಪರಿವರ್ತನೆಯಾಯಿತು ! ''ನಾನೆಂಥ ಕ್ರೂರಿ, ಕರುಣೆ ಇಲ್ಲದವಳು. ಅತ್ತೆಯವರು ಎಂಥ ದಯಾಮಯಿ !,'' ಇಂಥ ಸದ್ಗುಣದ ಅತ್ತೆಯನ್ನು ಹೊರಗೆ ಹಾಕಿದುದು ಅಪರಾಧವೆನಿಸಿತು ಅವಳಿಗೆ. ಮನಪರಿವರ್ತನೆ ಆಗಿದ್ದೇ ತಡ ಮಧ್ಯರಾತ್ರಿಯನ್ನೂ ಗಮನಿಸದೆ ಅತ್ತೆಯನ್ನು ಮನಗೆ ವಾಪಸ್‌ ಕರೆತರಲು ಪತಿಯೊಂದಿಗೆ ಅರಣ್ಯಕ್ಕೆ ಹೋದಳು. 

ಅಷ್ಟರಲ್ಲಿ ಅತ್ತೆಯು ಹಾವು ಕಚ್ಚಿ ಮೃತ್ಯುವಿನ ಬಾಯಿಗೆ ತುತ್ತಾಗಿದ್ದಳು. ಆದರೆ ಆ ತಾಯಿಯ ಮೊಗದಲ್ಲಿ ದಿವ್ಯ ಪ್ರಸನ್ನತೆ ನೆಲೆಸಿತ್ತು! ಆ ಕಾರುಣ್ಯಮಹಿ ಸಾವಿನಲ್ಲೂ ಧೀಮಂತಿಕೆ ಮರೆದಿದ್ದಳು. ಅದನ್ನು ಕಂಡು ಸೊಸೆ ಕರುಳು ಚುಚ್ಚಿದಂತಾಯ್ತು. ತನ್ನ ಸಣ್ಣತನವನ್ನು ನೆನೆದು ಆಕೆ ರೋಧಿಸಿದಳು. ದೈವ ಕಣ್ಣ ಮುಂದಿದ್ದರೂ ಅದನ್ನು ಕಾಣದೆ ಹೋದೆನ್ನಲ್ಲ ಎಂದು ಆಕೆ ಕಣ್ಣೀರು ಹಾಕಿದಳು. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ