20 ಜನವರಿ 2023

ಬದುಕು ನಿಂತ ನೀರಲ್ಲ...

 

ಬದುಕು ನಿಂತ ನೀರಲ್ಲ...

ಒಂದು ಕಾಲದಲ್ಲಿ ಎಲ್ಲರ ಕೈಯಲ್ಲೂ
ನೋಕಿಯಾ  ಫೋನ್  ಗಳು  ಪ್ರಪಂಚದ ಬಹುತೇಕ ದೇಶಗಳಲ್ಲಿ ನೋಕಿಯಾ ತನ್ನ ಗ್ರಾಹಕರನ್ನು ಹೊಂದಿ  ಮಾರುಕಟ್ಟೆಯಲ್ಲಿ ಪಾರಮ್ಯ  ಹೊಂದಿತ್ತು...ಈಗ ಆಪಲ್, ಸ್ಯಾಮ್ಸಂಗ್, ರೆಡ್ಮಿ  ,ರಿಯಲ್ ಮಿ ಮುಂತಾದ ಹೊಸ ಕಂಪನಿಗಳ ಅಬ್ಬರದಲಿ ನೋಕಿಯಾ ಕಳೆದು ಹೋಗುವ ಅಪಾಯದಲ್ಲಿದೆ.ಹಾಗಾದರೆ ನೋಕಿಯಾ ಮಾಡಿದ ತಪ್ಪೇನು? ಏನೂ ಇಲ್ಲ ಕಾಲಕ್ಕೆ ತಕ್ಕನಾಗಿ ಬದಲಾವಣೆಗಳಿಗೆ  ಹೊಂದಿಕೊಳ್ಳಲಿಲ್ಲ  ತನ್ನನ್ನು  ತಾನು  ಅಪ್ಡೇಟ್ ಮಾಡಿಕೊಳ್ಳಲಿಲ್ಲ . ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ಬದಲಾಗಲಿಲ್ಲ ಅಷ್ಟೇ.

ಜೀವನದಲ್ಲಿ ಬದಲಾವಣೆ ಬಹಳ ಮುಖ್ಯ. ಅದರಲ್ಲೂ ಈ ಪ್ರಸ್ತುತ ಪ್ರಪಂಚದಲ್ಲಿ ಸರಾಸರಿ ಹತ್ತು ವರ್ಷಗಳಿಗೊಮ್ಮೆ ವ್ಯಾವಹಾರಿಕ ಪ್ರಪಂಚದ ವಾಸ್ತವ ಬದಲಾಗುತ್ತಿದೆ. ದಶಕದ ಹಿಂದೆ ಊಹೆಗೂ ಸಿಗದಿದ್ದ ನೌಕರಿಗಳು ಇಂದು  ಮಾರುಕಟ್ಟೆಯನ್ನು ಆಕ್ರಮಿಸಿವೆ. ಈವೆಂಟ್ ಮ್ಯಾನೇಜರ್, ಫ್ಲವರ್ ಡೆಕೋರೇಟರ್,  ಡಿಲೆವರಿ ಬಾಯ್, ಯ್ಯೂಟೂಬರ್ ,ಬ್ಲಾಗರ್,  ಇಂತಹ ಹೊಸ ಉದ್ಯೋಗಗಳು ಸುಮಾರು ಮೂವತ್ತು ವರ್ಷಗಳ ಹಿಂದೆ ಕಿವಿಯ ಮೇಲೆ ಬಿದ್ದಿರಲಿಲ್ಲ. ಇವು ಕೆಲ ಉದಾಹರಣೆಗಳು ಮಾತ್ರ. ನಾನು ಈ ಲೇಖನ ಬರೆಯುತ್ತಿರುವಾಗ ಜಗದ ಎಲ್ಲೊ ಒಂದು ಕಡೆ ಹೊಸ ಉದ್ಯಮ, ಉದ್ಯೋಗ ಸೃಜನವಾಗಿರುತ್ತದೆ. ಇಂತಹ ಉದ್ಯೋಗಗಳ  ಅರಿವು ನಮಗಿರಬೇಕು ಅದಕ್ಕೆ ತಕ್ಕ ಶಿಕ್ಷಣ ಕೌಶಲಗಳನ್ನು ಪಡೆಯಲು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕು. ಹೀಗಾಗಿ ನಮ್ಮ ಅರಿವನ್ನು ಬೆಳೆಯಲು ಬಿಡದಿದ್ದರೆ ಅವಕಾಶವಂಚಿತರಾಗುತ್ತೇವೆ. Update ಆಗದಿದ್ದರೆ outdated ಆಗಿಬಿಡಬಹುದು. ಬಹಳ ಬಾರಿ ನನಗಿಷ್ಟು ಸಾಕು, ನಾನು ಬದಲಾಗುವುದು ಬೇಕಿಲ್ಲ  ಎನಿಸಬಹುದು. ಆದರೆ, ನಾವು ಯಾವುದನ್ನು ಇಂದು ಸಂಪೂರ್ಣವಾಗಿ ಅವಲಂಬಿಸಿದ್ದೇವೋ ಅದು ನಾಳೆ ಇಲ್ಲವಾದರೆ ನಮ್ಮ ಅಸ್ತಿತ್ವಕ್ಕೇ ಸಂಚಕಾರ ಮೂಡಿದಂತಾಗುತ್ತದೆ. ಒಂದು ಕಾಲದಲ್ಲಿ ರಾರಾಜಿಸುತ್ತಿದ್ದ ಟೈಪ್ ರೈಟರ್ ಯಂತ್ರಗಳು ಇಂದು ಸಂಗ್ರಹಾಲಯದ ವಸ್ತುಗಳಾಗಿವೆ.ಗ್ರಾಮಾಪೋನ್,  ಟೇಪ್ ರೆಕಾರ್ಡರ್ , ವಾಲ್ಕ್ಮಾನ್ , ವಿಸಿಪಿ, ವಿ ಸಿ ಆರ್ , ಕ್ಯಾಸೆಟ್ ಗಳು  ಮೂಲೆ ಗುಂಪಾಗಿವೆ. ಮೊಬೈಲ್ ಫೋನುಗಳು ಬಂದ ಮೇಲೆ ಪೇಜರ್ ಅಗತ್ಯ ಇಲ್ಲದೇ ಹೋಗಿದೆ. ಆದ್ದರಿಂದ ನಮ್ಮ ವೃತ್ತಿ ಇಂದು ಎಷ್ಟೇ ಸುರಕ್ಷಿತ ಎನಿಸಿದರೂ ಪರಿಸ್ಥಿತಿ ದಿಢೀರನೆ ಬದಲಾಗಬಹುದು ಇದಕ್ಕೆ ಉತ್ತಮ ಉದಾಹರಣೆ ಎಂದರೆ ಲಕ್ಷಗಳ ಪ್ಯಾಕೇಜ್ ಹೋಂದಿ ಕೆಲಸ ಮಾಡುತ್ತಿದ್ದ ಟೆಕ್ಕಿಗಳನ್ನು ಡೌನ್ ಸೈಜಿಂಗ್, ರಿಸೆಷನ್ ಕಾಸ್ಟ್ ಕಟ್ ಇನ್ನೂ ಏನೇನೊ ಹೆಸರಲ್ಲಿ ಕೆಲಸದಿಂದ ತೆಗೆದು ಸದ್ದಿಲ್ಲದೇ ಮನೆಗೆ ಕಳಿಸುವ ಚಿತ್ರಣ ನಮ್ಮ ಮುಂದಿದೆ. ಇಂತಹ ಸಂದರ್ಭಗಳಲ್ಲಿ  ಸಮಯಕ್ಕೆ ತಕ್ಕಂತೆ ಜ್ಞಾನದ ವಿಸ್ತರಣೆ, ಹೊಸ ಕೌಶಲಗಳ ಕಲಿಕೆ ನಮ್ಮ ನೆರವಿಗೆ ಬಂದೇ ಬರುತ್ತವೆ.  ಅರಿವನ್ನು ವಿಸ್ತರಿಸದೆ ಹೋದರೆ ನಮ್ಮ ಅಸ್ತಿತ್ವವೇ ಉಳಿಯದಿರಬಹುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಮರೆಯಬಾರದು .
ವ್ಯಾಯಾಮ, ಧ್ಯಾನ, ಧನಾತ್ಮಕ ಚಿಂತನೆಗಳು, ಹೊಸಬರೊಡನೆ ಬೆರೆಯುವ ಮನಃಸ್ಥಿತಿ, ಹೊಸದನ್ನು ಕಲಿಯುವ ಬಯಕೆ, ಪ್ರವಾಸ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿಕೆ, ಸೋಮಾರಿತನ ಬಿಟ್ಟು ಯಾವುದೋ ಉತ್ಪಾದಕ ಕೆಲಸದಲ್ಲಿ ತೊಡಗಿಕೊಳ್ಳುವಿಕೆ, ಆರೋಗ್ಯಕರ ಆಹಾರ, ಒಳ್ಳೆಯ ನಿದ್ರೆ, ಸಾಮಾಜಿಕ ಸಂಬಂಧಗಳು, ಮೊದಲಾದವು ನಮ್ಮ ಅರಿವನ್ನು ಬೆಳೆಸುತ್ತವೆ. ನಮ್ಮ ನಿಯಮಿತ ಜೀವನಾವಧಿಯನ್ನು ಉತ್ತಮ ರೀತಿಯಿಂದ ಕಳೆಯಲು ಮನಸ್ಸನ್ನು ಚಿಂತನೆಗಳ ವಿಸ್ತರಣೆಗೆ ಸಜ್ಜುಗೊಳಿಸುವುದು ಒಳ್ಳೆಯ ವಿಧಾನ. ಈ ಪ್ರಕ್ರಿಯೆ ಸದಾ ಜಾರಿಯಲ್ಲಿರಲಿ ಅದಕ್ಕೆ ತಿಳಿದವರು ಹೇಳಿರುವುದು ಬದುಕು ನಿಂತ ನೀರಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

17 ಜನವರಿ 2023

R V M ವೋಟಿಂಗ್ ಮೆಷಿನ್ ಏನು ಎತ್ತ....


 



ವೋಟಿಂಗ್ ಹೆಚ್ಚಳಕ್ಕೆ ಆರ್ ವಿ ಎಂ  ಪೂರಕವಾಗಲಿದೆ. 


ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತವನ್ನು ಕಂಡ ಪ್ರಪಂಚದ ಹಲವಾರು ದೇಶಗಳು ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಿವೆ.140 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಅಚ್ಚುಕಟ್ಟಾಗಿ ಚುನಾವಣೆ ನಡೆಸುವುದೇ ಒಂದು ಸವಾಲು. ಆ ಸವಾಲು ಮೆಟ್ಟಿ ಚುನಾವಣೆ ನಡೆಸುತ್ತಾ ಬಂದಿರುವ ಭಾರತದ ಚುನಾವಣಾ ಆಯೋಗಕ್ಕೆ ಅಭಿನಂದಿದಲೇಬೇಕು .ಇಷ್ಟೆಲ್ಲಾ ಸಂತಸದ ಸುದ್ದಿಯ ನಡುವೆ ಬೇಸರದ ಸಂಗತಿಯೆಂದರೆ ಇದುವರೆಗಿನ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡಾ ನೂರು ಇರಲಿ ಶೇಕಡಾ ತೊಂಬತ್ತು ಮತದಾನ ಆಗಿಲ್ಲ! 

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಂದರೆ 2019 ರಲ್ಲಿ ನಡೆದ ಚುನಾವಣೆಯಲ್ಲಿ  ಚುನಾವಣಾ ಆಯೋಗ ,ಸ್ವೀಪ್ ಮತ್ತು ಶಾಲಾಕಾಲೇಜುಗಳ  ಇ ಎಲ್ ಸಿ ಕ್ಲಬ್ ಗಳ ಮತದಾನದ ಜಾಗೃತಿಯ ಪರಿಣಾಮವಾಗಿ ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಕೊಂಚ ಹೆಚ್ಚು ಎನ್ನುವಷ್ಟು 

 67.4 % ಮತದಾನ ಆಗಿದೆ . ನೊಂದಾಯಿತ 

30 ಕೋಟಿ ಜನ ತಮ್ಮ ಮತದಾನದ  ಹಕ್ಕು ಚಲಾಯಿಸಿಲ್ಲ ಎಂಬುದು ನಮ್ಮ ಜನರು ಮತದಾನದ ಬಗ್ಗೆ ಇರುವ ನಿರಾಸಕ್ತಿ ಎಷ್ಟಿದೆ ಎಂಬುದು ತಿಳಿಯುತ್ತದೆ.


ಮತದಾನ ಕಡಿಮೆಯಾಗಲು ಜನರ ನಿರಾಸಕ್ತಿ, ರಾಜಕಾರಣಿಗಳ ಬಗ್ಗೆ ಅನಾದರ ಮುಂತಾದ ಅಂಶಗಳು ಕಾರಣವಾದರೂ ವಲಸೆ  ಮತದಾನ ಕಡಿಮೆಯಾಗಲು ಅತಿ ದೊಡ್ಡ ಕಾರಣ ಎಂಬ ಸತ್ಯ ಅರಿತ ಚುನಾವಣಾ ಆಯೋಗ ಒಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಅದೇ  

ವಲಸಿಗರ   ವಾಸಸ್ಥಳದಿಂದಲೇ ಮತದಾನ ಅವಕಾಶ ನೀಡುವ  ಆರ್ ವಿ ಎಂ ಅಂದರೆ ರಿಮೋಟ್ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ 


ವಲಸಿಗ ಮತದಾರರು ತಾವಿರುವ ಸ್ಥಳದಿಂದಲೇ ಮತದಾನ ಮಾಡಲು ಅನುವಾಗುವಂತೆ ದೂರನಿಯಂತ್ರಿತ. ವಿದ್ಯುನ್ಮಾನ ಮತಯಂತ್ರದ ಮಾದರಿಯನ್ನು ಕೇಂದ್ರ ಚುನಾವಣಾ

ಆಯೋಗವು ಅಭಿವೃದ್ಧಿಪಡಿಸಿದೆ.

ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ (ಆರ್ವಿಎಂ) ಕಾರ್ಯಶೈಲಿಯ ಬಗ್ಗೆ ಆಯೋಗವು ರಾಜಕೀಯ ಪಕ್ಷಗಳಿಗೆ ಜ.16ರಂದು ಪ್ರಾತ್ಯಕ್ಷಿಕೆ ನೀಡಲು ಉದ್ದೇಶಿಸಿತ್ತು .ಆದರೆ ಅದು ನೆರವೇರಲಿಲ್ಲ. ಈ  ಸೌಲಭ್ಯ ಜಾರಿಗೆ ಬಂದರೆ, ವಲಸಿಗರು

ತಾವು ವಾಸವಿರುವ ಸ್ಥಳದಿಂದಲೇ ಮತದಾನ ಮಾಡಬಹುದು. ಮತದಾನ ಮಾಡಲೆಂದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ  ಸ್ಥಳಕ್ಕೆ  ಪ್ರಯಾಣಿಸುವ ಅಗತ್ಯ ಬರುವುದಿಲ್ಲ.     


ಪ್ರಾತ್ಯಕ್ಷಿಕೆ ಹಾಗೂ ಆರ್ವಿಎಂ ನ  ಕಾರ್ಯಶೈಲಿ ವಿವರಿಸಲು  "ಮಾನ್ಯತೆ  ಪಡೆದ ಎಂಟು ರಾಷ್ಟ್ರೀಯ ಮತ್ತು  57 ಪ್ರಾದೇಶಿಕ ಪಕ್ಷಗಳಿಗೆ ಆಯೋಗ   ಅಹ್ವಾನ ಕಳುಹಿಸಿ ಆಯೋಗದ ಪರಿಣತರು ಮತ್ತು ಸದಸ್ಯರು ಸಭೆಯಲ್ಲಿ ಭಾಗವಹಿಸಿ  ಇವಿಎಂಗಳ  ದೂರನಿಯಂತ್ರಿತ  ನಿರ್ವಹಣೆ ಸಾಧ್ಯವಿದೆ ಎಂದು ಪ್ರಾತ್ಯಕ್ಷಿಕೆಯನ್ನು ನೀಡಬೇಕಿತ್ತು ಅದು ಈಗ ಮುಂದಕ್ಕೆ ಹೋಗಿದೆ. 


ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು  ತಾಂತ್ರಿಕ ಸಹಾಯ ಒದಗಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶ. ಒಂದು   ಆರ್ಪಿಎಂ. ಮತಗಟ್ಟೆಯಿಂದ ಒಟ್ಟು 72 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ   ಇರಲಿದೆ. ಇಲ್ಲಿ ಯಾವುದೇ  ಲೋಪಕ್ಕೆ ಅವಕಾಶ ಇರುವುದಿಲ್ಲ, ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗುವುದಿಲ್ಲ  ಎಂದು ಆಯೋಗ ಹೇಳಿದೆ. 



ಅಲ್ಲದೆ ವಲಸಿಗರಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವ ಕ್ರಮ, ಪ್ರಕ್ರಿಯೆಯ ಅನುಷ್ಠಾನ ಕ್ರಮ, ಪೂರಕವಾಗಿ ಆಡಳಿತಾತ್ಮಕವಾಗಿ ಆಗಬೇಕಿರುವ ಬದಲಾವಣೆ, ಪ್ರತ್ಯೇಕ ಕಾಯ್ದೆಯ ಅಗತ್ಯ ಕುರಿತಂತೆ ಅಭಿಪ್ರಾಯ ತಿಳಿಸುವಂತೆಯೂ ಪಕ್ಷಗಳಿಗೆ ಕೋರಲಾಗಿದೆ. 


ಸಮರ್ಪಕ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ಕುಗ್ರಾಮಗಳ ಮತಗಟ್ಟೆಗಳಿಗೆ ಮತಯಂತ್ರ ಸಾಗಣೆ, ಸಿಬ್ಬಂದಿ ಪ್ರಯಾಣ ಕಷ್ಟವಾಗಿದೆ ಮತ್ತು ಮತ  ಎಣಿಕ ಕೂಡಾ ತಾಂತ್ರಿಕವಾಗಿ ಸವಾಲಿನದ್ದಾಗಿದೆ

ಮದುವೆ,ಶಿಕ್ಷಣ, ಉದ್ಯೋಗ ಮುಂತಾದ ಕಾರಣದಿಂದಾಗಿ 85% ಜನರು ಮತದಾನದಿಂದ ವಂಚಿತರಾಗುತ್ತಿದ್ದಾರೆ  ಅಂತಹವರಿಗೆ ಆರ್ ಪಿ ಎಮ್ ವರದಾನವಾಗಲಿದೆ.

ಎಂದು ಆಯೋಗದ ಅಧಿಕಾರಿಗಳು ಆಶಾಭಾವನೆ ವ್ಯಕ್ತಪಡಿಸುತ್ತಾರೆ.

ಈ ಪ್ರಯೋಗಗಳನ್ನು ರಾಜಕೀಯ ಪಕ್ಷಗಳು ಒಪ್ಪಿದರೆ 2023 ರಲ್ಲಿ ನಡೆಯುವ ಒಂಭತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ  ಜಾರಿಗೆ ತರಲಾಗುತ್ತದೆ. ಇದರ ಸಾಧಕ ಬಾಧಕ ಪರಿಗಣಿಸಿ  

2024  ರ ಲೋಕಸಭೆ ಚುನಾವಣೆಯಲ್ಲಿ ಈ ಆರ್ ಪಿ ಎಂ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.


ಈ ಆರ್ ಪಿ ಎಂ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ನೋಡುವುದಾದರೆ ವಲಸೆ ಹೋದ ವ್ಯಕ್ತಿ 

ಮೊದಲು ತಮ್ಮ ಮತವಿರುವ  ಮೂಲ  ಕ್ಷೇತ್ರದ ಚುನಾವಣಾ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ದೂರದ ಸ್ಥಳದಲ್ಲಿ ಮತದಾನ ಮಾಡಲು ಅನುಮತಿ ಕೋರಬೇಕು.ನಂತರ ವಲಸೆ ಜನಗಳಿಗೆ ಮೀಸಲಾದ ಮತಗಟ್ಟೆಯಲ್ಲಿ ಮತದಾನದ ಇತರ ಎಲ್ಲಾ ಕಾರ್ಯಚಟುವಟಿಕೆಗಳನ್ನು ಅನುಸರಿಸಿ ಮತದಾನಕ್ಕೆ ಅವಕಾಶವನ್ನು ನೀಡಲಾಗುತ್ತದೆ 



ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗೆ    ವಿರೋಧ ವ್ಯಕ್ತಪಡಿಸಿರುವ ವಿಪಕ್ಷಗಳು ರಿಮೋಟ್ ವೋಟಿಂಗ್ ಮಷೀನ್ ನ  ಅಗತ್ಯವೇನಿದೆ ಎಂದು ಕೇಳಿರುವುದಲ್ಲದೇ ಚುನಾವಣ ಆಯೋಗಕ್ಕೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿವೆ.

ಇದೇ ವೇಳೆ ಮೊಟ್ಟಮೊದಲಿಗೆ ಆರ್ವಿಎಂ ಪರಿಕಲ್ಪನೆಯೇ ಸ್ವೀಕಾರಾರ್ಹವಲ್ಲ. ಇದನ್ನು ಪರಿಚಯಿಸುವ ಮೊದಲು ಚುನಾವಣಾ ಆಯೋಗವು ದೇಶದ ಹಲವು ಪಕ್ಷಗಳು ಇವಿಎಂ ಕುರಿತು ಎತ್ತಿರುವ ಕಳವಳಗಳಿಗೆ ಉತ್ತರಿಸಬೇಕು. ನಗರ ಪ್ರದೇಶದ ಮತದಾರರು ಏಕೆ ಹಕ್ಕು ಚಲಾವಣೆಯಲ್ಲಿ ಹಿಂದಿದ್ದಾರೆ ಎಂಬುದನ್ನು ಅರಿತು, ಅದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದೂ ವಿಪಕ್ಷಗಳು ಸಲಹೆ ನೀಡಿವೆ. 

 ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಇನ್ನಷ್ಟು ಕಾಲಾವಕಾಶ ನೀಡುವಂತೆ ವಿಪಕ್ಷಗಳು ಆಗ್ರಹಿಸಿದ ಕಾರಣ ಆರ್ವಿಎಂ ಯಂತ್ರಗಳ ಪ್ರಾತ್ಯಕ್ಷಿಕೆಯನ್ನು ಚುನಾವಣ ಆಯೋಗ ಮುಂದೂಡಿತು. ಅಲ್ಲದೇ ರಿಮೋಟ್ ವೋಟಿಂಗ್ ಮಷೀನ್ ಬಳಕೆ ಕುರಿತು ಪ್ರತಿಕ್ರಿಯೆ ಸಲ್ಲಿಸಲು ನೀಡಲಾಗಿದ್ದ ಗಡುವನ್ನೂ ಫೆ.28ರ ವರೆಗೆ ವಿಸ್ತರಣೆ ಮಾಡಿತು. ಈ ಹಿಂದೆ ಜ.31ರೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿತ್ತು.


ವಿಪಕ್ಷಗಳು ಕೇಳಿರುವ ಕೆಲ ಪ್ರಶ್ನೆಗಳು ಈ ಹೀಗಿವೆ 

ವಲಸೆ ಕಾರ್ಮಿಕನು ಬೇರೆ ರಾಜ್ಯದಲ್ಲೂ ನೋಂದಣಿ ಮಾಡಿಕೊಂಡು, ತನ್ನ ಊರಲ್ಲೂ ನೋಂದಣಿ ಮಾಡಿಕೊಂಡಿದ್ದರೆಆಗ ಡುಪ್ಲಿಕೇಟ್ ತಡೆಯಲು ಏನು ಮಾಡುತ್ತೀರಿ?

ದೂರದೂರಲ್ಲಿ ಮತಗಟ್ಟೆ ಸ್ಥಾಪಿಸಲು ನಿಗದಿತ ಸ್ಥಳವನ್ನು ಹೇಗೆ ನಿರ್ಧರಿಸುತ್ತೀರಿ?

ಕ್ಷೇತ್ರದಾಚೆಗೆ ದೂರದೂರಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ಪೋಲಿಂಗ್ ಏಜೆಂಟ್ ನಿಗಾ ವಹಿಸುವುದು ಹೇಗೆ?

ವಿವಿಪ್ಯಾಟ್ ಸ್ಲಿಪ್ಗಳ ಸಾಗಾಟ ಹಾಗೂ ದಾಸ್ತಾನು ಎಲ್ಲಿ, ಹೇಗೆ ಮಾಡುತ್ತೀರಿ?

ದೂರದೂರಲ್ಲಿ ಚಲಾವಣೆಯಾದ ಮತಗಳನ್ನು ಪ್ರತ್ಯೇಕವಾಗಿ ಎಣಿಸುತ್ತೀರಾ ಅಥವಾ ಕ್ಷೇತ್ರದ ಮತಗಳೊಂದಿಗೆ ಮಿಶ್ರ ಮಾಡುತ್ತೀರಾ? 

ಅರ್ಹ ವಲಸೆ ಕಾರ್ಮಿಕರು ಬೇರೆ ಬೇರೆ ರಾಜ್ಯಗಳಲ್ಲಿರುವಾಗ ನಾವು(ಪಕ್ಷಗಳು) ಚುನಾವಣಾ ಪ್ರಚಾರ ಮಾಡುವುದು ಹೇಗೆ?


ಪ್ರತಿಪಕ್ಷಗಳು ಎತ್ತಿರುವ ಈ ಎಲ್ಲಾ ಪ್ರಶ್ನೆಗಳಿಗೆ ಆಯೋಗವು ಸೂಕ್ತವಾದ ಉತ್ತರ ನೀಡಿ ಆರ್ ವಿ ಎಂ ಬಗ್ಗೆ ಇರುವ ಸಂದೇಹಗಳನ್ನು ದೂರ ಮಾಡಬೇಕಿದೆ. ಹೊಸ ತಂತ್ರಜ್ಞಾನ ಮತ್ತು ಉಪಕ್ರಮಗಳನ್ನು ಪರಿಚಯಿಸುವಾಗ ಆರಂಭದಲ್ಲಿ ಕೆಲ ತೊಡಕು ಸಂದೇಹಗಳು ಸಹಜ ಅವುಗಳನ್ನು ಪರಿಹರಿಸಿಕೊಂಡು ಮುಂದೆ ಸಾಗಿದರೆ ಆರ್ ವಿ ಎಂ ಮುಂದೊಂದು ದಿನ ಶೇಕಡಾ ನೂರು ಮತದಾನ ನಡೆದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಉಪಕ್ರಮ ಆಗಬಹುದು ಎಂಬ ಆಶಾವಾದ ಹೊಂದೋಣ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಶಿಕ್ಷಕರು 

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

ತುಮಕೂರು.





*ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ೧೭/೧/೨೩*


 

13 ಜನವರಿ 2023

ಸಣ್ ಪಿನ್ ಚಾರ್ಜರ್ ಮಾಯವಾಗಲಿದೆ....

 


ಮಾಯವಾಗಲಿದೆ ಗುಂಡ್ ಪಿನ್ ಚಾರ್ಜರ್... 

ನಿಮ್ ಮನೇಲಿ ಗುಂಡ್ ಪಿನ್  ಚಾರ್ಜರ್ ಇದ್ಯಾ? ನಿಮ್ ಮನೇಲಿ ದೆಬ್ಬೇ ಚಾರ್ಜರ್ ಇದ್ಯಾ? ಇವು ಸಾಮಾನ್ಯವಾಗಿ  ನಾವು ಬೇರೆ ಊರುಗಳಿಗೆ ಹೋದಾಗ ,ಪ್ರವಾಸ ಮಾಡುವಾಗ ಚಾರ್ಜರ್ ಖಾಲಿಯಾಗಿ ಪವರ್ ಬ್ಯಾಂಕ್ ಕೂಡಾ ದಮ್ ಕಳೆದುಕೊಂಡಾಗ  ಮೊಬೈಲ್  ಚಾರ್ಜರ್ ಮರೆತು ಬಂದಾಗ ನಮ್ಮ ಬಾಯಿಂದ ಬರುವ ಅಮ್ಮಾ ..ತಾಯಿ..ನುಡಿಗಳು . ಬಹುತೇಕ ನಾವೆಲ್ಲರೂ ಒಂದಲ್ಲ ಒಂದು ಬಾರಿ ಇಂತಹ ಮುಜುಗರದ ಘಟನೆಗಳಿಗೆ ಸಾಕ್ಷಿಯಾಗಿರುತ್ತೇವೆ.
ಇಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಮಾನಕ ಸಂಸ್ಥೆ
(ಬಿಐಎಸ್ ) ಎಲ್ಲ ಉಪಕರಣಗಳಿಗೆ ಟೈಪ್-ಸಿ ಚಾರ್ಜರ್ ಅಳವಡಿಕೆ ಮಾಡಲು ಶಿಪಾರಸು ಮಾಡಿದೆ.
ಹಾಗೂ  ಮೂರು ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಗುಣಮಟ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಡಿಜಿಟಲ್ ಟಿ.ವಿ ರಿಸೀವರ್ಗಳು, ಟೈಪ್-ಸಿ ಯುಎಸ್ಬಿ ಕೇಬಲ್ ಹಾಗೂ ವಿಡಿಯೊ ಕಣ್ಣಾವಲು ವ್ಯವಸ್ಥೆಗಳಿಗೆ (ಬಿ ಐಎಸ್) ಮಾನದಂಡಗಳನ್ನು ಗೊತ್ತುಪಡಿಸಿದೆ.

ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳಲ್ಲೂ ಏಕರೂಪ ಬಳಕೆಗೆ ಹೊಂದುವ ರೀತಿಯಲ್ಲಿ ಟೈಪ್- ಸಿ ವಿಧದ ಪೋರ್ಟ್, ಪ್ಲಗ್, ಕೇಬಲ್ಗಳನ್ನು ತಯಾರಿಸಬೇಕು. ಎಂಬ ಮಾನದಂಡ ರೂಪಿಸಲಾಗಿದೆ. ದೇಶದಲ್ಲಿ ಮಾರಾಟವಾಗುವ ಎಲ್ಲ ರೀತಿಯ ಸ್ಮಾರ್ಟ್ಫೋನ್ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಏಕರೂಪದ ಚಾರ್ಜಿಂಗ್ ಸವಲತ್ತು ಒದಗಿಸುವುದಕ್ಕಾಗಿ ಈ ಮಾನದಂಡ ಗೊತ್ತುಪಡಿಸಲಾಗಿದೆ.

ಈ ಮಾನದಂಡದಿಂದಾಗಿ, ಪ್ರತಿಯೊಬ್ಬ ಗ್ರಾಹಕರಿಗೂ ಪ್ರತ್ಯೇಕ ಚಾರ್ಜರ್ ಅನ್ನು ಒದಗಿಸುವ ಅಗತ್ಯ ಇರುವುದಿಲ್ಲ. ಪ್ರತಿ ಬಾರಿ ಉಪಕರಣ ಖರೀದಿಸಿದಾಗ ಗ್ರಾಹಕರು ತಮ್ಮ ಮೊಬೈಲ್ಗೆ ಹೊಂದಿಕೆಯಾಗಬಲ್ಲ ಪ್ರತ್ಯೇಕ ಚಾರ್ಜರ್ ಅನ್ನು ಖರೀದಿಸುವ ಅಗತ್ಯವಿರುವುದಿಲ್ಲ. ಈ ಕ್ರಮದಿಂದ ಇ ತ್ಯಾಜ್ಯ ಉತ್ಪಾದನೆಯೂ ತಗ್ಗಲಿದ್ದು, ಚಾರ್ಜರ್ ಖರೀದಿಗೆ ಮಾಡುವ ವೆಚ್ಚವೂ ಉಳಿತಾಯವಾಗಲಿದೆ. ಹಲವು ದೇಶಗಳು ಈ ಮಾನದಂಡವನ್ನು ಅನುಸರಿಸುವತ್ತ ಈಗಾಗಲೇ ಹೆಜ್ಜೆ ಇರಿಸಿವೆ.

ಇತ್ತೀಚಿನ ದಿನಗಳಲ್ಲಿ ವಿಡಿಯೊ ನಿಗಾ ವ್ಯವಸ್ಥೆಗೆ ಹೆಚ್ಚಿನ ಬೇಡಿಕೆಯಿದ್ದು, ಗ್ರಾಹಕರಿಗೆ ಯಾವ ರೀತಿಯ ಉಪಕರಣಗಳನ್ನು ಖರೀದಿಸುವುದು ಸೂಕ್ತ ಎಂಬ ಗೊಂದಲವಿದೆ. ಇದನ್ನು ನಿವಾರಣೆ ಮಾಡುವುದಕ್ಕಾಗಿ ಮಾನಕ ಸಂಸ್ಥೆಯು ವಿಡಿಯೊ ನಿಗಾ ವ್ಯವಸ್ಥೆಗೆ ಮಾನದಂಡ ರೂಪಿಸಿದೆ. ಕ್ಯಾಮರಾ, ಇಂಟರ್ಫೇಸ್, ಇನ್ಸ್ಟಾಲೇಷನ್ ಮೊದಲಾದವುಗಳಿಗೆ ನಿಯಮಗಳನ್ನು ಗೊತ್ತುಪಡಿಸಿದೆ. ಭದ್ರತಾ ವ್ಯವಸ್ಥೆಯನ್ನು ಹೆಚ್ಚು ನಿಖರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಪಡೆಯಲು ಈ ಮಾನದಂಡಗಳು ನೆರವಾಗುತ್ತವೆ.
ಇದರ ಜೊತೆಯಲ್ಲಿ ಬಿ ಐ ಎಸ್ ಮತ್ತೊಂದು ಸಲಹೆ ನೀಡಿದೆ  

ಸೆಟ್ ಟಾಪ್ ಬಾಕ್ಸ್ ಇಲ್ಲದೆ ಪ್ರೀ ಟು ಏರ್ ಟಿ ವಿ ಚಾನೆಲ್ ನೋಡಲು ಅನುವಾಗುವಂತೆ ಎಲ್ಲಾ ಟಿ ವಿ ಗಳಲ್ಲಿ ಇನ್ ಬಿಲ್ಟ್ ರಿಸೀವರ್ ಅಳವಡಿಸಲು ತಿಳಿಸಿದೆ ಇದು ಸಹ ಮುಂದಿನ ದಿನಗಳಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಿ ಪರಿಣಮಿಸಲಿದೆ.
ಪ್ರಸ್ತುತ ಸನ್ನಿವೇಶದಲ್ಲಿ
ಜನರು ಶುಲ್ಕ ಸಹಿತ ಹಾಗೂ ಉಚಿತ ಟಿ.ವಿ ವಾಹಿನಿಗಳನ್ನು ವೀಕ್ಷಿಸಬೇಕಾದರೆ, ಸೆಟ್ಟಾಪ್ ಬಾಕ್ಸ್ಗಳನ್ನು ಖರೀದಿಸಬೇಕಿದೆ. ದೂರದರ್ಶನದ ಉಚಿತ ಚಾನಲ್ಗಳನ್ನು ವೀಕ್ಷಿಸಬೇಕಿದ್ದರೂ, ಸೆಟ್ ಟಾಪ್ ಬಾಕ್ಸ್ ಖರೀದಿಸಲೇಬೇಕಿದೆ. ಆದರೆ  ಉಚಿತ ಚಾನಲ್ಗಳನ್ನು ಸೆಟ್ ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸುವುದು ಇನ್ನುಮುಂದೆ ಸಾಧ್ಯವಾಗಲಿದೆ.

ಸ್ಯಾಟಲೈಟ್ ಟ್ಯೂನರ್ಗಳನ್ನು ಅಳವಡಿಸಿದ ರಿಸೀವರ್ಗಳನ್ನು ಟಿ ವಿ  ತಯಾರಿಸುವಾಗಲೇ ಅಳವಡಿಸಲಾಗುತ್ತದೆ. ತಂತ್ರಜ್ಞಾನದ ಈ ಸೌಲಭ್ಯದಿಂದ ಸರ್ಕಾರದ ಹಲವು ಕಾರ್ಯಕ್ರಮಗಳು, ಶೈಕ್ಷಣಿಕ ಮಾಹಿತಿ ವೀಕ್ಷಕರಿಗೆ ಸುಲಭವಾಗಿ ಸಿಗಲಿವೆ.
ಇದು ಹೆಚ್ಚಾಗುತ್ತಿರುವ ಈ ವೇಸ್ಟ್ (e waste) ತಡೆಗಟ್ಟಲು ದಾರಿಯಾಗಲಿದೆ. ಪರಿಸರ ಕಾಳಜಿಹೊಂದಿದ ಮತ್ತು ಗ್ರಾಹಕ ಸ್ನೇಹಿಯಾದ ಇಂತಹ ಸಣ್ಣ ಸಣ್ಣ ನಡೆಗಳು ಪರಿಸರ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಮ್ಮ ಸರ್ಕಾರಗಳು ಇಂತಹ ಕ್ರಮಗಳನ್ನು ಹೆಚ್ಚಾಗಿ  ಜಾರಿಗೆ ತರಬೇಕು ಇಂತಹ ಉಪಕ್ರಮಗಳಿಗೆ ಜನರು ಸಹ ಬೆಂಬಲ ನೀಡಬೇಕಿದೆ ತನ್ಮೂಲಕ ಸುಸ್ಥಿರ ಅಭಿವೃದ್ಧಿಗೆ ಕೈಜೋಡಿಸಬೇಕಿದೆ.

ಸಿ ಜಿ ವೆಂಕಟೇಶ್ವರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಕ್ಯಾತ್ಸಂದ್ರ
ತುಮಕೂರು

12 ಜನವರಿ 2023

ಸ್ವಾಮಿ ವಿವೇಕಾನಂದ...


 


  *ಸ್ವಾಮಿ ವಿವೇಕಾನಂದ*


ಸ್ವಾಮಿ ವಿವೇಕಾನಂದರ ಜನ್ಮದಿನದ ನೆನಪಿಗಾಗಿ  ಪ್ರತಿವರ್ಷ ಜನವರಿ 12 ರಂದು   ರಾಷ್ಟ್ರೀಯ ಯವದಿನ  ಆಚರಿಸಲಾಗುತ್ತದೆ. ಪ್ರಪಂಚ ಕಂಡ  ಮಹಾನ್ ಚಿಂತಕ, ಶ್ರೇಷ್ಠ ವಾಗ್ಮಿ  ಹಾಗೂ ಮಹಾನ್ ದೇಶಭಕ್ತರಾಗಿದ್ದ ವಿವೇಕಾನಂದರ ಸಂದೇಶಗಳು   ಇಂದಿಗೂ ಪ್ರಸ್ತುತವಾಗಿವೆ. 


“ಬ್ರದರ್ಸ್  ಅಂಡ್ ಸಿಸ್ಟರ್ಸ್ ಆಪ್ ಅಮೆರಿಕಾ"   ಎಂದು ಹೇಳುತ್ತಾ ವಿದೇಶಿಯರ ಮನ ಗೆದ್ದು  ಚಪ್ಪಾಳೆ ಗಿಟ್ಟಿಸಿಕೊಂಡ ಅವರು ವೇದಾಂತದ ತತ್ವಗಳು, ಅವುಗಳ ಅಧ್ಯಾತ್ಮಿಕ  ಮಹತ್ವ ಇತ್ಯಾದಿಗಳನ್ನು  ವಿಶ್ವ ಧರ್ಮ ಸಮ್ಮೇಳನದಲ್ಲಿ  ಜಗತ್ತಿಗೆ ಪರಿಚಯಿಸಿದ ರೀತಿ ಅಮೋಘ.


ಭಾರತ ಮೂಢರ ದೇಶ,ಜ್ಞಾನ ಹೀನರ ದೇಶವೆಂಬ ಪಾಶ್ಚಿಮಾತ್ಯರ ತಪ್ಪು ಕಲ್ಪನೆಗಳನ್ನು ದೂರ ಮಾಡಿದ ವೀರ ಸನ್ಯಾಸಿ ಈ ಸಮ್ಮೇಳನದಲ್ಲಿ ನಮ್ಮ ದೇಶದ ಶಕ್ತಿ, ಸಂಸ್ಕಾರ, ಪರಂಪರೆಯ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ಹೇಳಿ ನಮ್ಮ ದೇಶದ ಬಗ್ಗೆ ವಿದೇಶಿಯರ ಮನೋಭಾವವನ್ನು ಬದಲಾಗುವಂತೆ ಮಾಡಿದ ಧೀಮಂತ ನಮ್ಮ ವಿವೇಕಾನಂದ ರವರು. 


ಸ್ವಾಮಿ ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರ  ಅವರು 12 ಜನವರಿ 1863  ರಂದು ಕೊಲ್ಕತ್ತಾದ  ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ವಿಶ್ವನಾಥ ದತ್ತ  ಅವರು ಆ ಕಾಲದ ಪ್ರಸಿದ್ಧ  ವಕೀಲರಾಗಿದ್ದರು  ತಾಯಿ  ಭುವನೇಶ್ವರಿ ದೇವಿ ಬಾಲ್ಯದಲ್ಲಿ ಚುರುಕು ಬುದ್ದಿಯ  ಹುಡುಗನಾಗಿದ್ದ ನರೇಂದ್ರ ಸಂಗೀತ, ಜಿಮ್ನಾಸ್ಟಿಕ್ಸ್ ಮತ್ತು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಿದ. ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆಯುವ ಹೊತ್ತಿಗೆ, ಅವರು ವಿವಿಧ ವಿಷಯಗಳ ಬಗ್ಗೆ, ವಿಶೇಷವಾಗಿ ಪಾಶ್ಚಾತ್ಯ ತತ್ವಶಾಸ್ತ್ರ ಮತ್ತು ಇತಿಹಾಸದ ಬಗ್ಗೆ ಅಪಾರ ಜ್ಞಾನವನ್ನು ಪಡೆದರು. ಯೋಗದ ಮನೋಧರ್ಮದಿಂದ ಜನಿಸಿದ ಅವರು ತಮ್ಮ ಬಾಲ್ಯದಿಂದಲೂ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು.


ಶ್ರೀರಾಮಕೃಷ್ಣ ಪರಮಹಂಸರ ಭೇಟಿಯು ವಿವೇಕಾನಂದರ ಜೀವನದ. ನಿರ್ಣಾಯಕ ಘಟ್ಟಗಳಲ್ಲಿ ಒಂದು ಎಂದು ಹೇಳಲೇಬೇಕು. ಪರಮಹಂಸರು  ವಿವೇಕಾನಂದರ  ಮನಸ್ಸಿನ ಹಲ  ಸಂದೇಹಗಳನ್ನು ಹೋಗಲಾಡಿಸಿದರಲ್ಲದೆ, ಅವರ ಶುದ್ಧ, ನಿಸ್ವಾರ್ಥ ಪ್ರೀತಿಯ ಮೂಲಕ ಅವರನ್ನು ಗೆದ್ದರು. ಹೀಗೆ ಗುರು-ಶಿಷ್ಯರ ಸಂಬಂಧವು ಪ್ರಾರಂಭವಾಯಿತು. ಮುಂದೆ ಗುರುಗಳ ಹೆಸರಿನಲ್ಲಿ ರಾಮಕೃಷ್ಣ ಮಿಷನ್ ಆರಂಭಿಸಿ ಸಮಾಜ ಸೇವೆ ಮಾಡಿದ್ದು ಇತಿಹಾಸ. ವರ್ತಮಾನದಲ್ಲಿಯೂ ಹಲವಾರು ಶಾಖೆಗಳನ್ನು ಹೊಂದಿರುವ  ರಾಮಕೃಷ್ಣ ಆಶ್ರಮಗಳು   ಕೋಟ್ಯಾಂತರ ಜನಗಳಿಗೆ ಜ್ಞಾನ ನೀಡುವ ಕೇಂದ್ರಗಳಾಗಿರುವುದು ನಮಗೆ ತಿಳಿದ ವಿಷಯವೇ ಆಗಿದೆ. 

 

ಭಾರತದ ಬಗ್ಗೆ ಇನ್ನೂ  ತಿಳಿಯಲು ಅವರು  

ಭಾರತದಾದ್ಯಂತ ಬರಿಗಾಲಲ್ಲಿ  ಪ್ರವಾಸ ಕೈಗೊಂಡರು ಆ  ಸಮಯದಲ್ಲಿ ಸ್ವಾಮಿ ವಿವೇಕಾನಂದರು ಜನಸಾಮಾನ್ಯರ ಭೀಕರ ಬಡತನ ಮತ್ತು ಹಿಂದುಳಿದಿರುವಿಕೆಯನ್ನು ನೋಡಿ ಆಳವಾಗಿ ಭಾವುಕರಾದರು. ಭಾರತದ ಅವನತಿಗೆ ನಿಜವಾದ ಕಾರಣ ಜನಸಾಮಾನ್ಯರ ನಿರ್ಲಕ್ಷ್ಯ ಎಂದು ಅರ್ಥಮಾಡಿಕೊಂಡ ಮತ್ತು ಬಹಿರಂಗವಾಗಿ ಘೋಷಿಸಿದ ಭಾರತದ ಮೊದಲ ಧಾರ್ಮಿಕ ನಾಯಕ. ಹಸಿದ ಲಕ್ಷಾಂತರ ಜನರಿಗೆ ಆಹಾರ ಮತ್ತು ಇತರ ಜೀವನಾವಶ್ಯಕತೆಗಳನ್ನು ಒದಗಿಸುವುದು ತಕ್ಷಣದ ಅಗತ್ಯವಾಗಿತ್ತು. ಇದಕ್ಕಾಗಿ ಅವರಿಗೆ ಕೃಷಿ, ಗ್ರಾಮೋದ್ಯೋಗ ಇತ್ಯಾದಿಗಳ ಸುಧಾರಿತ ವಿಧಾನಗಳನ್ನು ಕಲಿಸಬೇಕು ಎಂದು ಪ್ರತಿಪಾದಿಸಿದರು.  ಈ ಸಂದರ್ಭದಲ್ಲಿಯೇ ವಿವೇಕಾನಂದರು ಭಾರತದಲ್ಲಿನ ಬಡತನದ ಸಮಸ್ಯೆಯ ತಿರುಳನ್ನು ಗ್ರಹಿಸಿದರು. ಶತಮಾನಗಳ ಕಾರಣದಿಂದಾಗಿ ದಬ್ಬಾಳಿಕೆಯ  ದೀನದಲಿತ ಜನಸಾಮಾನ್ಯರು ತಮ್ಮ ಸ್ಥಿತಿಯನ್ನು ಸುಧಾರಿಸುವ ಸಾಮರ್ಥ್ಯದಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದರು. ಅವರ ಮನಸ್ಸಿನಲ್ಲಿ ತಮ್ಮ ಮೇಲೆ ನಂಬಿಕೆಯನ್ನು ತುಂಬುವುದು ಎಲ್ಲಕ್ಕಿಂತ ಮೊದಲು  ಅಗತ್ಯವಾಗಿತ್ತು. ಇದಕ್ಕೆ  ಭಾರತದ ಧಾರ್ಮಿಕ ತತ್ತ್ವಶಾಸ್ತ್ರದ ಪ್ರಾಚೀನ ವ್ಯವಸ್ಥೆಯಾದ ವೇದಾಂತದಲ್ಲಿ ಬೋಧಿಸಲಾದ ಆತ್ಮದ ಸಂಭಾವ್ಯ ದೈವತ್ವದ ಸಿದ್ಧಾಂತವಾದ ಆತ್ಮದ ತತ್ವದಲ್ಲಿ ಸ್ವಾಮೀಜಿ ಈ ಸಂದೇಶವನ್ನು ಕಂಡುಕೊಂಡರು.  ಬಡತನದ ನಡುವೆಯೂ, ಜನಸಾಮಾನ್ಯರು ಧರ್ಮಕ್ಕೆ ಅಂಟಿಕೊಂಡಿರುವುದನ್ನು ಅವರು ಕಂಡರು . ಆದರೆ ಅವರಿಗೆ ವೇದಾಂತದ ಜೀವನ ನೀಡುವ, ಉತ್ಕೃಷ್ಟವಾದ ತತ್ವಗಳು ಮತ್ತು ಅವುಗಳನ್ನು ಪ್ರಾಯೋಗಿಕ ಜೀವನದಲ್ಲಿ ಹೇಗೆ ಅನ್ವಯಿಸಬೇಕು ಎಂದು ಎಂದಿಗೂ ಕಲಿಸಲಾಗಿಲ್ಲ.

ಆದ್ದರಿಂದ ಜನಸಾಮಾನ್ಯರಿಗೆ ಎರಡು ರೀತಿಯ ಜ್ಞಾನದ ಅಗತ್ಯವಿತ್ತು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಲೌಕಿಕ ಜ್ಞಾನ ಮತ್ತು ಅವರಲ್ಲಿ ನಂಬಿಕೆಯನ್ನು ತುಂಬಲು ಮತ್ತು ಅವರ ನೈತಿಕ ಪ್ರಜ್ಞೆಯನ್ನು ಬಲಪಡಿಸಲು ಆಧ್ಯಾತ್ಮಿಕ ಜ್ಞಾನ. ಶಿಕ್ಷಣದ ಮೂಲಕ ಈ ಎರಡೂ ಜ್ಞಾನವನ್ನು ನೀಡಬಹುದು ಎಂದು ವಿವೇಕಾನಂದರು ಒತ್ತಿ ಹೇಳಿ ಅದನ್ನು ಜಾರಿಗೆ ತಂದರು.  


ಶಿಕ್ಷಣದ ಹರಡುವಿಕೆ ಮತ್ತು ಬಡ ಜನಸಾಮಾನ್ಯರ ಮತ್ತು ಮಹಿಳೆಯರ ಉನ್ನತಿಗಾಗಿ ಅವರ ಯೋಜನೆಗಳನ್ನು ಕೈಗೊಳ್ಳಲು,ಸಮರ್ಪಿತ ಜನರ ದಕ್ಷ ಸಂಘಟನೆಯ ಅಗತ್ಯವಿದೆ ಎಂದು  ಪ್ರತಿಪಾದಿಸುತ್ತಾ   ಬಡವರ ಮತ್ತು ದಮನಿತ  ಜನರ ಮನೆ ಬಾಗಿಲಿಗೆ ಉದಾತ್ತ ಆಲೋಚನೆಗಳನ್ನು ತರುವಲ್ಲಿ  ರಾಮಕೃಷ್ಣ ಮಿಷನ್ ಕಾರ್ಯವ್ಯಾಪ್ತಿ ವಿಸ್ತಾರವಾಯಿತು.


ಅಸಂಖ್ಯಾತ ಭಾಷಾ, ಜನಾಂಗೀಯ, ಐತಿಹಾಸಿಕ ಮತ್ತು ಪ್ರಾದೇಶಿಕ ವೈವಿಧ್ಯತೆಗಳ ಹೊರತಾಗಿಯೂ, ಭಾರತವು ಅನಾದಿ ಕಾಲದಿಂದಲೂ ಸಾಂಸ್ಕೃತಿಕ ಏಕತೆಯ ಬಲವಾದ ಅರ್ಥವನ್ನು ಹೊಂದಿದೆ. ಆದಾಗ್ಯೂ, ಸ್ವಾಮಿ ವಿವೇಕಾನಂದರು ಈ ಸಂಸ್ಕೃತಿಯ ನಿಜವಾದ ಅಡಿಪಾಯವನ್ನು ಬಹಿರಂಗಪಡಿಸಿದರು ಮತ್ತು ಆ ಮೂಲಕ ರಾಷ್ಟ್ರವಾಗಿ ಏಕತೆಯ ಭಾವನೆಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದರು ಮತ್ತು ಬಲಪಡಿಸಿದರು. 


ಸ್ವಾಮೀಜಿ ಭಾರತೀಯರಿಗೆ ತಮ್ಮ ದೇಶದ ಶ್ರೇಷ್ಠ ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಸರಿಯಾದ ತಿಳುವಳಿಕೆಯನ್ನು ನೀಡಿದರು ಮತ್ತು ಆ ಮೂಲಕ ನಮ್ಮ ಗತಕಾಲದ ಬಗ್ಗೆ ನಮಗೆ ಹೆಮ್ಮೆ ಮೂಡಿಸಿದರು. ಇದಲ್ಲದೆ, ಪಾಶ್ಚಿಮಾತ್ಯ ಸಂಸ್ಕೃತಿಯ ನ್ಯೂನತೆಗಳನ್ನು ಮತ್ತು ಈ ನ್ಯೂನತೆಗಳನ್ನು ನಿವಾರಿಸಲು ಭಾರತದ ಕೊಡುಗೆಯ ಅಗತ್ಯವನ್ನು ಅವರು ಭಾರತೀಯರಿಗೆ ಸೂಚಿಸಿದರು.  


 ಭಾರತದ ಸ್ವಾತಂತ್ರ್ಯ ಚಳವಳಿಯ ಹಲವಾರು ಪ್ರಮುಖ ನಾಯಕರು ಸ್ವಾಮೀಜಿಯವರು ನಮಗೆ ಪ್ರೇರಕ ಶಕ್ತಿ  ಎಂದು ಒಪ್ಪಿಕೊಂಡಿದ್ದಾರೆ. ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಮಾತುಗಳಲ್ಲಿ ಹೇಳುವುದಾದರೆ “ಖಿನ್ನತೆಗೆ ಒಳಗಾದ ಮತ್ತು ನಿರುತ್ಸಾಹಗೊಂಡ ಹಿಂದೂ ಮನಸ್ಸಿಗೆ ಟಾನಿಕ್ ಆಗಿ ಸ್ವಾಮೀಜಿ ನಮಗೆ ಮಾರ್ಗದರ್ಶನ ನೀಡಿದ್ದಾರೆ  "

  ನೇತಾಜಿರವರು  “ಸ್ವಾಮೀಜಿ ಪೂರ್ವ ಮತ್ತು ಪಶ್ಚಿಮ, ಧರ್ಮ ಮತ್ತು ವಿಜ್ಞಾನ, ಹಿಂದಿನ ಮತ್ತು ಪ್ರಸ್ತುತವನ್ನು ಸಮನ್ವಯಗೊಳಿಸಿದರು. ಮತ್ತು ಅದಕ್ಕಾಗಿಯೇ ಅವರು ಶ್ರೇಷ್ಠ. ಅವರ ಬೋಧನೆಗಳಿಂದ ನಮ್ಮ ದೇಶವಾಸಿಗಳು ಅಭೂತಪೂರ್ವ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಸ್ವಾವಲಂಬನೆಯನ್ನು ಗಳಿಸಿದ್ದಾರೆ",ಎಂದರು.   


ನವಭಾರತದ ಸೃಷ್ಟಿಗೆ ಸ್ವಾಮೀಜಿಯವರು ಅತ್ಯಂತ ವಿಶಿಷ್ಟ ಕೊಡುಗೆ  ನೀಡಿದ್ದಾರೆ  ಭಾರತೀಯರ ಮನಸ್ಸನ್ನು ತುಳಿತಕ್ಕೊಳಗಾದ ಜನಸಾಮಾನ್ಯರಿಗೆ ತಮ್ಮ ಕರ್ತವ್ಯಕ್ಕೆ ತೆರೆದುಕೊಳ್ಳುವುದು. ಕಾರ್ಲ್ ಮಾರ್ಕ್ಸ್ ಅವರ ವಿಚಾರಗಳು ಭಾರತದಲ್ಲಿ ತಿಳಿದಿರುವ ಮುಂಚೆಯೇ, ಸ್ವಾಮೀಜಿ ಅವರು ದೇಶದ ಸಂಪತ್ತಿನ ಉತ್ಪಾದನೆಯಲ್ಲಿ ಕಾರ್ಮಿಕ ವರ್ಗಗಳ ಪಾತ್ರದ ಬಗ್ಗೆ ಮಾತನಾಡಿದರು. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ 

 ಆಧುನಿಕ ಯುಗದ ಶ್ರೇಷ್ಠ ಸಂತ, ಚಿಂತಕರಲ್ಲಿ ಒಬ್ಬರು. ಅವರು ಭಾರತದ ಕೋಟ್ಯಂತರ ಯುವ ಜನರಿಗೆ ಸ್ಫೂರ್ತಿಯೂ ಹೌದು. ಅವರ ಜೀವನ, ಅವರು ತೋರಿದ ಸನ್ಮಾರ್ಗಗಳು ಭಾರತೀಯರಿಗೆ ಆದರ್ಶಪ್ರಾಯವಾಗಿದೆ. ಅವರ ಆದರ್ಶಗಳನ್ನು ಪಾಲಿಸಿ ನಮ್ಮನ್ನು ನಾವು ಉದ್ಧಾರ ಮಾಡಿಕೊಂಡು ತನ್ಮೂಲಕ ಸಮಾಜದ ಮತ್ತು ದೇಶದ ಒಳಿತಿಗೆ ಪಣತೊಡೋಣ...


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು