This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
29 ಮೇ 2022
ಹೊರಳು .
ಹೊರಳು ಮತ್ತು ಇತರೆ ಕಥೆಗಳು.ವಿಮರ್ಶೆ ೩೯
ಆತ್ಮೀಯರು ಲೇಖಕರು ಮತ್ತು ಪ್ರೊಫೆಸರ್ ಆದ ವಿ ಎಲ್ ಪ್ರಕಾಶ್ ರವರು ನೀವು ಓದಲೇಬೇಕು ಎಂದು ನನಗೆ ನೀಡಿದ ಪುಸ್ತಕ ಕೆ ಎಸ್ ಪ್ರಭಾ ರವರ ಹೊರಳು ಮತ್ತು ಇತರೆ ಕಥೆಗಳು .ಈ ಪುಸ್ತಕ ನನಗೆ ನಿಜಕ್ಕೂ ಹಿಡಿಸಿತು.
ದೊಡ್ಡಬಳ್ಳಾಪುರದಂತಹ ಊರಿನಲ್ಲಿ ತಮ್ಮ ಬದುಕಿನ ದಾರಿ ಮತ್ತು ಗುರಿಯನ್ನು ತಾವೇ ಗೊತ್ತುಪಡಿಸಿಕೊಂಡ ವ್ಯಕ್ತಿಗಳಲ್ಲಿ ಪ್ರಭಾ ಮೇಡಂ ಮುಖ್ಯರಾಗಿ ಕಾಣುತ್ತಾರೆ. ಸಾಂಪ್ರದಾಯಿಕ ಎರಕಗಳಲ್ಲಿ ಸಿದ್ಧ ಆಕೃತಿಗಳು ಮಾತ್ರ ದೊರಕುತ್ತವೆ. ಇವು ಸಾದಸೀದ ಹಾಗೂ ಸುರಕ್ಷವಾಗಿರುತ್ತವೆ. ನಮ್ಮ ಚಹರೆ ಪಟ್ಟಿಯನ್ನು ನಾವೇ ರೂಪಿಸಿಕೊಂಡಾಗ, ನಮ್ಮ ವಿಧಿಯನ್ನು ನಾವೇ ನಿರ್ದೇಶಿಸಿಕೊಂಡಾಗ ಅನೇಕ ಅಗ್ನಿ ದಿವ್ಯಗಳನ್ನು ಹಾದು ಬರಬೇಕಾಗುತ್ತದೆ. ಸ್ಥಾಪಿತ ವ್ಯವಸ್ಥೆಗಳ ವಿರುದ್ಧ ದಂಗೆ ಏಳಬೇಕಾಗುತ್ತದೆ.ಇಂಥ ಸಂದರ್ಭಗಳಲ್ಲಿ ಗೆಲುವಲ್ಲ, ಸೋಲು ಕೂಡ ಘನವಾಗಿಯೇ ಕಾಣುತ್ತದೆ. ಅವು ದೊಡ್ಡ ಪಾಠಗಳಂತೆ ಇರುತ್ತವೆ. ಅದರಲ್ಲೂ ಹೆಣ್ಣಾಗಿದ್ದರಂತೂ ಇದು ಇನ್ನಷ್ಟು ಕಠಿಣ ದಾರಿ.ಪ್ರಭಾ ಅವರು ಇಂಥ ದಾರಿಯಲ್ಲಿ ಬಹುದೂರ ಸಾಗಿ ಬಂದಿದ್ದಾರೆ. ಬಲವಾದ ಹೆಗ್ಗುರುತುಗಳನ್ನು ಮೂಡಿಸಿದ್ದಾರೆ.
70ರ ದಶಕದಲ್ಲಿ ಕನ್ನಡ ನೆಲದಲ್ಲಿ ಮೂಡಿದ ಕ್ರಾಂತಿಕಾರತನ, ಮತ್ತು 'ಸ್ವ'ದ ಹುಡುಕಾಟದ ಮೂಲಕವೇ ಬಹಿರಂಗದಲ್ಲಿ ತಮ್ಮ ಇರುವನ್ನು ಕಂಡುಕೊಳ್ಳುವ ಚಳವಳಿಯ ಪಾಲುದಾರರಾದ ಮೇಡಂ, ಸೃಜನಶೀಲ ಪ್ರಭೆಯನ್ನು ಕಾಪಿಟ್ಟುಕೊಂಡವರು, ಅದು ಕತೆ, ಪ್ರಬಂಧ, ಕವಿತೆಗಳಲ್ಲಿ ಚಲ್ಲುವರೆದಿದೆ. ಹೊರಳು ಮತ್ತು ಇತರ ಕತೆಗಳು ಸಂಕಲನದಲ್ಲಿ ಬರುವ ಮೊದಲ ಕಥೆಯಲ್ಲಿ ಇಲ್ಲಿಯ ನಾಯಕಿಗೆ ಮದುವೆಯಾಗಿ ಏಳುವರ್ಷಗಳಾಗಿವೆ. ಈಸ್ಟ್ ಹಾಕಿದ ಬ್ರೆಡ್ಡಿನ ಹಾಗೆ ಉಬ್ಬಿಕೊಳ್ಳುತ್ತಿರುವ ಬೊಜ್ಜಿನ ಬೆಳವಣಿಗೆಗೆ ಅವಳು ಸಿಕ್ಕಿದ್ದಾಳೆ. ಆದರೂ ಯೌವನ ಇನ್ನೂ ಅವಳಿಂದ ಕಾಲ್ತೆಗೆಯುವ ಸನ್ನಾಹದಲ್ಲಿಲ್ಲ. ಮುಖದ ಮೇಲೆ ಮೊಡವೆ ಅಂದವನ್ನು ಹೆಚ್ಚಿಸುವಂತೆ ತೋರಿದರೂ,ಕೀವುಗಟ್ಟಿದ ಅದೊಂದು ಅಸಹ್ಯ. ಹೊರಗಿನ ಬದುಕೂ ಹೀಗೆಯೇ ಸಹ್ಯ ಮತ್ತು ಅಸಹ್ಯಗಳ ಜೊತೆಗಿನ ಪ್ರೀತಿ ಕಳೆದುಕೊಂಡಿದೆ. ತನ್ನ ಆಫೀಸಿನಲ್ಲಿರುವ ರಮೇಶನ ಚೆಲುವಿಗೆ ಒಲಿಯಲು ಮನಸ್ಸು ಹಾತೊರೆಯುತ್ತಿದೆ. ಅವನ ಸಖ್ಯವನ್ನು ಬಯಸುತ್ತಿದೆ. ಎಂದೆನಿಸಿದರೂ, ಆ ನೋಟವನ್ನೇ ಇವಳು ಬಯಸುತ್ತಿದ್ದಾಳೆ. ತಾನು ಮದುವೆಯಾದ ಹೆಣ್ಣು ರಮೇಶ? ಪ್ರಶ್ನೆಯನ್ನು ಕೇಳಿಕೊಂಡರೂ, ರಮೇಶನ ನೋಟವೇ ಬೇಕೆಂದು ಒಳಗೇ ಕುಟುಕುತ್ತಿದೆ. ರಮೇಶನಿಗೆ, ಅವನ ರೂಪಕ್ಕೆ ತಾನು ಮರುಳಾದೆನೇ ಎಂದು ತನ್ನೊಳಗನ್ನು ಅವನು ತನ್ನ ಬಳಿಯೇ ಇರಲಿ ಎಂಬ ಸೆಳೆತ, ಕೀವು ತುಂಬಿದ ಮೊಡವೆಯಂತೆ ಈ ಅನಿಸಿಕೆಗಳು ಅಸಹ್ಯ ಎನಿಸಿದರೂ, ಅದನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಆಸೆಗಳು, ಹಂಬಲಗಳು. ಇದು ಇಲ್ಲಿಗೆ ನಿಲ್ಲುವುದಲ್ಲ. ಪಕ್ಕದ ಮನೆಯ ಆನಂದನ ದುಂಡು ಮುಖ, ದಪ್ಪ ಮೀಸೆ, ತುಟಿಗಳನ್ನು ನೋಡುವಾಗಲೂ ರಮೇಶನೇ ಕಣ್ಮುಂದೆ ಬಂದಂತಾಗುತ್ತದೆ. ತನ್ನ ಗಂಡ ಮನೆಗೆ ಬಂದು ಸೊಂಟ ಬಳಸಿದಾಗಲೂ ಈ ಹೆಣ್ಣಿನ ಮನದೊಳಗೆ ಸುಳಿಯುವವನು ರಮೇಶನೇ, ಇಂಥ ತಾಕಲಾಟ, ನೋವು, ನೈತಿಕ ಪ್ರಶ್ನೆಗಳನ್ನು ಮೀರಿ ಅಪೇಕ್ಷೆಗಳು, ಈ ತೊಳಲಾಟದಲ್ಲಿಯೇ ಈಕೆ ತನ್ನ ವಾಸ್ತವವನ್ನು ಕಂಡುಕೊಳ್ಳಬೇಕಾಗಿದೆ.ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ.ಬದುಕಿಗೆ ಅರ್ಥ ಮತ್ತು ಸಾರ್ಥಕ್ಯವನ್ನು ತಂದುಕೊಳ್ಳಬೇಕಾಗಿದೆ. ಇದೊಂದು ಸವಾಲು.ನಿತ್ಯ ಸೆಣಸಾಟಕ್ಕೆ ಸಿದ್ಧಪಡಿಸುವ ಸವಾಲು.
'ಹೊರಳು' ಕತೆಯನ್ನು ಬಿಟ್ಟರೆ ಇಲ್ಲಿರುವ ಉಳಿದೆಲ್ಲ ಕತೆಗಳೂ 'ಮೊಡವೆ'ಯಂತೆಯೇ ಇಂಥ ತೊಳಲಾಟವನ್ನು ಹಿಡಿದುಕೊಡುವ ಪ್ರಯತ್ನಗಳೇ. ಹೆಣ್ಣಿನ ಮನದಾಳದಲ್ಲಿ ಹೊಮ್ಮುವ ಇಂಥ ಭಾವಗಳನ್ನು ಹಿಡಿದು ಪರೀಕ್ಷಿಸಲು ನೋಡುತ್ತವೆ. ಮನಸ್ಸಿನ ಚಲನೆಯನ್ನು ಅದು ಚಲಿಸುವ ದಿಕ್ಕನ್ನು ಪ್ರಾಮಾಣಿಕ ನೋಟದಿಂದ ಹಿಡಿಯುವುದೇ ಈ ಕತೆಗಳ ಹೆಗ್ಗಳಿಕೆಯಾದಂತೆಯೂ ತೋರುತ್ತದೆ. ಜೊತೆಗೆ ಗಂಡು ಹೆಣ್ಣಿನ ಸಂಬಂಧಗಳ ನಿಜರೂಪವನ್ನು ದಿಟ್ಟತನದಿಂದ ಬಿಡಿಸಿ ನೋಡುವುದು, ಪ್ರೀತಿಯ ಹೆಸರಿನಲ್ಲಿ ತೊಡುವ ಮುಖವಾಡಗಳನ್ನು ಕಳಚಿ ಹಾಕಲೆತ್ನಿಸುವುದು, ಗಂಡು ಮತ್ತು ಹೆಣ್ಣಿನ ನಡುವಿರುವ ನಿರಂತರ ಆಕರ್ಷಣೆಯ ಸ್ವರೂಪ ಎಂಥದ್ದು ಎಂಬುದನ್ನು ಕಂಡುಕೊಳ್ಳಲು ಹೆಣಗುವುದು ಇವೆಲ್ಲ ಪ್ರಭಾ ಅವರ ಕಥನ ಕಲೆಯ ಹಿಂದಿರುವ ಕಾಳಜಿಗಳು. ಇಂಥ ಹುಡುಕಾಟ ನಿಧಾನಕ್ಕೆ ಮಾಗುವುದು, ಬೇರೊಂದು ಮಜಲನ್ನು ಮುಟ್ಟುವುದು, ತನ್ನ ಪ್ರತಿಸ್ಪರ್ಧಿಯಾದ ಇನ್ನೊಬ್ಬ ಹೆಣ್ಣನ್ನು ದ್ವೇಷದಿಂದ ನೋಡುವ ನೋಟದಲ್ಲಿಯೇ ಬದಲಾವಣೆಯಾಗಿ, ಅದು ಸಹಾನುಭೂತಿಗೆ, ಅನುಕಂಪಕ್ಕೆ ದಾರಿಮಾಡಿಕೊಡುವುದನ್ನು (ಕಳೆದುಹೋದವರು-ಕತೆ) ಇಲ್ಲಿ ಗಮನಿಸಬಹುದು. ಹೊರಗಿನ ಮತ್ತು ಒಳಗಿನ ಒತ್ತಡಗಳಿಗೆ ಬಲಿಯಾದ ಹೆಣ್ಣು ತನ್ನ ಏಕಾಂಗಿತನದಲ್ಲಿ, ಅಸಹಾಯಕತೆಯ ಸನ್ನಿವೇಶದಲ್ಲಿ ತನ್ನ ಸಂಗಕ್ಕೆ ಪುರುಷನೊಬ್ಬನನ್ನು ಬಯಸಿದರೆ, ಅದು ಮಹಾ ಅಪರಾಧವಾಗಿ ತನಗೇಕೆ ಕಾಣಬೇಕು ಎಂಬ ಅರಿವು ಕಥಾನಾಯಕಿಯ ಮನದಲ್ಲಿ ಮೂಡುವುದು ಇನ್ನೊಂದು ಬೆಳವಣಿಗೆ. ಈ ಸಹಾನುಭೂತಿಯೇ ಇನ್ನೊಂದು ಜೀವದ ಬಗೆಗಿನ ಪ್ರೀತಿಯೂ ಆಗಿ ಬದಲಾಗುವುದು ಪ್ರಭಾ ಅವರ ಕತೆಗಳಿಗೆ ಹೊಸದೊಂದು ಅಯಾಮವನ್ನೇ ತಂದುಕೊಡುತ್ತದೆ. ಅರಿವಿನ ಬಾಗಿಲು ಎಂದರೆ ಇದೇ. ಅದು ಬೆಳಕಿನ ಬಾಗಿಲು.
'ಹೊರಳು' ಈ ಸಂಕಲನದಲ್ಲಿ ಭಿನ್ನವಾದ ಕತೆ, ದೊಡ್ಡವರ ಪ್ರಪಂಚದ ನಡವಳಿಕೆಗಳು ಪುಟ್ಟ ಮಕ್ಕಳ ಮುಗ್ಧ ಮನಸ್ಸುಗಳ ಮೇಲೆ ಎಂಥ ಕೆಟ್ಟ ಪರಿಣಾಮವನ್ನು ಬೀರುತ್ತವೆ, ಅರಳಬೇಕಾದ ಮನಸ್ಸುಗಳನ್ನು ಹೇಗೆ ಕಮರಿಸುತ್ತವೆ ಎಂಬುದನ್ನು ಬಹಳ ಸೂಕ್ಷ್ಮವಾಗಿ, ನಯಗಾರಿಕೆಯಿಂದ ಹೇಳುವ ಕತೆ. ಕತೆ ಕಟ್ಟುವಲ್ಲಿ ಲೇಖಕಿ ತೋರುವ
ಸಂಯಮ, ಬರವಣಿಗೆಯ ಮೇಲಿನ ಹಿಡಿತ ಇವೆಲ್ಲವನ್ನೂ ಈ ಕತೆ ತೋರಿಸಿಕೊಡುತ್ತದೆ.
ಪ್ರಭಾ ಅವರ ಕತೆಗಳು ಎಲ್ಲಿಯೂ ಜಾಳುಜಾಳಾಗುವುದಿಲ್ಲ. ಕಲೆಗಾರಿಕೆಯನ್ನು ಧಿಕ್ಕರಿಸುವುದಿಲ್ಲ. ಕಲೆಗಾರಿಕೆಯ ಸೂಕ್ಷ್ಮ ಅಂಶಗಳಿಗೆ ಮುಖ ತಿರುಗಿಸುವುದಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಪ್ರಭಾರವರು ಅಭಿನಂದನೆಗೆ ಅರ್ಹರಾಗುತ್ತಾರೆ. ಆದರೆ ಇನ್ನಷ್ಟು ಆಳಕ್ಕೆ ಹೋಗುವ, ಮನುಷ್ಯ ಸಂಬಂಧಗಳನ್ನು ತೀವ್ರವಾಗಿ ಶೋಧಿಸುವ ಪ್ರಯತ್ನವನ್ನು ಇವರು ಮಾಡುವುದಿಲ್ಲ. ಇಂಥ ಅವಕಾಶವು ಇದ್ದ ಕಡೆಗಳಲ್ಲೂ ಅದನ್ನು ಬಿಟ್ಟುಕೊಟ್ಟು ಅಲ್ಪತೃಪ್ತಿಯಿಂದಲೇ ಕತೆಗಳನ್ನು ಮುಗಿಸಿಬಿಡುತ್ತಾರೆ.
ಕತೆಯಾಗಲಿ, ಕಾದಂಬರಿಯಾಲಿ, ಕವಿತೆಯಾಗಲಿ ಅಥವಾ ಇನ್ನಾವುದೇ ಸೃಜನಶೀಲ ಬರಹವಾಗಲಿ ಅದೊಂದು ಬದುಕಿನ ಶೋಧ. ನಿರಂತರವಾಗಿ ಈ ಕ್ರಿಯೆಯಲ್ಲಿ ತೊಡಗುವುದರ ಮೂಲಕವೇ ನಾವು ಬದುಕಿನ ಅರ್ಥವನ್ನು ಕಂಡುಕೊಳ್ಳಬಹುದು. ಪ್ರಭಾ ಮೇಡಂ ರವರು ಇನ್ನಷ್ಟು ಈ ಶೋಧದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಹಾಗೂ ಅವರ ಲೇಖನಿಯಿಂದ ಇನ್ನೂ ಹತ್ತಾರು ಪುಸ್ತಕಗಳು ಹೊರಹೊಮ್ಮಲಿ ಎಂದು ಆಶಿಸುವೆ.
ಪುಸ್ತಕದ ಹೆಸರು: ಹೊರಳು ಮತ್ತು ಇತರೆ ಕಥೆಗಳು
ಲೇಖಕರು: ಕೆ ಎಸ್ ಪ್ರಭಾ
ಪ್ರಕಾಶನ: ಅನಿಕೇತನ ಟ್ರಸ್ಟ್
ಬೆಲೆ:60₹
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಶಿಕಾರಿ ಕತೆಗಳು .
ಸ್ವಾತಂತ್ರ್ಯಪೂರ್ವ
ಶಿಕಾರಿ ಕತೆಗಳು .ವಿಮರ್ಶೆ೩೮
ಗಿರೀಶ್ ತಾಳಿಕಟ್ಟೆ ರವರು ಸಂಗ್ರಹ ಮತ್ತು ಅನುವಾದ ಮಾಡಿರುವ ಸ್ವಾತಂತ್ರ್ಯಪೂರ್ವ
ಶಿಕಾರಿ ಕತೆಗಳು ಎಂಬ ಪುಸ್ತಕ ಹೆಸರೇ ಹೇಳುವಂತೆ ಶಿಕಾರಿಗೆ ಸಂಬಂಧಿಸಿದ ಕಥನಗಳ ಸಂಕಲನ. ಕೆನೆತ್ ಅಂಡರ್ಸನ್ ರವರ ಪುಸ್ತಕ ಓದಿದ್ದ ನನಗೆ ಈ ಪುಸ್ತಕ ಆಕರ್ಷಿಸಿತು. ಪುಸ್ತಕ ಓದಿ ಮುಗಿಸಿದಾಗ ಸ್ವತಂತ್ರ ಪೂರ್ವ ಶಿಕಾರಿ ಕಥೆಗಳ ನೆಪದಲ್ಲಿ ಕಾಡು ಮತ್ತು ಮಾನವನ ಸಂಬಂಧದ ಬಗ್ಗೆ ಉತ್ತಮ ಮಾಹಿತಿ ಸಿಕ್ಕಿತು.
ಇಲ್ಲಿರುವ ಕತೆಗಳು ಬರೀ ಕತೆಗಳಲ್ಲ, ನಿಜವಾಗಿಯೂ ಜರುಗಿದ ಘಟನೆಗಳು ನಮಗಿಂತ ಮೂರು ತಲೆಮಾರುಗಳ ಹಿಂದಿನವು, ವಿನಾಶದ ಅಂಚನ್ನು ತಲುಪಿರುವ ಕಾಡು, ಮಿಗ ಸಂತಾನ, ಪರಿಸರ ಇತ್ಯಾದಿಗಳಲ್ಲಿ ಬದುಕುತ್ತಿರುವ ಇಂದಿನ ನಮಗೆ ಕಲ್ಪಿಸಿಕೊಳ್ಳಲೂ ಆಗದಂತಹ ಗತಲೋಕದ ಕತೆಗಳು, ಅಂದಿನ ದುರ್ಗಮ ಜಗತ್ತಿನ ಕಾಠಿಣ್ಯದ ಬದುಕಿನ ಸಾಮಾಜಿಕ ವಿವರಗಳನ್ನು ಬಿಚ್ಚಿಡುತ್ತಲೇ ಓದುಗರಲ್ಲಿ ಕಾಡಿನ ಕುರಿತು ರಮ್ಯ ಕುತೂಹಲ, ಅರಿವು ಮೂಡಿಸುತ್ತಾ ಸಾಹಸಪ್ರಿಯತೆಯನ್ನು ಸ್ಫುರಿಸುವಂತೆ ಮಾಡುವುವು ಈ ಕಥೆಗಳು.
ಗಿರೀಶ್, ತಾಳಿಕಟ್ಟೆಯವರು ಅನುವಾದಿಸಿದ ಶಿಕಾರಿ ಕಥೆಗಳನ್ನ ಓದುತ್ತ ಓದುತ್ತ ಕಾಡಿನ ನಿಗೂಢ ಜಗತ್ತೊಂದನ್ನ ಕುಳಿತಲ್ಲೇ ಕಂಡ ಅನುಭವ, ಮನಸ್ಸು ನೆನಪುಗಳ ಹಾಯಿದೋಣಿ ಏರಿ ಹಿಮ್ಮುಖವಾಗಿ ಚಲಿಸಿದಂತೆ,
ಕಾಲದ ಒತ್ತಡದಲ್ಲಿ ಕಾಡುಗಳೆಲ್ಲ ನಿಧಾನಕ್ಕೆ ಕರಗಿ ಬಯಲಾಗುತ್ತಿರುವ ವರ್ತಮಾನದಲ್ಲಿ ಈ ಶಿಕಾರಿ ಕತೆಗಳು ಓದುಗರಿಗೆ ಆ ಕಾಲದ ಕಾಡು, ಅಲ್ಲಿನ ಅನೂಹ್ಯ ಜಗತ್ತನ್ನ ಕಲ್ಪಿಸಿಕೊಳ್ಳಲು ಒಂದು ಅವಕಾಶ ನೀಡುತ್ತವೆ. ಈಗಿನ ಕಾಡುಗಳನ್ನು ಸುತ್ತಾಡಿದವರಿಗೆ ಆ ಕಾಲದ ಕಾಡುಗಳೊಂದಿಗೆ ತುಲನೆಯೂ ಸಾಧ್ಯ, ಶಿಕಾರಿ ಕುರಿತು ಸಾಕಷ್ಟು ಅನುವಾದಿತ ಪುಸ್ತಕಗಳಿದ್ದರೂ ಗಿರೀಶ್ ಅವರ ಬರವಣಿಗೆ, ಆಯ್ದುಕೊಂಡಿರವ ಕಥೆಗಳು ಮತ್ತು ವಿಭಿನ್ನ ಶೈಲಿಯ ಅನುವಾದ ಇದನ್ನೊಂದು ಬೇರೆ ಕೃತಿಯನ್ನಾಗಿ ನಿಲ್ಲಿಸುತ್ತವೆ. ಓದುವಾಗ ಕೆಲವೊಮ್ಮೆ ಪೂರ್ಣಚಂದ್ರ ತೇಜಸ್ವಿಯವರ ಕಾಡಿನ ಕಥೆಗಳು ನೆನಪಾಗದೇ ಇರಲಾರದು.
ಗಿರೀಶ್ ಅವರ ಅನುವಾದ ಮೂಲ ಕಥೆಯಷ್ಟೆರೋಮಾಂಚನವನ್ನುಂಟು ಮಾಡುತ್ತವೆ. ಇದು ಕೇವಲ ಒಂದು ಕೃತಿಯ ಅನುವಾದವಷ್ಟೇ ಅಲ್ಲ. ಅವರಿಗೆ ಕಾಡಿನ ಕುರಿತು ಇರುವ ಕೌತುಕ, ಹುಚ್ಚು ಮತ್ತು ಉತ್ಸಾಹವನ್ನ ಇಲ್ಲಿನ .ಕತೆಗಳ ಮರುಸೃಷ್ಟಿಯಲ್ಲಿ ಕಾಣಬಹುದು. ಜೇನುನೊಣ ಹೂಗಳಿಂದ ಮಕರಂದ ಸಂಗ್ರಹಿಸಿ ಸವಿಜೇನಾಗಿಸುವಂತೆ ಗಿರೀಶರವರು ಕನ್ನಡಕ್ಕೆ ಅನುವಾದಿಸಿರುವ ಈ ಕೃತಿ ಒಂದು ಸೃಜನಶೀಲ ಕ್ರಿಯೆ. ಮೈನವಿರೇಳುವಂತೆ ಓದಿಸಿಕೊಂಡ "ಹುಣಸೂರಿನ ಆನೆ ಪೀರ್ಭಕ್ಷ್" ಮತ್ತು "ಆಯ್ಯನಮಠದ ನರಭಕ್ಷಕಿ" ಶಿಕಾರಿ ಕಥೆಗಳು ಬಹುಕಾಲ ಕಾಡುವಂತಹವು. ಅನುವಾದವಾದರೂ ಅನುಭವಗಳನ್ನು ವಿಸ್ತರಿಸುವಂತಹ, ಸೃಜನಶೀಲ ಪ್ರಯತ್ನಕ್ಕಾಗಿ ಗಿರೀಶ್ರವರಿಗೆ ಅಭಿನಂದಿಸುತ್ತೇನೆ. ಜೊತೆಗೆ ಇವತ್ತಿನ ಪರಿಸ್ಥಿತಿಯಲ್ಲಿ ಕಾಡಿನ ಮೇಲೆ ನಾವು ಹೊರಿಸಿರುವ ಒತ್ತಡ, ಅದರಿಂದಾಗಿ ಅಲ್ಲಿಯ ಪ್ರಾಣಿ, ಪಕ್ಷಿಪ್ರಭೇದಗಳು ನಶಿಸುವ ಹಂತ ತಲುಪಿರುವುದು, ವನ್ಯ ಪ್ರಾಣಿ-ಮಾನವ ಸಂಘರ್ಷ ಇವೆಲ್ಲದರೆಡೆಗ ಇನ್ನಾದರೂ ಒಂಚೂರು ಯೋಚಿಸುವ ಪ್ರೇರಣೆ ನಮ್ಮಲ್ಲಿ ಮೂಡಲಿ. ಆಹಾರ ಸರಪಳಿಯ ತುತ್ತ ತುದಿಯಲ್ಲಿರುವ ಹುಲಿಗಳನ್ನು ಸಂರಕ್ಷಿಸಿದಾಗ ಮಾತ್ರ ನಾವು ಕಾವೇರಿಯಂತಹ ನದಿಯನ್ನ ಸಂರಕ್ಷಿಸಬಹುದು ಎಂಬ ಪ್ರಜ್ಞೆ ನಮ್ಮೆಲ್ಲರಿಗೂ ಬರುವಂತಾಗಲಿ.
ಈ ಪುಸ್ತಕದ ಮುದ್ರಣ ಮತ್ತು ವಿನ್ಯಾಸದ ಬಗ್ಗೆ ಒಂದು ಮಾತು ಹೇಳಲೇಬೇಕು . ಗಿರೀಶ್ ರವರೆ ಸ್ವತಃ ಈ ಪುಸ್ತಕದ ಒಳವಿನ್ಯಾಸ ಮಾಡಿರುವುದು ನನಗೆ ಬಹಳ ಹಿಡಿಸಿತು ಅದರಲ್ಲೂ ಪ್ರತಿ ಅಧ್ಯಾಯಕ್ಕೆ ಸಂಬಂಧಿಸಿದ ಚಿತ್ರಗಳು ಬಹಳ ಸೂಕ್ತವಾಗಿವೆ .
ಪುಸ್ತಕದ ಹೆಸರು:ಸ್ವಾತಂತ್ರ್ಯಪೂರ್ವ
ಶಿಕಾರಿ ಕತೆಗಳು
ಲೇಖಕರು: ಗಿರೀಶ್ ತಾಳಿಕಟ್ಟೆ
ಪ್ರಕಾಶನ: ಕಾವ್ಯ ಕಲಾ ಪ್ರಕಾಶನ ಬೆಂಗಳೂರು.
ಬೆಲೆ: 200₹




