02 ಡಿಸೆಂಬರ್ 2021

ಅನಾಮಿಕ ಯಾರು? ಕಥೆ


 


ಆ ಅನಾಮಿಕ ಯಾರು?



ಎರಡು ಬಾರಿ ನನ್ನವಳ ಬಳಿ ಬೈಸಿಕೊಂಡಿದ್ದೇನೆ ಇದೇ ವಿಚಾರಕ್ಕೆ ,ಇಂದು ಅವಳು ನನ್ನ ಜೊತೆಗಿದ್ದಿದ್ದರೆ ಖಂಡಿತಾ ಇಷ್ಟೊತ್ತಿಗೆ ಸಹಸ್ರನಾಮ , ಅರ್ಚನೆ, ಮಂಗಾಳಾರತಿ ಎಲ್ಲಾ ಆಗಿರುತ್ತಿತ್ತು! ಸೂರ್ಯ ಮುಳುಗಿ ಒಂದು ಗಂಟೆಯಾಗಿರುವುದಕ್ಕೆ ಕತ್ತಲೆ ನಿಧಾನವಾಗಿ ಆವರಿಸುತ್ತಿರುವುದು ಸಾಕ್ಷಿಯಾಗಿತ್ತು, ಅದರ ಜೊತೆಗೆ ಗೆಳೆಯ ಜಬಿ ಹೇಳಿದ ಮಾತು ಯಾಕೋ ನೆನಪಾಯಿತು," ಆ ಕಣಿವೆಯಲ್ಲಿ ಇಪ್ಪತ್ತು ‌ಕಿಲೋಮೀಟರ್ ಹುಷಾರು ಕಣೊ, ಎರಡು ‌ಮೂರು ಬಾರಿ ದರೋಡೆ ಆಗಿದೆ" ಛೇ... ಇವತ್ತೇ ಹೀಗೆ ಆಗಬೇಕಿತ್ತೇ ? ಮನೆಯಿಂದ ಮುನ್ನೂರು ಮೀಟರ್ ಹತ್ತಿರ ಇರುವ ಪೆಟ್ರೋಲ್ ಹಾಕಿಸಲು ನಾನೇಕೆ ಇಷ್ಟು ಸೋಮಾರಿಯಾದೆ?  ನನ್ನವಳು ಪದೇ ಪದೇ ಜ್ಞಾಪಿಸಿದರೂ ನನಗೇಕೆ ಈ ವಿಚಾರದಲ್ಲಿ ನಿರ್ಲಕ್ಷ್ಯ? ನನ್ನ ನಿರ್ಲಕ್ಷ್ಯಕ್ಕೆ ಸಾಕಷ್ಟು ಬಾರಿ ಇದೇ ರೀತಿಯಲ್ಲಿ ತೊಂದರೆ ಅನುಭವಿಸಿರುವೆ ,ಹೋದ ವಾರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಕುಟುಂಬ ಸಮೇತ ಹೋದಾಗ ಹೀಗೆಯೇ ಹಾಕಿತ್ತು, ಪುಣ್ಯಕ್ಕೆ  ಪೆಟ್ರೋಲ್ ಬಂಕ್  ಒಂದು ಕಿಲೋಮೀಟರ್  ಇರುವಾಗ ಪೆಟ್ರೋಲ್ ಖಾಲಿಯಾಗಿತ್ತು, ಅಂದು ನನ್ನವಳ ಜೊತೆಗೆ ನನ್ನ ಅಪ್ಪ, ಅಮ್ಮ, ಸೇರಿ ಅಷ್ಟೋತ್ತರ ಮಾಡಿದ್ದರು ಸಾಲದ್ದಕ್ಕೆ ನನ್ನ ಮಕ್ಕಳು ಜೋಕ್ ಮಾಡಿ ನಕ್ಕಿದ್ದರು. ಆದರೂ ನಾನು ಜಾಗೃತನಾಗಲೇ ಇಲ್ಲ. ಈಗ ಈ ಕಣಿವೆಯಲ್ಲಿ ಏನು ಮಾಡಲಿ? ಇಲ್ಲೇ ಕಾರ್ ಬಿಟ್ಟು ಹೋಗೋಣವೆ? ಅದೇಗೆ ಸಾದ್ಯ? ಗೆಳೆಯ ಹೇಳಿದಂತೆ ಈ ಜಾಗ ಸರಿ‌ ಇಲ್ಲ , ಯಾರಿಂದಲಾದರೂ ಸಹಾಯ ಪಡೆದು ಕಾರು ತೆಗೆದುಕೊಂಡು ಹೋಗಲು ತೀರ್ಮಾನಿಸಿದೆ.


ಕತ್ತಲು ಹೆಚ್ಚಿದಂತೆ ಕಣಿವೆಯಲ್ಲಿ ವಿಚಿತ್ರವಾದ ಪ್ರಾಣಿಗಳ ಸದ್ದು, ಬೀಸುವ ಬಲವಾದ ಗಾಳಿಗೆ ಮರಗಳ ಕೊಂಬೆಗಳು ಮುರಿದ ಸದ್ದು ,ದೂರದಲ್ಲಿ ನರಿ ಊಳಿಡುವ ಸದ್ದು ಕೇಳಿ ಯಾಕೋ ಸಣ್ಣಗೆ ನಡುಕು ಶುರುವಾಯಿತು . ಸಂಕಟ ಬಂದಿರುವುದು ಪಕ್ಕಾ ಆಗಿ  ಮನದಲ್ಲೇ  ವೆಂಕಟರಮಣನ ನೆನೆದು ಧೈರ್ಯ ತಂದುಕೊಂಡೆ.ಸಹಾಯಕ್ಕಾಗಿ ಎದುರುನೋಡುತ್ತಾ ರಸ್ತೆಯ ಪಕ್ಕದಲ್ಲಿ ನಿಂತೆ, ಮುಕ್ಕಾಲು ಗಂಟೆಯ ನಂತರ ದೂರದಲ್ಲಿ ಬೆಳಕು ಕಾಣಿಸಿತು, ಹತ್ತಿರ ಬರು ಬರುತ್ತಾ ಒಂದೆಡೆ ಸಂತಸ ,ಮತ್ತೊಂದೆಡೆ ಭಯ ಶುರುವಾಯಿತು, ಭಯಕ್ಕೆ ಕಾರಣ ಒಂದು ಜಬಿ ಹೇಳಿದ ಮಾತು ಮತ್ತು ಮೂರು ದಿನದ ಹಿಂದೆ ರಾತ್ರಿಯಲ್ಲಿ ಹೆದ್ದಾರಿ ದರೋಡೆ ಮಾಡಿ ಕಾರು ಚಾಲಕನನ್ನು ಕೈ ಕಾಲು ಕಟ್ಟಿ ಚರಂಡಿ ಯಲ್ಲಿ ಎಸೆದು  ಹೋದ ಕಳ್ಳರ ಬಗ್ಗೆ ಪತ್ರಿಕೆಯಲ್ಲಿ ಓದಿದ್ದು ನೆನಪಾಯಿತು. 


ಅಳುಕಿನಿಂದಲೇ ಬೈಕ್ ಗೆ ಕೈ ಅಡ್ಡ ಹಾಕಿದೆ, "ಓ ಏನ್ ಸಾರ್ ಇಲ್ಲಿ" ಪರಿಚಿತ ಧ್ವನಿ! ಬೈಕ್ ಹೆಡ್ ಲೈಟ್ ಪೋಕಸ್ ಗೆ ಮುಖ ಕಾಣಲಿಲ್ಲ, ಕೈ ಅಡ್ಡ ಹಿಡಿದು ನೋಡಿದೆ. ನಮ್ಮ ಮನೆಯ ಮುಂದಿನ ನಮ್ಮ ಆತ್ಮೀಯರಾದ ನಂಜುಂಡಪ್ಪ ಸರ್. 

" ಸರ್ ಹೇಳಲು ನಾಚಿಕೆ ಆಗುತ್ತದೆ ಸರ್, ಪೆಟ್ರೋಲ್ ಖಾಲಿಯಾಗಿದೆ ಜೇಬಲ್ಲಿ ದುಡ್ಡಿದೆ, ಕ್ರೆಡಿಟ್ ಕಾರ್ಡ್ ಇದೆ, ಆದರೂ ಪೆಟ್ರೋಲ್ ಗಾಗಿ ಪರದಾಡುವ  ಪರಿಸ್ಥಿತಿ ನೋಡಿ " ಎಂದು ಇನ್ನೂ ನಾನು ಮಾತು ಮುಗಿಸಿರಲಿಲ್ಲ

" ಸಾರ್ ಜೋರಾಗಿ ದುಡ್ಡು, ಕಾರ್ಡ್ ಅನ್ನಬೇಡಿ ,ಸುಮ್ಮನಿರಿ, ಈ ಜಾಗ ಸರಿ ಇಲ್ಲ, ಆದಷ್ಟು ಬೇಗ ಇಲ್ಲಿಂದ ಹೊರಡಬೇಕು, ಹಾಂ.. ನಿಮ್ ಕಾರಲ್ಲಿ ಬಾಟಲ್ ಇದ್ರೆ ಕೊಡಿ, ನನ್ ಬೈಕಲ್ಲಿ ಪೆಟ್ರೋಲ್ ತೆಗೆದು ಕೊಡುವೆ" ಎಂದರು

"ಸಾರ್ ನಿಮಗೆ ಯಾಕೆ ತೊಂದ್ರೆ ,ನಿಮ್ ಬೈಕ್ ಕೊಡಿ ,ನೀವು ಇಲ್ಲೇ ಇರಿ ನಾನು ಇಲ್ಲಿಂದ ಇಪ್ಪತ್ತು ‌ಕಿಲೋಮೀಟರ್ ದೂರದ ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ತರ್ತೀನಿ" ಎಂದೆ 

"ಸಾರ್ ನಾನು ಬೆಳಿಗ್ಗೆ ಪುಲ್ ಟ್ಯಾಂಕ್  ಮಾಡಿಸಿದ್ದೆ ,ನೀವೇನೂ ಯೋಚನೆ ಮಾಡಬೇಡಿ "ಎಂದು ಅವರೇ ಕಾರ್ ಬಳಿ ಬಂದು ಬಾಟಲ್ ಗಾಗಿ‌ ತಡಕಾಡಿದರು ಕೊನೆಗೆ ನಾನೇ ಬಾಟಲ್ ಕೊಟ್ಟೆ ,

ಪೆಟ್ರೋಲ್ ಹಾಕಿಕೊಂಡು ಅವರಿಗೆ ಧನ್ಯವಾದ ಹೇಳಿ ನಾಳೆ ಸಿಗುವೆ ಎಂದು ಕಾರ್ ಸ್ಟಾರ್ಟ್ ಮಾಡಿ ಹೊರಟೆ , ಮಾರ್ಗ ಮಧ್ಯದಲ್ಲಿ ನನ್ನವಳ ಪೋನ್ ಯಾಕೆ ಲೇಟ್? ಯಾವಾಗ ಬರ್ತೀರಾ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದಳು,  ಏನೋ ಕಾರಣ ಹೇಳಿದೆ ,ಪೆಟ್ರೋಲ್ ವಿಷಯ ಬಿಟ್ಟು. ನಾಲ್ಕೈದು ಕಿಲೋಮೀಟರ್ ಸಾಗಿದ ಬಳಿಕ ಅಪ್ಪ ಪೋನ್ ನಲ್ಲೆ ನಿಧಾನವಾಗಿ ಗದರಿದರು " ಅದೇನು ಕೆಲಸಾನೋ ನಿಂದು ,ಬೆಳಕಿದ್ದಾಗಲೆ ಮನೆ ಸೇರೋಕ್ಕಾಗಲ್ವೆ? ಹೇಳೋ ಕೇಳೋ ಕಾಲ್ದಾಗೆ" ಎಂದು ಪೋನ್ ಕಟ್ ಮಾಡಿದರು.


ಬೆಳಿಗ್ಗೆ ವಾಕಿಂಗ್ ಹೊರಟೆ, ಎದುರಿಗೆ ವಾಕ್ ಮಾಡುತ್ತಾ ಬಂದ ನಂಜುಂಡಪ್ಪ ಸರ್  ದಂಪತಿಗಳು   ಸಿಕ್ಕಿದರು ನಗುತ್ತಲೆ "  ಗುಡ್ ಮಾರ್ನಿಂಗ್ ಸರ್  ರಾತ್ರಿ ನಿಮ್ಮಿಂದ    ನನಗೆ ಬಹಳ ಅನುಕೂಲ ಆಯ್ತು ಸರ್ ಒಳ್ಳೆಯ ಟೈಮ್ ಗೆ ಮದಲಿಂಗನ ಕಣಿವೆ ನಲ್ಲಿ ಬೈಕ್ ನಲ್ಲಿ ಬಂದು ಪೆಟ್ರೋಲ್ ಕೊಟ್ಟಿರಿ ಇಲ್ಲ ಅಂದಿದ್ರೆ ನಾನು ರಾತ್ರಿ ಪೂರಾ ಅಲ್ಲೇ ಭಯದಲ್ಲೇ ಕಾಲ ಕಳಿಬೇಕಾಗಿತ್ತು" ಎಂದು ಕೃತಜ್ಞತೆ ಸಲ್ಲಿಸಿದೆ, 

ನಂಜುಂಡಪ್ಪ ಸರ್ ಧರ್ಮಪತ್ನಿ "ಅಯ್ಯೋ ನೀವ್ ಒಬ್ರು, ಸರ್ ಇವ್ರ ಬೈಕ್ ಪಂಚರ್ ಆಗಿ ಮೂರ್ ದಿನ ಆಯ್ತು ,ಪಂಚರ್ ಹಾಕುಸ್ರೀ ಅಂದ್ರೆ ಇವತ್ತು ನಾಳೆ ,ಅಂತಾರೆ 

ನೀವ್ ನೋಡಿದ್ರೆ ಬೈಕ್ ನಲ್ಲಿ ರಾತ್ರಿ ಬಂದ್ರು ಅಂತಿರಾ, ಬಹುಶಃ ಇವ್ರು ಕನಸಲ್ಲಿ ಬಂದಿರಬೇಕು " ಎಂದು ಅವರ ಗಂಡನ ಕಡೆ ತಿರುಗಿ ಕಣ್ಣು ಕೆಂಪಗೆ ಮಾಡಿದರು.

" ಈಗ ನಿನಗೆ ಸಮಾಧಾನ ಆಯ್ತಾ ಸರ್? ಅಂತೂ ಬೆಳಿಗ್ಗೆ ನನಗೆ ಸುಪ್ರಭಾತ ಸೇವೆ ಆಯ್ತು " ಎಂದು ನಗುತ್ತಾ ಹೊರಟರು.


ನಾನು ಆಶ್ಚರ್ಯದಿಂದ ನನಗೇ ಪ್ರಶ್ನೆ ಮಾಡಿಕೊಂಡೆ,ಹಾಗಾದರೆ ರಾತ್ರಿ ಮದಲಿಂಗನ ಕಣಿವೆಯಲ್ಲಿ ನನಗೆ ಸಹಾಯ ಮಾಡಿದ ಅನಾಮಿಕ ಯಾರು?

ಬೆಳಗಿನ   ವಾಕ್ ನಿಂದ ಹಣೆಯ ಮೇಲಿನ    ಸಣ್ಣ ಮಟ್ಟದ ಬೆವರ ಹನಿಗಳು ಬರು ಬರುತ್ತಾ ದೊಡ್ಡದಾದವು....


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*೨/೧೨/೨೧


 

01 ಡಿಸೆಂಬರ್ 2021

ಸಂತೃಪ್ತ ದಿನ ಕವನ


 *ಸಂತೃಪ್ತ ದಿನ*



ದಿನ ಮೇಲೇರಿ ಬರುವ

ಮುನ್ನ ಎದ್ದೇಳೋಣ

ಘನ ಮಹಾ ಶಕ್ತಿಗೆ

ಶಿರಭಾಗಿ ನಮಿಸೋಣ


ತನುಮನವನ ಸ್ಚಚ್ಚ

ಮಾಡಿಕೊಳ್ಳೋಣ 

ಮನಕೊಪ್ಪುವ  ಸಮತೋಲನ

ಆಹಾರ ಸೇವಿಸೋಣ


ಧನವೊಂದೆ ಜೀವನವಲ್ಲ

ಎಂಬುದನರಿತು  ಕಾಯಕಮಾಡೊಣ

ದನಕರುಗಳ ಬಗ್ಗೆ ಕರುಣೆಯಿಂದ

ನಡೆದುಕೊಳ್ಳೋಣ


ಜನಗಳೊಂದಿಗೆ ಸಮನ್ವಯದಿ

ಬೆರೆತು ಬಾಳೋಣ

ಈ ಮೇಲಿನಂತಿದ್ದರೆ ನಮ್ಮಯ

ದಿನಚರಿ ನಮ್ಮದಾಗುವುದು

ಪರಿಪೂರ್ಣ ಸಂತೃಪ್ತ ದಿನ 



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಭಾರತವನ್ನು ಆರ್ಥಿಕ ಶಕ್ತಿಯಾಗಿ ಪರಿವರ್ತಿಸೋಣ.ಲೇಖನ


 


ಜಿ.ಡಿ .ಪಿ .ಯ ಬೆಳವಣಿಗೆ

ಆಶಾದಾಯಕ ಸಂಗತಿ .


 ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 8.4ರ ಬೆಳವಣಿಗೆ ಕಂಡಿದ್ದು, ಕೋವಿಡ್‌ಗೂ ಮುಂಚಿನ ಮಟ್ಟವನ್ನು ತಲುಪಿರುವುದು ಆಶಾದಾಯಕ ಸಂಗತಿಯಾಗಿದೆ.

ಭಾರತದ ಆರ್ಥಿಕತೆಯು ಕೋವಿಡ್ ನಂತಹ  ಕಠಿಣ ಸನ್ನಿವೇಶ ಎದುರಿಸಿದರೂ ಮೇಲೆದ್ದು ಬರುವ ತಾಕತ್ತಿದೆ ಎಂಬುದನ್ನು ಈ ಅಂಕಿ ಅಂಶಗಳು ಸಾಬೀತುಪಡಿಸುತ್ತವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಎರಡಂಕಿ ಪ್ರಗತಿ ಸಾಧಿಸುವ ನಿರೀಕ್ಷೆ ಮಾಡಲಾಗಿದೆ ಎಂದು ಮುಖ್ಯ ಅರ್ಥಿಕ ಸಲಹೆಗಾರ (ಸಿಇಎ) ಕೆ.ವಿ. ಸುಬ್ರಮಣಿಯನ್ ರವರ ಹೇಳಿಕೆ ಈ ವಿಚಾರದಲ್ಲಿ ಮಹತ್ವ ಪಡೆಯಲಿದೆ.


ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಜಿಡಿಪಿ ಶೇ.13.7ರಷ್ಟು ಬೆಳವಣಿಗೆ ಕಂಡಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಶೇ 6ಕ್ಕಿಂತಲೂ  ಹೆಚ್ಚಿನ ಮಟ್ಟದ ಬೆಳವಣಿಗೆ ಕಾಣಲಿದ್ದು, ಒಟ್ಟಾರೆಯಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿ ಪ್ರಗತಿಗೆ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.


ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭ ಆಗಿರುವುದರಿಂದ ಜನರು ಸರಕು ಮತ್ತು ಸೇವೆಗಳ ಖರೀದಿಗೆ ಮಾಡುತ್ತಿರುವ ಖರ್ಚಿನಲ್ಲಿ ಏರಿಕೆ ಕಂಡುಬಂದಿದೆ. ಹೆಚ್ಚು ಜನರು ಲಸಿಕೆ ಪಡೆದಿದ್ದರಿಂದ ಈ  ಅವಧಿಯಲ್ಲಿ ಕೋವಿಡ್ ತೀವ್ರತೆಯೂ ಕಡಿಮೆ ಆಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಎರಡನೇ ತ್ರೈಮಾ ಸಿಕದಲ್ಲಿ ಜೆಡಿಪಿಯು: ಈ ಪ್ರಮಾಣದ ಬೆಳವಣಿಗೆ ಕಂಡಿದೆ.


ಇದೇ ವೇಳೆ ನಮ್ಮ ದೇಶದ 

ದೇಶದ ವಿತ್ತೀಯ ಕೊರತೆಯು ಅಕ್ಟೋಬರ್ ತಿಂಗಳ ಅಂತ್ಯಕ್ಕೆ 2 5.47 ಲಕ್ಷ ಕೋಟಿಗಳಷ್ಟಾಗಿದೆ. ಬಜೆಟ್ ಅಂದಾಜಿನ ಪ್ರಕಾರ ಶೇ 36.3ರಷ್ಟಾಗಿರುವುದು ಪ್ರಮುಖವಾಗಿ ಗಮನಿಸಬೇಕಾದ ಅಂಶವಾಗಿದೆ.


ವರಮಾನ ಸಂಗ್ರಹದಲ್ಲಿ ಸುಧಾರಣೆ ಕಂಡುಬಂದಿರುವುದರಿಂದ ವಿತ್ತೀಯ ಕೊರತೆಯು ಈ ಪ್ರಮಾಣದ ಬೆಳವಣಿಗೆ ಕಂಡಿದೆ ಎಂದು ಸಿಜಿಎ ತಿಳಿಸಿದೆ.

ಇಷ್ಟೆಲ್ಲಾ ಆಶಾದಾಯಕ ಬೆಳವಣಿಗೆಯ ಮುಧ್ಯೆ ಒಮೈಕ್ರಾನ್ ವೈರಸ್ ನ ಕಾರ್ಮೋಡ  ಪ್ರಪಂಚದ ವಿವಿಧ ದೇಶಗಳಲ್ಲಿ ಹರಡುತ್ತಾ ಆತಂಕ  ಕವಿದಿರುವುದು ದುರದೃಷ್ಟಕರ. ಬೇರೆ ದೇಶಗಳಲ್ಲಿ ಕೋವಿಡ್ ಮೂರು ಮತ್ತು ನಾಲ್ಕನೇ ಅಲೆಗಳು ಅಪ್ಪಳಿಸಿದರೂ ಭಾರತದಲ್ಲಿ ಕೊರೊನಾ ನಿಯಂತ್ರಣದಲ್ಲಿ ಇರುವುದಕ್ಕೆ ಕಾರಣ ನಮ್ಮ ಲಸಿಕಾ ಅಭಿಯಾನ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ನಮ್ಮಲ್ಲಿ ಕೆಲವರು ಎರಡನೇ ಡೋಸ್ ಲಸಿಕೆ ಪಡೆದಿಲ್ಲದಿರುವುದು .ಬೇಸರದ ಸಂಗತಿ.ಇಂತವರು ಸರ್ಕಾರಗಳು ಮತ್ತು ವ್ಯವಸ್ಥೆಯ ಟೀಕೆಮಾಡುತ್ತಾ ತಮ್ಮ ಕರ್ತವ್ಯ ಮರೆಯುವ ಜಾಣ ಪ್ರಜೆಗಳು. ಸರ್ಕಾರ ಮತ್ತು ತಜ್ಞರು ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಜವಾಬ್ದಾರಿಯುತ ಪ್ರಜೆಗಳಾದ ನಾವು ಪಾಲಿಸೋಣ . ನಮ್ಮ ಆರೋಗ್ಯ ಕಾಪಾಡಿಕೊಂಡು ಜೀವವಿದ್ದರೆ ಜೀವನ ಎಂಬ ಸತ್ಯ ಅರಿತು ಒಗ್ಗಟ್ಟಾಗಿ ಸಾಧಿಸೋಣ. ತನ್ಮೂಲಕ ಭಾರತವನ್ನು ಪ್ರಪಂಚದಲ್ಲಿಯೇ ದೊಡ್ಡದಾದ ಆರ್ಥಿಕ ಶಕ್ತಿಯನ್ನಾಗಿ ಪರಿವರ್ತಿಸೋಣ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು