22 ನವೆಂಬರ್ 2021

ಪತಿರಾಯ .ಹನಿಗವನ


 


*ಪತಿರಾಯ*  ಹನಿಗವನ


ಇಂದು ಪುರುಷರ ದಿ‌ನ

ನಮ್ಮದೇ ದಿನವೆಂದು 

ಜೋರಾಗಿ ನಗುತ್ತಾ 

ಸಂತಸದಿಂದ ಇದ್ದನು ಪತಿರಾಯ 

ನಗುತ್ತಾ ಮೀಸೆ ತೀರುವುತ್ತಾ||

ಇದ್ದಕ್ಕಿದ್ದಂತೆ ನಗು ಮಾಯ,

ಅವನ ಸದ್ದೇ ಇಲ್ಲ .ಅಮ್ಮನವರು 

ಕೇಳಿದರು ಬಟ್ಟೆಗಳನ್ನು ಒಗೆದದ್ದು

ಪಾತ್ರೆ ತೊಳದದ್ದು , ಅಡುಗೆ

ಮಾಡಿದ್ದು ಮುಗೀತಾ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


21 ನವೆಂಬರ್ 2021

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ*21/11/21


 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ ೨೧/೧೧/೨೧

 


ಕಸದಲ್ಲರಳಿದ ಕಲೆ .ಲೇಖನ


 


ಕಸದಲ್ಲರಳಿದ ಕಲೆ


"ಅಪ್ಪಾ ನನಗೆ ಒಂದು ಪ್ಲಾಸ್ಟಿಕ್ ಗಾಳಿಪಟ ಕೊಡಿಸು. ನನ್ನ ಫ್ರೆಂಡ್ಸ್ ಎಲ್ಲಾ ತೊಗೊಂಡಿದಾರೆ ಇಲ್ಲೇ ಅಂಗ್ಡೀಲಿ ಸಿಗುತ್ತೆ ಬರೀ ಐವತ್ತು ರುಪಾಯಿ ಅಷ್ಟೇ  " ಎಂದು ಮಗಳು ದುಂಬಾಲು ಬಿದ್ದಳು .
"ಬೇಡ ಸುಮ್ಮನಿರಮ್ಮ ಆ ಗಾಳಿಪಟಗಳು ಪಾಲಿಥಿನ್ ಕವರ್ ನಿಂದ ಮಾಡಿವೆ, ಅವು ಪರಿಸರಕ್ಕೆ ಹಾನಿ, ಅದರ ದಾರವೂ ನೈಲಾನ್ ಮುಂತಾದ ರಾಸಾಯನಿಕಗಳಿಂದ ಮಾಡಿರುತ್ತಾರೆ , ಇವೆಲ್ಲಕ್ಕೂ ಮಿಗಿಲಾಗಿ ಈ ವಸ್ತುಗಳು ಚೀನಾದಿಂದ ಆಮದು ಮಾಡಿದ ವಸ್ತುಗಳು ಅವುಗಳನ್ನು ನಾವು ಕೊಂಡರೆ ನಮ್ಮ ಹಣ ಬೇರೆ ದೇಶಕ್ಕೆ ಹೋಗುತ್ತದೆ. ಬೇಡ ಸುಮ್ಮನಿರು" ಎಂದು ಜೀವಶಾಸ್ತ್ರ, ಪರಿಸರ ಶಾಸ್ತ್ರ ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರದ ಉಪನ್ಯಾಸಕನಂತೆ ಒಂದೇ ಸಮನೆ ಉಪನ್ಯಾಸ ಕೊಟ್ಟೆ. ಆರನೇ ತರಗತಿಯ ನನ್ನ ಮಗಳಿಗೆ ಎಷ್ಟು ಅರ್ಥವಾಯಿತೋ "ಹೋಗಪ್ಪ..."ಎಂದು ಎದ್ದು ಹೋಗಿ ಟೀವಿ ಆನ್ ಮಾಡಿ ರಿಮೋಟ್ ಗುಂಡಿ ಒತ್ತಿದಳು .ಅದರಲ್ಲಿ ಒಂದು ಜಾಹಿರಾತಿನಲ್ಲಿ ಒಂದು ಮಗು ಏರ್ ಬಬಲ್ ಊದಿ ಸಂತಸ ಪಡುವ ದೃಶ್ಯ ಬಂತು .
"ಅಪ್ಪಾ ಹೋಗಲಿ ಈ ಏರ್ ಬಬಲ್ ಆದ್ರೂ ಕೊಡ್ಸು , ಪಕ್ಕದ್ ರೋಡ್ ನಲ್ಲಿ ಇರೋ ಅಂಗಡೀಲಿ ಇದೆ .ಬರೇ ಮೂವತ್ತು ರುಪಾಯಿ. " ಅಂದಳು
"ಅಲ್ಲಾಮ್ಮಾ..ಈ ಟೀವಿಯವರು....."
ಅಂದು ನಾನು ಇನ್ನೂ ಮಾತು ಮುಗಿಸಿರಲಿಲ್ಲ ನನ್ನ ಮಗಳು
"ಪರಿಸರ ಮಾಲಿನ್ಯ, ಬೇರೆ ದೇಶಕ್ಕೆ ದುಡ್ಡು ಟೀವಿ ಸರಿ ಇಲ್ಲ. ಅಲ್ವ ಅಪ್ಪಾ ? ಎಂದು ಎದ್ದು ಟೀವಿ ಆಪ್ ಮಾಡಿ ಅಡುಗೆ ಮನೆಗೆ ಹೋಗಿ
" ಇನ್ನೂ ತಿಂಡಿ ಆಗಲಿಲ್ವೇನಮ್ಮ " ಎಂದು ಜೋರಾಗಿ ಕೂಗಿದಳು.

ನನ್ನ ದೊಡ್ಡ ಮಗಳು ಪಿ ಯೂ ಸಿ ಓದುತ್ತಿದ್ದರಿಂದ ಅವಳ ಕಡೆ ತಿರುಗಿ ನನ್ನ ಭಾಷಣ ಮುಂದುವರೆಸಿದೆ.
"ಈ ಟೀವಿ ಚಾನೆಲ್ ಗಳು, ಸೋಶಿಯಲ್ ಮೀಡಿಯಾಗಳು ಬಂದು ನಮಗೆ  ಬೇಕಾದ, ಬೇಕಿಲ್ಲದ ವಸ್ತುಗಳನ್ನು ಮಾರ್ಕೆಟಿಂಗ್ ಮಾಡಲು ವಿಧ ವಿಧದ ಜಾಹಿರಾತುಗಳನ್ನು ನೀಡುತ್ತಾರೆ .ಅದರಲ್ಲೂ ಮಹಿಳೆಯರು ಮತ್ತು ಮಕ್ಕಳೇ ಅವರ ಟಾರ್ಗೆಟ್ ಇದೂ ಒಂದು ರೀತಿಯ ಶೋಷಣೆ ಎಂದರೆ ತಪ್ಪಾಗಲಾರದು.

ನಾನು ಬಾಲ್ಯದಲ್ಲಿ ಇದ್ದಾಗ ನಾನೂ ಗಾಳಿಪಟ ಮಾಡಿ ಹಾರಿಸಿರುವೆ. ಏರ್ ಬಬಲ್ ಮಾಡಿ ಆನಂದ ಪಟ್ಟಿರುವೆ.
ಆಗ ನಾವೇ ಗಾಳಿಪಟ ಮಾಡಿಕೊಳ್ಳುತ್ತಿದ್ದೆವು. ಸ್ನೇಹಿತರೆಲ್ಲಾ ಸೇರಿಕೊಂಡು ಯಾರದೋ ಮನೆಯ ಮುಂದಿನ ಹಳೆಯ ಬಿದಿರು ಕಡ್ಡಿ ಹುಡುಕಿಕೊಂಡು ಅದನ್ನು ಸೀಳಿಕೊಂಡು , ಚೌಕಾಕಾರ ಕಟ್ಟಿ ಹಳೆಯ ನ್ಯೂಸ್ ಪೇಪರ್ ಅಂಟಿಸಿ , ಎಲ್ಲಿಯೋ ತಿಪ್ಪೆಯಲ್ಲಿ ಬಿದ್ದ ಹಳೆಯ ಆಪಿನ ಚಾಪೆಯ ದಾರವನ್ನು ತಂದು ನಮ್ಮ ಗಾಳಿಪಟಕ್ಕೆ ಕಟ್ಟಿ ಮನೆಯ ಹಿಂದಿನ ಕಲ್ಲಿನ ಹೊಲದಲ್ಲಿ ಗಾಳಿಪಟವ ಹಾರಿಸುತ್ತಿದ್ದರೆ ನಮ್ಮ ಗಾಳಿಪಟ ಕ್ಕೂ ನಮಗೂ  ಸ್ವರ್ಗ ಮೂರೇ ಗೇಣು."
ಮಗಳು ಕುತೂಹಲದಿಂದ ಹೌದಾ ಅಪ್ಪ? ಎಂದಳು

ನಾನು ಮತ್ತೆ ಶುರುಮಾಡಿದೆ " ಏರ್ ಬಬಲ್ ಅಂತ ನಿನ್ನ ತಂಗಿ ಕೇಳಿದ್ದಳಲ್ಲಾ ಅದನ್ನೂ ನಾವೇ ಮಾಡಿ ಆಡಿ ನಲಿತಾ ಇದ್ವಿ"
ಎಂಗಪ್ಪಾ?
"ನಮ್ಮ ಊರಲ್ಲಿ ಅಮಟೆಕಾಯಿ ಗಿಡ ಅಂತ ಇದೆ .ಅದರ ಎಲೆ  ಒಂತರ ಔಡಲ ಗಿಡದ ಎಲೆ ತರ ಅಗಲ ಇರುತ್ತೆ. ಅದನ್ನು ಕಿತ್ತು ದೊನ್ನೆ ( ಬೌಲ್ ತರ) ಮಾಡಿಕೊಂಡು ಅದೇ ಗಿಡದ ಕಾಂಡದಿಂದ ಬರುವ ಬಿಳಿ ನೀರಿನಂತಹ ದ್ರವ ಸಂಗ್ರಹ ಮಾಡಿ ,ಒಂದು ಗರಿಕೆ ಕಡ್ಡಿಯನ್ನು ತೆಗೆದುಕೊಂಡು ಅದರ ಮುಂಬಾಗದಲ್ಲಿ ವೃತ್ತಾಕಾರದ ಗಂಟು ಹಾಕಿ, ಅದನ್ನು ಅಮಟೆಕಾಯಿ ಗಿಡದಿಂದ ಸಂಗ್ರಹಿಸಿದ ಬಿಳಿ ದ್ರಾವಣದಲ್ಲಿ ಅದ್ದಿ ಊದಿದರೆ ದೊಡ್ಡ ದೊಡ್ಡ ಬಬಲ್ ಗಳು ಮೇಲೆ ಹಾರುತ್ತಿದ್ದವು ವಾರದಲ್ಲಿ ಒಮ್ಮೆಯಾದರೂ ಹೀಗೆ ಆಡಿ ನಲಿಯುತ್ತಿದ್ದೆವು.
ಇನ್ನೂ ಹಸಿ  ತೆಂಗಿನ ಗರಿಯನ್ನು ಸೀಳಿ ಅದರಲ್ಲಿ ವಾಚು ,ಉಂಗುರ, ಪೀಪಿ ಮಾಡಿ ಆಟ ಆಡಿ ನಲಿಯುತ್ತಿದ್ದೆವು.ಗಣೇಶನ ಹಬ್ಬ ಬಂತೆಂದರೆ ಜೇಡಿ ಮಣ್ಣು ತಂದು ನಾವೇ ಗಣೇಶನ ವಿಗ್ರಹ ಮಾಡಿ ಪೂಜೆ ಮಾಡುತ್ತಿದ್ದೆವು .ಹೀಗೆ ನಾವು ಕಸದಿಂದ ರಸ ಮಾಡಿಕೊಂಡು ಆಟ ಆಡುತ್ತಿದ್ದೆವು ನೀವು ಪ್ರತಿಯೊಂದಕ್ಕೂ ಹಣ ಕೊಟ್ಟು ದುಂದುವೆಚ್ಚ ಮಾಡುತ್ತೀರಿ  ಅದರಲ್ಲೂ ನೀವು ಕೊಳ್ಳುವ ಕೆಲ ವಸ್ತುಗಳು ಪರಿಸರಕ್ಕೆ ಮಾರಕ  ಅಂತಹ ವಸ್ತುಗಳ ಬಳಕೆ ಕಡಿಮೆ ಮಾಡಬೇಕು " ಎಂದು ದೀರ್ಘವಾಗಿ ಹೇಳಿದೆ.
ಟಿಪನ್ ರೆಡಿಯಾಗಿದೆ ಬನ್ನಿ ಎಂದು ನಮ್ಮ ಮನೆಯವರು ಕರೆದಾಗ ಎದ್ದು ಕೈ ತೊಳೆದುಕೊಂಡು ತಟ್ಟೆಯ ಮುಂದೆ ಕುಳಿತೆವು.

ಬೇಸಿಗೆ ರಜದಲ್ಲಿ ನಮ್ಮ ಊರಿಗೆ ಹೋದಾಗ ಮಗಳು ನನ್ನ ಪರೀಕ್ಷೆ ಮಾಡಲು ಅಪ್ಪ   ಗಾಳಿಪಟ ,ಏರ್ ಬಬಲ್ ,ವಾಚು ಎಂದು ಕೇಳಿದಳು. ನಾನು ಮಾಡಿಕೊಟ್ಟ ಗಾಳಿಪಟ ಹಾರಿಸಿ ನಲಿದರು ಸ್ವಾಭಾವಿಕ ಜೈವಿಕ ಏರ್ ಬಬಲ್ ಕಂಡು ಆನಂದ ಪಟ್ಟರು. ತೆಂಗಿನಗರಿಯ ವಾಚು ಉಂಗುರ ಕಟ್ಟಿ ಕೊಂಡು ಖುಷಿಪಟ್ಟರು .
"ಅಪ್ಪಾ ಇದು ಪರಿಸರಕ್ಕೆ ಪೂರಕ ಕಸದಿಂದ ರಸ..... " ಎಂದು  ನನ್ನ ಎರಡನೇ ಮಗಳು  ಅನುಕರಣೆ ಮಾಡಿದಾಗ ಮನೆಯವರೆಲ್ಲ ಬಿದ್ದು ಬಿದ್ದು ನಕ್ಕೆವು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

20 ನವೆಂಬರ್ 2021

ಮಕ್ಕಳ ಬಾಲ್ಯ ಅಮೂಲ್ಯ ,ಅನುಭವಿಸಲು ಬಿಡಿ.ಕಥೆ


 

ಮಕ್ಕಳ ಬಾಲ್ಯ ಅಮೂಲ್ಯ
ಅನುಭವಿಸಲು ಬಿಡಿ. ಕಥೆ

ನಾನೀಗ ಸಮಾಜದಲ್ಲಿ ಒಂದು ಉತ್ತಮ ಸ್ಥಾನದಲ್ಲಿ ಇರುವೆ .ಸರ್ಕಾರಿ ಕೆಲಸ .ಸ್ವಂತ ಮನೆ. ಕುಟುಂಬ ಎಲ್ಲಾ ಇದೆ.ಸುಖಿ ಜೀವನ ನಡೆಸುತ್ತಿರುವೆ .ಆದರೆ ಇಂದು ದಿನಸಿ ಖರೀದಿಗಾಗಿ ಒಂದು ಹೋಲ್ಸೇಲ್  ಅಂಗಡಿಯ ಬಳಿ  ಹೋದಾಗ ನಡೆದ ಘಟನೆ ಬಹಳ ಬೇಸರ ತಂದಿತು ಜೊತೆಗೆ ಅದು ನನ್ನ ಬಾಲ್ಯದ ನೆನಪುಗಳನ್ನು ತರಿಸಿ ಇನ್ನೂ ಮನಸ್ಸು ಘಾಸಿಯಾಯಿತು.

ಆ ಬಾಲಕ ಬಹುಶಃ ಹದಿನಾಲ್ಕು ಅಥವಾ ಹದಿನೈದು ವರ್ಷ ಇರಬಹುದು. ಬೇಗ ದಿನಸಿ ಸಾಮಾನುಗಳನ್ನು ಗ್ರಾಹಕರಿಗೆ ಕೊಡಲಿಲ್ಲ ಎಂದು ಅಂಗಡಿಯ ಮಾಲೀಕ ಮನಸೋ ಇಚ್ಚೆ ಹೊಡೆದರು .ಇದನ್ನು ನೋಡಿ ಆ ಮಗುವನ್ನು ಏಕೆ ಹಾಗೆ ಹೊಡೆಯುತ್ತೀರಿ? ಎಂದು ಕೇಳಿದ್ದಕ್ಕೆ
"ಸಾರ್ ಅವನಿಗೆ ನಾನು ಕೂಲಿ ಕೊಡ್ತೀನಿ ,ಹೊಡೆಯೋ ಹಕ್ಕು ನನಗಿದೆ ಸುಮ್ನೆ ನಿಮ್ ಸಾಮಾನ್ ತಗೊಂಡ್ ಹೋಗಿ ಬಿಟ್ಟಿ ಸಲಹೆ ಬೇಡ" ಎಂದು ಸಿಟ್ಟಿನಿಂದ ಮಾತನಾಡಿದರು .

ನನಗೆ ನನ್ನ ಪೊಲೀಸ್ ಭಾಷೆ ಬಾಯಿಗೆ ಬಂದು ಬೈಯ್ಯಬೇಕು ಎಂದು ಮನಸಾದರೂ ನಾ‌ನು ಪೋಲಿಸ್ ಇನ್ಸ್ಪೆಕ್ಟರ್ ಎಂದೂ ಅವನಿಗೆ ಹೇಳಲಿಲ್ಲ ದಿನಸಿಯ ಹಣ ಕೊಟ್ಟು ಹಿಂತಿರುಗಿದೆ.

ಟಿಪನ್ ಕೊಡುವಾಗ "ಯಾಕ್ರಿ ಇವತ್ತು ಒಂತರ  ಡಲ್ ಆಗಿ  ಇದಿರಾ ಹುಷಾರಿಲ್ಲ ಅಂದ್ರೆ ರಜಾ ಹಾಕಿ"  ಎಂದು ನನ್ನಾಕೆ ಕೇಳಿದಳು " ಏನೂ ಇಲ್ಲ ಕಣೆ ಯಾಕೋ ಎರಡು ದಿನದಿಂದ ಮಳೆ ಬೀಳ್ತಾ ಇದೆಯಲ್ಲ, ಥಂಡಿ ಗಾಳಿ ಅದಕ್ಕೆ ಅಷ್ಟೇ " ಎಂದು ಸ್ಟೇಷನ್ ಕಡೆ ಪ್ರಯಾಣ ಬೆಳೆಸಿದೆ.

"ಸರ್ ನಿನ್ನೆ ಮೊಬೈಲ್ ಅಂಗಡಿ ಕಳ್ಳತನ ಕೇಸ್ ನಲ್ಲಿ ಮೂವರ್ನ ಅರೆಸ್ಟ್ ಮಾಡಿದಿವಿ ಕರ್ಕೊಂಬರ್ಲಾ" ಎಂದು  ಜಬಿಉಲ್ಲಾ ಕೇಳಿದಾಗ
" ಬ್ಯಾಡ ಜಬಿ ಆಮೇಲೆ ಕರ್ಕೊಂಬಾ " ಎಂದು ಹೇಳಿ ತಿರುಗುವ ವೀಲ್ ಚೇರ್ ನಲ್ಲಿ ಒಮ್ಮೆ ತಿರುಗಿದೆ.ನನ್ನ ನೆನಪೂ ತಿರುಗುತ್ತಾ ನನ್ನ ಬಾಲ್ಯ ಕ್ಕೆ ಕರೆದುಕೊಂಡು ಹೋಯಿತು.

ಐದಾರು ಎಕರೆ ಹೊಲವಿದ್ದರೂ ದುಡಿಯುವ ಅಭ್ಯಾಸ ಮರೆತ ಅಪ್ಪ ಇರೋ ಬರೋ ಚಟಗಳನ್ನು ಹತ್ತಿಸಿಕೊಂಡು ಊರ ತುಂಬ ಸುತ್ತುವ ಖಾಯಂ ಕೆಲಸ ಮಾಡುತ್ತಿದ್ದರು. ಆರು ಮಕ್ಕಳಿಗೆ ತಂದೆಯಾಗಿದ್ದುದೇ ಅವರ ಮಹಾನ್ ಸಾಧನೆ .ಅಮ್ಮ  ಕೂಲಿನಾಲಿ ಮಾಡಿ ನಮ್ಮ ಸಾಕಿದರು ಕೊನೆಯ ಮಗನಾದ ನನ್ನ ಮೇಲೆ ಸ್ವಲ್ಪ ಜಾಸ್ತಿ ಪ್ರೀತಿ ಎಂದೇ ಹೇಳಬೇಕು .
" ಏಯ್ ರವಿ ನೀನು ಅರಕಲಗೂಡು ಗೆ ಹೋಗು ಅಲ್ಲೇ ಓದು ಅಲ್ಲಿ ಸ್ಕೂಲ್ ಚೆನ್ನಾಗೈತಂತೆ  , ನಿಮ್ ಮಾವ ಅಜ್ಜಿ ಅತ್ತೆ ಚೆನ್ನಾಗಿ ನೋಡ್ಕಂತಾರೆ .ನೀನು ಓದಿ ಬುದ್ದಿವಂತ ಆಗ್ತಿಯಾ ಕಣಪ್ಪ ಈ ಊರಾಗೆ ಸ್ಕೂಲ್ ಇಲ್ಲ , ಪಕ್ಕದ ಊರಿಗೆ ಹೋಗಬೇಕು   ನಿಮ್ ಅಣ್ಣಾರು ಅಕ್ಕಾರು  ಯಾಕೋ ಯಾರೂ ಸರಿಯಾಗಿ ಓದಾ ಲಕ್ಷಣ ಕಾಣ್ತಾ ಇಲ್ಲ. ನೀನು ಸುಮ್ನೆ ಅಜ್ಜಿ ಮನೆಗೆ ಹೋಗಿ ಓದಪ್ಪ" ಎಂದು ಅಮ್ಮ ಹೇಳಿದರು ಅಮ್ಮನ ಮಾತಿನಂತೆ ಅಜ್ಜಿಯ ಊರಿಗೆ ಬಂದೆ.

ಬಂದ ಹೊಸತರಲ್ಲಿ ಮಾವ ಮತ್ತು ಮಾವನ ಹೆಂಡತಿ ಚೆನ್ನಾಗಿ ನೋಡಿಕೊಂಡರು ಕ್ರಮೇಣವಾಗಿ ನಾನು ಓದುವುದಕ್ಕಿಂತ ಮನೆ ಕೆಲಸಗಳೆ ಹೆಚ್ಚಾದವು.
ಬೆಳಿಗ್ಗೆ ಐದು ಗಂಟೆಗೆ ಎದ್ದು ಸುಮಾರು ನಾಲ್ಕೈದು ಎಮ್ಮೆ ಒಂದು ಜೊತೆ ಎತ್ತುಗಳ ಸಗಣಿ ಬಾಸಿ ,  ಕಸ ಹೊಡೆದು ತಿಪ್ಪೆಗೆ ಹೊತ್ತು ಹಾಕಿ, ಕಾಫಿ ಕುಡಿದು ಹೊಲಕ್ಕೆ ಹೋಗಿ ಹಸಿ ಹುಲ್ಲು ಕಿತ್ತು ತಲೆಯ ಮೇಲೆ ಹೊತ್ತು ತಂದು ಮನೆಗೆ ಹಾಕಿ ಮುಖ ತೊಳೆದು ಊಟ ಮಾಡಿ ಸಮಯ ನೋಡಿದರೆ ಒಂಭತ್ತೂವರೆ ಆಗಿರುತ್ತಿತ್ತು. ಗಬ ಗಬ ಸ್ವಲ್ಪ ತಿಂದು ಓಡಿ ಶಾಲೆ ಸೇರಿದಾಗ ಬೆಲ್ ಬಾರಿಸಿ ಶಾಲಾ ಪ್ರಾರ್ಥನೆ ಶುರುವಾಗಿರುತ್ತಿತ್ತು ಪೀಟಿ ಮೇಷ್ಟ್ರು ಕಾಟಪ್ಪ ಕಣ್ಣಲ್ಲೇ ವಾರ್ನಿಂಗ್ ನೀಡುತ್ತಿದ್ದರು.

ಶಾಲೆಯಲ್ಲಿ ಪಾಠ ಪ್ರವಚನ ಕೇಳಿ ಸಂಜೆ ಮನೆ ತಲುಪಿದ ತಕ್ಷಣ ದನಗಳಿಗೆ ಹುಲ್ಲು ಹಾಕುವುದು ಸೇದೋಬಾವಿಯಿಂದ ನೀರು ತರುವುದು ಅದೂ ಇದು ಕೆಲಸ ಮುಗಿಯೋ ಹೊತ್ತಿಗೆ ರಾತ್ರಿ ಎಂಟು ಗಂಟೆ ಆಗ ಪುಸ್ತಕ ಹಿಡಿದು ಕುಳಿತುಕೊಂಡ ಸ್ವಲ್ಪ ಹೊತ್ತಿಗೆ ಊಟಕ್ಕೆ ಕರೆ ಬರುತ್ತಿತ್ತು .ಉಂಡ ಮೇಲೆ ನಿದ್ರಾ ದೇವಿಯ ಆಲಿಂಗನಕ್ಕೆ ಮರುಳಾಗುತ್ತಿದ್ದೆ.

ಇದು ದಿನನಿತ್ಯದ ದಿನಚರಿ ಅಮ್ಮ ಒಮ್ಮೆ ನನ್ನ ನೋಡಲು ಮಾವನ ಮನೆಗೆ ಬಂದಾಗ ನನ್ನ ಪರಿಸ್ಥಿತಿ ನೋಡಿ ಮನದಲ್ಲೇ ನೊಂದುಕೊಂಡಿದ್ದನ್ನು ಗಮನಿಸಿದೆ .ಇಬ್ಬರ ಕಣ್ಣಲ್ಲೂ ನೀರು ರೆಪ್ಪೆಯವರೆಗೂ ಬಂದರೂ ತಡೆಹಿಡಿದೆವು ಕಾರಣ ನಮ್ಮ ಊರಲ್ಲಿನ ನಮ್ಮ ಮನೆಯ ಪರಿಸ್ಥಿತಿ.

ಹೀಗೆ ಅರ್ಧವಾರ್ಷಿಕ ಪರೀಕ್ಷೆ ಮುಗಿದು ನಮ್ಮ ಊರಿಗೆ ಹೋಗಲು ಕಾತರನಾಗಿದ್ದೆ ಮಾವ ಬೇಡ ಇಲ್ಲೇ ಇರು ಅಂದರು ಒಲ್ಲದ ಮನಸ್ಸಿನಿಂದ ಅಲ್ಲೇ ಉಳಿದೆ .ಅರ್ಧವಾರ್ಷಿಕ ಪರೀಕ್ಷೆ ಫಲಿತಾಂಶ ನೋಡಿ  ನನಗೇನೂ ಶಾಕ್ ಆಗಲಿಲ್ಲ ಕಾರಣ ನಾನು ಇಲ್ಲಿ ಓದಿದ್ದಕ್ಕಿಂತ ಮನೆಯಲ್ಲಿ ಜೀತದಂತೆ ಕೆಲಸ ಮಾಡಿದ್ದೆ ಜಾಸ್ತಿ. ಅಲ್ಲಿ ಇಡೀ ತರಗತಿಗೆ ಮೊದಲು ಬರುತ್ತಿದ್ದವನು   ಇಲ್ಲಿ ಕನ್ನಡ ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ಪೇಲಾಗಿದ್ದೆ !
ಇದನ್ನು ಅಮ್ಮ ಮಾವನವರಿಗೆ ಹೇಳಲಿಲ್ಲ ಕೆಲಸ ಮಾಡುತ್ತಲೆ ಮುಂದಿನ ವಾರ್ಷಿಕ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ನಿಶ್ಚಯ ಮಾಡಿಕೊಂಡು ಓದಿದ ಫಲ ಒಂಭತ್ತನೆಯ ತರಗತಿಯನ್ನು ಪಾಸು ಮಾಡಿದ್ದೆ.

"ಅಮ್ಮ ನಾನು ಬೇರೆ ಊರಲ್ಲಿ ಓದುವೆ ಇಲ್ಲಿ ಬೇಡ " ಎಂದಾಗ ಮಾವನವರು ವಿರೋಧ ಮಾಡಿದರೂ ಅಮ್ಮ ನನ್ನ ಮಾತು ಮನ್ನಿಸಿ
ತಿಪ್ಪೇಸ್ವಾಮಣ್ಣನವರ ಸಲಹೆಯ ಮೇರೆಗೆ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಓದಲು ಸೇರಿಸಿದರು ಅಲ್ಲಿಂದ ನನ್ನ ಜೀವನದ ದಿಕ್ಕೇ ಬದಲಾಯಿತು.

"ಸಾರ್ ಯಾರೊ ಅಂಗಡಿ ಓನರ್ ಬಂದಿದಾರೆ ಒಳಕ್ಕೆ ಕಳಿಸ್ಲಾ?" ಜಬಿ ಕೇಳಿದ.
ಕಳಿಸು ಎಂದೆ
ನಮಸ್ಕಾರ ಮಾಡುತ್ತಾ ಒಳಗೆ ಬಂದ ಅಂಗಡಿ ಮಾಲೀಕ ನನ್ನ ನೋಡಿ  ಶಾಕ್ ಆದ
"ಸಾರ್ ನೀವೇ  ಸಾಹೇಬರು ಅಂತ ಗೊತ್ತಾಗ್ದೇ ಬೆಳಿಗ್ಗೆ ಏನೇನೊ ಅಂದ್ ಬಿಟ್ಟೆ ಕ್ಷಮಿಸಿ ಸಾರ್ ಕಾಲಿಗ್ ಬೀಳ್ತೀನಿ"

"ರೀ ಆ ಓದೋಕ್ ಹೋಗೋ ಹುಡ್ಗನ್ನ ಕೆಲಸಕ್ಕೆ ಇಟ್ಕೊಂಡಿರೋದೇ ತಪ್ ಅಂತಾದ್ರಲ್ಲಿ ಅಂಗ್ ಹೊಡಿತೀರಲ್ಲ ನಾಚ್ಕೆ ಆಗಲ್ವ ನಿಮಗೆ ? ಮಕ್ಕಳ ಬಾಲ್ಯ ಅಮೂಲ್ಯವಾದುದು ಕಣ್ರೀ , ಅದನ್ನು ಅನುಭವಿಸೋಕೆ ಬಿಡಿ. ಯಾಕೆ ಹಣದ ಆಸೆಗೆ ಮೃಗ ಆಗ್ತೀರಾ" ಎಂದು ಹೇಳುವಾಗ ಯಾಕೋ ಗದ್ಗದಿತನಾಗಿದ್ದು ನನ್ನ ಗಮನಕ್ಕೆ ಬಂತು ಅಂಗಡಿ ಮಾಲೀಕನೂ ಗಮನಿಸಿದ.
" ಕ್ಷಮಿಸಿ ಸಾರ್,  ತಪ್ಪಾತು ಸರ್ ನಾನು ಬ್ಯಾಡ ಅಂದ್ರು ಅವರ್ ಅಪ್ಪ ಕೆಲಸಕ್ ಬಿಟ್ ಹೋದ ಸರ್ "
" ಬಾಲಕಾರ್ಮಿಕ ಕಾಯ್ದೆ ಪ್ರಕಾರ ನಿನ್ನ ಮತ್ತು ಅವರಪ್ಪನ್ ಒಳಾಕ ಹಾಕ್ತೀನಿ ಆವಾಗ ಬುದ್ದಿ ಬರುತ್ತೆ"
" ಇಲ್ಲ ಸರ್ ನಾಳೆಯಿಂದ ನಾನು ಆ ಹುಡ್ಗನ್ನ ಅಲ್ಲ ಯಾರೇ ಮಕ್ಕಳನ್ನು ಅಂಗಡಿ‌ ಕೆಲಸಕ್ಕೆ ಇಟ್ಕೊಳಲ್ಲ " ಎಂದು ನಡುಗಿದರು ಆ ಅಂಗಡಿ ಮಾಲೀಕ.
ಅಷ್ಟ್ ಮಾಡ್ರಿ   ನಡೀರಿ ಮನೆಗೆ ಅಂತ ರೇಗಿದೆ. ಅವರು ಕಾಣೆಯಾದರು.

"ಸರ್ ಆ ಮೊಬೈಲ್ ಕಳ್ರು......."
ಎಂದು ಜಬಿ ಹೇಳಿದಾಗ ಆಮೇಲೆ  ನೋಡೋಣ ಎಂದು ಎದ್ದು ಮನೆಯ ಕಡೆ ಊಟಕ್ಕೆ ಹೊರಟೆ....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.