19 ನವೆಂಬರ್ 2021

ನಮ್ಮ ದಿನ ( ಪುರುಷರ ದಿನದ ಪ್ರಯುಕ್ತ ಕವನ)



*ನಮ್ಮ ದಿನ*


ದಿನವೂ ನಾನು ಕೆಲಸ

ಮಾಡುತ್ತಲೇ ಇರುವೆನು

ಅದು, ಇದು ಎಂದೂ

ಯಾವುದೇ ಬೇಧವಿಲ್ಲದೇ 

ಎಂದಿಗೂ ಕೆಲಸ 

ಮಾಡುತ್ತಲೇ ಇರುವೆ.


ಇಂದು ಮಾತ್ರ ನಾನು

ಬೇಗ ಎದ್ದು ಹಾಲು ತರುವುದಿಲ್ಲ.

ಟೀ ಮಾಡುವುದಿಲ್ಲ ಅಷ್ಟೇ ಏಕೆ

ಅಡಿಗೆಯನೂ ಮಾಡುವುದಿಲ್ಲ.


ಪಾತ್ರೆಗಳನ್ನು ತೊಳೆಯುವುದಿಲ್ಲ

ಬಟ್ಟೆಗಳನ್ನು ಒಗೆಯುವುದಿಲ್ಲ.

ನೆಲವ ಒರೆಸುವುದಿಲ್ಲ ಒಟ್ಟಾರೆ

ಇಂದು ನಾನು ಬೇರೆ ಕೆಲಸಗಳನ್ನು

ಮಾಡುವುದೇ ಇಲ್ಲ.


ಹಾಗೇನಾದರೂ ಯಾರಾದರೂ 

ಕೆಲಸವನ್ನು ಮಾಡಲೇಬೇಕು

ಎಂದು ಒತ್ತಾಯ ಮಾಡಿದರೆ

ನನ್ನವರು ನನ್ನ ಸಹಾಯಕ್ಕೆ

ಬರುವರು .ಏಕೆಂದರೆ ಇಂದು

ನಮ್ಮ ದಿನ !

ಅಂತರರಾಷ್ಟ್ರೀಯ ಪುರುಷರ ದಿನ!


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529

 

ವ್ಯತ್ಯಾಸ. ಹನಿಗವನ



#ವ್ಯತ್ಯಾಸ 



ವಾಸ್ತವ 

ಅವಿನಾಶಿ

ಸಾರ್ವಕಾಲಿಕ

ಒಳಿತು ಮಾಡುವುದೇ ಸತ್ಯ|

ಅವಾಸ್ತವ

ವಿನಾಶಿ

ಕ್ಷಣಿಕ 

ಕೆಡುಕು ಮಾಡುವುದೇ ಮಿಥ್ಯ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

 

ಚಿನ್ನದ ಮಾಂಗಲ್ಯ ಸರ. ರೈಲು ಪಯಣದ ಅನುಭವ ಕಥನ .


 



ಚಿನ್ನದ ಮಾಂಗಲ್ಯ ಸರ .


  ಹದಿನೈದು ದಿನಗಳ ಉತ್ತರ ಭಾರತದ ಪ್ರವಾಸ ಮುಗಿಸಿ ಸಂತಸದಿಂದ ದೆಹಲಿಯ ರೈಲ್ವೇ ನಿಲ್ದಾಣದಲ್ಲಿ  ರಾಜಧಾನಿ ಎಕ್ಸ್ಪ್ರೆಸ್  ರೈಲು ಹತ್ತಿ ಬೆಂಗಳೂರಿನ ಕಡೆ ಹೊರಡಲು  ಸಿದ್ದರಾದೆವು. 

ರಾತ್ರಿ ಒಂಭತ್ತೂ ಒಂಭತ್ತೂವರೆ ಗಂಟೆ ಆಗಿರಬಹುದು. ನಾವೆಲ್ಲರೂ ನಮ್ಮ ಲಗೇಜ್ ಗಳನ್ನು ಸರಿಯಾದ ಜಾಗಗಳಲ್ಲಿ ಜೋಡಿಸಿಟ್ಟು ಮಲಗಿಕೊಳ್ಳಲು ಯೋಚಿಸುತ್ತಿದ್ದೆವು ಇನ್ನೂ ಕೆಲವರು ಆಸನಗಳಲ್ಲಿ  ಕುಳಿತು ಮಾತನಾಡುತ್ತಿದ್ದರು.

ರೈಲು ನಿಧಾನವಾಗಿ ಚಲಿಸುತ್ತಿರುವಾಗ ಇದ್ದಕ್ಕಿದ್ದಂತೆ ಪಕ್ಕದ ಭೋಗಿಯಲ್ಲಿ ಯಾರೊ ಕಿರುಚಿದ ಸದ್ದಾಯಿತು .ನಾವು ಹೋಗಿ ನೋಡಿದರೆ ಅವರು ನಮ್ಮ ಜೊತೆಯಲ್ಲಿ ಪ್ರವಾಸಕ್ಕೆ ಬಂದವರು. ಗಾಬರಿಯಿಂದ ಅವರು ಕೈಗಳನ್ನು ಎದೆಯಮೇಲೆ ಇಟ್ಟುಕೊಂಡು ನಡುಗುತ್ತಿದ್ದರು ಅವರ ಯಜಮಾನರು ಆ ಮಹಿಳೆಯನ್ನು ಸಂತೈಸುತ್ತಿದ್ದರು. ಏನಾಯಿತೆಂದು ಭಯಮಿಶ್ರಿತ ಕುತೂಹಲದಿಂದ ಕೇಳಿದೆವು." ರೈಲು ನಿಧಾನವಾಗಿ ಚಲಿಸುತ್ತಿದ್ದಂತೆ ಪ್ಲಾಟ್ ಫಾರ್ಮ್ ಮೇಲಿದ್ದ ಒಬ್ಬ ದಡಿಯ  ಕಿಟಕಿಯ ಮೂಲಕ  ಕೈಹಾಕಿ    ನಮ್ಮವರ ಬಂಗಾರದ ಮಾಂಗಲ್ಯ ಸರಕ್ಕೆ ಕೈಹಾಕಿ ಜಗ್ಗಿದ ನಮ್ಮವರು  ಮಾಂಗಲ್ಯ ಸರವನ್ನು ಎರಡೂ ಕೈಯಲ್ಲಿ ಬಿಗಿಯಾಗಿ ಹಿಡಿದುಕೊಂಡು ಕಿರುಚಿಕೊಂಡರು. ರೈಲಿನ ವೇಗ ಹೆಚ್ಚಾಯಿತು ಪ್ಲಾಟ್ ಪಾರ್ಮ್ ನಲ್ಲಿ ಓಡುತ್ತಾ ಆ ದಡಿಯ ಕತ್ತಲಲಿ ಮಾಯವಾದ .ನಮ್ಮವರು ಗಾಬರಿಯಿಂದ ಮಾಂಗಲ್ಯ ಸರ ನೋಡಿಕೊಂಡರು. ಮಾಂಗಲ್ಯ ಸರ ಹರಿದಿತ್ತು .ಆದರೆ ಸಣ್ಣ ತುಣುಕೊಂದು ಆ ಕಳ್ಳನ ಕೈ ಸೇರಿದ್ದು ಗಮನಕ್ಕೆ ಬಂತು .ಅಷ್ಟರಲ್ಲಿ ನೀವು ಬಂದಿರಿ" ಎಂದು ನಡೆದ ಘಟನೆಯನ್ನು ವಿವರಿಸಿದರು ಸೀನಪ್ಪನವರು.


ನಾವೆಲ್ಲರೂ ನಿಟ್ಟುಸಿರು ಬಿಟ್ಟು ಅವರಿಗೆ ಸಮಾಧಾನ ಮಾಡಿ ಧೈರ್ಯ ಹೇಳುವಾಗ ರೈಲ್ವೆ ಪೋಲೀಸ್ ಬಂದು" ಕಿಟಕಿಯ ಪಕ್ಕ ಕುಳಿತಾಗ ಜಾಗರೂಕತೆಯಿಂದ ಇರಬೇಕು. ರಾತ್ರಿ ವೇಳೆಯಲ್ಲಿ ಕಿಟಕಿಯ ಬಾಗಿಲು ಮುಚ್ಚಿ, ಅಪರಿಚಿತರೊಂದಿಗೆ ಹುಷಾರಾಗಿರಿ, ನಿಮ್ಮ ಲಗೇಜ್ ಗಳನ್ನು ಸರಪಣಿ ಮತ್ತು ಬೀಗದಿಂದ ಬಂದಿಸಿ. " ಎಂದು ಹಿಂದಿಯಲ್ಲಿ ಸಲಹೆ ಸೂಚನೆಗಳನ್ನು ನೀಡಿ ಹೊರಟರು. 


ನಾವು ನಮ್ಮ ಸೀಟುಗಳಿಗೆ ಹೋಗಿ ಮಲಗಿಕೊಂಡೆವು ಪದೇ ಪದೆ ರೈಲ್ವೆ ಪೋಲೀಸ್ ಹೇಳಿದ ಮಾತುಗಳು ನೆನಪಾಗಿ ನನ್ನ ಸೂಟ್ ಕೇಸ್ ಗೆ ಬೀಗ ಹಾಕಿ ಸರಪಳಿ ಬಿಗಿದಿದ್ದರೂ ಮತ್ತೆ ಮತ್ತೆ ಎದ್ದು ಅದನ್ನೇ ನೋಡುತ್ತಿದ್ದೆ. ರಾತ್ರಿ ಒಂದು ಗಂಟೆಯಾದರೂ ನಿದ್ದೆ ಬರಲಿಲ್ಲ .ರೈಲಿನಲ್ಲಿರುವವರೆಲ್ಲ ಮಲಗಿದ್ದರು ರೈಲು ಕತ್ತಲೆಯನ್ನು ಸೀಳಿಕೊಂಡು ಬೆಂಗಳೂರಿನ ಕಡೆ ಇನ್ನೂ ವೇಗವಾಗಿ ಓಡುತ್ತಿತ್ತು.



ಸಿಹಿಜೀವಿ 

ಸಿ ಜಿ ವೆಂಕಟೇಶ್ವರ.

17 ನವೆಂಬರ್ 2021

ಕೃತಜ್ಞ .ಹನಿಗವನ

 


*ಕೃತಜ್ಞ*  ಹನಿಗವನ



ನನ್ನ ಬದುಕಿಗೆ ತಿರುವು

ನೀಡಿದ ಮಹನೀಯರು 

ನನ್ನ ಜೀವನ ಬದಲಿಸಿದ

ಗುರುಗಳು ಮಾರ್ಗದರ್ಶಕರು

 ಒಬ್ಬಿಬ್ಬರಲ್ಲ|

ಪ್ರತಿದಿನವೂ ಕಲಿಯುತಿರುವೆ

ಪ್ರತಿದಿನವೂ ಕಲಿಸುತಿಹರು

ನನ್ನ ಬದುಕಿಗೆ ತಿರುವು

ನೀಡುತ್ತಲೇ ಇರುವರು

ಅವರೆಲ್ಲರನ್ನೂ ನಾನು

ಪ್ರತಿದಿನವೂ ನೆನೆಯದೇ 

ಇರುವುದಿಲ್ಲ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ