07 ಅಕ್ಟೋಬರ್ 2021

ಕೊರೋನ ವೈರಸ್ .ಪ್ರಬಂಧ .Corona virus .essay.


 



  ಕೊರೊನಾವೈರಸ್ 

ಪ್ರಬಂಧ


ಪ್ಲೇಗ್ ನಂತಹ ರೋಗದಿಂದ ವಿಶ್ವದ ಕೆಲ ರಾಷ್ಟ್ರಗಳ ಲಕ್ಷಾಂತರ ಜನ ಮರಣ ಹೊಂದಿದ ಬಗ್ಗೆ ಕೇಳಿದ್ದೆವು .ಈಗ ಕರೋನ ಎಂಬ ರೋಗ ಇಡೀ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಹರಡಿ ಕೋಟ್ಯಂತರ ಜನರ ಜೀವ ತೆಗೆದು ಹಲವರ ಜೀವನವನ್ನು ಕಷ್ಟಗಳ ಕೂಪಕ್ಕೆ ತಳ್ಳಿರುವುದನ್ನು ನಾವು ಈಗಲೂ ನೋಡುತ್ತಿದ್ದೇವೆ.


ಸಾಮಾನ್ಯವಾಗಿ ಕೊರೋನಾ ವೈರಸ್ ಅಥವಾ  ಕೋವಿಡ್ -19 ಎಂದು ಕರೆಯಲ್ಪಡುವ ಕರೋನಾ ವೈರಸ್ ಮಾನವರಲ್ಲಿ ಉಸಿರಾಟದ ವ್ಯವಸ್ಥೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಿ  ಅನಾರೋಗ್ಯವನ್ನು ಉಂಟುಮಾಡುವ ಸಾಂಕ್ರಾಮಿಕ ರೋಗವಾಗಿದೆ.  ಕೋವಿಡ್ 19 ಎಂಬ ಪದವು "ನಾವೆಲ್ ಕೊರೊನಾ ವೈರಸ್  2019" ದಿಂದ ಪಡೆದ ಒಂದು ಸಂಕ್ಷಿಪ್ತ ರೂಪವಾಗಿದೆ.  ಕೊರೊನಾ ವೈರಸ್ ನಮ್ಮ ದೈನಂದಿನ ಜೀವನದ ಮೇಲೆ ಬಹಳ ದುಷ್ಪರಿಣಾಮಗಳನ್ನು ಉಂಟುಮಾಡಿದೆ. ಈ ರೋಗದ ಪರಿಣಾಮವಾಗಿ ಪ್ರಪಂಚದಲ್ಲಿ ಆದ ಸಾವು ನೋವುಗಳು ಅಪಾರ  . ಇದರ ತೀವ್ರತೆ ಈಗ ಸ್ವಲ್ಪ ಕಡಿಮೆಯಾಗಿದೆ  ಬಹಳಷ್ಟು ಜನ ಈಗಲೂ ಈ ರೋಗದಿಂದ ಬಳಲುತ್ತಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮತ್ತು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.



 ಕೊರೊನಾ ವೈರಸ್  ಪ್ರಪಂಚದ ಎಲ್ಲ ದೇಶಗಳ  ಆರ್ಥಿಕ ಮತ್ತು ಸಾಮಾಜಿಕ ಜೀವನದ  ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ . ಇದು ಪ್ರಾಥಮಿಕವಾಗಿ ವ್ಯಕ್ತಿಯ ಸಂಪರ್ಕದ ಮೂಲಕ ಹರಡುತ್ತಿದೆ. ಮೊದಲಿಗೆ  ಇದು 6 ಅಡಿ ಒಳಗೆ ನಿಕಟ ಸಂಪರ್ಕದಲ್ಲಿರುವವರಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ ಎಂದು ದೃಢಪಟ್ಟಿತ್ತು ,ಕ್ರಮೇಣವಾಗಿ ಹತ್ತು ಅಡಿಗಳ ವರೆಗೆ ಹರಡಬಹುದು ಎಂದು ಹೇಳಲಾಗುತ್ತದೆ.  


ಕರೋನದ ಮೂಲ ಯಾವುದು?


ಕೊರೊನಾವೈರಸ್ ನ  ಮೂಲದ ಬಗ್ಗೆ ಈಗಲೂ ವಾದ ವಿವಾದಗಳು ಹಬ್ಬುತ್ತಿವೆ .

 ಕೊರೊನಾವೈರಸ್ ( COVID-19) ಅನ್ನು ಚೀನಾದ ವುಹಾನ್ ನಗರದಲ್ಲಿ ಡಿಸೆಂಬರ್ 2019 ರಲ್ಲಿ ಮೊದಲ ಬಾರಿಗೆ ಗುರುತಿಸಲಾಯಿತು. ಹಾಗಾಗಿ ಚೀನಾ ದೇಶದಲ್ಲಿ ಕೊರೊನ ಉಗಮವಾಗಿದೆ ಈ ವೈರಸ್ ಸೃಷ್ಟಿಕರ್ತ ಚೀನಾ  ಎಂದು ಜಗತ್ತಿನ ಬಹುತೇಕ ರಾಷ್ಟ್ರಗಳು ಆಪಾದನೆ ಮಾಡಿವೆ .ಆದರೆ ಚೀನಾ ಈ ಆಪಾದನೆಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕಿದೆ.

 ಮಾರ್ಚ್ 2020 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕರೋನಾ ವೈರಸ್ ನ್ನು  ವಿಶ್ವದ ಸಾಂಕ್ರಾಮಿಕ ಎಂದು ಘೋಷಿಸಿ ಸದಸ್ಯ ದೇಶಗಳು ಅಗತ್ಯ ಕ್ರಮ ಕೈಗೊಳ್ಳಲು ಮಾರ್ಗದರ್ಶನ ನೀಡಿತು.



 ಕೊರೋನ ದ ಲಕ್ಷಣಗಳೇನು?


 ಕೊರೋನ ಕಾಣಿಸಿಕೊಂಡ ಆರಂಭದ ದಿನಗಳಲ್ಲಿ  

 ಈ ವೈರಲ್ ಸೋಂಕಿನ ಸಾಮಾನ್ಯ ಲಕ್ಷಣಗಳು ಜ್ವರ, ಶೀತ, ಕೆಮ್ಮು, ಮೂಳೆ ನೋವು ಮತ್ತು ಉಸಿರಾಟದ ಸಮಸ್ಯೆಗಳು.ಪ್ರಧಾನ ಲಕ್ಷಣಗಳಾಗಿದ್ದವು. ಇದರ ಜೊತೆಗೆ ಕೊರೊನಾ ವೈರಸ್ ರೋಗಿಗಳಲ್ಲಿ ಸುಸ್ತು, ಗಂಟಲು ನೋವು, ಸ್ನಾಯು ನೋವು, ವಾಸನೆ ಅಥವಾ ರುಚಿಯ ನಷ್ಟದಂತಹ ಲಕ್ಷಣಗಳನ್ನು ಕಾಣಬಹುದಾಗಿತ್ತು.

ಆದರೆ ಕ್ರಮೇಣವಾಗಿ ರೂಪಂತರ ಹೊಂದಿದ ಕರೋನೋ ವೈರಸ್ ,ಡೆಲ್ಟಾ ,ಆಲ್ಪಾ, ಬೀಟಾ ಮುಂತಾದ ರೂಪಾಂತರಿ ವೈರಸ್ ಸೋಂಕಿತರಿಗೆ ಬೇದಿಯಾಗುವುದು ತಲೆಸುತ್ತುವುದು ಮುಂತಾದ ಲಕ್ಷಣಗಳನ್ನು ಕಾಣಬಹುದು. ಕೆಲವೊಮ್ಮೆ ಯಾವುದೇ ಲಕ್ಷಣಗಳು ಇಲ್ಲದ ಕೊರೊನಾ ರೋಗಿಗಳನ್ನು ಸಹ ಕಾಣಬಹುದು.


 ಕೊರೋನ  ತಡೆಗಟ್ಟುವಿಕೆ


ಕೊರೊನಾವೈರಸ್ ವಿರುದ್ಧ ಹೋರಾಡಲು ಈ ಕೆಳಕಂಡ ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಂಡು ಪಾಲಿಸಬೇಕು.

 1  ಎಲ್ಲಾ ಕಡೆ   ವ್ಯಾಪಕವಾಗಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು

 2 ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ನಿಯಮಿತವಾಗಿ ಕೈ ತೊಳೆಯುತ್ತಿರಬೇಕು.

3  ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. 

4 ಕಡ್ಡಾಯವಾಗಿ ಎಲ್ಲರೂ  ಮಾಸ್ಕ್ ಧರಿಸಬೇಕು.

 5 ಅನಗತ್ಯವಾಗಿ ಮನೆಯಿಂದ ಹೊರಗೆ ಬಂದು ಗುಂಪುಗೂಡಬಾರದು.

6 ರೋಗ ನಿರೋಧಕ ಶಕ್ತಿಯ ವರ್ಧಿಸುವ ಆಹಾರ ಸೇವಿಸಬೇಕು. 

7 ಸಮಯಕ್ಕೆ ಸರಿಯಾಗಿ ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳಬೇಕು

ಈ ನಿಟ್ಟಿನಲ್ಲಿ

 ಕೊರೊನಾ ವೈರಸ್ ನಿಂದಾಗಿ, ಪ್ರಧಾನ ಮಂತ್ರಿಗಳಾದ  ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರವು 23 ಮಾರ್ಚ್ 2020 ರಂದು 21 ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಿದರು. ಇದರ ಜೊತೆಯಲ್ಲಿ ಕೊರೊನಾವೈರಸ್ ನ  ಎರಡನೇ ಅಲೆ ಬಂದಾಗ ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾ ಆಡಳಿತಗಳು ಲಾಕ್ಡೌನ್ ಅಥವಾ ಹಲವಾರು ನಿರ್ಬಂಧಗಳನ್ನು ಹೇರಿದವು    ಇದರ ಪರಿಣಾಮವಾಗಿ ವೈರಸ್ ನ ಅಬ್ಬರ ಸ್ವಲ್ಪ ಕಡಿಮೆಯಾಯಿತು.


 ಕೊರೋನ ದ ಪರಿಣಾಮಗಳು


ಕೊರೊನಾವೈರಸ್ ವ್ಯಕ್ತಿ, ರಾಜ್ಯ ,ರಾಷ್ಟ್ರ ,ಮತ್ತು ವಿಶ್ವದ ಮೇಲೆ ಅಲ್ಪಕಾಲೀನ ಮತ್ತು ದೀರ್ಘಕಾಲದ ದುಷ್ಪರಿಣಾಮಗಳನ್ನು ಬೀರಿದ್ದು ನಮಗೆಲ್ಲ ತಿಳಿದಿದೆ.


  ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ವಲಸೆ ಕಾರ್ಮಿಕರು ಬಹು ಕಷ್ಟಗಳನ್ನು ಎದುರಿಸಿದ್ದಾರೆ.  ಲಾಕ್ಡೌನ್ನಿಂದಾಗಿ ಕಾರ್ಖಾನೆಗಳು ಮತ್ತು ಕೆಲಸದ ಸ್ಥಳಗಳನ್ನು ಮುಚ್ಚುವುದರೊಂದಿಗೆ, ಲಕ್ಷಾಂತರ ವಲಸೆ ಕಾರ್ಮಿಕರು ಆದಾಯದ ನಷ್ಟ, ಆಹಾರದ ಕೊರತೆ ಮತ್ತು ಅನಿಶ್ಚಿತತೆಯನ್ನು ಎದುರಿಸಬೇಕಾಯಿತು.


 ಔಷಧ ಉದ್ಯಮ, ವಿದ್ಯುತ್ ವಲಯ, ಶಿಕ್ಷಣ ಸಂಸ್ಥೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಉದ್ಯಮಗಳು ಮತ್ತು ವಲಯಗಳು ಈ ರೋಗದ  ಕಾರಣದಿಂದ ಬಹಳ ನಷ್ಟ ಅನುಭವಿಸಿದವು. ಈ ಕೊರೊನಾವೈರಸ್ ನಾಗರಿಕರ ದೈನಂದಿನ ಜೀವನದ ಮೇಲೆ ಹಾಗೂ ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮಗಳನ್ನು ಉಂಟುಮಾಡಿದೆ.


ಕೊರೊನಾ ಸಂಕಷ್ಟ ಕಾಲದಲ್ಲಿ 

 ಎಲ್ಲಾ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಮತ್ತು ಸಾಮಾನ್ಯ ಜನತೆ ಒಟ್ಟಿಗೆ ಸೇರಿ  ಕರೋನವೈರಸ್ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಇದರ ಜೊತೆಯಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಕೊರೊನಾವೈರಸ್ ವಿರುದ್ಧದ ಲಸಿಕೆ ನೀಡುವ ಅಭಿಯಾನವನ್ನು ಕೈಗೊಂಡಿವೆ .ಈ ಎಲ್ಲಾ ಆಶಾದಾಯಕ ಬೆಳವಣಿಗೆಗಳನ್ನು ನೋಡಿದಾಗ ಶೀಘ್ರದಲ್ಲೇ ಜಗತ್ತು ಕೊರೊನಾ ಮುಕ್ತವಾಗಲಿದೆ ಎನಿಸುತ್ತದೆ. ಅಲ್ಲಿಯವರೆಗೆ ಎಚ್ಚರಿಕೆಯಿಂದ ಇರಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529.




 

06 ಅಕ್ಟೋಬರ್ 2021

ಚಿತ್ರದುರ್ಗ ಜಿಲ್ಲೆಯಲ್ಲಿ ಬುಕನಾನ್ .ವಿಮರ್ಶೆ


 


ಚಿತ್ರದುರ್ಗ ಜಿಲ್ಲೆಯಲ್ಲಿ  ಬುಕಾನನ್
ವಿಮರ್ಶೆ.

ಮೂಲತಃ ಚಿತ್ರದುರ್ಗ ಜಿಲ್ಲೆಯವನಾದ ,ಮತ್ತು ಇತಿಹಾಸ ಬೋಧಿಸುವ ಶಿಕ್ಷಕನಾಗಿ " ಪ್ರೊ. ಎಂ ಜಿ ರಂಗಸ್ವಾಮಿ ರವರು ಬರೆದಿರುವ ಚಿತ್ರದುರ್ಗ ಜಿಲ್ಲೆಯಲ್ಲಿ  ಬುಕಾನನ್ " ಎಂಬ ಕೃತಿ ನನ್ನನ್ನು ಬಹಳ ಆಕರ್ಷಿಸಿತ್ತು .
ಈ ಪುಸ್ತಕವನ್ನು ಓದಿ ಮುಗಿಸಿದಾಗ ಒಂದು ಉತ್ತಮ ಐತಿಹಾಸಿಕ ಅಧಾರದ ಪುಸ್ತಕ ಓದಿದ ಸಂತೃಪ್ತಿ ಲಭಿಸಿತು.

ಫ್ರಾನ್ಸಿಸ್ ಬುಕ್ಯಾನನ್ ಈಸ್ಟ್ ಇಂಡಿಯಾ ಕಂಪನಿಯ ಬಂಗಾಳ ಪ್ರಾಂತ್ಯದಲ್ಲಿ ವೈದ್ಯಾಧಿಕಾರಿಯಾಗಿದ್ದವನು ಬ್ರಿಟಿಷರು ತಮ್ಮ ಅಧೀನದಲ್ಲಿದ್ದ ಮದ್ರಾಸ್, ಮೈಸೂರು, ಕೆನರಾ ಮತ್ತು ಮಲಬಾರ್ ರಾಜ್ಯಗಳಲ್ಲಿನ ಕೃಷಿ, ಕಲೆ, ವಾಣಿಜ್ಯ, ಆರ್ಥಿಕ-ಧಾರ್ಮಿಕ ಸ್ಥಿತಿ-ಗತಿಗಳು ಹಾಗೂ ಅಲ್ಲಿಯ ಜನ ಸಮುದಾಯಗಳು, ಬುಡಕಟ್ಟುಗಳು, ಅವರ ಜೀವನ ವಿಧಾನ ಮತ್ತು ಆಚರಣೆ-ಸಂಪ್ರದಾಯಗಳನ್ನಲ್ಲದೆ ಸ್ಥಳೀಯ ಇತಿಹಾಸ ಕುರಿತು ಅಧ್ಯಯನಾತ್ಮಕ ವರದಿ ಮಾಡಲು ಅವನನ್ನುಕ್ರಿ.ಶ.1800ರಲ್ಲಿ ನಿಯೋಜಿಸಿದರು.  ಒಂದೂಕಾಲು ವರ್ಷದ  ಅವನ ಈ ಮಹಾ ಪಯಣದಲ್ಲಿಕಂಡುಂಡ ಅನುಭವ ಕಥನವನ್ನು 2000ಕ್ಕೂ ಹೆಚ್ಚು ಪುಟಗಳಷ್ಟು
ವಿಸ್ತಾರವಾಗಿ ಬರೆದಿರುವನು, ಅದನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದ್ದಾನೆ.
ಇದೊಂದು ಸಾಂಸ್ಕೃತಿಕ ದಾಖಲೆ ಕೂಡಾ ಆಗಿದೆ. ಇನ್ನೂರು ವರ್ಷದ ಕೆಳಗಿನ ಈ ಪ್ರಾಂತ್ಯಗಳ ಬದುಕಿನೊಳಗೊಂದು ಇಣುಕು ನೋಟದಂತಿರುವ ಈ ಅಧ್ಯಯನ ಪ್ರವಾಸ ಕಥನ ಕಳ್ಳಕಾಕರ, ಹುಲಿಯಂಥ ಕಾಡು ಪ್ರಾಣಿಗಳ
ಪರಿಸರದಲ್ಲಿ ಸಂಚರಿಸಿ ವರದಿ ಮಾಡುವ ರೋಚಕ ಯಾತ್ರೆಯೂ ಆಗಿದೆ. ಇಂಥದೊಂದು ಅಮೂಲ್ಯ ಕೃತಿಯನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಿಸುವ ಪ್ರಯತ್ನ ಮಾಡಿದವರು ಪ್ರೊ ಎಂ ಜಿ ರಂಗಸ್ವಾಮಿ ರವರು .  ಅಖಂಡ ಚಿತ್ರದುರ್ಗ ಜಿಲ್ಲೆಗೆ ಮಾತ್ರ ಸೀಮಿತ ಗೊಳಿಸಿಕೊಂಡು ಅನುವಾದ ಮಾಡಿರುವ ಈ ಪುಸ್ತಕ  ನಿರರ್ಗಳವಾದ ಕಥನ ಶೈಲಿ, ಸುಭಗತೆ  ಸರಾಗವಾಗಿ ಓದಿಸಿಕೊಳ್ಳುವ ಚೇತೋಹಾರಿ ಗುಣದಿಂದ ಗಮನ ಸಳೆಯುತ್ತದೆ.

ಸಿವಿಜಿ ಪಬ್ಲಿಕೇಶನ್ ರವರ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಹೊರತಂದ ಈ ಪುಸ್ತಕ 152 ಪುಟಗಳಿದ್ದು ,150 ರೂಪಾಯಿ ಮುಖಬೆಲೆಯಾಗಿದೆ. ದಾ ಕೋ ಹಳ್ಳಿ ಚಂದ್ರಶೇಖರ ರವರ ಮುಖಪುಟ ಪುಸ್ತಕದ ಅಂದ ಹೆಚ್ಚಿಸಿದೆ.
ಡಾ. ಮೀರಾಸಾಬಿಹಳ್ಳಿ ಶಿವಣ್ಣ ರವರ ಸುದೀರ್ಘವಾದ ಮುನ್ನುಡಿ ಮತ್ತು ಬೆನ್ನುಡಿ ಪುಸ್ತಕ ಓದಲು ಭೂಮಿಕೆ ಸಿದ್ದಪಡಿಸುತ್ತವೆ. ಅವರ ಮುನ್ನುಡಿಯಲ್ಲಿ ಜನಸಾಮಾನ್ಯರ ಬದುಕಿಗೆ ಪೂರಕವಾದ ಸಾಹಿತ್ಯ ರಚನೆ ಮುನ್ನೆಲೆಗೆ ಬರಬೇಕು , ಹಾಗೂ ಮಾದ್ಯಮಗಳು ಮತ್ತು ಸಾಮಾನ್ಯ ಜನರು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕೈಜೋಡಿಸಬೇಕೆಂಬ ಕಳಕಳಿಯನ್ನು ತೋಡಿಕೊಂಡಿದ್ದಾರೆ.
ರಂಗಸ್ವಾಮಿ ರವರು ಈ
ಪುಸ್ತಕದಲ್ಲಿ ಜಿಲ್ಲಾ ಪ್ರವೇಶ ,
ಹಿರಿಯೂರಿನಲ್ಲಿ 14 ದಿನಗಳು ,ಮತ್ತು
ಗಣಿಗಾರಿಕೆ ಎಂಬ ಮೂರು ಭಾಗದಲ್ಲಿ ಚಿತ್ರದಲ್ಲಿನ ಬುಕಾನನ್ ಪ್ರವಾಸದ ಮಾಹಿತಿ ನೀಡಿರುವರು .
ಇದರ ಜೊತೆಯಲ್ಲಿ  ಮೀರಾಸಾಬಿಹಳ್ಳಿ ಶಿವಣ್ಣನವರ ಲೇಖನ ಗಳಾದ
ಬುಕ್ಯಾನನ್ ಕಂಡ ಚಿತ್ರದುರ್ಗ ಜಿಲ್ಲೆ ' ಹಾಗೂ ಹಿರಿಯೂರಿನಲ್ಲಿ ಬುಕ್ಯಾನನ್  ಎಂಬ ಎರಡು ಲೇಖನಗಳು ಬೋನಸ್ ರೂಪದಲ್ಲಿ ಓದುಗರಿಗೆ ಲಭ್ಯವಾಗಿವೆ.
ಪುಸ್ತಕದ ಒಳಪುಟಗಳಲ್ಲಿ ಕಂಡುಬರುವ ಪೂರಕವಾದ ಚಿತ್ರಗಳು ಮತ್ತು ನಕ್ಷೆಗಳು ಗತ ಕಾಲದ ಚಿತ್ರದುರ್ಗದ ಇತಿಹಾಸ ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತವೆ.

ಬುಕಾನನ್ ಪ್ರವಾಸ ಚಿತ್ರದುರ್ಗ ಜಿಲ್ಲೆಯ ಪ್ರವಾಸ ಅಧಿಕೃತವಾಗಿ ಆರಂಭವಾಗುವುದು ಮಲೆಬೆನ್ನೂರು ಕಡೆಯಿಂದ ,ಗರುಡನ ಗಿರಿ ದಾಟಿ ಯಗಟಿ ತಾಲ್ಲೂಕು ದಾಟಿದಾಗ ಬುಕಾನನ್ ದುರ್ಗದ ಪ್ರವಾಸ ಅಂತ್ಯವಾಗುತ್ತದೆ .ಈ ನಡುವೆ ಅವರು ನೀಡಿದ ಮಾಹಿತಿ ಅಮೂಲ್ಯವಾದದ್ದು.
ಬುಕಾನನ್ ಪ್ರವಾಸ ಕುರಿತಾದ ಪುಸ್ತಕ  ಓದುವಾಗ ಬುಕಾನನ್ ಆ ಪ್ರದೇಶದ ಐತಿಹಾಸಿಕ, ಆರ್ಥಿಕ , ಸಾಮಾಜಿಕ, ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪರಿಯನ್ನು ನಾವು ಗಮನಿಸಬಹುದು.
ಆ ಭಾಗದ ಕೃಷಿ ಚಟುವಟಿಕೆಗಳ ಬಗ್ಗೆ ಉಲ್ಲೇಖಿಸಿ ಅಲ್ಲಿ ಅಂದು ರೈತರು ಬಳಸುತ್ತಿದ್ದ ಕೃಷಿ ಪರಿಕರಗಳಾದ ಎಡೆ ಕುಂಟೆ, ಕುಂಟೆ, ಗ್ವಾರೆ , ಹಂಡುಗುಂಟೆ, ಹೆಡೆ ಮರ ,ನೇಗಿಲ    ಬಗ್ಗೆ  ಚಿತ್ರ ಸಮೇತ ವಿವರಣೆ ನೀಡಿರುವನು ಅದೃಷ್ಟವಶಾತ್ ನಾನು ನನ್ನ ಬಾಲ್ಯದ ದಿನಗಳಲ್ಲಿ ಇವೆಲ್ಲವನ್ನೂ ನೋಡಿರುವೆ ಆದರೆ ಬಹುತೇಕ ಇಂದಿನ ಯುವಪೀಳಿಗೆ ಮತ್ತು ನಗರ ವಾಸಿಗಳು ಇವುಗಳ ನೋಡಿಲ್ಲ ಆ ನಿಟ್ಟಿನಲ್ಲಿ ಈ ಪುಸ್ತಕ ಮುಂದೊಂದು ದಿನ ನಿಜವಾದ ಆಧಾರ ಗ್ರಂಥ ಆಗುವುದರಲ್ಲಿ ಸಂದೇಹವಿಲ್ಲ.

ಬುಕಾನನ್ ಅಂದು ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳೆಯುತ್ತಿದ್ದ ಬೆಳೆಗಳಾದ ಹತ್ತಿ, ನವಣೆ ಸಜ್ಜೆ  ,ಹುರುಳಿ ಔಡಲ ರಾಗಿ, ಕಬ್ಬು ಮುಂತಾದ ಬೆಳೆಗಳು ಮತ್ತು ವ್ಯವಸಾಯ ವಿಧಾನಗಳನ್ನು ಚೆನ್ನಾಗಿ ವಿವರಿಸಿದ್ದಾನೆ.

ಕಂಬ್ಳಿ ಕುರುಬರು ಮತ್ತು ಹಂಡೇ ಕುರುಬರು ಮತ್ತು ಗೊಲ್ಲರು ಕುರಿಸಾಕಣೆ ಮಾಡಿಕೊಂಡಿದ್ದ ಬಗ್ಗೆ ಉಲ್ಲೇಖಿಸಲಾಗಿದೆ.ಕುರುಬರು  ಬೀರಪ್ಪ ದೇವರು ಮತ್ತು ಮಾಯಮ್ಮ ದೇವತೆಯನ್ನು ಆರಾದಿಸುತ್ತಿದ್ದರು,ಐಮಂಗಲದ ಸುತ್ತಲಿನ ಪ್ರದೇಶದಲ್ಲಿ ಕಬ್ಬಿಣದ ನೇಗಿಲು ಹೊಡೆಯುತ್ತಿದ್ದರು, ಹಿರಿಯೂರಿನ ವೇದಾವತಿ ನದಿಯಲ್ಲಿ ಮೂರು ಜಾತಿಯ ಮೀನು ನೋಡಿದೆ, ರೈತರು ಗೊಬ್ಬರಕ್ಕೆ ಕುರಿ ಮಂದೆ ಆಶ್ರಯಿಸಿದ್ದರು. ಪಶುಪಾಲನೆ ಉಪಕಸುಬಾಗಿದ್ದು ಕುರಿ ಹಾಲು, ಮತ್ತು ತುಪ್ಪಕ್ಕೆ ಬೇಡಿಕೆ ಇತ್ತು.ಚಿಕ್ಕ ಬ್ಯಾಲದಕೆರೆ ಸುತ್ತ ಮುತ್ತ ಗಣಿಗಾರಿಕೆ ಇತ್ತು.ಮತ್ತೋಡಿನ ಸುತ್ತ ಮುತ್ತ ಗಾಜಿನ ಬಳೆ ತಯಾರಿಕೆ ಘಟಕಗಳು ಇದ್ದವು.ಎಂದು ತನ್ನ ದಿನಚರಿಯಲ್ಲಿ ಬುಕನಾನ್ ದಾಖಲು ಮಾಡಿದ್ದಾನೆ.

ಬುಕಾನನ್ ಚಿತ್ರಿಸುವ ಕೃಷಿ ಚಟುವಟಿಕೆ ಕುರಿತ ಅನೇಕ ಸಂಗತಿಗಳನ್ನು ಬಾಲ್ಯದಲ್ಲಿ ನಾನು ಸ್ವತಃ ಅನುಭವಿಸಿದ್ದೇನೆ  ಹೊಳಲ್ಕೆರೆ ತಾಲ್ಲೂಕು ಚೌಡಗೊಂಡನಹಳ್ಳಿ ಯಲ್ಲಿ  ರಾತ್ರಿ ವೇಳೆ ಚಂದ್ರನ ಬೆಳಕಲ್ಲಿ ಆರು ಇಲ್ಲವೆ ಎಂಟು ಎತ್ತುಗಳನ್ನು ಕಟ್ಟಿ ಕಬ್ಬಿಣದ ನೇಗಿಲು ಹೊಡೆಯುತ್ತಿದ್ದ ಚಿತ್ರಣ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ನೇಗಿಲು ಹೊಡೆಯುವವರಿಗೆ ನೀರು ಮತ್ತು ಬುತ್ತಿ(ಊಟ) ಸಾಗಿಸುತ್ತಿದ್ದವರ ಜೊತೆ ಹೋಗಿ ಬೆರಗುಗಣ್ಣಿನಿಂದ ನೋಡಿದ ಆ ದೃಶ್ಯಗಳು ಬುಕಾನನ್ ಚಿತ್ರಿಸಿರುವ ಕಬ್ಬಿಣದ ನೇಗಿಲು ಹೊಡೆಯುವ ದೃಶ್ಯಗಳು ನಾನು ಮತ್ತೆ ಆ ಬಾಲ್ಯದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದವು. ಸುಗ್ಗಿಯ ದಿನಗಳಲ್ಲಿ ಜೋಳ, ರಾಗಿ ತೆನೆಗಳಿಂದ ಕಾಳು ಬೇರ್ಪಡಿಸುವ ಸಲುವಾಗಿ ಸಗಣಿಯಿಂದ ಸಾರಿಸಿ ಕಣ ಸಿದ್ಧಗೊಳಿಸಿ ರೋಣಗಲ್ಲು  ಹೊಡೆಯುತ್ತಿದ್ದುದು, ಅಂತಹ ವೇಳೆ ಹೇಳುತ್ತಿದ್ದ ಜನಪದ ಹಾಡುಗಳು, ಆಳೆತ್ತರಕ್ಕೆ ಕಾಳಿನ ರಾಶಿ ಮಾಡುತ್ತಿದ್ದ  ಚಿತ್ರಣಗಳು ನನ್ನ ಕಣ್ಮುಂದೆ ಬಂದವು.

ಅಲ್ಲಲ್ಲಿ ಬುಕಾನನ್ ನೀಡಿರುವ ಕೆಲ ವಿವರಣೆ ಪೂರ್ವಾಗ್ರಹದಿಂದ ಕೂಡಿದೆ ಅನಿಸಿದರೂ ಈ ಕೃತಿಯು
ಚಿತ್ರದುರ್ಗದ ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ.ದುರ್ಗದವರೇ ಅಲ್ಲದೇ ಎಲ್ಲಾ ಕನ್ನಡಿಗರು ಈ ಪುಸ್ತಕ ಓದಿ ನಮ್ಮ ಬಗ್ಗೆ ನಾವೇ ಹೆಮ್ಮೆ ಪಟ್ಟು ಕೊಳ್ಳಬಹುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಚಿತ್ರದುರ್ಗ
9900925529

ಪುಸ್ತಕದ ಹೆಸರು: ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್
ಲೇಖಕರು: ಪ್ರೊ .ಎಂ ಜಿ ರಂಗಸ್ವಾಮಿ
ಪ್ರಕಾಶನ: ಸಿವಿಜಿ
ಪುಟಗಳು: 152
ಬೆಲೆ: 150 ರೂಪಾಯಿ

ವಕೀಲರೊಬ್ಬರ ವಗೈರೆಗಳು .ಪುಸ್ತಕ ವಿಮರ್ಶೆ. Vakeelarobbara vagairegalu . book reveiw

 

ವಕೀಲರೊಬ್ವರ ವಗೈರೆಗಳು .
ವಿಮರ್ಶೆ

 
ಆತ್ಮೀಯರು, ಲೇಖಕರು, ಕವಿಗಳು ಪ್ರಕಾಶಕರು ಆದ ಎಂ ವಿ ಶಂಕರಾನಂದ ರವರು , ಸಿ ಹೆಚ್ ಹನುಮಂತರಾಯ ರವರು ಬರೆದ " ವಕೀಲರೊಬ್ಬರ ವಗೈರೆಗಳು"   ಪುಸ್ತಕ ನೀಡಿ ಇದನ್ನು ಓದಿ ಸರ್ ಚೆನ್ನಾಗಿದೆ ಎಂದರು
ಬರೋಬ್ಬರಿ 655 ಪುಟಗಳ ಪುಸ್ತಕ ನೋಡಿದಾಗ ಇದನ್ನು ಎಷ್ಟು ದಿನ ಓದಬೇಕು? ಶಿಕ್ಷಕನಾದ ನನಗೆ ವಕೀಲರ ವಗೈರೆಗಳು ಬೇಕೆ? ಎಂದು ಶಂಕರಾನಂದ ಅವರ ಕಡೆ ನೋಟ ಬೀರಿದಾಗ , ನನ್ನ ಮನದ ಪ್ರಶ್ನೆ ಅರ್ಥ ಮಾಡಿಕೊಂಡ ಅವರು" ಓದಿ ಸಾರ್, ಆಮೇಲೆ ಹೇಳಿ" ಅಂದರು .
ಅವರು ಹೇಳಿದಂತೆ ಓದಲು ಶುರು ಮಾಡಿದೆ. ಮುಗಿಯುವವರೆಗೆ ನಿಲ್ಲಿಸಲಿಲ್ಲ. ಮತ್ತೊಮ್ಮೆ ಓದುವ ಮನಸಾಗಿದೆ. ಜೊತೆಗೆ ನಾನೇ ಶಿಕ್ಷಕರೊಬ್ಬರ ಸುವಿಚಾರಗಳು ಎಂಬ ಪುಸ್ತಕ ಬರೆಯಲು ಯೋಚಿಸಿರುವೆ.

ನಾಡಿನ ಪ್ರಖ್ಯಾತ ನ್ಯಾಯವಾದಿಗಳಾದ ಸಿ ಹೆಚ್ ಹನುಮಂತರಾಯ ರವರು ಬರೆದ ಈ ಕೃತಿ ಮೂರು ಮುದ್ರಣ ಕಂಡಿರುವುದು ಆ ಪುಸ್ತಕದ ಗುಣಮಟ್ಟ ಮತ್ತು ಬೇಡಿಕೆಯನ್ನು ಸೂಚಿಸುತ್ತದೆ.

ನೂರು ಅಧ್ಯಾಯಗಳನ್ನು ಒಳಗೊಂಡ  ಈ ಪುಸ್ತಕದಲ್ಲಿ ಪ್ರತಿಯೊಂದು ಅಧ್ಯಾಯ ಒಂದಕ್ಕಿಂತ ಒಂದು  ವಿಭಿನ್ನ .ಬಾಲ್ಯದ ಹಳ್ಳಿಯ ಜೀವನ , ಶಿಕ್ಷಣ, ಗ್ರಾಮೀಣ ಬದುಕು, ವಕೀಲಿ ವೃತ್ತಿ ಮತ್ತು ಜೀವನದ ಅನುಭವಗಳನ್ನು ಬಹಳ ರಸವತ್ತಾದ ಭಾಷೆ ಬಳಸಿ ನಮಗೆ ಉಣಬಡಿಸಿದ್ದಾರೆ .

ಅವರ ಬಾಲ್ಯದಿಂದ ಇಂದಿನವರೆಗೆ ಕಂಡುಂಡ ಜೀವನದ ಚಿತ್ರಿಕೆಗಳನ್ನು
ಇಡೀ ಪುಸ್ತಕದಲ್ಲಿ ನೀವು ಓದಿಯೇ ಸವಿಯಬೇಕು .
ನನಗೆ ವೈಯಕ್ತಿಕವಾಗಿ ಬಹಳ ಇಷ್ಟ ಆದ ಕೆಲ ಸಂಗತಿಗಳ ಬಗ್ಗೆ ಪ್ರಸ್ತಾಪ ಮಾಡುವೆ .
ಒಂಭತ್ತನೆಯ ಅಧ್ಯಾಯ ದಲ್ಲಿ ದೊಡ್ಡಬಳ್ಳಾಪುರ ಸುತ್ತಲಿನ ಚಿತ್ರಣ ನೀಡಿರುವರು.
ರುದ್ರರಮಣೀಯ ಬೆಟ್ಟದಲ್ಲಿ ಹೆಜ್ಜೇನು ಹೊಳೆ ಎಂಬ ಶೀರ್ಷಿಕೆಯಲ್ಲಿ
ಅವರ ಊರಿನ ಬೆಟ್ಟದ ವರ್ಣನೆ ಮಾಡಿರುವರು .
ಅವರ ಮಾತುಗಳಲ್ಲಿ ಕೇಳುವುದಾದರೆ
"ನಮ್ಮೂರು ಚಿಕ್ಕ ಬೆಳವಂಗಲದಿಂದ ಉತ್ತರಕ್ಕೆ ನಾಲ್ಕು ಕಿ.ಮೀ.ಗಳಷ್ಟು ದೂರದಲ್ಲಿ ಹುಲ್ಲುಕಡಿ ಬೆಟ್ಟ ಸಿಗುತ್ತದೆ. ಬಹುಕಾಲದ ಹಿಂದೆ ಮುನಿಯೊಬ್ಬ ಹುಲ್ಲುತಿಂದು ಈ ಬೆಟ್ಟದಲ್ಲಿ ಜೀವಿಸುತ್ತಿದ್ದುದರಿಂದ ಅದಕ್ಕೆ ಆ ಹೆಸರು ಬಂತು ಎನ್ನುವ ಪ್ರತೀತಿ.

ರುದ್ರರಮ್ಯತೆಯಿಂದ ಕೂಡಿದ ಆ ಬೆಟ್ಟವನ್ನು ಹತ್ತಲು ಚಿಕ್ಕಮಕ್ಕಳಿಂದ ಸಾಧ್ಯವಾಗುತ್ತಿರಲಿಲ್ಲ. ಕಡಿದಾದ ಆ ಬೆಟ್ಟವು ನಮ್ಮ ಹಳ್ಳಿಯ ಚಲನವಲನಗಳ ಮೇಲೆ ಸಮ ಕಣ್ಣಿಟ್ಟು ಕಾಯುವ ಕಾವಲುಗಾರನಂತೆ ನಿಂತಿತ್ತು. ಮೇಲುಗಡೆ ವೀರಭದ್ರದೇವರ ಗುಡಿ, ಕಲ್ಲಿನ ಮಂಟಪಗಳು ಮತ್ತು ಪುಷ್ಕರಣಿ ಇದ್ದವು. ಊರಿನ ಜನಕ್ಕೆ ಪಿಕ್ನಿಕ್ ಸ್ಥಳವೂ ಆಗಿತ್ತು. ಪೇಟೆಯ ಜನರಂತೆ ಕೇವಲ ವನಭೋಜನಕ್ಕೆ ಹೋಗುವವರಲ್ಲ ಹಳ್ಳಿಗರು: ದೇವರ ದರ್ಶನ, ಪೂಜೆಗಳನ್ನೂ ಅದರಲ್ಲಿ ಬೆರೆಸಿಕೊಂಡಿರುತ್ತಾರೆ. ಅಂಥ ಪಿಕ್ನಿಕ್ಗಳನ್ನು ದೇವರು ಮಾಡಿ ಬರುವುದೆಂತಲೂ ಕರೆಯುವುದು ರೂಢಿ. ಊರಿನ ಜಂಜಾಟದಿಂದ ದೂರವಾದ ನಿಸರ್ಗಧಾಮದ ವಾತಾವರಣದಲ್ಲಿ ಊಟ, ತಿಂಡಿಗಳಿಗೆ ವಿಶೇಷ ರುಚಿಯುಂಟಾಗಿ ಬಿಡುತ್ತದೆ; ದೇವರ ದರ್ಶನ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ನಮ್ಮೂರಿನವರು ಮೈ ಮನಗಳೆರಡನ್ನೂ ಚೈತನ್ಯಗೊಳಿಸಿಕೊಳ್ಳಲು ಹುಲ್ಲುಕಡಿ ಬೆಟ್ಟಗೆ ನೆಂಟರಿಷ್ಟರು ಮತ್ತು ಸ್ನೇಹಿತರೊಡಗೂಡಿ ಹೋಗುತ್ತಿದ್ದರು."
ಇಂತಹ ವಿವರಣೆ ಓದಿದ ಮೇಲೆ ನಮಗೆ ವಕೀಲರಲ್ಲಿ ಒರ್ವ ಸಾಹಿತಿ ಅಡಗಿರುವುದು ಸ್ಪಷ್ಟವಾಗುತ್ತದೆ .ಏಕೆಂದರೆ ಅವರು ಕೇವಲ ಎಲ್ ಎಲ್ ಬಿ ಮಾಡಿದ ಲಾಯರ್ ಅಲ್ಲ ಆಂಗ್ಲ ಎಂ ಎ ಮಾಡಿದ ನೂರಾರು ಆಂಗ್ಲ ಪುಸ್ತಕ ಓದಿದ ಸಹೃದಯರು.

ಸ್ವಾತಂತ್ರ್ಯ ಬಂದ ನಂತರದ ಎಷ್ಟೋ ವರ್ಷಗಳ ಕಳೆದರೂ ಸತಿ ಸಹಗಮನ ರಾಜಸ್ಥಾನ ಸಹಿತ ಹಲವಾರು ರಾಜ್ಯದಲ್ಲಿ ಜೀವಂತವಿರುವುದು ದುರದೃಷ್ಟಕರ. ಮಹಿಳೆಯರ ಅಮಾನವೀಯ ಮಾರಣಹೋಮದ ಬಗ್ಗೆ ಬಿಹಾರದ ಸಂಪತಿರಾವ್ ಕೇಸ್,ಅಹುಜಾ ಕೊಲೆ ಕೇಸ್ ,ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತಾ ಮೂಢನಂಬಿಕೆಗಳು ಹೇಗೆ ಮಹಿಳೆಯರ ಜೀವನವನ್ನು ದುರ್ಭರಗೊಳಿಸಿವೆ ಎಂಬುದರ ವಿವರಣೆಯನ್ನು ಲೇಖಕರು ಚೆನ್ನಾಗಿ ನೀಡಿರುವರು.

"ರಾವಣನೊಂದಿಗೆ ಹನುಮಂತನ ಟಿಫನ್ "ಎಂಬ ಅಧ್ಯಾಯ ಕವಿಗಳು, ಪತ್ರಕರ್ತರು ಆದ   ದಿವಂಗತ  ಲಂಕೇಶ್ ಮತ್ತು ಲೇಖಕರ ಸಂಬಂಧವನ್ನು ಗಟ್ಟಿ ಗೊಳಿಸಿದ ಅನೇಕ ಪ್ರಸಂಗಗಳನ್ನು  ಹನುಮಂತರಾಯ ರವರು ಬಹಳ ರಸವತ್ತಾಗಿ ವಿವರಣೆ ನೀಡಿದ್ದಾರೆ.

ಕನ್ನಡ ಮಾದ್ಯಮದಿಂದ ಬಂದ ವಿದ್ಯಾರ್ಥಿಗಳು ಪದವಿಯಲ್ಲಿ ಇಂಗ್ಲಿಷ್ ಓದುವಾಗ ಅನುಭವಿಸುವ ಅವಮಾನ ,ಭಯ, ತಾಕಲಾಟ ,ಸಹಪಾಠಿಗಳ ಕೀಟಲೆಗಳ ಬಗ್ಗೆ ಲೇಖಕರು ತಮ್ಮ ಪುಸ್ತಕದಲ್ಲಿ ದಾಖಲಿಸಿರುವರು  ಇವುಗಳನ್ನು  ಎದುರಿಸಲು ಲಂಕೇಶ್ ರವರು ಪ್ರಾಧ್ಯಾಪಕರಾಗಿ, ಮಾರ್ಗದರ್ಶಕರಾಗಿ ಹೇಗೆ ಬೆಂಬಲ ನೀಡಿದರು ಎಂಬುದನ್ನು ಸ್ಮರಣೆ ಮಾಡಿದ್ದಾರೆ.

ಈ ಪುಸ್ತಕ ಕುರಿತು ಡಾ .ಸಿದ್ದಲಿಂಗಯ್ಯ ರವರ ಹೀಗೆ ಮೆಚ್ಚುಗೆ ವ್ಯಕ್ತ ಪಡಿಸಿರುವರು.
"ಕನ್ನಡ ಸಾಹಿತ್ಯ  ರಚನೆ ಕೇವಲ ಕನ್ನಡ, ಆಂಗ್ಲ ಅಧ್ಯಾಪಕರಿಗೆ ಸೀಮಿತ ಎಂಬುದನ್ನು ಸುಳ್ಳುಮಾಡುವಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡುತ್ತಿರುವ ಮಹನೀಯರು ಇತ್ತೀಚಿನ ದಿನಗಳಲ್ಲಿ ಕನ್ನಡ - ಕ್ಷೇತ್ರವನ್ನು ಪ್ರವೇಶಿಸುತ್ತಿರುವುದು ಅಭಿನಂದನಾರ್ಹ. ಕಂದಾಯ, ಪೊಲೀಸ್, ವೈದ್ಯಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಕೆಲವರಾದರೂ ತಮ್ಮ ಜೀವನದಲ್ಲಿ ಅನುಭವಿಸಿದ  ಅನುಭವಗಳನ್ನು ದಾಖಲಿಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ಕಾನೂನಿನ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು ಕಾನೂನಿಗೆ ಸಂಬಂಧಪಟ್ಟ ಅನೇಕ ಲೇಖನಗಳು, ಕೃತಿಗಳನ್ನು ಹೊರತಂದಿದ್ದರೂ ಈ  ಕ್ಷೇತ್ರದಲ್ಲಿನ ಸ್ವಂತ ಅನುಭವಗಳು ವಿರಳವೆನ್ನಬಹುದು. ಈ ದಿಶೆಯಲ್ಲಿ ಸಿ.ಹಚ್. ಹನುಮಂತರಾಯ ರವರ  ಪ್ರಯತ್ನ ಗಮನಾರ್ಹವಾದದ್ದು. "

ವಕೀಲರೊಬ್ವರ ವಗೈರೆ ಓದಿದ ಮೇಲೆ
ಕನ್ನಡ ಸಾಹಿತ್ಯದ  ಒಂದು ಅಪರೂಪದ ಕೃತಿಯನ್ನು ಓದಿದ ಸಂತೊಷ ಉಂಟಾದದ್ದು ಸುಳ್ಳಲ್ಲ  . ತಮ್ಮ ವಿಸ್ತಾರವಾದ ವೃತ್ತಿ ಜೀವನದಲ್ಲಿ  ಲೇಖಕರು ನೋಡಿದ, ಅನುಭವಿಸಿದ ಅನೇಕ ಸಂಗತಿಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಕೆಲ ಅಧ್ಯಾಯ ಓದುವಾಗ ಇದೇ ತರಹದ ಘಟನೆಗಳು ನಮ್ಮ ಜೀವನದಲ್ಲೂ ನಡೆದಿರುವುದು ನೆನಪಾಗುತ್ತದೆ.ಇಂತಹ ಪುಸ್ತಕ ಬರೆದ ಸಿ ಹೆಚ್ ಹನುಮಂತರಾಯ ರವರಿಗೂ .ಓದಲು ಪ್ರೇರೇಪಿಸಿದ  ಎಂ ವಿ ಶಂಕರಾನಂದ ರವರಿಗೂ ಧನ್ಯವಾದಗಳು. ನೀವು ಒಮ್ಮೆ ಈ ವಕೀಲರ ವಗೈರೆ ಓದಿ ಬಿಡಿ.

ಪುಸ್ತಕ ಹೆಸರು: ವಕೀಲರೊಬ್ವರ ವಗೈರೆಗಳು.
ಲೇಖಕರು: ಸಿ ಹೆಚ್ ಹನುಮಂತರಾಯ
ಬೆಲೆ: ೫೫೦
ಪುಟ :೬೫೫
ಪ್ರಕಾಶನ:ಸಪ್ನಾ ಬುಕ್ ಹೌಸ್

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529


ಕಥೆಯಲ್ಲದ ಕಥೆ .ಪುಸ್ತಕ ವಿಮರ್ಶೆ.


 


ಕಥೆಯಲ್ಲದ ಕಥೆ .

ವಿಮರ್ಶೆ .


ಹಳ್ಳಿಯ ಜನಜೀವನ, ಗ್ರಾಮೀಣ ಸೊಗಡು, ಯುವ ಮನಸ್ಸುಗಳ ತಲ್ಲಣ ಹೀಗೆ ವಿವಿದ  ವೈವಿಧ್ಯಮಯ ಕಥಾ  ವಿಷಯಗಳನ್ನು ಒಳಗೊಂಡ "ಕಥೆಯಲ್ಲದ ಕಥೆ " ಸಂಕಲನದ  ಕಥೆಗಳನ್ನು ಓದುವಾಗ ವಿ ಎಲ್ ಪ್ರಕಾಶ್ ರವರ ಕಥನ ಕೌಶಲ್ಯ ನಮ್ಮ ಗಮನ ಸೆಳೆಯುತ್ತದೆ. 


ಕಥೆಯಲ್ಲದ ಕಥೆ ಯ ಕಥಾ ಸಂಕಲನದ ರುವಾರಿಯಾದ 

ವಿ .ಎಲ್.ಪ್ರಕಾಶ್ ರವರು  ಹಲವು ವರ್ಷಗಳ ಕಾಲ  ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆಗಳಲ್ಲದೆ ಅವರ ಬರಹದ ವ್ಯಾಪ್ತಿ ಹಣಕಾಸು, ವಿಜ್ಞಾನ, ಕಂಪ್ಯೂಟರ್ ತಂತ್ರಜ್ಞಾನ, ಚಲನಚಿತ್ರ , ಇ ಬುಕ್ , ಆಪ್ ಅಭಿವೃದ್ಧಿ ಹೀಗೆ ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿದೆ.


ಒಂದೇ ಸಿಟ್ಟಿಂಗ್ ನಲ್ಲಿ ಕುಳಿತು ಓದಿದ ಈ ಪುಸ್ತಕದಲ್ಲಿ ಇರುವ ಕಥೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಹನ್ನೆರಡೂ  ಕಥೆಗಳು ಬಹಳ   ಸುಂದರವಾಗಿವೆ . 

ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಪತ್ರಕರ್ತರು ಮತ್ತು ಲೇಖಕರಾದ ಕೆ ವೆಂಕಟೇಶ್ ರವರ ಮಾತಿನಲ್ಲೇ ಹೇಳುವುದಾದರೆ 

"ನೆನಪು ಮತ್ತು ವರ್ತಮಾನದ ಎರಡು ಪಾತಳಿಗಳಲ್ಲಿ ಇಲ್ಲಿನ ಕಥಾವಸ್ತುಗಳು ಮೈದಾಳುತ್ತವೆ. ನೆನಪನ್ನು ಕೆದಕುವ ಕತೆಗಳಾದ ಸಿದ್ದ ಹಾಗೂ ಹೊಳೆಯುವ ಜೀರ್ ಜಿಂಬೆ', 'ಬ್ಳೋಕರ್ ರಾಮಣ್ಣ' 'ಕತೆ ಬಿಟ್ಟು ಹೋದ ಕತೆಗಾರ ಕತೆಗಳು ತಮ್ಮ ಸಜೀವ ವಿವರಗಳಿಂದ ಮನಸ್ಸು ಮುಟ್ಟುತ್ತವೆ. ಬೆರಗು, ಮುಗ್ಧತೆಯಲ್ಲೇ ವಿರಮಿಸದೆ, ಬದುಕಿನ  ಸತ್ಯಗಳಿಗೂ ಮುಖಾಮುಖಿಯಾಗುತ್ತವೆ. ಎಲ್ಲರಿಗೂ ಬೇಕಾದ, ಊರಿಗೆ ಚೈತನ್ಯವನ್ನು ಹಂಚುವಷ್ಟು ಬಲವುಳ್ಳ 'ಬ್ರೋಕರ್ ರಾಮಣ್ಣ' ಗುಜರಿ ಮಗ್ಗದಂತೆ ಆಗಿಬಿಡುತ್ತಾನೆ. ಕೈಗಾರಿಕೀಕೃತ ಸಮಾಜದ ತಣ್ಣನೆಯ ಕ್ರೌರ್ಯ ಈ ಕತೆಯಲ್ಲಿ ಯಾವುದೋ ಘೋಷಣೆ, ತತ್ವಗಳ ಭಾರವಿಲ್ಲದೆ ಒಡಮೂಡಿದೆ. ಸಂಗದಲ್ಲಿದ್ದರೂ ನಿಸ್ಸಂಗ, ಊರೊಳಗಿದ್ದರೂ, ಒಂಟಿ ಪ್ರಾಥಮಿಕ ಸಂಬಂಧಗಳು ಕುಟ್ಟೆ ಹಿಡಿದಿರುವ ಸ್ಥಿತಿಯನ್ನು ಈ ಕತೆ ಮಾರ್ಮಿಕವಾಗಿ ಕಟ್ಟಿಕೊಡುತ್ತದೆ".


ಮೊದಲನೇ ಕಥೆಯನ್ನು ನಾನು ಓದುವಾಗ ನನ್ನ ಬಾಲ್ಯ ನೆನಪಾಗುತ್ತದೆ ನಾನೇ ಸಿದ್ದ ಎಂಬ ಭಾವನೆ ಮೂಡಿತು .ಆ ಕಾಲದಲ್ಲಿ ನಿಸರ್ಗದಲ್ಲಿ ಸಿಗುವ ಜೀವಿಗಳು ವಸ್ತುಗಳ ಜೊತೆಯಲ್ಲಿ ಆಟ ಮನರಂಜನೆ ಸಿಗುತ್ತಿತ್ತು ಆದರೆ ಈಗಿನ  ಮೊಬೈಲ್, ಗೇಮ್ ಇಂಟರ್ ನೆಟ್ ಮಕ್ಕಳು ಇಂತಹ ಪರಿಸರದ ಜೊತೆಗಿನ ಸಂಬಂಧ ಅವರಿಗೆ ಲಭ್ಯವಾಗಿಲ್ಲ ಎನ್ನಬಹುದು. ಬ್ಳೋಕರ್ ರಾಮಣ್ಣ ಕಥೆಯನ್ನು ಲೇಖಕರು  ಬಹಳ. ಚೆಂದವಾಗಿ ನಿರೂಪಿಸಿದ್ದಾರೆ. ಇಡೀ ಊರಿನ ಜನರಿಗೆ  ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುವ ಗುಣವುಳ್ಳ ಅವನು ಕೊನೆಯಲ್ಲಿ ಹೇಗೆ ಅಪ್ರಸ್ತುತನಾಗುತ್ತಾನೆ ಎಂಬುದು ಆಧುನಿಕ ಸಮಾಜಕ್ಕೆ ಹಿಡಿದ ಕನ್ನಡಿ ಎನ್ನಬಹುದು.


ಮಿನಿಮಮ್ ಬ್ಯಾಲೆನ್ಸ್ ಶುಲ್ಕ, ಏ.ಟಿ ಎಮ್ ಶುಲ್ಕ, ಪಾಸ್ಬುಕ್ ಶುಲ್ಕ, ಚೆಕ್ ಬುಕ್ ಶುಲ್ಕ ಹೀಗೆ ಅನವಶ್ಯಕವಾಗಿ ಶುಲ್ಕವನ್ನು ಹೇರುತ್ತಾ 

ಬ್ಯಾಂಕುಗಳು ಹೇಗೆ ಜಿಗಣಿಯಂತೆ ನಮ್ಮ ಮೇಲೆ ಅನವಶ್ಯಕವಾಗಿ ಶುಲ್ಕ ವಿಧಿಸಿ ಕ್ರಮೇಣವಾಗಿ ನಮ್ಮ ಹಣವನ್ನು  ಹೇಗೆ ಕೊಳ್ಳೆ ಹೊಡೆಯುತ್ತವೆ ಎಂಬುದನ್ನು ವೃದ್ದೆ ಗ್ಯಾಸ್ ಸಬ್ಸಿಡಿ ಪಡೆಯಲು ಆರಂಭಿಸಿದ ಅಕೌಂಟ್ ನ್ನು ಕೊನೆಗೆ ಬೇಸತದಿಂದ  ಕ್ಲೋಸ್ ಮಾಡಿಸಿದ ಪ್ರಸಂಗದ ಕಥೆ ಮನಕಲಕುತ್ತದೆ. ಇದು ಇಂದಿನ ಬ್ಯಾಂಕುಗಳ ಅರ್ಥಿಕ ಶೋಷಣೆ ಪ್ರತಿಬಿಂಬ ಎನ್ನಬಹುದು.


ಹೀಗೆ ಪ್ರಕಾಶ್ ರವರ ಈ ಕಥಾ ಸಂಕಲನದ ಪ್ರತಿಯೊಂದು ಕಥೆಗಳು ಸಮಾಜದ ಓರೆ ಕೋರೆಗಳ ಕುರಿತಾಗಿವೆ .ಈ ಕಥೆಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ ಕೆಲವೊಮ್ಮೆ ಇದು ನನ್ನದೇ ಕಥೆ ಎಂಬ ಭಾವ ಮೂಡಿಸುತ್ತವೆ .ಇವರ ಲೇಖನಿಯಿಂದ ಇನ್ನೂ ಹೆಚ್ಚಿನ ಸಾಹಿತ್ಯ ಸೃಷ್ಟಿಯಾಗಲಿ ಓದುವ ಸೌಭಾಗ್ಯ ನಮ್ಮದಾಗಲಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


ಮಹಾಲಯದ ಮಳೆ


 


ಇಂದು  ತುಮಕೂರಿನಲ್ಲಿ
ಮುಂಜಾನೆಯೇ
ಸ್ವರ್ಗಸ್ತರಾದ ಹಿರಿಯರ

ರೂಪದಲ್ಲಿ ಮಳೆರಾಯನ


ಆಗಮನ|
ಮಹಾಲಯ ಅಮಾಸ್ಯೆಯಂದು
ಹಿರಿಯರ ಆಶೀರ್ವಾದ
ಪಡೆದು ಧನ್ಯವಾಗಿವೆ
ನಮ್ಮ ಮನ| |

#ಸಿಹಿಜೀವಿ .