05 ಅಕ್ಟೋಬರ್ 2021

ಸಿಂಹದ್ವನಿ .೫/೯/೨೧


 

ಮೇಕ್ ಇನ್ ಇಂಡಿಯಾ .ಪ್ರಬಂಧ .make in india .essay.

 




 ಮೇಕ್ ಇನ್ ಇಂಡಿಯಾ  ಪ್ರಬಂಧ


 ದಶಕಗಳಿಂದ ಭಾರತದ ಸಂದಾಯಬಾಕಿಯಲ್ಲಿನ ಅಸಮತೋಲನವನ್ನು ಸರಿಪಡಿಸಲು, ಚಾಲ್ತಿ ಖಾತೆಯ ಕೊರತೆ ಕಡಿಮೆ ಮಾಡಲು ,ಭಾರತದ ಆಮದನ್ನು ಕಡಿಮೆ ಮಾಡಿ ರಫ್ತನ್ನು ಹೆಚ್ಚಿಸಲು ಮತ್ತು ಭಾರತವನ್ನು ಒಂದು ಸ್ವಾವಲಂಬಿ ದೇಶವನ್ನಾಗಿ ಮಾಡಲು ಕೈಗೊಂಡ ಹೊಸ ಯೋಜನೆಗಳಲ್ಲಿ "ಮೇಕ್ ಇನ್ ಇಂಡಿಯಾ" ಸಹ ಒಂದು.


 "ಮೇಕ್ ಇನ್ ಇಂಡಿಯಾ" ಎಂದರೆ ವಿದೇಶಿ ಹೂಡಿಕೆಯನ್ನು ಉತ್ತೇಜಿಸುವುದು,ಹೊಸ  ತಂತ್ರಜ್ಞಾನವನ್ನು ಅನುಸರಿಸಿ  ಜ್ಞಾನದ ಕ್ಷೇತ್ರವನ್ನು ವಿಸ್ತರಿಸಿ   ದೇಶದೊಳಗೆ ಸಂಶೋಧನೆ ,ಉತ್ಪಾದನೆ ಮತ್ತು ಅಭಿವೃದ್ಧಿಯನ್ನು ಮಾಡುವುದು ಎಂದು ಹೇಳಬಹುದು.


 2013 ರಲ್ಲಿ, ಭಾರತೀಯರು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾಗ ಉದಯೋನ್ಮುಖ ಮಾರುಕಟ್ಟೆ ಕುಸಿತ ಮತ್ತು ಬೆಳವಣಿಗೆ ದರ ತೀವ್ರವಾಗಿ ಕುಸಿಯುತ್ತಿದ್ದ ಸಮಯದಲ್ಲಿ  ಜಾಗತಿಕ ಹೂಡಿಕೆದಾರರು ಭಾರತದಲ್ಲಿ ತಮ್ಮ ಹೂಡಿಕೆಯ ಬಗ್ಗೆ ಯೋಚಿಸುವ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ

25 ಸೆಪ್ಟೆಂಬರ್ 2014 ರಂದು ನಮ್ಮ  ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ಆರಂಭಿಸಿದರು, ಇದು ಭಾರತದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಮತ್ತು ದೇಶದ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ವಿದೇಶಿ ಕಂಪನಿಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.


 ‘ಮೇಕ್ ಇನ್ ಇಂಡಿಯಾ’ ಅಭಿಯಾನವು ಭಾರತವನ್ನು ವಿದೇಶಿ ಹೂಡಿಕೆಯ ತಾಣವಾಗಿ ಮತ್ತು ಜಾಗತಿಕವಾಗಿ ಉತ್ಪಾದನೆ, ವಿನ್ಯಾಸ ಮತ್ತು ನಾವೀನ್ಯತೆಗಳ ಪ್ರಮುಖ ತಾಣವಾಗಿ ಪ್ರಚಾರ ಮಾಡುವ ಗುರಿಯನ್ನು ಹೊಂದಿದೆ.  ಇದರ ಜೊತೆಗೆ ದೇಶದಲ್ಲಿ ಉದ್ಯಮಶೀಲತೆಯನ್ನು ಸಹ  ಉತ್ತೇಜಿಸುತ್ತದೆ. ಹಾಗೂ ನಮ್ಮ ದೇಶದಲ್ಲಿ ಹೂಡಿಕೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಆಧುನಿಕ ಮೂಲಸೌಕರ್ಯ, ವಿದೇಶಿ ಹೂಡಿಕೆಗೆ ಹೊಸ ವಲಯಗಳನ್ನು ಸ್ಥಾಪಿಸಿ  ವಿಶಾಲ ದೃಷ್ಟಿಕೋನದ ಮೂಲಕ ಸರ್ಕಾರ ಮತ್ತು ಕೈಗಾರಿಕೋದ್ಯಮಿಗಳ ನಡುವೆ  ಪಾಲುದಾರಿಕೆಯನ್ನು ಉತ್ತೇಜಿಸುತ್ತದೆ.


 ಉತ್ಪಾದನಾ ವಲಯವು ಕಳೆದ ದಶಕದಲ್ಲಿ ದೇಶದ ಜಿ.ಡಿ.ಪಿ ಗೆ  15% ಗೆ ಕೊಡುಗೆ ನೀಡುತ್ತಿತ್ತು .  ಮೇಕ್ ಇನ್ ಇಂಡಿಯಾ  ಯೋಜನೆ ಪ್ರಕಾರ 2020 ರ ವೇಳೆಗೆ ಈ   ಕೊಡುಗೆಯನ್ನು ಜಿಡಿಪಿಯ 25% ಕ್ಕೆ ಏರಿಸಲು ಗುರಿ ಹೊಂದಲಾಗಿತ್ತು .ಕೋವಿಡ್ ನ ಹಿಂಜರಿತದ ನಡುವೆಯೂ 26% ಗುರಿಮೀರಿದ ಸಾಧನೆ ಮಾಡಿರುವುದು ಭಾರತೀಯರಾದ ನಾವು ಹೆಮ್ಮೆ ಪಡುವ ಸಂಗತಿ.ಮತ್ತು ಮೇಕ್ ಇನ್ ಇಂಡಿಯಾ ಯಶಸ್ಸಿಗೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಾರದು. 


ಮೇಕ್ ಇನ್ ಇಂಡಿಯಾ ಲಾಂಛನವು ಇಂದು ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವುದು ಸುಳ್ಳಲ್ಲ. ಇದು

 ಅಶೋಕ ಚಕ್ರದಿಂದ ಸ್ಫೂರ್ತಿ ಪಡೆದ ದೇಹವನ್ನು ಹೊಂದಿರುವ ಸಿಂಹವು ಅಭಿವೃದ್ಧಿಯ  ಸಂಕೇತವಾಗಿದೆ.ಈ  ಲಾಂಛನದಲ್ಲಿ ಚಲಿಸುವ ಸಿಂಹವು  ಶಕ್ತಿಯನ್ನು ಸೂಚಿಸುತ್ತದೆ ಮತ್ತು ಸಿಂಹದ ದೇಹದ ಮೇಲೆ ಚಕ್ರಗಳು ಅಭಿವೃದ್ಧಿ ಮತ್ತು ಪ್ರಗತಿಯನ್ನು ಸೂಚಿಸುತ್ತವೆ.  ಈ ಮಿಷನ್ ಮೂಲಕ, ದೇಶದ ಯುವಕರು ಎದುರಿಸುತ್ತಿರುವ ನಿರುದ್ಯೋಗದ ಮಟ್ಟವನ್ನು ಕಡಿಮೆ ಮಾಡಲು ಸರ್ಕಾರವು ಒಂದು ದೊಡ್ಡ ಹೆಜ್ಜೆಯನ್ನು ಇಟ್ಟಿದೆ ಎಂದು ಹೇಳಬಹುದು.


 ಮೇಕ್ ಇನ್ ಇಂಡಿಯಾ ಪರಿಣಾಮಕಾರಿ ಆಗಲು ಸರ್ಕಾರಗಳು ಹಲವಾರು ಮಾರ್ಗಸೂಚಿಗಳನ್ನು ಹಾಕಿಕೊಂಡಿವೆ.

ಅವುಗಳೆಂದರೆ


 1 ಕಂಪನಿಗಳನ್ನು ಸ್ಥಾಪಿಸಲು ಅನಗತ್ಯ ಅಡತಡೆ ನಿವಾರಿಸಿ  ಅಗತ್ಯವಿರುವ ಕಾಗದಪತ್ರಗಳನ್ನು ಕಡಿಮೆ ಮಾಡಿ ತ್ವರಿತಗತಿಯಲ್ಲಿ ಅನುಮತಿ ನೀಡಲಾಗುತ್ತಿದೆ.


 2 ಸರ್ಕಾರಗಳು ಕೈಗಾರಿಕೆಗಳಿಗೆ  ಅನುಮೋದನೆ ನೀಡುವಾಗ ಅನಗತ್ಯ ವಿಳಂಬವನ್ನು ಕಡಿಮೆ ಮಾಡಲು ಕ್ರಮ ಕೈಗೊಂಡಿವೆ. 


3 ದೇಶದಲ್ಲಿ ಎಲ್ಲಿಯಾದರೂ ಉದ್ಯೋಗಗಳನ್ನು ಬದಲಾಯಿಸುವಾಗ ಅನುಕೂಲಕರವಾದ ಹಣ ವರ್ಗಾವಣೆಗೆ ನೀತಿಗಳನ್ನು ಮಾಡಲಾಗಿದೆ.  

4 ವೆಬ್ ಪೋರ್ಟಲ್ ಮೂಲಕ ವ್ಯಾಪಾರ ಘಟಕಗಳು, ಉದ್ಯಮಿಗಳ  ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ವಿಶೇಷವಾದ ಆನ್ಲೈನ್ ವ್ಯವಸ್ಥೆ ಮಾಡಿವೆ . 


 ಮೇಕ್ ಇನ್ ಇಂಡಿಯಾ ಮಿಷನ್ ಅಡಿಯಲ್ಲಿ  ಹಲವಾರು ವಲಯಗಳನ್ನು  ಗುರುತಿಸಲಾಗಿದೆ. 

 ಈ ಮಿಷನ್ ಅಡಿಯಲ್ಲಿ ಗುರುತಿಸಲಾಗಿರುವ ಇಪ್ಪತ್ತೈದು ವಲಯಗಳಿವೆ.  ಅವುಗಳಲ್ಲಿ ಆಟೋಮೊಬೈಲ್, ಆಟೋಮೊಬೈಲ್ ಭಾಗಗಳು, ವಾಯುಯಾನ, ಜೈವಿಕ ತಂತ್ರಜ್ಞಾನ, ರಾಸಾಯನಿಕಗಳು, ನಿರ್ಮಾಣ, ರಕ್ಷಣಾ ಉತ್ಪಾದನೆ, ವಿದ್ಯುತ್ ಯಂತ್ರಗಳು, ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ಸಂಸ್ಕರಣೆ, ಐಟಿ ಮತ್ತು ಬಿಪಿಎಂ, ಚರ್ಮ, ಮನರಂಜನೆ ಮತ್ತು ಮಾಧ್ಯಮ, ಗಣಿಗಾರಿಕೆ, ತೈಲ ಮತ್ತು ಅನಿಲ, ಔಷಧೀಯ ಉದ್ಯಮ  , ಹಡಗು, ರೈಲ್ವೇ, ನವೀಕರಿಸಬಹುದಾದ ಶಕ್ತಿ, ರಸ್ತೆಗಳು ಮತ್ತು ಹೆದ್ದಾರಿಗಳು,  ಬಟ್ಟೆ ಮತ್ತು ಉಡುಪುಗಳು, ಉಷ್ಣ ವಿದ್ಯುತ್, ಪ್ರವಾಸೋದ್ಯಮ ಮತ್ತು ಆತಿಥ್ಯ, ಮುಂತಾದವು ಪ್ರಮುಖವಾಗಿವೆ.



  ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ  ಪ್ರಯೋಜನಗಳು 


 1 ಭಾರತದಲ್ಲಿ ಕಾರ್ಮಿಕ ಮತ್ತು ನೈಸರ್ಗಿಕ ಸಂಪನ್ಮೂಲಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ ಮತ್ತು ಇದು ಪ್ರಪಂಚದಲ್ಲಿ ಹೆಚ್ಚು ಉತ್ಪಾದನೆ ಮಾಡುವ ಕೆಲವೇ  ದೇಶಗಳಲ್ಲಿ ಒಂದಾಗಿದೆ.ಈ ಅಭಿಯಾನದ ಮೂಲಕ ಬೃಹತ್ ಜನಸಂಖ್ಯೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ಮೇಕ್ ಇನ್ ಇಂಡಿಯಾ ಸಹಕಾರಿಯಾಗಿದೆ.


 2 ಪ್ರಥಮ ವಲಯ ಮತ್ತು  ಉತ್ಪಾದನಾ ವಲಯಗಳು ವ್ಯಾಪಾರ ವಲಯವನ್ನು ಹೆಚ್ಚಿಸುವುದಲ್ಲದೆ ಭಾರತೀಯ ಆರ್ಥಿಕತೆಯ ಜಿ.ಡಿ.ಪಿಯನ್ನು ಹೆಚ್ಚಿಸುವಲ್ಲಿ ಈ ಅಭಿಯಾನ ಪ್ರಮುಖ ಪಾತ್ರ ವಹಿಸುತ್ತದೆ.

3  ದೇಶದಲ್ಲಿ  ಹೆಚ್ಚಿನ  ಕಾರ್ಖಾನೆಗಳನ್ನು ತೆರೆಯುವುದರ ಮೂಲಕ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.


ಇಂತಹ ಮಹೋನ್ನತ ಉದ್ದೇಶ ಇಟ್ಟುಕೊಂಡ ಮೇಕ್ ಇನ್ ಇಂಡಿಯಾ  ಗಮನಾರ್ಹ ಸಾಧನೆ ಮಾಡಿದ್ದರೂ 

 ಕಠಿಣ ಕಾರ್ಮಿಕ ಕಾನೂನುಗಳು, ದೊಡ್ಡ ಯೋಜನೆಗಳಿಗೆ ಪರಿಸರ ಅನುಮತಿ ನೀಡುವಲ್ಲಿ ವಿಳಂಬ, ಕಳಪೆ ತಂತ್ರಜ್ಞಾನ ಮತ್ತು ಸಾರಿಗೆ ವ್ಯವಸ್ಥೆಯಂತಹ ಹಲವಾರು ಸವಾಲುಗಳನ್ನು ಮೇಕ್ ಇನ್ ಇಂಡಿಯಾ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಗಳಿಸಲು ಅಡತಡೆಯಾಗಿವೆ .



 ಉತ್ಪಾದನೆಯ ಹೆಚ್ಚಳವು ಯಾವುದೇ ದೇಶದ ಆರ್ಥಿಕತೆಯಲ್ಲಿ ಬೆಳವಣಿಗೆಗೆ ಕಾರಣವಾಗುತ್ತದೆ. ಎಂದು ಮನಗಂಡು ಆರಂಭಿಸಿದ  ಮೇಕ್ ಇನ್ ಇಂಡಿಯಾ ಅಭಿಯಾನವು ವಿಶ್ವದ ಗಮನ ಸೆಳೆದಿದೆ.ಈ ಅಭಿಯಾನವು ಅನೇಕ ಸಣ್ಣ ಉದ್ಯಮಿಗಳಿಗೆ ಬೆಳೆಯಲು ಮತ್ತು ದೊಡ್ಡ ಜನಸಂಖ್ಯೆಗೆ ಉದ್ಯೋಗವನ್ನು ಒದಗಿಸುತ್ತಿದೆ. ವಿದೇಶಿ ಕಂಪನಿಗಳಿಂದ ಬರುವ ಹೂಡಿಕೆಯೊಂದಿಗೆ ಮತ್ತು ಉತ್ಪಾದನಾ ವಲಯದ ಬೆಳವಣಿಗೆಯ ಮೂಲಕ ನಮ್ಮ ದೇಶವು ಆರ್ಥಿಕವಾಗಿ ಸಬಲವಾಗಿ ವಿಶ್ವದ ಸದೃಢ ಆರ್ಥಿಕತೆ ಹೊಂದಿದ ದೇಶಗಳ ಸಾಲಿನಲ್ಲಿ ನಮ್ಮ ದೇಶ ನಿಲ್ಲುವುದರಲ್ಲಿ ಸಂದೇಹವಿಲ್ಲ.


 ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529

04 ಅಕ್ಟೋಬರ್ 2021

ವಟವಟವೀರರು


 


ಅಲ್ಪ ವಿದ್ಯೆ ಮಹಾಗರ್ವಿ .

ಲೇಖನ


ಅಲ್ಪ ಜ್ಞಾನವಿದ್ದರೂ

ಗರ್ವಕ್ಕೇನೂ ಕಮ್ಮಿ ಇಲ್ಲ|

ಅರ್ಧ ತುಂಬಿದ ಕೊಡ

ಸದ್ದು ಮಾಡಿತು 

ಬೀದಿಯಲೆಲ್ಲಾ||


ಎಂಬಂತೆ ಇತ್ತೀಚಿನ ದಿನಗಳಲ್ಲಿ ಅರೆ ಬರೆ ಕಲಿತು ಬುದ್ದಿಜೀವಿಗಳೆಂದು ಸ್ವಯಂ ಘೋಷಿಸಿಕೊಂಡ ಕೆಲವರು ಗರ್ವದಿಂದ ಮಾತನಾಡುವ, ಮತ್ತು ಅವರ ನಡವಳಿಕೆಗಳನ್ನು ಗಮನಿಸಿದರೆ ಅಸಹ್ಯ ಉಂಟಾಗುತ್ತದೆ.


ವಿದ್ಯೆ ಮಾನವನನ್ನು ಸುಸಂಸ್ಕೃತನನ್ನಾಗಿ ಮುಕ್ತಿಯ ಕಡೆಗೆ ಕೊಂಡಯ್ಯುವ ಒಂದು ವಾಹಕ 

ಅದಕ್ಕೆ "ಸಾವಿದ್ಯಾಯಾ ವಿಮುಕ್ತಯೆ" ಎಂದು ಹೇಳಿರುವುದು.

ಕೆಲವರು ಅಲ್ಪ ಜ್ಞಾನ ಹೊಂದಿದವರು ಮಹಾಗರ್ವ ಪಡುವವರನ್ನು ನಮ್ಮ ಜೀವನದಲ್ಲಿ ಬಹಳ ಜನರನ್ನು ನೋಡಿರುತ್ತೇವೆ.ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ ಕೆಲವರು ಮಾತ್ರ ಹೆಚ್ಚು ತಿಳಿದಿದ್ದರೂ ತಮ್ಮ ವಿದ್ಯೆಯನ್ನು ಪ್ರದರ್ಶನ ಮಾಡದೆ ಸಮಯ ಸಂಧರ್ಭ ಬಂದಾಗ ಅದನ್ನು ಪ್ರಕಟ ಮಾಡುವರು. 


ನಾವೂ ಸಹ ನಮ್ಮ ವಿದ್ಯೆಯನ್ನು ಅನವಶ್ಯಕವಾಗಿ ಒಣ ಪ್ರದರ್ಶನ ಮಾಡದೇ ಇರೋಣ. ಕಲಿಕೆಯು ಗರ್ಭದಿಂದ ಗೋರಿಯವರೆಗೆ ನಿರಂತರವಾಗಿರುವಂತೆ ನೋಡಿಕೊಳ್ಳೋಣ.

ತನ್ಮೂಲಕ ‌ನಿಜವಾದ ವಿದ್ಯಾವಂತರಾಗೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

9900925529


ಜನಮಿಡಿತ .೪/೧೦/೨೧


 

ಡಿಜಿಟಲ್ ಇಂಡಿಯ .ಪ್ರಬಂಧ


 


ಡಿಜಿಟಲ್ ಇಂಡಿಯಾ


ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯ ಪರಿಣಾಮವಾಗಿ  ಆಧುನಿಕ ಜಗತ್ತು ದಿನಕ್ಕೊಂದು ಆವಿಷ್ಕಾರದಿಂದಾಗಿ ಹೊಸ ಜೀವನಕ್ಕೆ ತೆರೆದು ಕೊಳ‍್ಳುತ್ತಿದೆ.ಇದರ ಜೊತೆಯಲ್ಲಿ ಹೊಸ ಸವಾಲುಗಳನ್ನು ಸಹ ನಾವು ಎದುರಿಸುತ್ತಿದ್ದೇವೆ .ವಿಜ್ಞಾನ ತಂತ್ರಜ್ಞಾನದ ಸದುಪಯೋಗ ಪಡಿಸಿಕೊಂಡು ಜನರಿಗೆ ಉತ್ತಮ ಸೇವೆ ನೀಡಲು   ಭಾರತ ಸರ್ಕಾರವು 2015 ರಲ್ಲಿ  ಬೃಹತ್ ಅಭಿಯಾನವನ್ನು ಆರಂಭಿಸಿದೆ ಇದರ ಅನುಷ್ಠಾನದಿಂದ ದೇಶದ ವಿವಿಧ ಪ್ರದೇಶಗಳಲ್ಲಿ ಸರ್ಕಾರಿ ಸೇವೆಗಳು ಸುಲಭವಾಗಿ ಸಾಮಾನ್ಯ ಜನರಿಗೆ ತಲುಪಲು ಸಹಾಯಕಾರಿಯಾಗಿದೆ.  "ಡಿಜಿಟಲ್ ಇಂಡಿಯಾ" ಅಭಿಯಾನದ ಅಂಗವಾಗಿ ಭಾರತ ಸರ್ಕಾರವು ಭಾರತದಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲು ಆರಂಭಿಸಿತು. ದೇಶದಾದ್ಯಂತ ತನ್ನ ಆನ್ಲೈನ್ ಮೂಲಸೌಕರ್ಯವನ್ನು ಸುಧಾರಿಸುವ ಮೂಲಕ ಸರ್ಕಾರಿ ಸೇವೆಗಳನ್ನು ನಾಗರಿಕರಿಗೆ ಸುಲಭವಾಗಿ ವಿದ್ಯುನ್ಮಾನದ ಮೂಲಕ ಲಭ್ಯವಾಗುವಂತೆ ಮಾಡುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ.. ದೇಶವನ್ನು ಡಿಜಿಟಲ್ ಸಬಲೀಕರಣಗೊಳಿಸಲು ಅಂತರ್ಜಾಲ ಸಂಪರ್ಕವನ್ನು ಹೆಚ್ಚಿಸುವುದೂ ಸಹ ಈ ಅಭಿಯಾನದ ಅಂಗವಾಗಿದೆ.  ಜನಸಾಮಾನ್ಯರು  ಅವರ ದೈನಂದಿನ ಜೀವನದಲ್ಲಿ ತಂತ್ರಜ್ಞಾನವನ್ನು ಬಳಸಲು ಪ್ರೋತ್ಸಾಹಿಸುತ್ತದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 1, 2015 ರಂದುಈ ಅಭಿಯಾನವನ್ನು ಪ್ರಾರಂಭಿಸಿದರು. ಇದು ಗ್ರಾಮೀಣ ಭಾರತವನ್ನು ಹೈಸ್ಪೀಡ್ ಇಂಟರ್ನೆಟ್ ಸಂಪರ್ಕದ ಸಹಾಯದಿಂದ ಸಂಪರ್ಕಿಸುವ ಗುರಿಯನ್ನು ಹೊಂದಿದೆ.


"ಡಿಜಿಟಲ್ ಇಂಡಿಯಾ" ಅಭಿಯಾನದ ಮೂಲಭೂತವಾಗಿ ಮೂರು ಅಂಶಗಳ ಆಧಾರದ ಮೇಲೆ ನಿಂತಿದೆ. ಅವುಗಳನ್ನು ಈ ಕೆಳಗಿನಂತೆ ವಿವರಿಸಬಹುದು.


*ಡಿಜಿಟಲ್ ಮೂಲಸೌಕರ್ಯದ ಸೃಷ್ಟಿ*


ದೇಶದಾದ್ಯಂತ ವಿವಿಧ ಡಿಜಿಟಲ್ ಸೇವೆಗಳನ್ನು ನಿಯೋಜಿಸಲು ಸಾಧ್ಯವಾಗಬೇಕಾದರೆ, ವಿಶೇಷವಾಗಿ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬಲವಾದ ಡಿಜಿಟಲ್  ಮೂಲಸೌಕರ್ಯವನ್ನು ರಚಿಸುವುದು ಅಗತ್ಯವಾಗಿದೆ.  ಇಂದು  ದೇಶದ ಕೆಲವು ಪ್ರದೇಶಗಳು  ಯಾವುದೇ ಎಲೆಕ್ಟ್ರಾನಿಕ್ ನೆಟ್ವರ್ಕ್ ಹೊಂದಿಲ್ಲ. ದೇಶಾದ್ಯಂತ ಡಿಜಿಟಲ್ ನೆಟ್ವರ್ಕ್ ಸ್ಥಾಪಿಸಲು ಇದು ಸಕಾಲವಾಗಿದೆ. "ಭಾರತ್ ಬ್ರಾಡ್‌ಬ್ಯಾಂಡ್ ನೆಟ್ ವರ್ಕ್ ಲಿಮಿಟೆಡ್," "ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್ ವರ್ಕ್" ಯೋಜನೆಗಳು  ಡಿಜಿಟಲ್ ಇಂಡಿಯಾ ಯೋಜನೆಯ ಜವಾಬ್ದಾರಿಯನ್ನೂ ಹೊಂದಿದೆ.


*ಡಿಜಿಟಲ್ ಸೇವೆಯ ವಿತರಣೆ*


ಡಿಜಿಟಲ್ ಇಂಡಿಯಾ ಅಭಿಯಾನದ ಪ್ರಮುಖ ಉದ್ದೇಶವೆಂದರೆ ಸರ್ಕಾರಿ ಸೇವೆಗಳು ಮತ್ತು ಇತರ ಸೇವೆಗಳನ್ನು ಡಿಜಿಟಲ್ ಆಗಿ ಜನರಿಗೆ  ತಲುಪಿಸುವುದು. ಭೌತಿಕದಿಂದ ಡಿಜಿಟಲ್ ಗೆ ಸೇವೆಗಳನ್ನು ತಲುಪಿಸುವ ವಿಧಾನವನ್ನು ಬದಲಾಯಿಸುವುದು ಸುಲಭ. ಭಾರತ ಸರ್ಕಾರದ ಅನೇಕ ಸೇವೆಗಳನ್ನು ಡಿಜಿಟಲ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಡಿಜಿಟಲೀಕರಣಗೊಳಿಸಲಾಗಿದೆ. ಜನರ ದೈನಂದಿನ ಹಣಕಾಸಿನ ವಹಿವಾಟುಗಳನ್ನು ಡಿಜಿಟಲ್ ಆಗಿ  ಪರಿವರ್ತಿಸಲಾಗಿದೆ. ವಹಿವಾಟುಗಳಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭ್ರಷ್ಟಾಚಾರವನ್ನು ತಡೆಯಲು ಎಲ್ಲಾ ಹಣದ ವಹಿವಾಟುಗಳನ್ನು ಆನ್ ಲೈನ್ ನಲ್ಲಿ ಮಾಡಲಾಗುತ್ತಿದೆ.


*ಡಿಜಿಟಲ್ ಸಾಕ್ಷರತೆ*


ಹಿಂದಿನ ಕಾಲದಲ್ಲಿ ಓದು. ಬರಹ ಲೆಕ್ಕಾಚಾರ ಗೊತ್ತಿದ್ದರೆ ಸಾಕ್ಷರತೆ ಹೊಂದಿದವರು ಎನ್ನುತ್ತಿದ್ದರು.

ಈಗ ಈ ಮೇಲಿನವುಗಳ ಜೊತೆಯಲ್ಲಿ ಕಂಪ್ಯೂಟರ್ ಮತ್ತು ಡಿಜಿಟಲ್ ಜ್ಞಾನ ಹೊಂದಿರುವುದು ಅಪೇಕ್ಷಣೀಯ


"ಭಾರತದ ಜನರ ಸಂಪೂರ್ಣ ಭಾಗವಹಿಸುವಿಕೆಗಾಗಿ, ಅವರು ಹೊಂದಿರಬೇಕಾದ ಜ್ಞಾನ. ಕೌಶಲ್ಯ ಮತ್ತು ಸಾಮರ್ಥ್ಯವನ್ನು ಡಿಜಿಟಲ್ ಸಾಕ್ಷರತೆ" ಎಂದು ಕರೆಯಬಹುದು.

 ಡಿಜಿಟಲ್ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸಲು ಅಗತ್ಯವಿರುವ ಮೂಲಭೂತ ನಡವಳಿಕೆ, ಜ್ಞಾನ ಮತ್ತು ಕೌಶಲ್ಯಗಳು ಕಡ್ಡಾಯವಾಗಿದೆ. ಡೆಸ್ಕ್ ಟಾಪ್ ಪಿಸಿಗಳು, ಲ್ಯಾಪ್ ಟಾಪ್ ಗಳು, ಟ್ಯಾಬ್ಲೆಟ್ ಗಳು ಮತ್ತು ಸ್ಮಾರ್ಟ್ ಫೋನ್ ಗಳನ್ನು ಡಿಜಿಟಲೀಕರಣ  ಉದ್ದೇಶಕ್ಕಾಗಿ ಬಳಸುವ  ಸಾಧನಗಳಾಗಿವೆ.

ದೇಶದ  ಆರು ಕೋಟಿ  ಗ್ರಾಮೀಣ ಕುಟುಂಬಗಳಲ್ಲಿ ಡಿಜಿಟಲ್ ಸಾಕ್ಷರತೆ ನೀಡಲು ಗುರಿ ಹೊಂದಲಾಗಿದೆ .ಆ ನಿಟ್ಟಿನಲ್ಲಿ ಅಲ್ಪ ಮಟ್ಟದಲ್ಲಿ ಪ್ರಗತಿ ಸಾಧಿಸಿರುವುದು ಗಮನಾರ್ಹ. 


ಡಿಜಿಟಲ್ ಇಂಡಿಯಾ ಕಾರ್ಯಕ್ರಮದೊಂದಿಗೆ, ಭಾರತ ಸರ್ಕಾರವು ಒಟ್ಟಾರೆಯಾಗಿ ಅನೇಕ ರಂಗಗಳಲ್ಲಿ ಡಿಜಿಟಲೀಕರಣ ಮಾಡಿ  ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸಲು ಆಶಿಸುತ್ತಿದೆ. 

ಭಾರತ ಸರ್ಕಾರ ಡಿಜಿಟಲ್ ಇಂಡಿಯಾದ ಒಂಭತ್ತು ಮೂಲ ಅಂಶಗಳನ್ನು 

  'ಪಿಲ್ಲರ್ ಆಫ್ ಡಿಜಿಟಲ್ ಇಂಡಿಯಾ' ಎಂದು ಕರೆದು ಡಿಜಿಟಲೀಕರಣಕ್ಕೆ ಕಂಕಣ ಬದ್ದವಾಗಿದೆ.ಆ ಒಂಭತ್ತು ಅಂಶಗಳು 


1. ಬ್ರಾಡ್ಬ್ಯಾಂಡ್ ಹೆದ್ದಾರಿಗಳನ್ನು ಸೃಷ್ಟಿ ಮಾಡುವುದು.

2. ಸರ್ವರಿಗೂ  ಮೊಬೈಲ್ ಸಂಪರ್ಕ ಏರ್ಪಡಿಸುವುದು

3. ಸಾರ್ವಜನಿಕ ಹಿತಾಸಕ್ತಿ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳುವುದು

4. ಇ-ಆಡಳಿತ ಜಾರಿ ಮಾಡುವುದು

5. ಇ-ಕ್ರಾಂತಿಗೆ ಒತ್ತು  ನೀಡುವುದು.

6. ಜಾಗತಿಕ ಮಾಹಿತಿ ಸಂಗ್ರಹ ಮಾಡುವುದು.

7. ಎಲೆಕ್ಟ್ರಾನಿಕ್ಸ್ ವಸ್ತುಗಳ  ತಯಾರಿಕೆ ಮಾಡುವುದು.

8. ಉದ್ಯೋಗಿಗಳಿಗಾಗಿ ಮಾಹಿತಿ ತಂತ್ರಜ್ಞಾನದಲ್ಲಿ ತರಬೇತಿ ನೀಡುವುದು.

9. ಡಿಜಿಟಲೀಕರಣದ ಬಗ್ಗೆ ಜನರಲ್ಲಿ  ಜಾಗೃತಿ ಮೂಡಿಸುವುದು.


ತಂತ್ರಜ್ಞಾನದ ಮಹತ್ವದ ಅರಿವು ಡಿಜಿಟಲ್ ಇಂಡಿಯಾ ಅಭಿಯಾನದಿಂದ ಭಾರತದ ಜನಸಾಮಾನ್ಯರಲ್ಲಿ ಯಶಸ್ವಿಯಾಗಿ ಸೃಷ್ಟಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇಂಟರ್ನೆಟ್ ಮತ್ತು ತಂತ್ರಜ್ಞಾನದ ಬಳಕೆಯಲ್ಲಿ ಅಪಾರ ಬೆಳವಣಿಗೆ ಕಂಡುಬಂದಿದೆ.  ಕೋವಿಡ್ ಸಮಯದಲ್ಲಿ ಡಿಜಿಟಲ್ ಇಂಡಿಯಾದ ಮಹತ್ವ ಇನ್ನೂ ಹೆಚ್ಚಾಗಿರುವುದು ಕಂಡುಬರುತ್ತದೆ. 


ಪ್ರಪಂಚದಾದ್ಯಂತದ ತಂತ್ರಜ್ಞಾನ ದೈತ್ಯರು ಡಿಜಿಟಲ್ ಇಂಡಿಯಾ ಅಭಿಯಾನದತ್ತ ಗಮನ ಹರಿಸುತ್ತಾ  ಸಂತೋಷದಿಂದ ಬೆಂಬಲಿಸುತ್ತಿದ್ದಾರೆ. ಫೇಸ್ಬುಕ್  ಸಿ.ಇ.ಒ ಮಾರ್ಕ್ ಜುಕರ್ ಬರ್ಗ್ ಕೂಡ ಡಿಜಿಟಲ್ ಇಂಡಿಯಾವನ್ನು ಬೆಂಬಲಿಸಿದ್ದಾರೆ. ಭಾರತದ 500 ರೈಲ್ವೇ ನಿಲ್ದಾಣಗಳಲ್ಲಿ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಒದಗಿಸಲು ಗೂಗಲ್ ತನ್ನ ಬದ್ಧತೆಯನ್ನು ಪ್ರದರ್ಶಸಿದೆ. ಮೈಕ್ರೋಸಾಫ್ಟ್ ದೇಶದ 500,000 ಹಳ್ಳಿಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ನೀಡಲು ಒಪ್ಪಿಕೊಂಡಿದೆ. ಮೈಕ್ರೋಸಾಫ್ಟ್ ಕೂಡ ಭಾರತೀಯ ದತ್ತಾಂಶ ಕೇಂದ್ರಗಳ ಮೂಲಕ ಭಾರತವನ್ನು ತನ್ನ ಕ್ಲೌಡ್ ಹಬ್ ಆಗಿ ಮಾಡುತ್ತಿದೆ. ಒರಾಕಲ್ ಸ್ಮಾರ್ಟ್ ಸಿಟಿ ಉಪಕ್ರಮಗಳು ಮತ್ತು ಪಾವತಿಗಳಲ್ಲಿ ಕೆಲಸ ಮಾಡಲು 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಹೂಡಿಕೆ ಮಾಡಿದೆ.


ಹೀಗೆ ಡಿಜಿಟಲ್ ಇಂಡಿಯಾ ಅಭಿಯಾನವು ಭಾರತದಲ್ಲಿ ಉತ್ತಮವಾಗಿ ಜಾರಿಯಾಗುತ್ತಿದೆ. ಇದಕ್ಕೆ ಸರ್ಕಾರಗಳು ,ಕಂಪನಿಗಳು ಉತ್ತಮ ಬೆಂಬಲ ನೀಡುತ್ತಿವೆ.ಇದರ ಜೊತೆಗೆ ಸಾರ್ವಜನಿಕರು ಉತ್ತಮ ಬೆಂಬಲ ನೀಡಿ ಭಾರತವನ್ನು ಡಿಜಿಟಲ್ ಭಾರತ ಮಾಡಲು ಪಣ ತೊಡಬೇಕಿದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ