30 ಸೆಪ್ಟೆಂಬರ್ 2021

ಯೇಗ್ದಾಗೆಲ್ಲಾ ಐತೆ . ವಿಮರ್ಶೆ


 



ಯೇಗ್ದಾಗೆಲ್ಲಾ ಐತೆ 

ವಿಮರ್ಶೆ

ಬೆಳಗೆರೆ ಕೃಷ್ಣಶಾಸ್ತ್ರಿಗಳು


ಮುಕುಂದೂರು ಸ್ವಾಮಿಗಳೊಂದಿಗೆ ಕಳೆದ ಸುಮಧುರ ಕ್ಷಣಗಳು , ಅವರಿಂದ  ಅರಿವು  ಪಡೆದ  ಘಳಿಗೆಗಳನ್ನು ತಮ್ಮ ನೆನಪುಗಳ ಭಂಢಾರದಿಂದ  ಬುತ್ತಿಯನ್ನು ಬಿಚ್ಚಿ ಉಣಬಡಿಸಿದ ಪುಸ್ತಕವೇ ಏಗ್ದಾಗೆಲ್ಲಾ ಐತೆ. 

ಕಾಮದೇನು ಪುಸ್ತಕ ಭವನ ಪ್ರಕಾಶನ

ಸಂಸ್ಥೆ ಪ್ರಕಟಿಸಿದ ಈ ಪುಸ್ತಕ 1995 ರಿಂದ 2015 ರ ವೇಳೆಗೆ 

ಹನ್ನೊಂದು ಬಾರಿ ಮುದ್ರಣ ಕಂಡಿರುವುದು ಆ ಪುಸ್ತಕಕ್ಕೆ ಇರುವ ಬೇಡಿಕೆ ಮತ್ತು  ಮಹತ್ವ  ಸೂಚಿಸುತ್ತದೆ.


೫೪ ಚಿಕ್ಕ ಅಧ್ಯಾಯಗಳು ಇರುವ ಪುಟ್ಟ ಪುಸ್ತಕದಲ್ಲಿ ಏನುಂಟು ಏನಿಲ್ಲ?  ಇಡೀ ಜೀವನದ ರಹಸ್ಯವಿದೆ . ಆಧ್ಯಾತ್ಮ ಇದೆ, ಜೀವನ ಪ್ರೀತಿ ಇದೆ, ತಿಳುವಳಿಕೆ ಇದೆ, ಸಂದೇಶವಿದೆ ಒಟ್ಟಾರೆ ಸರ್ವರೂ ಈ ಪುಸ್ತಕ ಓದಿದರೆ ಸಾಲದು ,ಆಗಾಗ್ಗೆ ಅದರ ತಿರುಳನ್ನು ಚಿಂತನ ಮಂಥನ ಮಾಡಿಕೊಳ್ಳಬೇಕು.


ಮಧ್ಯ ಕರ್ನಾಟಕದ ಹಳ್ಳಿಯ ಭಾಷೆಯಲ್ಲಿ ಮಾತನಾಡುವ ಸ್ವಾಮೀಜಿ ಸರಳ ಪದಗಳಲ್ಲಿ  ಮಾತನಾಡುತ್ತಾ, ನಗುತ್ತಾ ನಗಿಸುತ್ತಾ, ಜೀವನ ದರ್ಶನ ಮಾಡಿಸಿಬಿಡುವರು.


ಒಮ್ಮೆ ಕೃಷ್ಣ ಶಾಸ್ತ್ರಿಗಳಿಗೆ ತೀವ್ರವಾದ ಅನಾರೋಗ್ಯ ಕಾಡಿದಾಗ ತಮ್ಮ ಶಿಷ್ಯ ನ ಕಾಣಲು ಬಂದು ಹೀಗೆ ಧೈರ್ಯ ಹೇಳುತ್ತಾರೆ

"ಆರೈಕೆ ಮಾಡೋರ ಮೈಯಾಗೆ ಆರು ತಿಂಗಳು ಇರ್ತೀನಿ ಅನ್ನುತ್ತೆ ಕಾಯಿಲೆ. ಏನೂ ಮಾಡಬೇಡ.ಅವನ್ಯಾರ್ ಕರೆದಿದ್ದು? ಮುತುವರ್ಜಿ ಮಾಡಿದಷ್ಟು ಮೇಲೇರುತ್ತಾನೆ .ತಿರುಗಿ ನೋಡದಂತೆ ಸುಮ್ನಿದ್ರೆ ,ಇವರ್ಯಾಕೋ ಮರ್ಯಾದೆ ಕೊಡೊಲ್ಲ ಅಂತ ಜಾಗ ಬಿಡ್ತಾನೆ ಅಷ್ಟೇ" ಎಂದು ಧೈರ್ಯ ಹೇಳಿದರು ಪವಾಡ ಸದೃಶವಾಗಿ ಕಾಯಿಲೆ ವಾಸಿಯಾಯಿತು.

ಈ ಪ್ರಕರಣ ಗಮನವಿಟ್ಟು ನೋಡಿದರೆ ಇಂದಿಗೂ ಪ್ರಸ್ತುತ. ಇತ್ತೀಚಿನ ದಿನಗಳಲ್ಲಿ ನಮ್ಮ ಬಾಧಿಸುವ ವಿವಿಧ ರೋಗಗಳಿಗೆ ಹೆದರಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ರೋಗಕ್ಕಿಂತ ಅವರಲ್ಲಿ ಇರುವ ಅವ್ಯಕ್ತ ಭಯ ಕೆಲವೊಮ್ಮೆ ರೋಗಿಗಳನ್ನು ಸಾವಿನ ಮನೆಗೆ ಕೊಂಡೊಯ್ಯುತ್ತದೆ.


ಕಾಡಿನ ಹೂಗಳೊಂದಿಗೆ ಸ್ವಾಮೀಜಿ ಮಾತನಾಡುವ ಬಗೆ ಸುಂದರ ಇದು ನಾವು ಪ್ರಕೃತಿಯ ಜೊತೆಗೆ ಹೊಂದಿಕೊಂಡು ಹೋಗಬೇಕು ಎಂಬ ಸಂದೇಶವನ್ನು ನೀಡುತ್ತದೆ.

"ಮನುಸ್ಯ ತಾನೇ ತಿರನಾಗಿ ಬಾಳೋನು ಅಂಬಂಗೆ ಕಣ್ಣಿಗೆ ಕಂಡದ್ದನ್ನೆಲ್ಲಾ ತನ್ನ ಸುಖಕ್ಕೇಂತ ಹಾಳು ಮಾಡೋದನ್ನು ಕಲಿತು ತಾನೂ ಹಾಳಾಗ್ತಾನೆ " ಎಂಬ ಸ್ವಾಮೀಜಿಯವರ ಮಾತಿನಲ್ಲಿ ಪರಿಸರದ ಬಗ್ಗೆ ಕಾಳಜಿ ಇದೆ ಇತರ ಜೀವಗಳ ಬಗ್ಗೆ ಸಹಾನುಭೂತಿ ಇದೆ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಬರೀ ಯೋಜನೆ ಮಾಡಿ ಭಾಷಣ ಬಿಗಿವ ನಾಯಕರು ಸ್ವಾಮೀಜಿ ರವರ ಈ ಸಂದೇಶಗಳನ್ನು ಅಳವಡಿಸಿಕೊಂಡು ಬಾಳಬೇಕಿದೆ.


ಇಂದಿನ ನಮ್ಮ ಬಹುತೇಕ ರೋಗಿಗಳಿಗೆ ನಮ್ಮ ಅಹಾರ ಪದ್ದತಿ, ಜೀವನ ಶೈಲಿ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ  .ಇದರ ಹಿನ್ನೆಲೆಯಲ್ಲಿ ಸ್ವಾಮೀಜಿ ರವರ ಮಾತುಗಳು ಹೀಗಿವೆ

"ಮುದ್ದೆ ಅಂತ ಊಟ ಇಲ್ಲ ಸಿದ್ದಪ್ಪನಂತ ದೇವ್ರಿಲ್ಲ ಅಂತಾರೆ.ಆದ್ರೆ ಒಂದ್ಮಾತು ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಹೇಳ್ಕಂಡು ಮುದ್ದೆ ಮುರೀರಪ್ಪಾ ಅದರಾಗೈತೆ ಮುಕುಂದೂರಿನ ಸೊಗಸು"

ಹಳ್ಳಿಯ ಜನರ ಆಧ್ಯಾತ್ಮಿಕ ಜೀವನದ ಕಡೆಗೆ ಗಮನ ನೀಡಿದ್ದ ಸ್ವಾಮೀಜಿ ರವರು

ಭಜನೆಯ ಮೂಲಕ ಸತ್ಸಂಗಗಳ ಮೂಲಕ   ಕುಂಡಲಿನಿ ಯೋಗದ ಬಗ್ಗೆ 

ವಿವಿಧ ಚಕ್ರ ಗಳ ಬಗ್ಗೆ ಆಂಗಿಕ ಅಭಿನಯ ಮಾಡಿ ಜನರಿಗೆ ಪ್ರವಚನ ನೀಡುತ್ತಿದ್ದ ಬಗ್ಗೆ ಕೃಷ್ಣ ಶಾಸ್ತ್ರಿಗಳು ತಮ್ಮ ಪುಸ್ತಕದಲ್ಲಿ ಚೆನ್ನಾಗಿ ವಿವರಗಳನ್ನು ನೀಡಿದ್ದಾರೆ.


ಅರಿಷಡ್ ವರ್ಗಗಳು ನಮ್ಮ ನಿಜವಾದ ಶತ್ರುಗಳು ಅವು ಒಂದಕ್ಕೊಂದು ಪೂರಕವಾಗಿ ನಮ್ಮ ನಾಶಮಾಡಲು ಹೊಂಚು ಹಾಕುತ್ತವೆ ಎಂಬುದನ್ನು ಸ್ವಾಮೀಜಿ ರವರು ಹೀಗೆ ಹೇಳಿದರು.

"ಅರಿಷಡ್ ವರ್ಗ ದಲ್ಲಿ ಕಾಮ ಎಂಬ ಒಂದನ್ನು ಹತ್ತಿರ ಕರೆದರೆ ಉಳಿದ ಐದು ಒಳಹೊಕ್ಕು ನಮ್ಮನ್ನು ನಾಶ ಮಾಡಿ ಬಿಡುತ್ತವೆ " 


ಅಹಂ ನಿಂದ ಏನೆಲ್ಲಾ ಅನಾಹುತಗಳಾಗಿವೆ ಎಂದು ನಾವು ನೋಡಿದ್ದೇವೆ ಅದನ್ನೇ ಸ್ವಾಮೀಜಿಯವರು ತಮ್ಮ ಭಾಷೆಯಲ್ಲಿ

"ಗರಾ ಬುಟ್ರೇನೆ ಗುರು ನೋಡಪ್ಪ

ಸಾವ್ಕಾರಂತಾವ ದುಡ್ಡಿರೋದು ಸಂನ್ಯಾಸಿತಾವ ಸಿದ್ದಿ ಇರೋದು ಎಳ್ಡು ಒಂದೇ ಕಣೋ ಮಗ ಅವ್ನಿಗೂ ಹಾಂಕಾರ ಬಿಟ್ಟಿಲ್ಲ ,ಇವ್ನಿಗೂ ಹಾಂಕಾರ ಬಿಟ್ಟಿಲ್ಲ" .ಎಂದು ಅರ್ಥ ನೀಡಿರುವರು.

"ಸಮಾಧಿ ಏನಿದ್ದರೂ ಬದುಕಿದ್ದಾಗಲೂ ಆಗೋದನ್ನು ಕಲೀಬೇಕು "ಎಂದು ಹೇಳುವ ಮೂಲಕ ಜೀವನವೇ ಯೋಗವಾಗಬೇಕು ,ನಾವು ಬದುಕಿರುವಾಗ ಸಮಾಧಿ ಸ್ಥಿತಿ ತಲುಪಬೇಕು ಎಂದು ಸೂಚ್ಯವಾಗಿ ಹೇಳಿರುವರು.

ಸ್ವಾಮೀಜಿರವರು ರಾಮಾಯಣ, ಮಹಾಭಾರತ, ಭಗವದ್ಗೀತೆ ಗಳ  ವಿವರಣೆಯನ್ನು ಬಹಳ ಸರಳವಾಗಿ ಎಲ್ಲರಿಗೂ ತಿಳಿಯುವ ಭಾಷೆಯಲ್ಲಿ ಅರ್ಥ ಮಾಡಿಸುತ್ತಿದ್ದರು.


ಮುಕುಂದೂರು ಸ್ವಾಮೀಜಿ ರವರ ಕುರಿತು ಕೃಷ್ಣ ಶಾಸ್ತ್ರಿಗಳು ಹೇಳುವಂತೆ

"ಅವರ ಒಂದೊಂದು ಮಾತಿಗೂ ವಿಶೇಷವಾದ ಅರ್ಥವುಂಟು ,ಹರವುಉಂಟು,ಆಳ ಎತ್ತರಗಳುಂಟು .ಅದೆಲ್ಲಾ ತಿಳಿಯುವವರ ಸಾಮರ್ಥ್ಯವನ್ನು ಅನುಸರಿಸಿ ಬಿಚ್ಚಿಕೊಳ್ಳುತ್ತವೆ " 

ಹೌದು ಈ ಮಾತು ಶತ ಪ್ರತಿಶತ ಸತ್ಯ ಈ ಅನುಭವ ನಿಮಗೆ ಆಗಬೇಕಾದರೆ ನೀವೂ ಒಮ್ಮೆ, ಅಲ್ಲ ಹಲವು ಬಾರಿ ಈ ಪುಸ್ತಕ ಓದಲೇಬೇಕು.


ಕೃತಿ: ಏಗ್ದಾಗೆಲ್ಲಾ ಐತೆ.

ಲೇಖಕರು: ಬೆಳಗೆರೆ ಕೃಷ್ಣಶಾಸ್ತ್ರಿಗಳು

ಪ್ರಕಾಶನ;ಕಾಮದೇನು ಪುಸ್ತಕ ಭವನ ಪ್ರಕಾಶನ

ಬೆಲೆ: ೬೦


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


ಕೊಳ್ಳುಬಾಕರಾಗದಿರೋಣ .


 


ಕೊಳ್ಳುಬಾಕ ಸಂಸ್ಕೃತಿ ತ್ಯಜಿಸೋಣ 


ಇಷ್ಟು ಇದ್ದರೆ ಮತ್ತಷ್ಟು ಬೇಕು, ಒಂದು ಕಾರು ಸಾಲದು ಮತ್ತೊಂದು ಬೇಕೇೆ ಬೇಕು  ಹೊಸ ಮಾಡೆಲ್ ವಾಷಿಂಗ್ ಮೆಷಿನ್ ಕೊಳ್ಳೋಣ , ಈಗ ಎರಡು ಆಂಡ್ರಾಯ್ಡ್ ಪೋನ್ ಇವೆ, ಇರಲಿ ಒಂದು ಐ ಪೋನ್ ಕೊಳ್ಳೋಣ, ಪಕ್ಕದ ಮನೆಯವನು ಬುಲೆಟ್ ಬೈಕ್ ತಂದ, ನನ್ನ ಹೀರೋ ಹೊಂಡಾ ಜೊತೆಗೆ ನಾನು ಒಂದು ಬುಲೆಟ್ ಬುಕ್ ಮಾಡುವೆ ....ಹೀಗೆ ಪಟ್ಟಿ ಬೆಳೆಯುತ್ತದೆ.

ಈ ರೀತಿಯಲ್ಲಿ ಬೇಕಿದ್ದರೂ ಬೇಡದಿದ್ದರೂ ಅನವಶ್ಯಕವಾಗಿ ತೋರ್ಪಡಿಕೆಗೆ ಮತ್ತು ಅಗತ್ಯವಿಲ್ಲದಿದ್ದರೂ  ಕೊಳ್ಳುವ ಕೆಟ್ಟ ಚಟವೇ ಕೊಳ್ಳುಬಾಕ ಸಂಸ್ಕೃತಿ .


ಕೆಲವೊಮ್ಮೆ ಅವನು

ಕೊಂಡ ವಸ್ತುಗಳ ಉಪಯೋಗ

ತಿಳಿಯದೇ ಅವನೇ ಪ್ರಶ್ನೆ ಮಾಡಿಕೊಂಡ ನಾನು ಈ

ವಸ್ತು ಕೊಂಡಿದ್ದು ಯಾಕ?|

ಇಂತವರಿಗೆ ನಮ್ಮ ಪರಮೇಶಿ

ಕರೆಯುವನು ಕೊಳ್ಳುಬಾಕ||


ಅವಶ್ಯಕತೆ ಇಲ್ಲದಿದ್ದರೂ ಅನುಕರಣೆ, ವಿದೇಶಿ ಸಂಸ್ಕೃತಿಗಳ ಪ್ರಭಾವ ,ಮಾಧ್ಯಮಗಳ ಜಾಹಿರಾತಿನ  ಭರಾಟೆ , ವಿವೇಚನೆಯ ಕೊರತೆ, ಸಂಪತ್ತು ಮತ್ತು ಪ್ರತಿಷ್ಠೆಯ ತೋರ್ಪಡಿಕೆ ಇವುಗಳು ಕೊಳ್ಳುಬಾಕ ಸಂಸ್ಕೃತಿಗೆ ನಾಂದಿ ಹಾಡಿವೆ .


ಜಾಹೀರಾತುಗಳಲ್ಲಿ ಹೊಸ

ವಸ್ತುಗಳು ಯಾವುದೇ ಬರಲಿ

ಖರೀದಿಸುವಳು ಚಿಂತಿಸದೇ

ಎಷ್ಟೇ ಆದರೂ ದುಬಾರಿ|

ಯಾಕೆಂದರೆ ನನ್ನವಳು

ಕೊಳ್ಳುಬಾಕ ಸಂಸ್ಕೃತಿಯ

ಅಂತರರಾಷ್ಟ್ರೀಯ ರಾಯಭಾರಿ||


ಕೊಳ್ಳುಬಾಕ ಸಂಸ್ಕೃತಿ ಮತ್ತು ಮಿತಿ ಮೀರಿದ ನಿರೀಕ್ಷೆಗಳನ್ನು ಹೊಂದುತ್ತಿರುವ ಮನುಷ್ಯ ಇಂದು ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಳೆದುಕೊಂದು ಖಿನ್ನತೆಗೆ ಒಳಗಾಗುತ್ತಿದ್ದೇವೆ.ಇದು ಕೌಟುಂಬಿಕ ಕಲಹಗಳಿಗೂ ಕಾರಣವಾಗುತ್ತದೆ

.

ಕೊಳ್ಳುಬಾಕ ಸಂಸ್ಕೃತಿಯು ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ ಉದಾಹರಣೆಗೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಬೆಲೆಯ   ಒಂದು ಫೋನ್ ಕೊಂಡು ಒಂದು ವರ್ಷದ ಬಳಿಕ ನಾವು ಮಾರಲು ಹೋದರೆ ಸಾವಿರ ರೂಗೂ ಮಾರಲು ಆಗುವುದಿಲ್ಲ. ಅಷ್ಟು ಹಣ ನಮಗೆ ನಷ್ಟ ,ಆದರೂ ಅದು ಸುಸ್ಥಿತಿಯಲ್ಲಿದ್ದರೂ ಅದನ್ನು ಕೊಟ್ಟು ಮತ್ತೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಬೆಲೆಯ ಪೋನ್ ಕೊಳ್ಳುತ್ತೇವೆ ಹೇಗೂ ಡೆಬಿಟ್ ,ಕ್ರೆಡಿಟ್ ಕಾರ್ಡ್ ಇರುತ್ತವೆ ಉಜ್ಜಿ ತೆಗೆದುಕೊಂಡು ಬಿಲ್ ಕಟ್ಟಲು ಮತ್ತೆ ಸಾಲ ಮಾಡುವೆವು . ಇ. ಎಮ್.ಐ  ಕಟ್ಟಲು ಒದ್ದಾಡುವೆವು , ಆ ಸಾಲ ತೀರಿಸಲು  ಕ್ರಮೇಣ ಓ.ಟಿ ಮಾಡುವುದು ,ಚಿಂತೆ ಮಾಡುವುದು ,ಖಿನ್ನತೆಗೆ ಜಾರುವುದು ಇದರ ಪರಿಣಾಮವಾಗಿ ಬಿ. ಪಿ ಶುಗರ್ ಆಗಮನ !ಇದು  ಕೊಳ್ಳುಬಾಕ ಸಂಸ್ಕೃತಿಯ ವಿಷವರ್ತುಲ.


ಹಾಗಾದರೆ ಈ ರೋಗದಿಂದ ಹೊರಬರಲು ಸಾದ್ಯವಿಲ್ಲವೇ? 


ಏಕಿಲ್ಲ ಮನಸ್ಸಿದ್ದರೆ ಮಾರ್ಗ ಭಾರತೀಯ ಸನಾತನ ಪರಂಪರೆಯಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ತತ್ವ ಇದೆ ಅದನ್ನು ಪಾಲಿಸಿದರೆ ಸಾಕು. ನಮ್ಮ ಅಂಕೆ ತಪ್ಪಿದ ಮನಸ್ಸಿನ ನಿಯಂತ್ರಣ ಮಾಡಿಕೊಳ್ಳಬೇಕು. ಆರ್ಥಿಕ ಶಿಸ್ತು ಬೆಳಸಿಕೊಳ್ಳಬೇಕು. ಸರಳತೆಯಲ್ಲಿ ಸೌಂದರ್ಯವಿದೆ ಎಂಬುದನ್ನು ಅರಿಯಬೇಕು.ಅಂಧವಾಗಿ ಇತರರ ಅನುಕರಿಸುವ ಗುಣವನ್ನು ಬಿಟ್ಟು ಸ್ವಂತ ಯೋಚಿಸಿ ನಿರ್ದಾಕ್ಷಿಣ್ಯವಾಗಿ ಉತ್ತಮ ತೀರ್ಮಾನ ತೆಗೆದುಕೊಳ್ಳುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.


 ಕೊಳ್ಳುಬಾಕ ಸಂಸ್ಕೃತಿಯ ವಿರುದ್ಧ ಜಾಗೃತಿ ಮೂಡಿಸಿ ಅದನ್ನು ವಿರೋದಿಸುವೆವು ಅಂದ ಮಾತ್ರಕ್ಕೆ ಕಂಜೂಸ್ ಕೂಡಾ ಆಗಬಾರದು. ಯಾವುದು ಅಗತ್ಯ ಅದನ್ನು ಕೊಳ್ಳಲೇಬೇಕು .ಅಗತ್ಯ ಮತ್ತು ಅನಗತ್ಯದ ಮಧ್ಯದ ಸೂಕ್ಷವಾದ ಗೆರೆಯನ್ನು ಯಾರು ಚೆನ್ನಾಗಿ ಅರ್ಥ ಮಾಡಿಕೊಳ್ಳವರೋ ಅಂತವರು ಕೊಳ್ಳುಬಾಕರಾಗುವುದಿಲ್ಲ.

ಆದ್ದರಿಂದ ನಾವೆಲ್ಲರೂ ಕೊಳ್ಳುಬಾಕರಾಗದೇ ಬುದ್ದಿವಂತರಾಗೋಣ ಆರ್ಥಿಕ ಶಿಸ್ತು ರೂಢಿಸಿಕೊಂಡು ನೆಮ್ಮದಿಯ ಜೀವನ ಸಾಗಿಸೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

*ಇಂದಿನ ಜನಮಿಡಿತ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*೩೦/೯/೨೧


 

29 ಸೆಪ್ಟೆಂಬರ್ 2021

ಬೆಳಕು ಕತ್ತಲೆಯ ನುಂಗಿ. ವಿಮರ್ಶೆ.


 



ಬೆಳಗು ಕತ್ತಲೆಯ ನುಂಗಿ 

ಸೂಫಿ ಕಥೆಗಳು . ವಿಮರ್ಶೆ

ಎಂ. ವಿ ಶಂಕರಾನಂದ ರವರ ಬೆಳಕು ಕತ್ತಲೆಯ ನುಂಗಿ ಎಂಬ ಕಥಾ ಸಂಕಲನದ ಶೀರ್ಷಿಕೆಯ ನೋಡಿ ಓದಲು ಆರಂಭ ಮಾಡಿದ ನನಗೆ ಪುಸ್ತಕ ಓದಿ ಮುಗಿಸಿದಾಗ ಹೊಸ ಚಿಂತನೆಗಳು, ಹೊಳವುಗಳು  ಗೋಚರಿಸಲಾರಂಬಿಸಿದವು.


ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೋಡ್ಲಾಪುರದಲ್ಲಿನ ಒಂದು ಪುರೋಹಿತ ಕುಟುಂಬದಲ್ಲಿ,ಜನಿಸಿದ ಶಂಕರಾನಂದ ರವರು ಹುಟ್ಟೂರಿನಲ್ಲೇ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ,ಮುಂದೆ ಮಧುಗಿರಿಯಲ್ಲಿ ಪಿಯುಸಿ, ಪದವಿ ವ್ಯಾಸಂಗ  ಮಾಡಿ  ಮೈಸೂರಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ್ದಾರೆ. ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನ ಬುಕ್ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ) ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಮಾಡಿರುವ ಇವರಿಗೆ 

ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ . ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ, ಜಿಲ್ಲಾ ಪತ್ರಿಕೆಗಳ ಉಪ ಸಂಪಾದಕರೂ, ಅಂಕಣಕಾರರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ.


ಇವರ ಕೃತಿ ಬೆಳಗು ಕತ್ತಲೆಯ ನುಂಗಿ ಎಂಬ ಸೂಫಿ ಕಥಾ ಸಂಕಲನದಲ್ಲಿ 40 ಕಥೆಗಳಿವೆ ಪ್ರತಿ ಕಥೆಗಳು ವಿಭಿನ್ನ ,ಮಕ್ಕಳ ಆದಿಯಾಗಿ ಸರ್ವರಿಗೂ ಇಷ್ಟ ಆಗುವ ಕಥೆಗಳಿವೆ .

ಈ ಕಥೆಗಳನ್ನು ಓದಿದ ಮೇಲೆ ನಮ್ಮಲ್ಲಿ ಹೊಸ ಬೆಳಕು ಮೂಡುವುದರಲ್ಲಿ ಸಂದೇಹವಿಲ್ಲ.


ಮೊದಲ ಕಥೆಯಲ್ಲಿ

ಮೂಢನಂಬಿಕೆ ಎಂಬುದು ಒಂದು ಕೆಟ್ಟ ಅವಸ್ಥೆ ಒಳ್ಳೆಯ ಅಧ್ಯಯನ ಮತ್ತು ಚಿಂತನೆ ಮುಖಾಂತರ ಬಹಳ ಸುಲಭವಾಗಿ ಮೂಢನಂಬಿಕೆ ಆದಾರದ ಮೇಲೆ ನಡೆಯುವ ವಂಚನೆಗಳನ್ನು ತಡೆಯಬಹುದು ಎಂದು ಸೂಫಿ ಸಂತರ ಮಾತುಗಳಲ್ಲೇ ಹೇಳುತ್ತಾ ಪುಸ್ತಕದ ಶೀರ್ಷಿಕೆ ಯನ್ನು ಈ ಕಥೆ ನೆನಪಿಸುತ್ತದೆ.


ಪರ್ಷಿಯನ್ ಮೂಲದ ಸೂಫಿ ಸಂತರ ಕಥೆ "ಮರಣವಾರಿಗೂ ಮನ್ನಣೆಯಿಲ್ಲ "ಎಂಬ ಕಥೆಯಲ್ಲಿ ಮಾನವ ಜೀವನದ ಅನಿಶ್ಚಿತತೆಯ ಬಗ್ಗೆ ಬೆಳಕು ಚೆಲ್ಲಿರುವರು . 


"ಭವಿಯೆಂಬುದು ಹುಸಿ" ಎಂಬ ಕಥೆಯಲ್ಲಿ ಹಾವು ಮತ್ತು ನವಿಲಿನ ಜಗಳದ ಪ್ರತಿಮೆಗಳನ್ನು ಬಳಸಿಕೊಂಡು,

ಮನುಷ್ಯನು ಹಾವಿನಂತೆ ಭೂಮಿಗೆ ಅಂಟಿಕೊಂಡವನು ಎಂಬುದು ಎಷ್ಟು ನಿಜವೋ ಹಾಗೆಯೇ ನವಿಲಿನ ಕಲ್ಪನೆ ಮತ್ತು ಮಹತ್ವಾಕಾಂಕ್ಷೆಗಳು ಅವನಲ್ಲಿರುವುದು ಅಷ್ಟೇ ನಿಜ. ಆದರೆ ಅವನು ಹಾವಿನಂತೆ ಲೋಭಿ, ಭೂಮಿಯನ್ನು ನವಿಲಿನಂತೆ ಸ್ವಾರ್ಥ ಮತ್ತು ಆತ್ಮಪ್ರತ್ಯಯಗಳನ್ನು ಬಿಟ್ಟುಕೊಡಲಾರ. ಅವನಲ್ಲಿ ಅಹಂಭಾವ ಗರಿಗೆದರುತ್ತದೆ. ಬಿಂಕ ಮೆರೆಯುತ್ತಾನೆ. ಸಾಧ್ಯತೆಗಳನ್ನು ನಿರಾಕರಿಸುತ್ತಾನೆ. ಹಾವು ಪೊರೆ ಕಳಚುವ ಕ್ರಿಯೆಯಲ್ಲಿ ಸೌಂದರ್ಯದ ಸಾಧ್ಯತೆಯು ವ್ಯಕ್ತವಾದರೆ ನವಿಲಿನ ಆಡಂಬರದಲ್ಲಿ, ಆ ಸಾಧ್ಯತೆಯು ನಿರಸನಗೊಳ್ಳುತ್ತದೆ ಎಂದು ಸೂಫಿ ಸಂತರು ನಮ್ಮನ್ನು ಚಿಂತನ ಮಂತನ ಮಾಡುವಂತೆ ಮಾಡುತ್ತಾರೆ.


ಭಾರತದಲ್ಲಿ ಹೊಸ ಶಿಕ್ಷಣ ನೀತಿಯ ಜಾರಿಯ ಹಿನ್ನೆಲೆಯಲ್ಲಿ ಅಹ್ಮದ್ ಇಲ್ ಬೆದಾಮಿ ಎಂಬ ಸಂತರ "ಊರೊಳಗಣ ಕಿಚ್ಚು ಕಾನನದಲ್ಲಿ ಉರಿಯಿತು" ಎಂಬ ಕಥೆಯು ಇಂದಿಗೂ ಪ್ರಸ್ತುತ ಎನಿಸುತ್ತದೆ. ಈ ಕಥೆಯಲ್ಲಿ

 ಗುರುಗಳು ತನ್ನ ಶಿಷ್ಯರಿಗೆ: “ಮನುಷ್ಯನಿಗೆ ಕಲಿಯುವ ಇಚ್ಛೆ ಇಲ್ಲದಿರುವುದರಿಂದ ಆತನಿಗೆ ಹೇಗೆ ಕಲಿಸಬೇಕು ಎಂಬುದನ್ನು ನೀವು ಮೊದಲು ಕಲಿತುಕೊಳ್ಳಬೇಕು, ಮೊದಲನೇಯದಾಗಿ ಅವರು ಹೇಗೆ ಕಲಿಯಬಹುದು ಎಂಬುದನ್ನು ತೋರಿಸಿಕೊಡಬೇಕು. ಅದಕ್ಕೂ ಮುನ್ನ ಅವರೆಲ್ಲಾ ಕಲಿಯಬಹುದಾದದ್ದು ಇನ್ನೂ ಇದೆ ಎಂಬುದನ್ನು ಮನದಟ್ಟು ಮಾಡಬೇಕು. ಆಗ ಅವರೆಲ್ಲಾ ಕಲಿಯಲಿಕ್ಕೆ ಸಿದ್ಧರಾಗಿದ್ದೇವೆ ಎಂದು ಭಾವಿಸುತ್ತಾರೆ. ಆದರೆ ಅವರು ಕಲಿಸಬೇಕಾಗಿರುವುದಕ್ಕಿಂತ ಅವರು ಏನನ್ನು ಕಲಿಯಬೇಕು ಎಂದು ಭ್ರಮಿಸುತ್ತಾರೋ ಅದೇ ಅವರಿಗೆ ಮುಖ್ಯವಾಗಿರುತ್ತದೆ. ಇದನ್ನೆಲ್ಲಾ ನೀವು ಅರ್ಥ ಮಾಡಿಕೊಂಡ ನಂತರವೇ ಅವರಿಗೆ ಕಲಿಸುವ ಕ್ರಮವನ್ನು ನೀವು ಸಿದ್ಧಪಡಿಸಬೇಕು. ಜ್ಞಾನ ಮತ್ತು ಸಾಮರ್ಥ್ಯ ಇದ್ದರೆ ಮಾತ್ರ ಸಾಲದು, ಅದನ್ನು ಕಲಿಸಿಕೊಡುವ ವಿಶೇಷ ಶಕ್ತಿಯೂ ಬೇಕು” ಎಂದು ಹೇಳುವ ಮಾತನ್ನು ನಾವು ಪಾಲಿಸಬೇಕಿದೆ.


ಜೀವನದಲ್ಲಿ ಯಶಸ್ಸು ಗಳಿಸಲು ನಿರಂತರ ಶ್ರಮಕ್ಕೆ ಪರ್ಯಾಯ ಯಾವುದೂ ಇಲ್ಲ ಎಂಬ ಸಂದೇಶವನ್ನು ಕೃತಿಯ ಶೀರ್ಷಿಕೆಯ ಕಥೆ ಚೆನ್ನಾಗಿದೆ ಪ್ರತಿಧ್ವನಿಸುತ್ತದೆ.

"ಪ್ರತಿಯೊಂದಕ್ಕೂ ಇಂತಿಷ್ಟು ಪರಿಶ್ರಮ ಎಂಬುದೊಂದಿರುತ್ತದೆ. ಬೆಲೆಯುಳ್ಳ ಕೆಲಸ ಮಾಡಲು ಬೇಕಾಗುವ ಕನಿಷ್ಟ ಶ್ರಮವನ್ನು ನಾವೆಲ್ಲಾ ಹಾಕಲೇಬೇಕು".ಎಂದು ಸೂಫಿ ಸಂತರ ಹೇಳುವ ಮಾತು ನಮ್ಮ ಕಿವಿಯಲ್ಲಿ ಗುಯ್ ಗುಡುತ್ತವೆ.


"ಮನದ ಆಸೆಯೆ ಮಾಯೆ ಕಾಣಾ " ಎಂಬ ಕಥೆಯು ಅಬ್ದುಲ್ಲಾ ನ ಅತಿಯಾಸೆಯಿಂದ ದೊರೆತ ಸಂಪತ್ತನ್ನು ಸದುಪಯೋಗ ಪಡಿಸಿಕೊಳ್ಳದೇ ಬೆಪ್ಪನಾದ ಬಗೆಯನ್ನು  ತಿಳಿಸುತ್ತದೆ ಮತ್ತು ನಮಗೆಲ್ಲ ಉತ್ತಮ ಸಂದೇಶ ನೀಡುತ್ತದೆ.


"ವಿಚಾರವೆಂಬ ಹೂವಾಯಿತ್ತು " ಎಂಬ ಕಥೆಯಲ್ಲಿ 

ಸೂಫಿಯು, ಬಾದಶಹನಿಗೆ  ಕಲಿಯಲಾರದವರಿಗೆ ಕೊಡುವ ವಿದ್ಯೆ ವ್ಯರ್ಥ. ಹಾಗೇ ಆಹಾರದ ಹಿಂದಿನ ಉದ್ದೇಶ ಅನುಮಾನಿಸುವವರಿಗೆ ಅದನ್ನು ನೀಡುವುದೂ ಸಹ ವ್ಯರ್ಥ. ಆದ್ದರಿಂದ, 'ಏನನ್ನು ನೀಡಿದರೂ ಸೂಕ್ತವಾದದ್ದೇ' ಎಂದು ಹೇಳುವುದು ಸಮಂಜಸವಲ್ಲ ಎಂಬುದನ್ನು ಸಾಕ್ಷಿ ಸಮೇತ ತೋರಿಸುವರು .ಇದು ಅಪಾತ್ರರಿಗೆ ಏನನ್ನೂ ನೀಡಬಾರದು ಎಂಬ ಹಿರಿಯರ ಮಾತು ನೆನೆಯುವಂತೆ ಮಾಡುತ್ತದೆ.


"ಎನ್ನ ಮನವು ಅತ್ತಿಯ ಹಣ್ಣು ನೋಡಯ್ಯ" ಎಂಬ ಕಥೆಯಲ್ಲಿ ಬರುವ ಸೂಫಿಯು ರಾಜನಿಗೆ ದಾನ ಮಾಡಿ ಅಹಂ ನಿಂದ ತಾಳ್ಮೆ ಕಳೆದುಕೊಂಡ ಸುಲ್ತಾನ್ ನಿಗೆ ಹೇಳುವ ಮಾತು ನಮಗೂ ಅನ್ವಯಿಸುತ್ತದೆ. " ದಾನ ಮಾಡುವವನಿಗೆ ತಾನು ದಾನ ಕೊಡುತ್ತಿದ್ದೇನೆ ಎಂಬ ಭಾವನೆ ಇರಬಾರದು. ಇದು ದಾನದ ಮೊದಲ ಲಕ್ಷಣ, ತಾಳ್ಮೆ ಎರಡನೆ ಲಕ್ಷಣ, ಸಂಶಯ ಪಡದಿರುವುದು ಮೂರನೆ ಲಕ್ಷಣ, ಈ ಮೂರು ಲಕ್ಷಣಗಳಿಲ್ಲದ ಜಾಗದಲ್ಲಿ ದಾನವೆಂಬ ಗುಣವಿರದು" ಎಂತಹ ಸಾರ್ವಾಕಾಲಿಕ ಸತ್ಯ ಅಲ್ಲವೇ?


ಹೀಗೆ ನಲವತ್ತು ಕಥೆಗಳು ಒಂದಕ್ಕಿಂತ ಒಂದು ಚಿಂತನೆಗೆ ಹಚ್ಚುವ ಬುದ್ಧಿ ಹೇಳುವ ಮತ್ತು ನಮ್ಮ ತಿದ್ದುವ ಕಥೆಗಳಾಗಿವೆ ಮತ್ತೊಮ್ಮೆ ಓದಲು ಪ್ರೇರಣೆ  ನೀಡುವ ಕಥೆಗಳು ಇನ್ನೊಂದು ಬಾರಿ ಓದುವಾಗ ಬೇರೆ ಹೊಳವು ಕಾಣುತ್ತದೆ.


ಈ ಕಥಾಸಂಕಲನದ ಕಥೆಗಳ ಶೀರ್ಷಿಕೆಗಳು ನನಗೆ ಬಹಳ ಇಷ್ಟ ಆದವು ಅವು ಕಥೆಗೆ ಅಷ್ಟೇ ಚೆನ್ನಾಗಿ ಹೊಂದಿಕೆಯಾಗಿವೆ .

 ಬೆಳಗಿನೊಳಗಣ ಬೆಳಗು, ಮರಣವಾರಿಗೂ, ಮನ್ನಣೆಯಿಲ್ಲ,ಭವಿಯೆಂಬುದು ಹುಸಿ, ಊರೊಳಗಣ ಕಿಚ್ಚು ಕಾನನದಲ್ಲಿ ಉರಿಯಿತ್ತು,ಬೆಳಗು ಕತ್ತಲೆಯ ನುಂಗಿ, ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು, ಆಗದಂತೆ ಆದೆನು , ಅವ ಕಾಯಕವಾದೊಡೂ ಒಂದೇ,

ಇದಂ ಮಿತ್ತಂ,

ನೆಲದ ಮುಂದಣ ಬಾಗಿಲು,

ಸಾವಿಗಿಂತ ಮುಂಚೆ ಸಾವು, ಆದಿಯ ಕಂಡೆ, ಅನಾದಿಯ ಕಂಡೆ,

ದೇವನ ಆಟ ಬಲ್ಲವರಾರು?ಹಿಂದನರಿಯದದು ಮುಂದೇನಬಲ್ಲುದೊ?

 ಬಯಲು ಆಲಯದೊಳಗೋ!

 ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ,

ಮನದ ಆಸೆಯೇ ಮಾಯೆ ಕಾಣಾ, ತನಗೆ ತಾನೇ ಪ್ರಮಾಣ,

ವಿಚಾರವೆಂಬ ಹೂವಾಯಿತ್ತು,

ನೀ ಮಾಯೆಯೋ ನಿನ್ನೊಳು ಮಾಯೆಯೋ?  


ಇಂತಹ ವಚನಗಳ ಸಾಲಿನ ಆಧಾರದ ಶೀರ್ಷಿಕೆಗಳ  ಕಥೆಯಲ್ಲಿರುವ  ಸಾರವನ್ನು ನೀವು ಓದಿಯೇ ಸವಿಯಬೇಕು.

ಇಂತಹ ಸದಭಿರುಚಿಯ ಪುಸ್ತಕ ಪ್ರಕಾಶನ ಮಾಡಿದ ಕಲ್ಪತರು ಪ್ರಕಾಶನ ಕ್ಕೆ ಮತ್ತು ಲೇಖಕರಾದ ಎಂ ವಿ . ಶಂಕರಾನಂದ ರವರಿಗೆ ಧನ್ಯವಾದಗಳು ಅವರ ಲೇಖನಿಯಿಂದ ಇನ್ನಷ್ಟು ಪುಸ್ತಕಗಳು ಕನ್ನಡಿಗರ ಮನೆ ಮನ ಸೇರಲಿ ಎಂದು ಹಾರೈಸುವೆ .


 ಪುಸ್ತಕ: ಬೆಳಗು ಕತ್ತಲೆಯ ನುಂಗಿ

ಸೂಫಿ ಕಥೆಗಳು

ಲೇಖಕರು: ಎಂ ವಿ ಶಂಕರಾನಂದ

ಪ್ರಕಾಶನ: ಕಲ್ಪತರು ಪ್ರಕಾಶನ. ತುಮಕೂರು.8971302974

ಬೆಲೆ:150


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529










ಇರುವುದೊಂದೇ ಹೃದಯ....


 



ಇರುವುದೊಂದೇ ಹೃದಯ.


ನಾವು ಜೀವಂತವಾಗಿರಲು 

ಸದಾ ಮಿಡಿಯುತಿರಬೇಕು 

ನಮ್ಮ ಹೃದಯ|

ಅದಕ್ಕೆ ಪ್ರತಿದಿನ ನಾವು

ದಂಡಿಸುತ್ತಿರಬೇಕು

ನಮ್ಮ ಕಾಯ ||


ಇಂದಿನ ಜೀವನ ಶೈಲಿ, ಆಹಾರ ಪದ್ಧತಿ ಇವುಗಳು ನಮ್ಮ ದೇಹದ ತೂಕದ ಮೇಲೆ ಗಣನೀಯವಾಗಿ ಪರಿಣಾಮ ಬೀರಿ ನಮ್ಮ ದೇಹ ಅಡ್ಡಡ್ಡ ಬೆಳೆಯಲು ಕಾರಣವಾಗಿವೆ .ಇದರ ಜೊತೆಯಲ್ಲಿ ನಾವೇ ಸೃಷ್ಟಿ ಮಾಡಿಕೊಂಡ ಅನವಶ್ಯಕ ಒತ್ತಡ ನಮ್ಮ ಹೃದಯ ಅಳುವಂತೆ ಮಾಡಿದೆ.ಇದು ಎಲ್ಲರಿಗೂ ಗೊತ್ತಿದ್ದೂ ಹೃದಯದ ಕರೆಗೆ ಕಿವುಡಾಗಿರುವೆವು ಇವೆಲ್ಲದರ ಪರಿಣಾಮ ಇಂದು ಭಾರತ ಹೃದಯಾಘಾತದ ರಾಜಧಾನಿಯಾಗಿ ಪರಿವರ್ತಿತವಾಗಿದೆ.


ಅಕಾಲಿಕವಾಗಿ ಯುವ ಮನಸುಗಳು ಹೃದಯ ಸ್ತಂಭನಕ್ಕೆ ಬಲಿಯಾಗುವ ಸುದ್ದಿ ಕೇಳಲು ಓದಲು ನಮ್ಮ ಹೃದಯಗಳು ಭಾರವಾಗುತ್ತವೆ .ಆ ಕ್ಷಣ ಮಾತ್ರ ನಮ್ಮ ಹೃದಯ ರಕ್ಷಣೆಗೆ ಪಣ ತೊಡುವವರಿಗೆ ಕಡಿಮೆಯೇನಿಲ್ಲ ಮರುಕ್ಷಣ .ಅದೆಲ್ಲ ಮರೆತು ಅದೇ ಕೆಟ್ಟ ಜೀವನ ಶೈಲಿ ,ಅವೇ ದುರಭ್ಯಾಸಗಳು, ಬೆಳಿಗ್ಗೆ ಎಂಟು ಗಂಟೆಯ ಮೇಲೆ ಏಳುವುದು, ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಚಿಂತೆ, ಅನವಶ್ಯಕ ಸ್ಪರ್ಧೆಗೆ ಇಳಿವುದು, ಅನೈತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಂದುವರೆದೇ ಇರುತ್ತದೆ. ಮತ್ತೊಮ್ಮೆ ನಮ್ಮ ಹೃದಯ ನಮಗೆ ನೆನಪಾಗುವುದು ನಮ್ಮ ಅತ್ಮೀಯರಿಗೆ ಯಾರಿಗಾದರೂ ಹೃದಯಾಘಾತ ಅದಾಗ ಅಥವಾ ಪತ್ರಿಕೆಯಲ್ಲಿ ವಿಶ್ವ ಹೃದಯ ದಿನ ಎಂಬ ಹೆಡ್ಲೈನ್ ಓದಿದಾಗ.


ಆತ್ಮೀಯರೆ ನಮ್ಮ ಹೃದಯ ನಮ್ಮ ಹೆಮ್ಮೆ .ನಮ್ಮ ಜೀವದ ಆಧಾರ. ತಿಳಿದು ತಿಳಿದೂ‌ ಇರುವ ನಮ್ಮ ಒಂದೇ ಹೃದಯವನ್ನು ‌ನಿರ್ಲಕ್ಷ್ಯ ಮಾಡದಿರೋಣ.

ದಿನದಲ್ಲಿ ಕನಿಷ್ಠ ಅರ್ಧ ಗಂಟೆ ದೈಹಿಕ ಚಟುವಟಿಕೆಗಳನ್ನು ಮಾಡೋಣ. ಅನವಶ್ಯಕ ಚಿಂತೆ ಮಾಡದಿರೋಣ ,ಹೃದಯ ಕಾಪಾಡುವ ಬಗ್ಗೆ, ನಮ್ಮ ಆರೋಗ್ಯ ಕಾಪಾಡುವ ಬಗ್ಗೆ ಚಿಂತನ ಮಂತನ ಮಾಡೋಣ.‌ಅನಾರೋಗ್ಯಕರ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳೋಣ. ಅನವಶ್ಯಕ ಒತ್ತಡ ಕಡಿಮೆ ಮಾಡಿಕೊಳ್ಳೋಣ. ಯೋಗ ಧ್ಯಾನದ ಕಡೆ ಮುಖ ಮಾಡೋಣ. ಸಮತೋಲನ ಮತ್ತು ಆರೋಗ್ಯಕರ ಆಹಾರದ ಕಡೆ ಮುಖ ಮಾಡೋಣ .ದುರಭ್ಯಾಸಗಳನ್ನು ತ್ಯಜಿಸೋಣ. ನಮ್ಮ ನಮ್ಮ ನಂಬಿದ ಹೃದಯಗಳೊಂದಿಗೆ  ದೀರ್ಘ ಕಾಲ ಬಾಳಿಗಾಗಿ, ಇರುವ ನಮ್ಮ ಹೃದಯ ಉಳಿಸಲು ಹೃದಯದ ಮಾತು ಕೇಳೋಣ .ಏಕೆಂದರೆ ನಮಗೆ ಇರುವುದೊಂದೇ ಹೃದಯ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ