08 ಜುಲೈ 2021

ಗುಂಡಿಗೆ ಹನಿಗವನ .


 


*ಗುಂಡಿಗೆ*


ಗಡಿಯಲ್ಲಿ ಶತೃಗಳ

ಒಳಸಂಚನ್ನು ಅರಿತು

ಒಬ್ಬನೇ ನುಗ್ಗಿ 

ದೇಶ ರಕ್ಷಣೆಗಾಗಿ

ಹೋರಾಡಿದ ಸೈನಿಕ

ಹತ್ತಾರು ಉಗ್ರರು

ಹತರಾದರು ಅವನ

ಗುಂಡಿಗೆ|

ಮರೆಮಾಚಿ ಬಂದ

ಶತೃ ಕೊಂದೇ ಬಿಟ್ಟ

ವೀರಸೈನಿಕನ ,

ಅವನ ಜೇಬಲಿ

ಸಿಕ್ಕ ಪತ್ರ ಓದಿದ

ಶತೃ ಸೈನಿಕನ‌ 

ಕಣ್ಣಾಲಿಗಳು ತುಂಬಿದವು,

ಪತ್ರದಲ್ಲಿ ಬರೆದಿತ್ತು

"ಬೇಗ ಬಂದು ಬಿಡು

ನಿಂತಿದೆ ನಿನ್ನ ಮಗನ

ಗುಂಡಿಗೆ"||


"ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


07 ಜುಲೈ 2021

ಇಂದಿನ ಸಿಂಹ ದ್ವನಿ ಪತ್ರಿಕೆ ೭/೭/೨೧


 

ನನ್ನ ನೇತಾಜಿ ‌ಲೇಖನ

 




ನನ್ನ ನೆಚ್ಚಿನ ಸ್ವತಂತ್ರ ಹೋರಾಟಗಾರ ನೇತಾಜಿ!


ಹೆಸರಲ್ಲೇ ನೇತಾರನ ಗುಣ ಹೊಂದಿರುವ ಸುಭಾಷ್ ಚಂದ್ರ ಬೋಸ್ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ದೇಶದ ಸ್ವತಂತ್ರ ಪಡೆಯಲು ಸಣ್ಣ ಮಟ್ಟದ ತ್ಯಾಗ ಮತ್ತು ಬದ್ದತೆ ಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಲು ಗೀವ್ ಮಿ ಬ್ಲಡ್ ಐ ವಿಲ್ ಗೀವ್ ಯು  ಇಂಡಿಪೆಂಡನ್ಸ್ ಎಂದು ಗರ್ಜಿಸಿದ ಧೀರ ನೇತಾಜಿ ನಮ್ಮ ಸುಭಾಷ್.


ನೇತಾರನಿಗಿರಬೇಕಾದ ಗುಣಗಳನ್ನು ಹುಟ್ಟಿನಿಂದಲೇ ಪಡೆದುಕೊಂಡು ಬಂದ ಸುಭಾಷ್ ರವರ ಸಂಘಟನಾ ಚಾತುರ್ಯ ಕಂಡು ಇಂಗ್ಲೀಷರು ಕೂಡಾ ಬೆಚ್ಚುತ್ತಿದ್ದರು.

ಪಾರ್ವಡ್ ಬ್ಲಾಕ್ ಸಂಘಟನೆಯ ಮೂಲಕ ದೇಶಾದ್ಯಂತ ಸ್ವಾಭಿಮಾನ  ಸ್ವತಂತ್ರ ಮತ್ತು ಸ್ವಾವಲಂಬನೆಯ ಕಿಚ್ಚು ಹತ್ತಿಸಿದರು .


"ದಿಲ್ಲಿ ಚಲೋ "ಎಂಬ  ಘೋಷಣೆಯೊಂದಿಗೆ  ಸಾಮಾನ್ಯರಲ್ಲಿ ಸ್ವಾತಂತ್ರ್ಯ ಜ್ಯೋತಿಯನ್ನು ಹಚ್ಚಿದರು, ಅದು ದೇಶಾದ್ಯಂತ ಬಹಳ ಯಶಸ್ವಿಯಾದ ಚಳುವಳಿಗಳಲ್ಲಿ ಒಂದಾಯಿತು.


ದೇಶಾದ್ಯಂತ ಸ್ವತಂತ್ರ ಹೋರಾಟದ ಪ್ರೇರಣೆ ನೀಡಿದ ನೇತಾಜಿರವರು ವಿದೇಶದಲ್ಲೂ ಸಂಘಟನೆಗೆ ತೊಡಗಿದರು, ಶತೃವಿನ ಶತೃ ನಮ್ಮ ಮಿತ್ರ ಎಂಬಂತೆ ನಮ್ಮ ಶತೃಗಳಾದ ಆಂಗ್ಲರ ವಿರೋಧಿಗಳಾದ ಜಪಾನ್ ಮತ್ತು ಜರ್ಮನಿಯ ದೇಶಗಳ ಸಹಾಯ ಪಡೆದು "ಆಜಾದ್ ಹಿಂದ್ ಪೌಜ್" ಎಂಬ  ಸೇನೆ ಕಟ್ಟಿದರು , ಮಹಿಳಾ ಸಬಲೀಕರಣದ ತತ್ವಗಳನ್ನು ಅಂದೇ ಬೆಂಬಲಿಸಿದ್ದ ನೇತಾಜಿರವರು ಆಜಾದ್ ಹಿಂದ್ ಪೌಜ್ ನಲ್ಲಿ ಮಹಿಳಾ ವಿಭಾಗ ಪ್ರಾರಂಭಿಸಿ ,ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್ ರವರಿಗೆ ಅದರ ನೇತೃತ್ವ. ವಹಿಸಿದ್ದರು, 


ಅಂಡಮಾನ್ ನಿಕೋಬಾರ್ ದ್ವೀಪಗಳು ಮತ್ತು ನಾಗಾಲ್ಯಾಂಡ್ ಪ್ರದೇಶದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಸುಭಾಷ್ ರವರು 1945ರಲ್ಲೇ ಭಾರತಕ್ಕೆ ಸ್ವತಂತ್ರ  ತಂದುಕೊಡುವ ಭರವಸೆ ನೀಡಿದರು, ಆದರೆ ನಿಗೂಢ ರೀತಿಯಲ್ಲಿ ಅವರು ಕಣ್ಮರೆಯಾದ ರೀತಿ ಕೋಟ್ಯಾಂತರ ಭಾರತೀಯ ಮನಗಳಿಗೆ ಆಘಾತ ನೀಡಿತು.


ಇಂದಿನ ಪೀಳಿಗೆಯು ಸುಭಾಷ್ ರಂತಹ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕಿದೆ ಅವರ ತತ್ವ ಆದರ್ಶ ಗಳನ್ನು ಅಳವಡಿಸಿಕೊಳ್ಳ ಬೇಕಿದೆ ,ಇದೇ ನಾವು ಆ ಹಿರಿಯ ಚೇತನಕ್ಕೆ ನೀಡುವ ಗೌರವವಾಗಿದೆ .



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


06 ಜುಲೈ 2021

ಧನಾತ್ಮಕ ಚಿಂತನೆ

 


ಚಿಂತಿಸಬೇಕಿಲ್ಲ


ಧನವಿರದಿದ್ದರೂ 

ಚಿಂತಿಸಬೇಕಿಲ್ಲ

ಧನವೊಂದೇ 

ಜೀವನವಲ್ಲ 

ಧನಾತ್ಮಕವಾಗಿ

ಯೋಚಿಸೋಣ |

ಸುಖ ನೆಮ್ಮದಿ

ಜೀವನವನ್ನು

ಪಡೆಯೋಣ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

05 ಜುಲೈ 2021

ಸಿಹಿಜೀವಿಯ ಸ್ಪೂರ್ತಿ ನುಡಿಗಳು.


 

ಸಿಹಿಜೀವಿಯ ಸ್ಪೂರ್ತಿ ನುಡಿಗಳು

ಬರೀ ಬಿರು ಬಿಸಿಲು, ಭುವಿಗೆ ಯಾರೋ ಬೆಂಕಿ ಹಚ್ಚಿರುವರು, ಮಳೆ ಮರೀಚಿಕೆಯಾಗಿದೆ ನಾವು ಬದುಕುವುದೇಗೆ? ಎಂದು ಸರ್ವರೂ
ಕಂಗಾಲಾಗಿರುವಾಗ ಬಾಲಕಿಯೋರ್ವಳು ಕೊಡೆ ಹಿಡಿದು ಇಂದು ಮಳೆ ಬರುವುದು ಎಂದು ಹೇಳಿ ಮನೆಯಿಂದ ಹೊರಬಂದಳು .

ಬಂಜೆಯೆಂದು ಮೂದಲಿಸಿಕೊಂಡು ಸಮಾಜದ ಅವಗಣನೆಗೆ ಪಾತ್ರವಾದವಳು , ದಿನವೂ ತಾನು ನೆಟ್ಟ  ಗಿಡಗಳಿಗೆ ನೀರುಳಿಸಿ ,ಗೊಬ್ಬರ ಹಾಕಿ ,ಇವು ನೆರಳು ,ಫಲ ನೀಡೇ ನೀಡುವವು ಎಂದು ವಿಶ್ವಾಸದಿಂದ ಹೇಳುತ್ತಿದ್ದಳು.

ಅವಳು ತೊರೆದು ವರುಷಗಳಾದರೂ ,ಬರುವಳೆಂಬ ಭರವಸೆಯಿಂದ ಮನದಲ್ಲೇ ಅವಳಿಗೊಂದು ಮಹಲ್ ಕಟ್ಟಿರುವನು, ದೀಪ ಮಾತ್ರ ಹಚ್ಚಬೇಕಿದೆ.

ಬೆಲೆ ಕುಸಿತ  , ಬರ, ಅತಿವೃಷ್ಟಿ ಅನಾವೃಷ್ಟಿ, ಸಾಲ , ಮುಂತಾದ ಸಮಸ್ಯೆಗಳನ್ನು ಹಾಸಿ ಹೊದ್ದರೂ, ನಮ್ಮ ರೈತ ತನ್ನ ಎತ್ತುಗಳ ಜೊತೆಗೆ ಉಳುಮೆ ಮಾಡಲು ಮುಂಜಾನೆಯೇ  ಹೊಲಕ್ಕೆ ಹೊರಟ .


ಬೆಂಕಿ ಅವಘಡವೊಂದರಲ್ಲಿ   ಮನೆ, ಮಠ,  ತನ್ನವರೆಲ್ಲರನ್ನು ಕಳೆದುಕೊಂಡ ಸಿರಿವಂತ ವ್ಯಾಪಾರಿಯ ಕಥೆ ಮುಗಿಯಿತು ಎಂದು ಹಲವರು ಅಂದುಕೊಂಡರು .ಮರುದಿನ ಮನೆಯ ಸುಟ್ಟ ಬೂದಿಯ ಮೇಲೆ ಅವನೊಂದು ಚಿಕ್ಕ ಬೋರ್ಡ್ ಬರೆದು ,ಆ ಬೋರ್ಡ್ ಮೇಲೆ ಹೀಗೆ ಬರೆದಿತ್ತು " ನಾನು ಹಣ, ಆಸ್ತಿ , ನನ್ನವರ ಕಳೆದುಕೊಂಡು ದುಃಖದಲ್ಲಿರುವೆ ನಿಜ, ಆದರೆ ನನ್ನ
ಆತ್ಮವಿಶ್ವಾಸವನ್ನಲ್ಲ, ಇಂದಿನಿಂದ ಇದೇ ಜಾಗದಲ್ಲಿ ಎಂದಿನಂತೆ ವ್ಯಾಪಾರ ಶುರುವಾಗುವುದು "

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು