18 ಮೇ 2021

ಮಧುರ ಮೈತ್ರಿ .ಕಥೆ


 


"ಮಧುರ ಮೈತ್ರಿ* ಕಥೆ

ಅಲ್ಲಿ ನಗುವಿತ್ತು, ಸಂಭ್ರಮವಿತ್ತು, ಸಂತಸವಿತ್ತು, ದಂಪತಿಗಳು ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಮನಬಿಚ್ಚಿ ಮಾತನಾಡುತ್ತಿದ್ದರು, ಹೃದಯತುಂಬಿ ನಗುತ್ತಿದ್ದರು .

ಬೆಳೆಸೆಗೆ ಬಂದ ರಾಗಿ ಹೊಲದ ಬದುವಿನ ಮೇಲೆ ಕುಳಿತ ದಂಪತಿಗಳು ಆಗ ತಾನೆ ನಾಗಪ್ಪನ ಪೂಜೆ ಮಾಡಿ ಹುತ್ತಕ್ಕೆ ಹಾಲೆರೆದು ಮುತೈದೆಯರಿಗೆ ಬಾಗಿನ ನೀಡಿ, ಮನೆಗೆ ಹೋಗುವ ಮುನ್ನ ಲೋಕಾಭಿರಾಮವಾಗಿ ಮಾತನಾಡುತ್ತಾ, ನಗುತ್ತಾ, ಇರುವುದನ್ನು ಕಂಡ ಮರದ ಗಿಳಿಗಳು ಇವರನ್ನೇ ನೋಡುತ್ತಿದ್ದವು, ಹೊಲದ ಸನಿಹ ಇರುವ ರಸ್ತೆಯಲ್ಲಿ ಹೋಗುವ ಬೈಕ್ ಸವಾರರ ಕಣ್ಣುಗಳು ಇವರ ಮೇಲೆ ಬೀಳದಿರಲಿಲ್ಲ.

ಯಾರು ತಾನೆ ನೋಡಲ್ಲ ಹೇಳಿ, ಜರೀ ಪಂಚೆ ,ಕೆಂಪನೆಯ ಅಂಗಿ ತೊಟ್ಟ ಸ್ಪುರದ್ರೂಪಿ ಸುಜಯ್ ಯಾವ ಸಿನಿಮಾ ನಟನಿಗಿಂತ ಕಡಿಮೆ ಇರಲಿಲ್ಲ.ಜೊತೆಗೆ ಕುಳಿತ ನೀಲಿ ಸಾಂಪ್ರದಾಯಿಕ ಸೀರೆ ಉಟ್ಟು, ಅದಕ್ಕೆ ಹೊಂದಿಕೆಯಾಗುವ ರವಿಕೆ ತೊಟ್ಟು, ಎಡಕ್ಕೆ ಬಾಗಿದ ತುರುಬಿಗೆ  ತಮ್ಮ ಹೊಲದಲ್ಲಿ ಬೆಳೆದ ಮಲ್ಲಿಗೆ ಕಾನಕಾಂಬರ ಹೂಗಳ ತಾನೆ ಕಟ್ಟಿಕೊಂಡು ಮುಡಿದಿದ್ದಳು ಆರತಿ, ಮೆಹೆಂದಿಯ ರಂಗು ಅವಳ ಅಂದವನ್ನು ಇನ್ನಷ್ಟು ಹೆಚ್ಚಿಸಿತ್ತು.

"ಇದೆಲ್ಲಾ ಹೇಗೆ ಸಾದ್ಯವಾಯಿತು ಸುಜಯ್, ನೀನು ಉತ್ತರ ನಾನು ದಕ್ಷಿಣ, ನೀನು ಹಳ್ಳಿಯ ರೈತನ ಮಗ ನಾನು ಪಟ್ಟಣದ ಕೆ ಎ ಎಸ್ ಅಧಿಕಾರಿಯ ಮಗಳು, ನೀನು ಪಕ್ಕಾ ಭಾರತೀಯ ಸಂಪ್ರದಾಯ ಪಾಲಿಸುವವ ನಾನು ಪಾಶ್ಚಾತ್ಯ ಸಂಸ್ಕೃತಿಯ ಆರಾಧಕಳು    ಆದರೂ ನಾವು ಜೊತೆಯಾಗಿದ್ದು ಹೇಗೆ "

" ನಿನಗೇ ಗೊತ್ತು ಆರತಿ ,ಇದು ಶುರುವಾಗಿದ್ದು ,ತುಮಕೂರು ಯೂನಿವರ್ಸಿಟಿ ಕಲಾ ಕಾಲೇಜಿನಲ್ಲಿ ನಾವಾಗ ಬಿ ಎ ಓದುತ್ತಿದ್ದೆವು ... ಪ್ರೆಶರ್ಸ್ ವೆಲ್ಕಂ ಸಮಾರಂಭದಲ್ಲಿ ನನಗೆ ಹಾಡುವ ಅವಕಾಶ ಸಿಕ್ಕಿತು, ಮೈಕ್ ಮುಂದೆ ನಿಂತು.  " ನೀನೊಂದು .....ಮುಗಿಯದ ಮೌನ.......   ನಾನೇಗೆ.....ತಲುಪಲಿ ನಿನ್ನ......." ಎಂಬ ಹಾಡನ್ನು ಹಾಡಿ ನಾನು ಮುಗಿಸುವ ಮುನ್ನವೇ ಕರತಾಡನ ಮುಗಿಲು ಮುಟ್ಟಿತ್ತು. ಮತ್ತೊಮ್ಮೆ ಅದೇ ಹಾಡು ಹಾಡಲು ಒನ್ಸ್ ಮೋರ್ ಅಂದರು, ಎರಡನೆಯ ಬಾರಿಗೆ ಹಾಡನ್ನು ಹಾಡಿ  ಮುಗಿಸಿದಾಗ ಶಿಳ್ಳೆಗಳ ಜೊತೆ ಚಪ್ಪಾಳೆ ಸದ್ದು ಕೇಳುತ್ತಲೇ ಇತ್ತು ,ಅದರಲ್ಲೂ ಎಲ್ಲರೂ ಚಪ್ಪಾಳೆ ನಿಲ್ಲಿಸಿದರೂ ,ನೀನು ಮಾತ್ರ ಮೈಮರೆತಂತೆ ಚಪ್ಪಾಳೆ ತಟ್ಟುತ್ತಲೇ ಇದ್ದೆ ಎಲ್ಲರೂ ನಿನ್ನತ್ತ ನೋಡಿದಾಗ ನಿನ್ನ ಗೆಳತಿಯರು ನಿನ್ನ ಕೈಗಳನ್ನು ಹಿಡಿದಾಗ ಮಾತ್ರ ನಿನ್ನ ಚಪ್ಪಾಳೆ ನಿಂತಿತು."

"ಹೌದು ಸುಜಯ್ ಈಗ ನನಗೆಲ್ಲಾ ನೆನಪಾಗುತ್ತಿದೆ. ನಮ್ಮಪ್ಪ ಗೆಜೆಟೆಡ್ ಅಧಿಕಾರಿಯಾಗಿದ್ದರಿಂದ ನಾನು ಚಿಕ್ಕವಳಿದ್ದಾಗಿನಿಂದ ಕಾನ್ವೆಂಟ್ ಶಾಲೆಯಲ್ಲಿ ಬೆಳೆದವಳು ಆ ಪ್ರಭಾವ ನನ್ನ   ಉಡುಗೆ ,ತೊಡುಗೆ, ಆಹಾರ ವಿಹಾರ ಎಲ್ಲದರ ಮೇಲೆ ಕಂಡುಬಂತು, ನಾನು ಕೂಡಾ ಅಧಿಕಾರಿಯಾಗಬೇಕೆಂಬ ಗುರಿಯೊಂದಿಗೆ ಡಿಗ್ರಿ ಮಾಡಲು ಯೂನಿವರ್ಸಿಟಿ ಆರ್ಟ್ಸ್ ಕಾಲೇಜಿಗೆ ಸೇರಿದೆ.
ನಿನ್ನ ಹಾಡು ನನ್ನ ಮಂತ್ರಮುಗ್ದಗೊಳಿಸಿತು.

" ಮಂತ್ರವೋ ,,ಮುಗ್ದವೋ ,,ನೀನು ಮಾರನೆ ದಿನ ಬಂದು ನನಗೆ ಐ ಲವ್ ಯೂ  ಹೇಳಿದಾಗ ಮಂತ್ರ, ತಾಯಿತ ಕಟ್ಟಿಸಿಕೊಳ್ಳುವಂತೆ ಶಾಕ್ ಆಗಿ ಬೆದರಿದ್ದೆ,
ನಾನು ನಿನಗೆ ತಕ್ಕವನಲ್ಲ , ಅಪ್ಪ ರೈತನಾಗಿ ಕಷ್ಟ ಪಡುತ್ತಿರುವರು,  ನಾನು ಓದಿ ಲೆಕ್ಚರ್ ಆಗಬೇಕು ಅಪ್ಪ, ಅಮ್ಮನನ್ನು ಸುಖವಾಗಿ ನೋಡಿಕೊಳ್ಳಬೇಕು, ಸುಮ್ಮನೆ  ನನ್ನ ಪಾಡಿಗೆ ನನ್ನ ಬಿಡು ಎಂದು  ಅಂಗಲಾಚಿದೆ" ಎಂದು ನೆನೆಪು ಬಿಚ್ಚಿದ ಸುಜಯ್.

"ಆ..ಹಾ... ನಾನು ಬಿಟ್ಟೆನೆ ? ಬಿಡಲಿಲ್ಲ , ಈಗಲೂ ಬಿಟ್ಟಿಲ್ಲ ನೋಡು ನಿನ್ನ ಪಕ್ಕದಲ್ಲೇ ಕೂತಿರುವೆ "ಎಂದು ಮೈಗೆ ಮೈ ತಾಗಿಸಿ ಹಿತವಾಗಿ ಗುದ್ದುತ್ತಾ ಕೇಳಿದಳು ಆರತಿ.

" ಹೌದು ಮಾರಾಯ್ತಿ ನಿನ್ ಎಲ್ಲಿ ಸುಮ್ನೆ ಬಿಟ್ಟೆ ?ಪ್ರೀತಿ ಒಪ್ಪದಿದ್ದರೆ ವಿಷ ಕುಡಿಯುವೆ ಎಂದು ವಿಷದ ಬಾಟಲ್ ಅನ್ನು ಒಳ್ಳೆಯ ವಾಟರ್ ಬಾಟಲ್ ತರ ಯಾವಾಗಲೂ ಆ ಇಂಪೋರ್ಟೆಡ್ ಬ್ಯಾಗ್ ನಲ್ಲಿ ಇಟ್ಕೊಂಡು ಪದೇ ಪದೇ ಹೆದರಿಸುತ್ತಿದ್ದೆ, ಅದನ್ನು ನೋಡಿ , ಡಿಗ್ರೀ ಮುಗಿಯುವ ಮೊದಲೇ ಮದುವೆ ಬೇಡ ಎಂಬ  ಒಂದು ಷರತ್ತಿನ ಮೇಲೆ ನಿನ್ನ ಪ್ರೀತಿಸಲು ಒಪ್ಪಿದ್ದು.

"ಹೌದು ಕಣೋ , ನಿನಗೆ ಇಷ್ಟ ಇಲ್ಲದಿದ್ದರೂ ಜೀನ್ಸ್ , ಮತ್ತು ಮಾಡ್ ಡ್ರೆಸ್ ಹಾಕಿಸಿ ಕಾಲೇಜಿಗೆ ಬಂದಾಗ ಹುಡುಗಿಯರು ನಿನ್ನೇ ನೋಡಿದಾಗ ಅವರ ಜೊತೆ ಜಗಳ ಮಾಡಿದ್ದು ನೆನಪಿದೆಯಾ?"

" ಅಯ್ಯೋ ನೆನಪಾ!?  ಭಯಂಕರ ನೆನಪು ಅವತ್ತು ಪ್ರಿನ್ಸಿಪಾಲ್ ಬರದಿದ್ದರೆ ಆ ಸುರೇಖಾ ಳನ್ನು ಅದೇನು ಮಾಡುತ್ತಿದ್ದೆಯೋ ಮೊದಲ ಬಾರಿ ಇಡೀ ಕಾಲೇಜು ನಿನ್ನ ಮಾರಿ ರೂಪ ನೋಡಿತ್ತು " ಎಂದು ಜೋರಾಗಿ ನಕ್ಕ ಸುಜಯ್

"ಹೌದು ಮತ್ತೆ ನನ್ ಹುಡ್ಗನ್ನ ಲೈನ್ ಹಾಕೋಕೆ ಬಂದ್ಲು ಆ ಬಿತ್ರಿ ಬಿಡ್ತೀನಾ ನಾನು? .
ನಮ್ಮ ಪ್ರೀತಿ ವಿಷಯ ಮನೇಲಿ ಗೊತ್ತಾಗಿ ಅಪ್ಪಾ ಕಿರುಚಾಡಿದ್ರು ,ಚಿಕ್ಕವಳಿದ್ದಾಗಿಂದ ನನ್ ಹಠ ನೋಡಿದ್ದ ಅಪ್ಪ ,ಕೊನೆಗೆ ಏನಾರ ಮಾಡ್ಕೊಂಡು ಹಾಳಾಗೋಗು ಅಂದ್ರು, ಅದೇ ನಮ್ ಮದುವೆಗೆ ಗ್ರೀನ್ ಸಿಗ್ನಲ್,
ಡಿಗ್ರಿ ಮುಗೀತು ಮದುವೆ ಆಗೋಣ ಬಾ ಎಂದು ನಾನು ಕೇಳಿದಾಗ ನಿಂದು ಅದೇ ಹಳೇ ರಾಗ... ಲೆಕ್ಚರ್.... ರೈತರು.....ಕಷ್ಟ.....
ಕೊನೆಗೂ ಎರಡು ವರ್ಷ ಮದುವೆ ಬೇಡ ಎಂದೂ ನಾನೂ ತೀರ್ಮಾನ ಮಾಡಿ  ನೀನು ಮಾನಸ ಗಂಗೋತ್ರಿಯಲ್ಲಿ ಎಂ ಎ ಮಾಡಲು ಹೊರಟೆ   ನಾನು ಕೆ ಎ ಎಸ್ ಗೆ ಓದಲು ಬೆಂಗಳೂರಿಗೆ ಹೋದೆ, ಹೋಗುವಾಗ ನಿನಗೊಂದು ವಾರ್ನಿಂಗ್ ಕೊಟ್ಟಿದ್ದೆ ,"ವಾರಕ್ಕೊಮ್ಮೆ ಪತ್ರ ಬರೆಯದಿದ್ದರೆ ನಿನ್ನ ಕಥೆ ಅಷ್ಟೇ." ಎಂದು

" ಹದಿನೈದು ದಿನ ನನ್ನ ಕಾಗದ ಬರದಿದ್ದಾಗ ನೀನು ಹುಡುಕಿಕೊಂಡು ನಮ್ಮ ಹಳ್ಳಿ ಶೆಟ್ಟಿಹಳ್ಳಿ ಪಾಳ್ಯಕ್ಕೆ ಕಪ್ಪು ಕಾರಲ್ಲಿ ಬರ್... ಎಂದು ಡುಮು ಡುಮು ಮುಖದಲ್ಲಿ ಬಂದೆ. ಅಂದು ನಮ್ಮ ಅಪ್ಪನ ಹನ್ನೊಂದು ದಿನದ ತಿಥಿ ಕಾರ್ಯ ನೋಡಿ ನಿನ್ನ ಕಣ್ಣಲ್ಲಿ ನಾನು ಎರಡು ಹನಿ ಕಂಡೆ, " ಎಂದು ದೀರ್ಘವಾಗಿ ಉಸಿರು ಬಿಟ್ಟು ರಾಗಿಯ ಹೊಲದ ಕಡೆ ನೋಡುತ್ತಾ ಹೇಳಿದ ಸುಜಯ್.

" ಅಪ್ಪನಿಗೆ ಇಷ್ಟ ಇಲ್ಲದಿದ್ದರೂ  ಒಪ್ಪಿಸಿ ದೇವರಾಯನದುರ್ಗ ದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದೆವು , ಅಪ್ಪ ಹಣ ಕೊಡುವೆ ಏನಾದರೂ ಬಿಸಿನೆಸ್ ಮಾಡಿ ಇದನ್ನಾದರೂ ಕೇಳು , ಹಳ್ಳಿಗೆ ಹೋಗಬೇಡ ಎಂದಾಗ , ನೀನು ಅದಕ್ಕೆ ಒಪ್ಪಲಿಲ್ಲ ಅದಕ್ಕೆ ನಿನ್ನೊಂದಿಗೆ ಹಳ್ಳಿಗೆ ಬಂದು ಬಿಟ್ಟೆ ಅಲ್ವ? ಪ್ರಶ್ನಿಸಿದಳು ಆರತಿ

" ಹೌದು ನೀನು ಮೊದಲು ನಮ್ಮ ಹಳ್ಳಿಗೆ ಬಂದಾಗ ನಮ್ಮ ಹಳ್ಳಿಯ ಪಡ್ಡೆ ಹುಡುಗರು ಮೊಳಕಾಲ‌ ಮೇಲಿನ ನಿನ್ನ ಮಿಡಿಯನ್ನೇ  ಜೊಲ್ಲು ಸುರಿಸಿಕೊಂಡು ನೋಡುತ್ತಿದ್ದುದನ್ನು ನಾನು ನಿನ್ನ ಗಮನಕ್ಕೆ ತಂದಾಗ ಅವತ್ತಿನಿಂದ ಈ ರೀತಿಯಾಗಿ ಸೀರೆ ಉಡುತ್ತಿರುವೆ ಎಂದು ಹೆಮ್ಮೆಯಿಂದ ಆರತಿಯ ಕಡೆ ನೋಡಿದ ಸುಜಯ್.

"   ಹೌದು ಸುಜಯ್  ನೀನು ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವೆ, ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವೆ ನಮ್ಮದು ದೇವರೇ ಬೆಸೆದ ಮಧುರ ಮೈತ್ರಿ .
ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ  ನೀನು ಇರುವಾಗ , ಒಳ್ಳೆಯ ಅಮ್ಮನಂತಹ ಅತ್ತೆ, ಸುಂದರವಾದ ರಾಗಿ ಹೊಲ ,ಇದೆಲ್ಲಾ ಇರುವಾಗ ಇನ್ನೇನು ಬೇಕು..."

ಮಧ್ಯ ದಲ್ಲೆ ಬಾಯಿ ಹಾಕಿ ಹೇಳಿದ
" ನಮ್ದು ಅಂತ ಒಂದು ಜೀವ...? ಮದುವೆಯಾಗಿ ಎರಡು ವರ್ಷಗಳ ನಂತರವೂ ನಮಗೊಂದು ಮಗು ಆಗಿಲ್ಲ ಅದೊಂದೇ ಕೊರಗು ಚಿನ್ನ "ಎಂದು ಬೇಸರದಿಂದ ನುಡಿದ ಸುಜಯ್.

" ಏಯ್ ಅದ್ಯಾಕೆ ಅಷ್ಟು ಬೇಜಾರ್ ಮಾಡ್ಕೊತಿಯಾ? ನಮಗೇನು ಮಹಾ ವಯಸ್ಸು ಆಗಿದೆ ? ಭಗವಂತ ಕಣ್ ಬಿಟ್ರೆ ಅದ್ಯಾವ ಲೆಕ್ಕ ....ಎಂದು ಥೇಟ್ ಹಳ್ಳಿಯ ಹೆಂಗಸಂತೆ ಮಾತನಾಡಿದಾಗ ರತ್ನಪಕ್ಷಿ( ಸಂಬಾರ್ ಗಾಗೆ) ಅವರ ಮುಂದೆ ಹಾರುತ್ತಾ ಹೋಗಿ ಮರದಲ್ಲಿ ‌ಕುಳಿತಿತು.....

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು

*ಇಂದಿನ "೧೮/೫/೨೧ ವೈಬ್ರಂಟ್ ಮೈಸೂರು "ಪತ್ರಿಕೆಯಲ್ಲಿ ಪ್ರಕಟವಾದ ನನ್ನ ವ್ಯಕ್ತಿತ್ವ ವಿಕಸನ ಕುರಿತಾದ ಲೇಖನ* ಸಿಹಿಜೀವಿ. ಸಿ ಜಿ ವೆಂಕಟೇಶ್ವರ


 *ಇಂದಿನ " ವೈಬ್ರಂಟ್ ಮೈಸೂರು "ಪತ್ರಿಕೆಯಲ್ಲಿ ಪ್ರಕಟವಾದ ನನ್ನ  ವ್ಯಕ್ತಿತ್ವ ವಿಕಸನ ಕುರಿತಾದ ಲೇಖನ*                          ಸಿಹಿಜೀವಿ. ಸಿ ಜಿ ವೆಂಕಟೇಶ್ವರ

17 ಮೇ 2021

ಸ್ನೇಹಿತರ ಅಕಾಲಿಕ ಸಾವುಗಳು ಕ್ಷಯವಾಗಲಿ, ಸವಿನೆನಪುಗಳು ಅಕ್ಷಯವಾಗಲಿ.ಲೇಖನ


 

ಲೇಖನ

*ಸ್ನೇಹಿತರ ಅಕಾಲಿಕ ಸಾವುಗಳು ಕ್ಷಯವಾಗಲಿ,
ಸವಿನೆನಪುಗಳು  ಅಕ್ಷಯವಾಗಲಿ*

ಅಕ್ಷಯ ತೃತೀಯ ದಿನ ಭಾರತೀಯರಿಗೆ ಬಹಳ ಪವಿತ್ರ ಮತ್ತು ಉತ್ತಮ ದಿನವೆಂದು ಪರಿಗಣಿತವಾಗಿದೆ, ಇದನ್ನು ಆಸ್ತಿಕನಾದ ನಾನು ಸಹ ನಂಬಿರುವೆ, ಅದಕ್ಕೆ ಪೂರಕವೆಂಬಂತೆ ಈ ವರ್ಷದ ಅಕ್ಷಯ ತೃತೀಯ ದಿನದಂದು ನನ್ನ ಸ್ನೇಹಿತರು ಸಿಕ್ಕರು ಸ್ನೇಹ ಅಕ್ಷಯವಾಯಿತು. ಹೌದು  22 ವರ್ಷಗಳ ಹಿಂದೆ ಒಡನಾಡಿದ ಸ್ನೇಹಿತರು ನನಗೆ ಅಂದು ದೊರೆತರು, ವಾಟ್ಸಪ್, ಪೇಸ್ಬುಕ್ ಟ್ವಿಟರ್, ಇಲ್ಲದ ಆ ಕಾಲದ ಸ್ನೇಹಿತರನ್ನು ಒಂದೆಡೆ ಸೇರಿಸುವುದ ಕಷ್ಟಸಾಧ್ಯವಾದರೂ ಆ ಕೆಲಸಕ್ಕೆ ಮುನ್ನಡಿ ಬರೆದಿದ್ದರು  ನನ್ನ ಸ್ನೇಹಿತರು , ಅದರ ಫಲವೇ ಅಕ್ಷಯ ತೃತೀಯ ದಿನದಂದು 42  ಅಕ್ಷಯವಾದ ಗೆಳೆಯ, ಗೆಳತಿಯರ    ಸಂಗಮ , ಈ ಸವಿ ಸಂಗಮಕ್ಕೆ ಕಾರಣರಾದ, ಹೇಮಂತ್ ಕುಮಾರ್ ಮತ್ತು ಗೆಳೆಯರ ನೆನೆಯದೇ ಹೇಗಿರಲಿ?
ಒಬ್ಬೊಬ್ಬ ಗೆಳೆಯ, ಗೆಳತಿಯರ ಪೋಟೋ ನೋಡಿ ,ಹೇಗಿದ್ದ ಹೇಗಾದ, ಅಂಗಿದ್ಲು ಈಗ ಇಂಗಿದಾಳೆ ಎಂದು ಅಚ್ಚರಿ ಭರಿತವಾದ ಸಂತಸ ಹಂಚಿಕೊಂಡೆವು.

1999 ರಲ್ಲಿ ನಾನು ಟಿ ಸಿ‌ ಹೆಚ್ ಮುಗಿಸಿದೆ ಅದಕ್ಕಿಂತ ಮೊದಲು ನಾನು ಡಿಗ್ರಿ ಮುಗಿಸಿದ್ದರಿಂದ ಬಿ ಎಡ್ ಮಾಡಲು ಅಪ್ಲಿಕೇಶನ್ ಹಾಕಿದ್ದೆ , ಅದೃಷ್ಟವೆಂಬಂತೆ ಮೈಸೂರಿನ ಕಾಲೇಜ್ ಆಪ್ ಟೀಚರ್ ಎಜುಕೇಷನ್ ಅಲ್ಲಿ ನನಗೆ ಸೀಟು ದೊರಕಿತು, ಅದಕ್ಕೆ ಮಹಾರಾಜಾ ಕಾಲೇಜು ಮತ್ತು ಗವರ್ನಮೆಂಟ್ ಬಿ ಎಡ್ ಕಾಲೇಜು ಎಂಬ ಹೆಸರು ಇತ್ತು . ಮಧ್ಯಕರ್ನಾಟಕದ ಚಿತ್ರದುರ್ಗ ದಿಂದ ಹೋದ  ನನಗೆ ಮೊದಲಿಗೆ ಮೈಸೂರು ಹೊಸ ನಗರ, ಇದು ನನ್ನಲ್ಲಿ ಭಯ ಮತ್ತು ಕುತೂಹಲ ತರಿಸಿತ್ತು .ಮಹಾರಾಜರ ಕಾಲದ ದೊಡ್ಡ ಕಟ್ಟಡದ ಮುಂದೆ ನಿಂತಾಗ  ನನಗೆ ,ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಎಂಬ ಬೋರ್ಡ್ ನನ್ನ ಸ್ವಾಗತಿಸಿತು. ಅಂದಿನಿಂದ ಕ್ರಮೇಣವಾಗಿ ಸ್ನೇಹಿತರ ಒಡನಾಟ ,ಕಲಿಕೆ ,ಕೀಟಲೆ ,ತರಲೆ,ಇವುಗಳ ಮಧ್ಯೆ ಹತ್ತು ತಿಂಗಳು ಕಳೆದದ್ದೆ ತಿಳಿಯಲಿಲ್ಲ, ತರಬೇತಿ ಮುಗಿದಾಗ ಯಾಕೆ ಇಷ್ಟು ಬೇಗ ತರಬೇತಿ ಮುಗಿಯಿತು ಎಂದುಕೊಂಡೆವು( ಬಹುಶಃ ನಮ್ಮ ಮನದ ಬಯಕೆ ಅರಿತು ಈಗ ಬಿ ಎಡ್ ಎರಡು ವರ್ಷಗಳ ಅವಧಿಗೆ ಹೆಚ್ಚು ಮಾಡಿರಬಹುದು).

ಈ ಅವಧಿಯು ನನ್ನ ಜೀವನದ ಸುವರ್ಣ ಅಕ್ಷರಗಳಲ್ಲಿ ಬರೆದಿಡಬಹುದಾದ ದಿನಗಳು, ರಾಜ್ಯದ ವಿವಿಧ ಜಿಲ್ಲೆಗಳಿಂದ ತರಭೇತಿ ಗೆ ಬಂದ ನನ್ನ ಸ್ನೇಹಿತರ ‌ನೋಡಿದರೆ ಅದೊಂದು ಕರ್ನಾಟಕದ ಪ್ರತಿಬಿಂಬ ವಾಗಿತ್ತು ,ಅಷ್ಟೇ ಏಕೆ ಸಕ್ಕಿಂ ಮೂಲದ ಅನ್ನಪೂರ್ಣ ತಮಂಗ್ ಎಂಬುವರು ನಮ್ಮ ಜೊತೆಗೆ ಓದುತ್ತಿದ್ದರು ಅದಕ್ಕೆ ನಮ್ಮ ಕಾಲೇಜ್ ಭಾರತದ ಪ್ರತಿಬಿಂಬ ವಾಗಿತ್ತು ಎಂದರೂ ತಪ್ಪಿಲ್ಲ.

ಹತ್ತು ತಿಂಗಳಲ್ಲಿ ಕಳೆದ ಗೆಳೆಯರು 22 ವರ್ಷಗಳ ನಂತರ ವಾಟ್ಸಪ್ ನಲ್ಲಿ ಸಿಕ್ಕು ಉಭಯ ಕುಷಲೋಪರಿ ವಿಚಾರಿಸಿದರೆ ಹೇಗಿರಬೇಡ... ಸವಿ ...ಸವಿ..ನೆನಪುಗಳ ಅನಾವರಣ...

ನೆನಪುಗಳನ್ನು ಎಲ್ಲಿಂದ ಆರಂಭ ಮಾಡಲಿ ಎಲ್ಲಿ ನಿಲ್ಲಿಸಲಿ ಆರಂಭ ಮಾಡಬಹುದು ಆದರೆ ಅಲೆಗಳಂತೆ ಅವು ಬರುತ್ತಲೇ ಇರುವವು....

ಪಡುವಾರಹಳ್ಳಿಯ, ಚುಂಚನಗಿರಿ ಹಾಸ್ಟೆಲ್ ನಿಂದ ಹಿಡಿದು, ಚಾಮುಂಡಿ ಬೆಟ್ಟ, ಕಾಲೇಜ್ ಟೀಚಿಂಗ್ ಪ್ರಾಕ್ಟೀಸ್, ಸಿಟಿಜನ್ ಶಿಪ್ ಕ್ಯಾಂಪ್, ಟೂರ್, ಉಪ್.... ಏನಿತ್ತು ಏನಿರಲಿಲ್ಲ.

ಗೆಳೆಯರು ಒಂದೊಂದೆ ಹಳೆಯ ನೆನಪಿನ ಫೋಟೋಗಳನ್ನು ವಾಟ್ಸಪ್ ಗುಂಪಿನಲ್ಲಿ ಹಾಕುತ್ತಿದ್ದರೆ .ನೆನಪುಗಳು ಮತ್ತೆ ಒತ್ತರಿಸಿ ಬಂದವು.

ಪ್ರಸ್ತುತ ಬಹುತೇಕರು ಮದುವೆಯಾಗಿ ಮಕ್ಕಳನ್ನು ಪಡೆದಿರುವ ನಾವು , ನಮ್ಮ ಮಕ್ಕಳಿಗೆ ಜೀವನದಲ್ಲಿ ಮುಂದುವರೆಯಬೇಕು ಎಂದು ಬೋಧನೆ ಮಾಡುವ ನಾವು
ನಿಜ ಅರ್ಥದಲ್ಲಿ ಗೆಳೆಯರ ಜೊತೆ ನೆನಪಿನ ದೋಣಿಯಲ್ಲಿ ಇಪ್ಪತ್ತೆರಡು ವರ್ಷಗಳ ಹಿಂದಕ್ಕೆ ಹೋಗಿದ್ದೆವು .

ಅಂದು ಮಾಡಿದ ಕೀಟಲೆಗಳು, ಸಣ್ಣ ಜಗಳಗಳು, ಅಲ್ಲಲ್ಲಿ ,ಅಸೂಯೆಗಳು, ಅಸೈನ್ಮೆಂಟ್ ಟೆಸ್ಟ್, ಟೀಚಿಂಗ್ ಪ್ರಾಕ್ಟೀಸ್ ಟೂರ್ ,ಕ್ಯಾಂಪ್ .....ಎಲ್ಲಾ ನೆನಪುಗಳು ಒತ್ತರಿಸಿ ಬಂದವು ,ಆ ನೆನಪುಗಳೇ ಜಿದ್ದಿಗೆ ಬಿದ್ದಂತೆ ನಾನು ಮೊದಲು ನಾನು ಮೊದಲು ಎಂದು ನಮ್ಮ ಸ್ಮೃತಿ ಪಟಲದ ಮೇರೆ ಬರಲಾರಂಬಿಸಿದವು.

ಮೂರುದಿನಗಳ ಕಾಲ ವಾಟ್ಸಪ್ ಗುಂಪಿನಲ್ಲಿ ಪರಸ್ಪರ ಈಗಿನ ಊರು ,ಕೆಲಸ, ಮಕ್ಕಳು ಸಂಸಾರ ಪರಿಚಿತವಾದ ನಂತರ ಮತ್ತೆ ಆನ್ಲೈನ್ ನಲ್ಲೆ ತರಲೆ ಕೀಟಲೆ, ಕಾಲೆಳೆಯುವುದು ಆರಂಭ, ಲಾಕ್ ಡೌನ್ ಕೋವಿಡ್ ,ಮರೆತು ನಮ್ಮ ನೆ‌ನಪುಗಳ ಅನ್ಲಾಕ್ ಮಾಡಿ ಸ್ವಚ್ಛಂದ ವಾಗಿ ನಮ್ಮ ಬಿ ಎಡ್ ಸ್ನೇಹಲೋಕದಲ್ಲಿ ತೇಲುತ್ತಿದ್ದೆವು.

ಆಗಲೇ ನೋಡಿ ಬರಸಿಡಿಲಿನಂತೆ ಬಂದ ಸುದ್ದಿ ನಮ್ಮನ್ನು ದುಃಖ ಸಾಗರದಲ್ಲಿ ಮುಳುಗುವಂತೆ ಮಾಡಿತು.
"ದೇವೇಂದ್ರ ಬಡಿಗೇರ್" ಇನ್ನಿಲ್ಲ ಎಂಬ  ಪೋಸ್ಟ್ ಹಂಚಿದ ಗೆಳೆಯ ಅವನ ಆತ್ಮಕ್ಕೆ ಶಾಂತಿ ಕೋರಿದ. ಬಡಿಗೇರ್ ನಮ್ಮ ಜೊತೆ ಬಿ ಎಡ್ ಮಾಡಿದ ಪ್ರತಿಭಾನ್ವಿತ ಗೆಳೆಯ,
ಮೂರುದಿನದಿಂದ ನಲಿದ ಮನಸ್ಸುಗಳು ಒಮ್ಮೆಲೆ  ಘಾಸಿಗೊಂಡವು.
ಬಹಳ ಬೇಸರದಿಂದ ಗೆಳೆಯನ ಆತ್ಮಕ್ಕೆ ಶಾಂತಿ  ಕೋರುವುದೊಂದೆ ನಮ್ಮ ಕರ್ತವ್ಯವಾಗಿತ್ತು....
ಬಹಳ ನೋವಿನಿಂದ ಹೇಳುತ್ತಿರುವೆ ಗೆಳೆಯ ಹೋಗಿ ಬಾ.... ನಿನ್ನ ಆತ್ಮಕ್ಕೆ ಚಿರ ಶಾಂತಿ ಲಬಿಸಲಿ, ....
ಸ್ನೇಹಿತರ ಅಕಾಲಿಕ ಮರಣಗಳು ಕ್ಷಯವಾಗಲಿ... ಮಧುರ ನೆನಪುಗಳು ಅಕ್ಷಯವಾಗಲಿ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು