05 ಮೇ 2021

ಎರಡು ಹನಿ


 *ಎರಡು ಹನಿ*


ಜರಗನಳ್ಳಿಯವರು

ನಮ್ಮೆಲ್ಲರಿಗೂ

ಚಿರಪರಿಚಿತ,

ಓದುವುದೆಂದರೇ

ಎಲ್ಲಿಲ್ಲದ ಆನಂದ 

ಅವರ ಹನಿ|

ಅವರ ಅಗಲಿಕೆ

ನೋವಿನಿಂದ

ಅರಿವಿಲ್ಲದೇ ನನ್ನ

ಕಣ್ಣಿಂದ ಬಿದ್ದವು

ಎರಡು ಹನಿ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

04 ಮೇ 2021

ಕುರಿಮಂದೆ .ಹನಿಗವನ


 


*ಕುರಿಮಂದೆ*

 

ಯಾರೋ ಕಿಡಿಗೇಡಿಗಳು

ಹಬ್ಬಿಸುವ ವದಂತಿಗಳನ್ನು

ನಂಬುತ್ತಿದ್ದೇವೆ ನೋಡದೆ

ಇಂದು ಮುಂದೆ |

ಈ ಆಧುನಿಕ ಕಾಲದಲ್ಲಿ

ವಿದ್ಯಾವಂತರೂ ಕೂಡಾ

ಅಗುತ್ತಿದ್ದೇವಲ್ಲ 

ಕುರಿ ಮಂದೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

03 ಮೇ 2021

ರಂಗಣ್ಣನ ಗುಡಿಸಲು .ಕಥೆ


ಕಥೆ

*ರಂಗಣ್ಣನ ಗುಡಿಸಲು*

ಲಾಂಗ್ ಡ್ರೈವ್ ನಿಂದ ಸುಸ್ತಾದಂತೆ ಕಂಡುಬಂದ ಗಗನ್ ಬೈಕ್ ನ್ನು ರಸ್ತೆಯ ಬದಿಗೆ ನಿಲ್ಲಿಸಿ, ಬ್ಯಾಗ್ ಗೆ ಕೈ ಹಾಕಿದ ,ಕುಡಿಯುವಭಾವುಕರಾದರುಯಾಗಿತ್ತು, ಬಾಯರಿಕೆ ಹೆಚ್ಚಾಗಿತ್ತು ,"ಎಂತ ದಡ್ಡ ನಾನು ಕರಜೀವನಹಳ್ಳಿ ಟೋಲ್ ಬಳಿ ಟೀ ಕುಡಿದೆ ,ಆಗ ಈ ಖಾಲಿಯಾದ ಬಾಟಲ್ ನೋಡಲಿಲ್ಲ, ಹಿರಿಯೂರು ಬೈಪಾಸ್ ನಲ್ಲೂ ನಿಲ್ಲಿಸಿ ಸುಧಾರಿಸಿ ಕೊಂಡೆ, ಆಗಲು ನೆನಪಾಗಲಿಲ್ಲ ಈಗ ಹರ್ತಿಕೋಟೆ ದಾಟಿ ಮುಂದೆ ಬಂದಾಗ ನೀರು ‌ನೋಡಿಕೊಂಡಿರುವೆ " ಎಂದು ತನ್ನನ್ನೆ ಬೈದುಕೊಂಡು ಅತ್ತ ಇತ್ತ ನೋಡಿದ
ಅನತಿ ದೂರದಲ್ಲಿ ಒಂದು ಗುಡಿಸಲು ಕಂಡಿತು ಅತ್ತ ನಡೆದ ದೂರದಿಂದಲೇ ಜೋರಾದ ಬೊಗಳುವ ನಾಯಿ ಇವನ ಸ್ವಾಗತಿಸಿತು.
"ಯಾರದು? "ಎಂದು ಮಧ್ಯ ವಯಸ್ಕ  ರಂಗಣ್ಣನವರು ಬರಿ ಮೈಯಲ್ಲೇ ಗುಡಿಸಲಿನಿಂದ  ಹೊರಬಂದು ನಾಯಿ ಕರೆದರು .

"ಅಣ್ಣ ನಾನು ಗಗನ್ ಅಂತ ನಮ್ದು ಸಿದ್ದಾಪುರ ನಾನು ಬೆಂಗಳೂರಿನಲ್ಲಿ ಕೆಲಸ ಮಾಡ್ತೀನಿ, ಇವತ್ತು ನಮ್ ಊರಲ್ಲಿ ಜಾತ್ರೆ , ಗೌರ್ಮೆಂಟ್ ಬಸ್ ಸ್ಟ್ರೈಕ್ ಅದಕ್ಕೆ ಬೆಂಗಳೂರಿನಿಂದ ಬೈಕಲ್ಲೇ ಬಂದೆ, ಬಾಯಾರಿಕೆ ಆಗಿತ್ತು, ಅದಕ್ಕೆ......"

" ಬಾರಪ್ಪ ತಗಾ ಕುಡಿ, ತಣ್ಣನ ಸ್ವಾರೆ ನೀರು" ಎಂದು ಒಂದು ಚೆಂಬು ನೀರು ಕೊಟ್ಟರು ರಂಗಣ್ಣನವರು.
ಮೊದಲೇ ಬಾಯರಿದ್ದರಿಂದ ಗಟ ಗಟನೆ ‌ನೀರು ಕುಡಿದ ಗಗನ್ "ಅಬ್ಬಾ ಈಗ ಇಡೀ ಬಾಡಿ ಕೂಲ್ ಆಯ್ತು ಅಣ್ಣ ತುಂಬಾ ಥ್ಯಾಂಕ್ಸ್" ಎಂದು ಅಲ್ಲೇ ಗುಡಿಸಲಿನ ಮುಂದಿರುವ ಹೊಂಗೆ ಮರದ ಕೆಳಗಿರುವ ಹಗ್ಗದ ಮಂಚದ ಮೇಲೆ ಕುಳಿತು,

"ಏನಣ್ಣ ಮನೆ ಇಲ್ಲಿ? ನಿಮ್ದು ಯಾವೂರು ?
ಊರಲ್ಲಿ ಮನೆ ಇಲ್ವಾ?" ಮೂರು ಪ್ರಶ್ನೆ ಒಟ್ಟಿಗೇ ಕೇಳಿ ಉತ್ತರಕ್ಕೆ ಕಾದ.

ದೀರ್ಘವಾಗಿ ಉಸಿರು ಬಿಟ್ಟು " ಅಯ್ಯೋ.. ಏನ್ ಹೇಳಾನಪ್ಪ ನಮ್ ಕಥೆನಾ , ನಮ್ದು ಯರಬಳ್ಳಿ ಊರಾಗೆ ಮನೆ ಇತ್ತು ,ಮಾರಮ್ಮನ ಗುಡಿಯ ಎಡಕ್ಕೆ ಎಂಟನೇ ಮನೆ ನಮ್ದು ,  ಆ ತಾಯಿ ದಯದಿಂದ  ಬ್ಯಸಾಯ ಮಾಡ್ಕೆಂಡು ಸೆಂದಾಕಿದ್ವಿ , ಮಳೆ ಬೆಳೆ ಸೆನ್ನಾಗಿ ಆಗ್ತಿತ್ತು ,ಒಳ್ಳೆಯ ಕಡ್ಲೇಕಾಯಿ ಬೆಳಿತಿದ್ವಿ, ಊರ ಸುತ್ತಮುತ್ತ ಮರ ಗಿಡ ಬೆಳೆದು ಎಲ್ಲಿ ನೋಡಿದ್ರೂ ಹಸುರೋ... ಹಸುರು.
ನಾನು ದಿನಾ ಉಂಡು, ನಮ್ ಮ್ಯಾಕೆ ಹೊಡ್ಕಂಡು ಮೇಸಾಕೆ ನಮ್ ಹೊಲ್ದ ಕಡೆ ಹೋಗ್ತಿದ್ದೆ, ಬ್ಯಾಡ ಅಂದ್ರೂ ನಮ್ ನಾಯಿ ಮಾಲಿಂಗ ನನ್ ಹಿಂದೆನೆ ಬರಾದು,ಇಗಾ ನೋಡು ಈಗಲೂ ಇಲ್ಲೆ ಐತೆ, ಒಟ್ನಲ್ಲಿ ನಾನು ನನ್ ಹೆಂಡ್ತಿ ನನ್ ಮಗ ಸುಖವಾಗಿದ್ವಿ ಕಣಪ್ಪ ....
ಈ ....ರೋಡ್ ನವರು ಬಂದಾಗಿಂದ ನಮ್ ಗ್ರಚಾರ ಸುರುವಾತು ನೋಡಪ್ಪ"

"ಯಾವ ರೋಡ್ ನವರು ಅಣ್ಣ "

"ನಮ್ಮ ಊರು ರೋಡ್ ಅಗಲ ಮಾಡಿದರಲ್ಲಪ್ಪ ಅದೇ ರೋಡ್‌ ನವರು ಬಂದು ಮಾರ್ಕ್ ಮಾಡಿ ನಮ್ಮ ಮನೆ ಜೊತೆಗೆ ರೋಡ್ ಪಕ್ಕದ ಎಲ್ಲಾ ಮನೆ ಹೊಡೆಯಾಕೆ ಸುರು ಮಾಡಿದ್ರು , ಹೂ... ಅಲ್ಪ ಸ್ವಲ್ಪ ದುಡ್ಡೂ ಕೊಟ್ರು, ಆದರೆ ನಮ್ ತಾತ ಮುತ್ತಾತ ಕಾಪಾಡಿದ ಮನೆನ , ನಮ್ ಮಕ್ಕಳು ಆಟ ಆಡಿದ ಮನೆನೆ ,ನಮ್ಮ ಸಂತೋಷನ ಅವ್ರು ಕಿತ್ಕಂಬಿಟ್ರು ಕಣಪ್ಪ, " ರಂಗಣ್ಣನವರು ಮಾತಲ್ಲಿ ಮೊದಲಿದ್ದ ಬಿರುಸು ಕಡಿಮೆಯಾಗಿ  ಭಾವುಕರಾದರು .

" ನನ್ ಹೆಂಡ್ತಿ ನನ್ ಮಗನ್ನೂ ದೂರಾ ಮಾಡಿದ್ದು ಇದೇ ರೋಡ್ ಕಣಪ್ಪ"

"ಏನಾಗಿತ್ತು ತಾತ ನಿಮ್ ಮನೇರಿಗೆ ಮತ್ತು, ಮಗಂಗೆ?"

ಅಯ್ಯೋ ಅದೆಂತಾದೋ ಸ್ವಾಸಕೋಸ  ಕ್ಯಾನ್ಸರ್ ಅಂತೆ ಕಣಪ್ಪ ಧೂಳು ಕುಡ್ದು ಕುಡ್ದು ಅದು ಬರುತ್ತೆ ಅಂತ ಡಾಕುಟ್ರು ಅಂದಿದ್ರು, ಆ ಧೂಳ್ನಿಂದ ನಮ್ಮೂರಾಗೆ ಸುಮಾರು ಜನ ಅದೆಂಥದೋ ಅಸ್ತಮಾ ರೋಗ ಬಂದು ಸತ್ತೋದ್ರು, ಈಗ್ಲೂ ಊರಾಕೋದ್ರೆ ಪ್ರತಿ ಮನೇಲೂ ನಿಮ್ಗೆ ಜನ ಕೆಮ್ಮ   ಸಬ್ದ ಕೇಳುತ್ತೆ,ಇದೆಲ್ಲಾ ಆಗಿದ್ದು ಆ ರೋಡ್ ನವರಿಂದ ಕಣಪ್ಪ.

ನಮ್ ಮನೆಗೆ ಸರ್ಕಾರದೋರು ಕೊಟ್ಟ, ಅರ್ದ ದುಡ್ ಆಸ್ಪತ್ರೆಗೆ ಇಕ್ಕಿದ್ವಿ, ಆದರೂ ಅವಳು ಬದುಕ್ಲಿಲ್ಲ, ಇನ್ನೂ ಮಗ ಪುಡಾರಿ ಹುಡುಗ್ರು ಜತೆ ಸೇರಿ ಎಲ್ಲಾ ಚಟ ಕಲ್ತ,ಇದ್ದ ಬದ್ದ ದುಡ್ ನೆಲ್ಲಾ ಹಾಳು ಮಾಡಿ , ಈಗೆಲ್ಲೋ ಬೆಂಗ್ಳೂರ್ ನಾಗೆ ವಾಚ್ಮನ್ ಕೆಲ್ಸ ಮಾಡ್ತಾನಂತೆ, ಯಾವಾಗಲೋ ತಿಂಗಳಿಗೋ ,ಎಳ್ಡು ತಿಂಗಳಿಗೋ ಬಂದು ನಾನು ಬದ್ಕಿದಿನೋ ಸತ್ತಿದಿನೋಅಂತ ನೋಡ್ಕೆಂಡು, ಮಕ ತೋರ್ಸಿ ಹೋಕ್ತಾನೆ ,
ಅವನಿಗೆ ಈಗ ಈ ನಾಕೆಕ್ರೆ ಜಮೀನ್ ಮೇಲೆ ಕಣ್ಣು ಕಣಪ್ಪ,"

" ನೀವು ಊರಲ್ಲೆ ಇರಬಹುದಾಗಿತ್ತಲ್ಲ ಸರ್ಕಾರದವರು ಕೊಟ್ಟ ದುಡ್ನಿಂದ ಅಲ್ಲೇ ಮನೆ ಕಟ್ಕೊಂಡು ಇರಬಹುದಿತ್ತು , ಇಲ್ಲಿಗ್ಯಾಕೆ ಬಂದು ಒಬ್ರೆ ಇದಿರಾ?" ಕೇಳಿದ  ಗಗನ್"

"ನನಿಗೆ ನ‌ನ್ ಮನೆ ಕೆಡವಿದ್ ಮ್ಯಾಲೆ ,ನನ್ ಮನೆ  ಜಾಗದಾಗೆ  ಟಾರ್ ರೋಡ್ ನೋಡಿದ್ರೆ ಸಂಕಟ ಆಗ್ತಿತ್ತು ಕಣಪ್ಪ , ಜೊತಿಗೆ ರಸ್ತೆ ಮಾಡೋ ಕಂಪ್ನಿನವರು  ನಮ್ಮ ಊರ್ ಪಕ್ಕನೇ ಜಲ್ಲಿ ಮಿಷನ್ ಇಟ್ಟರು, ಇದರಿಂದ  ಯಾವಾಗಲೂ ಢಂ.. ಢಂ....  ಸಬ್ದ .. ಊರತುಂಬಾ ಧೂಳು , ಇದ್ರಿಂದ
ಊರಾಗಿರೊ ಹಸರು ಗಿಡ ಎಲ್ಲಾ ಕೆಂಪ ಗಿಡ ಆದ್ವು,ಸುಮಾರು ಜನ‌ ಉಸ್ರು ಕಟ್ಟಿ ಸತ್ ಹೋದ್ರು, ಇದನ್ ನೋಡಿ ನನಿಗೆ ಭಯ ಆಗಿ ನಮ್ ಹೊಲ್ದಲ್ಲೆ ಗುಡುಸ್ಲು ಹಾಕ್ಕೆಂಡು ಒಳ್ಳೆ ಗಾಳಿ ಕುಡ್ಕಂಡು, ಇದ್ದದ್ರಲ್ಲೇ ನೆಮ್ದಿನಾಗಿ ಇದೀನಿ ಕಣಪ್ಪ , ಆದ್ರೆ ಯಾವಾಗಾದ್ರೂ ಊರಾಕೆ ಹೋದಾಗ ,ಕೆಡವಿದ ನನ್ ಮನೆ ಹತ್ರ ತಾರ್ ರೋಡಲ್ಲಿ ನಿಂತ್ರೆ ಈಗಲೂ ಅಳು ತಡೆಯಲಾಗಲ್ಲ , ಏನ್ ಮಾಡಾದು ಯಾವ್ದೂ ನಮ್ ಕೈಲಿಲ್ಲ "
ಎಂದು ಕೈ ಮೇಲೆ ಮಾಡಿದರು ರಂಗಣ್ಣ.
ಗಗನ್ ಒಂದು ನಿಮಿಷ ಏನೂ ಮಾತನಾಡಲಿಲ್ಲ  ,ಎದ್ದು ಬೈಕ್ ಬಳಿ ಬಂದು ತನ್ನ ತಂದೆಗೆ ಕೊಡಲು ತಂದಿದ್ದ ಸೇಬು ಮತ್ತು ಮೊಸಂಬಿ ಹಣ್ಣುಗಳ ಕವರ್ ಅನ್ನು ರಂಗಣ್ಣನವರಿಗೆ ಕೊಟ್ಟ ಮೊದಲು ಬೇಡವೆಂದರೂ ಗಗನ್ ಬಲವಂತ ಮಾಡಿದ್ದಕ್ಕಾಗಿ ತೆಗೆದುಕೊಂಡು ,
" ಆ ದೇವ್ರು ನಿನ್ನ ಸೆನ್ನಾಗಿ ಇಟ್ಟಿರ್ಲಪ್ಪಾ" ಎಂದು ಹರಸಿದರು
"ಬರ್ತಿನಿ ರಂಗಣ್ಣ ಥ್ಯಾಂಕ್ಸ್ ,ಯೋಚ್ನೆ ಮಾಡಬೇಡಿ ಎಲ್ಲಾ ಸರಿಯಾಗುತ್ತೆ "ಎಂದು ಭಾರವಾದ ಹೆಜ್ಜೆ ಹಾಕಿ ಬೈಕ್ ಕಡೆ ನಡೆದು ಇಗ್ನಿಷನ್ ತಿರುವಿದ  ಬೈಕ್ ಒಂದೇ ಕಿಕ್ಕಿಗೆ ಸ್ಟಾಟ್ ಆಗಲಿಲ್ಲ, ರಂಗಣ್ಣನ ಗುಡಿಸಲು ನೋಡುತ್ತ ಎಕ್ಸಿಲೇಟರ್ ರೈಸ್ ಮಾಡಿದ ಗಗನ್, ಬೆಂಗಳೂರಿನಿಂದ ನೂರು ನೂರಿಪ್ಪತ್ತು ಸ್ಪೀಡ್ ನಲ್ಲಿ ಬಂದವನ ಬೈಕ್ ಯಾಕೋ ಅಲ್ಲಿಂದ ಮುಂದಕ್ಕೆ ಮೂವತ್ತು ಕಿಲೋಮೀಟರ್ ದಾಟಲಿಲ್ಲ.......

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು 


ಮದುವೆ .ಕಥೆ


 *ಮದುವೆ*


ಕಥೆ 


ಅತೀ ದೊಡ್ಡದೂ ಅಲ್ಲದ ಬಹಳ ಚಿಕ್ಕದೂ ಅಲ್ಲದ ಉದ್ಯಾನವನ ಅದು.ಎಣಿಸಿದರೆ ಹದಿನೈದರಿಂದ ಇಪ್ಪತ್ತು ಮರಗಳಿರಬಹುದು , ಕುಳಿತುಕೊಳ್ಳಲು ಹಳೆಯಕಾಲದ ನಾಲ್ಕೈದು ಕಲ್ಲು ಬೆಂಚುಗಳು, ಅಲ್ಲಲ್ಲಿ ಒಣಗಿರುವ ಗರಿಕೆ ವಾರದಿಂದ ನೀರು ಕಂಡಿಲ್ಲ ಎಂದು ಸಾರುತ್ತಿತ್ತು , ಒಂದು ಅಳಿಲು ಜನರ ಇರುವಿಕೆಯನ್ನೂ  ಮರೆತು ರಾಜಾರೋಷವಾಗಿ ಮರ ಹತ್ತಿ ,ಇಳಿದು ಕುಣಿದಾಡುತ್ತಿತ್ತು , ಹೊಂಗೆಯ ಮರದ ಮೇಲೆ ಎರಡು ಗಿಳಿಗಳು ‌ಕುಳಿತಿದ್ದವು, ಅಗಾಗ್ಗೆ ಕೋಗಿಲೆಯು ತನ್ನ ಕಂಠದ ಸಿರಿಯನ್ನು ಜನರಿಗೆ ಪರಿಚಯಿಸುತ್ತಿತ್ತು ,ಹಿರಿಯೂರಿನ ಆ 

ಉದ್ಯಾನವನ ಬೆಂಗಳೂರು ಮತ್ತು  ದಾವಣಗೆರೆ ಹೆದ್ದಾರಿ ಹತ್ತಿರವಿದ್ದದ್ದರಿಂದ ಬಸ್ಸು ,ಲಾರಿಗಳ ಕರ್ಕಶ ಸದ್ದು ಮತ್ತು  ಹಾರನ್ ಸದ್ದು, ಹಕ್ಕಿ ಪಕ್ಷಿಗಳ ಕಲರವ ನುಂಗಿಹಾಕಿತ್ತು.


"ಈ ಮರ , ಈ ಕಲ್ಲುಬೆಂಚು ಹೇಗಿದ್ದಾವೋ ಹಾಗೇ ಇದಾವೆ , ನಾವೇ ಮನುಷ್ಯರು ಬಹಳ ಬದಲಾಗಿ ಬಿಟ್ಟಿದ್ದೀವಿ ಅಲ್ವಾ ಸತು" ಇಡೀ ಪಾರ್ಕನ್ನು ಒಮ್ಮೆ ದೀರ್ಘವಾಗಿ ನೋಡಿ ನುಡಿದಳು ಸುಜಾತ.


ಅದೇ ಕಡಲೇಕಾಯಿ ಮಂಡಿಯ ಪಾರ್ಕ್ , ಅದೇ ಕಲ್ಲು ಬೆಂಚು ,ಅದೇ ಜೋಡಿಗಳು , ಆದರೆ ಎಂಟು ವರ್ಷಗಳ ಹಿಂದೆ ಇಬ್ಬರೂ ಕುಳಿತಂತೆ ಹತ್ತಿರವಿಲ್ಲ ,ಇಬ್ಬರ ನಡುವೆ ಅಂತರವಿದೆ.


"ಸುಜು ಕೆಲವು ಪರಿಸ್ಥಿತಿಗಳು ,ಸಂದರ್ಭಗಳು ಮನುಷ್ಯರನ್ನು ಅನಿವಾರ್ಯವಾಗಿ ಬದಲಾಗುವಂತೆ ಮಾಡುತ್ತವೆ , ಆ ಬದಲಾವಣೆ ಧನಾತ್ಮಕವಾ ,ಋಣಾತ್ಮಕವಾ, ಒಳ್ಳೆಯದಾ ,ಕೆಟ್ಟದಾ, ಎಂಬುದರ ಮೇಲೆ ವ್ಯಕ್ತಿಯ ವ್ಯಕ್ತಿತ್ವವು ಕಂಡುಬರುವುದು " ಎಂದ ಸತೀಶ , 


"ಹೌದು ಸತು ,ನೀನು ಹೇಳೋದು ನಿಜ , ನನ್ನ ಮತ್ತು ನಿನ್ನ ಜೀವನದಲ್ಲಿ ಹಲವಾರು ಘಟನೆಗಳು, ತಿರುವುಗಳು ಘಟಿಸಿದವು ,ಹೌದು ಕೆಲ ಸಂದರ್ಭದಲ್ಲಿ ನಮ್ಮ ಮನಸ್ಸಿಗೆ ವಿರುದ್ಧವಾಗಿ ಹಲವಾರು ಘಟನೆಗಳು ನಡೆದರೂ ನಾವು ಮೂಕ ಪ್ರೇಕ್ಷಕರಾಗಿ ಹೊಂದಿಕೊಂಡು ಸಾಗಬೇಕು,ಅದಕ್ಕೆ ಉದಾಹರಣೆ  ನಾನು ನಿನ್ನ ಪ್ರೀತಿ ಮಾಡ್ತೀನಿ ಅಂತ ಗೊತ್ತಾಗಿ, ನನ್ನ ಆಸೆಗೆ ವಿರುದ್ಧವಾಗಿ, ನಮ್ಮಪ್ಪ ನನ್ನ ಬೆಂಗಳೂರಿಗೆ ಕರೆದುಕೊಂಡು ಹೋಗಿ ಓದಿಸಿದ್ದು , ಅದ್ಯಾವನಿಗೋ ನನ್ನ ಮದುವೆ ಮಾಡಿಸಿದ್ದು, ನೀನು ಪಿ ಯು ಸಿ ಪೇಲಾಗಿದ್ದು, ನಿಮ್ಮ ಮಾವನವರ ಮನೆ ಬಿಟ್ಟು ಬಂದಿದ್ದು, ನಿನ್ನ ಸ್ವಂತ ಊರಿಗೆ ಹೋಗಿ ಮಾದರಿ ಕೃಷಿಕನಾಗಿದ್ದು, ಅಮ್ಮನಿಗೆ ಒಳ್ಳೆಯ ಮಗನಾಗಿದ್ದು, ಹೀಗೆ ಒಂದೇ ಎರಡೇ ಒಟ್ಟಿನಲ್ಲಿ ನಾವು ಅವನಾಡಿಸುವ ಬೊಂಬೆಗಳು ಎಂಬುದರಲ್ಲಿ ಅನುಮಾನವಿಲ್ಲ. ಅಲ್ಲವೇ? ಎಂದು ದೀರ್ಘವಾಗಿ ಉತ್ತರಿಸುತ್ತಾ,


"ಅದ್ಸರಿ ,ಏನು ನನ್ನ ಹತ್ತಿರ ಮಾತನಾಡಬೇಕು ಎಂದು ಕರೆಸಿಕೊಂಡೆ ನಾ‌ನೇ ಉದ್ದುದ್ದ ಏನೇನೋ ಮಾತಾಡ್ತಾ ಇದಿನಿ ಏನ್ ಸಮಾಚಾರ?" ಕೇಳಿದಳು ಸುಜಾತ 


" ಏನು ಇಲ್ಲ ಸುಜು ನಮ್ಮ ಮದುವೆ ವಿಚಾರ" 


ಮದುವೆ ವಿಚಾರ ಎಂದ ತಕ್ಷಣ ಸುಜಾತಾಳಲ್ಲಿ ವಿದ್ಯುತ್ ಸಂಚಾರವಾದಂತಾಗಿ ಮನದಲ್ಲಿ ತಾನು ಹಲವಾರು ಬಾರಿ ಒಂಟಿಯಾಗಿ ಅಂದುಕೊಂಡ ಮಾತುಗಳು ಅನುರಣಿಸಿದವು, ಹೌದು ನಾನು ಯಶೋಧರನನ್ನು ಮದುವೆ ಆಗಿದ್ದು ನನ್ನ ಸ್ವಂತ ಇಚ್ಛೆಯಿಂದ ಅಲ್ಲ, ನಮ್ಮ ಅಪ್ಪನ ಬಲವಂತದಿಂದ ಈಗ ಅಪ್ಪನೂ ಇಲ್ಲ,

ಮದುವೆಯನ್ನು ಶ್ರೀಮಂತರ ಮನೆಗೆ ಕೊಟ್ಟು ಮಾಡಿದರು  , ಆದರೆ ವ್ಯಕ್ತಿಗಳಿಗೆ ಗುಣದಲ್ಲಿ  ಶ್ರೀಮಂತಿಕೆ  ಇಲ್ಲದಿದ್ದರೆ  ಏನು ಪ್ರಯೋಜನ?

ಗಂಡನೆನಿಸಿಕೊಂಡವನು ಮನೆ ಸೇರದೆ ಮೂರು ಹೊತ್ತು ಕುಡಿದು, ಸಾಂತಮ್ಮನ ಮನೆಯಲ್ಲಿ ಬಿದ್ದಿರುವನು, ಇಂತಹ ಗಂಡ ನನಗೆ ಬೇಕಾ? ಮದುವೆಯಾಗಿ ಮೂರು ವರ್ಷದಲ್ಲಿ ಅವನು ನನಗೆ ಕೊಟ್ಟಿದ್ದಾದರೂ ಏನು? ಒಂದು ಗಂಡು ಮಗು ಅಷ್ಟೇ ಅದಕ್ಕೆ ಪ್ರೀತಿಯಿಂದ ನನ್ನ ಪ್ರಿಯಕರನ ಹೆಸರಾದ ಸತೀಶ್ ಎಂದು ನಾಮಕರಣ ಮಾಡಿರುವೆ , ಸರ್ಕಾರಿ ಶಾಲಾ ಶಿಕ್ಷಕಿಯ ಕೆಲಸವನ್ನು ಹೊಂದಿರುವ ನಾನು ಇಂತಹ ಗಂಡನ ಜೊತೆ ಸಂಸಾರ ಮಾಡುವ ಬದಲಿಗೆ ಇವನಿಗೆ ಡೈವರ್ಸ್ ಏಕೆ   ನೀಡಬಾರದು? ಹೇಗೂ ನನ್ನ ಸತೀಶ ಇನ್ನೂ ಮದುವೆಯಾಗಿಲ್ಲ , ಅವನನ್ನು ಒಪ್ಪಿಸಿ ಏಕೆ ಎರಡನೇ ಮದುವೆ ಆಗಬಾರದು? ..ಆದರೆ ಈ ಮಗು...? ಇರಲಿ ನನ್ನ ಸತೀಶ ಅಂತವನಲ್ಲ  ಈ ಮಗುವನ್ನು ತನ್ನ ಮಗುವಿನಂತೆಯೇ ನೋಡಿಕೊಳ್ಳುವನು, ಇದುವರೆಗೂ ಯಾರದೋ ಮರ್ಜಿಗೋ, ಯಾರನೋ ಮೆಚ್ಚಿಸಲು ಬದುಕಿದ್ದಾಯಿತು ,ಇನ್ನಾದರೂ ನಾವಂದುಕೊಂಡ ಬಾಳು ಬಾಳೋಣ ಎಂದು ನೂರಾರು ಬಾರಿ ಯೋಚಿಸಿದರೂ ಯಾಕೋ ಧೈರ್ಯ ಬಂದಿರಲಿಲ್ಲ ಈಗ ಸತೀಶ ಮದುವೆ ಮಾತು ಆಡಿದ, ಅಂದರೆ ನನ್ನ ಮನಸಿನಲ್ಲಿ ಇರುವುದನ್ನೆ ಅವನು ಹೇಳುತ್ತಿದ್ದಾನೆ ಎಂದು ಬಹಳ ದಿನಗಳ ನಂತರ ಒಳಗೊಳಗೇ ಸಂತಸಗೊಂಡು ನಗಲಾರಂಬಿಸಿದಳು


"ಸುಜು ಯಾಕೆ ಸುಮ್ಮನಾಗಿ ಬಿಟ್ಟೆ"


"ಏನೂ ಇಲ್ಲ ಸತು ನಾನೇ ಹೇಳಬೇಕೆಂದುಕೊಂಡಿದ್ದೆ ಈಗಲಾದರೂ ನೀನು ಕೇಳಿದೆಯಲ್ಲ ಅದಕ್ಕೆ ಸಂತಸದಿಂದ ಮಾತು ಹೊರಡಲಿಲ್ಲ"


"ನಾನೇನು ಕೇಳಿದೆ , ನಮ್ಮ ಮನೆಯಲ್ಲಿ ನಮ್ಮ ದೂರದ ಸಂಬಂಧಿ ಹುಡುಗಿಯೊಂದಿಗೆ ಮದುವೆ ಮಾಡಲು ನಮ್ಮ ತಾಯಿ ಮಾತು ಕತೆ ಮಾಡಿದ್ದಾರೆ , ಆ ವಿಷಯ ಹೇಳಲು ಬಂದೆ "


ಸುಜಾತಾಳ ಕನಸು ಎರಡನೇ ಬಾರಿಗೆ ನುಚ್ಚು ನೂರಾಗಿತ್ತು ,ಒಳಗಿದ್ದ ಬೇಸರ, ಬೇಗುದಿ, ಒತ್ತಡಗಳು ಒಮ್ಮೆಲೆ ಕಣ್ಣೀರಾಗಿ ಹೊರಬಂದು " ಸತು ಅಂದರೆ ನೀನು ನನ್ನ  ಪ್ರೀತಿಸಿದ್ದು ಸುಳ್ಳಾ, ಅಥವಾ ನೀನು ನನ್ನ ಪ್ರೀತಿ ಮಾಡ್ದೆ ಅಂತ ನಂಬಿದ ನಾನೇ ಪೆದ್ದಿನಾ? ಅಯ್ಯೋ ಎಲ್ಲರೂ ನನಗೆ ಮೋಸ ಮಾಡೋರೆ ಜೀವನದಲ್ಲಿ "


" ಸುಜು ಯಾಕೆ ಏನೇನೋ ಮಾತಾಡ್ತಾ ಇದಿಯಾ ? ನಾನು ನಿನ್ನ ಪ್ರೀತಿಸಿದ್ದು ಸೂರ್ಯ ಚಂದ್ರರಷ್ಟೇ ಸತ್ಯ "


"ಪ್ರೀತಿಸಿದ್ದು...... ಅಂದರೆ ಈಗ ಪ್ರೀತಿಸುತ್ತಿಲ್ಲ ಎಂದು ಹೇಳುತ್ತಿರುವೆಯಾ?


ಅಯ್ಯೋ ....ಸುಜು ನಾನೇಗೆ ನಿನಗೆ ಅರ್ಥಮಾಡಿಸಲಿ, ನೀನು ಈಗ ಬೇರೆಯವರ ಹೆಂಡತಿ, ನಾನು ಹೇಗೆ  ಪ್ರೀತಿಸಲು ಸಾಧ್ಯ?"


"ಅವನಿಗೆ ಇವತ್ತೇ ಡೈವೋರ್ಸ್ ಕೊಡ್ತೀನಿ ಬಾ ಇಬ್ಬರೂ ಮತ್ತೆ ಮದುವೆಯಾಗಿ ಪ್ರೀತಿಸುತ್ತಾ ಸಂಸಾರ ಮಾಡೋಣ" ಆವೇಗದಲ್ಲಿ  ,ಸಿಟ್ಟಿನಲ್ಲಿ  ,ಇಷ್ಟು ದಿನವೂ ಮುಚ್ವಿಟ್ಟುಕೊಂಡ ತನ್ನ ಮನದಿಂಗಿತ ಹೇಳಿಯೇಬಿಟ್ಟಳು ಸುಜಾತ.


"ಸುಜು ,ಅದು ಹಾಗಲ್ಲ ,ಒಮ್ಮೆ  ಮದುವೆಯಾದ ಹೆಣ್ಣು ಗಂಡನ ಬಿಟ್ಟರೆ ಸಮಾಜ ಅವಳನ್ನು ನೋಡುವ ದೃಷ್ಟಿಕೋನವೇ ಬೇರೆ , ದುಡುಕಿ ಏನೇನೋ ಮಾತನಾಡಬೇಡ"


"ಸಮಾಜಕ್ಕೆ ಹೆದರಿ ನಾವಂದುಕೊಂಡಂಗೆ ಇರಲು ಅಗಲಿಲ್ಲ ಅಂದರೆ ಅದು ಆತ್ಮ ವಂಚನೆ ಮಾಡಿಕೊಂಡ ಹಾಗೆ ಸತು ಈಗಲೂ ಕಾಲ ಮಿಂಚಿಲ್ಲ ನಮ್ಮಿಬ್ಬರ ಜೀವನದಲ್ಲಿ ಇಬ್ಬರೂ ಬಹಳ ಕಷ್ಟಗಳನ್ನು ಅನುಭವಿಸಿದ್ದೇವೆ  , ಇನ್ನು ಮುಂದಾದರೂ ಇಬ್ಬರೂ ಮದುವೆಯಾಗಿ ಸುಖವಾಗಿರೋಣ"


"ಸುಜು ನನ್ನ ಮೇಲೆ ನೀನು ಇಟ್ಟಿರುವ ಪ್ರೀತಿ ಕಂಡು ನಾನೂ ಮೂಕನಾಗಿರುವೆ ,ಆದರೆ ನೀನು ಈಗ ಪರರ ಹೆಂಡತಿ, ಪರರ ಹೆಂಡತಿಯನ್ನು ತಾಯಿ ಸಮಾನ ನೋಡಬೇಕು ಎಂದು ಪರಮಹಂಸ ಗುರುಗಳು ಹೇಳಿರುವರು ,ಭಾರತೀಯ ‌ಕುಟುಂಬ ಪದ್ದತಿಯಲ್ಲಿ ಗಂಡ, ಹೆಂಡತಿ ಸಂಸಾರ, ಸಂಸ್ಕಾರಕ್ಕೆ ತನ್ನದೇ ಆದ ನೆಲೆ ಬೆಲೆ ಇದೆ ಪಾಶ್ಚಿಮಾತ್ಯ ದೇಶಗಳಂತೆ ದಿನಕ್ಕೊಂದು ಹೆಣ್ಣು,  ಅಥವಾ  ವಾರಕ್ಕೊಂದು  ಗಂಡು ಬದಲಿಸುವ ದೇಶದಲ್ಲಿ ನಾವಿಲ್ಲ . ನಾವು ಕೆಟ್ಟ ದಾರಿಯಲ್ಲಿ ನಡೆದರೆ ನಾವು ಸೇರುವ  ತಾಣವೂ ಕೆಟ್ಟದ್ದಾಗಿ ಅದಕ್ಕೆ ತಕ್ಕ ಪ್ರತಿಫಲ ಅನುಭವಿಸಬೇಕಾಗಬಹುದು , ನಾವು ನಡೆಯೋ ಮಾರ್ಗ " ಸನ್ಮಾರ್ಗ" ಆಗಿದ್ದರೆ ಭಗವಂತ ನಮಗೆ ಒಳಿತುಮಾಡುವ" ಎಂದು ಶ್ರೀ ವೀರೇಶಾನಂದರ ಮಾತುಗಳಿಂದ ಪ್ರೇರಿತನಾಗಿ ಸುಜಾತಳಿಗೆ ಬುದ್ದಿ ಹೇಳಿದನು ಸತೀಶ .


" ಇಷ್ಟವಿಲ್ಲದ ಗಂಡನ ಹುಚ್ಚಾಟ ಸಹಿಸಿಕೊಂಡು ಹೇಗೆ ಜೀವನ ಸಾಗಿಸಲು ಸಾದ್ಯ ಸತು ? ನನಗೆ ಈ ಮಾರ್ಗದ ಬಗ್ಗೆ ಈಗ ನಂಬಿಕೆಯಿಲ್ಲ ಮೊದಲಿನಿಂದಲೂ ಬರೀ ಸಂಕಟಗಳನ್ನು ಕಂಡ ನನಗೆ ನಿನ್ನಿಂದಲಾದರೂ ಸುಖ ಸಿಗಬಹುದು ಎಂಬ ಆಸೆ"


" ಜೀವನದಲ್ಲಿ ಭರವಸೆ ಇರಲಿ ಸುಜು ,ಇಂದಲ್ಲ ನಾಳೆ ನಿನ್ನ ಗಂಡನಿಗೆ ಒಳ್ಳೆಯ ಬುದ್ದಿ ಬರಬಹುದು ,ಅದಕ್ಕಿಂತ ಮಿಗಿಲಾಗಿ ಮುದ್ದಾದ ಮಗನಿದ್ದಾನೆ ಅವನೇ ನಿನ್ನ ಆಶಾ ಕಿರಣ, ಕಷ್ಟಗಳ ಕಾರ್ಮೋಡ ಕರಗಿ  ಸುಖದ ದಿನಗಳು ನಿ‌ನಗೆ ಬಂದೇ ಬರುವವು ಎಂದು ಒಬ್ಬ ಗೆಳೆಯನಾಗಿ ನಿನಗೆ ಹಾರೈಸುವೆ" 


ಮೊದ ಮೊದಲು ಸತೀಶನು ಬೇರೆ ಹೆಣ್ಣ ಮದುವೆಯಾಗುವನು ಎಂಬ ಸಿಟ್ಟಿನಿಂದ ಏನೇನೋ ಮಾತನಾಡಿದಳು ಸುಜಾತ,ಬರು ಬರುತ್ತಾ, ಸತೀಶನ ಒಳ್ಳೆಯ ಗುಣ, ಒಳ್ಳೆಯ ಬುದ್ದಿ, ಕಂಡು ಒಳಗೊಳಗೆ ಅವನ ಬಗ್ಗೆ ಹೆಮ್ಮೆ ಪಟ್ಟುಕೊಂಡಳು, ಮತ್ತು ತನ್ನ ಬಗ್ಗೆ  ಅಸಹ್ಯ ಮೂಡಿತು ಡಬಲ್ ಡಿಗ್ರಿ ಮಾಡಿ ಮೇಡಂ ಆದರೂ ನನ್ನ ಚಿಂತನೆ ಕೆಳಮಟ್ಟಕ್ಕೆ ಇಳಿದಿದ್ದೇಗೆ ?ಪಿ ಯು ಸಿ ಪೇಲಾದ ಸತೀಶ ಇಂತಹ ಉದಾತ್ತ ಚಿಂತನೆ ಬೆಳಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುತ್ತಿರುವುದು ಹೇಗೆ ಸಾದ್ಯ? ಎಂದು ತನಗೆ ತಾನೇ ಪ್ರಶ್ನೆಗಳನ್ನು ಹಾಕಿಕೊಂಡಳು .ಒಟ್ಟಾರೆ

ಸತೀಶನ ಮಾತುಗಳು ನೊಂದ ಮನಕ್ಕೆ ಆಪ್ತ ಸಲಹೆಗಾರರು ನೀಡುವ ಸಾಂತ್ವನದಂತೆ, ಸ್ವಾಮೀಜಿಯವರು ನೀಡುವ ಪ್ರವಚನದಂತೆ ಸುಜಾತಾಳ ಮನದ ದುಗುಡವನ್ನು ದೂರಮಾಡಿದವು.


"ಅಂದರೆ ನೀನು ಬೇರೆ ಮದುವೆ ಮಾಡಿಕೊಳ್ಳಲು ತೀರ್ಮಾನವನ್ನು ಮಾಡಿಯೇ ಬಂದಿರುವೆ ,ಆಯ್ತು ನಿ‌ನಗೆ ಶುಭವಾಗಲಿ ,ಆಲ್ ದ ಬೆಸ್ಟ್ "ಎಂದು ಕೈ ಮುಂದೆ ಚಾಚಿ ,ಥ್ಯಾಂಕ್ಸ್ ಕೊಡುವಾಗ ಬೇಡವೆಂದರೂ ಇಬ್ಬರ ಕೈ ಮೇಲೆ ಎರಡು ಹನಿಗಳು ಬಿದ್ದವು ಒಂದನಿ ಸುಜಾತಾಳದು ಮತ್ತೊಂದು ಸತೀಶನದು.


"ಬರುವ ಬಸವನ ಹಬ್ಬದ ಅಕ್ಷಯ ತೃತೀಯ ದಿನದಂದು ನನ್ನ ಮದುವೆ ಬರಬೇಕು"


"ನಾನು ಮದುವೆಯಾಗೋ ಹುಡುಗ ,ಬೇರೆ ಹುಡ್ಗಿ ಮಾದುವೆಯಾಗೋದು ನೋಡೋಕೆ ಬರೋದಕ್ಕೆ ನನಗೇನು ಗ್ರಹಚಾರ" ಎಂದು ಎದ್ದು ಹೊರಟಳು ಸುಜಾತ.

ಹೊಂಗೆ ಮರದ ಮೇಲೆ ಅಲ್ಲಿಯವರೆಗೂ ಕುಳಿತಿದ್ದ ಎರಡು ಜೋಡಿ ಹಕ್ಕಿಗಳು ಅತ್ತೊಂದು ಇತ್ತೊಂದು ಹಾರಿ ಹೊರಟವು....



ಚೌಡಗೊಂಡನಹಳ್ಳಿಯ ಚೌಡೇಶ್ವರಿ ದೇವಾಲಯದಲ್ಲಿ ಮದುವೆಯ ಸಡಗರ ನೆಂಟರಿಷ್ಟರಿಂದ ದೇವಾಲಯ ತುಂಬಿ ತುಳುಕುತ್ತಿತ್ತು ,ಸತೀಶ ಮತ್ತು ಭೂದೇವಮ್ಮನ ಒಳ್ಳೆಯತನ ಹಳ್ಳಿಯ  ಪ್ರತಿಮನೆಯಿಂದ ಜನರು ಮದುಮಕ್ಕಳ ಆಶೀರ್ವಾದ ಮಾಡಲು ಬಂದಿದ್ದರು. 

ಎಲ್ಲಾ ಅಗತ್ಯವಾದ ಶಾಸ್ತ್ರಗಳು ಮುಗಿದವು

"ಮೂರ್ತ ಮೀರುತ್ತೆ ತಾಳಿ ಕಟ್ಟಪ್ಪ ಸತೀಶ " ಎಂದು ಚಂದ್ರಯ್ಯ ಸ್ವಾಮಿಗಳು ಹೇಳಿ ಸತೀಶನ ಕೈಗೆ ತಾಳಿ ಕೊಟ್ಟರು.

ಜನರೆಲ್ಲಾ ಅಕ್ಷತೆ ಕಾಳು ಹಾಕಲು ಸಿದ್ದರಾದರು

ಜೋರಾಗಿ ಕೂಗುವ ಒಂದು ಹೆಣ್ಣಿನ ಧ್ವನಿಯ ಕಡೆ ಊರವರ ಗಮನ ಸೆಳೆಯಿತು ಎಲ್ಲರೂ ಆ ಕಡೆ ತಿರುಗಿದರು

" ಏ ಸತೀಶ ..... ಎಷ್ಟು ಕೊಬ್ಬು ನಿನಗೆ.....ನನ್ನನ್ನೇ ಬಿಟ್ಟು ಹೋಗ್ತಿಯಾ.....ಇರು ಮಾಡ್ತಿನಿ.......ಎಂದು ಸಿಟ್ಟಿನಿಂದ ಓಡಿ ಬಂದಳು ಸುಜಾತಾ.


ಸತೀಶನಿಗೆ ಮತ್ತು ಊರವರಿಗೆ ಗಾಬರಿಯಾಗಿ ಏನು ನಡೆಯುತ್ತಿದೆ ಎಂದು ಗೊತ್ತಾಗುವುದರೊಳಗೆ ಸುಜಾತ ಓಡಿ ಹೋಗುತ್ತಿದ್ದ ತನ್ನ ಮೂರು ವರ್ಷದ

ಮಗ ಸತೀಶನನ್ನು ಹಿಡಿದು ಎತ್ತಿಕೊಂಡು ಪ್ರೀತಿಯಿಂದ ಎರಡು ಏಟು ಕೊಟ್ಟಳು, ಎಲ್ಲರೂ ನಿಟ್ಟುಸಿರು ಬಿಟ್ಟರು

" ನನಗೂ ಅಕ್ಷತೆ ಕೊಡ್ರಮ್ಮ" ಎಂದು ಕೇಳಿದಳು ಸುಜಾತ.

ಆ......ಗಟ್ಟಿ ಮೇಳ......... ಗಟ್ಟಿಮೇಳ....... ಎಂದರು ಚಂದ್ರಯ್ಯನವರು...

ಊರ ಜನರೊಂದಿಗೆ ಸುಜಾತಾ ಸಹ  ಅಕ್ಷತೆ ಹಾಕಿ ನಗುತ್ತಾ ಮದುಮಗ ಸತೀಶನಿಗೆ ಕಣ್ಣು ಹೊಡೆದಳು .ಅವಳ ಕಣ್ಣಂಚಿನಲ್ಲಿ ಒಂದು ಹನಿ ಉದುರಿದ್ದನ್ನು ಸತೀಶ ಮಾತ್ರ ನೋಡಿದ .



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಜನಮಿಡಿತ ೩/೫/೨೧