08 ನವೆಂಬರ್ 2018

ಮಹಾಬಲಿ (ಕವನ)

                     *ಮಹಾಬಲಿ*

ಪರಿಸರ ಮಾಲಿನ್ಯ
ದುರಾಸೆಗಿಡಿದ ಕನ್ನಡಿ
ಸುಸ್ಥಿರ ಅಭಿವೃದ್ಧಿಯ ಕಡೆಗಣಿಸಿ
ಅಸ್ಥಿರ ಗೊಳಿಸಿರುವೆವು ಭುವಿಯ
ವ್ಯಗ್ರಗೊಂಡಳು  ಭೂಮಾತೆ

ಅತಿವೃಷ್ಟಿ ಅನಾವೃಷ್ಡಿ  ಬರ
ಉಬ್ಬರ ಜಾಗತಿಕ ತಾಪಮಾನ
ಎಲ್‌ ನೀನೋ  ಲಾ  ನೀನೋ
ಏನೇನೋ
ಚಂಡಿಯಂತಹ ಚಂಡಮಾರುತ
ಜ್ಬಾಲೆಯುಗುಳುವ ಜ್ವಾಲಾಮುಖಿ
ಬಾಯಿತೆಗೆವ ಭೂಕಂಪ
ಪ್ರಕೃತಿ ಕ್ರಮೇಣ ಸಣ್ಣ ಪುಟ್ಟ
ಬಲಿ ಪಡೆದು ಎಚ್ಚರಿಕೆ ನೀಡಿಯಾಯಿತು
ಬುದ್ದಿ ಕಲಿತಿಲ್ಲ ನಾವು
ಮುಂದುವರೆಸಿದ್ದೇವೆ ಅದೇ ದುರ್ವರ್ತನೆ
ಮಹಾಬಲಿ ಗಾಗಿ ಕಾದಿದ್ದಾಳೆ
ಪ್ರಕೃತಿ ಮಾತೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


06 ನವೆಂಬರ್ 2018

ಕನಸ ದೀಪಾವಳಿ ( ಹನಿಗವನ)

              *ಕನಸ ದೀಪಾವಳಿ*

ಒಂದು ದಿನ ಮೊದಲೇ
ಆರಂಭವಾಗಿದೆ ದೀಪಾವಳಿ
ನಮ್ಮ ಗೃಹದಲಿ
ಓದಲು ಹೋದ ನನ್ನ
ಕನಸು ಹಿಂದಿರುಗಿದಳು
ಇಂದು ಮನೆಗೆ
ಆನೆ ಪಟಾಕಿಯಂತೆ ಚಟಪಟ
ಮಾತನಾಡುತ್ತಾ ಬಾಯಲಿ
ನಗುವೆಂಬ ಸುರ್ ಸರ್ ಬತ್ತಿಯ
ಬೆಳಕು ನೀಡುತ  ಮೊಗದಲಿ
ಗಲ್ ಗಲ್ ಎಂದು ಸದ್ದುಮಾಡಿ
ನಡೆದಾಡುತ್ತಿದ್ದಾಳೆ ಮನೆಯಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ದಿನವೂ ದೀಪಾವಳಿ (ಹನಿಗವನ)

            *ದಿನವೂ ದೀಪಾವಳಿ*

ಬೆಳಕ ನೀಡಿ ಬೆಳಕ ಪಡೆವ
ಸೂರ್ಯ ತಾರೆ ಚಂದ್ರರಿಂದ
ಮಾಲಿನರಹಿತ  ಪರಿಸರ ಸ್ನೇಹಿ
ದೀಪಗಳ  ಹಬ್ಬ ನಿರಂತರ .

ಬಾನಿನ ದಿನಕರ ಚುಕ್ಕಿ ಗಳಿಂದ
ಸ್ಪೂರ್ತಿ ಪಡೆದು ನಾವೂ ಸಹ
ಅಜ್ಞಾನ ಓಡಿಸಿ ತಮವ ನೀಗಿ
ದೀಪದಿಂದ ದೀಪಗಳ ಹಚ್ಚಿ
ದಿನವೂ ದೀಪಾವಳಿ ಆಚರಿಸೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 ನವೆಂಬರ್ 2018

ಕನ್ನಡ ಓರಾಟಗಾರ (ನ್ಯಾನೋ ಕಥೆ)

                *ನ್ಯಾನೋ ಕಥೆ*

*ಕನ್ನಡ ಓರಾಟಗಾರ*

"ನಮ್ಮ ನಾಡು ನಮ್ಮ ನುಡಿಯ ಬಗ್ಗೆ ನಾವು ಅಭಿಮಾನ ಪಡದಿದ್ದರೆ ಮತ್ಯಾರು ಬರುವರು? ನಮ್ಮ ಭಾಷೆ ಉಳಿಸಲು ಕನ್ನಡ ಪತ್ರಿಕೆಗಳನ್ನು, ಪುಸ್ತಕಗಳನ್ನು ಕೊಂಡು ಓದಬೇಕು.ಕನ್ನಡ ಶಾಲೆಗಳ ಬಲಪಡಿಸಬೇಕು" ಎಂದು ಸಮಾರಂಭದಲ್ಲಿ ಭಾಷಣ ಮಾಡಿದ ರಮೇಶನು  ಸನ್ಮಾನ ಸ್ವೀಕರಿಸಿ ಮನೆಗೆ ಬಂದ
"ಅಪ್ಪ ಇಲ್ಲಿದ್ದ ಟೈಮ್ಸ್ ಆಪ್ ಇಂಡಿಯಾ ಪೇಪರ್ ನೋಡಿದೆಯಾ?  " ಎಂದು ಮಗಳು ಕೇಳುವ  ಹೊತ್ತಿಗೆ  ಮಗ "ನಾಳೆ ನಮ್ಮ ಕಾನ್ವೆಂಟ್ ನಲ್ಲಿ ಪೇರೆಂಟ್ಸ್ ಮೀಟಿಂಗ್ ಇದೆ ನೀನು ಮಮ್ಮಿ ಬರಬೇಕಂತೆ " ಅಂದ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಗಂಧದ ಬೀಡು( ಕವನ)

                    *ಗಂಧದ ಬೀಡು*

ಕನ್ನಡ ನಾಡು ನಮ್ಮ ಚಿನ್ನದ ಬೀಡು
ಕನ್ನಡ ನಾಡು ನಮ್ಮ ಗಂಧದ ನಾಡು |ಪ|

ಹಕ್ಕ ಬುಕ್ಕರಾಳಿದ ನಾಡಿದು
ಒಡೆಯರು ಗೌಡರು ಕಟ್ಟಿದ ಬೀಡಿದು
ಕದಂಬ ಹೋಯ್ಸಳರಾಳಿದ ನಾಡಿದು
ಚೆನ್ನಮ್ಮ ಓಬವ್ವರ ಕಂಡ ನೆಲವಿದು     
                                |ಕನ್ನಡ  ನಾಡು |                                                                                                         

ಬೇಲೂರು ಹಳೇಬೀಡು ಕೆತ್ತನೆ ಸೊಬಗು
ಬಾದಾಮಿ ಐಹೊಳೆ ಹಂಪಿಯ ವೈಭವ
ಶಿಲ್ಪಕಲೆಯ ತವರೂರು ನಮ್ಮದು
ಲಲಿತ ಕಲೆಗಳ ಸುಂದರ ತಾಣವು
                         |ಕನ್ನಡ ನಾಡು|

ಪಂಪ ರನ್ನ ಜನ್ನರ ನೆಲೆಯಿದು
ಅಷ್ಟ ಜ್ಞಾನ ಪೀಠಿಗಳ ನೆಲೆಯಿದು
ನವ್ಯ ನವೋದಯ ಕವಿಗಳ ಧರೆಯಿದು
ಜೇನಿನ ಸವಿ ನುಡಿ ನಮ್ಮಯ ನುಡಿಯು
                       |ಕನ್ನಡ ನಾಡು|

ಕನ್ನಡವನ್ನು ಎಲ್ಲರು ಕಲಿಯುವ
ನಮ್ಮಯ ನುಡಿಯ ಎಲ್ಲರಿಗೆ ಕಲಿಸುವ
ಕಲಿತು ಕಲಿಸುತಾ ಕನ್ನಡ ಬೆಳೆಸುವ
ನಮ್ಮ ನಾಡಿನ ಕೀರ್ತಿಯ ಬೆಳಗುವ
                        |ಕನ್ನಡ ನಾಡು|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*