05 ಅಕ್ಟೋಬರ್ 2018

ಗಜ಼ಲ್48(ಯೌವನ)

                      *ಗಜ಼ಲ್48*

ಕೆಲವರಿಗೆ  ದೇಶವೇ ಕಾಣದು ಬರಲು  ಈ ಯೌವನ
ಹಲವರಿಗೆ ನೆಲವೇ ಕಾಣದು ಬಲಿಯಲು ಈ ಯೌವನ

ಮೈಯೆಲ್ಲಾ ಕಣ್ಣಾಗಿ ತನ್ಮಯವಾಗಿರಬೇಕು  ಕಾರ್ಯದಿ
ಅಡ್ಡದಾರಿ ಹಿಡಿಸುವುದು ಮೈಮರೆಯಲು  ಈ ಯೌವನ

ಚಿತ್ತ ಚಾಂಚಲ್ಯ ಮೊಂಡು ಭಂಡ ವಿತಂಡವಾದ
ಬಾಳೆಲ್ಲ ಗೋಳು ಅಮಲೇರಿರಲು   ಈ ಯೌವನ

ಸುಕರ್ಮ ಸುವಾರ್ತೆಗಳೆಡೆಗೆ ಸಾಗದು ಮನ
ಮೂಗಿನ ನೇರಕ್ಕಿರುವುದು ಚಿಂತನೆ ಜೊತೆಗಿರಲು ಈ ಯೌವನ

ನೆನೆದುದ ಸಾಧಿಸುವ ಅಗಣಿತ ಶಕ್ತಿಯ ಆಗರ
ಭುವಿಯೇ ಸ್ವರ್ಗ ಸದುಪಯೋಗವಾಗಲು   ಈ ಯೌವನ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಕೇಳಿಲ್ಲ (ಹನಿಗವನ)

          *ಕೇಳಿಲ್ಲ*

ನನಗೆ ಬುದ್ದಿ ಬಂದಾಗಿನಿಂದ
ಗಮನಿಸುತ್ತಲೇ ಇರುವೆ
ಮಾಮ ಪ್ರತಿದಿನ ಅಮ್ಮನ
ನೋಡಲು ರಾತ್ರಿಯೇ ಬರುವನು
ಅದು ಅಪ್ಪನಿಲ್ಲದಾಗ ಬರುವನು
ಯಾಕೆ ಹೀಗೆಂದು ಮೂವರನು
ಕೇಳಬೇಕಿನಿಸಿದರೂ ಕೇಳಿಲ್ಲ
ಏಕೆಂದರೆ ಚಂದಮಾಮನೆಂದರೆ
ನನಗೆ ಅಚ್ಚು ಮೆಚ್ಚು
ಸೂರ್ಯಪ್ಪ ಎಂದರೆ ಎಲ್ಲಿಲ್ಲದ ಗೌರವ
ಭೂತಾಯಿಯೆಂದರೆ ನನ್ನ ಜೀವ

 *ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

02 ಅಕ್ಟೋಬರ್ 2018

ಪರೋಪಕಾರಿಗಳಾಗೋಣ (ಪತ್ರಿಕಾ ಲೇಖನ)

               ಪರೋಪಕಾರಿಗಳಾಗೋಣ

"ಕರ್ನಾಟಕ ಉತ್ತಮ ಪರೋಪಕಾರಿ ಹಾಗೂ ವೈದ್ಯ ವೃತ್ತಿಪರ ಮಸೂದೆಗೆ" ರಾಷ್ಟ್ರಪತಿಗಳು ಅಂಕಿತ ಹಾಕಿ ಕಾನೂನಾಗಿರುವುದು ಸಂತಸದ ವಿಷಯ .ಇಂತಹ ಕಾನೂನು ಇಡೀ ದೇಶದಲ್ಲಿ ಮೊದಲು ನಮ್ಮ ರಾಜ್ಯದಲ್ಲಿ ಜಾರಿಯಾಗುತ್ತಿರುವ ಈ ಸಂಧರ್ಭದಲ್ಲಿ ಕರ್ನಾಟಕದವನಾಗಿ ನನಗೆ ಬಹಳ ಹೆಮ್ಮೆಯಿದೆ . ಇದನ್ನು ಕೇಂದ್ರ ಮತ್ತು ಇತರೆ ರಾಜ್ಯಗಳು ಜಾರಿಗೊಳಿಸುವ ಅಗತ್ಯವಿದೆ. ಅಪಘಾತದಲ್ಲಿ ಗಾಯಗೊಂಡರೆ  ಮೊದಲ ಒಂದು ಗಂಟೆ ಗೋಲ್ಡನ್ ಅವಧಿ ಈ ಸಂದರ್ಭಗಳಲ್ಲಿ ಬಹುತೇಕರು ಆಸ್ಪತ್ರೆಗೆ ಸಾಗಿಸಲು ಮುಂದಾದರೂ ನಂತರದ ಕಾನೂನಿನ ಭಯ ಮತ್ತು ಕೋರ್ಟ್ ಗೆ ಅಲೆಯಬೇಕಾಗ ಬಹುದು ಎಂಬ ಭಯದಿಂದ ಸಹಾಯವನ್ನು ಮಾಡಲು ಹಿಂಜರಿಯುತ್ತಿದ್ದರು  ಇದರಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಿದ್ದವು .ಪ್ರಸ್ತುತ "ಪರೋಪಕಾರಿ ಕಾಯ್ದೆ" ಪ್ರಕಾರ ಪೊಲೀಸ್ ಮತ್ತು ಕೋರ್ಟ್ ನ ಅನಗತ್ಯ ಕಿರಿಕಿರಿ ಇರುವುದಿಲ್ಲ. ಇದರ ಬದಲಾಗಿ ಸೂಕ್ತ ಬಹುಮಾನ ಸಿಗಲಿದೆ .
ಈಗ ಅಪಘಾತದಲ್ಲಿ ಗಾಯಗೊಂಡ ವರ ರಕ್ಷಿಸಲು  ಕಾನೂನು ಇದೆ ಇದರ ಜೊತೆಗೆ ಅಪಘಾತದಲ್ಲಿ ತೊಂದರೆ ಗೀಡಾದವರ ವಿಡಿಯೋ ಪೋಟೋ ತೆಗೆಯುವ ಅಮಾನವೀಯ ಚಟುವಟಿಕೆಗಳನ್ನು ಬಿಟ್ಟು ಮಾನವೀಯತೆಯ ತೋರಿ ಅಮೂಲ್ಯವಾದ ಜೀವಗಳನ್ನು ಉಳಿಸೋಣ

ಸಿ.ಜಿ ವೆಂಕಟೇಶ್ವರ
ಗೌರಿಬಿದನೂರು

01 ಅಕ್ಟೋಬರ್ 2018

ಮದುವೆಯಾಗಿದೆ (ಕವನ)

                  *ಮದುವೆಯಾಗಿದೆ*

ಅವನಿಗೆ  ಇಪ್ಪತ್ತೊಂದು ತುಂಬಿದೆ
ನಕ್ಷತ್ರಗಳನ್ನು ಮಾತಾಡಿಸಬಲ್ಲ
ಚಂದ್ರನ ಕೈಯಲ್ಲಿ ಹಿಡಿಯಬಲ್ಲ
ಆತ್ಮವಿಶ್ವಾಸ ಉಕ್ಕಿ ಹರಿದಿದೆ

ಅವನಿರುವ ಜಾಗದಲ್ಲಿ
ಜಗವೇ ಮೆಚ್ಚವ ಕಾರ್ಯ
ಮಾಡುವ ಹುಮ್ಮಸ್ಸು
ಗುಂಡೇಟಿಗೂ ಗುಂಡಿಗೆ
ಒಡ್ಡುವ ಕೆಚ್ಚೆದೆಯ ಕಲಿ

ಸಮಯದ ಪರಿವೆಯಿಲ್ಲದೆ
ಹಗಲಿರುಳೆನ್ನದೇ ದುಡಿವನು
ಎಲ್ಲರಿಗೂ ಮಾದರಿ ಇವನು
ಜಗವನೆ ಬದಲಿಸುವ ತಾಕತ್ತಿದೆ

ಅವನು ಈಗೀಗ ಏಕೋ
ಹರಳೆಣ್ಣೆ ಕುಡಿದಂತೆ ಮುಖ
ಎಲ್ಲದಕ್ಕೂ ಹೌದೆಂಬ ಕೋಲೆ ಬಸವ
ಟಿ ವಿ ರಿಮೋಟ್ನಲ್ಲಿ ಚಾನೆಲ್
ಬದಲಾಯಿಸಲೂ ಆಗುತ್ತಿಲ್ಲ
ಕಾರಣ ಅವನಿಗೆ ಮದುವೆಯಾಗಿದೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*



29 ಸೆಪ್ಟೆಂಬರ್ 2018

ಗಜಲ್47(ಭಗತ್ ಸಿಂಗ್)

                  *ಗಜಲ್*

ದೇಶಭಕ್ತರಾದ  ಭಗತ್ ಸಿಂಗ್ ಹೆಸರು ಕೇಳಿದರೇನೋ ಪುಳಕ
ಇನ್ ಕ್ವಿಲಾಬ್ ಜಿಂದಾಬಾದ್  ಎಂದವನ ನೆನೆದರೇನೋ ಪುಳಕ

ಮದುವೆ ಮಕ್ಕಳಾದರೆ ಮಾತ್ರ ಜೀವನವೆಂದರು
ಬಾಲ್ಯವಿವಾಹ ಧಿಕ್ಕರಿಸಿದ ಧೀರನ ಸ್ಮರಿಸಿದರೇನೋ ಪುಳಕ

ಬದುಕಲು ನೂರಾರು ವೇಷ ಬಣ್ಣ ಹಚ್ಚದೇ ನಟನೆ
ಬಾಲ್ಯದಿ ರಾಣಾಪ್ರತಾಪ್ ಚಂದ್ರ ಗುಪ್ತರ ಪಾತ್ರ ಅಭಿನಯ ಸವಿದರೇನೋ ಪುಳಕ

ಅನವಶ್ಯಕ ರಕ್ತದೋಕುಳಿ‌ಹರಿಯುತಿದೆ ಪ್ರತಿದಿನ
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಮಣ್ಣನು ಪೂಜಿಸಿದವನ ಭಜಿಸಿದರೇನೋ ಪುಳಕ

ಗೊತ್ತು ಗುರಿಯಿಲ್ಲ ಇಂದಿನ ಯುವ ಪೀಳಿಗೆಗೆ
ಚಿಂತನೆಯ ಕೊಲ್ಲಲಾಗದು ಸ್ಪೂರ್ತಿ ಹೊಸಕಲಾಗದೆಂದು ಕರೆನೀಡಿದವನ ನೋಡಿದರೇನೋ ಪುಳಕ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*