17 ಆಗಸ್ಟ್ 2018

ಗಜ಼ಲ್42 (ಅಟಲ್ ಜಿ ರವರಿಗೆ ನುಡಿನಮನ)


ಗಜ಼ಲ್42 (ಅಟಲ್ ಜಿ ರವರಿಗೆ ನುಡಿನಮನ)

ಅಜಾತಶತ್ರುವಾಗಿ  ಭಾರತ ಭಾಗ್ಯವಿಧಾತನಾದ ಅಭಿವೃದ್ಧಿ ಯ ಚಾಲಕ ಅಟಲ್ ಜಿ
ದೊಡ್ಡಣ್ಣನಿಗೆ ಸಡ್ಡುಹೊಡೆದು ಬುದ್ದನ ನಗಿಸಿದ ನಾಯಕ ಅಟಲ್ ಜಿ

ಮುತ್ತಿನ ಹಾರ ಸ್ಪಟಿಕದ ಸಲಾಕೆಯ  ಚುಂಬಕ ಶಕ್ತಿಯ ಮಾತುಗಾರ
ಉತ್ತಮ ಸಂಸದೀಯ ಪಟು
ರಾಜ ಧರ್ಮ ಪಾಲಕ  ಅಟಲ್ ಜಿ

ಓಜಸ್ಸು ತೇಜಸ್ಸು ಸುಮನಸು  ಅವರಲ್ಲಿ ರಕ್ತಗತ
ಬಟ್ಟೆಗೆಟ್ಟ ಹಾದಿಗಳನು ಸರಿಪಡಿಸಿ ಗಟ್ಟಿ ನಿರ್ಧಾರ ಕೈಗೊಂಡ ಸುವರ್ಣ ಚತುಷ್ಪಥದ ಜನಕ ಅಟಲ್ ಜಿ

ವಿಶ್ವ ಸಂಸ್ಥೆಯಲಿ ರಾಷ್ಟ್ರ ಭಾಷೆ ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿದ ಧೀರ
ಶಾಯರಿ ಕವಿತೆಗಳ ರಚಿಸಿ ಕವಿಮನಹೊಂದಿದ ಮುತ್ಸದ್ದಿ ಚಿಂತಕ  ಅಟಲ್ ಜಿ

ಸೀಜೀವಿಯಂತವರ  ಹೃದಯದಲಿ  ಶಾಶ್ವತವಾಗಿ ನೆಲೆಸಿದ ಅಮರ ಆತ್ಮ
ಜನನಿ ಜನ್ಮಭೂಮಿಯ ಋಣ ತೀರಿಸಲು ಶ್ರಮಿಸಿದ ಪ್ರೇರಕ ಅಟಲ್ ಜಿ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

09 ಆಗಸ್ಟ್ 2018

ನಿನ್ನೇ ಧ್ಯಾನಿಸುವೆ (ಕವನ)

   
         
*ನಿನ್ನೇ ಧ್ಯಾನಿಸುವೆ*


ಸಂಗಾತಿ ನೀ ಜೊತೆಗಿರಲು
ಅನ್ಯರ ಸಂಗ  ಬೇಕಿಲ್ಲ
ಚಿನ್ನ ನೀನಿರೆ ಇನ್ನಾವ
ಸಿರಿ ಬೇಕು ನೀನೆ ನನಗೆಲ್ಲ

ನನ್ನ ಶ್ವಾಸವಿರುವವರೆಗೆ ನಿನ್ನ
ಬಿಡೆನು ವಿಶ್ವಾಸವಿಡು ನನ್ನ ಮೇಲೆ
ನೀ ಕಿರುನಗೆಯಲಿ‌ ನೋಡದಿರು
ನನಗೆ ಮತ್ತೇರುವುದು
ಅಮಲುಗಣ್ಣಿನಲ್ಲಿ ನೋಡದಿರು
ನಲ್ಲೆ ಇನ್ನಿಲ್ಲದ ಆಸೆಯುಕ್ಕುವುದುು


ಕಪಟತನವರಿಯೆನು ನಾನು
ಅಪ್ಪಟ ಪ್ರೇಮಿ ಪ್ರೀತಿಸುವೆ ಕೊನೆವರೆಗೆ
ನಿನ್ನೆ ನಾಳೆಗಳ ಚಿಂತೆ ನನಗಿಲ್ಲ
ಅಡಿಗಡಿಗೆ ನಿನ್ನೇ ಧ್ಯಾನಿಸುವೆ
ಕುಡಿನೋಟ ಬೀರು ಸಾಕು
ಆನಂದ ಸಾಗರದಿ ತೇಲುವೆ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


07 ಆಗಸ್ಟ್ 2018

*ಗಜ್ಹಲ್41*(ಸುಮ)


                       *ಗಜ್ಹಲ್41*

ಪ್ರಕೃತಿಯ ಸೌಂದರ್ಯ ಅಡಗಿಸಿ ಕೊಂಡು ಸುಗಂಧ ಸೂಸುವುದು  ಸುಮ
ವಿಕೃತ ಮನಸ್ಸು ಗಳಿಗೆ ಉಚಿತ ಪಾಠ ಹೇಳುವುದು ಸುಮ

ವ್ರತ ಉಪವಾಸ ನಾನ ತಂತ್ರ ಅಡ್ಡ ದಾರಿಗಳು ಭಗವಂತನ ಕಾಣಲು
ಎಲ್ಲ ದೇವರ ಅಲಂಕರಿಸಿ ಹೆಮ್ಮೆಯಿಂದ
ನಗುವುದು ಸುಮ

ಎಲೆ ಕಾಯಿ ಹಣ್ಣು ಬೀಜವಾಗಲು ಮೂಲ ಹೂ
ಆದರೂ ಎಂದಿಗೂ ನಾನು ನನ್ನಿಂದ ಎಂದು ಬೀಗದು ಸುಮ

ಸಾವಿಗಂಜಿ ಯಾಯಾತಿಯಾಗಲು ಚಡಪಡಿಸುವರು ಜನ ಸುರಿಯುವರು ಧನ
ಒಂದೇ ದಿನ ಬಾಳಿದರೂ ಸೌಂದರ್ಯದಿ ಬಾಳಿ ಸಾರ್ಥಕ್ಯ ಪಡೆವುದು ಸುಮ

ಸ್ವಾರ್ಥದ ಸಂಕುಚಿತ ಭಾವನೆಯ ಜಗದಲಿ ಬಂದಿಯಾಗಿಹರು ಮಂದಿ
ಸೀಜೀವಿಯಂತೆ  ಪರಹಿತ ಬಯಸೆಂದು ಸಂದೇಶ ನೀಡುವುದು ಸುಮ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 ಆಗಸ್ಟ್ 2018

ಪ್ರಕೃತಿ ಶಾಲೆ( ಶಿಶುಗೀತೆ)

*ಪ್ರಕೃತಿ ಶಾಲೆ*(ಶಿಶುಗೀತೆ)

ಬ್ಯಾಗು  ಬೇಡ
ಪುಸ್ತಕ ಬೇಡ
ಆಡಲು  ಹೋಗುವೆವು

ಆಟವ ಅಡುತ
ಹಾಡನ್ನು ಹಾಡುತ
ನಕ್ಕು ನಲಿಯುವೆವು

ಕೈಚೀಲ ಬೇಡ
ಮಣ ಭಾರ ಬೇಡ
ನಮ್ಮ ಪ್ರತಿಭೆ ತೋರುವೆವು

ಅಂಕಗಳ ಗೊಡವೆ ನಮಗಿಲ್ಲ
ಒತ್ತಡ ನಮಗೆ ಬೇಕಿಲ್ಲ
ಮರಕೋತಿ ಆಟ ಆಡುವೆವು

ಚಿನ್ನಿ ದಾಂಡು
ಗೋಲಿ ಲಗೋರಿ
ಆಟವಾಡಿ ನಲಿಯುವೆವು

ಕಲಿಯಲು ಶಾಲೆಯೆ ಬೇಕಿಲ್ಲ
ಪ್ರಕೃತಿ ಶಾಲೆ ಮರೆಯಲ್ಲ
ಸಮಾಜದೊಂದಿಗೆ ಬೆಳೆಯುವೆವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




05 ಆಗಸ್ಟ್ 2018

ಮಗಳೆಂಬ ಅಮ್ಮ ( ಲೇಖನ)

             
ಮಳೆ ಹಾಡು
ನಾನು ಹುಟ್ಟು ಹಬ್ಬ ಆಚರಿಸುವ ಪದ್ಥತಿ ಪಾಲಿಸಿಲ್ಲ ಆದರೆ ನನ್ನ ಮಕ್ಕಳ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಅಲ್ಲದಿದ್ದರೂ ಅವರಿಗೆ ಹುಟ್ಟು ಹಬ್ಬದಂದು ಹೊಸ ಬಟ್ಟೆಗಳನ್ನು ಕೊಡಿಸಿ ಅವರ ಸಂತೋಷ ಪಡಿಸುವುದನ್ನು ಮರೆಯುವುದಿಲ್ಲ .ಇಂತಹ ಹುಟ್ಟುಹಬ್ಬದ ದಿನ ಸಾಮಾನ್ಯವಾಗಿ ದೇವರ ದರ್ಶನ ಪಡೆಯಲು ದೇವಾಲಯಗಳಿಗೆ ಹೋಗುತ್ತೇವೆ .ಕಳೆದ ವರ್ಷ ನನ್ನ ದೊಡ್ಡ ಮಗಳ. ಹುಟ್ಟು ಹಬ್ಬದ ಸಮಯದಲ್ಲಿ ನಾನು ನನ್ನ ಹುಟ್ಟೂರಾದ ಹೊಳಲ್ಕೆರೆ ತಾಲೂಕಿನ ಚೌಡಗೊಂಡನಹಳ್ಳಿಯಲ್ಲಿ ಇದ್ದೇ ಯಥಾ ಪ್ರಕಾರ ಹುಟ್ಟು ಹಬ್ಬಕ್ಕೆ ತಂದಿದ್ದ ಹೊಸ ಉಡುಪು ಧರಿಸಿದ ನನ್ನ ಮಗಳು ಎಲ್ಲರೊಂದಿಗೆ ಸೆಲ್ಪಿ ತೆಗೆದುಕೊಂಡು ಅಪ್ಪ ದೇವಸ್ಥಾನ ಕ್ಕೆ ಹೋಗೋಣ ಎಂದಳು ಆಗ ಸಂಜೆ  ಮಬ್ಬುಗತ್ತಲು  ,ನಮ್ಮ ಹಳ್ಳಿಯಿಂದ ಏಳು ಕಿಲೊಮೀಟರ್ ದೂರವಿರುವ ಹೊರಕೆರೆದೇವರ ಪುರದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ಕ್ಕೆ ಮೂವರು ಮಕ್ಕಳೊಂದಿಗೆ ಬೈಕ್ ನಲ್ಲಿ ಹೊರಟು‌ನಿಂತಾಗ ಅಮ್ಮ "  ಮೋಡ ಜೋರಾಗಿದೆ ನಮ್ಮ ಊರಿನ ಚೌಡಮ್ಮನ ಗುಡಿಗೆ ಹೋಗಿ ಬರ್ರಪ್ಪ ದೂರ ಬೇಡ ಅಂದರು " ನಾವು ಅವರ ಮಾತು ಕಿವಿಗೆ ಹಾಕಿಕೊಳ್ಳದೇ ಬೈಕ್ ಹತ್ತಿ ಹೊರಟೇ ಬಿಟ್ಟೆವು .ದೇವರ ದರ್ಶನ ಪಡೆದು ಹಿಂತಿರುಗುವಾಗ ಸಂಪೂರ್ಣ ಕತ್ತಲಾಗಿ ಮಾರ್ಗ ಮದ್ಯದಲ್ಲಿ ಮಳೆ ಆರಂಭವಾಗಿ ಮಳೆ ಹನಿಗಳು ನಮ್ಮ ಮೇಲೆ ಬಿದ್ದರೆ ಯಾರೋ ನಲ್ಲಿ ಹೊಡೆದಂತಾಗುತ್ತಿತ್ರು ಅಲ್ಲೇ ಎಲ್ಲಾದರೂ ನಿಲ್ಲಿಸೋಣವೆಂದರೆ ಒಂದೂ ಮನೆಯಿಲ್ಲ . ನನ್ನ ಮಗಳ ಹುಟ್ಡುಹಬ್ಬದ ಹೊಸ ಬಟ್ಟೆಯಾದಿಯಾಗಿ  ಎಲ್ಲರ ಬಟ್ಟೆಗಳು ಮಳೆಯಲ್ಲಿ ನೆನೆದು ಚಳಿಗೆ ನಡುಗಲಾರಂವಿಸಿದೆವು. ಸ್ವಲ್ಪ ದೂರ ಮಣ್ಣಿನ ರಸ್ತೆಯಲ್ಲಿ ನಾನು ನಿದಾನವಾಗಿ ಬೈಕ್ ಓಡಿ ಸುತ್ತಿದ್ದರೂ ಜಾರಿ ಎಲ್ಲರೂ ಬೈಕ್ ನಿಂದ ಬಿದ್ದೇಬಿಟ್ಟೆವು  ಕತ್ತಲಾಗಿದ್ದರಿಂದ ನನಗೆ ಗಾಬರಿಯಾಗಿ  ಶೋಭಿತ.,ವರ್ಷಿತ, ದೀಪಿಕ ನುಮಗೆ ಏನೂ ಆಗಿಲ್ಲ ತಾನೆ ಎಂದು ಕೇಳುವ ಮೊದಲೇ "  ಅಪ್ಪ ನಿನಗೇನೂ ಆಗಿಲ್ಲ ತಾನೆ " ಎಂದು ನನ್ನ ದೊಡ್ಡ ಮಗಳು  ಶೋಭಿತ ಬಂದು  ನನ್ನ ಮೈಕೈ ಮುಟ್ಟಿ ನೋಡಿದಳು ಮನೆಯಲ್ಲೂ ನನ್ನ ಕಣ್ಣಲ್ಲಿ ಒಂದೆರಡು ಹನಿ ಜಾರಿ ಬಿದ್ದದ್ದು  ನನ್ನ ಮಕ್ಕಳಿಗೆ ಕಾಣಲಿಲ್ಲ .ಆಗ ಅಮ್ಮ ನೆನಪಿಗೆ ಬಂದು ಮಗಳು ಅಮ್ಮ ಎಂದು ಯಾರೋ ಹೇಳಿದ್ದು ನೆನಪಾಯಿತು,. ಮಳೆಯಲ್ಲಿ ಮತ್ತೆ ಬೈಕ್ ಸ್ಟಾರ್ಟ್ ಮಾಡಿ ಸ್ವಲ್ಪ ದೂರ ಚಲಿಸಿದಾಗ ಇಳಿಜಾರಿನಲ್ಲಿ ಮತ್ತೆ ಬೈಕ್ ಸ್ಕಿಡ್ ಆಗಿ ನಾನು ಬ್ಯಾಲೆನ್ಸ್ ಮಾಡಿ ಬೈಕ್ ನಿಲ್ಲಿಸಿದೆ ನನ್ನ ಮಗಳು ಅಪ್ಪ ಈ ಇಲಿಜಾರಿನಲ್ಲಿ ನಾವು ಇಳಿದು‌ ನಡೆವೆವು ಎಂದು ಅವಳ ತಂಗಿಯರೊಂದಿಗೆ ಕತ್ತಲಲ್ಲಿ ಬೈಕ್ ನ ಬೆಳಕಿನಲ್ಲಿ ನಡೆದು ಮುಂದೆ ಸಾಗಿದಳು .ಕೊನೆಗೆ ರಾತ್ರಿ ಎಂಟುಗಂಟೆಗೆ ಮನೆ ಸೇರಿದಾಗ ಅಲ್ಲಿ ಕರೆಂಟ್ ಇರಲಿಲ್ಲ ಬೈಕ್ ಇಳಿದಾಗ ನನ್ನ ದೊಡ್ಡ ಮಗಳು ತನ್ನ ತಂಗಿಯರಿಗೆ ನಾವು ಜಾರಿ ಬಿದ್ದದ್ದನ್ನು ಯಾರಿಗೂ ಹೇಳಬೇಡಿ ಎಂದು ಎಂದು ಪಿಸುಮಾತಿನಲ್ಲಿ ಹೇಳಿದಳು.ಬೈಕ್ ಸದ್ದು ಕೇಳಿ ಅಮ್ಮ ಒಳಗಿನಿಂದ ಪ್ರೀತಿಯಿಂದ ಬೈಯಲು ಶುರುಮಾಡಿದರು ." ದೊಡ್ಡವರು ಏನಾದರೂ ಹೇಳಿದರೆ ಕೇಳಲ್ಲ ...... ಎಂದು ಪ್ರೀತಿಯಿಂದ ಬಯ್ಯತ್ತಲೇ ಇದ್ದರು ನಾವು ಮರುಮಾತನಾಡದೇ ಒಳಗೆ ಹೋಗಿ ಸಣ್ಣ ಪುಟ್ಟು ತರಚುಗಾಯಗಳನ್ನು ನೋಡಿಕೊಂಡೆವು .
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*