02 ಏಪ್ರಿಲ್ 2018

*ಗಜ಼ಲ್ ೩೭ (ನಿಲ್ಲಲ್ಲ)* ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ಅತ್ಯುತ್ತಮ ಬಹುಮಾನ ಪುರಸ್ಕಾರ ಲಭಿಸಿದ ಗಜ಼ಲ್



*ಗಜ಼ಲ್ ೩೭*
ಯಾರೇ ತಡೆದರೂ ಸಾಗರದ ಅಪ್ಪಳಿಸುವ  ಅಲೆಗಳು ನಿಲ್ಲಲ್ಲ
ಸಮಯ ಓಡುತಿದೆ ಗಡಿಯಾರದ ಮುಳ್ಳುಗಳು ನಿಲ್ಲಲ್ಲ

ವರ್ತಮಾನದಿ ನಿಂತು ಗತದ ಸುವರ್ಣ ಯುಗ ಸ್ಮರಣೆ
ಮೊಗೆದಷ್ಟು ಉಕ್ಕುವ ಮಧುರ ಸವಿಗನಸುಗಳು  ನಿಲ್ಲಲ್ಲ

ಸಮುದ್ರ ದಂಡೆಯಲಿ ಅವಳ  ಸೌಂದರ್ಯದ ತೇರು
ಅವಳಧರದ ಮಧುಪಾನಪಾತ್ರೆಯ  ಅಮಲುಗಳು ನಿಲ್ಲಲ್ಲ

ಕೊಚ್ಚಿಹೊಯಿತು ಮರಳ ರಾಶಿಯ  ಒಲವಿನ ಮನೆ
ನಾರಿಕೇಳ ಕಲ್ಪವೃಕ್ಷದ ಕೆಳಗೆ ಕಳೆದ  ನೆನಪುಗಳು ನಿಲ್ಲಲ್ಲ

ಎಷ್ಟೋ ಸೂರ್ಯೋದಯ ಸೂರ್ಯಾಸ್ತ ಕಳೆದುಹೋದವು
ಸೀಜೀವಿಗೆ ಅವಳ   ಸಂಧಿಸುವ ಕನವರಿಕೆಗಳು ನಿಲ್ಲಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು *ಮೌನ*


*ಹನಿಗವನಗಳು*
*೧*
*ಪ್ರಶ್ನೆಗಳು*
ವಾರದಿಂದ ಮೌನವ್ರತ
ಆಚರಿಸುತ್ತಿದ್ದ  ನನ್ನವಳಿಗೆ
ಬಂಗಾರದ ಬೆಲೆ ಕಡಿಮೆ
ಆಯಿತಂತೆ ಎಂದೆ
ಎಲ್ಲಿ‌? ಯಾವಾಗ ?
ಯಾವ ಅಂಗಡಿ?
ಪ್ರಶ್ನೆಗಳ ಸರಮಾಲೆಯನ್ನೆ
ಹಾಕಿದಳು ನನ್ನ ಮುಂದೆ
*೨*
ಕಾಗೇಬಂಗಾರ
ಮಾತು ಬೆಳ್ಳಿ
ಮೌನ ಬಂಗಾರ
ಅತಿಮಾತು?
ಕಾಗೇಬಂಗಾರ
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

01 ಏಪ್ರಿಲ್ 2018

*ನಡೆದಾಡುವ ದೇವರಿಗೆ ನುಡಿ ನಮನಗಳು*

*ನಡೆದಾಡುವ ದೇವರಿಗೆ ನುಡಿ  ನಮನಗಳು*

*೧*

ಇಂದು ಶಿವಕುಮಾರ ಸ್ವಾಮಿಗಳ
ನೂರಾ ಹನ್ನೊಂದನೇ ಜನ್ಮದಿನ
ನಾವೆಲ್ಲರೂ  ಅವರಂತೆ ಜೀವಿಸಲು
ಪ್ರಯತ್ನ ಮಾಡೋಣ ಅನುದಿನ

*೨*

ನಡೆದಾಡುವ ದೇವರಿಗೆ
ನೂರಾ ಹನ್ನೊಂದನೇ 
ಹುಟ್ಟು ಹಬ್ಬದ ಸಂಭ್ರಮ
ನಾವೆಲ್ಲರೂ ಪಾಲಿಸೋಣ
ಅವರ ನೀತಿ ನೇಮ

*ಸಿ.ಜಿ..ವೆಂಕಟೇಶ್ವರ*
*ಗೌರಿಬಿದನೂರು*

*ಉಕ್ಕಿನ ಮನುಷ್ಯ* (ಸರದಾರ್ ವಲ್ಲಭ ಬಾಯ್ ಪಟೇಲ್ ರವರಿಗೆ ನುಡಿನಮನ)

*ಉಕ್ಕಿನ ಮನುಷ್ಯ*
(ಸರದಾರ್ ವಲ್ಲಭ ಬಾಯ್ ಪಟೇಲ್ ರವರಿಗೆ ನುಡಿನಮನ)

ಇವರೇ ನಮ್ಮ ಉಕ್ಕಿನ ಮನುಷ್ಯ
ಬರೆದರು  ನವಭಾರತದ ಭವಿಷ್ಯ
ಸಾರಿದರು ಏಕತೆಯ ಮಂತ್ರ
ಪಾಲಿಸಿದರು ರಾಷ್ಟ್ರೀಯತೆ ತಂತ್ರ

ದೇಶದ ಮೊದಲ ಉಪಪ್ರಧಾನಿ
ಆಡಳಿತದಲ್ಲಿ ದೊಡ್ದ ದಣಿ
ಮಾಡಿದರು ದೇಶದ ಏಕೀಕರಣ
ಮಾಡಲಿಲ್ಲ ಕೀಳು ರಾಜಕಾರಣ

ಬಾರ್ಡೋಲಿ ಸತ್ಯಾಗ್ರಹ ರೂವಾರಿ
ಸ್ವಾತಂತ್ರ್ಯ ಕ್ಕೆ ಬಾರಸಿದರು ರಣಭೇರಿ
ಸರಳ ಸಜ್ಜನ ಶಿಸ್ತಿನ ಸಿಪಾಯಿ  ನೀವು
ನಿಮ್ಮ ಆದರ್ಶ ಪಾಲಿಸುವೆವು ನಾವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

31 ಮಾರ್ಚ್ 2018

ಪ್ರಜಾಪ್ರಭುತ್ವ ಉಳಿಸೋಣ (ಭಾವಗೀತೆ) ಮತದಾರರ ಜಾಗೃತಿ ಗೀತೆ

*ಪ್ರಜಾಪ್ರಭುತ್ವ ಉಳಿಸೋಣ*

ಆರಿಸೋಣ  ಉತ್ತಮ ನಾಯಕರ
ಮಾಡಿಕೊಳ್ಳೋಣ ಜೀವನ ಶುಭಕರ
ಮಾಡೋಣ  ಎಲ್ಲರು ಮತದಾನ
ನಿರಾಕರಿಸೋಣ   ನೀಡಿದರೆ ಧನ

ಮರುಗದಿರಿ ಮೊಸಳೆ ಕಣ್ಣೀರಿಗೆ
ಕೊರಗದಿರಿ ಮೈಮರೆತು ಅರೆಘಳಿಗೆ
ಓಟಿನ ದಿನ ಬದಿಗೊತ್ತಿ ನಿಮ್ಮ ಕೆಲಸ
ಸರ್ಕಾರ ರಚಿಸುವುದು ನಮ್ಮ ಕೆಲಸ

ಬೇಡಿಕೆ ಇಡದಿರಿ ಸ್ವಾರ್ಥದಿ ನಿಮಗಾಗಿ
ಹಕ್ಕು ಚಲಾವಣೆ ಮಾಡಿ ದೇಶಕ್ಕಾಗಿ
ಮಾರಿಕೊಳ್ಳದಿರಿ ನಿಮ್ಮ ಮತ
ಒಳ್ಳೆಯ ನಾಯಕಗಿರಲಿ ಸಹಮತ

ಮತಗಟ್ಟೆಗೆ ಎಲ್ಲರೂ ಹೋಗೋಣ
ಓಟು ಮಾಡುವ ಪಣ ತೊಡೋಣ
ನಮ್ಮಯ ಸೇವಕರ ಆರಿಸೋಣ
ಪ್ರಜಾಪ್ರಭುತ್ವವನ್ನು ಉಳಿಸೋಣ

*ಸಿ.ಜಿ. ವೆಂಕಟೇಶ್ವರ*
*ಗೌರಿಬಿದನೂರು*