17 ಫೆಬ್ರವರಿ 2018

ಜೀವಿಸು(ಕವನ)

*ಜೀವಿಸು*

ಅವರ ಉಡುಪ ತುಂಡ
ಇವರದು ಉದ್ದ ಮತ್ಯಾರದೋ
ಮರ್ಯಾದೆಗೆಟ್ಟ ಬಟ್ಟೆ
ನಿನಗೇಕೆ ಅದರ ಉಸಾಬರಿ
ನಿನ್ನ ಬಟ್ಟೆ ನಿ‌ನ್ನದು .

ಅವರಿಗೆ ಬ್ರೆಡ್ ಆಹಾರ
ಇವರಿಗೆ ಮಾಂಸಾಹಾರ
ಸಸ್ಯಾಹಾರ ಮತ್ಯಾರಿಗೋ
ನಿನಗೇಕೆ ಬೇರೆಯವರ ಚಿಂತೆ
ನಿನ್ನ ಊಟ ನಿ‌ನ್ನದು .

ಒಬ್ಬನಿಗೆ  ಹಣ್ಣಿನ ಆಸೆ
ಮತ್ತೊಬ್ಬನಿಗೆ ಮಣ್ಣಿನಾಸೆ
ಹೊನ್ನು ವಜ್ರದ ಆಸೆ ಇನ್ನೊಬ್ಬಗೆ
ಯೋಚಿಸುವುದ ನಿಲ್ಲಿಸು
ಜೀವೀಸಲು ಆರಂಬಿಸು .


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಗಜ಼ಲ್ ೨೪ ( ನಿನದೆ ನೆನಪು)ನನ್ನ ಕವಿಬಳಗ ಗಜ಼ಲ್ ಸ್ಪರ್ಧೆಯಲ್ಲಿ *ಗಮನಾರ್ಹ ಉಲ್ಲೇಖ* ಪುರಸ್ಕೃತ ಗಜ಼ಲ್


*ಗಜ಼ಲ್ ೨೪*

ತಂಗಾಳಿಯು  ಸುಳಿದಾಗ ನಿನದೆ ನೆನಪು
ಬೆಳದಿಂಗಳ ಹಾಲ್ಚೆಲ್ಲಿದಾಗ ನಿನದೆ ನೆನಪು

ತರುಲತೆಗಳು ಮರವ ತಬ್ಬಿವೆ ಮುದದಿ
ಸರಸದ ಸರಿಗಮ ನೆನದಾಗ ನಿನದೆ ನೆನಪು

ಗೊರವಂಕ ಕೋಗಿಲೆಗಳ ಇಂಪಾದ ಗಾನ
ಶಿವಶಿವೆಯರ ನಾಟ್ಯ ಕಂಡಾಗ ನಿನದೆ ನೆನಪು

ಧಮ್ಮಿಕ್ಕಿ ಹರಿಯುತಿದೆ ಹೃದಯದಿ ಪ್ರೇಮನದಿ
ಜುಳು ಜುಳು ಜಲದ ಸದ್ದು ಕೇಳಿದಾಗ ನಿನದೆ ನೆನಪು

ಸೀಜೀವಿಯು ತಡೆದರೂ ಕಾಲವು ನಿಲುತಿಲ್ಲ
ಬೆಳಗು ಬೈಯ್ಗು ಸರಿದಾಗ   ನಿನದೆ ನೆನಪು

*ಸಿ .ಜಿ.ವೆಂಕಟೇಶ್ವರ*
*ಗೌರಿಬಿದನೂರು*



16 ಫೆಬ್ರವರಿ 2018

*ಶಕುಂತಲಾ ಆಲಾಪ*(ಭಾವಗೀತೆ)


*ಶಕುಂತಲಾ ಆಲಾಪ*(ಭಾವಗೀತೆ)
ಯಾರಿಗೆ ಹೇಳಲಿ ನನ್ನಯ ನೋವ
ಹೇಗೆ ಜೀವಿಸಲಿ ಹೊತ್ತು ಈ ಜೀವ|ಪ|
ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?
ನನ್ನ ಬಸಿರ ಕಂದಗೆಲ್ಲಿ ಶ್ರೀರಕ್ಷೆ?
ಶಾಪ ಯಾರಿಗೆ ನನಗೋ ?
ಭುವಿ ಕಾಣದ ಕಂದಗೋ?|೧|
ಹೇಗೆ ಉತ್ತರಿಸಲಿ ಈ ಸಮಾಜಕೆ
ಯಾರು ಅಪ್ಪನೆಂಬ ಪ್ರಶ್ನೆಗೆ
ದಿಕ್ಕಾರವಿರಲಿ ನನ್ನ ಮೈಮರೆವಿಗೆ
ನೆನಪು ಮರಳಲಿ ದುಷ್ಯಂತಭೂಪಗೆ|೨|
ಛತ್ರಿ ಚಾಮರದಡಿ ಇರಬೇಕಾದ ನಾನು
ಅರಮನೆಯಾಗಿದೆ ಈ ಭುವಿ ಭಾನು
ನಮ್ಮ ಈ ಕಷ್ಟಗಳಿಗೆ ಕೊನೆಯೆಂದು
ದಯೆತೋರು ಬಾ ಹರಿಯೆ ನೀಬಂದು.|೩|
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 ಫೆಬ್ರವರಿ 2018

*ಬದುಕಲು ಕಲಿಯೋಣ* (ಸಂಗ್ರಹ ಲೇಖನ)

*ಬದುಕಲು ಕಲಿಯೋಣ* (ಸಂಗ್ರಹ ಲೇಖನ)

ಉಡುಪಾಯಿತು ತುಂಡು
ಎಲ್ಲಿ ಬರಬೇಕು ಮಾನ ಮರ್ಯಾದೆ?

ರೊಟ್ಟಿಯಾಯಿತು ಬ್ರೆಡ್
ಎಲ್ಲಿ ಬರಬೇಕು ತಾಕತ್ತು?

ಹೂವಾಯಿತು ಪ್ಲಾಸ್ಟಿಕ್
ಎಲ್ಲಿ ಬರಬೇಕು ಸುಗಂಧ?

ಮುಖವಾಯಿತು ಮೇಕಪ್
ಎಲ್ಲಿಂದ ಬರಬೇಕು ರೂಪ?

ಶಿಕ್ಷಣವಾಯಿತು ಟ್ಯೂಷನ್
ಇನ್ನೆಲ್ಲಿಂದ ಬರಬೇಕು ವಿದ್ಯೆ?

ಭೋಜನವಾಯಿತು ಹೋಟೆಲ್
ಇನ್ನೆಲ್ಲಿಂದ ಬರಬೇಕು ಆರೋಗ್ಯ?

ಮನರಂಜನೆಯಾಯಿತು ಕೇಬಲ್
ಇನ್ನೆಲ್ಲಿಂದ ಬರಬೇಕು ಸಂಸ್ಕಾರ?

ಮನುಷ್ಯನಾಗಿದ್ದಾನೆ ಕಾಸಿನ ಆಸೆಬುರುಕ
ಇನ್ನೆಲ್ಲಿಂದ ಬರಬೇಕು ದಯಾ ಅನುಕಂಪ?

ವ್ಯವಹಾರಗಳಾಗಿವೆ ಹೈ ಫೈ
ಇನ್ನೆಲಿಂದ ಬರಬೇಕು ನ್ಯಾಯ ನೀತಿ ಧರ್ಮ?

ಭಕ್ತಿ ಮಾಡುವನು ಆಗಿದ್ದಾನೆ ಸ್ವಾರ್ಥಿ
ಇನ್ನೆಲಿಂದ ಬರಬೇಕು ಭಗವಂತ?

ಸಂಭಂಧಿಗಳು ಇದ್ದಾರೆ ವಾಟ್ಸಾಪ್ ನಲ್ಲಿ
ಇನ್ನೆಲ್ಲಿಂದ ಬರಬೇಕು ಪರಸ್ವರ ಭೇಟಿ ಮಾಡಲು

ಪರಿಸ್ಥಿತಿಗಳು ಕಾಲಗಳು ಬದಲಾಗುತ್ತಿರುವೆ
ಯಾರನ್ನೂ ಅಪಮಾನ ಮಾಡಬೇಡ

ಹಕ್ಕಿಯು ಇರುವೆಯನ್ನು ತಿನ್ನುತ್ತದೆ
ಸತ್ತ ಮೇಲೆ ಹಕ್ಕಿಯನ್ನು ಇರುವೆ ತಿನ್ನುತ್ತದೆ

ಒಂದು ಮರದಿಂದ ಸಾವಿರಾರು ಬೆಂಕಿಕಡ್ಡಿಗಳನ್ನು ತಯಾರಿಸಬಹುದು
ಒಂದು ಬೆಂಕಿಕಡ್ಡಿ ಸಾವಿರಾರು ಮರಗಳನ್ನು ಸುಟ್ಟು ಭಸ್ಮ ಮಾಡಬಹುದು

ಒಂದೇ ಒಂದು ಭಾರಿ ಮಂದಿರಕ್ಕೆ ಹೋದ ಕಲ್ಲು ಭಗವಂತನಾಗಿಬಿಡುತ್ತದೆ
ಆದರೆ ಅನೇಕ ಭಾರಿ ಹೋದರು ನಾವು ಭಗವಂತನ ಹತ್ತಿರ ಹೋಗಲು ಸಾಧ್ಯವಿಲ್ಲ

ಉಪವಾಸ ಮಾಡುವುದರಿಂದ ಖುಷಿಯಾಗುವ ಹಾಗಿದ್ದರೆ
ನಿರ್ಗತಿಕ ದಿನಾ ಖುಷಿಯಾಗಿರಬೇಕಿತ್ತು

ಉಪವಾಸದಿಂದ ನಮ್ಮ ಆಚಾರ ವಿಚಾರಗಳು ಬದಲಾಗಬೇಕು
ಲೋಕ ಕಲ್ಯಾಣಕ್ಕಾಗಿ ನಾವು ಬದುಕಬೇಕು

ಇದು ನೀ ತಿಳಿಯೋ ಮನುಜ
ವರ್ತಿಸಬೇಡ ಮೃಗಗಳಂತೆ ಸಹಜ

________________
🤐ಸಾವು ಖಚಿತ ಆದರೆ ಸಾವು ಬಂದಾಗ ಯಾರಿಗೂ  ಸಾಯಬೇಕಂತ ಅನ್ನಿಸೋದಿ ಲ್ಲ .
 🆚ಊಟ ಎಲ್ಲರಿಗೂ ಬೇಕು ಆದರೆ ಯಾರೂ ವ್ಯವಸಾಯ ಮಾಡಬೇಕನ್ನುವುದಿಲ್ಲ
🆚‌‌‌‌‌‌‌‌ನೀರು ಎಲ್ಲರಿಗೂ ಬೇಕು ಆದರೆ ಅರಣ್ಯವನ್ನು ರಕ್ಷಿಸಬೇಕು ಅಂತ ಯಾರು ಪ್ರಯತ್ನಿಸುವುದಿಲ್ಲ
🆚ಪಾಲು ಎಲ್ಲರಿಗೂ ಬೇಕು ಆದರೆ ಅದನ್ನು ಪಾಲಿಸಬೇಕೆನ್ನುವ ಛಲ ಯಾರಿಗೂ ಇಲ್ಲ.
🆚ನೆರಳು ಎಲ್ಲರಿಗೂ ಬೇಕು ಆದರೆ ಮರಗಳನ್ನು ರಕ್ಷಿಸಬೇಕೆನ್ನುವ ಹಂಬಲ ಯಾರಿಗೂ ಇಲ್ಲ
🆚ಹೆಂಡತಿ ಎಲ್ಲರಿಗು ಬೇಕು ಆದರೆ ಹೆಣ್ಣು ಮಕ್ಕಳು ಯಾರಿಗು ಬೇಡ 

*ಸಂಗ್ರಹ: ಸಿ.ಜಿ.ವೆಂಕಟೇಶ್ವರ*
*ಕೃಪೆ: ವಾಟ್ಸಪ್*

14 ಫೆಬ್ರವರಿ 2018

ಹೊಸ ತನದ ಹರಿಕಾರ ವಿಶ್ವೇಶ್ವರ ಭಟ್ ( ಲೇಖನ)

*ಹೊಸ ತನದ ಹರಿಕಾರ ಶ್ರೀ ವಿಶ್ವೇಶ್ವರ ಭಟ್*

 ಪತ್ರಿಕಾ  ಸಂಪಾದಕರಿಗೆ ಒಂದು ಖದರ್ ,ಇಮೇಜ್ ಸೃಷ್ಟಿ ಮಾಡಿ ಆನೆ ನಡೆದದ್ದೇ ದಾರಿ‌ ಎನ್ನುವಂತೆ ನಮ್ಮ ಮದ್ಯದಲ್ಲಿ ಬದುಕುತ್ತಿರುವ ಅಕ್ಷರ ಪರಿಚಾರಕರು, ಪದಗಳ ಜೊತೆ ಆಟವಾಡಿ ವಿಭಿನ್ನವಾದ ಅರ್ಥವನ್ನು ನೀಡುವ ಪತ್ರಿಕಾ ಹಣೆಬರಹ (ಹೆಡ್ಲೈನ್) ಬರೆಯುವ ಪದಗಾರುಡಿಗರು, ನನ್ನಂತಹ ಲಕ್ಷಾಂತರ ಬರಹಗಾರರ ಸ್ಪೂರ್ತಿಯ ಸೆಲೆ .ಕೋಟ್ಯಾಂತರ ಓದುಗರ ಮನಸ್ಸನ್ನು ಕದ್ದವರೇ ಸ್ಟಾರ್ ಸಂಪಾದಕರಾದ  ವಿಶ್ವೇಶ್ವರ ಭಟ್ ರವರು  . ಇಂದು ಬಹುತೇಕ ಸಂಪಾದಕರು ವಿಶ್ವೇಶ್ವರ ಭಟ್ ರವರನ್ನು ಅನುಸರಿಸಿದರೆ ಇನ್ನೂ ಕೆಲವರು ಅವರ ಬೆಳೆವಳಿಗೆ ಕಂಡು ಒಳಗೊಳಗೆ ಹೊಟ್ಟೆ ಕಿಚ್ಚು ಪಡುತ್ತಿರುವುದು ಸುಳ್ಳಲ್ಲ

*ಸರಳ ಸಜ್ಜನ*

ಎಲ್ಲರೊಂದಿಗೆ ಸರಳವಾಗಿ ಬೆರೆಯುವ ಮಕ್ಕಳ ಜೊತೆ ಮಕ್ಕಳಂತೆ ಕವಿಗಳ ಜೊತೆ ಕವಿಯಂತೆ ಕ್ರೀಡಾ ಪಟುಗಳ ಜೊತೆ ಕ್ರೀಡಾಪಟುವಾಗಿ ,ಬಾಡಿಬಿಲ್ಡರ್ ಜೊತೆ ಬಾಡಿಬಿಲ್ಡರ್ ಆಗಿ (ಪ್ರತಿದಿನ ಜಿಮ್ ಮಾಡಿ ಈಗ ಪಿಟ್ಆಗಿದ್ದಾರೆ)  ಅವರು ಬೆರೆವ ಪರಿ ನನ್ನ ಬೆರಗುಗೊಳಿಸಿದೆ ಇದಕ್ಕೆ ಉದಾಹರಣೆ ನನ್ನ ಮೊದಲ ಕವನ ಸಂಕಲನ ಭಾವದೀಪ್ತಿ ಬಿಡುಗಡೆ ಸಮಾರಂಭದಲ್ಲಿ ನನ್ನಂತಹ ಸಾಮಾನ್ಯ ನ ಜೊತೆ ಎಷ್ಟೋ ವರ್ಷಗಳ ಪರಿಚಯ ಇರುವವರಂತೆ ಆತ್ಮೀಯ ವಾಗಿ ಮಾತನಾಡಿಸಿದ ಪರಿ ನನ್ನ ಜೀವನದ ಮರೆಯಲಾಗದ ಕ್ಷಣ .ನನ್ನ ಮೊದಲ ಕವನ ಸಂಕಲನ ಇಂತಹ ಡೌನ್ ಟು ಅರ್ಥ್ ಸಂಪಾದಕರು ಬಿಡುಗಡೆಗೊಳಿಸಿ ನಮಗೆ ಹಿತವಚನ ನೀಡಿದ್ದು ನಮ್ಮ ಪುಣ್ಯ.

*ಹೊಸತನದ ಹರಿಕಾರ*

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸಂಪಾದಕರಾಗಿ ಕೆಲಸ ಮಾಡುವಾಗ ಆಗಲೇ   ಗಗನಕ್ಕೇರಿದ್ದ  ಪತ್ರಿಕೆಯ ಬೆಲೆ ಇಳಿಸಲು ಪ್ರಕಾಶಕರ ಮನವೊಲಿಸಿ ಒಂದು ರೂ ಗೆ ಒಂದು ಪತ್ರಿಕೆ ಸಿಗುವಂತೆ ಮಾಡಿ ಕನ್ನಡದ  ಹೊಸ ಓದುಗರ ಸೇರ್ಪಡೆ ಮಾಡಿದ ಕೀರ್ತಿ ಭಟ್ ಸರ್ ರವರಿಗೆ ಸಲ್ಲಬೇಕು. ಕೇವಲ ಭಾನುವಾರ ಮಾತ್ರ ವಿಶೇಷ ಪುರವಣಿ ನೋಡಿದ ಓದುಗರಿಗೆ ಪ್ರತಿದಿನ ಒಂದು ವಿಶೇಷವಾದ ಪುರವಣಿ ನೀಡಿದರು, ಜೊತೆಗೆ ಕೆಲವೊಮ್ಮೆ ಪುರವಣಿ ಪುಸ್ತಕಗಳ ರೂಪದಲ್ಲಿ ಪ್ರಕಟವಾಗಿವೆ ಮತ್ತು ಓದುಗರಿಗೆ ಹಬ್ಬವಾಗಿವೆ . ಪತ್ರಿಕೆಯಲ್ಲಿ ಎಲ್ಲಾ ಪುಟಗಳ ವರ್ಣಮಯ ಮಾಡಿ ನೀಡಿದ್ದು ಮತ್ತೊಂದು ಹೊಸತನ .ಬಸ್‌ಗಳ ಪ್ರಯಾಣ ಮಾಡುವಾಗ ಪುಟ ತಿರುಗಿಸಿ ಓದಲು ಅನುಕೂಲವಾಗುವಂತೆ ಪತ್ರಿಕೆಯಲ್ಲಿ ವಿನ್ಯಾಸವನ್ನು ಬದಲಿಸಿದ ಕೀರ್ತಿ ಭಟ್ ರವರದು .ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಪತ್ರಿಕೋದ್ಯಮದ ಹೊಸ ಪ್ರಯತ್ನ ಗಂಟೆಗೊಂದು ಪತ್ರಿಕೆಯ‌ ಆವೃತ್ತಿಯನ್ನು *ವಿಶ್ವ ವಾಣಿ ಟೈಮ್ಲಿ* ಎಂಬ ಗಂಟೆಗೊಮ್ಮೆ ಮೊಬೈಲ್ ಪತ್ರಿಕೆ ನೀಡುತ್ತಿದ್ದಾರೆ.


*ದೇಶ ಕೋಶಗಳ ಹುಚ್ಚು*

ದೇಶ ಸುತ್ತು ಕೋಶ ಓದು
ಎಂಬುದನ್ನು ಭಟ್ ಸರ್ ಬಹಳ ಉತ್ತಮವಾಗಿ ಅಳವಡಿಸಿ ಕೊಂಡಿದ್ದಾರೆ ಈಗಾಗಲೇ ಐವತ್ತಕ್ಕೂ ಹೆಚ್ಚು ದೇಶಗಳ ಸುತ್ತಿರುವ ಇವರು ಅಲ್ಲಿಂದಲೇ ಆ ದೇಶದ ಸಾಕ್ಷಾತ್ ನೇರ ಪ್ರಸಾರದಂತಹ ವರದಿ ನೀಡುವ ಅವರ ಪ್ರತಿಭೆಗೆ ಅವರೇ ಸಾಟಿ‌ ಪ್ರತ್ಯಕ್ಷವಾಗಿ ನಾವೇ ಅಲ್ಲಿ ಹೋಗಿ ಸ್ಥಳಗಳಲ್ಲಿ ಸಂಚರಿಸುವ ಅನುಭವ ನೀಡುವರು.
ಇವರ ಪ್ರತಿಭೆ ಗುರುತಿಸಿ ನಮ್ಮ ದೇಶದ ರಾಷ್ಟಪತಿ ಮತ್ತು ಪ್ರದಾನ ಮಂತ್ರಿ ಗಳು ವಿದೇಶೀ ಪ್ರವಾಸ ಕೈಗೊಂಡಾಗ ಇರುವ ವಿಶೇಷವಾಗಿ ಆಹ್ವಾನಿತ ಪತ್ರಕರ್ತರ ತಂಡದಲ್ಲಿ ಇವರು ಆಯ್ಕೆ ಯಾಗಿ ಪ್ರವಾಸ ಕೈಗೊಂಡು ಅದರ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ ಇದು ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ.

*ಪ್ರತಿಭೆಗೆ ಬೆಲೆ*

ಇವರು ಕೇವಲ ಅವರು ಬೆಳೆಯದೇ ಪ್ರತಿಭಾವಂತ ರಿಗೆ ಬರೆಯಲು ಪ್ರೋತ್ಸಾಹ ನೀಡಿ ಗೌರವಿಸಲಾಯಿತು. ಅದರ ಪರಿಣಾಮವಾಗಿ ಶ್ರೀವತ್ಸ ಜೋಶಿ. ಪ್ರತಾಪ್ ಸಿಂಹ, ಷಡಕ್ಷರಿ ,ಮುಂತಾದವರು ಬೆಳೆಯಲು ಕಾರಣರು. ಈಗಲೂ ಅವರ ಗರಡಿಯಲ್ಲಿ ಹಲ ಹಿರಿ ಕಿರಿ ಲೇಖಕರು ಬರೆಯುತ್ತಾ ಬೆಳೆಯುತ್ತ ಇದ್ದಾರೆ.

*ತಂತ್ರಜ್ಞಾನದ ಬಳಕೆ*

ಹತ್ತು ವರ್ಷಗಳ ಹಿಂದೆ ಇ ಮೇಲ್ ಹೊಂದಿದ್ದ ಏಕೈಕ ಸಂಪಾದಕರಾಗಿ ಹೆಗ್ಗಳಿಕೆ ಪಡೆದಿದ್ದ ಭಟ್ ರವರು ಇಂದು ಸಾಮಾಜಿಕ ಮಾದ್ಯಮಗಳಾದ ಫೇಸ್ಬುಕ್ ,ಟ್ವಿಟರ್ ಮುಂತಾದ ಜಾಲತಾಣಗಳ ಮೂಲಕ ಸಕ್ರೀಯ ರಾಗಿ ಓದುಗರಿಗೆ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ ಒಂದು ರಾಜ್ಯದ ಮುಖ್ಮಿಗಿಂತ ಅವರ ಟ್ವಿಟರ್ ಹಿಂಬಾಲಕರ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ .

*ಓದುಗ ಮತ್ತು ಬರಹಗಾರ*

ಉತ್ತಮ ಕೇಳುಗ ಉತ್ತಮ ಮಾತುಗಾರನಾಗುತ್ತಾನೆ ಅದೇ ರೀತಿ ಉತ್ತಮ ಬರಹಗಾರನಾಗಲು‌‌ ಓದುಗನಾಗುವುದು ಅವಶ್ಯ ಈ ನಿಟ್ಟಿನಲ್ಲಿ ಭಟ್ ಸರ್ ಮೂರು ಹೆಜ್ಜೆ ಮುಂದೆ. ಅವರಿಗೆ ಯಾವಾಗ ಸಮಯ ಸಿಗುವುದೋ ವಾರದಲ್ಲಿ ಕನಿಷ್ಠ ಮೂರ್ನಾಲ್ಕು ಪುಸ್ತಕ ಓದಿ ಅವುಗಳ ಸಾರವನ ಓದುಗ ಪ್ರಭುಗಳಿಗೆ ಒಪ್ಪಿಸಿ ನನ್ನಂತವರಲ್ಲಿ ಓದುವ ಹುಚ್ಚು ಹಿಡಿಸಿಬಿಡುತ್ತಾರೆ ತನ್ಮೂಲಕ ನಮ್ಮನ್ನೂ ಬರೆಯಲು ಪ್ರೇರೇಪಿಸುತ್ತಾರೆ . ಅವರ ಬರವಣಿಗೆ ಓದಲು ಆರಂಬಿಸಿದರೆ ಸೂಜಿಗಲ್ಲಿನಂತೆ ಆಕರ್ಷಣೆ ಮಾಡಿ ಓದಿ ಮುಗಿಸಲು ಓದಿಸಿಕೊಂಡು ಹೋಗುತ್ತದೆ. ಇವರ ಹಲವಾರು ಪುಸ್ತಕಗಳು ಮರುಮುದ್ರಣ ಕಂಡು ಬಿಕರಿಯಾಗುತ್ತಿರುವುದೇ ಅವರ ಬರವಣಿಗೆಯ ಸತ್ವಕ್ಕೆ ಉದಾಹರಣೆ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*