11 ಫೆಬ್ರವರಿ 2018

ಗಜ಼ಲ್ ೨೩ (ಬಹಳವಿತ್ತು)



*ಗಜ಼ಲ್*

ಬೊಗಸೆ ಕಂಗಳಲಿ ಬತ್ತದ ಆಸೆಗಳು ಬಹಳವಿತ್ತು
ತುಂಟು ವಯಸಲಿ ತೀರದ ಚೇಷ್ಟೆಗಳು ಬಹಳವಿತ್ತು

ಮರಕೋತಿ ಅಡುತ್ತಿತ್ತು ಹುಚ್ಚುಕೋಡಿ ಮನಸು
ಕಟ್ಟಿದ ಮೇಲೆ ಬಿದ್ದ ಮರಳ ಮನೆಗಳು ಬಹಳವಿತ್ತು

ಹಗಲುಗನಸುಗಳಿಗೆ ಎಂದಿಗೂ  ಬರವಿರಲಿಲ್ಲ
ಇಲ್ಲದಿರುವುದು ಬೇಕೆಂಬ ಕನಸುಗಳು ಬಹಳವಿತ್ತು

ಈಗ ಆಡಲು ಯಾರಿಗೂ ಸಮಯವಿಲ್ಲ ಮನಸಿಲ್ಲ
ಆಗ ಚಿನ್ನಿ ದಾಂಡು ಲಗೋರಿ ಆಟಗಳು ಬಹಳವಿತ್ತು

ಸೀಜೀವಿಯ ಬಾಲ್ಯದ ಲೀಲೆಗಳೆಲ್ಲವೂ ಮಧುರ ಆಮರ
ಮೊಗೆದು ಕುಡಿದರೂ ಸಾಲದ ನೆನಪುಗಳು ಬಹಳವಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 ಫೆಬ್ರವರಿ 2018

ಮನವಿ ( ಕಿರುಗವನ)

ಹನಿಗವನ

ಮನವಿ

ರಾಜಕೀಯ ಪಕ್ಷಗಳ
ಜಟಾಪಟಿ‌ ಆರಂಭವಾಗಿದೆ
ನಮ್ಮ ‌ಸರ್ಕಾರದಲ್ಲಿ
ಕಡಿಮೆ ಕೊಲೆಯಾಗಿವೆ
ನಿಮ್ಮ ಸರ್ಕಾರದಲ್ಲಿ
ಹೆಚ್ಚು ಕೊಲೆಯಾಗಿವೆ
ನಮ್ಮ ಸರ್ಕಾರದಲ್ಲಿ
ಕಡಿಮೆ ಸುಲಿಗೆಯಿತ್ತು
ನಿಮ್ಮ ಸರ್ಕಾರದಲ್ಲಿ
ಹೆಚ್ಚು ಸುಲಿಗೆಯಿತ್ತು
ನಮ್ಮನ್ನೆ ಮುಂದೆಯೂ
ಆಯ್ಕೆ ಮಾಡಿ
ನಿಮಗೆ ಗೊತ್ತಾಗದಂತೆ
ಭ್ರಷ್ಟಾಚಾರ ಮಾಡುವೆವು
ಕಡಿಮೆ ಸುಲಿಯುತ್ತೇವೆ
 ಕಡಿಮೆ ಲೂಟಿ ಮಡುವೆವು
ನಮ್ಮನ್ನು ನಂಬಿ
ನಮಗೊಂದು ಅವಕಾಶ ಕೊಡಿ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

09 ಫೆಬ್ರವರಿ 2018

*ಕೌಟುಂಬಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸಾಮಾಜಿಕ ಜಾಲತಾಣಗಳು* ಕವಿಬಳಗ ವಾಟ್ಸಪ್ ಬಳಗದ ಸ್ಪರ್ಧೆಯಲ್ಲಿ ತೃತೀಯ ಪುರಸ್ಕಾರ ಪಡೆದ ಲೇಖನ



 *ಕೌಟುಂಬಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿರುವ  ಸಾಮಾಜಿಕ ಜಾಲತಾಣಗಳು*


ಆಧುನಿಕತೆಯು ಮುಂದುವರಿದಂತೆ ನಮ್ಮ ಸಾಮಾಜಿಕ ಸಂಬಂಧ ಗಳು ಸಂಕೀರ್ಣವಾಗಿ ನಾಟಕೀಯತೆ,ಕೃತಕತೆ, ಸಮಯಸಾಧಕತನ, ಸ್ವಾರ್ಥ ಪರತೆ ಇತ್ಯಾದಿಗಳ ವಿಜೃಂಭಣೆಯನ್ನು ಈಗ ಎಲ್ಲೆಲ್ಲೂ ಹೆಚ್ಚು ಕಾಣಬಹುದಾಗಿದೆ.
ಇದರ ಜೊತೆಗೆ ಸಾಮಾಜಿಕ ಜಾಲತಾಣಗಳು ಸೇರಿಕೊಂಡು ಕೌಟುಂಬಿಕ ವ್ಯವಸ್ಥೆಯ ಬೇರುಗಳನ್ನು ಅಲುಗಾಡಿಸಲಾರಂಬಿಸಿವೆ ಎಂದರೆ ತಪ್ಪಾಗಲಾರದು.
ಭಾರತದ ಇತ್ತೀಚಿನ ಸರ್ವೆಯ ಪ್ರಕಾರ ದೇಶದ ನಾಲ್ಕರಲ್ಲಿ ಮೂರು ಜನರು ತಮ್ಮ ಸಂಗಾತಿಯು ತಮ್ಮ ಬಳಿಯಿದ್ದರೂ ಈ ಸಾಮಾಜಿಕ ಜಾಲತಾಣಗಳಾದ ಪೇಸ್ ಬುಕ್ ,ವಾಟ್ಸಪ್, ಟ್ವಿಟರ್, ಇನಸ್ಟಾಗ್ರಾಮ್, ಮುಂತಾದ ವುಗಳಲ್ಲಿ ಮುಳುಗಿರುತ್ತಾರಂತೆ. ಇದರಿಂದಾಗಿ ದಂಪತಿಗಳಲ್ಲಿ ಅನ್ಯೋನ್ಯತೆ ಕಡಿಮೆ ಆಗಿ ಇವು ಕೆಲವೊಮ್ಮೆ ವಿಚ್ಛೇದನದ ಹಾದಿ ಹಿಡಿದ ಉದಾಹರಣೆಗೆ ಕಡಿಮೆಇಲ್ಲ .
ಇನ್ನೂ ಕೆಲವು ಕುಟುಂಬಗಳಲ್ಲಿ ಯಾರೋ  ಕಿಡಿಗೇಡಿಗಳು ಮಾಡಿದ ವಾಟ್ಸಪ್ ಮೆಸೇಜ್ ,ಅಥವಾ ಪೇಸ್ ಬುಕ್ ಪ್ರೆಂಡ್ ರಿಕ್ವೆಸ್ಟ್ ಗಳಿಂದ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲಗಳಾಗಿ ನೆಮ್ಮದಿ ಕೆಡಿಸಿರುವ ಪ್ರಸಂಗಗಳನ್ನು ಆಗಾಗ್ಗೆ ನಾವು ನೋಡುತ್ತಿರುತ್ತೇವೆ . ಇನ್ನೂ ಹದಿಹರೆಯದ ಮಕ್ಕಳು ಮನೆಯಲ್ಲಿದ್ರೆ ಅವರಿಗೆ ಒಂದು ಪೇಸ್ಬುಕ್ ಅಕೌಂಟ್, ಗೂಗಲ್ ಅಕೌಂಟ್ ಇಲ್ಲದಿದ್ದರೆ ಅವರ ವಯಸ್ಸಿಗೆ ಅಪಮಾನ ಎಂದು ಬಗೆದ ಯುವಜನತೆ ಅಪ್ಪ ಅಮ್ಮನ ಜೊತೆ ಕಾಲ ಕಳೆಯದೇ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿರುತ್ತಾರೆ ಕ್ರಮೇಣವಾಗಿ ಇಂತಹವರು ತಂದೆ ತಾಯಿಗಳು, ಬಂಧುಗಳು, ಬಳಗ ಮುಂತಾದ ಸಾಮಾಜಿಕ ಸಂಬಂಧಗಳನ್ನು ತೊರೆದು ಜೀವಿಸಲು ಮುಂದಾಗುವರು .
ಇವರಿಗೆ ಕಣ್ಣಮುಂದಿರುವ ರಕ್ತ ಸಂಬಂಧ ಗಳಿಗಿಂತ ನೆಟಿಜನ್ ಸಂಬಂಧಗಳ ಕಡೆಗೆ ಹೆಚ್ಚು ಗಮನ ಈ ರೀತಿಯ ಸಂಬಂಧಗಳ ಬಗ್ಗೆ ಹಾಸ್ಯ ಸಾಹಿತಿಗಳಾದ ಗುಂಡಿ ರಾಜರು *ವಾಟ್ಸಪ್ ನಲ್ಲಿ ಪರಿಚಿತರಾಗಿ ,ಪೇಸ್ ಬುಕ್ ನಲ್ಲಿ ಎಂಗೆಜ್ ಆದ ಜೋಡಿಗೆ ಮಕ್ಕಳನ್ನು ಈ ಮೇಲ್ ನಲ್ಲಿ ಡೌನ್‌ಲೋಡ್ ಮಾಡಿಕೊಂಡು ನೆಟ್ಟಪ್ಪ. ಗೂಗಲಮ್ಮ ಎಂದು ಹೆಸರಿಟ್ಟರಂತೆ* ಎಂದು ವ್ಯಂಗವಾಗಿ ಹೇಳಿದರೂ ಇದರಲ್ಲಿ ಬಹುತೇಕ ಅಂಶಗಳು ವಾಸ್ತವಕ್ಕೆ ಹತ್ತಿರ ಎಂಬ ಕಹಿಸತ್ಯ ಒಪ್ಪಿಕೊಳ್ಳದೇ ವಿಧಿಯಿಲ್ಲ .

*ಅತಿಯಾದ ಸಾಮಾಜಿಕ ಜಾಲತಾಣದ ಬಳಕೆಯ ದುಷ್ಪರಿಣಾಮಗಳು*

೧  ಕುಟುಂಬಕ್ಕೆ ಗುಣಮಟ್ಟದ ಸಮಯ ಕೊಡಲು ವಿಫಲವಾಗಿ ಕುಟುಂಬದ ವಿಘಟನೆ ಗೆ ನಾಂದಿಯಾಗುವುದು .

೨  ಮಕ್ಕಳಿಗೆ ಸುಲಭವಾಗಿ ಈ ಜಾಲತಾಣಗಳು ಹಿಂಸೆ ,ಲೈಂಗಿಕತೆಯ ಕೂಡಿದ ವಿಡಿಯೋ ಪೋಟೋ ನೋಡುವ ಪರಿಣಾಮವಾಗಿ ಮಕ್ಕಳಲ್ಲಿ ಹಿಂಸಾತ್ಮಕ ಮನೋಭಾವ ಬೆಳೆದು ತಂದೆ ತಾಯಿಗಳ ಮಾತು ಕೇಳದಿರಬಹುದು

೩ ಅತಿಯಾದ ಸಮಾಜಿಕ ಮಾಧ್ಯಮಗಳ ಬಳಕೆಯು ದಂಪತಿಗಳಲ್ಲಿ ಪರಸ್ಪರ ಅನುಮಾನ ಮನೋಭಾವ ಮೂಡಲು ಕಾರಣವಾಗಬಹುದು

*ಈ ಸಮಸ್ಯೆ ಯಿಂದ ಹೊರಬರುವುದು ಹೇಗೆ?*

೧ ಸ್ವಯ ನಿಯಂತ್ರಣ ವಿಧಿಸಿಕೊಂಡು ಅಗತ್ಯವಿದ್ದಾಗ ಮಾತ್ರ ಸಾಮಾಜಿಕ ಜಾಲತಾಣಗಳ ಬಳಕೆ ಮಾಡಬೇಕು

೨ ಮಕ್ಕಳಿಗೆ ಪೋಷಕರ ಮಾರ್ಗದರ್ಶನ ಮಾಡಿ ಕಡಿಮಡಯ ಜಾಲತಾಣಗಳ ಬಳಕೆ ಮಾಡಲು ತಿಳಿವಳಿಕೆ ನೀಡುವುದು

೩  ಜೀವವಿಲ್ಲದ ಪೋನ್ ,ಟಿವಿ ಮುಂತಾದ ವಸ್ತುಗಳಿಗಿಂತ   ಜೀವವಿರುವ ವ್ಯಕ್ತಿಗಳ ಜೊತೆ ಸಂವಹನ ಮಾಡಿ  ಸಂಬಂಧಗಳ ಬೆಳೆಸಿ ಉಳಿಸಬೇಕು.

೪ ದೂರವಿರುವ ಫೇಸ್ಬುಕ್ ಗೆಳೆಯನಿಗಿಂತ ಮನೆಯ ಅಪ್ಪ ಅಮ್ಮ ಮೊದಲು ಎಂದು ತಿಳಿದು ಬಾಳಬೇಕು

ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಯಾಂತ್ರಿಕ ಯುಗದಲ್ಲಿ ಸಂಬಂಧಗಳು ಸಹ ಯಾಂತ್ರಿಕ ವಾಗುತ್ತಿದ್ದು ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ
ಈ ಸಾಮಾಜಿಕ ಜಾಲತಾಣಗಳಿಂದ ನಮ್ಮ ಕೌಟುಂಬಿಕ ವ್ಯವಸ್ಥೆ ಶಿಥಿಲಗೊಂಡು ವಿದೇಶಗಳಲ್ಲಿ ಹೆಚ್ಚಾಗಿರುವ ಸಿಂಗಲ್ ಕಪಲ್. ಲಿವ್ ಇನ್ ರಿಲೇಶನ್ಸ್, ಡೇಟಿಂಗ್ ಕಾರುಬಾರು ನಮ್ಮಲ್ಲಿ ಹೆಚ್ಚಾಗಬಹುದು ಆದ್ದರಿಂದ ನಾವೆಲ್ಲರೂ ಪ್ರಜ್ಞಾವಂತರಾಗಿ ನಿಯಮಿತವಾಗಿ ಈ ಜಾಲತಾಣಗಳ ಬಳಸಿ ಕೊಂಡು ನಮ್ಮ ಕುಟುಂಬ.ಮದುವೆ ಜಾತ್ರೆ, ಸಂಬಂಧ ಮುಂತಾದ ಸಾಮಾಜಿಕ ಸಂಸ್ಥೆಗಳ ಉಳಿಸಿ ಬೆಳಿಸಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಣೆ ಮಾಡೋಣ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 ಫೆಬ್ರವರಿ 2018

ಹಿತವರಾರು? (ಕವನ) ಹನಿ ಹನಿ ಇಬ್ಬನಿ ವಾಟ್ಸಪ್ ಬಳಗದಲ್ಲಿ ಉತ್ತಮ ಎಂದು ಪುರಸ್ಕಾರ ಪಡೆದ ಕವನ

*ಹಿತವರಾರು?*

ನಿಮ್ಮನುಧ್ದರಿಸುವೆವು
ನಿಮ್ಮ ಬಾಳು‌ ಹಸನುಗೊಳಿಸುವೆವು
ಸ್ವರ್ಗ ತೊರುವೆವು
ಸಮಾನತೆ ಸಾರುವೆವು ಎಂದರು.


ತಮ್ಮನ್ನುಧ್ದರಿಸಿಕೊಂಡರು
ಅವರ ಮಕ್ಕಳ ಮೊಮ್ಮಕ್ಕಳ ಪೊರೆದರು
ನಮ್ಮ ಬಾಳ ನರಕ ಮಾಡಿದರು
ನಮ್ಮ ನಮ್ಮಲ್ಲೇ ತಂದಿಟ್ಟರು.


ನಾವು ಅಧಿಕಾರಕ್ಜೆ ಬಂದರೆ
ಕಡಿಮೆ ತಿನ್ನುವೆವು
ಕಡಿಮೆ ಸುಲಿಯುವೆವು
ಕಡಿಮೆ ಮೋಸಗೊಳಿಸುವೆವು ಎಂದರು.


ಅವರು ಸರಿ ಇಲ್ಲ
ನಾವೇ ಸಾಚಾಗಳೆಂದರು
ಇವರ ಜಾತಕ ಅವರು ಬಿಚ್ಚಿದರು
ಕೆಸರೆರಚಾಟ ಇನ್ನೂ ನಿಂತಿಲ್ಲ .


ನಾವೀಗ ಯಾರ ನಂಬಲಿ?
ಇವರನ್ನು ಹೇಗೆ ಸಹಿಸಲಿ ?
ಇದ್ದ ಮೂವರೊಳಗೆ ಹಿತವರಾರು?
ನಮ್ಮ ಕಾಪಾಡುವವರು ಯಾರು?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 ಫೆಬ್ರವರಿ 2018

ಎದ್ದೇಳು ( ಕವನ)


*ಎದ್ದೇಳು*

ನೀನೇ ನನ್ನ ಮನದರಸಿ
ನೀ ನನ್ನ ಕಲ್ಪನಾಸುಂದರಿ
ಹದಿನೆಂಟರ ಪೋರಿ
ಅನುಪಮ ಸುಂದರಿ


ಈಗಲೇ ನಿನ್ನ ವರಿಸುವೆ
ದಿನವೂ ಆರಾದಿಸುವೆ
ಬಳೆಗಳ ತೊಡಿಸುವೆ
ಕರಿಮಣಿ ಈಗಲೇ ತರುವೆ


ಬಂದು ನನ್ನ ಸೇರು
ಕಟ್ಟುವೆ ನಿನಗೆ ತೇರು
ನಿನಗೆ ನೀನೆ ಸಾಟಿ
ನನಗೆ ನೀನೆ ಕೋಟಿ


ಎಂದು ಹೊಗಳುತ್ತಿದ್ದೆ
ಅಮ್ಮ ಕೂಗಿದಾಗ ಎದ್ದೆ
ಬೈಯ್ದಳು ಅಮ್ಮ ಎದ್ದೇಳು
ಗಂಟೆ ಆಗಿದೆ ಆಗಲೇ ಏಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*