08 ಫೆಬ್ರವರಿ 2018

ಹಿತವರಾರು? (ಕವನ) ಹನಿ ಹನಿ ಇಬ್ಬನಿ ವಾಟ್ಸಪ್ ಬಳಗದಲ್ಲಿ ಉತ್ತಮ ಎಂದು ಪುರಸ್ಕಾರ ಪಡೆದ ಕವನ

*ಹಿತವರಾರು?*

ನಿಮ್ಮನುಧ್ದರಿಸುವೆವು
ನಿಮ್ಮ ಬಾಳು‌ ಹಸನುಗೊಳಿಸುವೆವು
ಸ್ವರ್ಗ ತೊರುವೆವು
ಸಮಾನತೆ ಸಾರುವೆವು ಎಂದರು.


ತಮ್ಮನ್ನುಧ್ದರಿಸಿಕೊಂಡರು
ಅವರ ಮಕ್ಕಳ ಮೊಮ್ಮಕ್ಕಳ ಪೊರೆದರು
ನಮ್ಮ ಬಾಳ ನರಕ ಮಾಡಿದರು
ನಮ್ಮ ನಮ್ಮಲ್ಲೇ ತಂದಿಟ್ಟರು.


ನಾವು ಅಧಿಕಾರಕ್ಜೆ ಬಂದರೆ
ಕಡಿಮೆ ತಿನ್ನುವೆವು
ಕಡಿಮೆ ಸುಲಿಯುವೆವು
ಕಡಿಮೆ ಮೋಸಗೊಳಿಸುವೆವು ಎಂದರು.


ಅವರು ಸರಿ ಇಲ್ಲ
ನಾವೇ ಸಾಚಾಗಳೆಂದರು
ಇವರ ಜಾತಕ ಅವರು ಬಿಚ್ಚಿದರು
ಕೆಸರೆರಚಾಟ ಇನ್ನೂ ನಿಂತಿಲ್ಲ .


ನಾವೀಗ ಯಾರ ನಂಬಲಿ?
ಇವರನ್ನು ಹೇಗೆ ಸಹಿಸಲಿ ?
ಇದ್ದ ಮೂವರೊಳಗೆ ಹಿತವರಾರು?
ನಮ್ಮ ಕಾಪಾಡುವವರು ಯಾರು?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 ಫೆಬ್ರವರಿ 2018

ಎದ್ದೇಳು ( ಕವನ)


*ಎದ್ದೇಳು*

ನೀನೇ ನನ್ನ ಮನದರಸಿ
ನೀ ನನ್ನ ಕಲ್ಪನಾಸುಂದರಿ
ಹದಿನೆಂಟರ ಪೋರಿ
ಅನುಪಮ ಸುಂದರಿ


ಈಗಲೇ ನಿನ್ನ ವರಿಸುವೆ
ದಿನವೂ ಆರಾದಿಸುವೆ
ಬಳೆಗಳ ತೊಡಿಸುವೆ
ಕರಿಮಣಿ ಈಗಲೇ ತರುವೆ


ಬಂದು ನನ್ನ ಸೇರು
ಕಟ್ಟುವೆ ನಿನಗೆ ತೇರು
ನಿನಗೆ ನೀನೆ ಸಾಟಿ
ನನಗೆ ನೀನೆ ಕೋಟಿ


ಎಂದು ಹೊಗಳುತ್ತಿದ್ದೆ
ಅಮ್ಮ ಕೂಗಿದಾಗ ಎದ್ದೆ
ಬೈಯ್ದಳು ಅಮ್ಮ ಎದ್ದೇಳು
ಗಂಟೆ ಆಗಿದೆ ಆಗಲೇ ಏಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 ಫೆಬ್ರವರಿ 2018

ಫರ್ದ್ ಗಳು ( ಬೆಳಕು ಮತ್ತು ಕತ್ತಲು) ಕವಿಬಳಗ ವಾಟ್ಸಪ್ ತಂಡದಿಂದ ಬಹಮಾನಿತ ಫರ್ದ್ಗಳು




*ಫರ್ದ್ ಗಳು*

ಹೃದಯ ಕತ್ತಲಾಗಿದೆ ನೀನಿರದೆ ಇಂದು
ಬರೀ  ದೀಪ ಹಚ್ಚಲು ಬರುವೆ ಎಂದು
**
ತಮವು ಕವಿದಿದೆ ನನ್ನ ಜೀವನದಿ
ನಿಂತಂತಾಗಿದೆ ಬಾಳಿನ ಜೀವನದಿ
**
ಕತ್ತಲಾದ ನನ್ನ ಬಾಳು ಮುದುಡಿತ್ತು
ಜಗ್ ಎಂದು ಬೆಳಗಿತು ನೀ ನಗಲು
**
ಎಲ್ಲವೂ ಸುಂದರ ಯುದ್ದ ಪ್ರೀತಿಯಲ್ಲಿ
ಬೆಳಕ ನೀಡಿ  ಬಾ ಕತ್ತಲಾದ  ಬಾಳಿನಲ್ಲಿ
**
ಎಲ್ಲಿದೆ ತೆಗೆದುಕೊಂಡು ಬಾ ದೀಪ
ಹುಡಕಬೇಕಿದೆ ಕತ್ತಲ ಕರಾಳ ಕೂಪ
**

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಫೆಬ್ರವರಿ 2018

ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ನಮ್ಮ ಪಾತ್ರ (ಲೇಖನ)

ಲೇಖನ

ನಮ್ಮ ಸಂಸ್ಕೃತಿಯನ್ನು  ಉಳಿಸುವಲ್ಲಿ ನಮ್ಮ ಪಾತ್ರ


ಇತ್ತೀಚಿಗೆ ಯಾರನ್ನು ಕೇಳಿದರೂ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಬೇಕೆಂದು ಉದ್ದುದ್ದಾ ಭಾಷಣ ಮಾಡುವರು ವಿಪರ್ಯಾಸ ವೆಂದರೆ ಅಂತಹ ಬಹುತೇಕ ವ್ಯಕ್ತಿಗಳು ಸಣ್ಣ ಪುಟ್ಟದ್ದಕ್ಹೆಲ್ಲಾ ಸಿಟ್ಟಾಗಿ ರಾದ್ದಾಂತ ಮಾಡಿ ಮನೆಯಲ್ಲಿ ಅಪ್ಪ ಅಮ್ಮನನ್ನು ಅನಾಥಾಶ್ರಮಕ್ಕೆ ಕಳಿಸಿರುತ್ತಾರೆ.

ಹಾಗಾದರೆ ಸಂಸ್ಕೃತಿ ಎಂದರೇನು ?

ನಾವು ಹೇಗೆ ಇರುವೆವೋ ಅದೇ ನಮ್ಮ ಸಂಸ್ಕೃತಿ .
ಸಂಸ್ಕೃತಿ ಎಂಬುದು ಒಂದು ಜೀವನ ಕ್ರಮವಾಗಿದ್ದು ಅದು ಸಮಾಜದಲ್ಲಿ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾವಣೆ ಅಗುತ್ತಿರುತ್ತದೆ.
ಇ.ಬಿ.ಟೇಲರ್ ರವರ ಪ್ರಕಾರ *ಸಮಾಜಲ್ಲಿ ಸಂಕೀರ್ಣವಾದ ಜ್ಞಾನ ,ಕಲೆ ನಿಯಮ,ಮತ್ತು ಸಂಪ್ರದಾಯವನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಸ್ತಾಂತರ ಮಾಡುವುದೇ ಸಂಸ್ಕೃತಿ*

*ಸಂಸ್ಕೃತಿಯ ವಿಧಗಳು*

ಮುಖ್ಯವಾಗಿ ಸಂಸ್ಕೃತಿ ಯನ್ನು ಎರಡು ವಿಧಗಳಲ್ಲಿ ವಿಂಗಡಿಸಬಹುದು ಅವೆಂದರೆ

*೧ ಭೌತಿಕ ಸಂಸ್ಕೃತಿ* ಇದರಲ್ಲಿ ನಮ್ಮ ಕಣ್ಣಿಗೆ ಕಾಣುವ ಮನೆ ದೇವಾಲಯ, ನಮ್ಮ ವೇಷಭೂಷಣ, ರಸ್ತೆ ಗಳು ಸ್ಮಾರಕಗಳು ಮುಂತಾದವುಗಳ ಸಂಗಮವಾಗಿದೆ

*೨ಅಭೌತಿಕ ಸಂಸ್ಕೃತಿ* ಯಲ್ಲಿ ಕಣ್ಣಿಗೆ ಕಾಣದ ನಮ್ಮ ಸಂಪ್ರದಾಯ, ಧಾರ್ಮಿಕ ಆಚರಣೆಗಳು,ಕಲೆ ಭಾಷೆ ಮುಂತಾದವುಗಳ ಒಳಗೊಂಡಿದೆ .

*ಸಂಸ್ಕೃತಿ ಯ ಲಕ್ಷಣಗಳು*

೧ ಸಂಸ್ಕೃತಿ ಯು ಒಂದು ಅಗೋಚರ ಮತ್ತು ಗೋಚರ ಜೀವನ ಕ್ರಮವಾಗಿದೆ
೨ ಸಂಸ್ಕೃತಿಯು ಸಾಮಾಜಿಕ ಜೀವನದಲ್ಲಿ ಕ್ರಮೇಣವಾಗಿ ಬೆಳವಣಿಗೆಯ ಹೊಂದುವುದು.
೩ ಸಂಸ್ಕೃತಿ ಕೊಡು ಕೊಳ್ಳುವಿಕೆಯ ಮೂಲಕ ಬೆಳೆಯುವುದು
೪ ಸಹಬಾಳ್ವೆ ಗೆ ಸಂಸ್ಕೃತಿ ಪೂರಕವಾಗಿದೆ
೫ ಸಂಸ್ಕೃತಿ ನಿರಂತರವಾಗಿ ಬೆಳೆಯುತ್ತದೆ.
೬ ಸಂಸ್ಕೃತಿ ವೈವಿಧ್ಯಮಯ ವಾಗಿರುತ್ತವೆ

*ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನಮ್ಮ ಪಾತ್ರ*

೧ ಜ್ಞಾನ ದ ಆಗರವಾದ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಮೊದಲು ನಾವು ಆ ಸಂಸ್ಕೃತಿ ಯನ್ನು ಅನುಸರಿಸಿ ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಿ ನಡೆಯಬೇಕು.

೨ಬರೀ ಮೌಲ್ಯ ಗಳ ಬಗ್ಗೆ ಮಾತಾನಾಡದೇ ಕೆಲ ಮೌಲ್ಯ ಗಳನ್ನು ಅಳವಡಿಸಿಕೊಂಡು ನಮ್ಮ ಮಕ್ಕಳಿಗೆ ಅವುಗಳ ಕಲಿಸಬೇಕು ಉದಾಹರಣೆಗೆ ಸತ್ಯ, ದಯೆ, ಸಹಕಾರ ಇತ್ಯಾದಿ...

೩ನಮ್ಮ ವರ್ತನೆಯ ಬದಲಾವಣೆಗೆ ಸಂಸ್ಕೃತಿ ಒಂದು ಉತ್ತಮ ಸಾಧನ ಉತ್ತಮ ಸಂಸ್ಕೃತಿ ಉಳ್ಳ ವ್ಯಕ್ತಿಗಳ ವರ್ತನೆಯು ಉತ್ತಮವಾಗಿರುತ್ತದೆ ಅವರನ್ನು ಅನುಸರಿಸುವ ಮೂಲಕ ಸಂಸ್ಕೃತಿ ಬೆಳೆಸಬಹುದು.

೪ ನಮ್ಮ ಜಾತ್ಯ, ಹಬ್ಬ ಹರಿದಿನ ಮದುವೆ ಸಂಪ್ರದಾಯವನ್ನು ನಾವು ಆಚರಿಸಿ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡಬೇಕು.

೫ ನಮ್ಮ ಭಾಷೆ, ಕಲೆ ,ಹಾಡು,ಜನಪದ ಅರ್ಥ ಪೂರ್ಣ ಸಂಪ್ರದಾಯವನ್ನು ನಾವು ಬೆಳೆಸಿ ಉಳಿಸಬೇಕಿದೆ

ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಸಂಸ್ಕೃತಿ ಇಂದು ಪಾಶ್ಚಾತ್ಯ ಸಂಸ್ಕೃತಿ ಯಿಂದ ನಲುಗಿದೆ ದೇಶದ ಬಹುತೇಕ ಭಾಗಗಳಲ್ಲಿ ಆಧುನೀಕರಣ , ಪಾಶ್ಚಾತ್ಯೀಕರಣ ,ಜಾಗತೀಕರಣದ ಪರಿಣಾಮವಾಗಿ ನಮ್ಮ ಸಂಸ್ಕೃತಿ ಹಿಂಬೀಳುವಿಕೆ (cultural lag) ಕಂಡು ಬರುತ್ತದೆ ಇದನ್ನು ಹೋಗಲಾಡಿಸಲು ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಲು ನಾವೆಲ್ಲರೂ ಪಣ ತೊಡೋಣ .


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

04 ಫೆಬ್ರವರಿ 2018

ನವಯುಗದಲ್ಲಿ ತಾಯಿಯ ಪಾತ್ರ (ಲೇಖನ)

*ನವಯುಗದಲ್ಲಿ ತಾಯಿಯ ಪಾತ್ರ*


ಮಾತೃ ದೇವೋಭವ ...ಎಂದು ಆರಂಭವಾಗುವ ಶ್ಲೋಕದ ಆದಿಯಾಗಿ ಮಾತೆಗೆ ಜಗತ್ತಿನಲ್ಲೇ ಒಂದು ಪೂಜ್ಯ ಸ್ಥಾನ ನೀಡಿದೆ .ಯಾವುದೇ ವ್ಯಕ್ತಿಯ ಸಂಸ್ಕಾರ. ಸಂಘಟನೆ, ಶಿಸ್ತು, ಸಂಯಮ,ಮುಂತಾದ ಸದ್ಗುಣ ಗಳ ಹಿಂದೆ ತಾಯಿಯ ಛಾಪು ಇದ್ದೇ ಇರುತ್ತದೆ.
ಹಿಂದೆ ಮುಂದೆ ಎಂದೆಂದಿಗೂ ತಾಯಿಯ ಪಾತ್ರವನ್ನು ತಾಯಿಯೇ ನಿರ್ವಹಿಸಲು ಸಾದ್ಯ ಹಿಂದಿನ ಕಾಲದ ತಾಯಂದಿರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ತಮ್ಮ ಮಕ್ಕಳ ಬೆಳವಣಿಗೆಗೆ ಕಾರಣಕರ್ತರಾಗಿರುವುದನ್ನು  ಕಂಡಿದ್ದೇವೆ ಇದಕ್ಕೆ ಕೆಲವು ಉದಾಹರಣೆ ನೀಡುವುದಾದರೆ .ಶಿವಾಜಿಯ ತಾಯಿ ಜೀಜಾಬಾಯಿ.ನೆಹರೂ ರವರ ತಾಯಿ ಸ್ವರೂಪರಾಣಿ ಈಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ.
ಬದಲಾದ ಕಾಲಘಟ್ಟದಲ್ಲಿ ಇಪ್ಪತ್ತೊಂದನೇ ಶತಮಾನದ, ತಂತ್ರಜ್ಞಾನ ಯುಗದಲ್ಲಿ ಮಾತೆಯರ ಪಾತ್ರ ಮತ್ತು ಅವರ ಜವಾಬ್ದಾರಿಗಳು ವಿವಿಧ ಆಯಾಮಗಳಲ್ಲಿ ವಿಸ್ತಾರಗೊಂಡಿವೆ ಎಂದರೆ ತಪ್ಪಲ್ಲ

*ನವಯುಗದಲ್ಲಿ ತಾಯಿಯ ಪಾತ್ರ*

ನವಯುಗದಲ್ಲಿ ತಾಯಿಯ ಪಾತ್ರವನ್ನು ಈ ಕೆಳಗಿನಂತೆ ವಿವರಿಸಬಹುದು

*1 ಮಕ್ಕಳ ಪಾಲನೆ*

ಹಿಂದಿನ ಕಾಲದಂತೆ ಕೇವಕ ಮಕ್ಕಳ ಡೈಪರ್ ಬದಲಾಯಿಸಿ, ಅವರ ತರಗತಿಯ ಪೋಷಕರ ಸಭೆಯಲ್ಲಿ ಪಾಲ್ಗೊಂಡರೆ ಬಹುತೇಕ ಕೆಲಸ ಮುಗಿದಂತಾಗುತ್ತಿತ್ತು ಆದರೆ ಇಂದಿನ ಆಧುನಿಕ ತಾಯಂದಿರು ತಮ್ಮ ಮಕ್ಕಳ ಸ್ನೇಹಿತರ ಹುಟ್ಟು ಹಬ್ಬದ ಆಚರೆಯಿಂದ ಹಿಡಿದು ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಬೈಸಿಕಲ್, ಆಟಿಕೆಗಳು, ಕಂಪ್ಯೂಟರ್ ಗೇಮ್,ಮುಂತಾದವುಗಳ ಬಗ್ಗೆ ಅಪ್ಡೇಟ್ ಆಗಿ ಮಕ್ಕಳಿಗೆ ಮಗುವಾಗಿ ಹೊಂದಿಕೊಂಡು ಸಂಧರ್ಭಕ್ಕೆ ತಕ್ಕಂತೆ ಮಾರ್ಗದರ್ಶಕಳಾಗಿ ಮಕ್ಕಳ ಪಾಲನೆ ಮಾಡಬೇಕಾಗಿದೆ .

*2 ಆರೋಗ್ಯದ ಬಗ್ಗೆ ಕಾಳಜಿ*

ಜಾಗತೀಕರಣ ಪರಿಣಾಮವಾಗಿ ಇಂದು ನಮ್ಮ ಮನೆ ಬಾಗಿಲಿಗೆ ಪಿಜಾ ,ಬರ್ಗರ್,ಮಾಕ್ಡೊನಾಲ್ಡ್ ಲಗ್ಗೆ ಇಟ್ಟಿವೆ ಈ ಜಂಕ್ ಪುಡ್ಗಳಿಂದ ನಮ ಮಕ್ಕಳ ಅರೋಗ್ಯ ಕಾಪಾಡುವುದು ನವಯುಗದ ತಾಯಂದಿರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲು ತಾಯಂದಿರು ತಮ್ಮ ಆರೋಗ್ಯ ಕಾಪಾಡಿಕೊಂಡು ಮಕ್ಕಳ ಮತ್ತು ಕುಟುಂಬದ ಸದಸ್ಯರ ಆರೋಗ್ಯ ಕಾಪಾಡಲು ಪಣತೊಡಬೇಕು .

*3 ತಂತ್ರಜ್ಞಾನದ ತಿಳುವಳಿಕೆ*

ಇಂದಿನ‌ ತಂತ್ರಜ್ಞಾನದ ಯುಗದಲ್ಲಿ ತಮ್ಮ ಮಕ್ಕಳು ವಿವಿಧ ವೀಡಿಯೋ ಆಡಿಯೋ ಡೌನ್‌ಲೋಡ್ ಮಾಡಿ ತಮ್ಮ ಮೊಬೈಲ್ ಐ ಪಾಡ್ ಗಳ ಬಳಕೆ ಮಾಡುತ್ತಿದ್ದರೆ ಕೊನೆ ಪಕ್ಷ ಅವರು ಯಾವ ವೀಡಿಯೋ, ನೋಡುತ್ತಿದ್ದಾನೆ ಎಂದು ತಿಳಿದು ಆ ಮಕ್ಕಳು ದಾರಿ ತಪ್ಪಿದಾಗ ಸೂಕ್ತ  ಬುದ್ದಿ ಹೇಳಲು
ಹಾಗೂ ಕೆಲ ಸಮಸ್ಯೆಗಳನ್ನು ಬಗೆಹರಿಸಲು ಇಂದಿನ ಆಧುನಿಕ ತಾಯಿ ಈ ತಂತ್ರಜ್ಞಾನದ ಕನಿಷ್ಟ ತಿಳುವಳಿಕೆ ಪಡೆದಿರಬೇಕು.


*4 ಉತ್ತಮ ಸಂಬಂದ ಮತ್ತು ಸಂವಹನ*

ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಸ್ವೇಚ್ಛೆಯಾಗಿ ಕಲಿಯಬಾರದ ಕೆಟ್ಟ ಆಟಗಳನ್ನು ಕಲಿತು ಮುಕ್ತ ಲೈಂಗಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಅನರ್ಥಗಳನ್ನು ಮಾಡಿಕೊಂಡು ಪೋಷಕರನ್ನು ಮತ್ತು ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದನ್ನು ಕಾಣುವೆವು
ಇದನ್ನು ಪರಿಹರಿಸಲು ತಾಯಿಯ ಮುಕ್ತ ಮಾತಕತೆ ಉತ್ತಮ ಸಂವಹನ ಮಾರ್ಗದರ್ಶನ ಇಂದು ಅಗತ್ಯವಾದ ಅಂಶವಾಗಿದೆ

*5 ಸಮಯದ ಮಹತ್ವ*

ಇಂದಿನ ಅಧುನಿಕ ಯುಗದಲ್ಲಿ ಮಾನವ ಸಮಯ ಮತ್ತು ಹಣದ ಹಿಂದೆ ಅಕ್ಷರಶಃ ಓಡುತ್ತಾ ಇದ್ದಾರೆ. ಮನೆಯ ಎಲ್ಲಾ ಸದಸ್ಯರು ನಮಗೆ ಸಮಯವಿಲ್ಲ ಎಂದು ದೂರುವಾಗ ತಾಯಿ ಕೆಲವೊಮ್ಮೆ ಹೊರಗಡೆ ಕೆಲಸ ಮಾಡುತ್ತಿದ್ದರೂ ಮನೆಯಲ್ಲಿ ತನ್ನ ಮಕ್ಕಳು ಮತ್ತು ಕುಟುಂಬಕ್ಕೆ ಗುಣಾತ್ಮಕ ಸಮಯ ನೀಡಲೇಬೇಕು ಇದು ಕುಟುಂಬದ ಸಂಬಂಧಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ

ಒಟ್ಟಿನಲ್ಲಿ ಹೇಳುವುದಾದರೆ ಇಂದಿನ ನವಯುಗದ ತಾಯಂದಿರು ಅಷ್ಟದಿಕ್ಕುಗಳಲ್ಲೂ ಕಾರ್ಯನಿರ್ವಹಿಸುವ ಮೂಲಕ ದಶಕಂಠ ಮತ್ತು ದಶ ಹಸ್ತಗಳ ಪಡೆದರೂ ಅವರು ನಿರ್ವಹಣೆ ಮಾಡುವ ಕೆಲಸಗಳು ಬಾಕಿ ಇವೆಯೇನೊ ಅನಿಸುತ.ಆದರೂ ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪಾತ್ರ ನಿರ್ವಹಣೆ ಮಾಡಿದರೆ ನವಯುಗ ತಾಯಂದಿರು ನಮ್ಮ ಭವ್ಯ ಸಮಾಜ ನಿರ್ಮಾಣದ ಭದ್ರ ಬುನಾದಿಯನ್ನು ಹಾಕುವ ಶಕ್ತಿ ದೇವತೆಗಳೆಂದರೆ ತಪ್ಪಾಗಲಾರದು


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*