04 ಫೆಬ್ರವರಿ 2018

ನವಯುಗದಲ್ಲಿ ತಾಯಿಯ ಪಾತ್ರ (ಲೇಖನ)

*ನವಯುಗದಲ್ಲಿ ತಾಯಿಯ ಪಾತ್ರ*


ಮಾತೃ ದೇವೋಭವ ...ಎಂದು ಆರಂಭವಾಗುವ ಶ್ಲೋಕದ ಆದಿಯಾಗಿ ಮಾತೆಗೆ ಜಗತ್ತಿನಲ್ಲೇ ಒಂದು ಪೂಜ್ಯ ಸ್ಥಾನ ನೀಡಿದೆ .ಯಾವುದೇ ವ್ಯಕ್ತಿಯ ಸಂಸ್ಕಾರ. ಸಂಘಟನೆ, ಶಿಸ್ತು, ಸಂಯಮ,ಮುಂತಾದ ಸದ್ಗುಣ ಗಳ ಹಿಂದೆ ತಾಯಿಯ ಛಾಪು ಇದ್ದೇ ಇರುತ್ತದೆ.
ಹಿಂದೆ ಮುಂದೆ ಎಂದೆಂದಿಗೂ ತಾಯಿಯ ಪಾತ್ರವನ್ನು ತಾಯಿಯೇ ನಿರ್ವಹಿಸಲು ಸಾದ್ಯ ಹಿಂದಿನ ಕಾಲದ ತಾಯಂದಿರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ತಮ್ಮ ಮಕ್ಕಳ ಬೆಳವಣಿಗೆಗೆ ಕಾರಣಕರ್ತರಾಗಿರುವುದನ್ನು  ಕಂಡಿದ್ದೇವೆ ಇದಕ್ಕೆ ಕೆಲವು ಉದಾಹರಣೆ ನೀಡುವುದಾದರೆ .ಶಿವಾಜಿಯ ತಾಯಿ ಜೀಜಾಬಾಯಿ.ನೆಹರೂ ರವರ ತಾಯಿ ಸ್ವರೂಪರಾಣಿ ಈಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ.
ಬದಲಾದ ಕಾಲಘಟ್ಟದಲ್ಲಿ ಇಪ್ಪತ್ತೊಂದನೇ ಶತಮಾನದ, ತಂತ್ರಜ್ಞಾನ ಯುಗದಲ್ಲಿ ಮಾತೆಯರ ಪಾತ್ರ ಮತ್ತು ಅವರ ಜವಾಬ್ದಾರಿಗಳು ವಿವಿಧ ಆಯಾಮಗಳಲ್ಲಿ ವಿಸ್ತಾರಗೊಂಡಿವೆ ಎಂದರೆ ತಪ್ಪಲ್ಲ

*ನವಯುಗದಲ್ಲಿ ತಾಯಿಯ ಪಾತ್ರ*

ನವಯುಗದಲ್ಲಿ ತಾಯಿಯ ಪಾತ್ರವನ್ನು ಈ ಕೆಳಗಿನಂತೆ ವಿವರಿಸಬಹುದು

*1 ಮಕ್ಕಳ ಪಾಲನೆ*

ಹಿಂದಿನ ಕಾಲದಂತೆ ಕೇವಕ ಮಕ್ಕಳ ಡೈಪರ್ ಬದಲಾಯಿಸಿ, ಅವರ ತರಗತಿಯ ಪೋಷಕರ ಸಭೆಯಲ್ಲಿ ಪಾಲ್ಗೊಂಡರೆ ಬಹುತೇಕ ಕೆಲಸ ಮುಗಿದಂತಾಗುತ್ತಿತ್ತು ಆದರೆ ಇಂದಿನ ಆಧುನಿಕ ತಾಯಂದಿರು ತಮ್ಮ ಮಕ್ಕಳ ಸ್ನೇಹಿತರ ಹುಟ್ಟು ಹಬ್ಬದ ಆಚರೆಯಿಂದ ಹಿಡಿದು ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಬೈಸಿಕಲ್, ಆಟಿಕೆಗಳು, ಕಂಪ್ಯೂಟರ್ ಗೇಮ್,ಮುಂತಾದವುಗಳ ಬಗ್ಗೆ ಅಪ್ಡೇಟ್ ಆಗಿ ಮಕ್ಕಳಿಗೆ ಮಗುವಾಗಿ ಹೊಂದಿಕೊಂಡು ಸಂಧರ್ಭಕ್ಕೆ ತಕ್ಕಂತೆ ಮಾರ್ಗದರ್ಶಕಳಾಗಿ ಮಕ್ಕಳ ಪಾಲನೆ ಮಾಡಬೇಕಾಗಿದೆ .

*2 ಆರೋಗ್ಯದ ಬಗ್ಗೆ ಕಾಳಜಿ*

ಜಾಗತೀಕರಣ ಪರಿಣಾಮವಾಗಿ ಇಂದು ನಮ್ಮ ಮನೆ ಬಾಗಿಲಿಗೆ ಪಿಜಾ ,ಬರ್ಗರ್,ಮಾಕ್ಡೊನಾಲ್ಡ್ ಲಗ್ಗೆ ಇಟ್ಟಿವೆ ಈ ಜಂಕ್ ಪುಡ್ಗಳಿಂದ ನಮ ಮಕ್ಕಳ ಅರೋಗ್ಯ ಕಾಪಾಡುವುದು ನವಯುಗದ ತಾಯಂದಿರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲು ತಾಯಂದಿರು ತಮ್ಮ ಆರೋಗ್ಯ ಕಾಪಾಡಿಕೊಂಡು ಮಕ್ಕಳ ಮತ್ತು ಕುಟುಂಬದ ಸದಸ್ಯರ ಆರೋಗ್ಯ ಕಾಪಾಡಲು ಪಣತೊಡಬೇಕು .

*3 ತಂತ್ರಜ್ಞಾನದ ತಿಳುವಳಿಕೆ*

ಇಂದಿನ‌ ತಂತ್ರಜ್ಞಾನದ ಯುಗದಲ್ಲಿ ತಮ್ಮ ಮಕ್ಕಳು ವಿವಿಧ ವೀಡಿಯೋ ಆಡಿಯೋ ಡೌನ್‌ಲೋಡ್ ಮಾಡಿ ತಮ್ಮ ಮೊಬೈಲ್ ಐ ಪಾಡ್ ಗಳ ಬಳಕೆ ಮಾಡುತ್ತಿದ್ದರೆ ಕೊನೆ ಪಕ್ಷ ಅವರು ಯಾವ ವೀಡಿಯೋ, ನೋಡುತ್ತಿದ್ದಾನೆ ಎಂದು ತಿಳಿದು ಆ ಮಕ್ಕಳು ದಾರಿ ತಪ್ಪಿದಾಗ ಸೂಕ್ತ  ಬುದ್ದಿ ಹೇಳಲು
ಹಾಗೂ ಕೆಲ ಸಮಸ್ಯೆಗಳನ್ನು ಬಗೆಹರಿಸಲು ಇಂದಿನ ಆಧುನಿಕ ತಾಯಿ ಈ ತಂತ್ರಜ್ಞಾನದ ಕನಿಷ್ಟ ತಿಳುವಳಿಕೆ ಪಡೆದಿರಬೇಕು.


*4 ಉತ್ತಮ ಸಂಬಂದ ಮತ್ತು ಸಂವಹನ*

ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಸ್ವೇಚ್ಛೆಯಾಗಿ ಕಲಿಯಬಾರದ ಕೆಟ್ಟ ಆಟಗಳನ್ನು ಕಲಿತು ಮುಕ್ತ ಲೈಂಗಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಅನರ್ಥಗಳನ್ನು ಮಾಡಿಕೊಂಡು ಪೋಷಕರನ್ನು ಮತ್ತು ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದನ್ನು ಕಾಣುವೆವು
ಇದನ್ನು ಪರಿಹರಿಸಲು ತಾಯಿಯ ಮುಕ್ತ ಮಾತಕತೆ ಉತ್ತಮ ಸಂವಹನ ಮಾರ್ಗದರ್ಶನ ಇಂದು ಅಗತ್ಯವಾದ ಅಂಶವಾಗಿದೆ

*5 ಸಮಯದ ಮಹತ್ವ*

ಇಂದಿನ ಅಧುನಿಕ ಯುಗದಲ್ಲಿ ಮಾನವ ಸಮಯ ಮತ್ತು ಹಣದ ಹಿಂದೆ ಅಕ್ಷರಶಃ ಓಡುತ್ತಾ ಇದ್ದಾರೆ. ಮನೆಯ ಎಲ್ಲಾ ಸದಸ್ಯರು ನಮಗೆ ಸಮಯವಿಲ್ಲ ಎಂದು ದೂರುವಾಗ ತಾಯಿ ಕೆಲವೊಮ್ಮೆ ಹೊರಗಡೆ ಕೆಲಸ ಮಾಡುತ್ತಿದ್ದರೂ ಮನೆಯಲ್ಲಿ ತನ್ನ ಮಕ್ಕಳು ಮತ್ತು ಕುಟುಂಬಕ್ಕೆ ಗುಣಾತ್ಮಕ ಸಮಯ ನೀಡಲೇಬೇಕು ಇದು ಕುಟುಂಬದ ಸಂಬಂಧಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ

ಒಟ್ಟಿನಲ್ಲಿ ಹೇಳುವುದಾದರೆ ಇಂದಿನ ನವಯುಗದ ತಾಯಂದಿರು ಅಷ್ಟದಿಕ್ಕುಗಳಲ್ಲೂ ಕಾರ್ಯನಿರ್ವಹಿಸುವ ಮೂಲಕ ದಶಕಂಠ ಮತ್ತು ದಶ ಹಸ್ತಗಳ ಪಡೆದರೂ ಅವರು ನಿರ್ವಹಣೆ ಮಾಡುವ ಕೆಲಸಗಳು ಬಾಕಿ ಇವೆಯೇನೊ ಅನಿಸುತ.ಆದರೂ ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪಾತ್ರ ನಿರ್ವಹಣೆ ಮಾಡಿದರೆ ನವಯುಗ ತಾಯಂದಿರು ನಮ್ಮ ಭವ್ಯ ಸಮಾಜ ನಿರ್ಮಾಣದ ಭದ್ರ ಬುನಾದಿಯನ್ನು ಹಾಕುವ ಶಕ್ತಿ ದೇವತೆಗಳೆಂದರೆ ತಪ್ಪಾಗಲಾರದು


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 ಫೆಬ್ರವರಿ 2018

ಶಿಕ್ಷಕರಿಗೆ ಶಿಕ್ಷಿಸಲು ಅವಕಾಶ ನೀಡದಿದ್ದರೆ ........?



💦ಜೇನಿನ ಹನಿ💦
..........................

ಅಧ್ಯಾಪಕರು ಬೆತ್ತ ಹಿಡಿಯೋದನ್ನು ಬಿಟ್ರು....
ಮಕ್ಕಳು ಶಿಸ್ತನ್ನು ಮರೆತರು....

 📍
ಅಧ್ಯಾಪಕರು ವಿಮರ್ಶಿಸೋದನ್ನು ಬಿಟ್ರು ...
ಮಕ್ಕಳು ಹೇಡಿಗಳಾದರು...

📍
ಅಧ್ಯಾಪಕರು ಬಯ್ಯೋದನ್ನು ಬಿಟ್ರು...
ಮಕ್ಕಳು ಅಹಂಕಾರಿಗಳಾದರು...

📍
ಅಧ್ಯಾಪಕರು ಕಲಿಯದವರನ್ನು ಗೆಲ್ಲಿಸಲು ನಿರ್ಬಂಧಿತರಾದರು....
ಮಕ್ಕಳು ಮೂರ್ಖರ ಸಮೂಹ ವಾಯಿತು..

📍
ಅಧ್ಯಾಪಕರು ಒಳ್ಳೆಯದಕ್ಕೆ ಏನಾದರೂ ಅಂದರೆ ಅತ್ಮಹತ್ಯೆ ಗೆಯ್ಯುವ ಮನಸನ್ನು ಸೃಷ್ಟಿಸಿದ್ದು ಪೋಷಕ ಸಮೂಹವೇ ಆಗಿದೆ..

📍
ಅಧ್ಯಾಪಕರ ಸಣ್ಣ ಸಣ್ಣ ಶಿಕ್ಷೆಗಳಿಗೆ ದೊಡ್ಡ ಬಾಯಿಯಲ್ಲಿ ದೂರು ದಾಖಲಿಸಿದವರು....

ನನ್ನ ಮಗು ತಪ್ಪು ಮಾಡೊಲ್ಲ ಎಂದು ಹೇಳಿ ಮಗುವಿನ ಎದುರಲ್ಲೇ ಅಧ್ಯಾಪಕನನ್ನು ಅಸಭ್ಯ ನುಡಿದ ಪೋಷಕರು....

📍
ನೀವು ಮಕ್ಕಳನ್ನು ಪ್ರೀತಿಸಿ ಲಾಲಿಸಿದಿರಿ...
ಅವರ ಆತ್ಮವಿಶ್ವಾಸಕ್ಕೆ ಕೊಡಲಿ ಏಟು ಹಾಕಿದಿರಿ...

ಹೆತ್ತ ತಾಯಿಯಲ್ಲೂ ,ತಂದೆಯಲ್ಲೂ ಹೇಳಲಾರದ ಯಾವ ದುಃಖ? ಏನು ಸಮಸ್ಯೆ ಒಂದು ಮಗುವಿಗೆ ಇರೋದು?

ಆತ್ಮಹತ್ಯೆ ಗೆ ಪ್ರೇರಣೆ ನೀಡಿದವರು ಯಾರು...?

ಜೀವನದಲ್ಲಿ ವಿದ್ಯೆಯೆಂಬ ದೀಪವನ್ನು ಬೆಳಗಿಸುವ ಅಧ್ಯಾಪಕರೋ...?

ಲಾಲಿಸಿ ಮುದ್ದಿಸಿ ಕೊಂದಿರಿ ಅಲ್ಲವೇ ಪೋಷಕರೇ....?

📍
ಯೋಚಿಸಿ....
ಅಧ್ಯಾಪಕರು ಶತ್ರುಗಳಲ್ಲ...

ಎಲ್ಲಾ ಮಕ್ಕಳು ಚೆನ್ನಾಗಿರಬೇಕು ಎಂದು ಪ್ರಾರ್ಥಿಸುವವರು ಮಾತ್ರ...

📍
ಹೃದಯದಲ್ಲಿ ಬೆಂಕಿಜ್ವಾಲೆ ಉರಿಯುತ್ತಿದ್ದರೂ  ಸಮಾಜಕ್ಕೆ ಪ್ರಕಾಶವನ್ನು ಮಾತ್ರ ನೀಡಿದವರು....
ಅಧ್ಯಾಪಕರು....

🕹
ದೀಪದ ಬೆಳಕಿನಂತೆ ಪ್ರಕಾಶ ಬೀರಿದವರು....

ಹೇ ಸಮಾಜವೇ....
ನೀವೆ ಅಧ್ಯಾಪಕರು ಸರಿಯಲ್ಲವೆಂದು ಮಕ್ಕಳಿಗೆ ಕಲಿಸಿಕೊಟ್ಟವರು...

೧೦೯೮....

ಬಾಲಾವಕಾಶ....

ಪೋಕ್ಸೋ.,...

ಚೈಲ್ಡ್ ಲೈನ್.....

ಎಂದು ಹೇಳಿ ಮಗುವಿಗೆ ಧೈರ್ಯ ತುಂಬಿದವರು....

🕹ಮಗುವಿನ ಎದುರಲ್ಲಿ ಏನೆಲ್ಲ ಅಂದಿರಿ ಪೋಷಕರೆ ನೀವು...

* ಆ ಅಧ್ಯಾಪಕರು ಕಲಿಸೋದಿಲ್ಲ

ಕಲಿಸಿದರೂ ಅರ್ಥವಾಗೋದಿಲ್ಲ

ಸುಮ್ಮನೆ ಹೊಡೆಯುತ್ತಾರೆ... ಬಯ್ಯುತ್ತಾರೆ....

ನಾಲಿಗೆ ಸರಿಯಿಲ್ಲ...

*ಪಿಟಿಎ ಮೀಟಿಂಗಿನಲ್ಲಿ ಬೊಬ್ಬಿಟ್ಟು ದೂರಲಿಲ್ಲವೇ ನೀವು....

ಮಗುವಿಗೆ ಅಧ್ಯಾಪಕನ ಮೇಲೆ ಗೌರವ,ಬೆಲೆಯಿಲ್ಲದಾಗಿಸಿದ್ದು ನೀವೇ ಪೋಷಕರೇ.....

ಪ್ರತಿಫಲ.....

ಯಾವುದಕ್ಕೂ ಯೋಗ್ಯವಲ್ಲದ ನ್ಯೂ ಜನ್ ಜನಾಂಗ....

ಎಲ್ಲಾ ಪಾಪಗಳ ತುಂಬಿಕೊಂಡಿರೋ ಯುವ ಜನಾಂಗ..

ದೊಡ್ಡವರನ್ನು ಗೌರವಿಸದವರು.....

ಪೋಷಕರೇ... ನಿಮ್ಮನ್ನು ಕೂಡ ಅನುಸರಿಸದ ಮಕ್ಕಳು...

ಹೆತ್ತವರೇ ಅನುಭವಿಸಿ....

📍
ಅಧ್ಯಾಪಕರಿಗೆ ಶಿಕ್ಷಿಸಲು ಅವಕಾಶ ಕೊಡದಿದ್ದರೆ....

೧- ಸಮಾಜ ಧಾರ್ಮಿಕತೆಯನ್ನು ಕಳೆದು ಕೊಳ್ಳುತ್ತದೆ

೨- ಆತ್ಮಹತ್ಯೆ ಹೆಚ್ಚುತ್ತದೆ...

೩- ಹೆತ್ತವರನ್ನು ಧಿಕ್ಕರಿಸುವ ಮಕ್ಕಳ ಸಮೂಹವು ಬೆಳೆಯುತ್ತದೆ...

೪- ಮದ್ಯ, ಅಮಲು ಪದಾರ್ಥ, ಮೊಬೈಲ್ ಗಳಿಗೆ ಬಲಿಯಾಗುವ ಯುವ ಸಮಾಜದ ಸೃಷ್ಟಿ ಯಾಗುತ್ತದೆ....

೫- ಪ್ರೀತಿ, ದಯೆ, ದಾಕ್ಷಿಣ್ಯ, ಗೌರವ ಇಲ್ಲದ ಕೌಮಾರ, ಯುವಕರ ಸೃಷ್ಟಿ ಯಾಗುತ್ತದೆ...

೬- ಕುಟುಂಬ ಜೀವನದಲ್ಲಿ ಏರುಪೇರು ಸಂಭವಿಸಬಹುದು

೭- ಅಶಾಂತಿ ತುಂಬಬಹುದು
ನ್ಯಾಯ, ನೀತಿ,ಧರ್ಮ ನಾಶವಾಗಬಹುದು

ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲೂ  ಕೆಟ್ಟದ್ದು ಮಾತ್ರ ತುಂಬಬಹುದು, ಕೆಟ್ಟದ್ದನ್ನು ಮಾತ್ರ ಯೋಚಿಸುವಂತಾಗಬಹುದು..

💦💦💦

ಪೋಷಕರೇ....
ಅಧಿಕಾರಿಗಳೇ....
ಜನಸಮೂಹವೇ.....
ಅನುಭವಿಸಿ...

💦 ತಾನು ತೋಡಿದ ಹಳ್ಳಕ್ಕೆ....
ತಾನೇ... ಬಿದ್ದಂತೆ....

*ಒಂದು ಕ್ಷಣ ಚಿಂತಿಸಿ
ಹೊಸ ಸಮಾಜದ ಸಂಕಲ್ಪ...
ಅದು ನಮ್ಮ ಕೈಯಲ್ಲಿ.... ಜೇನಿನ ಗೂಡಲ್ಲಿರುವ ಜೇನಹನಿಯಂತೆ.... ..
🎯🎯🎯🎯🎯


ಕೃಪೆ : ನಾ.ಪಿ‌ ಪೆರಡಾಲ
ಸಂಗ್ರಹ: ಸಿ.ಜಿ ವೆಂಕಟೇಶ್ವರ

ಹನಿಗವನಗಳು (ಸ್ನೇಹ)

ಹನಿಗವನಗಳು

*ಸ್ನೇಹಿತ*

ಅವಳೆಂದಳು
ಬಾ ನನ್ನನಾಲಂಗಿಸು
ನನ್ನ ಸ್ನೇಹಿತ
ಅವನಂದ
ಮೊನ್ನೆ ಹೀಗೇ
ಅಂದಿದ್ದಳು' ಹಿತಾ '


*ವಿಧಿಯಿಲ್ಲ*

ಸ್ನೇಹವನ್ನು ಹಣದಿಂದ
ಕೊಳ್ಳಲು ಸಾದ್ಯವಿಲ್ಲ
ಗೊತ್ತು ಅದರೆ ಅವನ
ಸ್ನೇಹ ಹೊರಗಡೆ ಬಂದರೆ
ಹಣ ಖರ್ಚು ಮಾಡದಿದ್ದರೆ
ಇವನಿಗೆ ವಿಧಿಯಿಲ್ಲ 

30 ಜನವರಿ 2018

ಮರದ ವ್ಯಥೆ (ಸಂಗ್ರಹ)

ಒಂದು ಮರದ ಮೇಲೆ ಸದಾ ಗೂಬೆಯೊಂದು  ಕೂರುತ್ತಿತ್ತು. ಮರಕ್ಕೆ ಇಷ್ಟವಿರಲಿಲ್ಲ.

ಒಂದು ದಿನ ಬಡಗಿ ಮರವನ್ನು ಕಡಿದು ಹಾಕಿದ. ಮರಕ್ಕೆ ಎಲ್ಲಿಲ್ಲದ ಆನಂದ, ಕೊನೆಗೂ ಗೂಬೆಯಿಂದ ಬಿಡುಗಡೆ ದೊರಕಿತು ಎಂಬ ಖುಷಿ. ಆದರೆ, ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ.

ಬಡಗಿ ಆ ಮರವನ್ನು ಕತ್ತರಿಸಿ
ವಿಧಾನ ಸಭೆಯ ಕುರ್ಚಿಗಳಾಗಿ ಮಾಡಿದ

ಸಂಗ್ರಹ : ಸಿ .ಜಿ ವೆಂಕಟೇಶ್ವರ

ಗಜ಼ಲ್ ೨೨ ( ನನ್ನ ನಿನ್ನ ನಡುವೆ) ಕವಿಬಳಗ ವಾಟ್ಸಪ್ ತಂಡದ ಸ್ಪರ್ಧೆಯಲ್ಲಿ ದ್ವಿತೀಯ ಪುರಸ್ಕಾರ ಪಡೆದ ಗಜ಼ಲ್


*ಗಜ಼ಲ್ ೨೨*


ಎಷ್ಟು ನದಿಗಳು ಹರಿದುಹೋದವು ನನ್ನ ನಿನ್ನ ನಡುವೆ
ಎಷ್ಟು  ಬಿಕ್ಕುಗಳು ಸುಳಿದುಹೋದವು ನನ್ನ ನಿನ್ನ  ನಡುವೆ

ಹಮ್ಮು ಬಿಮ್ಮುಗಳ ತಾಕಲಾಟ ಮುಗಿಯದ ಜೂಟಾಟ
ಸಂಬಂಧಗಳು  ಬಳಲಿಹೋದವು ನನ್ನ ನಿನ್ನ ನಡುವೆ

ಸುಳ್ಳುಗಳ ಬೆಳಕಿನಲಿ ಸತ್ಯದ ಸತ್ಯ ಕ್ಕೆ ಕಾರ್ಮೋಡ ಮುತ್ತಿದವು
ಹಗಲುಗಳಲಿ ಕತ್ತಲು ಕವಿದುಹೋದವು ನನ್ನ ನಿನ್ನ ನಡುವೆ

ದಿನ ಮಾಸ ವರುಷಗಳು ಕಳೆದವು ಅನುಸರಿಸಿ ಒಂದನೊಂದು
ಹೊಂದಾಣಿಕೆಯಿಲ್ಲದೇ ದಿನ ಕಳೆದುಹೋದವು ನನ್ನ ನಿನ್ನ ನಡುವೆ

ಸೀಜೀವಿಗೆ ಮುಗಿಯದ ಆಸೆ ಸಂಬಂಧಗಳ ಉಳಿಸಲು  ಬೆಳೆಸಲು
ಕಟ್ಟಿದ ಸೇತುವೆಗಳೆಲ್ಲಾ ಮುರಿದುಹೋದವು ನನ್ನ ನಿನ್ನ ನಡುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*