04 ನವೆಂಬರ್ 2017

ಕನಸು (ನ್ಯಾನೋ ಕಥೆ)

*ನ್ಯಾನೋ ಕಥೆ*

*ಕನಸು*

"ನಮ್ಮ ಮಗಳು  ನಮ್ಮಂತೆ ಕಟ್ಟಡ ಕೆಲಸಗಾರರಾಗದೇ ಇಂತಹ ದೊಡ್ಡ ಕಟ್ಟಡದ ಒಡತಿಯಾಗಬೇಕು ಇದು ನನ್ನ ಕನಸು" ಎಂದು ದೂರದ ಬಳ್ಳಾರಿಯಿಂದ ಬೆಂಗಳೂರಿನಲ್ಲಿ ಕಟ್ಟಡ ಕೆಲಸ ಮಾಡಲು ಬಂದ  ಮಾರಣ್ಣ ತನ್ನ ಶೆಡ್ ನಲ್ಲಿ  ಹೆಂಡತಿಗೆ ರಾತ್ರಿ ಊಟಮಾಡುವಾಗ ಹೇಳಿದನು .ಆಗ ಮಗುವು ತಣ್ಣಗೆ ನಿದ್ರಿಸುತ್ತಿತ್ತು
ಮಾರನೆಯ ದಿನ ತನ್ನ ಮಗುವನ್ನು  ಸೀರೆಯಿಂದಾದ ಜೋಲಿಯಲ್ಲಿ  ಮಲಗಿಸಿ ಕೆಲಸಕ್ಕೆ ಹೊರಟರು .ಮಧ್ಯಾಹ್ನದ ವೇಳೆಗೆ ಮಾರಣ್ಣ ಕೆಲಸದಲ್ಲಿ ನಿರತನಾಗಿದ್ದಾಗ ಮಗಳು ಜೋಲಿಯಿಂದಿಳಿದು ಕಟ್ಟಡದ ಕೆಲಸ ಮಾಡುವ ಕಡೆಗೆ ಅಂಬೆಗಾಲಿಟ್ಟು ಬಂದಳು .ಹತ್ತು ಅಂತಸ್ತಿನ ನಿರ್ಮಾಣದ ಕಟ್ಟಡದಿಂದ ಮೇಲಿನಿಂದ ಒಂದು ಚೂಪಾದ ಸರಳು ಇನ್ನೇನು ಮಗುವಿನ ಮೇಲೆ ಬೀಳುವ ವೇಳೆಗೆ ಓಡಿ ಬಂದ ಮಾರಣ್ಣ ಮಗಳನ್ನು ದೂರ ತಳ್ಳಿ ತಾನು ಮುಂದೆ ಸಾಗಲು ಪ್ರಯತ್ನಿಸಿದ ಅದಾಗಲೇ ಸರಳು ಅವನ ದೇಹ ಸೀಳಿ ರಕ್ತ ಚಿಮ್ಮಿ ಪ್ರಾಣ ಪಕ್ಷಿ ಹಾರಿತ್ತು ಕಣ್ಣು ಮಾತ್ರ ಮುಚ್ಚದೇ  ಅವನ ಮಗಳ ಭವಿಷ್ಯದ ಮನೆ ಕಣ್ಣುಗಳಲ್ಲಿ ಪ್ರತಿಫಲನ ಆಗುತ್ತಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಮದ್ಯವಯಸ್ಸಿನ ನಂತರ ......(ಸಂಗ್ರಹ ಲೇಖನ)

*ನಮ್ಮ ಆತ್ಮೀಯರೊಬ್ಬರು ಕಳುಹಿಸಿದ ಜೀವನದ ಬಗೆಗಿನ ಕೆಲವು ಮೆಲುಕು ಹಾಕುವಂತ ನುಡಿಗಳು*:
*"ಮಧ್ಯವಯಸ್ಸಿನ ನಂತರ"*

೧.  ಜೀವನದ ರಹಸ್ಯ :
       1.ಮಧ್ಯವಯಸ್ಸಿನ ವರೆಗೆ  ಹೆದರ  ಬೇಡಿ....
       2.ಮಧ್ಯವಯಸ್ಸಿನ ನಂತರ : ಯಾವುದಕ್ಕೂ ಬೇಸರ ಪಡಬೇಡಿ.....

೨.  ನೀವು ಸಾಧ್ಯವಾಗುವಷ್ಟು ನಿಮ್ಮ ಜೀವನವನ್ನು ಅನುಭವಿಸಿ...

  ೩.   ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾಗುವವರೆಗೆ ಮುಂದೂಡಬೇಡಿ, ಎಲ್ಲಿಯವರೆಗೆ ನಿಮ್ಮಿಂದ ಸಾಧ್ಯವೋ ಅಲ್ಲಿಯವರೆಗೆ ಮೊದಲೇ ನೀವು ನೋಡಬೇಕೆಂದಿರುವ ಸ್ಥಳಗಳನ್ನು ಭೇಟಿ ಕೊಡಿ, ನೋಡಿ ಬಿಡಿ.

೪.  ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಹಳೆ ಸ್ನೇಹಿತರು ಗುರು ಹಿರಿಯರು ಇವರುಗಳನ್ನು ಬೇಟಿಯಾಗಿಬಿಡಿ,  ಮುಂದೆ ಅವರೆಲ್ಲರನ್ನು ನೋಡುವ ಅವಕಾಶ ಸಿಗುತ್ತೋ ಇಲ್ಲವೋ.

೫.  ಬ್ಯಾಂಕುಗಳಲ್ಲಿ ಇಟ್ಟ ನಿಮ್ಮ ಹಣ ನಿಮ್ಮದಾಗಿ ಇರದಿರಬಹುದು, ಅದಕ್ಕೇ ಅದನ್ನ ಖರ್ಚು ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಅನುಭವಿಸಿ, ಇದಕ್ಕಾಗಿ ನೀವು ನಾಳೆಯ ಬಗ್ಗೆ ಯೋಚಿಸ ಬೇಕಿಲ್ಲ

೬.  ಏನೆಲ್ಲಾ ತಿನ್ನ ಬೇಕೆನಿಸುತ್ತೋ ತಿಂದು ಬಿಡಿ, ನೀವು  ಖುಷಿ ಯಾಗಿರುವುದು ಮಾತ್ರ ಮುಖ್ಯ ಆದರೆ ನಿಮ್ಮ  ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳನ್ನು ಯಾವಾಗಲೂ ತಿನ್ನಿ, ಅದೇ ನಿಮ್ಮ ಆರೋಗ್ಯಕ್ಕೆ ಹಾನಿಕರವಾದವುಗಳನ್ನು ತಿನ್ನಲೇಬೇಕೆನಿಸಿದಲ್ಲಿ ಒಮ್ಮೊಮ್ಮೆ ಮಾತ್ರ ಸ್ವಲ್ಪ  ಸ್ವಲ್ಪವೇ ತಿನ್ನಿ.

೭.  ಅನಾರೋಗ್ಯವನ್ನು ಸರಿಯಾದ ರೀತಿಯಲ್ಲೇ ಕ್ರಮಿಸಿ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಪ್ರತಿಯೊಬ್ಬರೂ ಹುಟ್ಟು, ವಯಸ್ಸು, ಅನಾರೋಗ್ಯ, ಮತ್ತು ಸಾವು ಈ ಚಕ್ರದಲ್ಲೇ ಸುತ್ತಬೇಕು. ಇದಕ್ಕೆ ಶಾಶ್ವತವಾದ   ಪರಿಹಾರ ಎಂದೂ ಇಲ್ಲವೇ ಇಲ್ಲ. ಇದೇ ಜೀವನ.

೮.  ನೀವು ಅನಾರೋಗ್ಯವಾಗಿರುವಾಗ ಹೆದರುವುದೂ ಬೇಡ, ಬೇಸರವೂ ಬೇಡ. ನಿಮ್ಮದೇನಾದರೂ ಬಾಕಿ/ ನೀವು ಪರಿಹರಿಸಬೇಕಾದ /ಇತ್ಯರ್ಥವಾಗಬೇಕಾದ ಸಮಸ್ಯೆ ಇದ್ದರೆ ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಮತ್ತು ನಿರಾಳರಾಗಿ.

೯.  ನಿಮ್ಮ ದೇಹವನ್ನು ವೈದ್ಯರೂ, ಜೀವನವನ್ನು ದೇವರೂ/ ಪ್ರಕೃತಿಯೂ ಮತ್ತು ನಿಮ್ಮ ಮನಸ್ಥಿತಿಯನ್ನು ನೀವೂ ನೋಡುತ್ತಿರಿ.

೧೦.  ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ, ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ, ಮತ್ತು  ಸಂತೋಷಗಳಿಗೆ  ಚಿಂತೆಗಳನ್ನು ಬದಲಿಸ ಬಹು ದಾದರೆ ಹಾಗೇ ಮಾಡಿ .

೧೧. ಮಕ್ಕಳು ಅವರ ಭವಿಷ್ಯವನ್ನು ಖುದ್ದು ಮಾಡಿಕೊಳ್ಳುತ್ತಾರೆ. ಅವರ ಬಗ್ಗೆ ನೀವು ಜಾಸ್ತಿ ಚಿಂತಿಸುವುದು ಬೇಡ.

೧೨.   ನಾಲ್ಕು ಖಜಾನೆಯನ್ನು ಸರಿಯಾಗಿ ನೋಡಿಕೊಳ್ಳಿ....
 
             ೧.   ನಿಮ್ಮ  ದೇಹ : ನಿಮ್ಮ ಆರೋಗ್ಯ ಮತ್ತು ದೇಹಸ್ಥಿತಿಯ  ಬಗೆಗೆ ಜಾಸ್ತಿ  ಕಾಳಜಿ    ನಿಮ್ಮದೇ ಇರಲಿ
          ೨.     ನಿಮ್ಮ  ಆರ್ಜಿತ  ಧನ ನಿಮ್ಮ  ಕೈಯಲ್ಲೇ ಇಟ್ಟುಕೊಳ್ಳುವುದು  ಅತ್ಯಂತ ಒಳ್ಳೆಯದು.
          ೩.     ನಿಮ್ಮ ಹಳೆಯ ಸಂಗಾತಿ ಅತ್ಯಂತ ಅಮೂಲ್ಯ ಖಜಾನೆಯಿದು, ಪ್ರತಿ ಕ್ಷಣವೂ ಅನ್ಯೋನ್ಯವಾಗಿ ಸಹಚರರಂತೆ ಬಾಳಲು ಪ್ರಯತ್ನ ಪಡಿ , ನಿಮ್ಮಿಬ್ಬರಲ್ಲಿ ಒಬ್ಬರು ಮೊದಲು ಕೈ ಬಿಡುವಿರಿ ( ಈ ಜಗದಿಂದ)....
         ೪.     ನಿಮ್ಮ ಹಳೆಯ ಸ್ನೇಹಿತರು:  ಇವರನ್ನು ಸಿಗಲು ಸಾಧ್ಯವಾಗುವ ಪ್ರತಿ ಕ್ಷಣಗಳನ್ನೂ ಸಿಕ್ಕಿ ಅಸ್ವಾದಿಸಿ, ಏಕೆಂದರೆ ಕಳೆಯುತ್ತಿರುವ ಪ್ರತಿ ಕ್ಷಣಗಳೂ ನಿಮಗೆ ಅಮೂಲ್ಯವಾಗಿ ಕಡಿಮೆಯಾಗುತ್ತಲಿರುತ್ತದೆ.

 13. ದಿನಾ ನೀವು ಅವಶ್ಯ  ಮಾಡಲೇಬೇಕಾದ ಮುಖ್ಯ ಎರಡು ಕೆಲಸಗಳು  " ಹಸನ್ಮುಖಿಯಾಗಿ" ಮತ್ತು "ನಗುತ್ತಿರಿ"

14. ಹರಿಯುತ್ತಿರುವ ನೀರು ಹಿಂದಕ್ಕೆ ತಿರುಗದು... ಅಂತೆಯೇ ನಮ್ಮ ಜೀವನ..  ಅದಕ್ಕೇ ಸಂತಸವಾಗಿಸಿರಿ.

15. ದೇವರು ನಿಮ್ಮ ಚೆನ್ನಾಗಿ ಖುಷಿಯಲ್ಲಿಟ್ಟಿರಲಿ.

*ಸಂಗ್ರಹ*:
*ಸಿ.ಜಿ.ವೆಂಕಟೇಶ್ವರ*

ಈ ವಿಷಯಗಳನ್ನು ಸಾಧ್ಯವಾದಷ್ಟೂ ಬೇಕಾದವರೊಡನೆ ಹಂಚಿಕೊಳ್ಳಿ....
🙏🌹

🌷🌷🌷🌷🌷🌷🌷🌷🌷

03 ನವೆಂಬರ್ 2017

ಉಂಡಾಡಿ ಗುಂಡ (ಕಥನ ಕವನ)

ಉಂಡಾಡಿಗುಂಡ*

ನಮ್ಮೂರ ರಾಮನಿಗೆ ಮಕ್ಕಳಿರಲಿಲ್ಲ
ದೇವರಿಗೆ ಬೇಡುವುದ ಮರೆಯಲಿಲ್ಲ
ಹಾಲುಕುಡಿದಪ್ಪನಿಗೆ ಹರಕೆ ಹೊತ್ತನು
ದಿನಕಳೆಯುತಲಿ ಸಂತಾನ  ಪಡೆದನು//

ಮಗನ ಬಾಲ ಲೀಲೆಗೆ ಮನಸೋತನು
ಅತಿಯಾಗಿ ಪ್ರೀತುಸಿ ಮುದ್ದಿಸಿದನು
ಮಗ ಉಡಾಳರ ಸಂಘ ಮಾಡಿ  ಕೆಟ್ಟನು
ವಿದ್ಯೆ ಕಲಿಯಲು ಬಿಟ್ಟು ಅಲೆದನು //

ಅಪ್ಪನ ಅಮ್ಮನ  ಮಾತಿಗೆ ಬೆಲೆಯುಲ್ಲ
ಊರಸುತ್ತುವದ ಅವನು  ಮರೆಯಲಿಲ್ಲ
ಹಣವನ್ನು ಖರ್ಚು ಮಾಡಿದ ನೀರಿನಂತೆ
ಅಪ್ಪ ಅಮ್ಮರಾದರು ಭಿಕ್ಷುಕರಂತೆ //

ಮದುವೆ ಮಾಡಿದರು ವಧುವ ತಂದು
ಚಿಗುರಿತು ಆಸೆ ಮಗ ಸುಧಾರಿಸುವನೆಂದು
ನಾಯಿಬಾಲ ಡೊಂಕು ಅವನು ಉಂಡಾಡಿ
ಸಾಕುತ್ತಿದ್ದಾಳೆ ಸೊಸೆ ಎಲ್ಲರ ಕೂಲಿ ಮಾಡಿ//

ರಾಮನಿಗೆ ಆಸೆ ಮೊಮ್ಮಕ್ಕಳ ನೋಡಲು
ಮಗನ ಹಾತೊರೆವ ಹೆಂಡ ಕುಡಿಯಲು
ಸೊಸೆಗೂ ಆಸೆ ಮಗುವ  ತಾಯಿಯಾಗಲು
ಆದರೆ ನಿರ್ಧಾರ ಮಡಿದಳು ಬಂಜೆಯಾಗಲು //

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

02 ನವೆಂಬರ್ 2017

ಸ್ಕೂಲ್ ಬಸ್ (ನ್ಯಾನೋ ಕಥೆ)

ಸ್ಕೂಲ್ ಬಸ್
(ನ್ಯಾನೋ ಕಥೆ)

"ಏಯ್ ಹುಡುಗಿ ಎಮ್ಮೆ ಆಕಡೆ ಹೊಡಿ" ಎಂದು ಸ್ಕೂಲ್ ಬಸ್ ಡ್ರೈವರ್ ಗದರಿದಾಗ ಗೌರಿ ಓಡಿಬಂದು ಎಮ್ಮೆಗಳನ್ನು ರಸ್ತೆ ಬದಿಗೆ ಒಡೆದಳು. ಆಗ ಬಸ್ ನಲ್ಲಿದ್ದ ಮಕ್ಕಳು ಇವಳಿಗೆ ಟಾಟ ಮಾಡಿದರು .ದೂಳೆಬ್ಬಿಸುತ್ತಾ ಬಸ್ ಮುಂದೆ ಚಲಿಸಿದಾಗ ಈ ಬಾಲಕಿಯ ಮನದಲ್ಲಿ ಪ್ರಶ್ನೆಗಳ ಸುರಿಮಳೆ.
" ನಮ್ಮಪ್ಪ ಹಾವು ಕಚ್ಚಿ ಸಾಯದಿದ್ದರೆ ನಾನು ಸಹ ಈ ಮಕ್ಕಳಂತೆ ಶಾಲೆಗೆ ಹೋಗುತ್ತಿರಲಿಲ್ಲವೆ? ನಮ್ಮಪ್ಪನ ಮರಣದ ನಂತರ ನಮ್ಮ ಚಿಕ್ಕಪ್ಪರು  ನಮ್ಮಮ್ಮನಿಗೆ ಮೋಸ ಮಾಡಿ ಹೆಬ್ಬೆಟ್ಟು ಹಾಕಿಸಿಕೊಂಡು ನಮ್ಮ ಆಸ್ತಿ ಲಪಟಾಯಿಸಿಕೊಂಡು ನಮ್ಮನ್ನು ಬೀದಿಪಾಲು ಮಾಡದಿದ್ದರೆ ನಾನು ಶಾಲೆಗೆ ಹೋಗುತ್ತಿರಲಿಲ್ಲವೇ? ನಮ್ಮೂರಿನ ಸಾಹುಕಾರರ ಬಳಿ ನಮ್ಮಮ್ಮ ನನ್ನ ಓದಿಗೆ ಸಾಲ ಕೇಳಿದಾಗ ಬಾಯಿಗೆ ಬಂದಂತೆ ಬೈಯದಿದ್ದರೆ.ಅಲ್ಪ ಸ್ವಲ್ಪ ಸಹಾಯ ಮಾಡಿದ್ದರೆ ನಾನು ಶಾಲೆಗೆ ಹೋಗುತ್ತಿರಲಿಲ್ವೇ? ನಾನು ಓದದಿದ್ದರೂ ಕೂಲಿ ನಾಲಿ ಮಾಡಿ ನನ್ನ ಸಾಕುವ ನನ್ನ ಅಮ್ಮನ ಸಾಕುವ ಶಕ್ತಿ ನನಗೆ ಬರುವುದಿಲ್ಲವೆ ? ಬರಿ ಓದಿದರೆ ಮಾತ್ರ ಜೀವನ ಮಾಡಬಹುದೆ?
ಈಗೇ ನೂರಾರು ಪ್ರಶ್ನೆಗಳು ತಲೆಯಲ್ಲಿ ಗುಯ್ ಗುಡುವಾಗ "ಎಯ್ ಹುಡುಗಿ ಹೊಟ್ಟೆಗೆ ಏನ್ ತಿಂತಿಯಾ ?ಎಮ್ಮೆಗಳು ರಾಗಿ ಹೊಲ ಮೇಯ್ತಾ ಅವೆ ಹೊಡ್ಕ" ಎಂದು ರಂಗಣ್ಣನವರು ಗದರಿದಾಗ ಬೆಚ್ಚಿ ಒಡೋ ಬರದಲ್ಲಿ ಕಲ್ಲಿಗೆ ಎಡವಿ ಬರಿಗಾಲಲ್ಲಿದ ಅವಳ ಕಾಲಿಗೆ ಬೆಣಚು ಕಲ್ಲು ತಾಗಿ ರಕ್ತ ಚಿಲ್ಲನೆ ಚಿಮ್ಮಿತು .ಗೌರಿಯು ನೋವಿನಿಂದ ಚೀರಿದಳು ಮಗಳ ದ್ವನಿ ಕೇಳಿ ದೂರದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಓಡೋಡಿ ಬಂದು ಮಗಳ ಸ್ಥಿತಿ ಕಂಡು ಅವಳ ಆಕ್ರಂದನ ಮುಗಿಲು ಮುಟ್ಟಿತು .ರಸ್ತೆಯಲ್ಲಿ ಜನಸೇರಿದರು ದೂರದಲ್ಲಿ ಒಂದು ವಾಹನ  ರಸ್ತೆಯಲ್ಲಿರುವ ಜನರ  ಚದುರಿಸಲು ಕಿವಿ ಕಿತ್ತುಹೋಗುವಂತೆ   ಹಾರ್ನ್ ಮಾಡಿತು ಎಲ್ಲರೂ ತಿರುಗಿ    ನೋಡಿದರೆ  ಮಕ್ಕಳ ಬಿಟ್ಟು ಹಿಂದಿರುಗಿದ ಅದೇ   ಶಾಲಾ ಬಸ್ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನಗು (ಹನಿಗವನಗಳು)

*೧*
*ಪರಿಣಾಮ*

ಕಛೇರಿಯಿಂದ ಬರುವ ನನ್ನ
ಸ್ವಾಗತಿಸುತ್ತಿದ್ದಳು ತೋರಿ
ನಗು ಮೊಗ
ಅದರ ಪರಿಣಾಮ ಮನೆಯಲ್ಲಿ
ಮಗು ನಗು

*೨*

*ಕರ್ಮ*
ನಗುವುದು ಸಹಜ ಧರ್ಮ
ನಗಿಸುವುದು ಪರ ಧರ್ಮ
ಇವೆರಡೂ ಇಲ್ಲದಿದ್ದರೆ
ನಿಮ್ಮ ಕರ್ಮ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*