18 May 2021

ಮಧುರ ಮೈತ್ರಿ .ಕಥೆ


 


"ಮಧುರ ಮೈತ್ರಿ* ಕಥೆ

ಅಲ್ಲಿ ನಗುವಿತ್ತು, ಸಂಭ್ರಮವಿತ್ತು, ಸಂತಸವಿತ್ತು, ದಂಪತಿಗಳು ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಮನಬಿಚ್ಚಿ ಮಾತನಾಡುತ್ತಿದ್ದರು, ಹೃದಯತುಂಬಿ ನಗುತ್ತಿದ್ದರು .

ಬೆಳೆಸೆಗೆ ಬಂದ ರಾಗಿ ಹೊಲದ ಬದುವಿನ ಮೇಲೆ ಕುಳಿತ ದಂಪತಿಗಳು ಆಗ ತಾನೆ ನಾಗಪ್ಪನ ಪೂಜೆ ಮಾಡಿ ಹುತ್ತಕ್ಕೆ ಹಾಲೆರೆದು ಮುತೈದೆಯರಿಗೆ ಬಾಗಿನ ನೀಡಿ, ಮನೆಗೆ ಹೋಗುವ ಮುನ್ನ ಲೋಕಾಭಿರಾಮವಾಗಿ ಮಾತನಾಡುತ್ತಾ, ನಗುತ್ತಾ, ಇರುವುದನ್ನು ಕಂಡ ಮರದ ಗಿಳಿಗಳು ಇವರನ್ನೇ ನೋಡುತ್ತಿದ್ದವು, ಹೊಲದ ಸನಿಹ ಇರುವ ರಸ್ತೆಯಲ್ಲಿ ಹೋಗುವ ಬೈಕ್ ಸವಾರರ ಕಣ್ಣುಗಳು ಇವರ ಮೇಲೆ ಬೀಳದಿರಲಿಲ್ಲ.

ಯಾರು ತಾನೆ ನೋಡಲ್ಲ ಹೇಳಿ, ಜರೀ ಪಂಚೆ ,ಕೆಂಪನೆಯ ಅಂಗಿ ತೊಟ್ಟ ಸ್ಪುರದ್ರೂಪಿ ಸುಜಯ್ ಯಾವ ಸಿನಿಮಾ ನಟನಿಗಿಂತ ಕಡಿಮೆ ಇರಲಿಲ್ಲ.ಜೊತೆಗೆ ಕುಳಿತ ನೀಲಿ ಸಾಂಪ್ರದಾಯಿಕ ಸೀರೆ ಉಟ್ಟು, ಅದಕ್ಕೆ ಹೊಂದಿಕೆಯಾಗುವ ರವಿಕೆ ತೊಟ್ಟು, ಎಡಕ್ಕೆ ಬಾಗಿದ ತುರುಬಿಗೆ  ತಮ್ಮ ಹೊಲದಲ್ಲಿ ಬೆಳೆದ ಮಲ್ಲಿಗೆ ಕಾನಕಾಂಬರ ಹೂಗಳ ತಾನೆ ಕಟ್ಟಿಕೊಂಡು ಮುಡಿದಿದ್ದಳು ಆರತಿ, ಮೆಹೆಂದಿಯ ರಂಗು ಅವಳ ಅಂದವನ್ನು ಇನ್ನಷ್ಟು ಹೆಚ್ಚಿಸಿತ್ತು.

"ಇದೆಲ್ಲಾ ಹೇಗೆ ಸಾದ್ಯವಾಯಿತು ಸುಜಯ್, ನೀನು ಉತ್ತರ ನಾನು ದಕ್ಷಿಣ, ನೀನು ಹಳ್ಳಿಯ ರೈತನ ಮಗ ನಾನು ಪಟ್ಟಣದ ಕೆ ಎ ಎಸ್ ಅಧಿಕಾರಿಯ ಮಗಳು, ನೀನು ಪಕ್ಕಾ ಭಾರತೀಯ ಸಂಪ್ರದಾಯ ಪಾಲಿಸುವವ ನಾನು ಪಾಶ್ಚಾತ್ಯ ಸಂಸ್ಕೃತಿಯ ಆರಾಧಕಳು    ಆದರೂ ನಾವು ಜೊತೆಯಾಗಿದ್ದು ಹೇಗೆ "

" ನಿನಗೇ ಗೊತ್ತು ಆರತಿ ,ಇದು ಶುರುವಾಗಿದ್ದು ,ತುಮಕೂರು ಯೂನಿವರ್ಸಿಟಿ ಕಲಾ ಕಾಲೇಜಿನಲ್ಲಿ ನಾವಾಗ ಬಿ ಎ ಓದುತ್ತಿದ್ದೆವು ... ಪ್ರೆಶರ್ಸ್ ವೆಲ್ಕಂ ಸಮಾರಂಭದಲ್ಲಿ ನನಗೆ ಹಾಡುವ ಅವಕಾಶ ಸಿಕ್ಕಿತು, ಮೈಕ್ ಮುಂದೆ ನಿಂತು.  " ನೀನೊಂದು .....ಮುಗಿಯದ ಮೌನ.......   ನಾನೇಗೆ.....ತಲುಪಲಿ ನಿನ್ನ......." ಎಂಬ ಹಾಡನ್ನು ಹಾಡಿ ನಾನು ಮುಗಿಸುವ ಮುನ್ನವೇ ಕರತಾಡನ ಮುಗಿಲು ಮುಟ್ಟಿತ್ತು. ಮತ್ತೊಮ್ಮೆ ಅದೇ ಹಾಡು ಹಾಡಲು ಒನ್ಸ್ ಮೋರ್ ಅಂದರು, ಎರಡನೆಯ ಬಾರಿಗೆ ಹಾಡನ್ನು ಹಾಡಿ  ಮುಗಿಸಿದಾಗ ಶಿಳ್ಳೆಗಳ ಜೊತೆ ಚಪ್ಪಾಳೆ ಸದ್ದು ಕೇಳುತ್ತಲೇ ಇತ್ತು ,ಅದರಲ್ಲೂ ಎಲ್ಲರೂ ಚಪ್ಪಾಳೆ ನಿಲ್ಲಿಸಿದರೂ ,ನೀನು ಮಾತ್ರ ಮೈಮರೆತಂತೆ ಚಪ್ಪಾಳೆ ತಟ್ಟುತ್ತಲೇ ಇದ್ದೆ ಎಲ್ಲರೂ ನಿನ್ನತ್ತ ನೋಡಿದಾಗ ನಿನ್ನ ಗೆಳತಿಯರು ನಿನ್ನ ಕೈಗಳನ್ನು ಹಿಡಿದಾಗ ಮಾತ್ರ ನಿನ್ನ ಚಪ್ಪಾಳೆ ನಿಂತಿತು."

"ಹೌದು ಸುಜಯ್ ಈಗ ನನಗೆಲ್ಲಾ ನೆನಪಾಗುತ್ತಿದೆ. ನಮ್ಮಪ್ಪ ಗೆಜೆಟೆಡ್ ಅಧಿಕಾರಿಯಾಗಿದ್ದರಿಂದ ನಾನು ಚಿಕ್ಕವಳಿದ್ದಾಗಿನಿಂದ ಕಾನ್ವೆಂಟ್ ಶಾಲೆಯಲ್ಲಿ ಬೆಳೆದವಳು ಆ ಪ್ರಭಾವ ನನ್ನ   ಉಡುಗೆ ,ತೊಡುಗೆ, ಆಹಾರ ವಿಹಾರ ಎಲ್ಲದರ ಮೇಲೆ ಕಂಡುಬಂತು, ನಾನು ಕೂಡಾ ಅಧಿಕಾರಿಯಾಗಬೇಕೆಂಬ ಗುರಿಯೊಂದಿಗೆ ಡಿಗ್ರಿ ಮಾಡಲು ಯೂನಿವರ್ಸಿಟಿ ಆರ್ಟ್ಸ್ ಕಾಲೇಜಿಗೆ ಸೇರಿದೆ.
ನಿನ್ನ ಹಾಡು ನನ್ನ ಮಂತ್ರಮುಗ್ದಗೊಳಿಸಿತು.

" ಮಂತ್ರವೋ ,,ಮುಗ್ದವೋ ,,ನೀನು ಮಾರನೆ ದಿನ ಬಂದು ನನಗೆ ಐ ಲವ್ ಯೂ  ಹೇಳಿದಾಗ ಮಂತ್ರ, ತಾಯಿತ ಕಟ್ಟಿಸಿಕೊಳ್ಳುವಂತೆ ಶಾಕ್ ಆಗಿ ಬೆದರಿದ್ದೆ,
ನಾನು ನಿನಗೆ ತಕ್ಕವನಲ್ಲ , ಅಪ್ಪ ರೈತನಾಗಿ ಕಷ್ಟ ಪಡುತ್ತಿರುವರು,  ನಾನು ಓದಿ ಲೆಕ್ಚರ್ ಆಗಬೇಕು ಅಪ್ಪ, ಅಮ್ಮನನ್ನು ಸುಖವಾಗಿ ನೋಡಿಕೊಳ್ಳಬೇಕು, ಸುಮ್ಮನೆ  ನನ್ನ ಪಾಡಿಗೆ ನನ್ನ ಬಿಡು ಎಂದು  ಅಂಗಲಾಚಿದೆ" ಎಂದು ನೆನೆಪು ಬಿಚ್ಚಿದ ಸುಜಯ್.

"ಆ..ಹಾ... ನಾನು ಬಿಟ್ಟೆನೆ ? ಬಿಡಲಿಲ್ಲ , ಈಗಲೂ ಬಿಟ್ಟಿಲ್ಲ ನೋಡು ನಿನ್ನ ಪಕ್ಕದಲ್ಲೇ ಕೂತಿರುವೆ "ಎಂದು ಮೈಗೆ ಮೈ ತಾಗಿಸಿ ಹಿತವಾಗಿ ಗುದ್ದುತ್ತಾ ಕೇಳಿದಳು ಆರತಿ.

" ಹೌದು ಮಾರಾಯ್ತಿ ನಿನ್ ಎಲ್ಲಿ ಸುಮ್ನೆ ಬಿಟ್ಟೆ ?ಪ್ರೀತಿ ಒಪ್ಪದಿದ್ದರೆ ವಿಷ ಕುಡಿಯುವೆ ಎಂದು ವಿಷದ ಬಾಟಲ್ ಅನ್ನು ಒಳ್ಳೆಯ ವಾಟರ್ ಬಾಟಲ್ ತರ ಯಾವಾಗಲೂ ಆ ಇಂಪೋರ್ಟೆಡ್ ಬ್ಯಾಗ್ ನಲ್ಲಿ ಇಟ್ಕೊಂಡು ಪದೇ ಪದೇ ಹೆದರಿಸುತ್ತಿದ್ದೆ, ಅದನ್ನು ನೋಡಿ , ಡಿಗ್ರೀ ಮುಗಿಯುವ ಮೊದಲೇ ಮದುವೆ ಬೇಡ ಎಂಬ  ಒಂದು ಷರತ್ತಿನ ಮೇಲೆ ನಿನ್ನ ಪ್ರೀತಿಸಲು ಒಪ್ಪಿದ್ದು.

"ಹೌದು ಕಣೋ , ನಿನಗೆ ಇಷ್ಟ ಇಲ್ಲದಿದ್ದರೂ ಜೀನ್ಸ್ , ಮತ್ತು ಮಾಡ್ ಡ್ರೆಸ್ ಹಾಕಿಸಿ ಕಾಲೇಜಿಗೆ ಬಂದಾಗ ಹುಡುಗಿಯರು ನಿನ್ನೇ ನೋಡಿದಾಗ ಅವರ ಜೊತೆ ಜಗಳ ಮಾಡಿದ್ದು ನೆನಪಿದೆಯಾ?"

" ಅಯ್ಯೋ ನೆನಪಾ!?  ಭಯಂಕರ ನೆನಪು ಅವತ್ತು ಪ್ರಿನ್ಸಿಪಾಲ್ ಬರದಿದ್ದರೆ ಆ ಸುರೇಖಾ ಳನ್ನು ಅದೇನು ಮಾಡುತ್ತಿದ್ದೆಯೋ ಮೊದಲ ಬಾರಿ ಇಡೀ ಕಾಲೇಜು ನಿನ್ನ ಮಾರಿ ರೂಪ ನೋಡಿತ್ತು " ಎಂದು ಜೋರಾಗಿ ನಕ್ಕ ಸುಜಯ್

"ಹೌದು ಮತ್ತೆ ನನ್ ಹುಡ್ಗನ್ನ ಲೈನ್ ಹಾಕೋಕೆ ಬಂದ್ಲು ಆ ಬಿತ್ರಿ ಬಿಡ್ತೀನಾ ನಾನು? .
ನಮ್ಮ ಪ್ರೀತಿ ವಿಷಯ ಮನೇಲಿ ಗೊತ್ತಾಗಿ ಅಪ್ಪಾ ಕಿರುಚಾಡಿದ್ರು ,ಚಿಕ್ಕವಳಿದ್ದಾಗಿಂದ ನನ್ ಹಠ ನೋಡಿದ್ದ ಅಪ್ಪ ,ಕೊನೆಗೆ ಏನಾರ ಮಾಡ್ಕೊಂಡು ಹಾಳಾಗೋಗು ಅಂದ್ರು, ಅದೇ ನಮ್ ಮದುವೆಗೆ ಗ್ರೀನ್ ಸಿಗ್ನಲ್,
ಡಿಗ್ರಿ ಮುಗೀತು ಮದುವೆ ಆಗೋಣ ಬಾ ಎಂದು ನಾನು ಕೇಳಿದಾಗ ನಿಂದು ಅದೇ ಹಳೇ ರಾಗ... ಲೆಕ್ಚರ್.... ರೈತರು.....ಕಷ್ಟ.....
ಕೊನೆಗೂ ಎರಡು ವರ್ಷ ಮದುವೆ ಬೇಡ ಎಂದೂ ನಾನೂ ತೀರ್ಮಾನ ಮಾಡಿ  ನೀನು ಮಾನಸ ಗಂಗೋತ್ರಿಯಲ್ಲಿ ಎಂ ಎ ಮಾಡಲು ಹೊರಟೆ   ನಾನು ಕೆ ಎ ಎಸ್ ಗೆ ಓದಲು ಬೆಂಗಳೂರಿಗೆ ಹೋದೆ, ಹೋಗುವಾಗ ನಿನಗೊಂದು ವಾರ್ನಿಂಗ್ ಕೊಟ್ಟಿದ್ದೆ ,"ವಾರಕ್ಕೊಮ್ಮೆ ಪತ್ರ ಬರೆಯದಿದ್ದರೆ ನಿನ್ನ ಕಥೆ ಅಷ್ಟೇ." ಎಂದು

" ಹದಿನೈದು ದಿನ ನನ್ನ ಕಾಗದ ಬರದಿದ್ದಾಗ ನೀನು ಹುಡುಕಿಕೊಂಡು ನಮ್ಮ ಹಳ್ಳಿ ಶೆಟ್ಟಿಹಳ್ಳಿ ಪಾಳ್ಯಕ್ಕೆ ಕಪ್ಪು ಕಾರಲ್ಲಿ ಬರ್... ಎಂದು ಡುಮು ಡುಮು ಮುಖದಲ್ಲಿ ಬಂದೆ. ಅಂದು ನಮ್ಮ ಅಪ್ಪನ ಹನ್ನೊಂದು ದಿನದ ತಿಥಿ ಕಾರ್ಯ ನೋಡಿ ನಿನ್ನ ಕಣ್ಣಲ್ಲಿ ನಾನು ಎರಡು ಹನಿ ಕಂಡೆ, " ಎಂದು ದೀರ್ಘವಾಗಿ ಉಸಿರು ಬಿಟ್ಟು ರಾಗಿಯ ಹೊಲದ ಕಡೆ ನೋಡುತ್ತಾ ಹೇಳಿದ ಸುಜಯ್.

" ಅಪ್ಪನಿಗೆ ಇಷ್ಟ ಇಲ್ಲದಿದ್ದರೂ  ಒಪ್ಪಿಸಿ ದೇವರಾಯನದುರ್ಗ ದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದೆವು , ಅಪ್ಪ ಹಣ ಕೊಡುವೆ ಏನಾದರೂ ಬಿಸಿನೆಸ್ ಮಾಡಿ ಇದನ್ನಾದರೂ ಕೇಳು , ಹಳ್ಳಿಗೆ ಹೋಗಬೇಡ ಎಂದಾಗ , ನೀನು ಅದಕ್ಕೆ ಒಪ್ಪಲಿಲ್ಲ ಅದಕ್ಕೆ ನಿನ್ನೊಂದಿಗೆ ಹಳ್ಳಿಗೆ ಬಂದು ಬಿಟ್ಟೆ ಅಲ್ವ? ಪ್ರಶ್ನಿಸಿದಳು ಆರತಿ

" ಹೌದು ನೀನು ಮೊದಲು ನಮ್ಮ ಹಳ್ಳಿಗೆ ಬಂದಾಗ ನಮ್ಮ ಹಳ್ಳಿಯ ಪಡ್ಡೆ ಹುಡುಗರು ಮೊಳಕಾಲ‌ ಮೇಲಿನ ನಿನ್ನ ಮಿಡಿಯನ್ನೇ  ಜೊಲ್ಲು ಸುರಿಸಿಕೊಂಡು ನೋಡುತ್ತಿದ್ದುದನ್ನು ನಾನು ನಿನ್ನ ಗಮನಕ್ಕೆ ತಂದಾಗ ಅವತ್ತಿನಿಂದ ಈ ರೀತಿಯಾಗಿ ಸೀರೆ ಉಡುತ್ತಿರುವೆ ಎಂದು ಹೆಮ್ಮೆಯಿಂದ ಆರತಿಯ ಕಡೆ ನೋಡಿದ ಸುಜಯ್.

"   ಹೌದು ಸುಜಯ್  ನೀನು ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವೆ, ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವೆ ನಮ್ಮದು ದೇವರೇ ಬೆಸೆದ ಮಧುರ ಮೈತ್ರಿ .
ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ  ನೀನು ಇರುವಾಗ , ಒಳ್ಳೆಯ ಅಮ್ಮನಂತಹ ಅತ್ತೆ, ಸುಂದರವಾದ ರಾಗಿ ಹೊಲ ,ಇದೆಲ್ಲಾ ಇರುವಾಗ ಇನ್ನೇನು ಬೇಕು..."

ಮಧ್ಯ ದಲ್ಲೆ ಬಾಯಿ ಹಾಕಿ ಹೇಳಿದ
" ನಮ್ದು ಅಂತ ಒಂದು ಜೀವ...? ಮದುವೆಯಾಗಿ ಎರಡು ವರ್ಷಗಳ ನಂತರವೂ ನಮಗೊಂದು ಮಗು ಆಗಿಲ್ಲ ಅದೊಂದೇ ಕೊರಗು ಚಿನ್ನ "ಎಂದು ಬೇಸರದಿಂದ ನುಡಿದ ಸುಜಯ್.

" ಏಯ್ ಅದ್ಯಾಕೆ ಅಷ್ಟು ಬೇಜಾರ್ ಮಾಡ್ಕೊತಿಯಾ? ನಮಗೇನು ಮಹಾ ವಯಸ್ಸು ಆಗಿದೆ ? ಭಗವಂತ ಕಣ್ ಬಿಟ್ರೆ ಅದ್ಯಾವ ಲೆಕ್ಕ ....ಎಂದು ಥೇಟ್ ಹಳ್ಳಿಯ ಹೆಂಗಸಂತೆ ಮಾತನಾಡಿದಾಗ ರತ್ನಪಕ್ಷಿ( ಸಂಬಾರ್ ಗಾಗೆ) ಅವರ ಮುಂದೆ ಹಾರುತ್ತಾ ಹೋಗಿ ಮರದಲ್ಲಿ ‌ಕುಳಿತಿತು.....

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು

No comments: