23 ಮಾರ್ಚ್ 2025

ಆಸ್ತಿಕರ ಹಾಗೂ ಚಾರಣಿಗರ ಮೆಚ್ಚಿನ ತಾಣ ಎಸ್ ಆರ್ ಎಸ್ ಬೆಟ್ಟಗಳು.



 ಆಸ್ತಿಕರ  ಹಾಗೂ ಚಾರಣಿಗರ ಮೆಚ್ಚಿನ ತಾಣ ಎಸ್ ಆರ್ ಎಸ್ ಬೆಟ್ಟಗಳು.


ತುಮಕೂರಿನಿಂದ ರಾಮನಗರ ತಲುಪಿ ಅಲ್ಲಿನ ಹೈವೆ ಪಕ್ಕದ ಕಾಮತ್ ಹೋಟೆಲ್ ‌ನಲ್ಲಿ ತಿಂಡಿ ತಿಂದು 

ಮಗಳನ್ನು ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ ದಿನ ಅಲ್ಲಿಂದ ಹದಿಮೂರು ಕಿಲೋಮೀಟರ್ ದೂರವಿರುವ ಎಸ್ ಆರ್ ಎಸ್ ಬೆಟ್ಟ ನೋಡಲು ಕಾರ್ ನಲ್ಲಿ ಹೊರಟೆವು.

ಶ್ರೀ ರೇವಣ್ಣ ಸಿದ್ದೇಶ್ವರ ಅಥವಾ  SRS ಬೆಟ್ಟಗಳು ಎಂದು ಕರೆಯಲ್ಪಡುವ  ಸುಂದರವಾದ ಬೆಟ್ಟ ಶ್ರೇಣಿಯು ರಾಮನಗರದಲ್ಲಿರುವ ಅತ್ಯಂತ ಪ್ರಸಿದ್ಧ ಸಾಹಸಮಯ ಸ್ಥಳಗಳಲ್ಲಿ ಒಂದಾಗಿದೆ.ಇದು ಧಾರ್ಮಿಕ ಪ್ರಸಿದ್ಧ ಸ್ಥಳವೂ ಹೌದು.  ವಾರಾಂತ್ಯದ ವಿಹಾರಮಾಡಲು ಚಾರಣಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ. 

ನಾವು ಅಲ್ಲಿಗೆ ಹೋದಾಗ ಮಧ್ಯಾಹ್ನ 12.30 ಆಗಿತ್ತು.ಬಿಸಿಲಲ್ಲಿ ಬೆಟ್ಟ ಹತ್ತಬೇಕೋ ಬೇಡವೋ ಎಂಬ ಗೊಂದಲದಲ್ಲೆ ನಿಧಾನವಾಗಿ ಬೆಟ್ಟ ಏರಲು ತೀರ್ಮಾನಕ್ಕೆ ಬಂದೆವು.

ಬೆಟ್ಟ ಹತ್ತುವಾಗ ನಮಗೆ ಸಿಗುವುದು ಭೀಮೇಶ್ವರ ದೇವಾಲಯ.

ಪಾಂಡವರು ಅಜ್ಞಾತವಾಸದಲ್ಲಿರುವಾಗ ಈ ಬೆಟ್ಟದಲ್ಲಿ ಕೆಲ ಕಾಲ ತಂಗಿದ್ದು ಆ ಸಂದರ್ಭದಲ್ಲಿ ಬೆಟ್ಟದ ಮದ್ಯಭಾಗದಲ್ಲಿ ಭೀಮಸೇನನಿಂದ ಸ್ಥಾಪಿಸಿದ ಶಿವಲಿಂಗವಿದ್ದು ಇಂದು ಅದೇ ಭೀಮೇಶ್ವರ ದೇವಾಲಯವಾಗಿ ಪ್ರಸಿದ್ದಿಯಾಗಿದೆ. ನಾವು ಅಲ್ಲಿಗೆ ಹೋದಾಗ ದೇವಾಲಯ ಮುಚ್ಚಿತ್ತು.ಹೊರಗಿನಿಂದ ಕೈ ಮುಗಿದು ಬೆಟ್ಟ ಏರಲು ಮುಂದೆ ಸಾಗಿದೆವು. ಅಲ್ಲಲ್ಲಿ ವಾನರ ಸೇನೆ ನಮಗೆ ಸ್ವಾಗತ ಕೋರುತ್ತಾ ನಮ್ಮ ಕೈಯಲ್ಲಿರುವ ತಿನಿಸುಗಳ ಕಡೆ ಹೆಚ್ಚು ಗಮನ ಹರಿಸಿ ಮುಲಾಜಿಲ್ಲದೆ ಕಿತ್ತುಕೊಂಡು ಇದು ನಮ್ದೇ  ಎಂದು ನಮ್ಮ ಮುಂದೆಯೇ ತಿನ್ನುತ್ತಿದ್ದವು.


‌ಬೆಟ್ಟ ಏರಲು ಬಿಸಿಲು ಮಳೆಯಿಂದ ಭಕ್ತರ ರಕ್ಷಿಸಲು ಚಾವಣಿಯ ವ್ಯವಸ್ಥೆ ಮಾಡಿದ್ದರಿಂದ ಬೆಟ್ಟ ಏರಲು ಕಷ್ಟ ಆಗಲಿಲ್ಲ. ಅಲ್ಲಲ್ಲಿ ಬಹಳ ಕಡಿದಾದ ಮೆಟ್ಟಿಲು ಹತ್ತುವಾಗ ಸ್ವಲ್ಪ ಬೆವರು ಬಂದು ಏದುಸಿರು ಬಿಡುತ್ತಾ ಹತ್ತಿದೆವು.ಮೇಲೆ ಹೋದಂತೆ ಕೆರೆಗಳು, ತೋಟಗಳು ಸಣ್ಣ ಪುಟ್ಟ ಗುಡ್ಡಗಳು ಬಹಳ ಸುಂದರವಾಗಿ ಕಂಡವು.ದೂರದಲ್ಲಿ ರಾಮನಗರದ ಕೆಲ ಕಟ್ಟಡಗಳು ಸಹ ಕಂಡವು.ಬೆಟ್ಟದ ಮೇಲೇರಿ ಪ್ರಕೃತಿಯ ಸೌಂದರ್ಯವನ್ನು ನಮ್ಮ ಕಣ್ಣುಗಳಲ್ಲಿ ಹಾಗೂ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದೆ.ಮೊಬೈಲ್ ನೆಟ್ವರ್ಕ್ ಚೆನ್ನಾಗಿದ್ದರಿಂದ ನಮ್ಮ ಮುಖಪುಟ  ಬಂಧುಗಳಿಗೆ ಲೈವ್ ನಲ್ಲಿ ಎಸ್ ಆರ್ ಎಸ್ ಸೌಂದರ್ಯ ತೋರಿಸಿದೆ.

ಬೆಟ್ಟದ ತುದಿಯಿಂದ ಬಲಕ್ಕೆ ತಿರುಗಿ ನೂರು ಮೀಟರ್ ಕೆಳಗಿಳಿದರೆ  ರೇವಣ ಸಿದ್ದೇಶ್ವರ ದೇವಾಲಯ ತಲುಪಬಹುದು. ರೇವಣ ಸಿದ್ದೇಶ್ವರ ರವರು   ದಿವ್ಯ ತಪಸ್ಸನ್ನು ಮಾಡಿ ಲಿಂಗದ ರೂಪದಲ್ಲಿ ಇಲ್ಲಿ ನೆಲೆನಿಂತಿದ್ದಾರೆ.   ಅರ್ಧ ಅಡಿ ಎತ್ತರದ ಶ್ರೀ ರೇವಣ ಸಿದ್ದೇಶ್ವರ ಸ್ವಾಮಿ ಉದ್ಬವ ಶಿವಲಿಂಗ ಭಕ್ತರನ್ನು ಸೆಳೆಯುತ್ತದೆ. ಈ ದೇವಾಲಯದ ಸಮೀಪ ಮೊರೆ ಬಸವನ ವಿಗ್ರಹ ಹಾಗೂ ಎಂದೂ ಬತ್ತದ ದೊಣೆ ಇದೆ. ಬುಡದಲ್ಲಿ ರೇಣುಕಾಂಬ ಹಾಗೂ ವೀರಭದ್ರೇಶ್ವರ ದೇವಾಲಯಗಳಿವೆ.


ದೇವರ ದರ್ಶನ ಪಡೆದು ಪ್ರಸಾದ ಸೇವಿಸಿ ಬೆಟ್ಟ ಇಳಿಯುವಾಗ ಅಲ್ಲಲ್ಲಿ ವಿಶ್ರಾಂತಿ ಪಡೆದು ಕೊನೆಗೂ ಬೆಟ್ಟ ಇಳಿದು ಕಾರ್ ಹತ್ತುವಾಗ  ಹೊಟ್ಟೆ ತಾಳ ಹಾಕುತ್ತಿತ್ತು.ರಾಮನಗರಕ್ಕೆ ಹಿಂತಿರುಗುವಾಗ ಮಾರ್ಗ ಮಧ್ಯದ ಹೋಟೆಲ್ ನಲ್ಲಿ ಊಟ ಮಾಡಿ ಮನೆಯ ಕಡೆ ಪಯಣ ಬೆಳೆಸಿದೆವು.

ಒಂದು ದಿನದ ಪ್ರವಾಸ, ಚಾರಣ ಮಾಡುವವರಿಗೆ ಎಸ್ ಆರ್ ಎಸ್ ಬೆಟ್ಟ ಬಹಳ ಸುಂದರ ಸ್ಥಳ ನೀವು ಒಮ್ಮೆ ಹೋಗಿ ಬನ್ನಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


.

21 ಮಾರ್ಚ್ 2025

ವಿಶ್ವ ಕವಿತಾ ದಿನದ ಪ್ರಯುಕ್ತ ಒಂದು ಹಾಸ್ಯ ಹನಿಗವ‌ನ


 


ವಿಶ್ವ ಕವಿತಾ ದಿನದ ಪ್ರಯುಕ್ತ ಒಂದು ಹಾಸ್ಯ ಹನಿಗವ‌ನ 


ನೆನಪು.


ಗೆಳೆಯ ಕೇಳಿದ ನೆನಪಿದೆಯಾ

ನಿನಗೆ, ನಾಕನೇ ತರಗತಿಯಲ್ಲಿ

ನಮ್ಮ ಜೊತೆಯಲ್ಲಿ ಓದಿದ ಕೋಮಲ|

ಅವನು ಉತ್ತರಿಸಿದ ಅದೆಲ್ಲಾ

ನೆನಪಿರುವ ನಿನಗೆ ಏಕೆ ನೆನಪಿಲ್ಲ?

ಕಳೆದ ತಿಂಗಳು  ನನ್ನಿಂದ ಪಡೆದ ಐನೂರು ರೂಪಾಯಿ ಸಾಲ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು






20 ಮಾರ್ಚ್ 2025

ಬಾಗ್ಡೋಗ್ರಾ ವಿಮಾನ ನಿಲ್ದಾಣ.

 ಭೂತಾನ್ ಪ್ರವಾಸ 

ಬಾಗ್ಡೋಗ್ರಾ ವಿಮಾನ ನಿಲ್ದಾಣ.




ಬಾಗ್ಡೋಗ್ರಾ ವಿಮಾನ ನಿಲ್ದಾಣ.    ಹೌದು ನನಗೂ ಮೊದಲು ಉಚ್ಚರಿಸಲು ಕಷ್ಟವಾದ ಹೆಸರು.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗಿನ ಜಾವ ಹೊರಟ ನಮ್ಮ ಆಕಾಸ ಏರ್ಲೈನ್ ಪಶ್ಚಿಮ ಬಂಗಾಳದ  ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಮುನ್ನ ಸಾವಿರಾರು ಕಿಲೋಮೀಟರ್ ಪಯಣ ಮಾಡಿದ್ದೆವು. ಭೂತಾನ್ ಪ್ರವಾಸ ಕೈಗೊಳ್ಳಲು ನಾವು ಈ ವಿಮಾನ ನಿಲ್ದಾಣದಲ್ಲಿ ಇಳಿದು ರಸ್ತೆ ಮೂಲಕ ಹಸಿಮರ ಪುಟ್ಶಿಲಾಂಗ್ ಮೂಲಕ ಭೂತಾನ್ ಪ್ರವೇಶ ಮಾಡಲು ಪ್ಲಾನ್ ಮಾಡಿ ಹೊರಟಿದ್ದೆವು. ಬೆಳಗಿನ 8 ಗಂಟೆಗೆ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ನಾವು ಲ್ಯಾಂಡ್ ಆಗುತ್ತೇವೆ.ವಿಮಾನ ನಿಲ್ದಾಣದಲ್ಲಿ ಪೋಟೋ ವೀಡಿಯೋ ಮಾಡಬೇಡಿ ಎಂದು ಗಗನ ಸಖಿ ಹೇಳಿದರು.


ಬಾಗ್ಡೋಗ್ರಾ ವಿಮಾನ ನಿಲ್ದಾಣ ಪಶ್ಚಿಮ ಬಂಗಾಳದ ಸಿಲಿಗುರಿ ನಗರಕ್ಕೆ ಸೇವೆ ಸಲ್ಲಿಸುವ ಕಸ್ಟಮ್ಸ್ ವಿಮಾನ ನಿಲ್ದಾಣವಾಗಿದೆ. ಇದು  ಭಾರತೀಯ ವಾಯುಪಡೆಯ ಬಾಗ್ಡೋಗ್ರಾ ವಾಯುಪಡೆ ನಿಲ್ದಾಣದಲ್ಲಿ ನಾಗರಿಕ ಎನ್ಕ್ಲೇವ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಡಾರ್ಜಿಲಿಂಗ್, ಗ್ಯಾಂಗ್ಟಾಕ್, ಕುರ್ಸಿಯೊಂಗ್, ಕಾಲಿಂಪಾಂಗ್, ಮಿರಿಕ್ ಮತ್ತು ಉತ್ತರ ಬಂಗಾಳ ಪ್ರದೇಶದ ಇತರ ಭಾಗಗಳು ಮತ್ತು ಈಶಾನ್ಯ ಬಿಹಾರದ ಗಿರಿಧಾಮಗಳಿಗೆ ಪ್ರವೇಶ ದ್ವಾರವಾಗಿದೆ. ಭಾರತ ಸರ್ಕಾರವು 2002 ರಲ್ಲಿ ಈ   ವಿಮಾನ ನಿಲ್ದಾಣಕ್ಕೆ ಸೀಮಿತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನಮಾನವನ್ನು ನೀಡಿದೆ.  ಬ್ಯಾಂಕಾಕ್-ಸುವರ್ಣಭೂಮಿ ಮತ್ತು ಪಾರೋಗೆ ಸೀಮಿತ ಅಂತರರಾಷ್ಟ್ರೀಯ ಕಾರ್ಯಾಚರಣೆಗಳೊಂದಿಗೆ  ಇದು ಪಶ್ಚಿಮ ಬಂಗಾಳದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ.

 ಹಾಗೂ ಭಾರತದ 17 ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ. ಇದು ವಾಯುಯಾನ ಟರ್ಬೈನ್ ಇಂಧನದ ಮೇಲೆ ಶೂನ್ಯ ಮಾರಾಟ ತೆರಿಗೆಯನ್ನು ಹೊಂದಿರುವ ಭಾರತದ ಕೆಲವೇ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.  ಈ ವಿಮಾನ ನಿಲ್ದಾಣವು 13 ವಿಮಾನ ನಿಲ್ದಾಣಗಳಿಗೆ ಮಾರ್ಗಗಳನ್ನು ಹೊಂದಿದೆ ಮತ್ತು 3 ದೇಶಗಳಿಗೆ ಭಾರತ , ಭೂತಾನ್ ಮತ್ತು ಥೈಲ್ಯಾಂಡ್ ಸಂಪರ್ಕ ಕಲ್ಪಿಸುತ್ತದೆ.  

ವಿಮಾನ ನಿಲ್ದಾಣ ತಲುಪಿ ಅಲ್ಲೇ ಪ್ರೇಶ್ ಅಪ್ ಆಗಿ ಹೊರಬಂದ ನಮ್ಮ ತಂಡವನ್ನು ನಮ್ಮ ಟೂರ್ ಮೇನೇಜರ್ ಪ್ರಕಾಶ್ ಸ್ವಾಗತಿಸಿ ತಿನ್ನಲು ಪುರಿ ಮತ್ತು ಸಾಗು ಕೊಟ್ಟರು.ಮುದ್ದೆ ಅನ್ನ ತಿನ್ನುವ ನಮಗೆ ಪುರಿ ಸಾಗು‌ ಅಷ್ಟು ‌ರುಚಿಸಲಿಲ್ಲ. ನಮಗಾಗಿ ಸಿದ್ದವಾಗಿದ್ದ ಎರಡು ಮಿನಿ ಬಸ್ ಏರಿ ಜೈಗಾನ್ ಕಡೆ ಪಯಣ ಮುಂದುವರೆಸಿದೆವು.




19 ಮಾರ್ಚ್ 2025

ಪ್ರೀತಿ ನಿವೇದನ .ಹನಿಗವನ


 


ಪ್ರೀತಿ ನಿವೇದನ 


ನೀನೇ ನನ್ನ ಪ್ರಾಣ,

ರಾಣಿಯಂಗೆ ನೋಡಿಕೊಳ್ಳುವೆ

ಒಪ್ಪಿಕೊಂಡು ಬಿಡು ನನ್ನ

ಪ್ರೀತಿಯನೆಂದು ಹುಡುಗ

ಮಾಡಿದನು ಪ್ರೀತಿ ನಿವೇದನ|

ಹುಡುಗಿ ಉತ್ತರಿಸಿದಳು 

ಪ್ರೀತಿಯ ಮಾತು ಆಮೇಲೆ

ಮೊದಲು ನಿನ್ನ ಬಳಿ

ಇದೆಯೋ ಇಲ್ಲವೋ ಹೇಳು ಧನ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು


18 ಮಾರ್ಚ್ 2025

ಭೂತಾನ್ ನ ಹೆಬ್ಬಾಗಿಲು ಫುಂಟ್‌ಶೋಲಿಂಗ್


 


ಭೂತಾನ್ ನ ಹೆಬ್ಬಾಗಿಲು 

ಫುಂಟ್‌ಶೋಲಿಂಗ್ 


  ಫುಂಟ್‌ಶೋಲಿಂಗ್! ಮೊದಲ ಬಾರಿ ಹೆಸರು ಕೇಳಿದರೆ ವಿಚಿತ್ರ ಎನಿಸಬಹುದು. ನಾವು ಭೂತಾನ್ ಪ್ರವಾಸ ಮಾಡಲು ಬಾಗ್ಡೋಗ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಜೈಗಾನ್ ತಲುಪಿ ಅದಕ್ಕೆ ಹೊಂದಿಕೊಂಡಿರುವ ಫುಂಟ್ ಶೋಲಿಂಗ್ ಸೇರಲು ಹೊರಟೆವು. ಇದು ದಕ್ಷಿಣ ಭೂತಾನ್‌ನ ಗಡಿ ಪಟ್ಟಣವಾಗಿದ್ದು ಚುಖಾ ಜಿಲ್ಲೆಯ ಆಡಳಿತ ಸ್ಥಾನವಾಗಿದೆ.

ಫ್ಯೂಯೆಂಟ್‌ಶೋಲಿಂಗ್ ಭಾರತದ ಜೈಗಾಂವ್ ಪಟ್ಟಣಕ್ಕೆ ಹೊಂದಿಕೊಂಡಿದೆ. ಗಡಿಯಾಚೆಗಿನ ವ್ಯಾಪಾರವು ಸ್ಥಳೀಯ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಕಾರಣವಾಗಿದೆ. ಥಿಂಫುಗೆ ಸ್ಥಳಾಂತರಗೊಳ್ಳುವ ಮೊದಲು ಈ ಪಟ್ಟಣವು ಬ್ಯಾಂಕ್ ಆಫ್ ಭೂತಾನ್‌ನ ಪ್ರಧಾನ ಕಚೇರಿಯನ್ನು ಹೊಂದಿತ್ತು . 


ಮೊದಲು ಭೂತಾನ್ ನಲ್ಲಿ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಲು ಅವಕಾಶವಿರಲಿಲ್ಲ.

ಭೂತಾನ್ ನ ದಿವಂಗತ ಪ್ರಧಾನಿ ಜಿಗ್ಮೆ ದೋರ್ಜಿ ಫುಂಟ್‌ಶೋಲಿಂಗ್ ನಿವಾಸಿಗಳಿಗೆ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಬಹುದು ಎಂದು ಆದೇಶ ಮಾಡಿದ ಪರಿಣಾಮವಾಗಿ ತಾಶಿ ಗ್ರೂಪ್ ಆಫ್ ಕಂಪನಿಗಳು ಮೊದಲ ಕಾಂಕ್ರೀಟ್ ಮನೆಯನ್ನು ನಿರ್ಮಿಸಿದವು. ಇದರ ಪರಿಣಾಮವಾಗಿ ಈ ಪ್ರದೇಶ ಕ್ರಮೇಣವಾಗಿ ನಗರವಾಗಿ ಅಭಿವೃದ್ಧಿಯಾಯಿತು.


ಫಂಟ್‌ಶೋಲಿಂಗ್ ಒಂದು ಬಿಸಿ ಉಷ್ಣವಲಯದ ಮಾನ್ಸೂನ್ ಹವಾಮಾನವನ್ನು ಹೊಂದಿದ  ತಾಣವಾಗಿದ್ದು   ಸರಾಸರಿ ವಾರ್ಷಿಕ 3,953 ಮಿಲಿಮೀಟರ್  ಮಳೆಯನ್ನು ಪಡೆಯುತ್ತದೆ ಬೇಸಿಗೆಯು ದೀರ್ಘವಾಗಿರುತ್ತದೆ.ನಾವು ಅಕ್ಟೋಬರ್ ತಿಂಗಳಲ್ಲಿ ಅಲ್ಲಿಗೆ ಭೇಟಿ ನೀಡಿದರೂ ಬೆಳಗಿನ ಎಂಟು ಗಂಟೆಗಾಗಲೇ ಸೂರ್ಯನ ಕಿರಣಗಳು ನಮ್ಮ ನೆತ್ತಿಯನ್ನು ಸುಡಲಾರಂಬಿಸಿದ್ದವು.

  

ಭಾರತ-ಭೂತಾನ್ ಗಡಿಯು ಎರಡು ವಿಭಿನ್ನ ನಗರ ಪ್ರದೇಶಗಳನ್ನು ಪ್ರತ್ಯೇಕಿಸುತ್ತದೆ. ಗಡಿಯಾಚೆಗಿನ ಜೈಗಾಂವ್ ದೊಡ್ಡದಾಗಿದೆ, ಗದ್ದಲ ಮತ್ತು ಜೋರಾಗಿದೆ, ಇದು ಪಶ್ಚಿಮ ಬಂಗಾಳದ ಇತರ ಅನೇಕ ವಾಣಿಜ್ಯ ಕೇಂದ್ರಗಳಂತೆಯೇ ಇದೆ, ಆದರೂ ಅನೇಕ ಭೂತಾನ್ ಖರೀದಿದಾರರನ್ನು ಹೊಂದಿದೆ. ಫಂಟ್‌ಶೋಲಿಂಗ್ ಭೂತಾನ್‌ನ ಆರ್ಥಿಕ, ಕೈಗಾರಿಕಾ ಮತ್ತು ವ್ಯಾಪಾರ ರಾಜಧಾನಿಯಾಗಿರುವುದರಿಂದ ಇತರ ಭೂತಾನ್ ಪಟ್ಟಣಗಳಿಗಿಂತ ವಿಶಿಷ್ಟವಾಗಿ ಹೆಚ್ಚು ನಗರವಾಗಿದೆ. 


ಭೂತಾನ್‌ಗೆ ವ್ಯಾಪಾರವಾಗುವ ಹೆಚ್ಚಿನ ಸರಕುಗಳು ಫುಂಟ್‌ಶೋಲಿಂಗ್ ಮೂಲಕ ಸಾಗಣೆಯಾಗುತ್ತವೆ. ಇದು ಭಾರತದೊಂದಿಗಿನ ವ್ಯಾಪಾರಕ್ಕಾಗಿ ಭೂತಾನ್‌ಗೆ ಪ್ರವೇಶ ದ್ವಾರವಾಗಿದೆ. 


ಗಡಿಯ ಜೈಗಾನ್ ನಿಂದ  ಭೂತಾನಿನ ಪ್ರವೇಶಕ್ಕೆ  ಸ್ಥಳೀಯರು ಕೆಲವೊಮ್ಮೆ ದಾಖಲೆಗಳನ್ನು ನೀಡದೆ  ದಾಟಬಹುದು. ಭಾರತ, ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್‌ನ ಪ್ರವಾಸಿಗರು ಭೂತಾನ್‌ಗೆ ಪ್ರವೇಶಿಸಲು ವೀಸಾ ಅಗತ್ಯವಿಲ್ಲ ಆದರೆ ಪಾಸ್‌ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿಯಂತಹ ಗುರುತಿನ ಪುರಾವೆಗಳನ್ನು ತೋರಿಸಬೇಕು ಮತ್ತು ಭೂತಾನ್‌ಗೆ ಪ್ರವೇಶಿಸಲು ಫಂಟ್‌ಶೋಲಿಂಗ್‌ನಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕು. ಇತರ ವಿದೇಶಿಯರಿಗೆ ಬಾಡಿಗೆ ನೋಂದಾಯಿತ ಪ್ರವಾಸ ಮಾರ್ಗದರ್ಶಿಯಿಂದ ಪ್ರಸ್ತುತಪಡಿಸಲಾದ ವೀಸಾ ಅಗತ್ಯವಿದೆ. ಪಟ್ಟಣದ ಪ್ರವೇಶ ದ್ವಾರವನ್ನು ಸಶಸ್ತ್ರ ಸೀಮಾ ಬಲದ  ಮತ್ತು ಭೂತಾನ್ ಸೇನಾ ಸಿಬ್ಬಂದಿ ಕಾವಲು ಕಾಯುತ್ತಿದ್ದರು.

ಈ ಪಟ್ಟಣವು ರಾಷ್ಟ್ರೀಯ ಹೆದ್ದಾರಿಯ ಮೂಲಕ ಉಳಿದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಈ ಪಟ್ಟಣವು ವಿಮಾನ ನಿಲ್ದಾಣ ಸೌಲಭ್ಯಗಳನ್ನು ಅಥವಾ ನೇರ ರೈಲು ಮಾರ್ಗವನ್ನು ಹೊಂದಿಲ್ಲ.ಆದರೆ ಭಾರತೀಯ ರೈಲ್ವೆಯು ಹತ್ತಿರದಲ್ಲಿ ರೈಲು ನಿಲ್ದಾಣಗಳನ್ನು ಹೊಂದಿದೆ. ಉತ್ತರ ಬಂಗಾಳದ ಹತ್ತಿರದ ರೈಲ್ವೆ ಸ್ಟೇಷನ್  ಹಸಿಮಾರದಿಂದ ಫುಂಟ್‌ಶೋಲಿಂಗ್‌ಗೆ 20 ಕಿಮೀ  ಇದೆ. ಸಿಲಿಗುರಿ, ನ್ಯೂ ಜಲ್ಪೈಗುರಿ ಮತ್ತು ನ್ಯೂ ಅಲಿಪುರ್ದೂರ್ ಹತ್ತಿರದ ದೊಡ್ಡ ರೈಲ್ವೆ ಜಂಕ್ಷನ್‌ಗಳಾಗಿವೆ. ಉತ್ತರ ಬಂಗಾಳದ ಪಟ್ಟಣಗಳಿಂದ ಬಸ್‌ಗಳು ಲಭ್ಯವಿವೆ. ಭಾರತೀಯ ಮೂಲದ ಖಾಸಗಿ ಮತ್ತು ಭೂತಾನ್ ಸರ್ಕಾರದ ಬಸ್ ಗಳು ಹೀಗೆ ಎರಡೂ ರೀತಿಯ ಬಸ್‌ಗಳನ್ನು ನೋಡಬಹುದು. ನಾವು ಮೊದಲೇ ನಮ್ಮ ಟ್ರಾವೆಲ್ ಏಜೆನ್ಸಿ ಮೂಲಕ ಬಸ್ ಬುಕ್ ಮಾಡಿದ್ದರಿಂದ ಎರಡು ಮಿನಿ ಬಸ್ ಗಳು ನಮಗಾಗಿ ಕಾದಿದ್ದವು.

ಅವುಗಳನ್ನು ಏರಿ  ಪುಂಟ್ ಶಿಲಾಂಗ್ ಕಡೆಗೆ ತಲುಪುವ ಮುನ್ನ ಒಂದು ರಾತ್ರಿ ಅಲ್ಲೇ ತಂಗಿದ್ದೆವು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು