This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
09 ನವೆಂಬರ್ 2021
ನನ್ನಜ್ಜಿ ಮತ್ತು ನನ್ನಮ್ಮನ ಕೈರುಚಿ
ನಮ್ಮ ಅಜ್ಜಿ ರಂಗಜ್ಜಿ .ನನ್ನ ಅಮ್ಮನ ಅಮ್ಮ ಕಪ್ಪಾದ ಕೃಶಕಾಯದ ಹಲ್ಲುಗಳೆಲ್ಲಾ ಉದುರಿ ಮುಂದಿನ ಎರಡು ಉಬ್ಬಲ್ಲು ಮಾತ್ರ. ನಾವು ಇದ್ದೇವೆ ಎಂದು ಕಾಣಿಸುತ್ತಿದ್ದವು ಗೂನುಬೆನ್ನು ಕೈಯಲ್ಲೊಂದು ಕೋಲು ಸದಾ ಇರುತ್ತಿತ್ತು ಸುಮಾರು ಎಂಭತ್ತಕ್ಕೂ ಹೆಚ್ಚು ವಯಸ್ಸಾಗಿದ್ದರೂ ಕಣ್ಣಿನ ದೃಷ್ಟಿ ಚೆನ್ನಾಗಿತ್ತು. ನಾನು ಅಥವಾ ನನ್ನ ಅಮ್ಮ ಸ್ವಲ್ಪ ಕಾಲ ಅಜ್ಜಿಯ ಕಣ್ಣಿಗೆ ಬೀಳದಿದ್ದರೆ " ಏ ಎಂಕ್ಟೀ..... ಏ ಸೀದೇವಿ ಎಲ್ಲಿ ಹಾಳೊಗ್ ಹೊದ್ರಿ " ಎಂದು ಕೂಗಿದರೆ ಪಕ್ಕದ ಬೀದಿಗೂ ಕೇಳುತ್ತಿತ್ತು ಅಂತಹ ಕಂಚಿನ ಕಂಠ.
ನಮ್ಮ ರಂಗಜ್ಜಿ ನಾನು ಚಿಕ್ಕವನಾಗಿದ್ದಾಗ ನನಗೆ ಸಜ್ಜೆ ರೊಟ್ಟಿ ಸುಟ್ಟು ಕೊಡುತ್ತಿದ್ದರು ಅದರ ಸ್ವಾದ ರುಚಿ ಇದುವರೆಗೂ ತಿಂದಿಲ್ಲ .
ಸಜ್ಜೆಯ ಹಿಟ್ಟಿಗೆ ಒಣಗಿಸಿದ ಮೆಣಸಿನ ಕಾಯಿಯ ಬೀಜಗಳು, ಎಳ್ಳಿನ ಕಾಳುಗಳುನ್ನು ಸೇರಿಸಿ ಹದವಾಗಿ ಮಿದ್ದು ತೆಳ್ಳಗೆ ರೊಟ್ಟಿ ತೊಟ್ಟಿ ಎಡ್ಲಿ ಒಲೆ ( ಒಲೆಯ ಪಕ್ಕದಲ್ಲಿ ನೀರು ಕಾಯಲು ಇರುವ ಮಣ್ಣಿನ ದೊಡ್ಡ ಮಡಿಕೆ) ಮೇಲೆ ಹದವಾಗಿ ಬೇಯಿಸುತ್ತಿದ್ದರು .ಹಸಿರಾದ ಸಜ್ಜೆ ಹಿಟ್ಟಿನ ರೊಟ್ಟಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹೆಂಚಿನ ಮೇಲೆ ಸುಡುತ್ತಿದ್ದರು .ನಂತರ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ದೊಡ್ಡ ಗುಡಾಣದಲ್ಲಿ ( ದೊಡ್ಡ ಮಣ್ಣಿನ ಮಡಿಕೆ)ಶೇಖರಣೆ ಮಾಡಿ ದಿನವೂ ಸಂಜೆ ನಾನು ಶಾಲೆಯಿಂದ ಬಂದಾಗ ಅರ್ಧ ರೊಟ್ಟಿ ಕೊಡುತ್ತಿದ್ದರು .ಇನ್ನೂ ಅರ್ಧ ಕೊಡಿ ಅಜ್ಜಿ ಅಂದರೆ" ಜಾಸ್ತಿ ತಿಂದ್ರೆ ಹುಚ್ಚಕೆಂಡು ಬಿಡ್ತಿಯಾ , ಹೊಟ್ಟೆ ಗಣೇಶಪ್ಪನಂಗೆ ಗುಡಾಣ ಆಗುತ್ತೆ ನಡಿ ನಡಿ ,ಆಟ ಆಡು ಹೋಗು " ಎಂದು ಬುದ್ದಿವಾದ ಹೇಳಿ ಸ್ವಲ್ಪ ಚಿನಕುರುಳಿ ತಿನ್ನಲು ಕೊಡುತ್ತಿದ್ದರು .ರಂಗಜ್ಜಿ ಇಂದು ಸ್ವರ್ಗಸ್ಥರಾಗಿದ್ದಾರೆ. ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಎಲ್ಲಾದರೂ ನಾನು ಸಜ್ಜೆ ರೊಟ್ಟಿ, ಚಿನಕುರುಳಿ ಕಂಡರೆ ರಂಗಜ್ಜಿಯ ನೆನಪಾಗುವುದು.
ನನ್ನ ಅಮ್ಮ ಶ್ರೀದೇವಮ್ಮ ಸಹ ಅಡಿಗೆಯಲ್ಲಿ ಎಕ್ಸಪರ್ಟ್ .ಕಡಿಮೆ ಸಮಯದಲ್ಲಿ ಎಲ್ಲ ತರಹದ ಅಡಿಗೆ ಮಾಡುವರು. ಅದರಲ್ಲೂ ಅವರು ಮಾಡುವ ತಪ್ಲೆ ರೊಟ್ಟಿ ನನ್ನಪೇವರೇಟ್.
ರಾಗಿ ಹಿಟ್ಟಿಗೆ ಈರುಳ್ಳಿ, ಮೆಣಸಿಬಕಾಯಿ, ಒಂದೆರಡು ತರಹದ ಸೊಪ್ಪನ್ನು ಸೇರಿಸಿ ರೊಟ್ಟಿ ತಟ್ಟಿ ಸ್ವಲ್ಪ ಎಣ್ಣೆ ಹಾಕಿ ಹೆಂಚಿನ ಮೇಲೆ ಬೇಯಿಸಿದ ಬಿಸಿ ರೊಟ್ಟಿ ತಿನ್ನಲು ಬೇರೆ ಯಾವುದೇ ಪಲ್ಯ ಅಥವಾ ಚಟ್ನಿ ಬೇಕಾಗುತ್ತಿರಲಿಲ್ಲ.ರೊಟ್ಟಿಯ ಜೊತೆಗೆ ಕೆಲವೊಮ್ಮೆ ಬೆಣ್ಣೆ ಅಥವಾ ತುಪ್ಪ ಸೇರಿಸಿ ತಿನ್ನುತ್ತಿದ್ದರೆ ಅದರ ಮಜವೇ ಬೇರೆ.
ಅಮ್ಮನ ಮತ್ತೊಂದು ರುಚಿಯಾದ ನನಗಿಷ್ಷದ ಖಾದ್ಯ ಬದನೇಕಾಯಿ ಬಜ್ಜಿ. ಬದನೇ ಕಾಯಿಯನ್ನು ಕೆಂಡದಲ್ಲಿ ಸುಟ್ಟು ಹದವಾಗಿ ಉಪ್ಪು ಉಳಿ, ಖಾರ, ಈರುಳ್ಳಿ ಸೇರಿಸಿ ಕೈಯಿಂದ ಕಿವುಚಿದರೆ ದಿಡೀರ್ ಬದನೇಕಾಯಿ ಬಜ್ಜಿ ರೆಡಿ .ಅದಕ್ಕೆ ಮುದ್ದೆ ಒಳ್ಳೆಯ ಕಾಂಬಿನೇಷನ್ ಒಂದು ಉಣ್ಣುವವರು ಎರಡು ಮುದ್ದೆ ಉಣ್ಣಬಹುದು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
06 ನವೆಂಬರ್ 2021
ಲೈಪ್ ಈಸ್ ಬ್ಯೂಟಿಫಲ್ .ಲೇಖನ
ಲೈಫ್ ಈಸ್ ಬ್ಯೂಟಿಪುಲ್ .
ಜೀವನದಲ್ಲಿ ಕೆಲವೊಮ್ಮೆ ರಿಸ್ಕ್ ಉನ್ನತವಾದ ಸಾಧನೆ ಮಾಡಬೇಕಾದರೆ ತೊಗೋಬೇಕು ಮತ್ತು ಕಷ್ಟ ಪಡಲೇಬೇಕು. ಆದರೆ ಯಾವಾಗಲೂ ಅದೇ ಮಾಡುತ್ತಾ ಕೂರಬಾರದು. ಒಂದು ಹಂತದ ಸಾಧನೆ ಮಾಡಿದ ಮೇಲೆ ಅತಿಯಾಸೆ ಪಡದೇ ಇರುವುದರಲ್ಲಿಯೇ ನೆಮ್ಮದಿಯ ಜೀವನ ನಡೆಸಬೇಕು. ಬೇಕು ಬೇಡಗಳ ಮದ್ಯೆ ಒಂದು ಸಣ್ಣ ಗೆರೆಯ ಬೆಲೆಯನ್ನು ನಾವು ಯಾವಾಗಲೂ ಅರಿತಿರಬೇಕು.
ಆಗ ಲೈಪ್ ಈಸ್ ಬ್ಯೂಟಿಫುಲ್.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಸಾವಯವ ಕೃಷಿ .ಪ್ರಬಂಧ
ಸಾವಯವ ಕೃಷಿ
ಪ್ರಬಂಧ
ಪೀಠಿಕೆ
ನಗರೀಕರಣ ಮತ್ತು ಕೈಗಾರಿಕೀಕರಣದ ಪರಿಣಾಮವಾಗಿ ಪರಿಸರ ಮಲಿನವಾಗಿರುವುದು ನಮಗೆ ತಿಳಿದೇ ಇದೆ .ಇದರ ಜೊತೆಯಲ್ಲಿ ನಮ್ಮ ಬೆಳೆಯುತ್ತಿರುವ ಜನಸಂಖ್ಯೆಯ ಹಸಿವನ್ನು ಪೂರೈಸಲು, ಕೃತಕ ವಿಧಾನಗಳ ಮೂಲಕ ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಉತ್ಪಾದನೆಯ ಸಮಯವನ್ನು ಕಡಿಮೆ ಮಾಡಲು ಹಾನಿಕಾರಕ ಕೃಷಿ ಪದ್ಧತಿಗಳನ್ನು ಬಳಸುತ್ತಿದ್ದೇವೆ . ಈ ವಿಧಾನಗಳಲ್ಲಿ ರಾಸಾಯನಿಕ ಗೊಬ್ಬರಗಳು, ಹಾನಿಕಾರಕ ಕೀಟನಾಶಕಗಳು, ಶಿಲೀಂಧ್ರನಾಶಕಗಳು, ಸಸ್ಯನಾಶಕಗಳು ಮತ್ತು ಕೀಟನಾಶಕಗಳ ಬಳಕೆಯನ್ನು ಬೆಳೆಗಳ ಉತ್ಪಾದನಾ ದರವನ್ನು ಸುಧಾರಿಸಲು ಬಳಸುತ್ತಿದ್ದೇವೆ. ಈ ತಂತ್ರಗಳು ರೈತರಿಗೆ ತಮ್ಮ ಇಳುವರಿಯನ್ನು ಸುಧಾರಿಸಲು ಸಹಾಯ ಮಾಡಬಹುದಾದರೂ, ಅವು ಪ್ರಕೃತಿಗೆ ವಿರುದ್ದವಾಗಿವೆ ಮತ್ತು ನಾವು ಸೇವಿಸುವ ಆಹಾರವನ್ನು ವಿಷಯವನ್ನಾಗಿ ಪರಿವರ್ತಿಸುತ್ತಿವೆ. ಆದ್ದರಿಂದ ಮಾನವ ನಾಗರಿಕತೆಯ ಮೇಲೆ ಈ ದುರಂತವನ್ನು ತಡೆಗಟ್ಟಲು ಸಾವಯವ ಕೃಷಿಯು ಅಂತಿಮ ಪರಿಹಾರವಾಗಿದೆ.
ವಿಷಯ ವಿವರಣೆ.
ಸಾವಯವ ಕೃಷಿಯು ಒಂದು ತಂತ್ರವಾಗಿದ್ದು, ಇದರಲ್ಲಿ ಗಾಳಿ, ನೀರು ಮತ್ತು ಮಣ್ಣಿನಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಸುಸ್ಥಿರ ವಿಧಾನದ ಮೂಲಕ ಭೂಮಿಯ ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆಸಲಾಗುತ್ತದೆ. ಸಾವಯವ ಕೃಷಿ ಎಂದರೆ ಮಾನವ ನಿರ್ಮಿತ ರಾಸಾಯನಿಕಗಳನ್ನು ಬಳಸುವುದಿಲ್ಲ ಎಂದು ಅರ್ಥವಲ್ಲ. ಅನೇಕ ಸಾವಯವ ಕೃಷಿ ವಿಧಾನಗಳಲ್ಲಿ, ಮಾನವ ನಿರ್ಮಿತ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬೆಳೆ ಉತ್ಪಾದನೆಯನ್ನು ಸುಧಾರಿಸಲು ಬಳಸಲಾಗುವುದಿಲ್ಲ ಆದರೆ ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಬಳಸಲಾಗುತ್ತದೆ. ಅಂದರೆ ಈ ರಾಸಾಯನಿಕಗಳು ನೇರವಾಗಿ ಮಣ್ಣಿಗೆ ಹೋಗುತ್ತಿವೆಯೇ ಹೊರತು ನಾವು ಸೇವಿಸುವ ಆಹಾರಕ್ಕೆ ಅಲ್ಲ. ಸಾವಯವ ಮತ್ತು ಅಜೈವಿಕ ಕೃಷಿಯ ನಡುವಿನ ವ್ಯತ್ಯಾಸವೆಂದರೆ ಸಾವಯವ ಕೃಷಿಯಲ್ಲಿ ರಾಸಾಯನಿಕಗಳು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಬೆಳೆಗಳಿಗೆ ತೊಂದರೆಯಾಗುವುದಿಲ್ಲ ಆದರೆ ಅಜೈವಿಕ ಕೃಷಿಯಲ್ಲಿ, ರಾಸಾಯನಿಕಗಳು ಮಣ್ಣಿನ ಫಲವತ್ತತೆಯನ್ನು ಕೆಡಿಸುತ್ತವೆ ಮತ್ತು ಕೃಷಿ ಉತ್ಪನ್ನಗಳಲ್ಲಿ ವಿಷ ಸಂಗ್ರಹವಾಗುತ್ತದೆ. ಅಂತಿಮವಾಗಿ ನಮ್ಮ ಆಹಾರ ಸರಪಳಿಗಳಿಗೆ ಕಂಟಕವಾಗುತ್ತದೆ.ಕೀಟನಾಶಕಗಳು ಮತ್ತು ಸಸ್ಯನಾಶಕಗಳಲ್ಲಿ ಇರುವ ಸತು, ಸೀಸ ಮತ್ತು ಮ್ಯಾಂಗನೀಸ್ನಂತಹ ಹಾನಿಕಾರಕ ರಾಸಾಯನಿಕಗಳನ್ನು ಮನುಷ್ಯರು ಸೇವಿಸುತ್ತಾರೆ, ಇದು ನಮ್ಮ ಆರೋಗ್ಯದ ಮೇಲೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.
ಸಾವಯವ ಕೃಷಿಯ ಕೆಲವು ಪ್ರಮುಖ ಪ್ರಯೋಜನಗಳೆಂದರೆ ಅಜೈವಿಕ ಕೃಷಿಗೆ ಹೋಲಿಸಿದರೆ ಆರೋಗ್ಯಕರ ಮತ್ತು ಗುಣಮಟ್ಟದ ಕೃಷಿ ಉತ್ಪಾದನೆಯು ತುಲನಾತ್ಮಕವಾಗಿ ಹೆಚ್ಚು. ಅಲ್ಲದೆ, ಸಾವಯವ ಕೃಷಿಯು ಪರಿಸರ ಸ್ನೇಹಿಯಾಗಿದೆ ಏಕೆಂದರೆ ಇದು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ಕೃಷಿ ಉದ್ದೇಶಗಳಿಗಾಗಿ ನಿರ್ದಿಷ್ಟ ಭೂಪ್ರದೇಶದ ಪುನರಾವರ್ತಿತ ಬಳಕೆ ಸಾಧ್ಯ. ಇದು ಸ್ಥಳಾಂತರ ಕೃಷಿ ಪದ್ಧತಿಗಳಿಂದ ಉಂಟಾಗುವ ಅರಣ್ಯನಾಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾವಯವ ಕೃಷಿಯ ಇತರ ಪ್ರಯೋಜನಗಳೆಂದರೆ ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನದ ಬೆಲೆ ಹೆಚ್ಚು ಅಂದರೆ ರೈತರಿಗೆ ಲಾಭದ ಪ್ರಮಾಣವೂ ಹೆಚ್ಚು. ಈ ನಿರಂತರ ಕೃಷಿ ವಿಧಾನವು ರೈತರಿಗೆ ಬೆಳೆ ಇಳುವರಿಯಲ್ಲಿ ನಿರಂತರ ಮತ್ತು ನ್ಯಾಯಯುತ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ಪರಿಸರವನ್ನು ಉಳಿಸಲು ಸಹಾಯ ಮಾಡುತ್ತದೆ. ಸಾವಯವ ಕೃಷಿಯ ಮತ್ತೊಂದು ದೊಡ್ಡ ಪ್ರಯೋಜನವೆಂದರೆ ಅದು ಮಣ್ಣಿನ ಮಾಲಿನ್ಯವನ್ನು ತಡೆಯಲು ಸಹಾಯ ಮಾಡುತ್ತದೆ.
ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಗೆ ಹೋಲಿಸಿದರೆ, ಬೆಳೆಗಳ ಅವಶೇಷಗಳನ್ನು ಸುಡುವುದು, ಕೃಷಿ ಇಳುವರಿಯನ್ನು ಹೆಚ್ಚಿಸಲು ಹಾನಿಕಾರಕ ರಾಸಾಯನಿಕಗಳನ್ನು ಬಳಸುವುದು, ಮಣ್ಣಿನ ಮಾಲಿನ್ಯ ಮತ್ತು ತಳೀಯವಾಗಿ ಮಾರ್ಪಡಿಸಿದ ಜೈವಿಕ ತಂತ್ರಜ್ಞಾನದ ಬೆಳೆಗಳ ಅಭಿವೃದ್ಧಿಯನ್ನು ಸಾವಯವ ಕೃಷಿಯಲ್ಲಿ ಬಳಸಲಾಗುವುದಿಲ್ಲ. ರಾಸಾಯನಿಕ ಗೊಬ್ಬರಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧವು ಮಣ್ಣಿನ ಹ್ಯೂಮಸ್ ಅಂಶ ಮತ್ತು ಸಾರಜನಕದ ಅಂಶವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ದ್ವಿದಳ ಧಾನ್ಯಗಳನ್ನು ಅಂತರ ಬೆಳೆಯಾಗಿ ಮತ್ತು ಗೊಬ್ಬರದ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಉಪಸಂಹಾರ
ಅರಣ್ಯನಾಶ, ಮಣ್ಣಿನ ಮಾಲಿನ್ಯ ಮತ್ತು ಜಲಮಾಲಿನ್ಯವನ್ನು ಒಳಗೊಂಡಿರುವ ಹಾನಿಕಾರಕ ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಗೆ ಸಾವಯವ ಕೃಷಿಯು ಉತ್ತಮ ಪರ್ಯಾಯ ಕೃಷಿ ಪದ್ದತಿಯಾಗಿದೆ . ನಮ್ಮ ಕೃಷಿ-ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯವನ್ನು ಉಳಿಸಲು ಸಹಾಯ ಮಾಡುವ ಸಾವಯವ ಕೃಷಿಯನ್ನು ಪ್ರಚಾರ ಮಾಡಲು ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಸಮುದಾಯಗಳು ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕು. ಅಲ್ಲದೆ, ಸಾವಯವ ಕೃಷಿಯನ್ನು ನಾವು ವಾಯು ಮಾಲಿನ್ಯವನ್ನು ಕಡಿಮೆ ಮಾಡುವ, ನೀರನ್ನು ಸಂರಕ್ಷಿಸುವ, ಮಣ್ಣಿನ ಸವೆತವನ್ನು ಕಡಿಮೆ ಮಾಡುವ, ಮಣ್ಣಿನ ಫಲವತ್ತತೆಯನ್ನು ಸುಧಾರಿಸುವ ಮತ್ತು ಆಹಾರದಲ್ಲಿ ವಿಷಕಾರಿ ರಾಸಾಯನಿಕಗಳು ಮತ್ತು ಕೃತಕ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡುವ ಮಾರ್ಗವೆಂದು ಪರಿಗಣಿಸಬಹುದು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
05 ನವೆಂಬರ್ 2021
ಐ ಮಿಸ್ ಯೂ ಅಪ್ಪು. ಲೇಖನ
*ಐ ಮಿಸ್ ಯೂ ಅಪ್ಪು*
ನಾನು ಮೊದಲ ಬಾರಿ ಸಿನಿಮಾ ನೋಡಿದ್ದು ನಮ್ಮ ಶಿಕ್ಷಕರಾದ ತಿಪ್ಪೇಶಪ್ಪ ಮಾಸ್ಟರ್ ಜೊತೆ ಚಿತ್ರದುರ್ಗದ ರೂಪಾವಣಿ ಥಿಯೇಟರ್ ನಲ್ಲಿ. ಎರಡು ನಕ್ಷತ್ರಗಳು ಚಿತ್ರವನ್ನು ಥಿಯೇಟರ್ ನಲ್ಲಿ ನೋಡಿ ಬಂದು ನಮ್ಮ ಸ್ನೇಹಿತರಿಗೆ ಅದನ್ನು ರಸವತ್ತಾಗಿ ವರ್ಣನೆ ಮಾಡಿದ್ದೆ .ಜೊತೆಗೆ ಆ ಚಿತ್ರದ ಹಾಡುಗಳ ಪಲ್ಲವಿಯನ್ನು ಅದೇ ರಾಗದಲ್ಲಿ ಹಾಡುವುದನ್ನು ಕೇಳಿ ಕೆಲವರು ಖುಷಿಪಟ್ಟರೆ ಕೆಲವರು ಈ ಮೇಷ್ಟ್ರು ದುರ್ಗಕ್ಕೆ ಬರೀ ಇವನನ್ನೇ ಕರ್ಕೊಂಡು ಹೋಗ್ತಾರೆ ಅಂತ ಉರ್ಕೊಳ್ಳೊರು ಹೆಚ್ಚಿದ್ದರು .ಆ ಚಿತ್ರದಲ್ಲಿ ಬರುವ" ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು.....". ಹೌದು ಎಂದರೆ ಹೌದು...ಹೌದ....ಅಲ್ಲ ಎಂದರೆ ಅಲ್ಲ ...ಅಲ್ಲ..." ಎಂದು ಆಗಾಗ್ಗೆ ಗುನುಗುತ್ತಿದ್ದೆ.
ಮತ್ತೊಂದು ಭಾನುವಾರ ನಮ್ಮ ಶಿಕ್ಷಕರು ದುರ್ಗಕ್ಕೆ ಕರೆದುಕೊಂಡು ಹೋದಾಗ "ಚಲಿಸುವ ಮೋಡಗಳು" ಚಿತ್ರ ತೋರಿಸಿದರು .ನನ್ನ ಗೆಳೆಯರು ನಾನು ಹಾಡುವ ರೀತಿಯನ್ನು ಮೆಚ್ಚಿದ್ದರಿಂದ ಈ ಬಾರಿ ಚಿತ್ರದ ಕಥೆ ಕಡೆಗೆ ಹೆಚ್ಚು ಗಮನ ಕೊಡದೇ ಬರಿ ಹಾಡುಗಳನ್ನು ಗಮನಿಸಿದ್ದೆ .
ಅದರ ಫಲವಾಗಿ " ಚಂದಿರ ತಂದ ಹುಣ್ಣಿಮೆ ರಾತ್ರಿ.... ಗಾಳಿಯು ತಂದ ತಣ್ಣನೆ ರಾತ್ರಿ..... ಹಾಡನ್ನು ಥಿಯೇಟರ್ ನಿಂದ ಹೊರಬರುತ್ತಲೇ ಗುನುಗುತ್ತಿದ್ದೆ. ಬಸ್ ನಲ್ಲಿ ನಮ್ಮ ಊರಿಗೆ ಬರುವಾಗ " ಕಾಣದಂತೆ ಮಾಯವಾದನು...... ನಮ್ಮ ಶಿವ ಕೈಲಾಸ ಸೇರಿಕೊಂಡನು......" ಹಾಡನ್ನು ಸ್ವಲ್ಪ ಜೋರಾಗೆ ಹೇಳಿಕೊಂಡೆ .ಬಸ್ ನ ಪ್ರಯಾಣಿಕರೊಬ್ಬರು ಹುಡುಗ ಚೆನ್ನಾಗಿ ಹಾಡ್ ಹೇಳ್ತಾನೆ ಇನ್ನೊಂದು ಸಲ ಹೇಳು ಎಂದರು .ನಾನು ನನ್ನ ಮಾಸ್ಟರ್ ಮುಖ ನೋಡಿದೆ ಅವರು ರಾಜ್ ಕುಮಾರ್ ಅಪ್ಪಟ ಅಭಿಮಾನಿ ಅದಕ್ಕೆ ಮತ್ತೊಮ್ಮೆ ಅಣ್ಣಾ ರವರ ಹಾಡು ಕೇಳಲು ಹಾಡು ಎಂಬಂತೆ ಸನ್ನೆ ಮಾಡಿದರು .ಬಸ್ ಚಿತ್ರಹಳ್ಳಿಗೆ ಬರುವವರೆಗೆ ನಾಲ್ಕು ಬಾರಿ ಅದೇ ಹಾಡನ್ನು ಕೇಳುಗರ ಒತ್ತಾಯದ ಮೇರೆಗೆ ಹಾಡಿದ್ದೆ ಅದರಲ್ಲಿ ಕೆಲವರು ಅಭಿಮಾನದಿಂದ ಐವತ್ತು ಪೈಸೆ ,ಮತ್ತು ಇಪ್ಪತ್ತೈದು ಪೈಸೆ ಕಾಯಿನ್ ನೀಡಿದರು!
ಬಸ್ ಇಳಿದು ನಮ್ಮ ಊರಿಗೆ ನಡೆದುಕೊಂಡು ಹೋಗುವಾಗ "ವೆಂಕಟೇಶ ಅಂತೂ ಹಾಡುಗಾರ ಆಗ್ ಬಿಟ್ಟೆಯಲ್ಲೊ.ವೆರಿ ಗುಡ್ ಇವತ್ತು ನಾವು ನೋಡಿದ್ ಪಿಚ್ಚರ್ ನಲ್ಲಿರೋ
ಇನ್ನೊಂದು ಹಾಡು ಹೇಳು ಅಂದರು.
ಜೇನಿನ ಹೊಳೆಯೊ....ಅಂದು ನಾನು ಹೇಳಿದೆ ಹಾಲಿನ ಹೊಳೆಯೊ...ಅಂತ ನಮ್ಮ ಮಾಸ್ಟರ್ ಧ್ವನಿ ಸೇರಿಸಿದರು. ಇಬ್ಬರೂ ಹಾಡುತ್ತಾ ನಡೆದಾಗ ನಮ್ಮ ಊರು ಬಂದದ್ದೇ ಗೊತ್ತಾಗಲಿಲ್ಲ ನಮ್ಮ ಹಾಡು ಕೇಳಿ ಗೊಲ್ಲರ ಚಿಕ್ಕಜ್ಜರ ನಾಯಿ ಬೊಗುಳಿದಾಗ ಹಾಡು ನಿಲ್ಲಿಸಿ ಮನೆ ಸೇರಿದೆವು.
ನಾನು ಹಾಡು ಹೇಳುವುದು ಬಹುತೇಕ ಹುಡುಗರಿಗೆ ಮತ್ತು ಸುಮಾರು ದೊಡ್ಡವರಿಗೆ ಪ್ರಚಾರ ಆಗಿತ್ತು .ನನಗರಿವಿಲ್ಲದೆ ನಾನಾಗ ನಮ್ಮ ಶಾಲೆಯ ಅನಧಿಕೃತವಾದ ಆಸ್ಥಾನ ಗಾಯಕನಾಗಿ ಹೊರಹೊಮ್ಮಿದ್ದೆ. ಶಾಲಾ ಸಮಾರಂಭದಲ್ಲಿ , ಹೊರಸಂಚಾರ ಹೋದಾಗ ನನ್ನ ಹಾಡು ಮತ್ತು ಗಾಯನ ಖಾಯಂ ಅಗಿತ್ತು .ನನ್ನ ಜೊತೆಗೆ ನನ್ನ ಗೆಳೆಯ ಆನಂದ ಸೇರಿಕೊಂಡು ಕೆಲವು ತೆಲುಗು ಹಾಡುಗಳನ್ನು ಹಾಡಿ ಎಲ್ಲರನ್ನೂ ರಂಜಿಸುತ್ತಿದ್ದೆವು .ಒಟ್ಟಿನಲ್ಲಿ ಆ ವಯಸಿನಲ್ಲಿ ನನ್ನದೇ ಪುಟ್ಟ ಆರ್ಕೆಸ್ಟ್ರಾ ತಂಡ ಸಿದ್ಧವಾಗಿತ್ತು. ಆದರೆ ವಾದ್ಯ ಪರಿಕರಗಳು ಇರಲಿಲ್ಲ!
ನನ್ನ ಗಾಯನ ಕೀರ್ತಿ ಹೇಗೋ ನಮ್ಮ ಮಾವನವರ ಊರಾದ ಯರಬಳ್ಳಿಗೂ ಹಬ್ಬಿತ್ತು . ಶಾಲೆಗೆ ನಮಗೆ ಬೇಸಿಗೆ ರಜೆ ಇದ್ದಿದ್ದರಿಂದ ಮಾರಮ್ಮನ ಜಾತ್ರೆಗೆ ಒಂದು ವಾರ ಮೊದಲೆ ಯರಬಳ್ಳಿ ಸೇರಿದ್ದೆ .ಅಲ್ಲಿ ನಮ್ಮ ಜಯರಾಂ ಮಾವನ ಮನೆ ಬಳಿ ಒಮ್ಮೆ ಕಾಣದಂತೆ ಮಾಯವಾದನು.....ಹಾಡು ಹಾಡಿದೆ. ಅಕ್ಕ ಪಕ್ಕದ ಮನೆಯವರು ಬಂದು ಕೇಳಿ ಖುಷಿ ಪಟ್ಟು ಕೆಲವರು ಐವತ್ತು ಪೈಸೆ ಕೆಲವರು ಒಂದು ರುಪಾಯಿ ಬಹುಮಾನ ನೀಡಿದರು. ಇದೇ ರೀತಿಯಲ್ಲಿ ಅಲ್ಲಲ್ಲಿ ಜನರ ಅಪೇಕ್ಷೆಯ ಮೇರೆಗೆ ಹಾಡಿ ಜಾತ್ರೆಯ ವೇಳೆಗೆ ನನ್ನ ಜೇಬಿನಲ್ಲಿ ಹತ್ತು ರೂಪಾಯಿ ಸಂಗ್ರಹವಾಗಿತ್ತು ಅಮ್ಮನಿಗೆ ಈ ವಿಷಯ ಹೇಳಿ ದುಡ್ಡು ತೋರಿಸಿದೆ. ಅಮ್ಮ ಒಳಗೊಳಗೇ ಖುಷಿ ಪಟ್ಟರೂ" "ಬರೇ ಪದಗಿದ ಹೇಳ್ಕೆಂಡು ತಿರಾಗದ್ ಬಿಟ್ಟು ಓದಾ ಕಡೆ ಮನಸ್ ಕೊಡು" ಎಂದು ಗದರಿದರು.
ಇತ್ತೀಚಿಗೆ ಅಪ್ಪುರವರು ನಮ್ಮನ್ನು ಅಗಲಿದ ಸಮಯದಲ್ಲಿ ಅವರ ಕಾಣದಂತೆ ಮಾಯವಾದನು ಹಾಡು ಮತ್ತು ನಾನು ಹಾಡಿದ ಕಾಣದಂತೆ ಮಾಯವಾದನು ಹಾಡು ಯಾಕೋ ಬಹಳ ನೆನಪಾಯಿತು ಮತ್ತು ದೊಡ್ಮನೆ ಹುಡುಗನ ಅಕಾಲಿಕ ಅಗಲಿಕೆ ಬಹಳ ಕಾಡಿತು ಮತ್ತು ಕಾಡುತ್ತಿದೆ.ಐ ಮಿಸ್ ಯು ಅಪ್ಪು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
990925529