04 ನವೆಂಬರ್ 2021

ಎರಡು ಲಕ್ಷ..! ಮತ್ತೂ ಓದುಗರು...!


 


ಎರಡು ಲಕ್ಷ.....! ಮತ್ತೂ ಓದುಗರು!

ಮೊದಲಿಗೆ ನನ್ನ ಎಲ್ಲಾ ಓದುಗ ಬಂಧುಗಳಿಗೆ ಇದೋ ನನ್ನ ನಮನಗಳು .

ಇಂದು ದೀಪಾವಳಿಯ ದೀಪಗಳ ಜೊತೆಗೆ 200000 ಓದುಗರ ಸಂಭ್ರಮದ ಪಟಾಕಿ ನನ್ನ ಮನದಲ್ಲಿ ಸಿಡಿಯುತ್ತಿದೆ.ಇನ್ನೇನು ಬೇಕು? ಈ ಹಬ್ಬ ನನ್ನ ಜೀವನದಲ್ಲಿ ಮರೆಯಲಾಗದ ಹಬ್ಬ.

2017 ನೇ ಇಸವಿಯಲ್ಲಿ ಯೂಟ್ಯೂಬ್ ‌ನೋಡಿಕೊಂಡು ಏಕಲವ್ಯ ನಂತೆ ಆರಂಭಮಾಡಿದ ಶ್ರೀದೇವಿತನಯ.ಬ್ಲಾಗ್ಸ್ಪಾಟ್.ಕಾಮ್ sridevitanya.blogspot.com
ಇಂದು ಪ್ರಪಂಚದಲ್ಲಿ ಎರಡು ಲಕ್ಷ ಓದುಗರ ತಲುಪಿರುವುದು ಬಹಳ ಸಂತಸ ತಂದಿದೆ. ಈ ಸಂತಸಕ್ಕೆ ಕಾರಣ ನೀವು ಮತ್ತು ನೀವು .
ಮತ್ತೊಮ್ಮೆ ನಿಮ್ಮೆಲ್ಲರಿಗೂ ಸಾಷ್ಟಾಂಗ ನಮಸ್ಕಾರಗಳು .

03 ನವೆಂಬರ್ 2021

ನನ್ನ ಬಾಲ್ಯದ ತಿಂಡಿ ತಿನಿಸುಗಳು.


 


 



ಬಾಲ್ಯದ. ತಿಂಡಿ ತಿನಿಸುಗಳು.. 


ಬಾಲ್ಯಕ್ಕೂ ತಿಂಡಿ ತಿನಿಸುಗಳಿಗೂ ಅವಿನಾಭಾವ ಸಂಬಂಧವಿದೆ. ನಾನು ಬಾಲ್ಯದಲ್ಲಿ ಅಂಗಡಿಗಳಲ್ಲಿ ತಿಂಡಿ ತಿನಿಸುಗಳನ್ನು ತಿಂದಿದ್ದು ಕಡಿಮೆ. ಪರಿಸರದಲ್ಲಿ ಹೊಲದಲ್ಲಿ ,ತೋಟದಲ್ಲಿ ಬೆಳೆಯುವ ತಿನಿಸುಗಳನ್ನು ತಿಂದದ್ದೇ ಹೆಚ್ಚು.


ನಮ್ಮೂರಿನ ಅಂದಿನ ಎರಡು ಅಂಗಡಿಗಳಾದ  ಐಯ್ಯನೋರ ಅಂಗಡಿ ಮತ್ತು ಗುಂಡಜ್ಜನವರ ಅಂಗಡಿಗಳಲ್ಲಿ ಆಗಾಗ್ಗೆ ಕೆಲವು ತಿನಿಸುಗಳನ್ನು ಪಡೆದು ತಿನ್ನುತ್ತಿದ್ದೆ ಅಮ್ಮನಿಂದ ಕಾಡಿ ಬೇಡಿ ಹಣ ಪಡೆದು ಹತ್ತು ಪೈಸೆ ಗಳನ್ನು ಪಡೆದು ಹತ್ತು ಸೊಂಡಿಗೆ (ಬೋಟಿ) ಪಡೆದು ಕೈಯ ಹತ್ತು ಬೆರಳುಗಳಿಗೆ ಸಿಕ್ಕಿಸಿಕೊಂಡು ಒಂದೊಂದೇ ಬೆರಳ ಕಚ್ಚಿ ತಿನ್ನುತ್ತಾ ಆನಂದಿಸುತ್ತಿದ್ದೆ. ಕೆಲವೊಮ್ಮೆ ನಿಂಬೇ ಹುಳಿ ಪೆಪ್ಪರ್ ಮೆಂಟ್ ಚಿಕ್ಕ ಪೆಪ್ಪರ್ ಮೆಂಟ್ ಗಳನ್ನು ಕೊಂಡು ಜೇಬಿನಲ್ಲಿ ಹಾಕಿಕೊಂಡು ಒಂದೊಂದೇ ತಿನ್ನುತ್ತಿದ್ದೆ. ಇನ್ನೂ ಕೆಲವೊಮ್ಮೆ ಗಿರಗಿಟ್ಲೇ ಕೊಂಡು ಅದರೊಂದಿಗೆ ಇರುವ ದಾರವನ್ನು ನನ್ನ ಎರಡೂ ಕೈಗಳ ಬೆರಳಿಗೆ ಸಿಕ್ಕಿಸಿಕೊಂಡು ಗಿರಗಿಟ್ಲೇ ಆಡಿಸಿ ದಾರ ಕಿತ್ತು ಬಂದಾಗ ಗಿರಗಿಟ್ಲೇ ನೇರವಾಗಿ ಬಾಯಿಗೆ ಸೇರುತ್ತಿತ್ತು. ಶುಂಠಿ ಪೇಪರ್ ನಂತಹ ರುಚಿ ಇರುವ ಗಿರಗಿಟ್ಲೇ ಒಂಥರಾ ರುಚಿ ಈಗಲೂ ನೆನಪಲ್ಲಿದೆ.


  ನಾನು ನನ್ನ ಬಾಲ್ಯದಲ್ಲಿ ಅಂಗಡಿಯ ತಿನಿಸುಗಳಿಗಿಂತ ಪರಿಸರದಲ್ಲಿ ಬೆಳೆದ ತಿನಿಸು ತಿಂದದ್ದೇ ಹೆಚ್ಚು. ಮಳೆಗಾಲದಲ್ಲಿ ನಮ್ಮೂರ ಸುತ್ತಲೂ ಹಸಿರೋ ಹಸಿರು ರಾಗಿ,ಜೋಳ, ನವಣೆ ಸಜ್ಜೆ ಹೊಲಗಳು ನಮ್ಮ ಮನೆಯಿಂದ ನೂರಾರು ಹೆಜ್ಜೆಗಳನ್ನು ದಾಟಿದರೆ ಸಿಗುತ್ತಿದ್ದವು .ಈ ಹೊಲಗಳಲ್ಲಿ ಹೆಗಲಿಗೊಂದು ಚೀಲ ತಗುಲಾಕಿಕೊಂಡು ನಾನು ಮತ್ತು ನಮ್ಮ ಪಕ್ಕದ ಮನೆಯ ಸಣ್ಣಪ್ಪನವರ ಮಗ ಸೀನ ಗೊರ್ಜಿ ಸೊಪ್ಪ, ಕಿರ್ಕ್ಸಾಲೆ ಸೊಪ್ಪು, ಕೋಲನ್ನೇ ಸೊಪ್ಪು, ಪುಂಡಿ ಸೊಪ್ಪು, ಇನ್ನೂ  ಯಾವಾವುದೋ ಬೆರಕೆ  ಸೊಪ್ಪು ತಂದು ನನ್ನ ಅಮ್ಮನಿಗೆ ಕೊಟ್ಟರೆ ಅಮ್ಮ ಸಂಜೆಗೆ ಕುಕ್ಸೆಪ್ಪು ಎಂಬ ಸಾರು ಮಾಡುತ್ತಿದ್ದರು ಅದರ ಜೊತೆಗೆ ಒಂದು ಬಿಸಿಮುದ್ದೆ ಊಟ ಮಾಡುವ ಸ್ವಾದವನ್ನು ಸವಿದೇ ಅನುಭವಿಸುತ್ತಿದ್ದೆ.


ರಾಗಿಯು ಬೆಳೆಯ ತೆನೆ  ಸ್ವಲ್ಪ ಬೆಳಸೆ ಆದ ತಕ್ಷಣ ಯಾರ ಹೊಲವಾದರೂ ಸರಿ ನುಗ್ಗಿ  ಎಂಟರಿಂದ ಹತ್ತು ರಾಗಿ ತೆನೆ ಕಿತ್ತು ತಂದು ಅದರಿಂದ ಕಾಳು ಬೇರ್ಪಡಿಸಿ, ಅದಕ್ಕೆ ಸ್ವಲ್ಪ ಉಪ್ಪು, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಸೇರಿಸಿ, ಟವಲ್ ನಲ್ಲಿ ಹಾಕಿ ಗಂಟುಕಟ್ಟಿ  ಮಡಿಚಿ ಕೈ ಮುಷ್ಟಿಯಲ್ಲಿ ಚೆನ್ನಾಗಿ ಗುದ್ದಿ ಬಿಚ್ಚಿ ನೋಡಿದರೆ " ಗುದ್ ಬೆಳಸೆ" ರೆಡಿ .ಗೆಳೆಯರೆಲ್ಲ ಸೇರಿ ತಿನ್ನುತ್ತಾ ಕುಳಿತರೆ ಅದರ ಮಜಾನೆ ಬೇರೆ.


ರಜಾ ದಿನಗಳಲ್ಲಿ ದನ ಕಾಯಲು ಹೋಗುತ್ತಿದ್ದ ನಾವು ದನ ಮೇಯಲು ಬಿಟ್ಟು ಬಿಳಿಜೋಳದ  ತೆನೆಗಳನ್ನು ಮುರಿದು ತೆನೆಯಿಂದ  ಜೋಳದ ಕಾಳು ಬೇರ್ಪಡಿಸಿ ಅಲ್ಲೆ ಮೂರು ಕಲ್ಲಿನ  ಗುಂಡುಗಳಿಂದ  ಒಲೆ  ಮಾಡಿ ಒಡೆದ ಮಡಿಕೆಯಲ್ಲಿ ಸ್ವಲ್ಪ ನೀರು ಹಾಕಿ ಅದರಲ್ಲಿ ಬಿಡಿಸಿದ ಹಸಿ ಜೋಳದ ಕಾಳು ಹಾಕಿ ಅಲ್ಲೇ ಸಿಗುವ ಸೌದೆಗಳಿಂದ ಬೇಯಿಸಿದಾಗ " ಜೋಳದ ಗುಗ್ಗುರಿ " ಸಿದ್ದವಾಗುತ್ತಿತ್ತು. ನಮ್ಮ ದನಗಳು ಹುಲ್ಲನ್ನು ಮೇಯುತ್ತಿದ್ದರೆ ನಾವು ಗುಗ್ಗರಿ ತಿನ್ನುತ್ತಾ ಅವುಗಳಿಗೆ ಕಂಪನಿ ನೀಡುತ್ತಿದ್ದೆವು.

ಇದೇ ತರಹ ಅವರೇ ಕಾಯಿ ಸೀಸನ್ ನಲ್ಲಿ ಹೊಲದಲ್ಲೇ ಹಸಿ ಅವರೆ ಕಾಯಿ ಬೇಸಿ ತಿಂದು ,ರಾತ್ರಿ ಮಲಗಿದಾಗ ಅಪಾನ ವಾಯು ಹೆಚ್ಚಾದಾಗ ಅಮ್ಮ " ಯಾರ್ ಹೊಲದ್ದು ಅವರೇ ಕಾಯಿನೋ ಇದು ಗಬ್ಬು ನಾತ"  ಅಂದರೂ ಕೇಳಿದರೂ ಕೇಳದಂತೆ ದುಪ್ಪಡಿ ಗುಬಾರಾಕಿಕೊಂಡು ಮಲಗುತ್ತಿದ್ದೆ.


ಕೊಟಗೇಣಿಯಿಂದ ಉಪ್ಪೇರಿಗೇನಹಳ್ಳಿಗೆ ಕಾಲು ದಾರಿಯಲ್ಲಿ ನಡೆದು ಶಾಲೆಗೆ ಹೋಗುವಾಗ ನಾನು ನನ್ನ ಗೆಳೆಯರು ದಿನವೂ ಗೊಲ್ಲರ ಹಳ್ಳಿಯ ಅಣ್ಣಪ್ಪನವರ ಹೊಲದ ಸಜ್ಜೆ ತೆನೆ ಗಳನ್ನು ತಿಂದು ಅರ್ಧ ಹೊಲದ ತೆನೆ ತಿಂದು ಮುಗಿಸಿದ್ದೆವು .ಹೊಲದ ಮಾಲಿಕ ಸಿಟ್ಟಿನಿಂದ ನಮ್ಮ ರಾಜಪ್ಪ ಮಾಸ್ಟರ್ ಗೆ ಹೇಳಿ ಬೆತ್ತದ ರುಚಿ ತೋರಿಸಿದ್ದ.


ಇನ್ನೂ ನನಗೆ ಪ್ರಿಯವಾದ ಮತ್ತೊಂದು ವಸ್ತು ಕಡ್ಲೆಕಾಯಿ.ನಮ್ಮೂರಲ್ಲಿ ಕಡ್ಲೇ ಕಾಯಿ ಬೆಳೆಯುತ್ತಿರಲಿಲ್ಲ.ನಮ್ಮ ಮಾವನವರ ಊರಾದ ಯರಬಳ್ಳಿಗೆ ಹೋದಾಗ ನನಗೆ ಕಡ್ಲೇಕಾಯಿ ಸುಗ್ಗಿ .ನಮಗೆ ಬೇಸಿಗೆ ರಜಾ ಬಿಡುವುದು ಮತ್ತು ಕಡಲೇಕಾಯಿ ಸೀಸನ್ ಒಂದೇ ಬಾರಿಗೆ ಬರುತ್ತಿದ್ದುದು ನನಗೆ ಎಲ್ಲಿಲ್ಲದ ಸಂತಸ.

ಯರಬಳ್ಳಿಗೆ ಹೋದ ತಕ್ಷಣ ನಮ್ಮ ಕರಿಯಪ್ಪ ಮಾವನ ಜೊತೆ ಕಡ್ಲೇಕಾಯಿ ಹೊಲ ಕಾಯಲು ರಾತ್ರಿ ಹೊರಡುತ್ತಿದ್ದೆ. ಹೊಲ ತಲುಪಿದ ಮೇಲೆ ನಮಗೆ ಎಷ್ಟು ಬೇಕೋ ಅಷ್ಟು ಕಡ್ಲೇಗಿಡ ಕಿತ್ತು ಅಲ್ಲೇ ಇರುವ ಸೌದೆ ಒಟ್ಟುಗೂಡಿಸಿ ಬೆಂಕಿ ಹಚ್ಚಿ ಸುಟ್ಟು ತಿನ್ನಲು ಶುರು ಮಾಡುತ್ತಿದ್ದೆವು

ಕೆಲವೊಮ್ಮೆ ಕಡ್ಲೇಕಾಯಿ ಜೊತೆಗೆ ಉಪ್ಪು ,ಹಸಿಮೆಣಸಿನ ಕಾಯಿ ಸೇರಿಸಿ , ಮತ್ತೆ ಕೆಲವು ಸಲ ಬೆಲ್ಲ ಸೇರಿಸಿ ಸುಟ್ಟ ಕಡ್ಲೇಕಾಯಿ ಸ್ವಾದ ಸವಿದ ನೆನಪು ಈಗಲೂ ಮರುಕಳಿಸುತ್ತಿದೆ.

ಈ ವರ್ಷ 

ದಸರಾ ಹಬ್ಬಕ್ಕೆ ಯರಬಳ್ಳಿಗೆ ಹೋದಾಗ ಕೆಲವೇ ಕೆಲವು ಕಡ್ಲೇಗಿಡದ ಹೊಲ ನೋಡಿದಾಗ ಅಂದು ನಾವು ಕಡ್ಲೇಗಿಡದ ಕಾಯಿ ಸುಟ್ಟು ತಿಂದ ನೆನಪಾಯಿತು.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ




ಬೆಳಕಾಗಬೇಕು.ಹನಿಗವನ


 ಸರ್ವರಿಗೂ ನರಕ ಚತುರ್ದಶಿ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳು🪔💐🌷🪔💐🌷


*ಬೆಳಕಾಗಬೇಕು*


ಈ ಹಿರಿಯ ಜೀವಗಳು

ಎಷ್ಟೋ ಜೀವಿಗಳಿಗೆ 

ತಮ್ಮ ಜೀವನದಲ್ಲಿ ಎಣ್ಣೆ 

ಸುರಿದು ಬೆಳಕಾಗಿದ್ದರು .

ಈ ಇಳಿ ವಯಸ್ಸಿನಲ್ಲಿ 

ದೀಪವನ್ನು ನೀಡುತ್ತಿದ್ದಾರೆ

ಬತ್ತಿ ಮತ್ತು ಎಣ್ಣೆಯನ್ನು ನಾವೇ 

ಹಾಕಿಕೊಳ್ಳಬೇಕು ಇಂತಹ ಇಳಿವಯಸ್ಸಿನವರಿಗೆ

ಬೆಳಕಾಗಬೇಕು. 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

02 ನವೆಂಬರ್ 2021

ನನ್ನ ಬಾಲ್ಯದ ಮೊದಲ ಪ್ರವಾಸ. ಲೇಖನ


ನಾನಾಗ  ಉಪ್ಪರಿಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಮುಖ್ಯ ಶಿಕ್ಷಕರಾದ ರಾಜಪ್ಪ ಸರ್ ರವರು ಕಚ್ಚೆ ಪಂಚೆ ಹಾಕಿ ಬಲಗೈಯಲ್ಲಿ ಪಂಚೆಯ ಸೆರಗು ಮಡಿಚಿದರೆಂದರೆ ಯಾರಿಗೋ ಒದೆ ಬೀಳುವುದು ಖಚಿತವಾಗಿತ್ತು. ಅವರು ಹಾಗೆ ಒದೆ ಕೊಟ್ಟು ಕಲಿಸಿದ್ದಕ್ಕೆ ನಾನು ಇಂದು ಇಂಗ್ಲಿಷ್ ಅಲ್ಪ ಸ್ವಲ್ಪ ಕಲಿತು ಮಕ್ಕಳಿಗೆ ಕಲಿಸುತ್ತಿರುವುದು.


ಅಂದು ರಾಜಪ್ಪ ಮಾಸ್ಟರ್ ಬಲಗೈಯಲ್ಲಿ ಪಂಚೆಯ ಸೆರಗು ಮಡಿಚಿದರು. ನಾವು ಮನದಲ್ಲೇ ಇವತ್ತು ಯಾವಾನೋ  ಹುಡುಗನಿಗೆ ಗ್ರಾಚಾರ ಇದೆ ಎಂದು ತುಟಿಕ್ ಪಿಟಿಕ್ ಅನ್ನದೇ ಕುಳಿತಿದ್ದೆವು . 

"ಏ ನಿಮಗೆ ಸ್ಕಾಲಾರ್ಷಿಪ್ ಬಂದೈತೆ ಕಣ್ರಲಾ, ನಾಳೆ ನಿಮ್ಮ ಅಪ್ಪ ಅಮ್ಮನ ಕರ್ಕಂಬಂದು ಸೈನ್ ಮಾಡುಸ್ ಬೇಕು " ಅಂದರು .ನಾವು ಹೊಸ ಇಂಗ್ಲಿಷ್ ಪದ ಕೇಳಿ ಪಿಳಿ ಪಿಳಿ ಕಣ್ ಬಿಡುವುದು ನೋಡಿ ಅರ್ಥ ಮಾಡಿಕೊಂಡ ರಾಜಪ್ಪ ಸರ್ " ಏ ಸರ್ಕಾರದಿಂದ ನಿಮಿಗೆ ಓದಾಕೆ ದುಡ್ ಕೊಟ್ಟಾದಾರೆ ಅದೇ ಸ್ಕಾಲರ್ಶಿಪ್  , ನಾಳೆ ನಿಮ್ ಅಪ್ಪ ಅಮ್ನನ ಕರ್ಕಂಬರ್ರಿ " ಎಂದು ಗಡುಸಾದ ಧನಿಯಲ್ಲಿ ಹೇಳಿದರು.


ಮಾರನೇ ದಿನ ನನ್ನ ಅಮ್ಮ ಶಾಲೆಗೆ  ಬಂದು ರಿಜಿಸ್ಟರ್ ಗೆ ಸೈನ್ ಹಾಕಿದ ಮೇಲೆ " ನೋಡಮ್ಮ ಶ್ರೀದೇವಮ್ಮ ನಿಮ್ ಮಗುಂಗೆ ಎಪ್ಪತ್ತು ರುಪಾಯಿ ಸ್ಕಾಲರ್ಶಿಪ್ ಬಂದೈತೆ .ಈಗ ನಾನು ನಿಮಿಗೆ ದುಡ್ ಕೊಡಲ್ಲ , ನಿಮ್ ಹುಡ್ಗುನ್ನ ಮೈಸೂರು, ತಲಕಾಡು, ಶಿವನ ಸಮುದ್ರ ದ ಕಡೆ ಮೂರ್ ದಿನ ಟೂರ್ ಕರ್ಕಂಡು ಹೋಗ್ತೀವಿ" ಎಂದರು ನಮ್ಮ ಮುಖ್ಯ ಶಿಕ್ಷಕರು.

" ಅಲ್ಲಾ ಸಾ , ನಮ್ ಹುಡ್ಗ ಅಷ್ಟು ದೂರಾ ಯಾವಾಗ್ಲೂ ಹೋಗಿಲ್ಲ,......." ಅಂದು ಏನೋ ಹೇಳಲು ಮುಂದಾದರು ನಮ್ಮ ಅಮ್ಮ. ಮಧ್ಯದಲ್ಲಿ  ತಡೆದು "ಅದೆಲ್ಲಾ ಯೋಚ್ನೆ ಮಾಡ್ಬೇಡ ಕಣಮ್ಮ ನಿಮ್ ಹುಡ್ಗನ ಜವಾಬ್ದಾರಿ ನಮ್ದು ಸುಮ್ಮನೆ ಕಳ್ಸು" ಅಂದರು ರಾಜಪ್ಪ ಮಾಸ್ಟರ್. ಅಮ್ಮ ಸುಮ್ಮನಾದರು ನನ್ನ ಮೊಗದಲ್ಲಿ ಮಂದಹಾಸ ಆಗಲೇ ಮೈಸೂರು ಹೇಗಿರಬಹುದೆಂದು ಕಲ್ಪನಾ ಲೋಕಕ್ಕೆ ಜಾರಿದ್ದೆ.


ಪ್ರಾಥಮಿಕ ಶಾಲಾ ಶಿಕ್ಷಕರಾದ ತಿಪ್ಪೇಶಪ್ಪ ಮಾಸ್ಟರ್ ಜೊತೆಯಲ್ಲಿ ನಾಲ್ಕನೇ ತರಗತಿಯಲ್ಲಿ ಒಂದು ದಿನದ ಪ್ರವಾಸ ಹೋದ ನಂತರ ಹೊರಡುತ್ತಿರುವ ಮೂರು ದಿನದ ಪ್ರವಾಸಕ್ಕೆ ನನ್ನಮ್ಮ ಮೂರು ದಿನದಿಂದ ಸಿದ್ದತೆ ಮಾಡಿದರು. ಮಂಡಕ್ಕಿ ಉರಿದು ಕೊಟ್ಟರು, ಕಡ್ಲೇಕಾಯಿ ಉರಿದು ಕೊಟ್ಟರು. ಚಿನಕುರುಳಿ ಮಾಡಿದ್ದರು. ನಮ್ಮ ಕೇರಿಯ ಎಲ್ಲರಿಗೂ ನನ್ನ ಮಗ ಟೂರ್ ಹೊಗ್ತಾನೆ ಎಂದು ಸಂತಸ ಮತ್ತು ಆತಂಕದಿಂದ  ಹೇಳಿಕೊಂಡು ಬಂದಿದ್ದರು.


ಟೂರ್ ಹೋಗುವ ದಿನ ಬಂದೇ ಬಿಟ್ಟಿತು. ಅಂದು ಸಂಜೆ  ನಾಲ್ಕು ಗಂಟೆಗೆ  ಸ್ನಾನ ಮಾಡಿ ಸಿದ್ಧವಾಗಿ ನಮ್ಮ ಊರಿನಿಂದ ಉಪ್ಪರಿಗೇನಹಳ್ಳಿಗೆ ಬಂದು  ನಮ್ಮ ಶಾಲೆಯ ಮುಂದೆ ನಿಂತಿದ್ದ ಕೆಂಪು ಬಣ್ಣದ ಗೌರ್ಮೆಂಟ್ ಬಸ್ ನೋಡಿದೆವು .ಅದು ನಮ್ಮ ಮೊದಲ ಗೌರ್ಮೆಂಟ್ ಬಸ್ ಪ್ರಯಾಣ. ರಾತ್ರಿ ಬಸ್ ಗೆ ಪೂಜೆ ಕೊಲ್ಲಾಪುರದಮ್ಮ ಗುಡಿಯ ಮುಂದೆ ನಿಲ್ಲಿಸಿ ಪೂಜೆ ಮಾಡಿಸಿ ಅಧಿಕೃತವಾಗಿ ಪ್ರವಾಸ ಹೊರಟಾಗ ರಾತ್ರಿ  ಹತ್ತೂವರೆ .ನಮ್ಮಮ್ಮ ಟಾಟಾ ಮಾಡುತ್ತಾ ಹುಸಾರು ಕಣೋ ಎಂದು ಹೇಳುವುದು ಬಸ್ ದೂರ ಹೋದರೂ ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣುತ್ತಿತ್ತು.


ರಾತ್ರಿ ಹನ್ನೆರಡು ಗಂಟೆಯವರೆಗೂ ಗೌರ್ಮೆಂಟ್ ಬಸ್ ಪ್ರಯಾಣದ ಅನಂದ ಅನುಭವಿಸುತ್ತಾ ಅಂತ್ಯಾಕ್ಷರಿ ಹಾಡುತ್ತಾ ಒಬ್ಬೊಬ್ಬರೇ ನಿದ್ರೆಗೆ ಜಾರಿದ್ದೆವು. ಬೆಳಗಿನ ಜಾವ ಐದೂವರೆಗೆ ನಮ್ಮ ಶಿಕ್ಷಕರು ನಮ್ಮ ಎಬ್ಬಿಸಿದರು. ಬಸ್ ಒಂದು ಹೊಳೆಯ ಬಳಿ ನಿಂತಿರುವುದು ಕಂಡಿತು. ಹೊಳೆಯ ಪಕ್ಕದಲ್ಲಿ ನಮ್ಮ ನಿತ್ಯ ಕರ್ಮ ಮುಗಿಸಿಕೊಂಡು ಹಲ್ಲುಜ್ಜಿ ಮುಖ ತೊಳೆದುಕೊಂಡು ಬಸ್ ನಲ್ಲಿ ಬಂದು ಕುಳಿತೆವು.ಬೆಳಿಗ್ಗೆ ಎಂಟು ಗಂಟೆಗೆ ಬಸ್ ಚಾಮುಂಡಿ ಬೆಟ್ಟ ಹತ್ತುತ್ತಾ ಇದೆ ಎಂದರು ದ್ಯಾಮಪ್ಪ ಮೇಷ್ಟ್ರು. ನಮಗೆ ಬಹಳ ಕುತೂಹಲದಿಂದ ಆ ಕಡೆ ನೋಡುತ್ತ ಮೈಸೂರ ಸೊಬಗ ಸವಿಯಲು ಆರಂಬಿಸಿದೆವು. ಕ್ರಮೇಣ ಬಸ್ ಬೆಟ್ಟದ ಮೇಲೆ ಚಲಿಸಿದಂತೆ ನಾಲ್ಕೈದು ಜನ ನನ್ನ ಸ್ನೇಹಿತರು ವಾಂತಿ ಮಾಡಲು ಶುರು ಮಾಡಿದರು." ಈ ಮುಂಡೆ ಮಕ್ಕಳಿಗೆ ಎಷ್ಟು ಸತಿ ಹೇಳಿದಿನಿ ಟೂರ್ ಗೆ ಬರೊವಾಗ ಸ್ವಲ್ಪ ಆಳ್ತಾಕ್ಕೆ ತಿನ್ರಿ ಅಂತ , ನೋಡ್ರಿ ಈಗ ಎರ್ರಾ ಬಿರ್ರಿ ತಿಂದು ಅಬ್ಕು...ಅಬ್ಕು... ಅಂತ ಕಕ್ಕೆಂಬತಾವೆ " ಎಂದು ಸಿಟ್ಟಿನಿಂದ ಎಲ್ಲರಿಗೂ ಬೈದರು ರಾಜಪ್ಪ ಮಾಸ್ಟರ್.


ಚಾಮುಂಡಿ ಬೆಟ್ಟದ ಮೇಲೆ ಬಸ್ ಇಳಿದು ಚಾಮುಂಡೇಶ್ವರಿ ದರ್ಶನ ಪಡೆದು ದೇವಾಲಯದ ದೊಡ್ಡ ಗೋಪುರವನ್ನು ಬೆರಗುಗಣ್ಣಿನಿಂದ ನೋಡಿ ಕಣ್ಗಳಲ್ಲೇ ಪೋಟೋ ತೆಗೆದುಕೊಂಡೆವು ಯಾಕೆಂದರೆ ಆಗ ನಮ್ಮ ಬಳಿ ಕ್ಯಾಮೆರಾಗಳು ಇರಲಿಲ್ಲ!



ಚಾಮುಂಡೇಶ್ವರಿಯ ದರ್ಶನದ ನಂತರ ತಿಂಡಿ ತಿಂದು ಬೆಟ್ಟ ಇಳಿಯುವಾಗ ಮತ್ತೆ ಕೆಲವರು ವಾಂತಿ ಮಾಡಿದಾಗ ರಾಜಪ್ಪ ಮಾಸ್ಟರ್ ಗುರಾಯಿಸಿದರು. 

ಮೊದಲ ಬಾರಿಗೆ ಜೂಗೆ ನಾವು ಹೊರಟೆವು ವಿಧ ವಿಧದ ಪ್ರಾಣಿ ಪಕ್ಷಿಗಳ ಕಂಡು ಬಹಳ ಸಂತಸ ಪಟ್ಟೆವು. ನಂತರ ಅರಮನೆಯ ವೈಭವ ನೋಡಿದೆವು ಸಂಜೆ ಕನ್ನಂಬಾಡಿ ಕಟ್ಟೆ ಮತ್ತು ಉದ್ಯಾನವನ, ಸಂಗೀತ ಕಾರಂಜಿ ನೋಡಿದೆವು ಅಷ್ಟೊತ್ತಿಗೆ ಧಣಿದಿದ್ದ ನಮಗೆ ಊಟ ಕೊಡಿಸಿ ಒಂದು ಕಲ್ಯಾಣ ಮಂಟಪದಲ್ಲಿ ಮಲಗಲು ನಮ್ಮ ಶಿಕ್ಷಕರು ವ್ಯವಸ್ಥೆ ಮಾಡಿದ್ದರು.


ಬೆಳಿಗ್ಗೆ ಐದಕ್ಕೆ ನಮ್ಮನ್ನು ಎಬ್ಬಿಸಿದ ನಮ್ಮ ಶಿಕ್ಷಕರು ನಮ್ಮನ್ನು ಮುಂದಿನ ದಿನದ ಪ್ರವಾಸಕ್ಕೆ ಅಣಿಗೊಳಿಸಿದರು. ಹೀಗೆ ತಲಕಾಡು, ಶಿವನಸಮುದ್ರ ಮುಂತಾದ ಸ್ಥಳಗಳನ್ನು ನೋಡಿದ ನಾವು ಸುರಕ್ಷಿತವಾಗಿ ಊರಿಗೆ ಬಂದೆವು . 


ಈಗ ಭಾರತದ ಬಹುತೇಕ ಪ್ರದೇಶದಲ್ಲಿ ಪ್ರವಾಸ ಮಾಡುವ ಜೊತೆಗೆ ನೇಪಾಳದ ಪ್ರವಾಸ ಕೂಡಾ ಮಾಡಿರುವೆ .ಸಾವಿರಾರು ರೂಪಾಯಿಗಳ ಖರ್ಚು ಮಾಡಿ ಎಷ್ಟೇ ದಿನಗಳ ಪ್ರವಾಸ ಮಾಡಿದ್ದರೂ ನಮ್ಮ ರಾಜಪ್ಪ ಮಾಸ್ಟರ್ ಎಪ್ಪತ್ತು ರೂಪಾಯಿಗಳಲ್ಲಿ ಮೂರು ದಿನದ ಪ್ರವಾಸ ಕರೆದುಕೊಂಡು ಹೋದ ನೆನಪುಗಳನ್ನು ಮರೆಯಲು ಸಾದ್ಯವಿಲ್ಲ. ಇತ್ತೀಚಿಗೆ ಗೂಳಿಹೊಸಹಳ್ಳಿಗೆ ಹೋದಾಗ ರಾಜಪ್ಪ ಮಾಸ್ಟರ್ ನೋಡಿದಾಗ ಎಲ್ಲಾ ಮತ್ತೆ ನೆನಪಾಯಿತು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

 

31 ಅಕ್ಟೋಬರ್ 2021

ಅಪ್ಪುಗೆ ನಾಲ್ಕು ಹನಿ ನಮನ


 



*ಅಪ್ಪು ಗೆ ನಾಲ್ಕು ಹನಿ ನಮನ*




ನಡೆನುಡಿಯಲಿ 

ಯಾವಾಗಲೂ 

ವಿನೀತ|

ಅವರೇ ಕನ್ನಡ

ನಾಡಿನ ಹೆಮ್ಮೆಯ

ಪುನೀತ||




ಇವರ ತಂದೆ 

ಮೇರು ನಟ 

ರಾಜಕುಮಾರ|

ಇವರೇನು 

ಕಡಿಮೆಯಲ್ಲ

ಗುಣದಲಿ ಬಂಗಾರ||



ಬೌತಿಕವಾಗಿ ನಮ್ಮನ್ನು

ಅಗಲಿದ್ದಾರೆ

ದೊಡ್ಮನೆ ಹುಡುಗ|

ಅವರ ಚಿತ್ರಗಳು 

ಅವರ ಸಮಾಜ ಸೇವೆಯ

ಸದಾ ಸ್ಮರಿಸುವುದು ಜಗ||



ಮೇಲು ಕೀಳು

ಬಡವ ಬಲ್ಲಿದ

ಭೇದವಿರಲಿಲ್ಲ

ನಮ್ಮ ಅಪ್ಪುಗೆ|

ಕಷ್ಟದಲ್ಲಿರುವವರಿಗೆ

ನೊಂದವರಿಗೆ ನೀಡುತ್ತಿದ್ದರು

ಸಾಂತ್ವನದ ಬಿಸಿ ಅಪ್ಪುಗೆ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು