18 ಅಕ್ಟೋಬರ್ 2021

ಹಾಸನ ವಾಣಿ.೧೭/೧೦/೨೧


 

ಪ್ರಜಾಪ್ರಗತಿ . ೧೭/೧೦/೨೧


 

ಕೋದಂಡನ ಟೀಚಿಂಗ್ ಪ್ರಾಕ್ಟೀಸ್ . ನಗೆ ಬರಹ


 

ಕೋದಂಡನ ಟೀಚಿಂಗ್ ಪ್ರಾಕ್ಟೀಸ್
ನಗೆ ಬರಹ

ನಾನು ಆಗ ಟಿ.ಸಿ.ಎಚ್. ತರಬೇತಿ ಪಡೆಯುತ್ತಿದ್ದ ದಿನಗಳು.ಟಿ. ಸಿ .ಹೆಚ್ . ಎಂದ ಮೇಲೆ ಟೀಚಿಂಗ್ ಪ್ರಾಕ್ಟೀಸ್ ಇರಲೇಬೇಕು.ವಿದ್ಯಾರ್ಥಿ ಶಿಕ್ಷಕರಾದ ನಮ್ಮನ್ನೆಲ್ಲಾ ಹಲವಾರು ತಂಡಗಳಾಗಿ ವಿಂಗಡಿಸಿ ವಿವಿಧ ಶಾಲೆಗಳಿಗೆ ಕಳುಹಿಸುತ್ತಿದ್ದರು. ನಮ್ಮ ತಂಡ ದಲ್ಲಿದ್ದ ಕೋದಂಡ ಎಂಬುವವನು ಗಡಿಬಿಡಿಯಲ್ಲಿ ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಿ ನಮ್ಮನ್ನೆಲ್ಲಾ ನಗೆಗಡಲಲ್ಲಿ ತೇಲಿಸುತ್ತಿದ್ದ. ಇದಕ್ಕೆ ಕಾರಣ ಸ್ಟೇಜ್ ಫಿಯರ್!

ಸಾಮಾನ್ಯವಾಗಿ ಪಾಠ ಮಾಡುವಾಗ ಪೀಠಿಕೆಯಿಂದಲೇ ಪಾಠ  ಮಾಡಬೇಕು. ಅದು ಹರ್ಬಾಟ್ ನ ಪಂಚಸೋಪಾನದ ಮೊದಲು ಮೆಟ್ಟಿಲು ಎಂದು ನಮ್ಮ ಶಿಕ್ಷಕರು ಹೇಳಿದ್ದರು. ಪೀಠಿಕೆಯು ಮಕ್ಕಳ ಬಾಯಲ್ಲೇ ಬರಬೇಕು .ಎಂದು ನಮ್ಮ ಶಿಕ್ಷಕರು ಹೇಳಿದ್ದನ್ನು ಕೋದಂಡ ಬಹಳ ಚೆನ್ನಾಗಿ ನೆನಪಿಟ್ಟುಕೊಂಡಿದ್ದ. ಒಮ್ಮೆ "ತಾಳಿಕೋಟಿ  ಯುದ್ಧ" ಎಂಬ ಇತಿಹಾಸ ಪಾಠ ಮಾಡಬೇಕಾದ  ಕೋದಂಡನು ಏನೆಲ್ಲಾ ಹರಸಾಹಸ ಮಾಡಿದರೂ ಮಕ್ಕಳು ತಾಳಿಕೋಟೆ ಎಂದು ಹೇಳಲೇ ಇಲ್ಲ. ಪಾಠ ವೀಕ್ಷಿಸಲು ಶಿಕ್ಷಕರು ಹಿಂದೆ ಕುಳಿತರೆ ನಮ್ಮ ಕೋದಂಡ ಇನ್ನೂ ಗಲಿಬಿಲಿಯಾಗುತ್ತಿದ್ದ.
ಪೀಠಿಕೆಯಲ್ಲಿ ಪಾಠದ ಹೆಸರು ಮಕ್ಕಳ ಬಾಯಲ್ಲಿ ಬರಲಿಲ್ಲ.

ಕೊನೆಗೆ ಈ ರೀತಿಯ ಪೀಠಿಕಾ ಪಶ್ನೆಗಳನ್ನು ಹಾಕಿದ - 'ಮದುವೆ ಆಗಬೇಕಾದರೆ ಹೆಣ್ಣಿಗೆ ಗಂಡು ಏನು ಕಟ್ತಾನೆ ?
ಮಕ್ಕಳು 'ತಾಳಿ' ಎಂದರು. ಕೋದಂಡನಿಗೆ ಖುಷಿಯಾಗಿ
ಎರಡನೆ ಪ್ರಶ್ನೆ ಕೇಳಿದ: "ರಾಜರು ಹಿಂದೆ ತಮ್ಮ ಪ್ರಜೆಗಳ ರಕ್ಷಣೆ ಮಾಡಿಕೊಳ್ಳಲು ನಗರದ ಸುತ್ತ ಏನು ಕಟ್ಟಿಸುತ್ತಿದ್ದರು?
ಮಕ್ಕಳು ಜೋರಾಗಿ "ಕೋಟೆ" ಸಾರ್' ಎಂದರು. ಆಗ ಕೋದಂಡ ವೆರೀ ಗುಡ್ , ಹಾಗಾದರೆ ನಾವು ಈ ದಿನ ತಾಳಿಕೋಟೆ ಯುದ್ಧದ ಬಗ್ಗೆ ತಿಳಿಯೋಣ' ಎಂದು ಹೇಳಿದಾಗ ಪಾಠ  ವೀಕ್ಷಣೆ ಮಾಡುತ್ತಿದ್ದ ಶಿಕ್ಷಕರು ಬೇಸ್ತು ಬಿದ್ದರು .

ಮುತ್ತೊಂದು ತರಗತಿಯಲ್ಲಿ ಕೋದಂಡ ಪೌರನೀತಿಯ ಪಾಠ ಮಾಡುತ್ತಿದ್ದ. ಈ ಮೊದಲೇ ಹೇಳಿದಂತೆ ಅವನಿಗೆ ಶಿಕ್ಷಕರು ಪಾಠ ವೀಕ್ಷಣೆ ಮಾಡಿದರೆ ಗಡಿಬಿಡಿಯಾಗಿ ಏನೇನೋ ಹೇಳುತ್ತಿದ್ದ. ಅವನ ಉದ್ದೇಶ ಮಕ್ಕಳಿಂದ 'ಪ್ರಧಾನಮಂತ್ರಿ' ಎಂದು - ಹೇಳಿಸಬೇಕಾಗಿತ್ತು. ಅದಕ್ಕೆ ಅವನು ಹಾಕಿದ ಪಶ್ನೆ  ಡೆಲ್ಲಿನಾಗೆ ಯಾರು ಇರ್ತಾರಲಾ?'
ಮಕ್ಕಳು "ಮನುಷ್ಯರು" ಎಂದು ತಟ್ಟನೆ ಉತ್ತರಿಸಿದಾಗ ಕೋದಂಡನಿಗೆ ಪಿತ್ತ ನೆತ್ತಿಗೇರಿತು , ಹಂಗಾದರೆ ನಮ್ಮ ಊರಾಗೆ ಬರೇ  ಕತ್ತೆ  ಇದ್ದಾವೇನಲೇ? ಡೆಲ್ಲಿನಾಗೆ ಯಾರು ಇರ್ತಾರೆ ಅನ್ನೋದೇ    ಗೊತ್ತಿಲ್ಲ ನಿಮಗೆ  ಅಂತ ಸಿಟ್ಟಾಗಿ 'ಹಾಂ..ಕೇಳಿ ಡೆಲ್ಲಿನಾಗೆ ಪ್ರಧಾನಮಂತ್ರಿಗಳು ಇರ್ತಾರೆ' ಎಂದು ಹೇಳಿದಾಗ ಪಾಠ ವೀಕ್ಷಣೆ ಮಾಡುವ ಶಿಕ್ಷಕರ  ಕಣ್ಣು ಕೆಂಪಗಾಗಿದ್ದರೂ ಸುಮ್ಮನೆ ಕುಳಿತು ಪಾಠ ವೀಕ್ಷಿಸಿ, ನಂತರ ಕ್ಲಾಸ್ ತೆಗೆದುಕೊಂಡರು. ಅದು ಬೇರೆ ಮಾತು.

ಮತ್ತೊಮ್ಮೆ ವಿಜ್ಞಾನ ಪಾಠ ಬೋಧಿಸುವಾಗ ಮಕ್ಕಳಿಂದ ನೀರು' ಎಂಬ ಉತ್ತರ ಪಡೆಯಬೇಕಾಗಿತ್ತು. ಅದಕ್ಕೆ ನಮ್ಮ ಕೋದಂಡ ಹಾಕಿದ ಪಶ್ನಾವಳಿ ಎಂದರೆ 'ಲೇ... ಮನುಷ್ಯರು ಸತ್ತಾಗ ಅವ್ರ ಬಾಯಲ್ಲಿ ಏನ್ ಬಿಡ್ತಾರೆ?' ಮಕ್ಕಳು ಯೋಚಿಸಿ " ಹಾಲು ಬಿಡ್ತಾರೆ ಸಾರ್" ಎಂದರು. ಆಗ ಕೋದಂಡ ಅವರಿಗೆ 'ವೆರಿ ಗುಡ್' ಅಂದು ಎರಡನೆ ಪ್ರಶ್ನೆಗೆ ಮುಂದುವರೆದ, 'ಹಾಲು  ಸಿಗದಿದ್ದರೆ ಸತ್ತಾಗ ಬಾಯಿಗೆ ಏನು ಬಿಡ್ತಾರೆ?' ಮಕ್ಕಳು  ಯೋಚಿಸಿ" ನೀರು ಬಿಡ್ತಾರೆ. ಸಾರ್"ಎಂದರು, ಆಗ ನಮ್ಮ  ಕೋದಂಡನಿಗಾದ ಸಂತೋಷ ಅಷ್ಟಿಷ್ಟಲ್ಲ, 'ವೆರಿ ವೆರಿ ಗುಡ್, ಹಾಗಾದರೆ ನಾವು ಈ ದಿನ ನೀರಿನ ಬಗ್ಗೆ ತಿಳಿಯೋಣ' ಎಂದು ಬಿಡಬೇಕೇ?!
ಇಂತಹ ಘಟನೆಗಳು ನಮ್ಮ ಟಿ. ಸಿ. ಹೆಚ್. ಮತ್ತು ಬಿ .ಎಡ್. ಓದುವಾಗ ಹಲವಾರು ಘಟಿಸಿವೆ .ಇಪ್ಪತ್ತೊಂದು  ವರ್ಷದ  ಬಳಿಕ ಮೊನ್ನೆ  ಊರಿಗೆ ಹೋದಾಗ ಕೋದಂಡ ಸಿಕ್ಕಿದ್ದ .
ಗಡಿಬಿಡಿ, ಗೊಂದಲಗಳಿಂದ ನಮ್ಮನ್ನೆಲ್ಲಾ ನಕ್ಕು ನಲಿಸುತ್ತಿದ್ದ ಕೋದಂಡನನ್ನು ನೋಡಿ ಮತ್ತೆ ನಗು ಬಂತು . ಗಂಟೆಗಟ್ಟಲೆ ನಮ್ಮ ಟ್ರೈನಿಂಗ್ ಕಾಲದ ನೆನಪುಗಳಲ್ಲಿ ತೇಲಿಹೋದೆವು ಎಷ್ಟೇ ಆದರೂ ನೆನಪುಗಳು ಮಧುರ ಅಲ್ಲವೇ?

ಸಿಹಿಜೀವಿ
ಸಿ.ಜಿ. ವೆಂಕಟೇಶ್ವರ

17 ಅಕ್ಟೋಬರ್ 2021

ಬಡತನ ನಿರ್ಮೂಲನೆ. ಹನಿಗವನ


 


#ಬಡತನನಿರ್ಮೂಲನೆ 


ದಶಕಗಳಿಂದ ನಾವೆಲ್ಲರೂ 

ಪ್ರಯತ್ನ ಮಾಡುತ್ತಿದ್ದೇವೆ ನಿರ್ಮೂಲನೆ ಮಾಡಲು

ಬಡತನ| 

ಹೇಗೆ ನಿರ್ಮೂಲನೆ ಆದೀತು 

ಉಳ್ಳವರು ಬಡವರಿಗೆ 

ಅನ್ನ ಆಹಾರಾದಿಗಳ ನೀಡದೆ

ನೀಡುತ್ತಲೇ ಇದ್ದಾರೆ

ಬರೀ ಬಾಯಿ ಮಾತಿನ 

ಸಾಂತ್ವನ| |


#ಸಿಹಿಜೀವಿ

ಸಿ ಜಿ ವೆಂಕಟೇಶ್ವರ



15 ಅಕ್ಟೋಬರ್ 2021

ಆರೋಗ್ಯಕರ ಜೀವನ ಸುಖೀ ಜೀವನ .ಲೇಖನ .Health is wealth .


 


ರೋಗವೆನ್ನುವುದು ಬಹುತೇಕ ಸ್ವಯಾರ್ಜಿತ ಎನ್ನಬಹುದು . ದೈಹಿಕ ಮತ್ತು ಮಾನಸಿಕವಾದ ರೋಗಗಳು ನಮ್ಮ ಅಜಾಗರೂಕತೆಯಿಂದ, ಅಸಮರ್ಪಕ ಆಹಾರ ಸೇವನೆಯಿಂದ , ದೈಹಿಕ ಶ್ರಮವಿಲ್ಲದ ಜೀವನ ಶೈಲಿಯಿಂದ ನಮ್ಮನ್ನು ಬಾದಿಸುತ್ತವೆ . ಸೂಕ್ತ ಆಹಾರ ಪದ್ಧತಿ, ವ್ಯಾಯಾಮ, ಮಾಡಿದರೆ ಬಹುತೇಕ ರೋಗಗಳು ನಮ್ಮಿಂದ ದೂರ ಸರಿಯುತ್ತವೆ.


ನಿಯಂತ್ರಣವಿಲ್ಲದೇ 

ತಿನ್ನುತ್ತಾ ದೈಹಿಕ ಶ್ರಮ ಪಡದೇ

ಕುಳಿತುಕೊಂಡರೆ ಕುಂತಲ್ಲೇ|

ನಿನ್ನನ್ನೆ ಹುಡುಕಿಕೊಂಡು

ಬರುವುದು ಕಾಯಿಲೆ||


ಇದನ್ನು ಮನಗಂಡು

"ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ" ಎಂದರು ಅನುಭಾವಿಗಳು.

"ಒಂದೊತ್ತು ಉಂಡವ ಯೋಗಿ,ಎರಡೊತ್ತು ಉಂಡವ ಭೋಗಿ, ಮೂರೊತ್ತು ಉಂಡವ ರೋಗಿ ,ನಾಲ್ಕೊತ್ತು ಉಂಡವರ ಹೊತ್ತಕೊಂಡ್ ಹೋಗಿ " ಎಂದರು ಹಿರಿಯರು. 

ಹಾಗಾಗಿ ಉತ್ತಮ ಜೀವನ ಶೈಲಿ ಹಿತಮಿತ ಆಹಾರ ನಮ್ಮದಾಗಬೇಕು.ಇದು ದೈಹಿಕ ರೋಗಗಳಿಂದ ದೂರವಿರುವ ಸುಲಭ ಮಾರ್ಗ.


ದೈಹಿಕ ಆರೋಗ್ಯಕ್ಕಿಂತ ಇಂದಿನ ದಿನಗಳಲ್ಲಿ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಿದೆ . ಅತಿಯಾದ ಆಸೆ, ಸಣ್ಣ ವಿಷಯಗಳ ಕಡೆ ಅತಿಯಾದ ಚಿಂತೆ, ಸೋಲಿಗೆ ಅತಿಯಾದ ನಕಾರಾತ್ಮಕ ಪ್ರತಿಕ್ರಿಯೆ ಮತ್ತು ಚಿಂತೆ, ಮುಂತಾದ ಕಾರಣದಿಂದಾಗಿ ಪ್ರಪಂಚದ ಬಹುತೇಕ ಜನ ಇಂದು ಖಿನ್ನತೆಗೆ ಒಳಗಾಗಿ , ಒತ್ತಡದಿಂದ ಹಲವಾರು ಮಾನಸಿಕ ರೋಗಗಳಿಗೆ ತುತ್ತಾಗಿದ್ದಾರೆ .


ಅತಿಯಾಸೆ, ಒತ್ತಡದಿಂದ 

ಇಂದು ಹಲವರನ್ನು ಕಾಡುತ್ತಿದೆ

ಮನೋರೋಗ|

ಓಡಿಸೋಣ ಈ ರೋಗಗಳ

ಹಾಸಿಗೆ ಇದ್ದಷ್ಟು ಕಾಲುಚಾಚುತ

ಮನಸ್ಸನ್ನು ನಿಯಂತ್ರಣಗೊಳಿಸೋಣ

ಮಾಡುತಲಿ ಧ್ಯಾನ ,ಯೋಗ||


ಮನವೆಂಬ ಮರ್ಕಟವು ನಮ್ಮ ಹಿಡಿತದಲ್ಲಿ ಇರದೇ ಅತಿಯಾಸೆಯಿಂದ ಅಪ್ರಮಾಣಿಕ ಮಾರ್ಗದಲ್ಲಿ ನಮಗೆ ಬೇಕಾದ ವಸ್ತುಗಳನ್ನು ಪಡೆಯಲು ಹಾತೊರೆಯುತ್ತದೆ. ಆ ಆಸೆಗಳು ಈಡೇರದಿದ್ದಾಗ ಅನೈತಿಕ ಮಾರ್ಗ ಹಿಡಿಯುತ್ತೇವೆ ಅದರ ಪರಿಣಾಮವಾಗಿ ಒತ್ತಡ ,ಚಿಂತೆ, ಖಿನ್ನತೆಗಳು ಹಿಂಬಾಲಿಸುತ್ತವೆ .


ಬಹುತೇಕವಾಗಿ ಮಾನಸಿಕ ಅನಾರೋಗ್ಯದಿಂದ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಮುಂತಾದ ಕಾಯಿಲೆಗಳು ಬರುತ್ತಿರುವುದು ನಮಗೆ ತಿಳಿದಿರುವ ಸಂಗತಿಯಾಗಿದೆ.


ಹಾಸಿಗೆ ಇದ್ದಷ್ಟು ಕಾಲು ಚಾಚುತ, ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಇಂದ್ರಿಯ ‌ನಿಗ್ರಹ ಮಾಡಿಕೊಂಡು, ಪರಿಸರದ ಜೊತೆಯಲ್ಲಿ ಸಂಘರ್ಷವೇರ್ಪಡಿಸಿಕೊಳ್ಳದೇ ಯೋಗ ಧ್ಯಾನ ಗಳ ಸಹಾಯದಿಂದ ನಾವು ಮಾನಸಿಕ ಆರೋಗ್ಯ ಹೊಂದಬೇಕಿದೆ.


ಇಂದಿನ ಆಧುನಿಕ ಕಾಲದಲ್ಲಿ ದಿನಕ್ಕೊಂದು ವೈರಸ್ , ನಿಂದ ಹಲವಾರು ಕಾಯಿಲೆಗಳು ನಮ್ಮನ್ನು ಬಾದಿಸಲು ಕಾದಿವೆ . ಅದಕ್ಕೆ ಸೂಕ್ತವಾದ ಆಹಾರ ಸೇವಿಸಿ, ಚಟುವಟಿಕೆಯ ಜೀವನ ಶೈಲಿಯನ್ನು ಅಳವಡಿಸಿಕೊಂಡು ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡರೆ , ಯೋಗ ಧ್ಯಾನಗಳ ಮೂಲಕ ನಮ್ಮ ಮನಸ್ಸನ್ನು ನಿಗ್ರಹ ಮಾಡಿಕೊಂಡು ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ರೋಗಗಳು ನಮ್ಮಿಂದ ದೂರಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ನಮ್ಮದಾಗಿ ಸುಖಿ ಜೀವನ ಸಾಗಿಸಬಹುದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529