15 ಅಕ್ಟೋಬರ್ 2021

ಆರೋಗ್ಯಕರ ಜೀವನ ಸುಖೀ ಜೀವನ .ಲೇಖನ .Health is wealth .


 


ರೋಗವೆನ್ನುವುದು ಬಹುತೇಕ ಸ್ವಯಾರ್ಜಿತ ಎನ್ನಬಹುದು . ದೈಹಿಕ ಮತ್ತು ಮಾನಸಿಕವಾದ ರೋಗಗಳು ನಮ್ಮ ಅಜಾಗರೂಕತೆಯಿಂದ, ಅಸಮರ್ಪಕ ಆಹಾರ ಸೇವನೆಯಿಂದ , ದೈಹಿಕ ಶ್ರಮವಿಲ್ಲದ ಜೀವನ ಶೈಲಿಯಿಂದ ನಮ್ಮನ್ನು ಬಾದಿಸುತ್ತವೆ . ಸೂಕ್ತ ಆಹಾರ ಪದ್ಧತಿ, ವ್ಯಾಯಾಮ, ಮಾಡಿದರೆ ಬಹುತೇಕ ರೋಗಗಳು ನಮ್ಮಿಂದ ದೂರ ಸರಿಯುತ್ತವೆ.


ನಿಯಂತ್ರಣವಿಲ್ಲದೇ 

ತಿನ್ನುತ್ತಾ ದೈಹಿಕ ಶ್ರಮ ಪಡದೇ

ಕುಳಿತುಕೊಂಡರೆ ಕುಂತಲ್ಲೇ|

ನಿನ್ನನ್ನೆ ಹುಡುಕಿಕೊಂಡು

ಬರುವುದು ಕಾಯಿಲೆ||


ಇದನ್ನು ಮನಗಂಡು

"ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ" ಎಂದರು ಅನುಭಾವಿಗಳು.

"ಒಂದೊತ್ತು ಉಂಡವ ಯೋಗಿ,ಎರಡೊತ್ತು ಉಂಡವ ಭೋಗಿ, ಮೂರೊತ್ತು ಉಂಡವ ರೋಗಿ ,ನಾಲ್ಕೊತ್ತು ಉಂಡವರ ಹೊತ್ತಕೊಂಡ್ ಹೋಗಿ " ಎಂದರು ಹಿರಿಯರು. 

ಹಾಗಾಗಿ ಉತ್ತಮ ಜೀವನ ಶೈಲಿ ಹಿತಮಿತ ಆಹಾರ ನಮ್ಮದಾಗಬೇಕು.ಇದು ದೈಹಿಕ ರೋಗಗಳಿಂದ ದೂರವಿರುವ ಸುಲಭ ಮಾರ್ಗ.


ದೈಹಿಕ ಆರೋಗ್ಯಕ್ಕಿಂತ ಇಂದಿನ ದಿನಗಳಲ್ಲಿ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಿದೆ . ಅತಿಯಾದ ಆಸೆ, ಸಣ್ಣ ವಿಷಯಗಳ ಕಡೆ ಅತಿಯಾದ ಚಿಂತೆ, ಸೋಲಿಗೆ ಅತಿಯಾದ ನಕಾರಾತ್ಮಕ ಪ್ರತಿಕ್ರಿಯೆ ಮತ್ತು ಚಿಂತೆ, ಮುಂತಾದ ಕಾರಣದಿಂದಾಗಿ ಪ್ರಪಂಚದ ಬಹುತೇಕ ಜನ ಇಂದು ಖಿನ್ನತೆಗೆ ಒಳಗಾಗಿ , ಒತ್ತಡದಿಂದ ಹಲವಾರು ಮಾನಸಿಕ ರೋಗಗಳಿಗೆ ತುತ್ತಾಗಿದ್ದಾರೆ .


ಅತಿಯಾಸೆ, ಒತ್ತಡದಿಂದ 

ಇಂದು ಹಲವರನ್ನು ಕಾಡುತ್ತಿದೆ

ಮನೋರೋಗ|

ಓಡಿಸೋಣ ಈ ರೋಗಗಳ

ಹಾಸಿಗೆ ಇದ್ದಷ್ಟು ಕಾಲುಚಾಚುತ

ಮನಸ್ಸನ್ನು ನಿಯಂತ್ರಣಗೊಳಿಸೋಣ

ಮಾಡುತಲಿ ಧ್ಯಾನ ,ಯೋಗ||


ಮನವೆಂಬ ಮರ್ಕಟವು ನಮ್ಮ ಹಿಡಿತದಲ್ಲಿ ಇರದೇ ಅತಿಯಾಸೆಯಿಂದ ಅಪ್ರಮಾಣಿಕ ಮಾರ್ಗದಲ್ಲಿ ನಮಗೆ ಬೇಕಾದ ವಸ್ತುಗಳನ್ನು ಪಡೆಯಲು ಹಾತೊರೆಯುತ್ತದೆ. ಆ ಆಸೆಗಳು ಈಡೇರದಿದ್ದಾಗ ಅನೈತಿಕ ಮಾರ್ಗ ಹಿಡಿಯುತ್ತೇವೆ ಅದರ ಪರಿಣಾಮವಾಗಿ ಒತ್ತಡ ,ಚಿಂತೆ, ಖಿನ್ನತೆಗಳು ಹಿಂಬಾಲಿಸುತ್ತವೆ .


ಬಹುತೇಕವಾಗಿ ಮಾನಸಿಕ ಅನಾರೋಗ್ಯದಿಂದ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಮುಂತಾದ ಕಾಯಿಲೆಗಳು ಬರುತ್ತಿರುವುದು ನಮಗೆ ತಿಳಿದಿರುವ ಸಂಗತಿಯಾಗಿದೆ.


ಹಾಸಿಗೆ ಇದ್ದಷ್ಟು ಕಾಲು ಚಾಚುತ, ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಇಂದ್ರಿಯ ‌ನಿಗ್ರಹ ಮಾಡಿಕೊಂಡು, ಪರಿಸರದ ಜೊತೆಯಲ್ಲಿ ಸಂಘರ್ಷವೇರ್ಪಡಿಸಿಕೊಳ್ಳದೇ ಯೋಗ ಧ್ಯಾನ ಗಳ ಸಹಾಯದಿಂದ ನಾವು ಮಾನಸಿಕ ಆರೋಗ್ಯ ಹೊಂದಬೇಕಿದೆ.


ಇಂದಿನ ಆಧುನಿಕ ಕಾಲದಲ್ಲಿ ದಿನಕ್ಕೊಂದು ವೈರಸ್ , ನಿಂದ ಹಲವಾರು ಕಾಯಿಲೆಗಳು ನಮ್ಮನ್ನು ಬಾದಿಸಲು ಕಾದಿವೆ . ಅದಕ್ಕೆ ಸೂಕ್ತವಾದ ಆಹಾರ ಸೇವಿಸಿ, ಚಟುವಟಿಕೆಯ ಜೀವನ ಶೈಲಿಯನ್ನು ಅಳವಡಿಸಿಕೊಂಡು ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡರೆ , ಯೋಗ ಧ್ಯಾನಗಳ ಮೂಲಕ ನಮ್ಮ ಮನಸ್ಸನ್ನು ನಿಗ್ರಹ ಮಾಡಿಕೊಂಡು ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ರೋಗಗಳು ನಮ್ಮಿಂದ ದೂರಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ನಮ್ಮದಾಗಿ ಸುಖಿ ಜೀವನ ಸಾಗಿಸಬಹುದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529



ಸದ್ಗುಣ ಶೋಭಿತ .ಹುಟ್ಟು ಹಬ್ಬದ ಶುಭಾಶಯಗಳು ಮಗಳೆ.


 *ಸದ್ಗುಣ ಶೋಭಿತ*


(ಮಗಳ ಹುಟ್ಟು ಹಬ್ಬದ ಪ್ರಯುಕ್ತ ಕವಿತೆ ಹುಟ್ಟು ಹಬ್ಬದ ಶುಭಾಶಯಗಳು ಶೋಭಿತ )


ಸಕಲ ಸದ್ಗುಣ "ಶೋಭಿತ"ಳು

ಅವಳೇ  ನಮ್ಮನೆ ಮಗಳು.


ನೋವುಲೂ ನಕ್ಕು ನಲಿದವಳು

ನಮ್ಮ ಮನಕಾನಂದವ ತಂದಳು


ಬಂಗಾರದ ಗುಣದ ಚಿನ್ನಮ್ಮ

ಹೋಲಿಕೆಯಲ್ಲಿ ನಿಜ  ನನ್ನಮ್ಮ 


ನೀ ಜನಿಸಿದ್ದು ವಿಜಯದಶಮಿ

ಸರ್ವ ಗುಣಗಳಲೂ ನೀ ಭೂಮಿ


ಮತ್ತೆ ಮತ್ತೆ ಬರಲಿ ನಿನ್ನ ಹುಟ್ಟಿದಬ್ಬ

ಅಂದೇ ನಮಗೆಲ್ಲರಿಗೂ ಮಾಹಾ ಹಬ್ಬ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

9900925529

14 ಅಕ್ಟೋಬರ್ 2021

ಮಕ್ಕಳಲ್ಲಿ ರಾಷ್ಟ್ರೀಯ ಮನೋಭಾವ ಬೆಳೆಸುವಲ್ಲಿ ಪೋಷಕರ ಪಾತ್ರ.


 


ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಸುವಲ್ಲಿ ಪೋಷಕರ ಪಾತ್ರ.

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಕೆಲ ಪ್ರಜೆಗಳೆನಿಸಿಕೊಂಡವರು ನಮ್ಮ  ಭಾರತದ ಧ್ವಜವನ್ನು ಕಾಲ್ಲಲಿ ಒಸಕಿ, ಬೆಂಕಿ ಹಂಚಿ ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಂಡು ವಿಕೃತಿ ಮೆರೆದಿರುವರು. ಇನ್ನೂ ಕೆಲ ಕಿಡಿಗೇಡಿಗಳು ನಮ್ಮ ಭಾರತ ಮಾತೆಯ ಅವಮಾನಿಸುತಾ  ಪರದೇಶಗಳ ಹೊಗಳಿ ಬುದ್ದಿ ಜೀವಗಳೆನಿಸಿಕೊಂಡು ತಿರುಗುತ್ತಿದ್ದಾರೆ .ಇಂತಹ ನೀಚ ಕೃತ್ಯ ಕಂಡಾಗ ನಿಜವಾದ ದೇಶಭಕ್ತರ ಹೃದಯ ಕುದಿಯದೇ ಇರದು.

"ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ...."ಎಂಬಂತೆ ನಮ್ಮ ತಾಯ್ನಾಡು ನಮಗೆ ಸ್ವರ್ಗಕ್ಕೂ ಮಿಗಿಲು ಎಂಬುದನ್ನು ನಾವೆಲ್ಲರೂ ಒಪ್ಪಿಕೊಂಡರೂ ನಮ್ಮಲ್ಲಿ ದೇಶಭಕ್ತಿ ಕಡಿಮೆ ಎಂದರೆ ಕೆಲವರಿಗೆ ಬೇಸರವಾದರೂ ಅದೇ ಕಹಿ ಸತ್ಯ . ಇತ್ತೀಚಿನ ದಿನಗಳಲ್ಲಿ ಉಗ್ರರಿಗೆ ನಮ್ಮ ದೇಶದವರೇ ಆಶ್ರಯ ನೀಡಿ  ಸಹಕಾರ ನೀಡಿ ವರ್ಷಗಳ ಕಾಲ ಅವರಿಗೆ ಅನ್ನ ನೀಡಿದ ದೇಶದ್ರೋಹಿಗಳಿಗೆ ಏನು ಹೇಳೋಣ?.

ಮಾತೆತ್ತಿದರೆ ಸಂವಿಧಾನ, ಹಕ್ಕು ಮತ್ತು ಕರ್ತವ್ಯಗಳು ಸರ್ಕಾರದ ನೀತಿ ನಿಯಮಗಳ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುವ ಬುದ್ದಿವಂತರು ದೇಶಭಕ್ತಿ ,ದೇಶದ ಬಗೆಗಿನ ವಿಚಾರಗಳಲ್ಲಿ ಜಾಣ ಮೌನ ವಹಿಸುತ್ತಾರೆ.

ನಮ್ಮ ರಾಷ್ಟ್ರ ಲಾಂಛನ , ರಾಷ್ಟ್ರಗೀತೆ, ರಾಷ್ಟ್ರೀಯ ಪರಂಪರೆಯ ಮತ್ತು ರಾಷ್ಟ್ರವನ್ನು ಗೌರವಿಸಬೇಕಾದ್ದು ನಮ್ಮ ಕರ್ತವ್ಯ ಎಂದು ಸಂವಿಧಾನದಲ್ಲಿ ಉಲ್ಲೇಖವಿದೆ .ಆದರೆ ಕೆಲವರಿಗೆ ಇದು ಕಾಣದು. ಬಲವಂತವಾಗಿ ಯಾರಲ್ಲೂ  ದೇಶಭಕ್ತಿ ಮೂಡಿಸಲು ಸಾಧ್ಯವಿಲ್ಲ. ಅದು ನಮ್ಮ ಅಂತರಗದಲ್ಲಿ ಬರಬೇಕು.ಇದಕ್ಕೆ ಸಮುದಾಯ, ಮನೆ ,ಪೋಷಕರ ಪಾತ್ರ ಮಹತ್ತರವಾದದ್ದು.

ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳಸಲು ಪೋಷಕರು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬಹುದು.ರಾಷ್ಟ್ರೀಯ ಹಬ್ಬಗಳಂದು ಮಕ್ಕಳ ಜೊತೆಗೆ ಪಾಲ್ಗೊಳ್ಳುವುದು. ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ದಿನಾಚರಣೆ ಎಂದರೆ ಶಾಲಾ ಮಕ್ಕಳು ಮತ್ತು ಶಿಕ್ಷಕರಿಗೆ ಮಾತ್ರ ಎಂಬ ಅಲಿಖಿತ ನಿಯಮ ಪಾಲಿಸುವರು. ಆ  ದಿನ ಒಂದು ದಿನ ರಜೆ ಸಿಕ್ಕಿತು ಎಂದು ಬಹುತೇಕ ಪೋಷಕರು ರಜೆಯ ಮಜಾ ಅನುಭವಿಸಲು ಯಾವುದೋ  ಪ್ರವಾಸ ಅಥವಾ ರೆಸಾರ್ಟ್ಸ್ ಗೆ ತೆರಳುವುದು ಸಾಮಾನ್ಯವಾಗಿದೆ.  ಅದರ ಬದಲಿಗೆ ಎಲ್ಲಾ ಪೋಷಕರು ಅಂದು ತಮ್ಮ ಮಕ್ಕಳ ಜೊತೆಯಲ್ಲಿ ಕನಿಷ್ಠ ಒಂದು ರಾಷ್ಟ್ರೀಯ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಆ   ಮೂಲಕ ಮಕ್ಕಳಿಗೆ ಅಪರೋಕ್ಷವಾಗಿ  ದೇಶಭಕ್ತಿಯ ಪಾಠ ಹೇಳಿದಂತಾಗುತ್ತದೆ.ಇದು ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಯಲು ಪೂರಕವಾಗುತ್ತದೆ.

ರಾಷ್ಟಗೀತೆ ಹಾಡುವಾಗ ಎದ್ದು ನಿಂತ ಗೌರವ ಸಲ್ಲಿಸುವುದು. ಸಾದ್ಯವಾದರೆ ಮಕ್ಕಳ ಜೊತೆ ಪೋಷಕರು ರಾಷ್ಟ್ರಗೀತೆ ಹಾಡಬೇಕು .ಕಡೆಯಲ್ಲಿ ಒಮ್ಮೆ ಭಾರತ ಮಾತೆಗೆ ಜೈಕಾರ ಹಾಕಬೇಕು ಈ ರೀತಿ ಯಲ್ಲಿ ನಾವು ಮಾಡಿದರೆ ಮಕ್ಕಳು ನಮ್ಮ ಅನುಕರಿಸುವರು ಈ ನಿಟ್ಟಿನಲ್ಲಿ ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಮತ್ತು ಅದಕ್ಕೆ ಗೌರವ ಸೂಚಿಸುವ ಕಾರ್ಯಕ್ರಮ ಯಶಸ್ವಿಯಾದರೂ ಕೆಲ ಕಿಡಿಗೇಡಿಗಳ ವಿತಂಡವಾದದಿಂದ ಅರ್ಧಕ್ಕೆ ನಿಂತದ್ದು ಬೇಸರದ ಸಂಗತಿ.

ನಮ್ಮ ದೇಶದ ಸಾಂವಿಧಾನಿಕ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ಬ್ರಾತೃತ್ವ, ಸಾಮಾಜಿಕ ನ್ಯಾಯ, ಮುಂತಾದ ಮೌಲ್ಯಗಳನ್ನು ಮಕ್ಕಳಿಗೆ ವಿವರಿಸಿ ನಮ್ಮ ದೇಶದ ಮಹತ್ವವನ್ನು ತಿಳಿಸಿ ನಮ್ಮ ದೇಶದ ಬಗ್ಗೆ ಹೆಮ್ಮೆ ಮೂಡಿಸಿ ರಾಷ್ಟ್ರೀಯತೆಯನ್ನು ಬೆಳೆಸಬಹುದು.

ನಮ್ಮ ಐತಿಹಾಸಿಕ, ಸಾಂಸ್ಕೃತಿಕ ,ಪ್ರಾಕೃತಿಕ  ಪರಂಪರೆಯನ್ನು ಮಕ್ಕಳಿಗೆ ವಿವರಿಸಿ ಪ್ರಪಂಚದ ಇತರೆ ದೇಶಗಳಲ್ಲಿ  ನಮ್ಮ ದೇಶದ ಬಗ್ಗೆ ಇರುವ ಸಕಾರಾತ್ಮಕ ಮತ್ತು ಗೌರವದ ಭಾವನೆಗಳನ್ನು ಉಲ್ಲೇಖಿಸಿ ನಮ್ಮ ಮಕ್ಕಳಲ್ಲಿ ರಾಷ್ಟ್ರೀಯ ಮನೋಭಾವ ಬೆಳೆಸಬೇಕು.

ಸುತ್ತಲೂ ಶತೃಗಳಿದ್ದರೂ ಮನೆಗೊಬ್ಬರು ಸೈನಿಕರಾಗಿ ದುಡಿದು ತಮ್ಮ ದೇಶದ ಬಗ್ಗೆ ಕೆಟ್ಟದಾಗಿ ಮಾತಾಡಿದರೂ ಅವರಿಗೆ ಪಾಠ ಕಲಿಸುವ ಇಸ್ರೇಲ್ ನ ಪ್ರಜೆಗಳಂತಹ  ದೇಶಭಕ್ತಿ ಮತ್ತು ರಾಷ್ಟ್ರೀಯತೆ ನಮ್ಮದಾಗಬೇಕು. ಯಾವುದೇ ಪಕ್ಷ ,ಸಿದ್ದಾಂತ, ಜಾತಿ, ಮತ, ಪಂಥಗಳು ನಮ್ಮ ರಾಷ್ಟ್ರೀಯತೆ ಮತ್ತು ದೇಶಾಭಿಮಾನಕ್ಕೆ ಅಡ್ಡಿಯಾಗಲೇಬಾರದು. ಇಲ್ಲವಾದರೆ ಮತ್ತೊಮ್ಮೆ ನಾವು  ದಾಸ್ಯದ ಸಂಕೋಲೆಗೆ ಸಿಲುಕಿ ನಮ್ಮ ರಾಷ್ಟ್ರೀಯತೆ ಮತ್ತು ಅಸ್ತಿತ್ವಕ್ಕೆ ಪರದಾಡಬೇಕಾದೀತು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

13 ಅಕ್ಟೋಬರ್ 2021

ನೀ ಬಂದು ಮುತ್ತನಿಡು. ಕವನ


 

ನೀ ಬಂದು ಮುತ್ತನಿಡು.

ಬೇಸರಿನ ಸಂಜೆಯಿದು
ಬೇಕೆನೆಗೆ ನಿನ್ನ ಜೊತೆ
ನೇಸರನು ನಡೆದನು
ಕೇಳೀಗ ನನ್ನ ಕಥೆ .

ತಂಗಾಳಿಯಿದ್ದರೂ ಕೂಡಾ
ಮೈಯಲ್ಲ ಏತಕೊ ಬಿಸಿ
ನೀ ಬಂದು ಮುತ್ತನಿಡು
ಖಾಯಿಲೆಯಾಗುವುದು ವಾಸಿ .

ದಿನಕರನು ತೆರೆಮರೆಗೆ ಸರಿದ
ಕತ್ತಲಾಗುತಿದೆ ಮನಕೆ
ಉಷೆಯಂತೆ ಬಂದು ಬಿಡು
ಬೆಳಕು ತೋರಲು  ಪ್ರೇಮಕೆ .

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


ದುರ್ಗಾದೇವಿಗೆ ನಮನ.ದುರ್ಗಾಷ್ಠಮಿಯ ಶುಭಾಷಯಗಳು.DURGASHTAMI


 *ದುರ್ಗಾ ದೇವಿಗೆ ನಮನ*


ದುರ್ಗಾಷ್ಠಾಮಿಯ ಶುಭಾಶಯಗಳೊಂದಿಗೆ 



ದುರ್ಗಾ ದೇವಿಯೆ ನಿನಗೆ

ನನ್ನ ನಮನ

ದಯಮಾಡಿ ನೀಡು

ನಮ್ಮೆಡೆಗೆ ಗಮನ.


ಮನದಲೇನೋ ಬೇಗೆ

ನಿಂತಲ್ಲೆ ತಲ್ಲಣ

ದುಷ್ಷರ ಹಿಂಸೆ, ದುರ್ಗುಣಕೆ

ತಳಮಳಿಸಿದೆ ಜನಗಣ.


ರಕ್ಕಸರ ತರಿದವಳೆ 

ಶಿಷ್ಟರ ರಕ್ಷಿಪಳೆ

ತರಿದು ಬಿಡು ಖೂಳರ

ಸ್ವಚ್ಚವಾಗಲಿ ಇಳೆ .


ಅಜ್ಞಾನಿಗಳಲಿ ಜ್ಞಾನ 

ಬೀಜವ ಬಿತ್ತಿ ಬಿಡು

ಜಗವಾಗಲಿ ಸುಖ

ಶಾಂತಿಯ ಬೀಡು.


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ 

ತುಮಕೂರು

9900925529