This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
12 ಸೆಪ್ಟೆಂಬರ್ 2021
ಎದೆಗಾರಿಕೆ
ಎದೆಗಾರಿಕೆ
ಕಷ್ಟಗಳನ್ನು ಧೈರ್ಯವಾಗಿ
ಎದುರಿಸುವ ಗಂಡಿನ ಗುಣವೇ
ಎದೆಗಾರಿಕೆ|
ಬರೀ ಬೊಗಳೆ ಬಿಡುತ್ತಾ
ಪೋಸ್ ಕೊಟ್ಟು ಎದೆ
ಮೇಲೆ ಕೂದಲು ಮಾತ್ರ
ಬೆಳಿಸಿಕೊಂಡರೆ ಅದು
ಎದೆಗರಿಕೆ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
11 ಸೆಪ್ಟೆಂಬರ್ 2021
ನಾನು ದುರ್ಗದ ಅರಸನಾದರೆ ...ಲೇಖನ
ನಾನು ದುರ್ಗದ ರಾಜನಾದರೆ. ಲೇಖನ
ಮಹಾರಾಜನಾಗಿ ಆಳಲು ಅವಕಾಶ ಲಭಿಸಿದರೆ
ಗಂಡು ಮೆಟ್ಟಿದ ನಾಡು ,ಏಳು ಸುತ್ತಿನ ಕೋಟೆಯ ನಾಡು ದುರ್ಗ ವನ್ನೇ ಆಳುವೆ .
ಅವಕಾಶ ಲಭಿಸಿದರೆ
ರಾಜನಾಗಲು
ಆರಿಸಿಕೊಳ್ಳುವೆ
ಚಿತ್ರದುರ್ಗ .||
ದಕ್ಷತೆಯಿಂದ
ಆಡಳಿತ ಮಾಡುತ್ತಾ
ಮಾಡುವೆ ಭುವಿಯ
ಮೇಲಿನ ಸ್ವರ್ಗ||
ನಾನು ಹೇಗೆ ಆಳ್ವಿಕೆ ಮಾಡುವೆ?
ಕುಮಾರವ್ಯಾಸ ಭಾರತದ ಆದಿಪರ್ವದ ನಾಲ್ಕನೆಯ ಸಂಧಿಯ ನಾಲ್ಕನೇ ಪದ್ಯ ಹೀಗಿದೆ.
"ಸೋಮಕುಲದವರಲಿ ಭವತ್ ಪ್ರಪಿತಾಮಹನವೊಲ್ ಧರ್ಮದಲಿ ಸಂಗ್ರಾಮದಲಿ ಸತ್ಯದಲಿ ಸಾಹಿತ್ಯದಲಿ ವಿನಯದಲಿಸಾಮದಲಿ ಶೌರ್ಯದಲಿ ಸುಜನಾಪ್ರೇಮದಲಿ ನೀತಿಯಲಿ ದೃಢದಲಿಭೂಮಿಯಲಿ ನಾ ಕಾಣೆನವನೀಪಾಲ ಕೇಳೆಂದ "
ವೈಶಂಪಾಯನರು ಪಾಂಡುವಿನ ಗುಣಗಳ ವರ್ಣನೆ ಜನಮೇಜಯ ರಾಜನಿಗೆ ಈ ರೀತಿ ಮಾಡುತ್ತ. ಪ್ರಪಿತಾಮಹ ರಾದ ಪಾಂಡು ಮಹಾರಾಜರು ಧರ್ಮದಲಿ, ಯುದ್ಧದಲಿ, ಸತ್ಯದಲಿ, ಸಾಹಿತ್ಯದಲಿ, ವಿನಯದಲಿ, ಸಾಮದಲಿ, ಶೌರ್ಯದಲಿ, ಸತ್ಸಂಗದಲಿ, ನೀತಿಯಲಿ, ದೃಢತೆಯಲಿ ಸೋಮಕುಲದಲ್ಲಿ ಮೆರೆದರು. ಇವರ ಸರಿಸಾಟಿಯಾದ ರಾಜರು ಇಡೀ ಭೂಮಿಯಲ್ಲಿ ನಾನು ಕಾಣೆನು ಎಂದರು .
ಎಂಬ ಆಶಯದಂತೆ ನನ್ನ ಆಳ್ವಿಕೆ ಇರಲಿದೆ.
ಅದರಂತೆ ನಾನೂ ಸಹ
ನಿಯಮ, ಆಚಾರಗಳಂತೆ ಅಧಿಕಾರ ಮಾಡುವೆನು. ಅವಶ್ಯಕತೆ ಬಿದ್ದರೆ ಪ್ರಜೆಗಳು ಮತ್ತು ನಾಡಿನ ರಕ್ಷಣೆ ವಿಷಯ ಬಂದರೆ ಯುದ್ದಮಾಡಲೂ ಹಿಂಜರಿಯಲಾರೆ. ರಾಜನು ಸತ್ಯಸಂಧನಾದರೆ ಪ್ರಜೆಗಳು ಸಹ ಸತ್ಯದ ಹಾದಿ ತುಳಿವರು ಆದ್ದರಿಂದ ಮೊದಲು ನಾನು ಸತ್ಯವಂತನಾಗಿ ಬಾಳಿ ತೋರಿಸುವೆ. ನಮ್ಮ ಸಂಸ್ಕೃತಿಯ ಪ್ರತೀಕವಾದ ಕಾವ್ಯ, ನಾಟಕ ಮುಂತಾದ ಸೃಜನಾತ್ಮಕ ಬರವಣಿಗೆಯನ್ನು ಸ್ವತಃ ನಾನು ಕೈಗೊಳ್ಳುವ ಮೂಲಕ ರಾಜ್ಯದ ಲಲಿತ ಕಲೆಗಳ ಬೆಳವಣಿಗೆಗೆ ಕ್ರಮ ಕೈಗೊಳ್ಳುವೆ.ರಾಜ್ಯದ ಪ್ರಜೆಗಳಲ್ಲಿ ಒಳ್ಳೆತನ, ಸೌಜನ್ಯ, ಸಭ್ಯತೆ ಗುಣಗಳನ್ನು ಪ್ರೋತ್ಸಾಹ ಮಾಡುವೆನು. ಅಶೋಕ ಚಕ್ರವರ್ತಿ ಹೇಳಿದಂತೆ ಪ್ರಜೆಗಳ ಮೇಲೆ ಸದಾ ವಾತ್ಸಲ್ಯ ತೋರುತಲಿ ಮಾರ್ಗದರ್ಶನ ಮಾಡುತ್ತಾ ಹಗಲಿರುಳು ಅವರ ಕಲ್ಯಾಣ ಕ್ಕೆ ಶ್ರಮಿಸುವೆ.
ನೀರಾವರಿಯ ಭಾಗವಾಗಿ ಎಲ್ಲಾ ಆರು ತಾಲ್ಲೂಕುಗಳಾದ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ,ಹಿರಿಯೂರು, ಮೊಳಕಾಲ್ಮೂರು ಚಳ್ಳಕೆರೆ ಇವುಗಳಲ್ಲಿ ಕೆರೆ ಕಟ್ಟೆಗಳ ಮೂಲಕ ಶಾಶ್ವತವಾದ ನೀರಾವರಿ ಯೋಜನೆಗಳನ್ನು ಜಾರಿಗೆ ತರುವೆನು , ಗುಡಿಕೈಗಾರಿಗಳು ಮತ್ತು ಬೃಹತ್ ಕೈಗಾರಿಕೆಗಳ ನಡುವೆ ಸಮತೋಲನ ತರುವೆನು , ಗ್ರಾಮರಾಜ್ಯದ ಪರಿಕಲ್ಪನೆಯನ್ನು ಬಲಪಡಿಸುವೆನು . ವ್ಯಾಪಾರ ವಾಣಿಜ್ಯ ಬಲಪಡಿಸುವೆನು. ಸರ್ವ ಜನಾಂಗದ ಶಾಂತಿಯುತ ಸಹಬಾಳ್ವೆ ಗೆ ಮುನ್ನುಡಿ ಬರೆವೆ.
ಶರಣರ ನುಡಿಯಂತೆ ಕಾಯಕ ತತ್ವ,ಸರ್ವೇ ಜನಾಃ ಸುಖಿನೋಭವಂತು , ನನ್ನ ನಾಡಿನ ಧ್ಯೇಯ ವಾಕ್ಯ ಆಗಲಿದೆ.
"ಆರಂಕುಷವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ" ಎಂಬ ಕವಿವಾಣಿಯಂತೆ
ನನ್ನ ರಾಜ್ಯದ ಎಲ್ಲಾ ಸಿಹಿಜೀವಿಗಳು ದುರ್ಗದಲ್ಲೇ ಹುಟ್ಟಬೇಕೆಂದು ಬಯಸುವ ರೀತಿಯಲ್ಲಿ ಆಡಳಿತ ಮಾಡಿ ತೋರಿಸುವೆ.
ಜೈ ಚಾಮುಂಡೇಶ್ವರಿ
ಜೈ ಏಕನಾಥೇಶ್ವರಿ
ಜೈ ಉಚ್ಚಂಗಿ ತಾಯಿ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ




