19 ಜೂನ್ 2021

ಕಾಮನಬಿಲ್ಲಾಗೋಣ .ಲೇಖನ


 


*ಕಾಮನಬಿಲ್ಲಾಗೋಣ*


ಕೆಲವು ವ್ಯಕ್ತಿಗಳನ್ನು ನೋಡಿದಾಗ, ಅವರ ವಿಚಿತ್ರ ನಡವಳಿಕೆಗಳು, ಮಾತುಗಳು ಹಾವ ಭಾವಗಳನ್ನು ನೋಡಿದಾಗ ದೇವರು ಹೋಮೋಸೇಪಿಯನ್ಸ್ ನಲ್ಲೇ ಎಂತೆಂಥ ಸ್ಪೀಸೀಸ್ ಸೃಷ್ಟಿ ಮಾಡಿರುವನಪ್ಪ ಎನಿಸುವುದು,


ರೇವತಿಗೆ ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಾಗದಿರುವುದು ತಿಳಿದಿದ್ದರೂ ಸುಚಿತ್ರ  ಅವಳ ಮುಂದೆ ತನ್ನ ಮಕ್ಕಳ ಬಗ್ಗೆ ಕೊಚ್ಚಿ ಕೊಳ್ಳುತ್ತಿದ್ದಳು.


ಸತೀಶನಿಗೆ ಜೀವನ ನಡೆಸುವುದೇ ಕಷ್ಟದ ಪರಿಸ್ಥಿತಿ ಇರುವುದನ್ನು ತಿಳಿದೂ ಸಹ ಅವನ ಗೆಳೆಯ ರವಿ "ನೀನೇಕೆ ಈ ವರ್ಷ ಮನೆ ಕಟ್ಟಬಾರದು? ನೋಡು ನಾನೆಂಥಹ ಬಂಗಲೆಯಂತಹ ಮನೆ ಕಟ್ಟಿಸಿರುವೆ" ಎಂದು ಹಂಗಿಸುತ್ತಿದ್ದ. 


ಇವು ಕೇವಲ ಸ್ಯಾಂಪಲ್ ,ದಿನನಿತ್ಯ ಇಂತವರು ನಮ್ಮ ಮಧ್ಯ ಬಹಳ ಜನ ಸಿಗುತ್ತಾರೆ,

ನಾವು ಸಮಾಜ ಜೀವಿಯಾದರೂ ಕೆಲವೊಮ್ಮೆ ನಮ್ಮ ನಡವಳಿಕೆಗಳು ಇತರರಿಗೆ ಕಿರಿಕಿರಿ ಉಂಟುಮಾಡುವವು 

ಇಂತವರಿಗೆ ಸೋಶಿಯಲ್ ಮ್ಯಾನರ್ಸ್ ಇರುವುದಿಲ್ಲ ಎಂದು ವಿಶೇಷವಾಗಿ ಹೇಳಬೇಕಿಲ್ಲ.


ಇಂತಹ ವ್ಯಕ್ತಿಗಳ ನಡವಳಿಕೆಗಳನ್ನು ನೋಡಿದಾಗ ಇತ್ತೀಚಿಗೆ ನನ್ನ ಗೆಳೆಯ ಕಳಿಸಿದ  ವಾಟ್ಸಪ್ ಸಂದೇಶ ಓದಿ ಅದರ ಆಧಾರದಲ್ಲಿ ನಮ್ಮ ಸಾಮಾಜಿಕ ನಡವಳಿಕೆಗಳನ್ನು ಈ ಕೆಳಗಿನಂತೆ ಅಳವಡಿಸಿಕೊಳ್ಳಬಹುದು ಅನಿಸಿತು.


 ಕೆಲವೊಮ್ಮೆ ನಾವು ಯಾರಿಗಾದರೂ ಎರಡು ಬಾರಿಗಿಂತಲೂ ಹೆಚ್ಚು  ಕರೆ ಮಾಡಿದಾಗ  ಅವರು ನಮ್ಮ ಕರೆಯನ್ನು ಸ್ವೀಕರಿಸದಿದ್ದರೆ ಅವರಿಗೆ  ಏನಾದರೂ ಮುಖ್ಯವಾದ ಕೆಲಸವಿದೆ ಎಂದು ತಿಳಿದು ನಂತರ ಪ್ರಯತ್ನ ಮಾಡೋಣ.


ಹಲವಾರು ಬಾರಿ ನಾವು ನಮ್ಮ ಸ್ನೇಹಿತರಿಂದ ತುರ್ತು ಬಳಕೆ ಗಾಗಿ ಹಣವನ್ನೋ, ಕೊಡೆಯನ್ನೋ ಲಂಚ್ ಬಾಕ್ಸನ್ನೋ ಪಡೆದಿರುತ್ತೇವೆ ಆದರೆ ಅದನ್ನು ಬಹಳ ಸಲ ಸಮಯಕ್ಕೆ ಸರಿಯಾಗಿ ಹಿಂತಿರುಗಿಸಿರುವುದಿಲ್ಲ, 


ನಾನು ನನ್ನ

ಗೆಳೆಯನಿಂದ

ಪಡೆದ ಕೊಡೆ|

ಅವನಿಗೆ ಎಂದಿಗೂ

ಹಿಂತಿರುಗಿ ಕೊಡೆ||


ಎಂಬಂತಾಗುವುದು ಬೇಡ ಪಡೆದ ವಸ್ತುಗಳನ್ನು ಹಿಂತಿರುಗಿಸುವುದು ನಮ್ಮ ವ್ಯಕ್ತಿತ್ವದ ಪ್ರತಿಬಿಂಬವಾಗುವುದು.


 ಯಾರಾದರೂ ನಮ್ಮ ಪರಿಚಿತರು ಸ್ನೇಹಿತರು ಪಾರ್ಟಿ ಕೊಡುವೆವು ಎಂದರೆ ಬೇಕಂತಲೇ ದುಬಾರಿ ತಿನಿಸುಗಳನ್ನು ಕೇಳದೇ ಇರೋಣ ಏಕೆಂದರೆ ಮಾನವನ ಗುಣವೇ ಹಾಗೆ ಪುಕ್ಕಟೆ ಸಿಗುವುದೆಂದರೆ ನನಗೂ ಇರಲಿ ನನ್ನ ಮೊಮ್ಮಕ್ಕಳಿಗೂ ಇರಲಿ ಎಂಬ ಜಾಯಮಾನದವರು ನಾವು, ಬೇರೆಯವರ ಅರ್ಥಿಕ ಪರಿಸ್ಥಿತಿಯನ್ನು ಸಹ ಗಮನದಲ್ಲಿಟ್ಟುಕೊಂಡು ನಮ್ಮ ಬೇಡಿಕೆ ಸಲ್ಲಿಸೋಣ.


ನಮ್ಮ ಕೆಲವು ಸ್ನೇಹಿತರು ಹೊಟೆಲ್ ನಲ್ಲಿ ಬಿಲ್ ಕೊಡುವಾಗ, ಟ್ಯಾಕ್ಸಿಗೆ  ಹಣ ನೀಡುವಾಗ ಮೊದಲೇ ಹೊರಬಂದಿರುತ್ತಾರೆ,ಇಲ್ಲವೇ ಪರ್ಸ್ ಮರೆತುಬಂದಿರುತ್ತಾರೆ! ಹೀಗಾಗುವುದು ಬೇಡ ,ಒಮ್ಮೆ ಅವರು ಹಣ ನೀಡಿದರೆ ಮತ್ತೊಮ್ಮೆ ನಾವು ಕೊಡೋಣ ,ಯಾರಿಗೂ ಹೊರೆಯಾಗುವುದು ಬೇಡ.


ನಮ್ಮ ಕೆಲವು ಸ್ನೇಹಿತರು ತಮ್ಮದೇ ಸರಿ ಎಂದು ವಾದ ಮಾಡುವುದು ಸಾಮಾನ್ಯ 

 ಅದರ ಬದಲಾಗಿ ನಾವು ಇತರರ  ಅಭಿಪ್ರಾಯಗಳನ್ನು ಗೌರವಿಸಬೇಕು . ನಮಗೆ 6  ಕಾಣುವುದು ಎದುರಾಗಿರುವ ಯಾರಿಗಾದರೂ 9 ಕಾಣಿಸುತ್ತದೆ. ಅದಕ್ಕಾಗಿ ಮುಕ್ತ ಮನಸ್ಸು ಹೊಂದೋಣ ಇತರರ ಅಭಿಪ್ರಾಯಗಳನ್ನು ಸ್ವೀಕರಿಸೋಣ, ಆದರೆ ವಿತಂಡವಾದಗಳನ್ನಲ್ಲ.


ಕೆಲವೊಮ್ಮೆ ನಾವು ವಟ ವಟ ಮಾತನಾಡುತ್ತಾ ಇರುವೆವು ನಮ್ಮ ಜೊತೆಯಲ್ಲಿರುವವರು ಮಾತನಾಡಲು ಪ್ರಯತ್ನ ಪಟ್ಟರೂ ಅವರ ಬಾಯಿ ಮುಚ್ಚಿಸಿ ಮಾತನಾಡುತ್ತಲೆ ಇರುವೆವು, ಇದು ನಮ್ಮ ವ್ಯಕ್ತಿತ್ವಕ್ಕೆ ಶೋಭೆ ತರದು, ದೇವರು ನಮಗೆ ಒಂದು ಬಾಯಿ ,ಎರಡು ಕಿವಿಕೊಟ್ಟಿರುವನು,ಹೆಚ್ಚು ಕೇಳಿಸಿಕೊಳ್ಳೋಣ ಕಡಿಮೆ ಮಾತನಾಡೋಣ.


ದೇವರೂ ಸಹ ಹೊಗಳಿಕೆಗೆ ಮಾರು ಹೋಗುವನು ಅದಕ್ಕಾಗಿ ಅಷ್ಟೋತ್ತರ,ಸಹಸ್ರ ನಾಮಗಳ ಉದಯವಾಗಿವೆ ,ಇನ್ನೂ ಮಾನವರಾದ ನಾವೂ ಹೊಗಳಿಕೆ ಬೇಡವೆನ್ನಲಾದೀತೆ ?


ತನ್ನ ಸಾಧನೆ ಕಂಡು

ಗೆಳೆಯರಿಂದ ಅವನು

ನಿರೀಕ್ಷಿಸಿದ್ದ ಹೊಗಳಿಕೆ|

ಪಾಪ ಅವನ 

ಸ್ನೇಹಿತರಿಗೆ ಹೊಗಳಲು

ಹೊರಟರೆ ಬರುವುದು

ಆಕಳಿಕೆ||


ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಕಂಜ್ಯೂಸ್ ಆಗದೆ ಎಲ್ಲರ ಮುಂದೆ ಹೊಗಳೋಣ, ತೆಗಳುವುದಿದ್ದರೆ ಒಬ್ಬರೆ ಇದ್ದಾಗ ತೆಗಳೋಣ.


ನಮ್ಮ ಜೀವನದಲ್ಲಿ ಪ್ರತಿ ಕ್ಷಣ ನಮಗೆ ಯಾರಾದರೂ ಯಾವುದಾದರೂ ಸಹಾಯ ‌ಮಾಡುತ್ತಲೇ ಇರುವರು ಅವರಿಗೆ ಕೃತಜ್ಞತೆ ಸೂಚಿಸುವುದು ನಮ್ಮ ಕರ್ತವ್ಯ, ಜಸ್ಟ್ ಅವರಿಗೊಂದು ತ್ಯಾಂಕ್ಸ್ ಹೇಳಿ ಅವರ ಸಂತೋಷವನ್ನು ಗಮನಿಸಿ, ನೀವೂ ತ್ಯಾಂಕ್ಸ್ ಪಡೆದುಕೊಂಡಾಗ ನಿಮಗಾದ ಆನಂದ ಅನುಭವಿಸಿ, ಇದಕ್ಕೇನು ಖರ್ಚಾಗುವುದಿಲ್ಲ ಬದಲಾಗಿ ಆನಂದದ ಕ್ಷಣಗಳು ಲಬ್ಯವಾಗುವವು.


ನಮ್ಮ ಪರಿಚಯದವರು ಸಹೋದ್ಯೋಗಿಗಳು ಆಸ್ಪತ್ರೆಗೆ ಹೊರಟಾಗ ನಾವು ಯಾಕೆ? ಎಲ್ಲಿ? ಹೇಗೆ ? ಎಂದು ಸಿ ಬಿ ಐ ಅಧಿಕಾರಿಗಳ ರೀತಿಯಲ್ಲಿ ತನಿಖೆ ಮಾಡುವುದು ಸಾಮಾನ್ಯ, ಈ ರೀತಿಯ ಪ್ರಶ್ನೆಗಳನ್ನು ಕೆಲವೊಮ್ಮೆ ಕೆಲವರು ಇಷ್ಟ ಪಡುವುದಿಲ್ಲ ಬೇರೆಯರ ಭಾವನೆಗಳನ್ನು ಗೌರವಿಸೋಣ, ಎಲ್ಲಾ ಸರಿಯಾದಾಗ ಕೆಲವೊಮ್ಮೆ ಅವರೆ ನಮಗೆ ಮುಂದೆ ವಿಷಯ ತಿಳಿಸುವರು.


ಐದಾರು ಜನ ಒಟ್ಟಿಗೆ ಸೇರಿದಾಗ ಸುಮ್ಮನೆ ಹೊಟ್ಟೆ ನೋವು ಎನ್ನಿ ,ಕನಿಷ್ಠ ನಾಲ್ಕು, ಮದ್ದು, ಐದು ಸಲಹೆ , ಮೂರು ಊಹೆ ಖಂಡಿತವಾಗಿಯೂ ಸಿಗುತ್ತದೆ ,ನಮ್ಮೂರಲ್ಲಿ ಯಾಕೋ ನೀರು ಸರಿಯಾಗಿ ಬರುತ್ತಿಲ್ಲ ಎಂದಿರೋ ಪಿ ಡಿ ಓ ಇಂದ ಹಿಡಿದು ಸಿ ಇ ಓ ಸೇರಿಸಿ ಕಂಪ್ಲೇಂಟ್ ಕೊಡಿ ಎಂಬ ಸಲಹೆ ವೀರರು ಅಪಾರ, ನಮ್ಮನ್ನು ಕೇಳದ ಹೊರತು ಮತ್ತೊಬ್ಬರ ವ್ಯವಹಾರಗಳಲ್ಲಿ ಮೂಗು ತೂರಿಸದೇ ಇರೋಣ ಅನವಶ್ಯಕ ಸಲಹೆಗಳನ್ನು ನೀಡದಿರೊಇಣ.ಇದು ನಮ್ಮ ವ್ಯಕ್ತಿತ್ವ ಸೂಚಕವಾಗುತ್ತದೆ.


ನಮ್ಮ ಕಣ್ಣುಗಳು ಆರೋಗ್ಯವಾಗಿದ್ದು ಬಿಸಿಲಿನ ತಾಪ ತಡೆಯಲು ಸನ್ಗ್ಲಾಸ್ ಹಾಕಿದ್ದರೆ ರಸ್ತೆಯಲ್ಲಿ ಯಾರಾದರೂ ಪರಿಚಿತರು ಭೇಟಿಯಾದರೆ 

ಅವರೊಂದಿಗೆ ಮಾತನಾಡುತ್ತಿದ್ದರೆ ನಮ್ಮ ಸನ್ಗ್ಲಾಸ್ ತೆಗೆದು ಮಾತನಾಡೋಣ.  ಇದು ಗೌರವದ ಸಂಕೇತ. ಜೊತೆಗೆ ಕಣ್ಣಲ್ಲಿ ಕಣ್ಣಿಟ್ಟು ಮಾತಾನಾಡುವವುದು  ಉತ್ತಮ ಸಂಪರ್ಕಕ್ಕೆ ಪೂರಕ.


ನಮ್ಮಲ್ಲಿ ಕೆಲವರಿಗೆ ನಮ್ಮ ಸಿರಿವಂತಿಕೆಯನ್ನು ಪ್ರದರ್ಶನ ಮಾಡುವ ಖಯಾಲಿ,

 ಬಡವರ ಮಧ್ಯೆ ನಮ್ಮ ಸಂಪತ್ತಿನ ಬಗ್ಗೆ ಎಂದಿಗೂ ಮಾತನಾಡದಿರೋಣ.  ಅದೇ ರೀತಿ, ಮದುವೆಯಾಗಿ ಮಕ್ಕಳಾಗದವರ ಮುಂದೆ   ಮಕ್ಕಳ ಸಾಧನೆಗಳ ಬಗ್ಗೆ ಪದೇ ಪದೇ  ಮಾತನಾಡದಿರೋಣ.


 ಈ ಮೇಲಿನ ಕೆಲ ಸಾಮಾಜಿಕ ನಡವಳಿಕೆಗಳು ಸಣ್ಣ ಸಣ್ಣವು ಎಂದುಕೊಂಡರೂ ಬದಲಾವಣೆ ಚಿಕ್ಕ ಅಂಶಗಳಿಂದಲೇ ಅರಂಭವಾಗುವುದು ಈ ಅಂಶಗಳನ್ನು ಅಳವಡಿಸಿಕೊಂಡು ನೋಡೋಣ , ಬದಲಾವಣೆಗೆ ಪ್ರಯತ್ನ ಮಾಡೋಣ.ನಮ್ಮ ಸಮಾಜದಲ್ಲಿ ನಮ್ಮಿಂದ ಬೇರೆಯವರಿಗೆ ತೊಂದರೆಯಾಗಿ ಮನಸ್ಸು ನೋವು ಮಾಡಿಕೊಂಡಿದ್ದರೆ ನಾವೇಗೆ ಸಂತಸವಾಗಿರಲು ಸಾದ್ಯ? ಕೇವಲ ಒಂದು ಬಣ್ಣ ಸೇರಿ ಕಾಮನಬಿಲ್ಲು ಆಗಲು ಸಾಧ್ಯವೇ? ಪ್ರತಿಯೊಬ್ಬರೂ ಸೇರಿ ಅರ್ಥಪೂರ್ಣವಾದ ಕಾಮನ ಬಿಲ್ಲಾಗೋಣ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*೧೯/೬/೨೧


 

ಸಮ ಸಮಾಜಕ್ಕೆ ಪಣ ತೊಡೋಣ .ಲೇಖನ


 ಸಮ ಸಮಾಜಕ್ಕೆ ಪಣತೊಡೋಣ ಲೇಖನ

ಶತಮಾನಗಳಿಂದ ವಿವಿಧ ರೀತಿಯಲ್ಲಿ ತುಳಿತಕ್ಕೊಳಗಾದ ಜನರ ಮೇಲೆ ಶೋಷಣೆಗಳು ನಡೆದುಕೊಂಡೇ ಬಂದಿವೆ ಅದು ಇಂದಿಗೂ ಮುಂದುವರೆದಿರುವುದು ಶೋಚನೀಯ ಮತ್ತು ಆತಂಕಕಾರಿಯಾಗಿದೆ.


ಬುದ್ದ, ಬಸವಣ್ಣ, ವಿವೇಕಾನಂದರಾದಿಯಾಗಿ ಗಾಂದೀಜಿ, ಅಂಬೇಡ್ಕರ್ ರಂತಹ ಮಹಾನ್ ಚೇತನಗಳು ತುಳಿತಕ್ಕೊಳಗಾದವರ ಏಳಿಗೆಗೆ ಶ್ರಮಿಸಿದರು, ಇವರ ಶ್ರಮದ ಪರವಾಗಿ ಇಂದಿನ ದಿನಗಳಲ್ಲಿ ಸ್ವಲ್ಪ ಶೋಷಣೆಯ ಪ್ರಮಾಣದಲ್ಲಿ ಕಡಿಮೆಯಾದರೂ ಪೂರ್ಣವಾಗಿ ನಿಂತಿಲ್ಲ.


ಸಾಮಾಜಿಕ ,ಆರ್ಥಿಕ, ರಾಜಕೀಯ, ಶೈಕ್ಷಣಿಕ. ಔದ್ಯೋಗಿಕ ಹೀಗೆ ವಿವಿದ ರಂಗಗಳಲ್ಲಿ ಶೋಷಣೆ ಅವ್ಯಾಹತವಾಗಿ ಮುಂದುವರೆದಿದೆ.


ಇದಕ್ಕೆ ಹಲವಾರು ಕಾರಣಗಳನ್ನು ನೀಡಬಹುದು ಶಿಕ್ಷಣದ ಕೊರತೆ, ಮಾಹಿತಿ ಕೊರತೆ, ಅಜ್ಞಾನ, ಆರ್ಥಿಕ ಅವಲಂಬನೆ ಮೂಲಭೂತ ಸೌಲಭ್ಯಗಳ ಕೊರತೆ, ಮೂಢನಂಬಿಕೆಗಳು, ಉಳ್ಳವರ ದರ್ಪ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.


ಹಾಗಾದರೆ ಹೀಗೆ ತುಳಿತಕ್ಕೊಳಗಾದವರ ಶೋಷಣೆಗೆ ಕೊನೆ ಇಲ್ಲವೆ ?


ನಮ್ಮ ನಾಡಿನ ಚಿಂತಕರು, ಕವಿಗಳು, ಈ ಶೋಷಣೆಯ ವಿರುದ್ಧವಾಗಿ ದ್ಚನಿ ಎತ್ತಿದ್ದಾರೆ ಇದರಲ್ಲಿ ರಾಷ್ಟ್ರಕವಿ ಕುವೆಂಪು ,ಶಿವರಾಮ ಕಾರಂತರು ಹಾಗೂ ಇತರೆ ಕವಿಗಳು ತಮ್ಮ ಕೃತಿಗಳಲ್ಲಿ ತುಳಿತಕ್ಕೊಳಗಾದವರ ಬವಣೆಗಳನ್ನು ಚಿತ್ರಿಸಿ ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೇರಣೆ ನೀಡಿದರು.


ಇತ್ತೀಚಿನ ನಮ್ಮನಗಲಿದ  ದಿವಂಗತ ಕವಿಗಳಾದ ಸಿದ್ದಲಿಂಗಯ್ಯ ರವರು ಶೋಷಣೆ ವಿರುದ್ಧದ ಧ್ವನಿಯನ್ನು ಜೋರಾಗಿ ಮೊಳಗಿಸಿ ಉಳ್ಳವರು ಮಾಡುವ ಶೋಷಣೆ  ವಿರುದ್ಧವಾಗಿ " ಇಕ್ರಲಾ... ಒದಿರಲ...." ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವನೂರ ಮಹಾದೇವ ರವರು ಸಹ ಈ ನಿಟ್ಟಿನಲ್ಲಿ ಸಂಘಟನೆ, ಸಾಹಿತ್ಯದ ಮೂಲಕ ತುಳಿತಕ್ಕೊಳಗಾದವರ ಜಾಗೃತಿ ಮೂಡಿಸುತ್ತಿದ್ದಾರೆ.

ಹೌದು ನಾನು ತುಳಿತಕ್ಕೊಳಗಾದವರ ಪರ ಇರುವೆನುಅವರ ಶೋಷಣೆ ವಿರುದ್ಧ ಹಲವಾರು ಬಾರಿ ಧ್ವನಿ ಎತ್ತಿದ್ದೇನೆ.
ಶಿಕ್ಷಕನಾಗಿ ,ಸಾಹಿತಿಯಾಗಿ ನಾನು ನೇರವಾಗಿ ತರಗತಿಯಲ್ಲಿ   ನನ್ನ ವಿದ್ಯಾರ್ಥಿಗಳಿಗೆ ತುಳಿತಕ್ಕೊಳಗಾದವರ ಏಳ್ಗೆಗೆ ಪಣ ತೊಡಲು ಕರೆ ನೀಡುತ್ತಾ, ಪರೋಕ್ಷವಾಗಿ ಸಾಹಿತ್ಯದಲ್ಲೂ ಸಹ ವಿವಿದ ಕೃತಿಗಳಲ್ಲಿ ತುಳಿತಕ್ಕೊಳಗಾದವರ ಶೋಷಣೆಯ ವಿರುದ್ಧ ಧ್ವನಿ ಎತ್ತಿರುವೆ , ಹಾಗೂ ತುಳಿತಕ್ಕೊಳಗಾದವರಿಗೆ ಆರ್ಥಿಕ ಸಹಾಯವೂ ಸೇರಿದಂತೆ ವಿವಿಧ ರೀತಿಯಲ್ಲಿ ನೆರವಾಗಿರುವೆನು .

ಸಂವಿಧಾನ ಶಿಲ್ಪಿ ಡಾ. ಬಿ ಆರ್. ಅಂಬೇಡ್ಕರ್ ರವರು ಹೇಳಿದಂತೆ ತುಳಿತಕ್ಕೊಳಗಾದವರು ಮೇಲೆ ಬರಲು ಮೂರು ದಾರಿಗಳು  ಅವು " ಶಿಕ್ಷಣ, ಸಂಘಟನೆ , ಹೋರಾಟ" ಬನ್ನಿ ಆ ಮಹಾಚೇತನ ನೀಡಿರುವ ದಾರಿಯಲ್ಲಿ ಸಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ಪಣ ತೊಡೋಣ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

17 ಜೂನ್ 2021

ಅಸ್ತವ್ಯಸ್ತ.ಹನಿ


 *ಅಸ್ತವ್ಯಸ್ತ*


ಕೆಲ ಶಾಸಕರಿಗೆ

ನಾಯಕತ್ವ

ಬದಲಾಗಬೇಕಂತೆ

ಕೆಲವರಿಗೆ ಬೇಡವಂತೆ

ಮತ್ತೂ ಕೆಲವರು

ತಟಸ್ಥ|

ಇವರ ದೊಂಬರಾಟದಲ್ಲಿ

ಆಡಳಿತ ಆಗದಿರಲಿ

ಅಸ್ತವ್ಯಸ್ತ|


#ಸಿಹಿಜೀವಿ

ಸಿ ಜಿ ವೆಂಕಟೇಶ್ವರ

 ಸಿ ಜಿ ಹಳ್ಳಿ

 

 

ಮರಳು ಉಳಿಸು ಓ ಮರುಳೆ


 ಮರಳು ಮರಳೆಂದೇಕೆ ಮರುಗುವೆ ಓ ಮರುಳೆ ಲೇಖನ



ಅಕ್ರಮ ಮರಳು ಗಣಿಗಾರಿಕೆ ಇಂದು ಒಂದು ಮಾಫಿಯಾ ಅಗಿ ಪರಿವರ್ತನೆಯಾಗಿದೆ ,ಇಲ್ಲಿ ಎಲ್ಲಾ ಸುವ್ಯವಸ್ಥಿತ ಯಾರಿಗೆ ಎಷ್ಟು ಬೇಕೋ ಅಷ್ಟು ತಲುಪಿ ಸಾವಿರಾರು ಕೋಟಿ ರೂಪಾಯಿಗಳು ಕೈ ಬದಲಾಗುತ್ತವೆ.


ಇದಕ್ಕೆ ಹಲವಾರು ಕಾನೂನಿನ ಬಲವಿದ್ದರೂ  ಬೇಲಿಯೇ ಎದ್ದು ಹೊಲ ಮೇದರೆ ಕಾವಲುಗಾರನೇನು ಮಾಡಿಯಾನು,


ನಮ್ಮ ಅಂತರ್ಜಲ ಈ ಮಟ್ಟಿಗೆ ಕುಸಿಯಲು ಮರಳು ಗಣಿಗಾರಿಕೆಯ ಕೊಡುಗೆಯೂ ಬಹಳ ಇದೆ.


ಹಾಗಾದರೆ ಇದಕ್ಕೆ ಕೊನೆಯೆಂದು


೧ ನಾವೂ ನೀವು ಮನಸ್ಸು ಮಾಡಬೇಕು

೨ ಎಂ ಸ್ಯಾಂಡ್ ವ್ಯಾಪಕವಾಗಿ ಬಳಕೆಯಾಬೇಕು

೩ ಒಳ್ಳೆಯ ಗುಣಮಟ್ಟದ ಎಂ ಸ್ಯಾಂಡ್ ಲಬ್ಯವಾಗುವಂತೆ ನೋಡಿಕೊಳ್ಳಬೇಕು.

೪ ತಜ್ಞರು ಎಂ ಸ್ಯಾಂಡ್ ಬಳಕೆ ಬಗ್ಗೆ ಜನರ‌ ಮನ ಒಲಿಸಬೇಕು.

೫ ನದೀ ಪಾತ್ರದಲ್ಲಿ ಮರಳು ಗಣಿಗಾರಿಕೆ ಮಾಡಿದವರಿಗೆ ಶೀಘ್ರವಾಗಿ ಕಠಿಣವಾದ ಶಿಕ್ಷೆ ವಿಧಿಸಬೇಕು.

೬ ಪರಿಸರದ ಅಮೂಲ್ಯವಾದ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವೆ ಎಂದು ನಾವೆಲ್ಲರೂ ಪಣತೊಡಬೇಕಿದೆ.


ಮುಗಿಸುವ ಮುನ್ನ ಒಂದು ಹನಿ


ನಿರ್ಮಾಣ ಕಾಮಗಾರಿಗೆ

ನದಿಯ ಬಯಲಿನದೇ

ಆಗಬೇಕೆಂದು ಬಯಸುವೆಯೇಕೆ?

ಓ ಮರುಳೆ|

ಯಂತ್ರಗಳಿಂದ ತಯಾರಿಸದ

ಎಂ ಸ್ಯಾಂಡ್ ಕೂಡ

ಮರಳೆ|



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು